Updated News From Kaup

ಮಟ್ಟು ಪರಿಸರದ ಜನತೆಯನ್ನು ಭಯಭೀತರನ್ನಾಗಿಸಿದ ಬಯೋಲುಮಿನೆಸೆಂಟ್ ನೀಲಿ ಸಮುದ್ರ

Thumbnail
Posted On: 23 Nov 2020, 05:28 PM

ರಾತ್ರಿಯಲ್ಲಿ ನೀವು ಸಮುದ್ರ ತೀರಕ್ಕೆ ಹೋದಾಗ ಸಮುದ್ರ ನೀಲಿ ಹೊಳಪಿನಿಂದ ಪ್ರಕಾಶಿಸಲ್ಪಟ್ಟಾಗ ನೀವು ಹೇಗೆ ಭಾವಿಸುತ್ತೀರಿ? ನೀವು ಸ್ವಲ್ಪ ಭಯಭೀತರಾಗಬಹುದು? ಚಿಂತಿಸಬೇಕಾಗಿಲ್ಲ. ಇದು ನಿಜವಾಗಿಯೂ ನೈಸರ್ಗಿಕ ಮತ್ತು ವೈಜ್ಞಾನಿಕವಾಗಿದೆ. ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಹಾಗೂ ಪಡುಕೆರೆ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ಸಮುದ್ರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದು. ಜನರು ರಾಸಾಯನಿಕ ವಸ್ತು ವಿಲೀನವಾಗಿರಬೇಕೆಂದು ಊಹಿಸಿದ್ದಾರೆ ಆದರೇ ಇದನ್ನು ಬಯೋಲುಮಿನಿಸೆಂಟ್ ಎಂದು ಕರೆಯಲಾಗುತ್ತದೆ.
ಬಯೋಲುಮಿನೆಸೆಂಟ್ ಬೀಚ್ ವಿದ್ಯಮಾನ
ರಾತ್ರಿಯಲ್ಲಿ ಸಮುದ್ರವು ನೀಲಿ ಹೊಳಪನ್ನು ಹೊಂದಿರುವುದನ್ನು ನೀವು ನೋಡಿದ್ದರೆ, ಅದನ್ನು ಬಯೋಲುಮಿನೆಸೆಂಟ್ ಎಂದು ಹೇಳಬಹುದು. ಬೆಳಕನ್ನು ಜೀವಂತ ಜೀವಿ ಹೊರಸೂಸುತ್ತದೆ ಇದನ್ನು ಕೆಮಿಕಲ್ ಅಥವಾ ಇನ್ನೇನೋ ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಈ ಬಯೋಲುಮಿನೆಸೆಂಟ್ ವಿದ್ಯಮಾನದೊಂದಿಗೆ ಜಗತ್ತಿನಲ್ಲಿ ಕೆಲವು ಕಡಲತೀರಗಳು ಮಾತ್ರ ಇವೆ.
ಮಾಲ್ಡೀವ್ಸ್‌ನಲ್ಲಿರುವವು ಅವುಗಳಲ್ಲಿ ಒಂದು, ಜಮೈಕಾ, ಸ್ಯಾನ್ ಡಿಯಾಗೋ, ವಿಯೆಟ್ನಾಂ, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲೂ ಇವೆ. ಮಾಲ್ಡೀವ್ಸ್ನಲ್ಲಿ ಮಾತ್ರ, ಈ ಬಯೋಲುಮಿನೆಸೆಂಟ್ ವಿದ್ಯಮಾನ ಕಾಣ ಸಿಗುತ್ತವೆ. ಸಮುದ್ರದ ಅಲೆಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ರಾತ್ರಿಯಲ್ಲಿ ಕಾಣುವ ಬೆಳಕನ್ನು ಅವು ಉತ್ಪಾದಿಸುತ್ತವೆ. ಸಮುದ್ರವು ಸೂಕ್ಷ್ಮಜೀವಿಗಳು ಮತ್ತು ಸೂಕ್ಷ್ಮಾಣುಜೀವಿಗಳಿಂದ ತುಂಬಿದೆ ಎಂದು ತೋರುತ್ತದೆ, ಇದು ನೀಲಿ ಹೊಳಪನ್ನು ಉಂಟುಮಾಡುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ.
ಸಮುದ್ರದಲ್ಲಿ ಹಲವಾರು ರೀತಿಯ ಪ್ಲ್ಯಾಂಕ್ಟನ್ಗಳಿವೆ, ಅದು ತೊಂದರೆಗೀಡಾದಾಗ ಬೆಳಕನ್ನು ಹೊರಸುಸುತ್ತವೆ. ಬೆಳಕುಗಳು ಅವುಗಳ ರಕ್ಷಣಾ ಕಾರ್ಯವಿಧಾನ. ಬೆಳಕನ್ನು ಉತ್ಪಾದಿಸುವ ಲ್ಯೂಸಿಫೆರಿನ್ ಎಂಬ ರಾಸಾಯನಿಕದಿಂದ ಬೆಳಕನ್ನು ಉತ್ಪಾದಿಸಲಾಗುತ್ತದೆ. ಪ್ರತಿಯೊಂದು ಜೀವಿಗೂ ಬೆಳಕನ್ನು ಉತ್ಪಾದಿಸಲು ತಮ್ಮದೇ ಆದ ಮಾರ್ಗವಿದೆ. ಕೆಲವೊಂದು ಜೀವಿಗಳು ತಮ್ಮದೇ ಆದ ಲೂಸಿಫೆರಿನ್ ಅನ್ನು ಉತ್ಪಾದಿಸಬಹುದು, ಆದರೆ ಕೆಲವೊಂದು ಜೀವಿಗಳಿಗೆ ಜೀವಂತ ಜೀವಿಗಳನ್ನು ತಿನ್ನುವ ಅಗತ್ಯವಿರುತ್ತದೆ. , ಈ ನೈಸರ್ಗಿಕವಾದ ಬೆಳಕು ಬಹಳ ವಿಶಿಷ್ಟವಾಗಿದೆ.
ಸಂಗ್ರಹ : ವಿಕ್ಕಿ ಪೂಜಾರಿ ಮಡುಂಬು

ಉಚ್ಚಿಲ: ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತ್ಯು

Thumbnail
Posted On: 23 Nov 2020, 12:57 PM

ಉಚ್ಚಿಲ : ಸ್ಕೂಟರ್ ಸವಾರನೋರ್ವ ಲಾರಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ. ಉಚ್ಚಿಲ ಪೇಟೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸವಾರ ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಬಿ ಕೋಟ್ಯಾನ್ (65) ಎಂದು ಗುರುತಿಸಲಾಗಿದೆ.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ : ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ

Thumbnail
Posted On: 22 Nov 2020, 09:40 PM

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬಿದ್ಕಲಕಟ್ಟೆ ಮೊಳಹಳ್ಳಿ, ಕೋಣಿಹಾರ ಗ್ರಾಮಕ್ಕೆ ಭೇಟಿನೀಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದಿಗಳನ್ನು ನೀಡಲಾಯಿತು. ಮಾಜಿ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಹೆಗ್ಡೆ, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೊನಿ ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸರೆ ತಂಡದ ಅಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿ, ಜನರಿಗೆ ಕೊರೊನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಈ ಕಾರ್ಯಕ್ರಮವನ್ನು ಮಾಜಿ ಸೈನಿಕ, ಕೋಣಿಹಾರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಯಶವಂತ್ ಅವರು ಆಯೋಜಿಸಿದ್ದರು. ಈ ಕಾರ್ಯಕ್ರಮ ನಡೆಸಲು ವಿಠ್ಠಲ್ ಶೆಟ್ಟಿ ಸ್ಥಳಾವಕಾಶ ನೀಡಿದ್ದರು. ಗ್ರಾಮದ 72 ಜನ ಇಂದಿನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಆಸರೆ ತಂಡದ ಜಗದೀಶ್ ಬಂಟಕಲ್, ಬೇಬಿ ಶೆಟ್ಟಿ ಅಂಬಾಗಿಲು, ಕಾರ್ತಿಕ್ ಆಚಾರ್ಯ ಅಂಬಲ್ಪಾಡಿ, ಅರುಣ್ ಹಾಗೂ ದಿನೇಶ್ ರಾವ್ ಉಪಸ್ಥಿತರಿದ್ದರು.

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು : ರಾಘವೇಂದ್ರ ಪ್ರಭು,ಕವಾ೯ಲುಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Thumbnail
Posted On: 22 Nov 2020, 02:25 PM

ಉಡುಪಿ. :- ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನ .22 ರಂದು ಯಲಹಂಕ ಉಪನಗರ ಪ್ರಖ್ಯಾತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಗೌರವ ಕಾಯ೯ಕ್ರಮದಲ್ಲಿ ಸಾಮಾಜಿಕ ಕಾಯ೯ಕತ೯ ತರಬೇತಿದಾರ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸಾಮಾಜಿಕ ಸೇವೆ ಮತ್ತು ಯುವ ಸಂಘಟನೆ ವಿಭಾಗದಲ್ಲಿ " ಕನ್ನಡ ರಾಜ್ಯೋತ್ಸವ " ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಚ್ಛ ಭಾರತ ಫ್ರೆoಡ್ಸ್ ಸಂಯೋಜಕರಾಗಿರುವ ಇವರು ಅನೇಕ ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ.ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂತಿ೯ ಅರಳಿ ನಾಗರಾಜ್, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್, ಗುಣವಂತ ಮಂಜು ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ : ಹಿರಿಯ ಮುದ್ರಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

Thumbnail
Posted On: 22 Nov 2020, 01:36 PM

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಇವರ ವತಿಯಿಂದ ಹಿರಿಯ ಮುದ್ರಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಶ್ರಾಂತ ಉಪಸಂಪಾದಕರು, ಉದಯವಾಣಿ ಮಣಿಪಾಲದ ನಿತ್ಯಾನಂದ ಪಡ್ರೆ ಭಾಗವಹಿಸಿದ್ದರು. ಸನ್ಮಾನ : ದೊಡ್ಡಣಗುಡ್ಡೆಯ ವರದೇಂದ್ರ ಪ್ರಿಂಟರ್ಸ್ ಮಾಲಕರಾದ ಮಂಜುನಾಥ್ ಶೆಣೈ, ಕಾಪುವಿನ ವಿವೇಕ್ ಪ್ರಿಂಟರ್ಸ್ ಮಾಲೀಕರಾದ ವಿಠಲ ಪೂಜಾರಿ, ಕೋಟೇಶ್ವರದ ಅರುಣ ಪ್ರಿಂಟರ್ಸ್ ಮಾಲಕರಾದ ವೆಂಕಟರಮಣ ಐತಾಳ್, ಕಾರ್ಕಳದ ಸಮತಾ ಗ್ರಾಫಿಕ್ಸ್ ಮಾಲಕರಾದ ಶಿಶುಪಾಲ ಜೈನ್ ರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ : ಎಸ್ಸೆಸ್ಸೆಲ್ಸಿಯಲ್ಲಿ ಶೇ.75 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.75 ಕ್ಕಿಂತ ಮೇಲ್ಪಟ್ಟು ಅಂಕ ಬಂದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಮುದ್ರಣಾಲಯಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಬಂಟಕಲ್ಲು : ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮಹಿಳೆಯ ಚಿನ್ನ ದೋಚಿದ ಅಪರಿಚಿತ

Thumbnail
Posted On: 21 Nov 2020, 11:03 PM

ಇಂದು ಸಂಜೆ ಗಂಟೆ 6.30 ರ ಹೊತ್ತಿಗೆ ಬಂಟಕಲ್ಲು ದೇವಸ್ಥಾನದ ಬಳಿಯಲ್ಲಿ ವಾಸವಿರುವ ಒಬ್ಬಂಟಿ ಮಹಿಳೆಯ ಮನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಆ ಮಹಿಳೆ ನೀರು ತರಲು ಮನೆಯೊಳಗೆ ಹೋದಾಗ ಆ ವ್ಯಕ್ತಿ ಅವರನ್ನು ಹಿಂಬಾಲಿಸಿ ಮನೆಯೊಳಗೆ ಹೋಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 1.75 ಲಕ್ಷ ರೂ ಮೌಲ್ಯದ ಬಂಗಾರದ ಚೈನನ್ನು ಎಳೆದು ಕೊಂಡು ಬೈಕಿನಲ್ಲಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪರಿಚಿತರ ಮೇಲೆ ಕರುಣೆ ತೋರದಿರಿ
ಅಪರಿಚಿತ ವ್ಯಕ್ತಿಗಳು ಯಾರೇ ಆಗಲಿ ನೀರು ಕೇಳುವ ಅಥವಾ ಯಾವುದೇ ಕಾರಣಕ್ಕೂ ಮನೆ ಬಳಿ ಬಂದರೆ ಅವರನ್ನು ಒಳಬರಲು ಬಿಡಬೇಡಿ. ಅಥವಾ ನೀರು ಕೊಡುವೂದಕ್ಕೂ ಹೋಗಬೇಡಿ. ಯಾವುದೇ ಸಹಾಯ ಯಾಚಿಸಿ ಬಂದರೂ , ಮಹಿಳೆ ಅಥವಾ ಪುರುಷರೇ ಆಗಿರಲಿ ಅವರು ಅಪರಿಚಿತರಾದರೆ ಅವರಿಗೆ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಕರುಣೆ, ಪಾಪ ಪುಣ್ಯ ನೋಡಲು ಹೋಗಬೇಡಿ. ಯಾವಾಗ ಯಾರು ಯಾವ ವೇಷದಲ್ಲಿ ಬಂದು ನಮ್ಮನ್ನು ವಂಚಿಸುತ್ತಾರೆ ಎಂದು ಊಹಿಸಲೂ ಕಷ್ಟ.
ಮುಖ್ಯವಾಗಿ ಒಬ್ಬಂಟಿಯಾಗಿರುವವರು, ಮಹಿಳೆಯರು ಎಚ್ಚರಿಕೆಯಿಂದಿರಬೇಕು.
ನೀರು ಕೇಳುವುದು, ದಾರಿ ಕೇಳುವುದು, ವಸ್ತುಗಳನ್ನು ಮಾರಾಟ ಮಾಡಲು ಬರುವುದು ಹೀಗೆ ಯಾವುದೇ ವಿಧದಲ್ಲೂ ಬರುವವರಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋಗುವವರೂ ಎಚ್ಚರಿಕೆಯಿಂದಿರಬೇಕು.. ಬೆಲೆಬಾಳುವ ಆಭರಣಗಳ ಬಗ್ಗೆ ಜಾಗರೂಕರಾಗಿರಿ.
ಯಾರೇ ಅಪರಿಚಿತರು ಬಂದಾಗ ಅತೀ ಜಾಗರುಕತೆ ಇರಲಿ. ಯಾರಿಗೂ ಕರುಣೆ,ಪಾಪ,ಪುಣ್ಯ ನೋಡಬೇಡಿ.
ಈ ಬಗ್ಗೆ ಮಕ್ಕಳಿಗೂ ತಿಳಿಹೇಳಬೇಕು, ನಾವು ಎಷ್ಟೇ ಬುದ್ದಿವಂತರಿದ್ದರೂ ಮೋಸಹೋಗುತ್ತೇವೆ. ಎಚ್ಚರಿಕೆ ಇರಲಿ.
ಕೆ ಆರ್ ಪಾಟ್ಕರ್ ಬಂಟಕಲ್ಲು

ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣ: ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

Thumbnail
Posted On: 21 Nov 2020, 08:47 AM

ಉಡುಪಿ : ಪ್ರಸ್ತುತ ಉಡುಪಿಯಲ್ಲಿರುವ ಜಿಲ್ಲಾಸ್ಪತ್ರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ, 115 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ನಿರ್ಮಿಸಲು ಲಭ್ಯವಿರುವ ಸ್ಥಳದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಗುರುವಾರ ನಡೆಸಿದರು. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ, ನೂತನ ಜಿಲ್ಲಾಸ್ಪತ್ರೆ ನಿರ್ಮಿಸಲು ಅಗತ್ಯವಿರುವ ಸ್ಥಳ ಲಭ್ಯವಿದ್ದು, ಇಲ್ಲಿಯೇ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನೀಲ ನಕ್ಷೆಯನ್ನು ಸಿದ್ಧಪಡಿಸುವಂತೆ ಸಂಬAದಪಟ್ಟ ಇಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು. ಜಿ.ಪಂ. ಸಿಇಓ ಡಾ ನವೀನ್ ಭಟ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.

ಇನ್ನಂಜೆ ಮಾತೃಶಕ್ತಿ, ದುರ್ಗಾವಾಹಿನಿ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು

Thumbnail
Posted On: 19 Nov 2020, 09:53 PM

ಇನ್ನಂಜೆ ವಿಷ್ಣುವಲ್ಲಭ ಘಟಕದ ಮಾತೃ ಶಕ್ತಿ ಸಂಚಾಲಕರಾಗಿ ಶ್ರೀಮತಿ ಆಶಾ, ಸಹ ಸಂಚಾಲಕರಾಗಿ ಶ್ರೀಮತಿ ಲಕ್ಷ್ಮಿ. ದುರ್ಗಾವಾಹಿನಿ ಸಂಚಾಲಕರಾಗಿ ಕುಮಾರಿ ವಿದ್ಯಾ, ಸಹ ಸಂಚಾಲಕರಾಗಿ ಕುಮಾರಿ ಪದ್ಮ ಶ್ರೀ ಆಯ್ಕೆಯಾಗಿದ್ದಾರೆ

ಪಡುಬಿದ್ರಿ : ಕನ್ನಂಗಾರ್ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿ ನೇಮಕ

Thumbnail
Posted On: 19 Nov 2020, 09:28 PM

ಪಡುಬಿದ್ರಿ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಜುಮ್ಮಾ ಮಸೀದಿಗಳಲ್ಲಿ ಒಂದಾದ ಕಣ್ಣಂಗಾರ್ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮಸೀದಿಯ ಆಡಳಿತ ಸಮಿತಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ವಜಾಗೊಳಿಸಿದೆ. ಆಡಳಿತಾಧಿಕಾರಿಯಾಗಿ ದ. ಕ. ಜಿಲ್ಲೆಯ ಉಳ್ಳಾಲ ಹರೇಕಳದ ಸೆಯ್ಯದ್ ಮದನಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಮೊಯ್ದೀನ್ ಕುಂಜ್ಞಿ ಮಂಜನಾಡಿ ಇವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಅವರು ನವಂಬರ್ ೧೨ ರಿಂದ ಆಡಳಿತಾಧಿಕಾರಿ ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಎಲ್ಲೂರಿನ ದೀಪೋತ್ಸವ ಮಹತ್ವ

Thumbnail
Posted On: 18 Nov 2020, 11:03 PM

ಉಮಯಾ ಸಹವರ್ತತೇ ಇತಿ ಸೋಮಃ‌ : ಶಿಷ್ಟ ಸಂಪ್ರದಾಯ ,ನಡೆದು ಬಂದ ಪದ್ಧತಿ , ನಡವಳಿಕೆ ,ಕ್ರಮಬದ್ಧತೆಗಳೇ ಪ್ರಧಾನವಾಗಿದ್ದು , "ಸೀಯಾಳ ಅಭಿಷೇಕ"ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900 - 1000 ವರ್ಷ ಪುರಾತನ ಸೀಮೆಯ ದೇವಾಲಯ . ಇಲ್ಲಿ ನೆರವೇರುವ ಪ್ರತಿಯೊಂದು ಪರ್ವಗಳಿಗೆ , ಆಚರಣೆಗಳಿಗೆ, ಉತ್ಸವಾದಿಗಳಿಗೆ ಅವುಗಳದ್ದೇ ಆದ ಹಿನ್ನೆಲೆಗಳಿವೆ. ನಿಯಮ ನಿಬಂಧನೆಗಳಿವೆ . ಕಾರ್ತಿಕ ಮಾಸದ ಸೋಮವಾರಗಳು ಮತ್ತು ಕಾರ್ತಿಕದ ಕೊನೆಯ ದಿನವಾದ ಅಮಾವಾಸ್ಯೆಯಂದು ಪೂರ್ಣಗೊಳ್ಳುವ 'ಲಕ್ಷದೀಪೋತ್ಸವ' ಧಾರ್ಮಿಕ - ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ,ಅಸಾಮಾನ್ಯ‌ ಲಕ್ಷಣವುಳ್ಳದ್ದಾಗಿದೆ . ಈ ನಂಬಿಕೆ - ಶಿಸ್ತು ಉಳಿದು ಕೊಂಡಿದೆ ;‌ ನಡೆದುಬರುತ್ತಿವೆ. ವಾರಕ್ಕೊಮ್ಮೆ ಬರುವ ಸೋಮವಾರವೂ ಶಿವನ ಆರಾಧಕರಿಗೆ ಹಬ್ಬದ ದಿನವೇ . "ಉಮಯಾ ಸಹವರ್ತತೇ ಇತಿ ಸೋಮಃ‌" ಉಮೆಯೊಂದಿಗೆ ಈಶ್ವರನು‌ ಸೇರಿದಾಗ 'ಸೋಮ'ನೆಂದು ಕರೆಯಲ್ಪಡುತ್ತಾನೆ .ಉಮೆಯೊಂದಿಗೆ ಆತನು ವಿಹರಿಸುವ ,ಅವನಿಗೆ ಪ್ರಿಯವೆನಿಸಿದ ಸೋಮವಾರದಂದು ನಡೆಸುವ ಉಪವಾಸ ,ಪೂಜೆ , ಅಭಿಷೇಕ‌ ಇತ್ಯಾದಿಗಳು ಅವನನ್ನು ಪ್ರಸನ್ನಗೊಳಿಸುತ್ತದೆ. ಸೋಮವಾರ ಅಥವಾ ಶನಿವಾರ ದಿನಗಳಂದು ತ್ರಯೋದಶಿ ತಿಥಿ ಕೂಡಿ ಬಂದರೆ ಅದು 'ಪ್ರದೋಷ'. ಈ ಪವಿತ್ರ ಮುಹೂರ್ತದಲ್ಲಿ ವಿಶ್ವೇಶ್ವರನನ್ನು ಆರಾಧಿಸಿದರೆ ದೇವರ ದೇವನು ಶೀಘ್ರ ಅನುಗ್ರಹಿಸುತ್ತಾನೆ. ಕಾರ್ತಿಕ ಮಾಸದಲ್ಲಿ‌ ಬರುವ ಎಲ್ಲಾ ಸೋಮವಾರಗಳು ವಿಶ್ವನಾಥನ‌ ಆರಾಧನೆಯಿಂದ ಸಂತೃಪ್ತಿ ಪಡೆಯಲು‌ ಬಯಸುವ ಭಕ್ತರ ಪಾಲಿಗೆ ಅತ್ಯುತ್ಕ್ರಷ್ಟವೆಂದು‌ ವೇದಗಳು ಹೇಳಿವೆ. ಕಾರ್ತಿಕ ಸೋಮವಾರಗಳಲ್ಲಿ‌ ಶತರುದ್ರಾಭಿಷೇಕ , ದೀಪೋತ್ಸವ , ಲಕ್ಷ ಬಿಲ್ವಾರ್ಚನೆಗಳಿಂದ ಶಿವಾರಾಧನೆ ಮಾಡುವುದು ಶ್ರೇಯಸ್ಕರವೆನಿಸಿದೆ . ಕಾರ್ತಿಕ ಸೋಮವಾರ :ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಕಾರ್ತಿಕದ ನಾಲ್ಕು ಸೋಮವಾರಗಳು ಮಧ್ಯಾಹ್ನ ಅನ್ನಸಂತರ್ಪಣೆ ಸಹಿತವಾಗಿ ರಾತ್ರಿ ತುಳಸಿಪೂಜೆ , ದೊಡ್ಡರಂಗಪೂಜೆ , ದೀಪೋತ್ಸವ , ಉತ್ಸವ ಬಲಿ ನೆರವೇರುತ್ತಿದ್ದುವು - ಪರಂಪರೆಯ ಸೇವಾರ್ಥಿಗಳಿದ್ದರು. 'ಸೋಮವಾರ ವ್ರತಸ್ಥರಾಗುವವರು ದೂರದ ಊರುಗಳಿಂದಲೂ ಬಹುಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಿದ್ದರು.ಕೊನೆಯ ಸೋಮವಾರ ಕಾರ್ತಿಕ 'ಸೋಮವಾರ‌ ವ್ರತ'ದ ಶಿವಾರ್ಪಣೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಕಾಲ ಕಾರಣವಾಗಿ‌ ಕಾರ್ತಿಕ ಮಾಸದ ಮೊದಲ ಎರಡು ಸೋಮವಾರಗಳು ದೇವರ ಭಂಡಾರದಿಂದ ನೆರವೇರುವಂತಾಯಿತು. ಉಳಿದ ಎರಡು ( ಮೂರನೇ ಮತ್ತು ನಾಲ್ಕನೇ) ಸೋಮವಾರಗಳು ನಿರ್ಧರಿತ ಮನೆತನದವರಿಂದ ವಿಸ್ತೃತವಾಗಿ ನಡೆದು ಬರುತ್ತಿವೆ .ಆದರೆ ಈ ವರ್ಷ ಮೊದಲೆರಡು ಸೋಮವಾರಗಳಲ್ಲಿ ಒಂದನ್ನು ನೆರವೇರಿಸಲು ಸೇವಾರ್ಥಿಗಳು ಒದಗಿ ಬಂದಿದ್ದಾರೆ . ಎರಡನೇ ಸೋಮವಾರದ ರಾತ್ರಿಯ ರಂಗಪೂಜೆ , ಉತ್ಸವಬಲಿ ನಡೆಸಲೂ ಸೇವಾರ್ಥಿಗಳು ಸಿದ್ಧರಾಗಿದ್ದಾರೆ. ಈ ನಡುವೆ ಕಾರ್ತಿಕ ಮಾಸದ ಹುಣ್ಣಿಮೆಯ ರಂಗಪೂಜೆಯು ಮಾಮೂಲಿನಂತೆ ಸೇವಾರ್ಥಿಗಳಿಂದ ನಡೆಯುವುದು.‌ 'ಎಲ್ಲೂರುದೀಪ' :"ಎಲ್ಲೂರಿನ ಲಕ್ಷದೀಪ‌" ಪ್ರಸಿದ್ಧವಾದುದು. ಮಧ್ಯಾಹ್ನ ಅನ್ನಸಂತರ್ಪಣೆ , ರಾತ್ರಿ ತುಳಸಿಪೂಜೆ , ದೊಡ್ಡರಂಗಪೂಜೆ ನೆರವೇರಿ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ದೀಪಾರಾಧನೆ ,ದೀಪೋತ್ಸವದ ಬಲಿ ಹೊರಡುತ್ತದೆ .ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದು ಮಾರ್ಗಶಿರ ಮಾಸದ ಶುದ್ಧ ಪಾಡ್ಯದ ಸೂರ್ಯೋದಯಕ್ಕೆ ಎಲ್ಲೂರು ದೀಪೋತ್ಸವವು ಸಮಾಪನಗೊಳ್ಳುತ್ತದೆ. ಕಾಲ ಬದಲಾಗುತ್ತಾ ಬಂತು , ಮನೋಧರ್ಮಗಳೂ ಬದಲಾದುವು , ಬೆಳಗಿನ ಜಾವದ ಲಕ್ಷದೀಪೋತ್ಸವದ ಬಲಿಯನ್ನು ಸಂಜೆಯಾಗುತ್ತಿರುವಂತೆ ಅಥವಾ ರಾತ್ರಿ ಬೇಗನೇ‌ ಏಕೆ ಮುಗಿಸಬಾರದು , ಪಕ್ಕದ ಗ್ರಾಮಗಳಲ್ಲಿ , ತಾಲೂಕಿನಲ್ಲಿ , ಜಿಲ್ಲೆಗಳಲ್ಲಿ ಎಲ್ಲೂರಿನಂತೆ ಅಮಾವಾಸ್ಯೆಯಂದು ‌ಬೆಳಗಿನ ಜಾವ ಲಕ್ಷದೀಪೋತ್ಸವ ನಡೆಯುತ್ತಿದ್ದ ಬಹುತೇಕ ದೇವಾಲಯಗಳಲ್ಲಿ ಬೇಗನೇ ನೆರವೇರುತ್ತಿವೆ ,ಎಲ್ಲೂರಿನಲ್ಲಿ ಏಕೆ ಬೇಗನೇ ಮುಗಿಸಬಾರದು ಎಂಬ ಪ್ರಶ್ನೆಗಳು ಸಹಜವಾಗಿ‌ ಕಳೆದ ಹತ್ತು - ಹದಿನೈದು ವರ್ಷಗಳಿಂದ ಕೇಳಲಾಗುತ್ತಿದೆ . 'ದೀಪಪ್ರಭೆ' ಸೂರ್ಯಕಿರಣದಲ್ಲಿ‌ ಐಕ್ಯ : ಈಗ ಎಲ್ಲೂರು ದೇವರನ್ನು ಮುಟ್ಟಿ ,ತಮ್ಮ ಪರಂಪರೆಯ ತಂತ್ರ ನಿರ್ವಹಿಸುತ್ತಿರುವ ಎಲ್ಲೂರು ಸೀಮೆಯ ಒಂಬತ್ತುಮಂದಿ ತಂತ್ರಿಗಳ ಹಿಂದಿನ‌‌ ತಲೆಮಾರಿನ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ತಂತ್ರಾಗಮ ತಜ್ಞರಲ್ಲಿ ಸುಮಾರು ನಲ್ವವತ್ತು‌ ವರ್ಷಗಳಷ್ಟು ಹಿಂದೆಯೇ ಈ ಲೇಖಕ‌ "ನಮ್ಮಲ್ಲಿ ಯಾಕೆ ಬೆಳಗಿನ ಜಾವ ಲಕ್ಷದೀಪೋತ್ಸವ" ಎಂಬ ಪ್ರಶ್ನೆಯನ್ನು‌ ಕೇಳಿದ್ದು ; ಆಕಾಲದ ವಿದ್ವಾಂಸರು ವಿವರಿಸಿದ್ದ ಉತ್ತರ ಹೀಗಿದೆ : "ವಿಶ್ವೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ನಿರಂತರ ದೀಪಾರಾಧನೆಯ ದೀಪದ ಜ್ಯೋತಿಯು ( ಪ್ರಕಾಶ ,ಕಾಂತಿ) ಮಧ್ಯರಾತ್ರಿ ಕಾಲದಲ್ಲಿ ಅಥವಾ ಕತ್ತಲಲ್ಲಿ ಕರಗಿಹೋಗಬಾರದು. ಬೆಳಗಿನಜಾವ ಉತ್ಸವಬಲಿ ಹೊರಟಾಗ ದೇವಳದ ಒಳ ,ಹೊರ ಅಂಗಣಗಳಲ್ಲಿ ದಳಿ ಅಳವಡಿಸಿ ಹಣತೆಗಳಲ್ಲಿ ಬೆಳಗುವ ಬಹುಸಂಖ್ಯೆಯ ದೀಪಗಳು ಉರಿಯುತ್ತಿರುವಂತೆ ಉತ್ಸವ ಮುಗಿಯುತ್ತದೆ ,ಆಗ ಬೆಳಗಾಗುತ್ತಾ ಅರುಣೋದಯ ಅನಂತರ ಸೂರ್ಯೊದಯವಾಗುತ್ತದೆ . ದೇವಳದ ಸುತ್ತಲೂ ಬೆಳಗಿದ ದೀಪಗಳು ನಂದಿಹೋಗಲು(ಆರಿಹೋಗಲು) ಆರಂಭವಾಗುತ್ತವೆ , ಹೀಗೆ ನಂದಿಹೋಗುವ ದೀಪದ 'ಪವಿತ್ರ ಜ್ಯೋತಿಯು' ಸೂರ್ಯಕಿರಣದೊಂದಿಗೆ ಐಕ್ಯವಾಗುತ್ತದೆ . ಆಗ ಬೆಳಗಾಗುತ್ತದೆ .ಅಂದರೆ ದೀಪ - ಜ್ಯೋತಿ ಆರಿಹೋಗದೆ ಸೂರ್ಯ ಪ್ರಭೆಯೊಂದಿಗೆ ನಿರಂತರ ಬೆಳಗುತ್ತಿರುತ್ತವೆ " ಎಂಬ ಧಾರ್ಮಿಕ - ಸಾಂಸ್ಕೃತಿಕ ವಸ್ತು ಸ್ಥಿತಿಯ ವಿವರಣೆ ನೀಡಿದ್ದರು . ಈ ಮೇಲಿನ ವಿವರಣೆಯ ಹೊರತಾಗಿ ದೇವಾಲಯದ ಪುರಾತನ ಶಿಸ್ತು ಅಥವಾ ಒಪ್ಪಿಗೆಯೂ ಬೆಳಗಿನಜಾವದ ಲಕ್ಷದೀಪ ಹಾಗೂ ಆಯನೋತ್ಸವವನ್ನು ದೃಢೀಕರಿಸುತ್ತದೆ . ಎಲ್ಲೂರಿನಲ್ಲಿ ಲಕ್ಷದೀಪದ ಉತ್ಸವ ಇಂದಿಗೂ ಬೆಳಗಿನಜಾವದಲ್ಲೆ ಆರಂಭವಾಗಿ ಸೂರ್ಯೋದಯಕ್ಕೆ ಸಮಾಪನಗೊಳ್ಳುತ್ತದೆ . ಇದು ಇಲ್ಲಿಯ ವಿಶೇಷ .ಕನಿಷ್ಠ ನೂರು ವರ್ಷಗಳಿಂದ ಲಕ್ಷದೀಪೋತ್ಸವ , ಆಯನೋತ್ಸವಗಳಂದು ರಾತ್ರಿ ಯಕ್ಷಗಾನ ತಾಳಮದ್ದಳೆ - ಬಯಲಾಟಗಳು‌ ಬೆಳಗಿನ ಜಾವ ಬಲಿಹೊರಡುವವರೆಗೆ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ .ಈ ಲಕ್ಷದೀಪ , ಆಯನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಥ ಹೇಳಿದ್ದ ಆ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳ ಜೀವನ ವೃತ್ತಾಂತಗಳಲ್ಲಿ‌ (ಮುದ್ರಿತ) ಉಲ್ಲೇಖಗಳು ಸಿಗುತ್ತವೆ. ಸ್ಥಳೀಯ ಉತ್ಸಾಹಿ ಯಕ್ಷಗಾನಾಸಕ್ತರು ಇದ್ದರು,ಅವರು ಅರ್ಥ ಹೇಳುತ್ತಿದ್ದ ,ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆಯೂ ವಿವರಗಳು ಸಿಗುತ್ತವೆ. ಎಲ್ಲೂರು ದೇವಾಲಯವು ಜಿಲ್ಲೆಯ ಯಾವುದೇ ಧಾರ್ಮಿಕ ಕೇಂದ್ರಗಳ, ಮಂದಿರ , ದೇವಸ್ಥಾನ, ಗುಡಿಗಳನ್ನು ಅನುಸರಿಸಬೇಕಾದ ಅಗತ್ಯವಿಲ್ಲ .ಇಲ್ಲಿ ಎಲ್ಲವೂ ಇದೆ.ನೋಡಬೇಕು - ತಿಳಿಯಬೇಕು. ಇದ್ದುದರಲ್ಲೆ ಮಹತ್ತನ್ನು ಸಾಧಿಸಬಹುದು. "ಲಕ್ಷ್ಯ"ವನ್ನು ಬೆಳಗುವ 'ಲಕ್ಷದೀಪೋತ್ಸವ' :ದೀಪವು ಲೌಕಿಕ - ಅಲೌಕಿಕಗಳನ್ನು ಬೆಸೆಯುತ್ತಾ ಭವ್ಯದಲ್ಲಿ ದಿವ್ಯವನ್ನು ಸೃಷ್ಟಿಸುತ್ತದೆ . ಅಂಧಕಾರದಲ್ಲಿ ಅಸಂಖ್ಯ ದೀಪಗಳ ಪ್ರಜ್ವಲನೆ , ಗಗನದ ತಾರೆಗಳು ಭುವಿಗಿಳಿದು ಭವವೆಲ್ಲ ಬೆಳ್ಳಂಬೆಳಗು . ಈ ಪರ್ವ‌ ಭಗವಂತನ ಹಲವು ಆರಾಧನೆಗಳಲ್ಲಿ ಒಂದು ಪರ್ವ ; ದೀಪದ ಪರ್ವ.ಈ ಪರ್ವ ಒದಗಿಬರುವ ಮಾಸವೇ ಕಾರ್ತಿಕ ಮಾಸ .'ಲಕ್ಷ್ಯ'ವನ್ನು ಬೆಳಗುವ 'ದೀಪೋತ್ಸವ'ದ ವ್ಯಕ್ತಿ ಜೀವನದ ಸಿದ್ಧಿ ದೃಷ್ಟಾಂತವನ್ನು ದೃಢ ಪಡಿಸಲು 'ದೀಪ'ವು ಲಕ್ಷಣವಾದಾಗ 'ಲಕ್ಷ್ಯ" ಸಾಧಿಸಲ್ಪಡುತ್ತದೆ. ಆಗ ಸಹಜವಾಗಿ ಅಜ್ಞಾನ , ದಾಷ್ಟ್ಯ ,ದುರಹಂಕಾರ ನಾಶವಾಗಿ‌ ಸುಜ್ಞಾನ ಪ್ರಾಪ್ತಿಯಾಗುತ್ತದೆ .ಬೆಳಗಿದ 'ದೀಪ' ಅರ್ಥಪೂರ್ಣ 'ಜ್ಞಾನ'ವೇ ಆಗುತ್ತದೆ. ಉದ್ದೇಶ ಸಫಲವಾಗುತ್ತದೆ .ಅಂದರೆ "ದೀಪ" ಗೆದ್ದಂತೆ. ಲಕ್ಷ ಅಲ್ಲ ಲಕ್ಷ ಲಕ್ಷ ಸಂಖ್ಯೆಯ ದೀಪ ಬೆಳಗಿದರೂ ದೀಪದ "ಜ್ಞಾನ" ಪ್ರತಿಪಾದ್ಯ ಧರ್ಮವು ವಿಜೃಂಭಿಸಬೇಕೆಂದಿಲ್ಲ .ಅಜ್ಞಾನ , ದಾಷ್ಟ್ಯ ಮತ್ತು ದುರಹಂಕಾರಗಳ ಪ್ರಖರತೆಯ ಮುಂದೆ ಕೆಲವೊಮ್ಮೆ "ದೀಪ - ಜ್ಞಾನ" ತನ್ನ ಸಹಜ 'ಲಕ್ಷ್ಯ'ವನ್ನು ಸಾಧಿಸಲಾಗದೆ ಸೋಲುವುದಿದೆ .ಇದು ದೀಪದ ಸೋಲಲ್ಲ ; ಬದಲಿಗೆ ಸಮುದಾಯದ ಪರಾಭವ. ‌‌‌‌‌ (ಸಂಗ್ರಹ) "ದೀಪ ಬೆಳಗಲಿ ,ದೀಪ ಗೆಲ್ಲಲಿ‌" ಇದು ದೀಪೋತ್ಸವದ ಆಶಯವಾಗಲಿ‌.ಲೇಖನ : ಕೆ. ಎಲ್.ಕುಂಡಂತಾಯ.