Updated News From Kaup
ಉಡುಪಿ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ
Posted On: 01 Nov 2020, 09:13 PM
ಉಡುಪಿ : ಜಿಲ್ಲಾಡಳಿತ ಉಡುಪಿ ಜಿಲ್ಲೆ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನವೆಂಬರ್ 1 ರಂದು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ,ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿ, ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿAದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ.ಜಾತಿಯ ವಿದ್ಯಾರ್ಥಿನಿ ಕು.ಸ್ಪೂರ್ತಿ ಅಶೋಕ ರಾಥೋಡ ಮತ್ತು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಪ.ಪಂಗಡದ ವಿದ್ಯಾರ್ಥಿನಿ ಕು.ರಶ್ಮಿತಾ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಇವರ ಸ್ಮರಣಾರ್ಥ 1 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿಭಟ್, ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಕೋವಿಡ್ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು, ವೆಬ್ಕಾಸ್ಟ್ ಮತ್ತು ಫೇಸ್ಬುಕ್ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಯುವವಾಹಿನಿ (ರಿ) ಕಾಪು ಘಟಕದ ಪದಪ್ರಧಾನ ಸಮಾರಂಭ, ಸಾಧಕರಿಗೆ ಸಮ್ಮಾನ
Posted On: 01 Nov 2020, 08:52 PM
ಕಾಪು, ನ. ೧: ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದ ಪ್ರತಿಪಾಲನೆ, ಮೂಲತತ್ವಗಳನ್ನು ಅನುಸರಿಸುತ್ತಾ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಯುವವಾಹಿನಿ ಸಂಘಟನೆಯು ಸಮಾಜದ ಜನರಲ್ಲಿ ವ್ಯಕ್ತಿತ್ವ ವಿಸನಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್ ಉಪ್ಪಿನಂಗಡಿ ಹೇಳಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭನದಲ್ಲಿ ನ.೧ರಂದು ಆಯೋಜಿಸಲಾಗಿದ್ದ ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ನೂತನ ಪದಾಽಕಾರಿಗಳ ಪದಪ್ರಧಾನ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೋಗುವಾಗ ನಮ್ಮ ಅಗತ್ಯತೆಗಳನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ. ಕುಟುಂಬ, ಉದ್ಯೋಗ ಮತ್ತು ಸಂಘಟನೆ ಎಂಬ ಮೂರು ವಿಧದ ಜೀವನ ಶೈಲಿಯೊಂದಿಗೆ ಮುನ್ನಡೆದಾಗ ಮಾತ್ರಾ ಸಂಘಟನೆ ಯಶಸ್ವಿಯಾಗಿ ಬೆಳೆಯಲು ಸಾಧ್ಯವಿದೆ. ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕ್ರಮಗಳೊಂದಿಗೆ, ಘಟಕ ಮಟ್ಟದಲ್ಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾಪು ಯುವವಾಹಿನಿ ಘಟಕವನ್ನು ಮಾದರಿ ಘಟಕವನ್ನಾಗಿ ಮೂಡಿ ಬರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ಅಧ್ಯಕ್ಷರಾಗಿ / ಪ್ರಥಮ ಮಹಿಳಾ ಅಧ್ಯಕ್ಷರಾಗಿ ನಿಯೋಜನೆಗೊಂಡ ಸೌಮ್ಯ ರಾಕೇಶ್ ಅವರಿಗೆ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರು ಅಧಿಕಾರ ಹಸ್ತಾಂತರಿಸಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ ಕಾಪು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷ ಉದಯ ಅಮೀನ್ ಮೂಲ್ಕಿ, ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಯುವವಾಹಿನಿ ಕಾಪು ಘಟಕದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್, ಯುವವಾಹಿನಿ ಕಾಪು ಘಟಕದ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಅಧ್ಯಕ್ಷ ನಾಗೇಶ್ ಸುವರ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್ ವರದಿ ವಾಚಿಸಿ, ವಂದಿಸಿದರು.
ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ
Posted On: 01 Nov 2020, 08:27 PM
ಅಜೆಕಾರು : ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ ನ.1ರಂದು ಕುಪಾ೯ಡಿ ಕಾನನ ಮಂಟಪದಲ್ಲಿ ನಡೆಯಿತು. ಪಡಿಮಂಚಕ್ಕೆ ಭತ್ತದ ತೆನೆ ಬಡಿಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಸಾಹಿತಿ ಕಾಂತಾವರ ಶಿವಾನಂದ ಶೆಣೈ ಈ ರಾಜ್ಯೋತ್ಸವ ಕಾಯ೯ಕ್ರಮ ವಷ೯ ಪೂತಿ೯ ನಡೆಯಬೇಕು. ಕಾಡಿನಲ್ಲಿ ಕವಿಗೋಷ್ಠಿ ವಿನೂತನ ಪ್ರಯೋಗವಾಗಿದೆ. ಕವಿಗಳು ತಮ್ಮ ಭಾಷಾ ಪ್ರಾಮುಖ್ಯದಿಂದ ಉತ್ತಮ ಕವನಗಳು ಮೂಡಿಬರಲಿ ಎಂದರು. ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ,ಸಾಹಿತಿ ಮೌರಿಸ್ ತಾವ್ರೋ ಮಾತನಾಡಿ ಈ ರೀತಿಯ ಕಾಯ೯ಕ್ರಮ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಬಾಲಕೃಷ್ಣ ಹೆಗ್ಡೆ, ಸುರೇಂದ್ರ ಮೋಹನ್, ಸಂಘಟಕ ಶೇಖರ ಅಜೆಕಾರು ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಗಿನ್ನೆಸ್ ಸಾಧನೆ ಮಾಡಿದ ಪ್ರಮೀಳಾ ಶೆಟ್ಟಿ, ಸೋಮೆಶ್ವರರವರನ್ನು ಗೌರವಿಸಲಾಯಿತು.ಶ್ರಜನ್ಯ ರವರಿಂದ ಭರತನಾಟ್ಯ ನಡೆಯಿತು. ನಂತರ ವಿವಿಧ ಕವಿಗಳ ಮೂಲಕ ಕವಿಗೋಷ್ಠಿ ನಡೆಯಿತು. ಅಖಿಲ ಕನಾ೯ಟಕ ಬೆಳದಿಂಗಳ ಸಾಹಿತ್ಯ ಸಮಿತಿ, ಆದಿ ಗ್ರಾಮೋತ್ಸವ ಮತ್ತು ಕ .ಸಾ.ಪ ಅಜೆಕಾರು ಹೋಬಳಿಯಿಂದ ಈ ಕಾಯ೯ಕ್ರಮ ನಡೆಯಿತು. ಸುನಿಧಿ, ಸುನಿಜಾ ಪ್ರಾರ್ಥಿಸಿ, ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Posted On: 01 Nov 2020, 08:19 PM
೬ ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಅಡಿಯಲ್ಲಿ ಹಲವಾರು ಸಮಾಜಮುಖಿ ಯೋಜನೆಗಳೊಂದಿಗೆ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಘಕ್ಕೆ ೨೦೨೦ ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಎಸ್ಪಿ ವಿಷ್ಣುವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕನ್ನಡ ಸಾಹಿತ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ಶಕೀರ್ ಹಾವಂಜೆ, ವೀಕ್ಷಿತ್, ರಫೀಕ್ ಖಾನ್ ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್
Posted On: 01 Nov 2020, 01:08 PM
ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ರಂಗಗಳ ಸಾಧನೆಗಳನ್ನು ಪರಿಗಣಿಸಿ ಇಂದು ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್ ರವರಿಗೆ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಬಾರಿಯ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 613 (ಶೇ. 98.08) ಅಂಕ ಗಳಿಸಿದ್ದು ಶೈಕ್ಷಣಿಕ ಸಾಧನೆಯೊಂದಿಗೆ, ಕ್ರೀಡಾಕ್ಷೇತ್ರದಲ್ಲಿ ಕಬಡಿಯಲ್ಲಿ ಎರಡು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಪ್ರತಿಭಾನ್ವಿತ ನೃತ್ಯಪಟುವೂ ಆಗಿದ್ದಾರೆ. ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾಗಿದ್ದಾರೆ.
ದೀಪಾವಳಿಗೆ ಕೊಳ್ಳಿರಿ ಕಾಪುವಿನ ರಕ್ಷಾ ತಯಾರಿಸುವ ಬಣ್ಣ ಬಣ್ಣದ ಹಣತೆಗಳು
Posted On: 01 Nov 2020, 10:43 AM
ಸ್ವದೇಶಿ ಅದರಲ್ಲೂ ನಮ್ಮ ಸುತ್ತಲಿನ ಕಲಾಕಾರರು ತಯಾರಿಸುವ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಾವು ಅವರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಕಲೆಗೂ ಬೆಲೆ. ಅಂತಹ ಕಲಾ ನೈಪುಣ್ಯತೆಯನ್ನು ಹೊಂದಿರುವವರಲ್ಲಿ ಕಾಪುವಿನ ರಕ್ಷಾ ಕೂಡ ಒಬ್ಬರು. ಈ ಬಾರಿಯ ದೀಪಾವಳಿಗಾಗಿ ಹಣತೆಗೆ ಬಣ್ಣ ಹಚ್ಚಿ ಸುಂದರವಾಗಿ ರೂಪುಗೊಳಿಸಿರುತ್ತಾರೆ. ಇಂತಹ ಕಲೆಗೆ ಜೀವ ತುಂಬುವ ರಕ್ಷಾರವರ ಬಣ್ಣದ ಹಣತೆಯನ್ನು ಕೊಂಡುಕೊಳ್ಳುವುದರ ಮೂಲಕ ಸ್ಥಳೀಯ ಕಲಾವಿದೆಗೆ ನೆರವಾಗೋಣ. ಕಲಾವಿದೆ :- ರಕ್ಷಾ ಪೂಜಾರಿ ಕಾಪು 99647 77580
ಕನಾ೯ಟಕ ರಾಜ್ಯೋತ್ಸವ ನಮ್ಮ ಮನೆ ಮನದಲ್ಲಿ ದಿನಂಪ್ರತಿ ನಡೆಯಲಿ
Posted On: 01 Nov 2020, 10:26 AM
ಈ ದಿನ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭಒದಗಿ ಬಂದಿದೆ. ಆದರೇನಾಗಿದೆ? ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ಸರಿಯಲ್ಲ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ನಡೆಯಲಿ, ಅದಕ್ಕೆ ಯಾರದೂ ತಕರಾರಿಲ್ಲ. ಆದರೆ ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ಈ ರೀತಿಯ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರಲಾರದು. ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ನಮ್ಮ ಜನರು ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದಾರೆಯೆ? ಜನ ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿಲ್ಲವೆ? ಹೆಚ್ಚಿನ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಇಂಪು ಯಾವುದು? ಅದು ಕನ್ನಡದ ಕಂಪನ್ನು ಹೊರಸೂಸುತ್ತಿದೆಯೆ? ನಾವೆಲ್ಲರೂ ಯೋಚನೆ ಮಾಡಬೇಕಾದ ಸಂಗತಿಯಾಗಿದೆ. ಅಪ್ಪ, ಅಮ್ಮ, ಅಣ್ಣತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಅತ್ತೆ, ಮಾವ , ಭಾವ, ನಾದಿನಿ, ಮೈದುನ,ಅಜ್ಜ ಅಜ್ಜಿ, ದೊಡ್ಡಪ್ಪ , ಮೊಮ್ಮಗ, ಷಡ್ಕ ಮುಂತಾದ ಅಪ್ಪಟ ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ (ಈಗ ಅದು ಡ್ಯಾಡ್, ಮಾಮ್) ಅಂಕಲ್, ಆಂಟಿ, ಕಸಿನ್ , ಗ್ರ್ಯಾಂಡ್ಪಾ, ಕೋ-ಬ್ರದರ್ , ಫಾದರ್ ಇನ್ ಲಾ, ಸಿಸ್ಟರ್ ಇನ್ ಲಾ, ನೀಸ್ ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಿದೆ. ಆಂಗ್ಲ ಭಾಷೆ ಯನ್ನು ಭಾಷೆಯನ್ನಾಗಿ ಕಲಿಯಬೇಕು ಆದರೆ ಕನ್ನಡ ಮರೆಯದಿರಿ :- ಇಂಗ್ಲಿಷ್ ಬೇಡವೇ ಬೇಡ ಎಂದಲ್ಲ. ಇಂಗ್ಲಿಷನ್ನು ದ್ವೇಷಿಸಬೇಕು ಎಂದೂ ಅಲ್ಲ. ಇಂಗ್ಲಿಷನ್ನು ಕಲಿಯೋಣ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ . ಆದರೆ ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ. ಅದಕ್ಕೊಂದು ಪರಿ ಹಾಕೋಣ. ಕನ್ನಡದ ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭಕ್ತಿಪಂಥದ ಮೂಲಕ, ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದರು. ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ. ಅಸ್ಸಾಂ ರಾಜ್ಯದಲ್ಲಂತೂ ಜಿಲ್ಲೆಗೊಂದು ಭಾಷೆ ಇದೆ. ಅದಕ್ಕೇ ಅದನ್ನೂ ಅಸಮ ಯಾವುದರಲ್ಲೂ ಸಮಾನತೆ ಇಲ್ಲ ಎಂಬ ಹೆಸರು ಬಂದಿದೆ. ಇವೆಲ್ಲವನ್ನೂ ಮನಗಂಡೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರೋದು – ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ: ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆ . ಭಾರತವೇ ತಾಯಿ- ಆಕೆಯ ಪುತ್ರಿ ಕರ್ನಾಟಕ ಮಾತ್ರ ಕನ್ನಡಾಂಬೆ. ತಾಯಿ ಭಾರತಾಂಬೆಗೆ ಕನ್ನಡಾಂಬೆ ಹೇಗೆ ಮಗಳೋ ಅದೇ ರೀತಿ ತೆಲುಗು,ತಮಿಳು, ಮಲಯಾಳಂ, ಮರಾಠಿ, ಅಸ್ಸಾಂ, ಹಿಂದಿ, ಬೆಂಗಾಲಿ , ಒರಿಯಾ,ಬಿಹಾರಿ, ಗುಜರಾತಿ, ಭೋಜ್ಪುರಿ ಎಲ್ಲ ಭಾಷೆಗಳು ಮಕ್ಕಳು. ನಮಗೆ ಅವೆಲ್ಲಾ ಸೋದರ ಭಾಷೆಗಳು. ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಹಾಗೆ ನೆನಪಿಟ್ಟುಕೊಂಡರೆ, ನಮ್ಮ ಮನದಲ್ಲಿ ಆ ವಿಶಾಲ ಭಾವನೆಯಿದ್ದರೆ ಯಾವುದೇ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ. ಕನ್ನಡಕ್ಕಾಗಿ ಕೈಯೆತ್ತೋಣ ಅದು ಕಲ್ಪವೃಕ್ಷವಾಗಲಿ, ಕಾಮಧೇನುವಾಗಲಿ ಕನ್ನಡಕ್ಕಾಗಿ ಕೈಯೆತ್ತೋಣ ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ - ಅದಾನಿ ಪಾಲು
Posted On: 31 Oct 2020, 05:49 PM
ಕೇಂದ್ರ ಸರಕಾರದ ಮೊದಲ ಹಂತದ ಖಾಸಗಿಕರಣ ಭಾಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ಆಫ್ ಕಂಪನಿಯ ಪಾಲಾಗಿದ್ದು. ಇಂದಿನಿಂದ ಅದಾನಿ ಗ್ರೂಪ್ ನ ಕೆಲಸ ಕಾರ್ಯಗಳು ಆರಂಭವಾಗಿವೇ. ಅದಾನಿ ಕಂಪೆನಿಯು ಬಿಡ್ ಮೂಲಕ ವಿಮಾನ ನಿಲ್ದಾಣದ ಒಡೆತನವನ್ನು ಪಡೆದಿದೆ. ಮಂಗಳೂರು ವಿಮಾನ ನಿಲ್ದಾಣ ಇದೀಗ ಖಾಸಗೀ ಆಡಳಿತಕ್ಕೆ ಒಳಪಟ್ಟಿದೆ. ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಗೊಂಡ 6ನೇ ವಿಮಾನ ನಿಲ್ದಾಣವಾಗಿದೆ. ನವೆಂಬರ್ 2ರಂದು ಲಕ್ನೋ ವಿಮಾನ ನಿಲ್ದಾಣ ಹಾಗೂ ನವೆಂಬರ್ 6ರಂದು ಅಹಮ್ಮದಾಬಾದ್ ವಿಮಾನ ನಿಲ್ದಾಣ ಅದಾನಿಗೆ ಗ್ರೂಪ್ ಒಡೆತನಕ್ಕೆ ಸೇರುವ ನಿರೀಕ್ಷೆಯಿದೆ.
ರೋಟರಿ ಶಂಕರಪುರದ 200ನೇ ತಿಂಗಳ ವಿಶೇಷ ಮಾನಸಿಕ ಶಿಬಿರ
Posted On: 31 Oct 2020, 05:28 PM
ರೋಟರಿ ಶಂಕರಪುರ ಮತ್ತು ರೋಟರಿ ಟ್ರಸ್ಟ್ನ ಉಚಿತ ಮಾನಸಿಕ ಶಿಬಿರವು 17 ವರ್ಷಗಳಿಂದ ನಡೆಯುತ್ತಾ ಬಂದಿದ್ದು. 01/11/2020 ರ ಆದಿತ್ಯವಾರದಂದು 200 ನೇ ತಿಂಗಳ ಶಿಬಿರಕ್ಕೆ ಕಾಲಿಟ್ಟ ಪ್ರಯುಕ್ತವಾಗಿ ಒಂದು ವಿಶೇಷ ಕಾರ್ಯಕ್ರಮವು ಶಿಬಿರಾರ್ಥಿಗಳ ಜೊತೆಗೆ ನಡೆಯಲಿದೆ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೇ ಫಾ.ರೊನಾಲ್ಡ್ ಫೆರ್ನಾಂಡಿಸ್ (St Louis church dahisar mumbai) ಮಾಡಲಿದ್ದು. ಮುಖ್ಯ ಅತಿಥಿಗಳಾಗಿ ಶ್ರೀ ಎ. ಜಿ. ಕೊಡ್ಗಿ (Ex MLA and president Amasebail Charitable Trust kundapura) ಅತಿಥಿಗಳಾಗಿ ಡಾ.ಪಿ. ವಿ.ಭಂಡಾರಿ (Medical Director, Dr, A.V. Baliga Hospital Udupi) ಡಾ.ಶ್ರೀನಿವಾಸ್ ಭಟ್ ಯು (Head of Psychiatric Department KEHEMA Hospital Manglore), ರೋ ನವೀನ್ ಅಮೀನ್ (Assistant Governor Rotary District 3182 Zone 5). ಇವರು ಭಾಗವಹಿಸುತ್ತಿದ್ದು ಕಾರ್ಯಕ್ರಮವು ರೋಟರಿ ಭವನ ಶಂಕರಪುರದಲ್ಲಿ ಬೆಳ್ಳಿಗ್ಗೆ 10:30 ಕ್ಕೆ ಸರಿಯಾಗಿ ನಡೆಯಲಿದೆ. ಹದಿನೇಳು ವರ್ಷಗಳಿಂದ ಶಂಕರಪುರದಲ್ಲಿ ಉಚಿತ ಮಾನಸಿಕ ಶಿಬಿರವನ್ನು ರೋಟರಿ ಶಂಕರಪುರವು ನಡೆಸಿಕೊಂಡು ಬರುತ್ತಿದ್ದು ಜಿಲ್ಲಾದ್ಯಂತ ಬಹಳಷ್ಟು ಶಿಬಿರಾರ್ಥಿಗಳನ್ನು ಒಳಗೊಂಡಿದೆ. ಈ ಉತ್ತಮ ಕಾರ್ಯಕ್ಕೆ ಸಹಕರಿಸುತ್ತಿರುವ ದಾನಿಗಳಿಗೆ ರೋಟರಿ ಪ್ರಮುಖರು ಕೃತಜ್ಞತೆ ಸಲ್ಲಿಸುವ ಮುಖೇನ ಮುಂದೆಯೂ ಸಹಕಾರ ಹೀಗೆ ಇರಲಿ ಎಂದು ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಧನ್ಯವಾದಗಳನ್ನು ತಿಳಿಸಿದರು.
ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿಯ ಅಪಹರಣ - ಹಿರಿಯಡ್ಕದಲ್ಲಿ ಆರೋಪಿಯನ್ನು ಬಂಧಿಸಲು ಹಿಂದೂ ಸಂಘಟನೆಯ ಪ್ರತಿಭಟನೆ
Posted On: 31 Oct 2020, 04:09 PM
ಕಾಪು ವಿಧಾನಸಭಾ ವ್ಯಾಪ್ತಿಯ ಹಿರಿಯಡ್ಕದಲ್ಲಿ ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿ ಅಪಹರಣಕ್ಕೆ ಸಂಶಯಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಅಕ್ಟೋಬರ್ 28 ರಂದು ಪೇರ್ಡೂರಿನ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ಅನ್ಯಕೋಮಿನ ಯುವಕನೋರ್ವ ಅಪಹರಿಸಿದ್ದು.. ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಹಿರಿಯಡ್ಕ ಪೊಲೀಸ್ ಠಾಣೆಯ ಎದುರಿಗೆ ಹಿಂದೂ ಸಂಘಟನೆಗಳು ಪ್ರತಿಭಟನೆಯ ಮೂಲಕ ಆಗ್ರಹಿಸಿದವು..
