Updated News From Kaup

ಐಸಿವೈಎಂ ಉದ್ಯಾವರ : ನೂತನ ಅಧ್ಯಕ್ಷರಾಗಿ ಪ್ರಿಲ್ಸನ್ ಮಾರ್ಟಿಸ್ ಆಯ್ಕೆ

Thumbnail
Posted On: 14 Jan 2025, 01:23 PM

ಉದ್ಯಾವರ : ಉದ್ಯಾವರ ಗ್ರಾಮದ ಅತ್ಯಂತ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಘಟಕದ 55ನೇ ವರ್ಷದ ಅಧ್ಯಕ್ಷರಾಗಿ ಪ್ರಿಲ್ಸನ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ. ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳೂ, ಸಂಸ್ಥೆಯ ನಿರ್ದೇಶಕರು ಆಗಿರುವ ವo. ಫಾ. ಅನಿಲ್ ಡಿಸೋಜಾ ರವರ ಉಪಸ್ಥಿತಿಯಲ್ಲಿ 2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರತಿಕ್ರಿಯೆಯು ನಡೆಯಿತು. ಕಾರ್ಯದರ್ಶಿಯಾಗಿ ಸ್ಟೆನಲ್ ಡಿಸಿಲ್ವಾ, ಉಪಾಧ್ಯಕ್ಷರಾಗಿ ರೋಲ್ವಿನ್ ಅಲ್ಮೆಡ, ಸಹ ಕಾರ್ಯದರ್ಶಿ ಸ್ಮಿತಾ ಒಲಿವೇರಾ, ಕೋಶಾಧಿಕಾರಿ ಗ್ಲ್ಯಾನಿಶ್ ಪಿಂಟೊ, ಪಿ ಆರ್ ಓ ಫರ್ಡಿನಂಡ್ ಡಿಸೋಜಾ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮರ್ವಿನ್ ಅಲ್ಮೆಡ, ಪ್ರಾರ್ಥನಾ ಕಾರ್ಯದರ್ಶಿಯಾಗಿ ಶರನ್ ಕ್ರಾಸ್ಟೊ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ 2024 ಸಾಲಿನ ಅಧ್ಯಕ್ಷ ಗ್ಲ್ಯಾನಿಶ್ ಪಿಂಟೊ, ಕಾರ್ಯದರ್ಶಿ ಸಾಷಾ ಮೊoತೆರೊ, ಸಲಹೆಗಾರರಾದ ಜೂಲಿಯಾ ಡಿಸೋಜ ಉಪಸ್ಥಿತರಿದ್ದರು.

ಕೆ.ಕೆ ಫ್ರೆಂಡ್ಸ್ ಶಿರ್ವ ಇದರ ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ ಮೂಡುಮಟ್ಟಾರು ಆಯ್ಕೆ

Thumbnail
Posted On: 14 Jan 2025, 08:11 AM

ಶಿರ್ವ : ಕೆ.ಕೆ ಫ್ರೆಂಡ್ಸ್ ಶಿರ್ವ ಇದರ 2025 - 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ ಮೂಡುಮಟ್ಟಾರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಜೀವನ್ ಕೋಟ್ಯಾನ್ ಮತ್ತು ಶಿವಾನಂದ ಪೂಜಾರಿ, ಕಾರ್ಯದರ್ಶಿಯಾಗಿ ರಾಕೇಶ್ ಆಚಾರ್ಯ, ಸಹ ಕಾರ್ಯದರ್ಶಿಯಾಗಿ ಹರ್ಷಿತ್ ಪೂಜಾರಿ ಕಲ್ಲಟ್ಟ, ಕೋಶಾಧಿಕಾರಿಯಾಗಿ ಅಶ್ವಿನ್ ಜೋಯ್ ಡಿಸೋಜಾ, ಕ್ರೀಡಾ ಕಾರ್ಯದರ್ಶಿಯಾಗಿ ಸುಕೇಶ್ ಆಚಾರ್ಯ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಸುನಿಲ್, ಸಾಮಾಜಿಕ ಕಾರ್ಯದರ್ಶಿಯಾಗಿ ಮುಕೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ. ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಶ್ರೀ ವಿಶ್ವೇಶ್ವರ ದೇವಸ್ಥಾನದ ಉಪ ಸಾನಿಧ್ಯವಾದ ವೀರಾಂಜನೇಯ ಗುಡಿಯ ಸಮೀಪದ 2 ಕೋಟಿ ಅನುದಾನದ ಕೆರೆ ಉದ್ಘಾಟನೆ

Thumbnail
Posted On: 13 Jan 2025, 07:02 PM

ಕಾಪು : ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವಿಶ್ವೇಶ್ವರ ದೇವಸ್ಥಾನದ ಉಪ ಸಾನಿಧ್ಯವಾದ ವೀರಾಂಜನೇಯ ಗುಡಿಯ ಸಮೀಪದ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಸೋಮವಾರ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿರಾಜ್ ರಾವ್, ಉಪಾಧ್ಯಕ್ಷರಾದ ಉಷಾ, ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಪ್ರಪುಲ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ಸತೀಶ್ ಗುಡ್ಡೆಚ್ಚಿ ಹಾಗೂ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ

Thumbnail
Posted On: 13 Jan 2025, 06:56 PM

ಉಡುಪಿ : ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮ ಪ್ರಯುಕ್ತ ಉಪ್ಪೂರು ಸರಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ "ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ" ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ. ಜೀವನ ಎನ್ನುವ ಪರೀಕ್ಷೆ ಅದಕ್ಕಿಂತ ದೊಡ್ಡದು. ಪರೀಕ್ಷೆ ಎನ್ನುವುದು ಒಂದು ಹಬ್ಬ. ಧೈರ್ಯದಿಂದ ಎದುರಿಸಿ ಜೀವನದ ಗುರಿ ಸಾಧಿಸಿ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಉಪ್ಪೂರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಧ್ಯಾ ಸರಸ್ವತಿ ಭಟ್ ಶುಭ ಹಾರೈಸಿದರು. ವೇದಿಕೆಯ ಸದಸ್ಯರಾದ ರವಿಂದ್ರ ಕುಮಾರ್ , ಶಕುಂತಲಾ, ಕೇಶವ್, ವಿದ್ಯಾರ್ಥಿಗಳ ಪೋಷಕರು, ಶಾಲಾ ಅಧ್ಯಾಪಕರುಗಳು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶ್ವ ಬ್ರಾಹ್ಮಣ ಯುವ ಸಂಗಮ ಶಿರ್ವ ಇದರ ನೂತನ ಅಧ್ಯಕ್ಷರಾಗಿ ಉಮೇಶ ಆಚಾರ್ಯ ಆಯ್ಕೆ

Thumbnail
Posted On: 13 Jan 2025, 06:47 PM

ಶಿರ್ವ : ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಇದರ 2025-26ನೇ ನೂತನ ಅಧ್ಯಕ್ಷರಾಗಿ ಉಮೇಶ ಆಚಾರ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುರೇಶ ಆಚಾರ್ಯ, ಉಪಾಧ್ಯಕ್ಷರಾಗಿ ಪ್ರಸನ್ನ ಆಚಾರ್ಯ, ಸಂಜೀವ ಆಚಾರ್ಯ, ಸೀತಾರಾಮ ಆಚಾರ್ಯ, ಕಾರ್ಯದರ್ಶಿಯಾಗಿ ಮಾಧವಾಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಸದಾಶಿವ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರಶಾಂತ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶಾಚಾರ್ಯ, ಪ್ರಕಾಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಶಿರಾಜ್ ಆಚಾರ್ಯ, ವಿಠಲಾಚಾರ್ಯ, ಪ್ರವಾಸ ಜಗದೀಶ್ ಆಚಾರ್ಯ, ಕಾರ್ಯಕಾರಿ ಸಮಿತಿಗೆ ಚಂದ್ರಶೇಖರ್ ಆಚಾರ್ಯ, ರಾಮಣ್ಣ ಆಚಾರ್ಯ ಆಯ್ಕೆಯಾಗಿದ್ದಾರೆ.

ಪಡುಬಿದ್ರಿಯ ವಿಶ್ವ ಕಲ್ಲಟ್ಟೆಯವರಿಂದ ಮೋದಿಯ ಶ್ರೇಯೋಭಿವೃದ್ಧಿಗಾಗಿ ಶಬರಿಮಲೆಗೆ ಪಾದಯಾತ್ರೆ

Thumbnail
Posted On: 12 Jan 2025, 12:12 PM

ಪಡುಬಿದ್ರಿ : ಪಡುಬಿದ್ರಿಯ ಕಲ್ಲಟ್ಟೆಯ ವಿಶ್ವ ಎಂಬುವವರು ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿ ಅವರು 3ನೇ ಬಾರಿ ಪ್ರಧಾನಿಯಾಗಬೇಕೆಂದು ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದರು. ಅದರಂತೆ ಪಡುಬಿದ್ರಿಯಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಪಡುಬಿದ್ರಿಯ ಭಗವತಿ ಗ್ರೂಪಿನ ಸದಸ್ಯರಾಗಿರುವ ವಿಶ್ವ ಕಲ್ಲಟ್ಟೆ ಅವರು ಚುನಾವಣೆಗೆ ಮುಂಚೆಯೇ ಈ ಹರಕೆಯ ಸಂಕಲ್ಪವನ್ನು ಮಾಡಿದ್ದರು. ಇದೀಗ 18ನೇ ವರ್ಷದ ಶಬರಿಮಲೆ ಯಾತ್ರೆ ಮಾಡುತ್ತಿರುವ ವಿಶ್ವ ಕಲ್ಲಟ್ಟೆ ಇವರು ಸತತ 8 ವರ್ಷಗಳಿಂದ ಪಡುಬಿದ್ರಿಯಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಮಾಡುತ್ತಿದ್ದು, ಇದೀಗ 9ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

ಇನ್ನಂಜೆ ಯುವಕ ಮಂಡಲದಿಂದ ರಾಷ್ಟ್ರೀಯ ಯುವ ದಿನಾಚರಣೆ

Thumbnail
Posted On: 12 Jan 2025, 11:55 AM

ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ವತಿಯಿಂದ ಭಾನುವಾರ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಸಂಸ್ಥೆಯ ನೂತನ ಸಭಾಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಗೌರಾವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭ ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ತುಳು ನಾಟಕ ಪ್ರದರ್ಶನ

Thumbnail
Posted On: 12 Jan 2025, 09:42 AM

ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಇವರ ವತಿಯಿಂದ ಜ.12, ಆದಿತ್ಯವಾರ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಅರವಿಂದ ಬೋಳಾರ್ ನಟನೆಯ ಒರಿಯಾಂಡಲ ಸರಿ ಬೋಡು ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇವರ ಆಶ್ರಯದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ, ಲಯನ್ ಡಿ ಕಿಶೋರ್ ಶೆಟ್ಟಿ ನಿರ್ದೇಶನದ , ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ನಟಿಸಿರುವ ಈ ವರ್ಷದ ಸೂಪರ್ ಹಿಟ್ ತುಳು ನಾಟಕ ಒರಿಯಾಂಡಲ ಸರಿ ಬೋಡು ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6:15 ರಿಂದ ಪ್ರಾರಂಭ ಗೊಳ್ಳುವ ಈ ನಾಟಕಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಮತ್ತು ಎಂದಿಗೂ ಕಲಾವಿದರನ್ನು ಪ್ರೋತ್ಸಾಹಿಸುವ ಉಡುಪಿ ಪರಿಸರದ ಜನತೆ ಈ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವೀ ಮಾಡಿಕೊಡಬೇಕೆಂದು ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇದರ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಸಂತೆಕಟ್ಟೆ, ಪದಾಧಿಕಾರಿಗಳಾದ ವಿಕೇಶ್ ಸುವರ್ಣ ಹೆಜಮಾಡಿ, ಮಹೇಶ್ ಪೂಜಾರಿ ಬೈಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.12 ರಾಷ್ಟ್ರೀಯ ಯುವ ದಿನ : ಯುವ ಜನಾಂಗಕ್ಕೆ ಸ್ಫೂತಿ೯ ತಂದ ದಿನ

Thumbnail
Posted On: 12 Jan 2025, 07:36 AM

ಯುವಜನತೆಯಲ್ಲಿ ಕೆಚ್ಚು ತುಂಬಿದ ಧೀಮಂತ ಸ್ವಾಮಿ ವಿವೇಕಾನಂದ ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿಂದು. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ ಅವರ ಸಂದೇಶವನ್ನು ಜಾರಿ ತಂದರೆ ಖಂಡಿತವಾಗಿಯೂ ದೇಶ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ. ಯುವಕರ ಅಗಾಧ ಶಕ್ತಿ, ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಅವರ ಸಹಜ ಪ್ರಜ್ಞೆಯನ್ನು ಗುರುತಿಸಿ, ಗೌರವಿಸಿ, ಗುರುತರ ಗುರಿಯತ್ತ ಕೊಂಡೊಯ್ಯುವ ಪ್ರಕ್ರಿಯೆಗೆ ಪ್ರಭೆ ತಂದ ವಿಶಿಷ್ಟ ದಿನವಾದ ಇಂದು ನಾವೆಲ್ಲರೂ ಹೊಸ ಪ್ರತಿಜ್ನೆ ಮಾಡಿ ನಮ್ಮ ಬದುಕು ರಾಷ್ಟ್ರಕ್ಕಾಗಿ ಸಮಪಿ೯ತವಾಗಬೇಕು. ಸ್ವಾಮಿ ವಿವೇಕಾನಂದರು 1863ರ ಜ.12ರಂದು ಕೋಲ್ಕತಾದಲ್ಲಿ ಜನಿಸಿದರು. ಮೂಲ ಹೆಸರು ನರೇಂದ್ರನಾಥ ದತ್ತ. ಅವರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ. ವಿಶ್ವನಾಥ ದತ್ತರು ಯಶಸ್ವಿ ವಕೀಲ, ಸಮಾಜದಲ್ಲಿ ಅತ್ಯಂತ ಪ್ರಭಾವಿ. ಅವರ ತಾಯಿ ಸಜ್ಜನ ದೈವಭಕ್ತೆ. ಇಂಥ ಪರಿಸರದಲ್ಲಿ ಬೆಳೆದ ನರೇಂದ್ರನಿಗೆ ಸಹಜವಾಗಿ ವೈಚಾರಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಮೂಡಿ, ಸಮಾಜದ ಅಂಧತೆಯನ್ನು ನಿವಾರಿಸಿ, ವಿವೇಕಾನಂದವನ್ನು ಸೃಷ್ಟಿಸುವ ಮಹಾಹಂಬಲ ಸ್ಫುರಿಸಿದ್ದು ಭಾರತದ ಭಾಗ್ಯ. ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ : ಯುವಕರೆಂದರೆ ವಿವೇಕಾನಂದರಿಗೆ ಪಂಚಪ್ರಾಣ. ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು. ಯುವಕರಲ್ಲಿ ಹುರುಪು- ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದರು. ಯುವಕರನ್ನು ಉದ್ದೇಶಿಸಿ ಅವರು ಹೇಳಿದ 'ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ಸಂದೇಶವನ್ನು ಕೇಳದ ಭಾರತೀಯರೇ ಇಲ್ಲ. ಇದನ್ನು ನಾವು ನಿರಂತರ ನೆನೆದು ಇತರರ ಜೊತೆಗೆ ಹಂಚಿಕೊಂಡಿದ್ದೇವೆ. ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಸಮುದಾಯ ತಮಗೆ ಎದುರಾದ ಸಂಕಷ್ಟಗಳಿಗೆ, ಎಡರು-ತೊಡರುಗಳಿಗೆ ಬೆದರದೆ 'ಧೈರ್ಯಂ ಸರ್ವತ್ರ ಸಾಧನಂ' ಎಂದರಿತು ಗುರಿ ತಲುಪಬೇಕು. ಅಸಹಾಯಕರಾಗಿ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈಹಾಕಬಾರದು. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಜನಾಂಗವನ್ನು ಹೊಂದಿರುವ ದೇಶ, ಮುಂದಿನ ಶತಮಾನ ಅದು ಭಾರತದ್ದೆ ಏಕೆಂದರೆ ಉಳಿದ ರಾಷ್ಟ್ರಗಳಲ್ಲಿ ಯುವಕರ ಸಂಖ್ಯೆ, ಅತ್ಯಂತ ಕಡಿಮೆ ಇದೆ. ಜೀವನಕ್ಕೆ ಸ್ಪಷ್ಟ ಗುರಿಯಿರಲಿ : ಸ್ವಾಮಿ ವಿವೇಕಾನಂದರು ತಮ್ಮ ಯೌವನವನ್ನು ಸಾತ್ವಿಕ ಮಾರ್ಗದಲ್ಲಿ ಸಾಗಿಸಿದರು. ಪ್ರತಿ ಸಮಸ್ಯೆಯನ್ನು ಕೂಲಂಕಷವಾಗಿ ಪರಾಂಬರಿಸುತ್ತ, ಪ್ರಶ್ನಿಸುತ್ತ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಂಡರು. ತಾರುಣ್ಯದಲ್ಲಿಯೇ ಅತ್ಯಂತ ಆಳವಾದ ಅಧ್ಯಯನ ಮಾಡಿ ಧರ್ಮ, ಶಾಸ್ತ್ರ, ತತ್ವಜ್ಞಾನ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಕುರಿತು ಧ್ಯಾನಿಸಿದರು. ಅವುಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಲು ಕಾರ್ಯತತ್ಪರರಾದರು. ಅನೇಕ ವರ್ಷಗಳವರೆಗೆ ದೇಶ ಪರ್ಯಟನ ಮಾಡಿದರು. ಪ್ರಪಂಚವನ್ನೂ ಸುತ್ತಿದರು. ತಮಗೆ ತಿಳಿಯದ ವಿಷಯದ ಬಗ್ಗೆ ಬಲ್ಲವರ ಜತೆಗೆ ದೀರ್ಘವಾಗಿ ಚರ್ಚಿಸಿ ತಮ್ಮ ದ್ವಂದ್ವಗಳನ್ನು ನಿವಾರಿಸಿಕೊಳ್ಳುತ್ತಿದ್ದರು ಮುಂದೆ ಅಮೆರಿಕದ ಶಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತೀಯತೆಯ ಭವ್ಯ ಪರಂಪರೆಯನ್ನು ಇಡೀ ಜಗತ್ತಿಗೆ ಅರಿವಾಗುವಂತೆ ಅನಾವರಣ ಮಾಡಿದರು. ಕಾಮ-ಕ್ರೋಧ-ಮೋಹ-ಮದ-ಮತ್ಸರಗಳು ಯುವಕರ ಜೀವನದ ಕಲೆಗಳಾಗಬಾರದು ಎನ್ನುತ್ತಿದ್ದರು ವಿವೇಕಾನಂದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ, ಲೈಕುಗಳನ್ನು ಎಣಿಸುತ್ತ ಕಾಲಹರಣ ಮಾಡುವುದೇ ಮಹತ್ತರವಾಗದೇ ಜೀವನದಲ್ಲಿ ಸ್ಪಷ್ಟ ಗುರಿಗಳನ್ನಿರಿಸಿಕೊಂಡು ಹೆಜ್ಜೆ ಇರಿಸಬೇಕು.ಇಲ್ಲವಾದಲ್ಲಿ ನಮ್ಮ ಜನ್ಮಕ್ಕೆ ಸಾಥ೯ಕತೆ ಸಿಗಲಾರದು. ಬದುಕಲು ಸುವರ್ಣಾವಕಾಶಗಳಿವೆ : ಈ ಪ್ರಪಂಚ ಬಹು ದೊಡ್ಡದು. ಇಲ್ಲಿ ಎಲ್ಲರೂ ಸುಖ, ಸಂತೋಷ ಮತ್ತು ಸಂಭ್ರಮದಿಂದ ಬದುಕಲು ಸುವರ್ಣಾವಕಾಶಗಳಿವೆ. ಹೇಗೆ ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ ಹೋದರೋ ಹಾಗೆ ಯುವಕರು ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪಾದಿಸಬೇಕು. ವಿವಿಧ ಕೌಶಲಗಳನ್ನು ಕಲಿತು, ಯೋಗ್ಯತೆ ಹೆಚ್ಚಿಸಿಕೊಳ್ಳಬೇಕು. ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ, ಸಾರ್ವತ್ರಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿಶ್ರೇಷ್ಠತೆಗೆ ಬೇಕಾಗಿರುವ ಕೌಶಲಗಳನ್ನು ಪಡೆದುಕೊಳ್ಳಬೇಕು. ಕಾಲಹರಣ ಮಾಡದೆ, ಕಾರ್ಯಕ್ಷಮತೆಯ ಮನೋಭಾವನ್ನು ಬೆಳೆಸಿಕೊಳ್ಳಬೇಕು. ಬದುಕು ಸುಂದರವಾಗಲು ನಿರಂತರ ಕಲಿಕೆ, ಸತತ ಪರಿಶ್ರಮ, ಸಮಯೋಚಿತ ಪ್ರಜ್ಞೆ, ಪ್ರಾಮಾಣಿಕತೆ, ಪಾರದರ್ಶಕತೆಯನ್ನು ರೂಢಿಸಿಕೊಳ್ಳಬೇಕು. ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮೃದ್ಧ ಬದುಕನ್ನು ಕಟ್ಟಿಕೊಂಡರೆ ಯೌವನಕ್ಕೆ ಬಹು ದೊಡ್ಡ ಗೌರವ ಸಿಕ್ಕಂತಾಗುತ್ತದೆ. ನಮ್ಮ ಕೌಟುಂಬಿಕ , ಸಾಮಾಜಿಕ ಮತ್ತು ಉದ್ಯೋಗ ಜೀವನ ಉತ್ತಮಗೊಳಿಸಲು ಪರಿಶ್ರಮ ಮತ್ತು ಗುರಿ ಅಗತ್ಯ' ತಮ್ಮತನವೆಂಬ ಅಸ್ಮಿತೆ : ನುಡಿದಂತೆ ಬದುಕಬೇಕು. ಮತ್ತೊಬ್ಬರನ್ನು ಅನಾಯಾಸವಾಗಿ ಅನುಕರಿಸುವುದಕ್ಕಿಂತ, ಬೇಕಾದರೆ ಅನುಸರಿಸುವ ಕುಶಲಮಾರ್ಗವನ್ನು ಬೆಳೆಸಿಕೊಳ್ಳಬೇಕು. ಎಂಥ ಕಠಿಣ ಪರಿಸ್ಥಿತಿ ಬಂದರೂ ಸಮಾಧಾನ, ಸದ್ವಿನಯ, ಸದ್ಭಾವದಿಂದ ತಮ್ಮತನದ ಸಂರಕ್ಷಣೆ ಮಾಡಿಕೊಳ್ಳಬೇಕು. 'ಚಲನಚಿತ್ರ ನಾಯಕ'ರು ಆದರ್ಶ ಪುರುಷರಾಗುವುದಕ್ಕಿಂತ 'ಚರಿತ್ರನಾಯಕ'ರು ಆದಶ೯ರು ನಮಗೆ ಸ್ವಾಮಿ ವಿವೇಕಾನಂದರು ಜಗತ್ತಿನ ವಿವಿಧ ದೇಶಗಳನ್ನು ಸುತ್ತಿದರು. ಭಾರತೀಯತೆ ಮತ್ತು ಸನಾತನತೆಯ ಕುರಿತು ಪ್ರಖರವಾಗಿ, ನಿಖರವಾಗಿ ಮಾತನಾಡಿದರು. ಯಾವುದೇ ದೇಶದಲ್ಲಿದ್ದಾಗಲೂ ತಮ್ಮತನ ಮಾರಿಕೊಳ್ಳಲಿಲ್ಲ. ತಮ್ಮ ದಿರಿಸು, ಆಹಾರ, ಆಚಾರ, ವಿಚಾರ, ಮಾತೃಭೂಮಿಯ ಅನನ್ಯತೆ ಮತ್ತು ಅದಮ್ಯತೆಯ ಕುರಿತು ಪ್ರವಚನಗಳನ್ನು ನೀಡಿದರು. ನಿರ್ಮಾಣವಾಗಲಿ ರಾಜಮಾರ್ಗ : ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ 5 ತಿಂಗಳು, 22 ದಿವಸ. ಆದರೆ ಆ ಮಹಾನ್‌ ಸಂತ ಇಲ್ಲಿ ಬಿಟ್ಟು ಹೋಗಿದ್ದು ಸಹಸ್ರಾರು ಯುಗಗಳವರೆಗೂ ಉಳಿದು ಬೆಳೆಯಬಲ್ಲ ಅಧ್ಯಾತ್ಮಿಕ ಔನ್ನತ್ಯದ ಮೌಲ್ಯಗಳು. ಅವರು ಆಗಿನ ಕಾಲಕ್ಕಿಂತ ಈಗ ಇನ್ನೂ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಮತ್ತು ಅಷ್ಟೇ ಪ್ರಸ್ತುತರೂ ಆಗಿದ್ದಾರೆ. ಅದು ಆ ಸಂತನ ವರ್ಣಿಸಲಾಗದ ತಾಕತ್ತು. ತಂತ್ರಜ್ಞಾನವನ್ನು ಲೀಲಾಜಾಲವಾಗಿ ಬಳಸುವ, ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ, ಪ್ರತಿಕ್ಷಣ ಹೊಸತನ್ನು ಸೃಷ್ಟಿಸಿ ಜಿಜ್ಞಾಸೆ ಮೂಡಿಸುವ ಯುವಕರನ್ನು ಸರಿಯಾದ ಮಾರ್ಗದಲ್ಲಿ ನಡೆಯಿರಿ ಎಂದು ಹೇಳುವುದಕ್ಕಿಂತ, ಅವರು ಅರಿತು, ಬೆರೆತು ಬೆಳೆಯಲು ಸರಿಯಾದ ಮಾರ್ಗಗಳನ್ನು ನಿರ್ಮಿಸಿಕೊಡಬೇಕಾಗಿದ್ದು ಸಮಾಜ ಮತ್ತು ಜವಾಬ್ದಾರಿಯುತ ಸರಕಾರಗಳ ಆದ್ಯತೆ. ಅವರಲ್ಲಿ ಧನಾತ್ಮಕ ಚಿಂತನೆ ಒಡಮೂಡಬೇಕಾದರೆ ಅವರಲ್ಲಿ ಸಮಾಜ ಮತ್ತು ಸರಕಾರಗಳ ಬಗ್ಗೆ ನಂಬಿಕೆ ಬರುವಂತಾಗಬೇಕು. ಶಾಲೆ-ಕಾಲೇಜುಗಳು ಅವರಿಂದ ಬರೀ ಫೀಜು ಕಿತ್ತುಕೊಳ್ಳುವ ಹಣಪಿಪಾಸುಗಳಾಗದೆ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ 'ರಾಜಮಾರ್ಗ'ವಾಗಬೇಕು. ಯುವ ಸಮುದಾಯದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರಿಗೆ ಕಲಿಯಲು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕು. ದುಡಿಯಲು ಉದ್ಯೋಗಾವಕಾಶಗಳನ್ನು ವಿಪುಲವಾಗಿ ಸೃಷ್ಟಿಸಬೇಕು. ಮಸ್ತಕಕ್ಕೊಂದು ಪುಸ್ತಕ ಓದುವ ಗೀಳು ಹಚ್ಚಿಸಬೇಕು. ಸ್ವಜನಶೀಲತೆಯಿಂದ ಧಕ್ಕೆಯಾಗದಂತೆ ಅವರ ಸೃಜನಶೀಲತೆಗೆ ಮುಕ್ತ ಪರಿಸರ ನಿರ್ಮಾಣ ಮಾಡಬೇಕು. ಯುವಕರನ್ನು ಬರಿ ಹೊಗಳಿ ಹೊನ್ನ ಶೂಲಕ್ಕೇರಿಸದೆ, ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಕೊಟ್ಟರೆ ಅವರೂ ಯೋಗ್ಯವಾಗಿ ಬದುಕು ನಡೆಸುತ್ತಾರೆ. ಯುವ ಜನಾಂಗ "ಯೂಸ್ ಲೆಸ್ ಅಲ್ಲ ಬದಲಾಗಿ ಯೂಸಡ್ ಲೆಸ್ " ದೇಶದಲ್ಲಿ ಹೊಸ ಬದಲಾವಣಿ ತರಬೇಕಾದರೆ, ನಾವೆಲ್ಲರೂ ಬದಲಾಗಬೇಕು ಇಲ್ಲವಾದಲ್ಲಿ ಬದಲಾವಣೆಯೇ ಬದಲಾಯಿಸುತ್ತದೆ. ಸ್ವಾಮೀಜಿಯ ಜನ್ಮದಿನದ ನೆನಪು ನಮ್ಮ ಬದುಕಿಗೆ ಹೊಸ ಭಾಷ್ಯ ಬರೆಯಲಿ. ✍

ಉದ್ಯಾವರ : ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ - ಪಣಿಯೂರಿನ ಯುವಕ ಮೃತ್ಯು

Thumbnail
Posted On: 11 Jan 2025, 12:06 PM

ಉದ್ಯಾವರ : ಇಲ್ಲಿನ ಕೊರಂಗ್ರಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ  ಶುಕ್ರವಾರ ತಡರಾತ್ರಿ ಘಟಿಸಿದೆ. ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಯುವಕ. ಬೆಂಕಿಯ ತೀವ್ರತೆಗೆ ಲಾರಿ ಮತ್ತು ಸ್ಕೂಟರ್ ಸುಟ್ಟು ಕರಕಲಾಗಿದೆ. ಅಪಘಾತದ ಸಂದರ್ಭ ಲಾರಿಯ ಅಡಿಭಾಗದಲ್ಲಿ ಬೈಕ್ ಸಿಲುಕಿಕೊಂಡಿದ್ದು ಈ ವೇಳೆ ಬೈಕಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಹಾಗೂ ಲಾರಿ ಬೆಂಕಿಗಾಹುತಿಯಾಗಿದೆ. ಈ ಬಗ್ಗೆ ಕಾಪು‌ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.