Updated News From Kaup

ಉಡುಪಿ ಕೃಷ್ಣ ಮಠದ ನಾಮಫಲಕದಲ್ಲಿ ಮರೆಯಾದ ಕನ್ನಡ

Thumbnail
Posted On: 01 Dec 2020, 05:18 PM

ಉಡುಪಿ: ವಿಶ್ವಪ್ರಸಿದ್ದ ಉಡುಪಿ ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಇದ್ದ ಕನ್ನಡ ಫಲಕವನ್ನು ತೆಗೆದು ತುಳು ಮತ್ತು ಸಂಸ್ಕೃತದಲ್ಲಿ ಹೊಸ ನಾಮ ಫಲಕ ಅಳವಡಿಸಿದ್ದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಉಡುಪಿಯ ಕೃಷ್ಣ ಮಠದ ಮಹಾದ್ವಾರದಲ್ಲಿ ಈವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಫಲಕವಿದ್ದು ಅದನ್ನು ತೆಗೆದು ಈಗ ಹೊಸದಾಗಿ ತುಳು ಮತ್ತು ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಬರೆಯಲಾಗಿದೆ. ಪರ್ಯಾಯ ಅದಮಾರು ಮಠದಿಂದ ಫಲಕ ಬದಲಾವಣೆ ನಡೆದಿದ್ದು ಫಲಕದಲ್ಲಿ ಕನ್ನಡ ಭಾಷೆ ಏಕಿಲ್ಲ ಎನ್ನುವುದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ.ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆಧ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ. ಮೊದಲು ಕನ್ನಡ. ಆನಂತರ ಇತರೆ ಭಾಷೆ ನಾಮಫಲಕದಲ್ಲಿಇರಲಿ ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದು ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪರ್ಯಾಯ ಅದಮಾರು ಮಠ ಕೂಡ ಸ್ಪಷ್ಟನೆ ನೀಡಿದ್ದು, ಮಠ ಪುನಶ್ಚೇತನಗೊಳಿಸುವಾಗ ಪರ್ಯಾಯ ಸ್ವಾಮೀಜಿಗಳ ಅಪೇಕ್ಷೆಯಂತೆ ಅಲ್ಲಿರುವ ಪ್ಲಾಸ್ಟಿಕ್ ಬೋರ್ಡನ್ನು ತೆಗೆದು ಮರದಲ್ಲಿ ತಯಾರಾದ ಬೋರ್ಡನ್ನು ಹಾಕುವ ಯೋಜನೆ ಇತ್ತು. ಅದರಲ್ಲಿ ಮೊದಲನೇ ಬೋರ್ಡು ಕನ್ನಡ ಬಂದು ಬಳಿಕ ಸಂಸ್ಕೃತ ಮತ್ತು ತುಳು ಲಿಪಿಯ ಬೋರ್ಡ್ ಹಾಕುವ ಯೋಜನೆ ಇತ್ತು. ಅದರಂತೆ ಫಲಕ ತಯಾರಾಗುವ ವೇಳೆ ಲಕ್ಷದೀಪ ಬಂದ ಕಾರಣ ಕನ್ನಡ ಭಾಷೆಯ ಫಲಕ ತಯಾರಾಗುತ್ತಿದ್ದು, ತುಳು ಮತ್ತು ಸಂಸ್ಕೃತ ಭಾಷೆಯ ಬೋರ್ಡ್ ಹಾಕಲಾಗಿದೆ. ತುಳು ಭಾಷೆಗೂ ಗೌರವ ನೀಡಬೇಕು ಯಾಕೆಂದರೆ ಮಠದಲ್ಲಿನ ಗೃಂಥಿ ಲಿಪಿ ತುಳು ಭಾಷೆಯಲ್ಲಿದ್ದ ಕಾರಣ ತುಳು ಫಲಕ ಹಾಕಲಾಗಿದೆ. ಕನ್ನಡದ ಫಲಕ ಮೊದಲ ಭಾಗದಲ್ಲಿ ಇರಲಿದ್ದು ಬಳಿಕ ಉಳಿದ ಭಾಷೆಯ ಬೋರ್ಡ್ ಬರಲಿವೆ ಎಂದು ಮಠದ ಮ್ಯಾನೇಜರ್ ಗೋವಿಂದ್ ರಾಜ್ ಹೇಳಿದ್ದಾರೆ.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಕೇಶ್ ಕುಂಜೂರು ಆಯ್ಕೆ

Thumbnail
Posted On: 01 Dec 2020, 05:09 PM

ಕಾಪು, ಡಿ. ೧ : ಕಾಪು ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಕಾಪು ವರದಿಗಾರ, ಜೇಸಿಐನ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಆಯ್ಕೆಯಾಗಿದ್ದಾರೆ. ಭಾರತ್ ಬಿಕ್ಕೋ ಕಂಪನಿ ಆವರಣದಲ್ಲಿರುವ ಕಾಪು ಪ್ರೆಸ್ ಕ್ಲಬ್‌ನಲ್ಲಿ ಡಿ. ೧ರಂದು ಜರಗಿದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ವಿಜಯ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶಫಿ ಅಹಮದ್ ಉಚ್ಚಿಲ, ಕೋಶಾಧಿಕಾರಿಯಾಗಿ ಪುಂಡಲೀಕ ಮರಾಠೆ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಾದಿರಾಜ ರಾವ್ ನಡಿಮನೆ, ಪ್ರೆಸ್ ಕ್ಲಬ್ ಕೋ. ಆರ್ಡಿನೇಟರ್ ಆಗಿ ಸಂತೋಷ್ ಕಾಪು ಅವರನ್ನು ಆಯ್ಕೆ ಮಾಡಲಾಯಿತು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ರಾಮಚಂದ್ರ ಆಚಾರ್ಯ, ಬಾಲಕೃಷ್ಣ ಪೂಜಾರಿ, ಪ್ರಕಾಶ್ ಸುವರ್ಣ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಕುತ್ಯಾರು ವೀರಭದ್ರ ದೇವಸ್ಥಾನ : ದೀಪೋತ್ಸವ

Thumbnail
Posted On: 01 Dec 2020, 11:15 AM

ಕುತ್ಯಾರು ಅರಮನೆಯ ಆಡಳಿತಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ರವರ ಮುಂದಾಳತ್ವದಲ್ಲಿ, ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ, ಕುತ್ಯಾರು ರಾಮಕೃಷ್ಣ ತಂತ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸ್ಥಳೀಯ ಭಜನಾ ತಂಡದಿಂದ ಭಜನೆ ಮತ್ತು ಅನ್ನದಾನವು ನೆರವೇರಿತು. ಈ ಸಂದರ್ಭ ಅರಮನೆಯ ಸ್ಮಿತಾ ಜಿನೇಶ್ ಬಲ್ಲಾಳ್ ಮತ್ತು ಮಕ್ಕಳು, ನವೀನ್ ಶೆಟ್ಟಿ, ಸತೀಶ್ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಧೀರಜ್ ಶೆಟ್ಟಿ, ಅಶೋಕ್ ಗೌಡ, ಪ್ರವೀಣ್ ಭಂಡಾರಿ, ಶ್ರೀಧರ ಕುಲಾಲ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಆಚಾರ್ಯ, ಸಂಪತ್ ಕುಮಾರ್ ಕೇಂಜ ಮೊದಲಾದವರು ಉಪಸ್ಥಿತರಿದ್ದರು.

ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕಮಾಸದ ದೀಪೋತ್ಸವ

Thumbnail
Posted On: 30 Nov 2020, 11:02 AM

ಕುತ್ಯಾರು ಅರಮನೆಯ ಆಡಳಿತಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಇಂದು (ನವೆಂಬರ್ 30 ಸೋಮವಾರ) ಸಂಜೆ 7:30 ಕ್ಕೆ ಸರಿಯಾಗಿ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ರವರ ಮುಂದಾಳತ್ವದಲ್ಲಿ, ಕುತ್ಯಾರು ರಾಮಕೃಷ್ಣ ತಂತ್ರಿ ನೇತೃತ್ವದಲ್ಲಿ, ಕುತ್ಯಾರು ಯುವಕ ಮಂಡಲ ಮತ್ತು ಗ್ರಾಮಸ್ಥರ ಸಹಕಾರದಿಂದ ಜರಗಲಿದೆ ಎಂದು ನಮ್ಮ ಕಾಪುವಿಗೆ ತಿಳಿಸಿದ್ದಾರೆ.

ಎಂ.ಕೆ.ರಮೇಶ ಆಚಾರ್ಯ ಕೊಲೆಕಾಡಿ ಅವರಿಗೆ ಸಮ್ಮಾನ

Thumbnail
Posted On: 29 Nov 2020, 10:08 PM

ಉಡುಪಿ ಕಿದಿಯೂರು ಇಲ್ಲಿಯ 'ಯಕ್ಷ ಆರಾಧನಾ ಟ್ರಸ್ಟ್' ವತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಚಗಾನ ವೇಷಧಾರಿ ಎಂ .ಕೆ .ರಮೇಶ ಆಚಾರ್ಯ ಹಾಗೂ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಂದಸ ಗಣೇಶ ಕೊಲೆಕಾಡಿಯವರನ್ನು ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ವಹಿಸಿದ್ದರು .ಯಕ್ಷಗಾನ ವೇಷಧಾರಿ , ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಅಭಿನಂದನಾ ಭಾಷಣಮಾಡಿದರು . ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ .ಬಾರಕೂರು ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತೆ ಮೊಕ್ತೇಸರರಾದ ಅಲೆವೂರು ಯೋಗೀಶ ಆಚಾರ್ಯ , ವಿಜಯಕುಮಾರ್ ಮುದ್ರಾಡಿ , ಶ್ರೀಮತಿ ನಿರುಪಮಾ ಶೆಟ್ಟಿ , ದಿವಾಕರ ಆಚಾರ್ಯ ಅವರು ಉಪಸ್ಥಿತರಿದ್ದರು . ಕೆ.ಜೆ.ಗಣೇಶ ಸ್ವಾಗತಿಸಿದರು , ಚಂದ್ರಕಾಂತ ಆಚಾರ್ಯ ವಂದಿಸಿದರು .‌‌ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ಕೆ.ಜೆ.ಗಣೇಶ , ಕೆ.ಜೆ .ಸುಧೀಂದ್ರ ,ಕೆ.ಜೆ.ಕೃಷ್ಣ ಅವರು ಕಾರ್ಯಕ್ರಮ ಸಂಯೋಜಿಸಿದ್ದರು .ಬಳಿಕ ಬಾಲ ಕಲಾವಿದರಿಂದ ಯಕ್ಷ ನೃತ್ಯ ರೂಪಕ "ನರಕಚತುರ್ದಶಿ" ಪ್ರದರ್ಶನಗೊಂಡಿತು.

ಕೀಳಂಜೆ ದೇವಳ: ಸ್ವಚ್ಛತಾ ಅಭಿಯಾನ

Thumbnail
Posted On: 29 Nov 2020, 09:49 PM

ಸ್ವರ್ಣಾರಾಧನಾ ಅಭಿಯಾನದ ಪ್ರಯುಕ್ತ ಸ್ವಚ್ಛ ಭಾರತ್ ಫ್ರೆಂಡ್ಸ್, ಯುವ ವಿಚಾರ ವೇದಿಕೆ ಉಪ್ಪೂರು ಜಂಟಿ ಆಶ್ರಯದಲ್ಲಿ ಕೀಳಂಜೆ ಮಹಾವಿಷ್ಣು ಮಹೇಶ್ವರ ದೇವಾಲಯದ ವಠಾರದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಯಿತು. ಎರಡು ಗಂಟೆಗಳ ಕಾಲ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಸ್ಥಾನದ ಒಳ ಮತ್ತು ಹೊರ ಆವರಣದಲ್ಲಿ ಮತ್ತು ಪುಷ್ಕರಣಿಯನ್ನು ಶುಚಿಗೊಳಿಸಲಾಯಿತು. ಅಭಿಯಾನ ನಡೆಯುತ್ತಿರುವ ಸಮಯದಲ್ಲಿ ವರುಣನ ಆಗಮನವಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕ ಪ್ರಭಾಕರ ಭಟ್, ವೇದಮೂರ್ತಿ ರವೀಂದ್ರ ಭಟ್, ಡಾ.‌ ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಸಂಯೋಜಕ ರಾಘವೇಂದ್ರ ಪ್ರಭು, ಜಗದೀಶ್ ಶೆಟ್ಟಿ, ನ್ಯಾಯವಾದಿ ರಫೀಕ್ ಖಾನ್, ನಾಗರಾಜ್ ಭಂಡಾರ್ಕರ್, ಪುಷ್ಕರ್ ಭಟ್, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಸುಕೇಶ, ಯೋಗೀಶ್ ಕೊಳಲಗಿರಿ, ಸದಾಶಿವ್, ಅಶೋಕ್, ರವೀಂದ್ರ, ಸುಬ್ರಹ್ಮಣ್ಯ ಆಚಾರ್ಯ, ಶಶಿಕುಮಾರ್, ಶೋಭಾ ಯೋಗೀಶ್, ಸಂದೀಪ್ ಶೆಟ್ಟಿ, ಸುಕನ್ಯಾ, ಕಾವ್ಯ, ಹೇಮಂತ್, ಅವಿನಾಶ್, ವೈಭವ್, ನಾಗರಾಜ್, ಶಾಂತ, ದಾಮೋದರ ನಾಯ್ಕ್ ಮಣಿಪಾಲ, ಮುಂತಾದವರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಆಯ್ಕೆ

Thumbnail
Posted On: 29 Nov 2020, 07:39 PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ನೂತನ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿ, ಘೋಷಿಸಲಾಯಿತು. ಅಭಿವೃದ್ಧಿ ಸಮಿತಿಯ ಖಾಯಂ ಆಹ್ವಾನಿತರಾಗಿ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದ್ದು, ಜಯ ಸಿ. ಸುವರ್ಣ ಅವರ ನಿಧನದಿಂದ ತೆರವಾದ ಗೌರವಾಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗೌರವಾಧ್ಯಕ್ಷ ಮೂಳೂರು ಸುಧಾಕರ ಹೆಗ್ಡೆ  ಮುಂಬಯಿ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಽಕಾರಿ ರವಿ ಕುಮಾರ್, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ :ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ

Thumbnail
Posted On: 29 Nov 2020, 05:21 PM

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದಿಂದ ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನದ ಮೂಲಕ ಪರಿಸರಕ್ಕೆ ಅಳಿಲು ಸೇವೆ ಮಾಡಲಾಯಿತು. ಹೂಡೆಯ ಬೀಚ್ ಅನ್ನು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಈ ತಂಡವು ಶ್ರಮಿಸಿತು. ಈ ಸಂದರ್ಭದಲ್ಲಿ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.

ಸಂತೆಕಟ್ಟೆ : ಸ್ವರ್ಣೆಯ ಸ್ವಚ್ಛತೆ ಅಭಿಯಾನ

Thumbnail
Posted On: 29 Nov 2020, 02:08 PM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ತಂಡದ ವತಿಯಿಂದ ಸಂತೆಕಟ್ಟೆಯ ಸ್ವರ್ಣ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಪ್ರಜ್ಞಾವಂತ ನಾಗರೀಕರು ಎಸೆದ ಕಸ ಕಶ್ಮಲ ಗಳನ್ನೂ ಒಟ್ಟು ಮಾಡಿ ಸ್ವರ್ಣೆಯ ನ್ನು ಶುದ್ದೀಕರಿಸುವ ಕಾರ್ಯಕ್ರಮ ನ.29 ಆದಿತ್ಯವಾರ ನಡೆಯಿತು. ಪ್ಲಾಸ್ಟಿಕ್ ತ್ಯಾಜ್ಯ ಹಾಗು ಇತರ ಕಶ್ಮಲ ಗಳನ್ನೂ ಸಂಗ್ರಹಿಸಿಪ್ಲಾಸ್ಟಿಕ್, ಸೀಸ,ಬಟ್ಟೆ ಇತ್ಯಾದಿ ಗಳನ್ನೂ ವಿಭಾಗಿಸಲಾಯಿತು.ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದ ಕಸಗಳು ನದಿಗೆ ಸೇರಿ ಎಲ್ಲರಿಗೂ ತೊಂದರೆಯಾಗಿತ್ತು. ಈ ಭಾಗದಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಕಸವನ್ನು ನದಿಗೆ ಎಸೆಯಲಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಕಾಯ೯ಕ್ರಮದಲ್ಲಿ ತಂಡದ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಶಶಿ, ಸವಿತಾ ಶೆಟ್ಟಿ, ಸುಜಯಾ ಶೆಟ್ಟಿ, ನಗರಸಭಾ ಸದಸ್ಯೆ ಇಂದಿರಾ ರಮೇಶ್, ರಾಘವೇಂದ್ರ ಪ್ರಭು ಕವಾ೯ಲು ಪಂಚಾಯತ್ ಪಿ.ಡಿ.ಒ ಸತೀಶ್ ನಾಯ್ಕ, ಸ್ಥಳೀಯರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

ಇನ್ನಂಜೆ : ಅಧಿಕಾರಿಗಳಿಂದ ಕ್ರಾಸಿಂಗ್ - ಪಾಸಿಂಗ್ ಸ್ಟೇಷನ್ ಕಾಮಗಾರಿ ಪರಿಶೀಲನೆ

Thumbnail
Posted On: 29 Nov 2020, 02:00 PM

ಕಾಪು ತಾಲೂಕಿನ ಇನ್ನಂಜೆ ರೈಲ್ವೇ ನಿಲ್ದಾಣ ರಚನೆ ಸಹಿತವಾಗಿ ಕ್ರಾಸಿಂಗ್ ಮತ್ತು ಪಾಸಿಂಗ್ ಸ್ಟೇಷನ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಮೈನ್ ಲೈನ್‌ನಿಂದ ಕ್ರಾಸಿಂಗ್ ಲೈನ್‌ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕೊಂಕಣ್ ರೈಲ್ವೇ ಕಾರವಾರ ರೀಜನ್ ರೀಜನಲ್ ಪ್ರಬಂಧಕ ಬಿ. ಬಿ. ನಿಕ್ಕಂ ಹೇಳಿದ್ದಾರೆ. ಇನ್ನಂಜೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ನಿಲ್ದಾಣ ಮತ್ತು ಕ್ರಾಸಿಂಗ್-ಪಾಸಿಂಗ್ ಸ್ಟೇಷನ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದರು. ಇನ್ನಂಜೆ ರೈಲ್ವೇ ನಿಲ್ದಾಣ ಮತ್ತು ಪಾಸಿಂಗ್ - ಕ್ರಾಸಿಂಗ್ ಸ್ಟೇಷನ್ ಕಾಮಗಾರಿಗೆ ಅಂದಾಜು ೧೨ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನೂತನ ರೈಲ್ವೇ ನಿಲ್ದಾಣ ನಿರ್ಮಾಣ, ೬೨೦ ಮೀಟರ್ ಉದ್ದದ ಕ್ರಾಸಿಂಗ್ - ಪಾಸಿಂಗ್ ಟ್ರ‍್ಯಾಕ್, ೫೬೦ ಮೀಟರ್ ಉದ್ದದ ಫ್ಲಾಟ್ ಫಾರಂ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮೂಲಭೂತ ಸೌಕರ್ಯಗಳ ಜೋಡಣಾ ಕಾರ್ಯಪೂರ್ಣಗೊಂಡಿದೆ ಎಂದರು. ರೈಲ್ವೇ ನಿಲ್ದಾಣ ರಚನೆ ಕಾಮಗಾರಿಯು ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ೧೯ ಕಾಮಗಾರಿ ವಿಳಂಭವಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದ್ದು ಮುಂದೆ ನೂತನ ಟ್ರ‍್ಯಾಕ್‌ನಲ್ಲಿ ಪ್ರಾಯೋಗಿಕವಾಗಿ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ ಎಂದರು. ಸಾಮಾನ್ಯ ರೈಲ್ವೇ ಸ್ಟೇಷನ್, ಪಾಸಿಂಗ್ ಸ್ಟೇಷನ್‌ಗಳಲ್ಲಿ ಯಾವೆಲ್ಲಾ ವ್ಯವಸ್ಥೆಗಳು ಇರುತ್ತವೆಯೋ ಅದೇ ಮಾದರಿಯ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿ ಜೋಡಿಸಲಾಗಿದೆ. ವಿಶ್ರಾಂತಿ ಗೃಹ, ಕ್ಯಾಂಟಿನ್, ಟಿಕೆಟ್ ಕೌಂಟರ್ ಸಹಿತ ವಿವಿಧ ಸೌಲಭ್ಯಗಳು ದೊರಕಲಿವೆ ಎಂದರು. ರೈಲು ಓಡಾಟ ಯಾವಾಗ ಆರಂಭಗೊಳ್ಳುತ್ತದೆ ಎನ್ನುವುದರ ಬಗ್ಗೆ ರೈಲ್ವೇ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಗಾದ ರೈಲ್ವೇ ಮಂಡಳಿ ಇನ್ನೂ ಚೇತರಿಕೆಯ ಹಾದಿಯನ್ನು ಕಂಡಿಲ್ಲ. ಕೆಲವೊಂದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಗಿದ್ದರೂ, ಶೇ. ೫೦ರಷ್ಟು ಮಾತ್ರಾ ಜನ ಸ್ಪಂಧನೆ ನೀಡುತ್ತಿದ್ದಾರೆ. ಇದರಿಂದಾಗಿ ಇಲಾಖೆಗೆ ಹೊರೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಎರಡನೇ ಹಂತದ ಭೀತಿ ಎದುರಾಗಿರುವುದರಿಂದ ಪೂರ್ಣ ಪ್ರಮಾಣದ ರೈಲು ಓಡಾಟ ಇನ್ನೂ ವಿಳಂಭವಾಗುವ ಸಾಧ್ಯತೆ ಇದೆ. ರೈಲ್ವೇ ರೀಜನಲ್ ಅಧಿಕಾರಿಗಳಾದ ಆರ್.ಐ. ಪಾಟೀಲ್, ದೀಪಕ್ ಶೆಟ್ಟಿ, ಎ.ಬಿ. ಪುಲೆ, ಭಾಗ್ಯಪ್ರಕಾಶ್ ಶೆಟ್ಟಿ, ವಿನಯಕುಮಾರ್, ಚೀಪ್ ಇಂಜಿನಿಯರ್ ಗೋಪಾಲ್ ರಾಜ್, ಸೀನಿಯರ್ ಇಂಜಿನಿಯರ್ ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.