Updated News From Kaup
ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
Posted On: 10 Dec 2020, 09:55 PM
ಲಿಯೋ ಕ್ಲಬ್ ಯುವ ಶಕ್ತಿ Dist 317C ಆರ್ಡಿ-ಬೆಳ್ವೆ-ಗೋಳಿಯಂಗಡಿ ಅರ್ಪಿಸುವ ರಾಜ್ಯ ಮಟ್ಟದ ಕೋವಿಡ್ -19ರಿಂದ ನಾನು ಕಲಿತ ಪಾಠ (Lesson I learnt from covid -19) ಎಂಬ ವಿಷಯದ ಪ್ರಬಂಧ ಸ್ಪರ್ಧೆಯು ಕರ್ನಾಟಕ ರಾಜ್ಯದಲ್ಲಿ ಕಲಿಯುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರವಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಇದ್ದು, ಪ್ರತಿ ಭಾಷಾ ವಿಭಾಗದಲ್ಲಿ ಎರಡು ಬಹುಮಾನಗಳಿವೆ, ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಪ್ರಬಂಧದಲ್ಲಿ ಕನಿಷ್ಠ 500 ಪದಗಳು ಮತ್ತು ಗರಿಷ್ಠ 1000 ಪದಗಳು ಇರಬೇಕು. ಪ್ರಬಂಧವನ್ನು ಪಿಡಿಎಫ್ ರೂಪದಲ್ಲಿ lcyuvashakthi20@gmail.com ಗೆ ಕಳುಹಿಸಬೇಕು. ಪ್ರಬಂಧ ಸಲ್ಲಿಕೆಗೆ ಕೊನೆಯ ದಿನಾಂಕ 15/01/2021 ಫಲಿತಾಂಶವನ್ನು ನಮ್ಮ ಫೇಸ್ಬುಕ್ ಪುಟದಲ್ಲಿ ಘೋಷಿಸಲಾಗುತ್ತದೆ (ಪುಟದ ಹೆಸರು) leo club yuva shakthi ಭಾಗವಹಿಸುವವರು ತಮ್ಮ ಪ್ರಬಂಧದೊಂದಿಗೆ ಹೆಸರು, ವಯಸ್ಸು, ಕಾಲೇಜಿನ ಹೆಸರು, ವಸತಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಕಳುಹಿಸಬೇಕು. ಪ್ರಬಂಧವು ಯಾವುದೇ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಾರದು. ಲಿಯೋ ಕ್ಲಬ್ ಯುವ ಶಕ್ತಿ ಕಾರ್ಯದರ್ಶಿ ರಯಾನ್ ಫರ್ನಾಂಡೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟಕಲ್ಲು ದಿ. ಬಿ ರಾಮಚಂದ್ರ ಪ್ರಭು ಶ್ರದ್ಧಾಂಜಲಿ - ನುಡಿ ನಮನ ಕಾರ್ಯಕ್ರಮ
Posted On: 10 Dec 2020, 08:09 PM
ಕಳೆದ ಶುಕ್ರವಾರದಂದು ನಿಧನರಾದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪದಾಯರಾಗಿದ್ದ ಪಂಜಿಮಾರು ಕುರುಡೈ ರಾಮಚಂದ್ರ ಪ್ರಭುರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್ಲು2 ಶಾಲೆಯಲ್ಲಿ ನಡೆಯಿತು. ವೇದಿಕೆಯಲ್ಲಿದ್ದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಶ್ರೀ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಶ್ರೀ ಜಯರಾಮ್ ಪ್ರಭುರವರು ರಾಮಚಂದ್ರ ಪ್ರಭುಗಳವರ 32 ವರ್ಷಗಳ ಸೇವೆಯನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಕೋರಿ ನುಡಿನಮನ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವನಾಥ ಪ್ರಭು ಕೇಂಜ, ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ಪಾಟ್ಕರ್, ಶಾಲಾ ದಾನಿಗಳಾದ ಶ್ರೀ ಲುವಿಸ್ ಮಾರ್ಟೀಸ್ ಬಂಟಕಲ್ಲು, ಶ್ರೀ ರಾಮಚಂದ್ರ ನಾಯಕ್ ಪಡುಬೆಳ್ಳೆ, ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀ ವಿಜಯ್ ಧೀರಜ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಾವಣ್ಯವತಿ ಬಾಯಿ, ನಾಗರೀಕ ಸೇವಾ ಸಮಿತಿ ಬಂಟಕಲ್ಲು ಇದರ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ, ವಿಶ್ವಕರ್ಮ ಸಂಘದ ಕಾರ್ಯದರ್ಶಿ ಶ್ರೀ ಜಗದೀಶ ಆಚಾರ್ಯ, ಹಳೇವಿದ್ಯಾರ್ಥಿ ಶ್ರೀ ವೀರೇಂದ್ರ ಶೆಟ್ಟಿ, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೆಲ್ಕರ್, ದಿವಂಗತ ರಾಮಚಂದ್ರ ಪ್ರಭುರವರ ಸುಪುತ್ರ ಶ್ರೀನಿಧಿ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಳೇವಿದ್ಯಾರ್ಥಿಗಳಾದ ಹಾಗೂ ದಿ. ಪ್ರಭುಗಳ ಶಿಷ್ಯರಾದ ಶ್ರೀ ಶ್ರೀನಿವಾಸ್ ಪ್ರಭು, ಶ್ರೀ ರಮಾನಾಥ್ ಪಾಟ್ಕರ್, ಶ್ರೀ ದತ್ತಾತ್ರೇಯ ಪಾಟ್ಕರ್, ಶ್ರೀ ದೇವದಾಸ್ ಪಾಟ್ಕರ್, ಶ್ರೀ ರಾಜೇಂದ್ರ ಪ್ರಭು, ಶ್ರೇಯಸ್ ಭಟ್ ರವರುಗಳು ದಿವಂಗತ ಪ್ರಭುಗಳವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ತದನಂತರ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಾಲಾಭಿಮಾನಿಗಳು, ಹಳೇವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಿವಂಗತ ಪ್ರಭುರವರ ಶಿಷ್ಯರು, ಅಭಿಮಾನಿಗಳು ಹಾಗೂ ಶಾಲಾ ಶಿಕ್ಷಕಿ ಬಂಧುಗಳು ಭಾಗವಹಿಸಿದ್ದರು. ಶ್ರೀ ಕೆ ಆರ್ ಪಾಟ್ಕರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಪು : ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಹಮತ್ ನೂತನ ಮನೆ ಹಸ್ತಾಂತರ
Posted On: 10 Dec 2020, 07:54 PM
ಕಾಪು, ಡಿ. ೧೦ : ಬೆಳಪು ದೇವೇಗೌಡ ಬಡಾವಣೆಯಲ್ಲಿ ಸಮಾಜ ಸೇವಾ ಘಟಕ, ಜಮಾಅತೆ ಇಸಾಮೀ ಹಿಂದ್, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಇವರ ವತಿಯಿಂದ ಬಡ ಕುಟುಂಬವೊಂದಕ್ಕೆ ಸುಮಾರು ೬ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಡಲಾದ ನೂತನ ಮನೆ ರಹಮತ್ ಅನ್ನು ಡಿ. ೧೦ರಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಪು ಸಿಎ ಬ್ಯಾಂಕ್ ಅಧ್ಯಕ್ಷ / ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮದಲ್ಲಿ ೬೦೦ಕ್ಕೂ ಅಽಕ ಬಡಕುಟುಂಬಗಳಿಗೆ ಮನೆ ನಿವೇಶನವನ್ನು ಒದಗಿಸಿಕೊಡಲಾಗಿದ್ದು, ಸರಕಾರದ ವಿವಿಧ ಮೂಲಗಳಿಂದ ಗೃಹ ನಿರ್ಮಾಣಕ್ಕೆ ಸರಕಾರ ಮತ್ತು ದಾನಿಗಳಿಂದ ಹಣಕಾಸಿನ ನೆರವನ್ನೂ ದೊರಕಿಸಿಲಾಗಿದೆ. ಮನೆ ನಿವೇಶನ ದೊರಕಿದರೂ, ಮನೆ ನಿರ್ಮಾಣಕ್ಕೆ ಕಷ್ಟ ಪಡುತ್ತಿದ್ದ ಕೆಲವರಿಗೆ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಾಣದ ಸಂಕಲ್ಪ ಮಾಡಲಾಗಿದ್ದು, ಅದಕ್ಕೆ ಅನುಗುಣವಾಗಿ ಜಮಾಅತೆ ಇಸಾಮೀ ಹಿಂದ್ ಸಹಿತ ವಿವಿಧ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕು ಘಟಕದ ಅಧ್ಯಕ್ಷ ಶಬೀ ಅಹಮದ್ ಕಾಝಿ ಮಾತನಾಡಿ, ಕಷ್ಟದಲ್ಲಿರುವವರ ನೋವಿಗೆ ಸ್ಪಂಽಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ದಿನ ನಿತ್ಯದ ಉಳಿತಾಯದ ಒಂದಂಶವನ್ನು ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಒದಗಿಸಿದರೆ ಅದು ದೇವರಿಗೆ ಅತ್ಯಂತ ಪ್ರಿಯವಾಗುತ್ತದೆ. ಈ ಮಾದರಿಯ ಸೇವೆಗೆ ಭಗವದನುಗ್ರಹವೂ ಸಿಗುತ್ತದೆ ಎಂದರು. ಜಮಾಅತೆ ಇಸಾಮೀ ಹಿಂದ್ನ ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೋವಾದ ಉದ್ಯಮಿ ಇಸ್ಮಾಯಿಲ್ ಸಾಹೇಬ್ ನೂತನ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಿದರು. ಕೊಂಬಗುಡ್ಡೆ ಜಾಮಿಯಾ ಮಸ್ಜಿದ್ ಜದೀದ್ ಕಲಾನ್ನ ಇಮಾಮ್ ಮೌಲಾನಾ ಮಹಮ್ಮದ್ ಪರ್ವೇಝ್ ಆಲಂ ನದ್ವಿ ಕುರ್ ಆನ್ ಪಠಣದೊಂದಿಗೆ ಮನೆ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ ಕರಂದಾಡಿ, ಉದ್ಯಮಿ ಎಸ್. ಕೆ. ಇಕ್ಬಾಲ್ ಕಟಪಾಡಿ, ಕಾಪು ಮುಷ್ತಾಕ್ ಇಲೆಕ್ಟ್ರಿಕಲ್ಸ್ನ ಮಾಲಕ ಮುಷ್ತಾಕ್ ಇಬ್ರಾಹಿಂ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾಯೀ ಅಧ್ಯಕ್ಷ ಡಾ| ಅಬ್ದುಲ್ ಅಜೀಜ್, ಇಕ್ಬಾಲ್ ಸಾಹೇಬ್ ಮಜೂರು ಅತಿಥಿಗಳಾಗಿ ಭಾಗವಹಿಸಿದ್ದರು. ಜಮಾಅತೆ ಇಸಾಮೀ ಹಿಂದ್ನ ಹೂಡೆ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಖಾದರ್, ಮಲ್ಪೆ ಸ್ಥಾನೀಯ ಅಧ್ಯಕ್ಷ ಅಬ್ದುಲ್ ರಹಮಾನ್ ರಫೀಕ್, ಹೆಚ್.ಆರ್.ಎಸ್. ನ ಜಿಲ್ಲಾ ಸಂಚಾಲಕ ಹಸನ್ ಮೊದಲಾದವರು ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮೀ ಹಿಂದ್ನ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಹಮ್ಮದ್ ಇಕ್ಬಾಲ್ ಆದಂ ಮಜೂರು ವಂದಿಸಿದರು. ನಿಸಾರ್ ಅಹಮದ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ವರ್ಕರ ಗುಂಡಿದ ಮುಗೇರ ಪಂಜುರ್ಲಿ (ದೈವದ ಪ್ರಾದೇಶಿಕ ಪ್ರಸರಣ ಕಥೆ)
Posted On: 10 Dec 2020, 05:14 PM
ತೆಂಕಣ ಭಾಗದ ಮೊಗರ್ನಾಡು ಸಾವಿರ ಸೀಮೆಯ ಒಂದು ವಿಶಿಷ್ಟವಾದ ಸತ್ಯ,ನಾಡು ದೈವ ಪಂಜುರ್ಲಿ. ಈ ಪಂಜುರ್ಲಿಯು ನಾವು ಹೇಳುವ ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ,ಅಣ್ಣಪ್ಪ ಪಂಜುರ್ಲಿಯ ರೂಪ ಸಂದಿ ಪಾರ್ಧನದಲ್ಲಿ ಎಂದು ಗಣನೆಗೆ ತೆಗೆದುಕೊಂಡರೂ,ಮೂಲ ಸುಳ್ಳಮಲೆಯ" ಅರದ್ದೆರೆ ಪಂಜುರ್ಲಿ" ಎಂದೂ, ಸಂಧಿಯಲ್ಲಿ ಈ ದೈವಕ್ಕೆ ಸುಳ್ಳಮಲೆಯೆ ಮೂಲ ಅಗಿದೆ. ಅರದ್ದರು ಹಾಕಿ ಜಪಂಧ ಕಲ್ಲಿನಲ್ಲಿ ಉದ್ಯ ಉದಿಪನ ಆದ ಈ ಮೂರು ದೈವಗಳು ಇವು ಎಂದು ಸಂಧಿ ಉಲ್ಲೇಖ . ಅ ಮೂರು ದೈವಗಳಲ್ಲಿ "ಅರದ್ದೆರೆ ಪಂಜುರ್ಲಿ"ಯು ಒಂದು. ಒಬ್ಬರು ದೇವರು ವಿಷ್ಣುಮೂರ್ತಿ,ಚಿತ್ತರಿಗೆ ಬೂಡಿನ ಒಬ್ಬರು ಉಲ್ಲಾಲ್ತಿ, ಅರಸು,ಪ್ರಧಾನಿ,ಬಂಟ ಎಂಬ ಮೂವರು ದೈವಂಕ್ಲು.(ಗುಡ್ಡ ಚಾಮುಂಡಿ,ಮುಗೇರ ಪಂಜುರ್ಲಿ,ಮಲೆಕೊರತಿ) ಮೂರುಗ್ರಾಮ,ನಾಲ್ಕು ಮನೆ,ಐವರು ಸತ್ಯಗಳು.ಪೆರಾಜೆ,ಮಾಣಿ,ಅರೆಬೆಟ್ಟು ಎಂಬ ಮೂರು ಗ್ರಾಮಗಳನ್ನು ತನ್ನ ನಿಲೆಗಾಗಿ ಇಟ್ಟುಕೊಂಡ ದೈವಗಳು.ಅದರಲ್ಲಿ ಅರಸು ಗುಡ್ಡ ಚಾಮುಂಡಿ,ಪ್ರಧಾನಿ,ಬಂಟೆದಿ ಎಂಬ ಮೂವರು ದೈವಗಳು.ಅದರಲ್ಲಿ ಪ್ರಧಾನಿ ದೈವ ಮುಗೇರ ಪಂಜುರ್ಲಿ ತುಲುನಾಡಿನಲ್ಲಿ ಅರಾಧನೆ ಗೊಳ್ಳುವ ಪಂಜುರ್ಲಿಯ(ಪ್ರಾಣಿ ಸ್ವರೂಪದ ದೈವ ಅಲ್ಲ) ಒಂದು ಸ್ವರೂಪ. ಅರ್ಥಾತ್ ಸುಳ್ಳಮಲೆತ್ತ ಪಂಜುರ್ಲಿ ಎಂದು ಈ ದೈವವನ್ನು ಕರೆಯುತ್ತಾರೆ.ಇಲ್ಲಿ "ಅರದ್ದೆರ್" ಯಾರು ಎಂಬುದು ಎಲ್ಲಾರಿಗೂ ಜಿಜ್ಞಾಸೆ ಹುಟ್ಟುವುದು ಸಹಜ.ಕೆಲವರ ಪ್ರಕಾರ ಅವರು ಜೈನರು ಆಗಿದ್ದಿರಬಹುದು,ಇಲ್ಲವೇ ಪಾರ್ಷಿಗಳು ಆಗಿದ್ದಿರಬಹುದು ಎಂಬ ಉತ್ತರ ಬರುತ್ತವೆ. ಆದರೆ ಅವರು ಯಾರೆಂಬುವುದು ಇಲ್ಲಿಯವರೆಗೆ ಸರಿಯಾದ ಉತ್ತರ ಮಾತ್ರ ಶೂನ್ಯ. ಸುಳ್ಳಮಲೆ ಬಲ್ಲಮಲೆ ಎಂಬುವುದು ಇತಿಹಾಸ ಪ್ರಸಿದ್ಧವಾದ ಐತಿಹಾಸಿಕ ಊರುಗಳು.ಈ ಹೆಸರುಗಳನ್ನು ಅನಾದಿಕಾಲದಿಂದಲೂ ಕೋಟಿ ಚೆನ್ನಯ್ಯರ ಬೀರದಲ್ಲಿ,ಬಲಿಯೆಂದ್ರ ಲೆಪ್ಪುಗಳಲ್ಲಿ"ಸುಳ್ಳಮಲೆ,ಬಲ್ಲಮಲೆ ಒಂಜನಾಗ" ಎಂದು ನಾವು ಕೇಳುತ್ತ ಬಂದಿದ್ದೆವೆ. ಆದರೆ ಹೆಚ್ಚಿನವರು ಈಗಲೂ ತಿಳಿದಿರುವುದು ಅದೆರಡು ಭಯಂಕರ ಕಾಡುಗಳು ಮತ್ತು ಗುಡ್ಡೆಗಳು ಎಂದು.ಅದು ಒಂದಾಗಲೂ ಸಾದ್ಯವಿಲ್ಲ ಎಂದು. ಆದರೆ ವಾಸ್ತವವಾಗಿ ಇನ್ನೊಂದು ವಿಚಾರವೇ ಬೇರೆ ಇದೆ.ಎರಡು ವಂಶಗಳು ಆಳ್ವಿಕೆ, ಬಾಳ್ವಿಕೆ ಮಾಡಿದ ಪಟ್ಟಗಳು ಇವು ಎರಡು.ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವೆಂದರೆ ಇಲ್ಲಿ ಅರಮನೆ,ಬೂಡುಗಳ ಕಾನ್ಸೆಪ್ಟ್ ಇಲ್ಲಿ ಇಲ್ಲ.ಹಾಗೂ ಎರಡು ವಂಶಗಳಿಗೆ ಯಾವುದೇ ವಿಚಾರದಲ್ಲೂ ಕೂಡಿ ಬರುತ್ತಿರಲಿಲ್ಲ ಅನ್ನೊದು ಮಾತ್ರ ಸತ್ಯ. ಅದಕ್ಕಾಗಿ ಪ್ರಕೃತಿ ನಿಯಮದಲ್ಲಿ ಈ ಎರಡು ಗುಡ್ಡೆಗಳು ಮತ್ತು ಕಾಡುಗಳದ ಸುಳ್ಳಮಲೆ ಬಲ್ಲಮಲೆ ಯಾವತ್ತಿಗೂ ಒಂದಾಗಲೂ ಸಾದ್ಯವಿಲ್ಲ,ಹಾಗೂ ಎರಡು ವಂಶಗಳ ಭಿನ್ನಾಭಿಪ್ರಾಯದ ವಿಚಾರದಲ್ಲೂ ಒಂದಾಗಿ ಬೆಸೆಯಲು ಸಾದ್ಯವಿಲ್ಲ ಎಂಬ ಅರ್ಥ. (ಮಾಹಿತಿ:-ಶಾಶಂಕ್ ನೆಲ್ಲಿತ್ತಾಯ) ಮುಗೇರ ಸಾವಿರ ಸೀಮೆಯಲ್ಲಿ (ಮೊಗರ್ನಾಡು)ಅರಸು ದೈವ ಗುಡ್ಡ ಚಾಮುಂಡಿಗೆ ಪ್ರಧಾನಿಯಾಗಿ ಆರಾಧನೆಗೊಂಡ ಪಂಜುರ್ಲಿ ಮೊಗರ್ನಾಡಿನಿಂದ ಕಡೆಶೀವಾಲಯಕ್ಕೆ ಪ್ರಸರಣೆಗೊಂಡು ಅಲ್ಲಿ ದೇವರ ಉಚ್ಚಯ ಅಗುವಾಗ ದೇವರ ಬಲಿಗೆ ಅಡ್ಡ ನಿಲ್ಲುತ್ತದೆ,ಊರಿನ ಪ್ರಮುಖರು ಪ್ರಶ್ನಾ ಚಿಂತನೆ ಇಟ್ಟಾಗ ದೈವ ಪ್ರಶ್ನಾ ಚಿಂತನೆಗೆ ಸಿಗುವುದಿಲ್ಲ,ಅನಂತರ ನೀಲೇಶ್ವರ ತಂತ್ರಿಯ ಅಷ್ಟಮಂಗಲ ಪ್ರಶ್ನೆಯಲ್ಲಿ ಮೊಗರ ಸಾವಿರ ಸೀಮೆಯ ದೈವ ಪಂಜುರ್ಲಿ ದೈವ ಬಂದಿರುವ ವಿಚಾರ ತಿಳಿಯುತ್ತೆ.ಅಲ್ಲಿ ದೇವರ ಬಲಭಾಗದಲ್ಲಿ ಅರಾಧನೆ ಬೇಕು ಅಂದಾಗ,ದೇವರ ಒಪ್ಪಿಗೆ ಮೇರೆಗೆ ನದಿಯ ಅಕಡೆ ಬದುವಿನ ಕೂಟೆಲು ಎಂಬಲ್ಲಿ ಎಂಟು ಗುತ್ತು,ನಾಲ್ಕು ಬರ್ಕೆ,ನಾಲ್ಕು ಮನೆ ಸೇರಿ ಐದು ದಿನದ ನೇಮ ನೆರಿ ತಂಬಿಲ ಅಗುವ ಮುಖಾಂತರ ಅಲ್ಲಿ ನೆಲೆಯಾಗುತ್ತದೆ.ಅಲ್ಲಿಂದ ಮತ್ತೆ ಬೇರೆ ಬೇರೆ ಕಡೆಗೆ ದೈವ ಪ್ರಸರಣೆ ಆಗಿ, ತಿಂಗಳಾಡಿ ಗುತ್ತು ಅಲ್ಲಿಂದ ಬಡಗ ಕಜೆಕಾರಿನ ಅಂಬುಡೆಲು ಗುತ್ತಿಗೆ ದಂಡು ದೇವು ಬೈದ್ಯನ ಕಾಲದಲ್ಲಿ ಬಂದು ಕಪಿಲೆ ದನವನ್ನು ಮಾಯ ಮಾಡಿ ಕಾರ್ನಿಕ ಮೆರೆದು "ಪಟ್ಟದ ಪಂಜುರ್ಲಿ" ಎಂಬ ಹೆಸರಿನೊಂದಿಗೆ ಬಿರುಧವಳಿಗಳೊಂದಿಗೆ ನೇಮ ನೆರಿ ಪಡೆದು ನೆಲೆಯಾಗುತ್ತದೆ.ಹೀಗೆ ಹಲವಾರು ಕಡೆ ಪ್ರಸರಣೆ ಆದ ಪಂಜುರ್ಲಿ ದೈವ ನಮ್ಮ ಮೂಡಾಣ ಕಡೆ ನಮ್ಮ ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ "ಬಂಡಾಡಿ ಅಜಿ ಮಾಗಣೆ" ಎಂಬ ಅನಾದಿಯ ಹೆಸರಿನ ಹಿರೇ ಬಂಡಾಡಿ ಗ್ರಾಮದ ಉದ್ದಮಜಲು ಸ್ಥಳಕ್ಕೆ ಬಂದು, ಬೊಂಟ್ರಪಾಲು ಧರ್ಮಚಾವಡಿಗೆ ಚಾವಡಿಗೆ ದೈವ ಬರುತ್ತದೆ. ಇದನ್ನು ಹಿಂದೆ ದೈವ ಕಟ್ಟುತ್ತಿದ್ದ ಅಡೆಕ್ಕಲ್ಲಿನ ದಿವಂಗತ ಕಾಂತು ನಲಿಕೆಯವರು ಸಂದಿ ಪಾರ್ದನದಲ್ಲಿ ಹೇಳುತ್ತಿದ್ದರಂತೆ. ಸುಳ್ಳಮಲೆ ಪಟ್ಟದಲ್ಲಿ ಸೂರ್ಯ ಬಾರಿ ಅರದ್ದರು,ಬಲ್ಲಮಲೆ ಮಲೆ ಪಟ್ಟದಲ್ಲಿ ಬೈರಸಿಂಗತ್ತ ಬಲ್ಲಾಳರ ಕಾಲದಲ್ಲಿ ಪಂಜುರ್ಲಿಯೂ ಬೊಂಟ್ರಪಾಲು ಧರ್ಮಚಾವಡಿಗೆ ನುಗ್ಗಿ,ಉದ್ದಮಜಲು ಗ್ರಾಮದೈವ ಶಿರಾಡಿ ದೈವಯೊಂದಿಗೆ ಅರಾಧನೆ ಪಡೆದ ದೈವ. ಇಲ್ಲಿ ಇನ್ನೊಂದು ವಿಶೇಷವೆಂದರೆ ಬೊಂಟ್ರಪಾಲಿನ ಧರ್ಮ ಚಾವಡಿಗಿಂತಲೂ ಅಲ್ಲಿರುವ ವೊರ್ಕರ ದಂಡು(ನೀರಿನ ವೊಸರಿನ ದಂಡು ಬರುವ) ಇರುವ ಪಾದೆಕಲ್ಲಿನಲ್ಲಿ ಆರಾಧನೆ ಪಡೆದದ್ದು ವಿಶೇಷ .ಈ ದೈವಕ್ಕೆ ಇಲ್ಲಿ ಯಾವುದೇ ಆಯುಧ ಮೂರ್ತಿ ಇಲ್ಲ.ಖಾಲಿ ಪಾದೆಯ ಮೇಲೆ ಆರಾಧನೆ ಮಾತ್ರ. ಉದ್ದಮಜಲಿನಲ್ಲಿ ಶಿರಾಡಿ ದೈವದ ಸೆರಿಗೆಯ ದೈವ ಅದುದರಿಂದ ವಿಜ್ರಂಭಣೆಯ ನೇಮ ಅಗುವಾಗಲೂ ಕೂಡ ಶಿರಾಡಿ ದೈವದ ಕಡ್ಸಲೆ ಮಣಿಯನ್ನು ಈ ದೈವ ಹಿಡಿಯುವುದು. ಹಾಳೆಯ ಮೊಗ ಮುಖಕ್ಕೆ ಕಟ್ಟುವುದು. "ಸುಳ್ಳಮಲೆರ್ದ್ ಬತ್ತುದು ಬೊಂಟ್ರಪಾಲುದ ಧರ್ಮಚಾವಡಿಗ್ ಪೊಗ್ಗುದು,ವೊರ್ಕರ ಗುಂಡಿದ ಪಾದೆ ಪತ್ತುದ್ ಕುಲ್ಲಿನ ಮುಗೇರ ಸಾರ ಸೀಮೆದ ದೈವ ಯಾನ್ "ಮುಗೇರ ಪಂಜುರ್ಲಿ" ಅಂತ ನುಡಿಯಲ್ಲಿ ಹೇಳುತ್ತದೆ. ಮತ್ತೊಂದು ವಿಚಾರ ಅಂದ್ರೆ ಬೆನ್ನೆತ್ತಿಮಾರು ಎಂಬ ಗದ್ದೆ ಇದೆ.ದೈವ ಅಕಾಲದಲ್ಲಿ ನಡೆದುಕೊಂಡು ಬಂದಾಗ ಬೆನ್ನೆಂತಿಮಾರು ಗದ್ದೆಯಲ್ಲಿ ಕಾಲಿಗೆ ಕಾವೇರ ಸಂಕ್ರಮಣಕ್ಕೆ ಕಂಡಕ್ಕೆ ಇಟ್ಟ ಕಾಪು ಕಾಯರಿನ(ಕಾಸರ್ಕ ಮರ)ನಂಜು ಮುಳ್ಳು ಚುಚ್ಚುತ್ತದೆ. ಅಲ್ಲಿಂದ ಕುಂಟುತ್ತ ಬಂದು ಉದ್ದಮಜಲಿನ ಗದ್ದೆಯಲ್ಲಿ ನಡೆದುಕೊಂಡು ಬಂದಾಗ ಕಾಲಿನ ಗಾಯ ಉಲ್ಬಣಿಸಿ ಅದರಲ್ಲಿ ಹುಳ ಅಗುತ್ತೆ.ಅದನ್ನು ಇನ್ನೊಂದು ಗದ್ದೆಯಲ್ಲಿ ಕಾಲನ್ನು ಒದಡಿ ಹುಳವನ್ನು ಹಾಕುತ್ತದೆ. ಅ ಹೊತ್ತಲ್ಲಿ ಅಳುತ್ತ ಬೊಬ್ಬೆಯೊಡೆಯುತ್ತ ದೈವ ಕುಂಟುತ್ತ ಬಂದು ಬೊಂಟ್ರಪಾಲು ಮುದರನಲ್ಲಿ ಮದ್ದು ಕೇಳುತ್ತದೆ. ಇದರ ಪ್ರತೀತಿಯನ್ನು ಈಗಲೂ ನೇಮದಲ್ಲಿ ಕಾಲಿಗೆ ಹೊದಳು(ಅರಳು) ಕಟ್ಟಿ, ಮುಖಕ್ಕೆ ಹಾಳೆಯ ಮೊಗ ಇಟ್ಟು,ಕಾಲು ಕುಂಟುತ್ತ ಅ ಕಡೆ ಈ ಕಡೆ ಹೋಗಿ " ವೊ ಮುದರ ಮರ್ದ್ ಕೊಂಡ" ಎಂದು ಬೊಬ್ಬೆ ಇಡುತ್ತದೆ ದೈವ.ಅವಾಗ ಬೊಂಟ್ರಪಾಲು ಮನೆಯವರು ಅಲ್ಲಿ ಒಂದು ಮಡಲಿನ ತೂಟೆ,ಒಂದು ಕುಪ್ಪಿ ಕಲಿ ಹಿಡಿದು ನಿಂತಿರಬೇಕು. ಈ ರೀತಿ ಸಾಗುತ್ತೆ ಈ ದೈವದ ಕಥೆ.(ಮಾಹಿತಿ:-ವಿನೋದ್ ಬೊಂಟ್ರಪಾಲು) ಉದ್ದಮಜಲು ಗದ್ದೆಗೆ ಈಗಲೂ ಜನರು ಗಾಯವಾದ ಕಾಲಿಗೆ ಬಟ್ಟೆ ಕಟ್ಟಿ ಇಳಿಯಬಾರದು.ಇಳಿದರೆ ಗಾಯ ಉಲ್ಬಣಿಸುತ್ತ ಹೋಗುತ್ತದೆ. ಹಾಗೆಯೇ ವೊರ್ಕರಗುಂಡಿ ಪಾದೆಕಲ್ಲಿನ ಮೇಲೆ ಇರುವ ದೈವಕ್ಕೆ ಹಿಂದೆ ಊರಿನವರು ದನ,ಎತ್ತು,ಜಾನುವಾರುಗಳಿಗೆ ಕಾಲಿನಲ್ಲಿ (ಅವಡ್) ಗಾಯ ಅಗಿ ಉಲ್ಬಣಿಸಿ ಹುಳ ಅದ್ರೆ ಇಲ್ಲಿಯ ವೊರ್ಕರ ಗುಂಡಿಯ ಪಂಜುರ್ಲಿಗೆ ತಂಬಿಲದ ಹರಕೆ ಹೊರುತ್ತಿದ್ದರಂತೆ.ಆದ್ರೆ ತಂಬಿಲದಲ್ಲಿ ಈ ದೈವಕ್ಕೆ ಕೋಳಿ ಬಲಿ ಇಲ್ಲದಿರುವುದು ಒಂದು ವಿಶೇಷ.ಏನೆ ಆಗಲಿ ತುಲುನಾಡಿನ ದೈವರಾಧನೆ ಬಲು ವಿಶಿಷ್ಟ ಅನ್ನೊದು ಮಾತ್ರ ಸತ್ಯ. ಲೇಖನ : ಚಂದು
ಕಾಪು : SSLC ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ TAB ನೀಡಲು ಹಳೆವಿದ್ಯಾರ್ಥಿಗಳಿಗೆ ಮನವಿ
Posted On: 08 Dec 2020, 11:01 PM
ಪಬ್ಲಿಕ್ ಟೀವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ SSLC ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ , ಪಠ್ಯ ವಿಷಯಗಳನ್ನು ಹಾಕಲಾದ ಪೂರಕ ಟ್ಯಾಬ್ಲೆಟ್ ಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು. ರೋಟರಿ ಕ್ಲಬ್ ಮೂಲಕ ಕಾಪು ತಾಲೂಕಿನಲ್ಲಿ ಮಹಾದೇವಿ ಪ್ರೌಢಶಾಲೆಯನ್ನು ಗುರುತಿಸಿ , 12 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನ ವ್ಯವಸ್ಥೆಯಾಗಿದೆ. ಉಳಿದಂತೆ ಇನ್ನು ಕೇವಲ 11 ಟ್ಯಾಬ್ ನ ವ್ಯವಸ್ಥೆಯಾಗಬೇಕಿದೆ. ಪೂರಕ ಟ್ಯಾಬ್ಲೆಟ್ ಗಳು ಉತ್ತಮವಾದ ಯೋಜಿತ ಪಠ್ಯವನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಅತೀ ಅವಶ್ಯಕ ಸಾಧನ ಹಾಗೂ 3,495₹ ರ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಹಾಗಾಗಿ ಮಹಾದೇವಿ ಪ್ರೌಢಶಾಲೆ ಕಾಪುವಿನ ಹಳೆವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಊರಿನ ಮಕ್ಕಳಿಗಾಗಿ ನೆರವನ್ನು ಕೋರಲು ಬಯಸುತ್ತಿದೆ. ದಾನಿಗಳು ಡಿಸೆಂಬರ್ 11 ರ ಒಳಗೆ ಶ್ರೀ ವಿದ್ಯಾಧರ ಪುರಾಣಿಕ್ ರವರನ್ನು ಸಂಪರ್ಕಿಸಬಹುದು : 9845821819
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ ದಾಮೋದರ ಕಲ್ಮಾಡಿ ಆಯ್ಕೆ
Posted On: 08 Dec 2020, 10:46 PM
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿ ಉಡುಪಿ ಇದರ 2020-2023ರ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ದಾಮೋದರ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಯು. ನಾರಾಯಣ ಉಪಾಧ್ಯಕ್ಷರಾಗಿ ಶೇಖರ್ ಮಾಸ್ಟರ್ ಕಲ್ಮಾಡಿ ಪ್ರಧಾನ ಕಾರ್ಯದರ್ಶಿಯಾಗಿ ಎಮ್. ಮಹೇಶ್ ಕುಮಾರ್, ಜತೆ ಕಾರ್ಯದರ್ಶಿ ಶೇಖರ್ ಪೂಜಾರಿ ಕಿದಿಯೂರ್, ಕೋಶಾಧಿಕಾರಿ ಮಹೇಶ್ ಎನ್. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತೇಜಪ್ಪ ಬಂಗೇರ, ಶಿವರಾಮ ಪೂಜಾರಿ, ಗೋಪಾಲ್ ಕಾರ್ಕಳ, ಆ. ಮಾಧವ, ಬಿ. ಸಂಜೀವ ಪೂಜಾರಿ, ಚೆಲುವ ರಾಜ್ ಪೆರಂಪಳ್ಳಿ, ಗಂಗಾಧರ್ ಕಿದಿಯೂರ್, ಜಯಕರ ವಿ. ಸುವರ್ಣ, ಸುಲೋಚನಾ ತಿಲಕ್ ಕಾರ್ಕಳ, ಬಿ.ಬಿ ಪೂಜಾರಿ, ಲಕ್ಷ್ಮೀಶ ಬಂಗೇರ, ನವೀನ್ ತೋನ್ಸೆ ಆಯ್ಕೆ ಆಗಿದ್ದಾರೆ.
ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ : ಫೊಟೋ ಸ್ಪರ್ಧೆ
Posted On: 08 Dec 2020, 04:32 PM
ಕಾಪು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕುರ್ಕಾಲು ಯುವಕ ಮಂಡಲದಿಂದ ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ ಫೋಟೋ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ₹ 1,000 ಎರಡನೇ ಬಹುಮಾನ ₹750 ಮತ್ತು 3 ಸಮಾಧಾನಕರ ಬಹುಮಾನ ₹500 ಇರಲಿದೆ. ಸ್ಪರ್ಧೆಯ ನಿಯಮಗಳು ಇಂತಿವೆ : ತಮ್ಮ ಫೋಟೋವನ್ನು ಕೆಳಗೆ ನಮೂದಿಸಿದ ಯಾವುದೇ ಮೊಬೈಲ್ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದು. ಸ್ಪರ್ಧಾಳುಗಳು ತಮ್ಮ ಪೂರ್ಣ ಹೆಸರು,ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಸ್ಪರ್ಧಿಯು ಕೇವಲ ಒಂದು ಫೋಟೋವನ್ನು ಮಾತ್ರ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ಭಾಗವಹಿಸುವ ವ್ಯಕ್ತಿಯು ಫೋಟೋದಲ್ಲಿ ಇರಬೇಕು. ಈ ಸ್ಪರ್ಧೆಯು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಮುಕ್ತ ಅವಕಾಶ. ಡಿಸೇಂಬರ್ 24 ರಿಂದ 26 ಸಂಜೆ 6 ಗಂಟೆಯ ಒಳಗೆ ಮಾತ್ರ ಫೋಟೋ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ವಿಶೇಷವಾಗಿ ಕ್ರಿಸ್ಮಸ್ ವೃಕ್ಷದ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಿಮ್ಮ ಫೋಟೋಗಳನ್ನು ಈ ಕೆಳಗಿನ ಯಾವುದೇ ವಾಟ್ಸಪ್ ನಂಬರಿಗೆ ಕಳುಹಿಸಬಹುದಾಗಿದೆ. ಎಂದು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ. ರಾಯನ್ ಫೇರ್ನಾಂಡಿಸ್ 7760718898 ಸಂತೋಷ್ ಶೆಟ್ಟಿ 9980970615 ಸುವಿತ್ ಶೆಟ್ಟಿ 8150025768 ಕಿರಣ್ ಪೂಜಾರಿ 9902424715 ಪ್ರಶಾಂತ್ ಪೂಜಾರಿ 9535866383 ಆಕಾಶ್ ಪೂಜಾರಿ 9538016764
ಕುತ್ಯಾರಿನ ಹದಗೆಟ್ಟ ರಸ್ತೆಯ ದುರಸ್ತಿ ಎಂದು ಸಾರ್ವಜನಿಕರ ಪ್ರಶ್ನೆ
Posted On: 08 Dec 2020, 03:06 PM
ಶಿರ್ವ (ಕುತ್ಯಾರು) : ಪೈಪ್ ಅಳವಡಿಕೆಗೆ ರಸ್ತೆಯನ್ನು ಅಗೆದು ಹೊಂಡವಾಗಿ ತಿಂಗಳು ಕಳೆದರೂ ಅದನ್ನು ಮುಚ್ಚದೆ ವಾಹನ ಸವಾರರಿಗೆ ತೊಂದರೆಯಾಗಿ ಸಣ್ಣ ಪುಟ್ಟ ಅಪಘಾತಗಳಾಗುತ್ತಿರುವ ಸನ್ನಿವೇಶ ಮುದರಂಗಡಿ- ಶಿರ್ವ ಮುಖ್ಯ ರಸ್ತೆಯ ಕುತ್ಯಾರು ಬ್ಯಾಂಕ್ ಆಫ್ ಬರೋಡದ ಬಳಿ ಕಾಣಬಹುದಾಗಿದೆ. ರಾತ್ರಿ ವೇಳೆ ಹೊಂಡ ಗೋಚರಿಸದೆ ತೊಂದರೆಯಾಗುತ್ತಿದೆ. ಇನ್ನೊಂದೆಡೆ ರಸ್ತೆಯ ಇಕ್ಕೆಲಗಳಲ್ಲಿ ಡಾಮರೀಕರಣಕ್ಕಾಗಿ ಜಲ್ಲಿಯನ್ನು ಹಾಕಲಾಗಿದ್ದು ಇತ್ತ ಡಾಮರೀಕರಣವೂ ಆಗದೆ ಪರಿಸರವು ಧೂಳುಮಯವಾಗಿದೆ ಸಂಬಂಧಪಟ್ಟವರು ಇದರ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕೆಂದು ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಕುಮಾರ್ ಕೇಂಜ ಆಗ್ರಹಿಸಿದ್ದಾರೆ.
ಭಾರತ್ ಬಂದ್ ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
Posted On: 08 Dec 2020, 01:36 PM
ಉಡುಪಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿದ್ದು, ಎಂದಿನಂತೆ ಅಟೋಗಳು ಸಂಚರಿಸುತ್ತಿದ್ದು, ಪೊಲೀಸರು ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ಬಸ್ ನಿಲ್ದಾಣ ಸಮೀಪದ ಹೋಟೆಲ್, ಅಂಗಡಿಗಳು ತೆರೆದಿವೆ.
ಉದ್ಯಾವರ : ಮಕ್ಕಳಿಗಾಗಿ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ
Posted On: 08 Dec 2020, 09:33 AM
ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಭಾಭವನದಲ್ಲಿ ಸುವರ್ಣ ಮಹೋತ್ಸವ ವರ್ಷದ 35ನೇ ಕಾರ್ಯಕ್ರಮ ಮಕ್ಕಳಿಗಾಗಿ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಟಪಾಡಿಯ ಬಾಲ ಜಾದೂಗಾರ ಮಾಸ್ಟರ್ ಪ್ರಥಮ್ ಕಾಮತ್ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಧರ್ಮಗುರುಗಳಾದ ರೊಲ್ವಿನ್ ಅರಾನ್ಹ, ಐಸಿವೈಎಂ ಸುವರ್ಣಮಹೋತ್ಸವದ ಅಧ್ಯಕ್ಷರಾದ ಮೈಕಲ್ ಡಿಸೋಜ ಸ್ಟೀವನ್ ಕುಲಸೋ, ಕಾರ್ಯಕ್ರಮದ ಪ್ರಾಯೋಜಕರು ಹಾಗು ಸಿವೈಎ ಮಾಜಿ ಅಧ್ಯಕ್ಷರಾದ ಮೈಕಲ್ ಮಜಾದೋ ಮತ್ತು ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು.
