Updated News From Kaup

ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ ಚಿತ್ರದ ಅಂಚೆ ಮೊಹರು ಅನಾವರಣ

Thumbnail
Posted On: 27 Nov 2024, 08:12 PM

ಉಡುಪಿ : ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಭಾರತೀಯ ಸಂವಿಧಾನದ ಅಮೃತೋತ್ಸವದ ಅಂಗವಾಗಿ ಕಟಪಾಡಿ ಮತ್ತು ಶಂಕರಪುರ ಉಪ ಅಂಚೆ ಕಚೇರಿಗಳಲ್ಲಿ ಕ್ರಮವಾಗಿ ತುಳುನಾಡಿನ ಜನಪ್ರಿಯ ವಸ್ತು ಗಳಾದ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆಗಳ ಶಾಶ್ವತ ಚಿತ್ರಾತ್ಮಕ ಅಂಚೆ ಮೊಹರನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ತಾವು ರವಾನಿಸುವ ಕಾಗದ ಪತ್ರ ಮೇಲೆ ಈ ಮೊಹರನ್ನು ಮೇಲಿನ ಅಂಚೆ ಕಛೇರಿಗಳಲ್ಲಿ ಮುದ್ರಿಸಿ, ತುಳುನಾಡಿನ ಈ ಸಂಪತ್ತುಗಳ ಕಂಪನ್ನು ಎಲ್ಲೆಡೆ ಪಸರಿಸಬಹುದಾಗಿದೆ ಎಂದು ಅಂಚೆ ಪ್ರಕಟಣೆ ತಿಳಿಸಿದೆ.

ಎರ್ಮಾಳು ಮಾಧವ ಎಸ್. ಸುವರ್ಣ ನಿಧನ

Thumbnail
Posted On: 27 Nov 2024, 07:03 PM

ಪಡುಬಿದ್ರಿ : ಸುವರ್ಣ ಸಂಭ್ರಮದ ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಎರ್ಮಾಳು ಮಾಧವ ಎಸ್. ಸುವರ್ಣ(72) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತೆಂಕ ಎರ್ಮಾಳು ಸ್ವಗೃಹ "ಸುರಕ್ಷಾ"ದಲ್ಲಿ ನಿಧನರಾದರು. ಅವರು ತೆಂಕ ಎರ್ಮಾಳು ಮೊಗವೀರ ಮಹಾಸಭಾದ ಅಧ್ಯಕ್ಷರಾಗಿ, ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ತೆಂಕ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ, ತೆಂಕ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ತೆಂಕ ಸರಕಾರಿ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಜನನುರಾಗಿಯಾಗಿದ್ದರು. ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ ಹಲವು ಬಾರಿ ಭಜನಾ ಕಮ್ಮಟಗಳನ್ನು ಯಶಸ್ವಿಯಗಿ ನಡೆಸಿದ್ದರು. ಹಲವು ವರ್ಷಗಳಿಂದ ತೆಂಕ ಗ್ರಾಮದಲ್ಲಿ ನೀಟ್ ಪ್ರಿಂಟ್ ಉದ್ಯಮದ ಮೂಲಕ ಪ್ರಮುಖ ಪ್ರಿಂಟಿಂಗ್ ಪ್ರೆಸ್ ಉದ್ಯಮ ನಡೆಸುತ್ತಿದ್ದರು. ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಅವರು 1981ಲ್ಲಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಜೆಸಿಐ ರಾಜ್ಯ ತರಬೇತುದಾರರಾಗಿದ್ದ ಅವರು, ಎರಡು ಸಾವಿರಕ್ಕೂ ಅಧಿಕ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಡೆಸಿ ಪ್ರಸಿದ್ಧರಾಗಿದ್ದರು. 20ಕ್ಕೂ ಅಧಿಕ ಜೆಸಿಐ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಗರಿಮೆ ಹೊಂದಿದ್ದರು. ಪಡುಬಿದ್ರಿ ರೋಟರಿ ಕ್ಲಬ್ ಸ್ಥಾಪಕ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷರಾಗಿ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಪು ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬಳಿಕ ಜಿಪಂ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಅವರ ನಿಧನಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಂಟಕಲ್ಲು ಶಾಲೆಗೆ ನಾಸಾ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಭೇಟಿ ; ಮಕ್ಕಳೊಂದಿಗೆ ಸಂವಾದ

Thumbnail
Posted On: 27 Nov 2024, 05:49 PM

ಶಿರ್ವ : ಅಮೇರಿಕದ ನಾಸಾ (ಬಾಹ್ಯಾಕಾಶ ಸಂಶೋಧನ ಕೇಂದ್ರ)ಸಂಸ್ಥೆಯ ಹಿರಿಯ ವಿಜ್ಞಾನಿ ಬಿಳಿಯಾರು ಡಾ. ನರಸಿಂಹ ಭಟ್ ರವರು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾರ್ಥಮಿಕ ಶಾಲೆ ಗೆ ಭೇಟಿ ನೀಡಿದರು. ಇವರು ಈ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಮಕ್ಕಳೊಂದಿಗೆ ಸಂವಾದ ನಡೆಸಿದ ಇವರು ಮುಂದಿನ ವರ್ಷ ನಡೆಯುವ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಚೆ ವ್ಯಕ್ತಪಡಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರೊಂದಿಗೆ ಅವರ ಸಹೋದರ ಈ ಶಾಲಾ ಹಳೇ ವಿದ್ಯಾರ್ಥಿ ಪದ್ಮನಾಭ ಭಟ್ ಜೊತೆಗಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆಯವರು ಸ್ವಾಗತಿಸಿ ಶಾಲೆಯ ಅಭಿವೃದ್ದಿಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ಕೆ ಆರ್ ಪಾಟ್ಕರ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾಪು : ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ

Thumbnail
Posted On: 27 Nov 2024, 05:40 PM

ಕಾಪು : ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿ ಗುಡಿ, ಹೊಸ ಮಾರಿ ಗುಡಿ ಹಾಗೂ ಕಲ್ಯ ಮಾರಿ ಗುಡಿಗಳಲ್ಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು. ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್‌ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.

ಕಾಪು ಶಾಸಕರ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

Thumbnail
Posted On: 26 Nov 2024, 10:21 PM

ಕಾಪು : ಶಾಸಕರ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಕೈಗೊಂಡು, ಸಂವಿಧಾನಕ್ಕೆ ನಮಸ್ಕರಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಕಾಪು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆ

Thumbnail
Posted On: 26 Nov 2024, 10:12 PM

ಕಾಪು : ಸಂವಿಧಾನ ಅಪಾಯದಲ್ಲಿದೆ. ಹಿಂದಿನ ಮನು ಆಡಳಿತ ಕೊನೆಗೊಳಿಸಿ ಪ್ರಸ್ತುತ ನಾವು ಬದುಕುತ್ತಿರುವುದು ನಮ್ಮ ಸಂವಿಧಾನದ ಶಕ್ತಿಯಿಂದ. ಸಂವಿಧಾನದಿಂದ ಆಡಳಿತದ ಚುಕ್ಕಾಣಿ ಹಿಡಿವರೇ ಸಂವಿಧಾನ ಬದಲಾವಣೆ ಬಯಸುತ್ತಿದ್ದಾರೆ. ಕನಸನ್ನು ಕೊಟ್ಟ ಗ್ರಂಥ ಸಂವಿಧಾನ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು. ಅವರು ಕಾಪು ಪೇಟೆಯಲ್ಲಿ ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಸುಧೀರ್ ಮರೋಳಿ ಮಾತನಾಡಿ, ಕೆಲವರಿಗೆ ಗೌರವ ಕೊಡುವ ಸಂವಿಧಾನ ಬೇಡ ಎಲ್ಲರಿಗೂ ಗೌರವ ನೀಡುವ ಸಂವಿಧಾನ ಬೇಕಾಗಿದೆ ಎಂದರು. ಪೋಲಿಸ್ ವರಿಷ್ಠಾಧಿಕಾರಿಯ ವಿರುದ್ಧ ಉಡುಪಿಯ ಶಾಸಕರುಗಳು ಸಾಮಾನ್ಯ ಜನರ ಎದುರು ಯಾಕೆ ಪ್ರತಿಭಟಿಸುವಿರಿ ? ವಿಧಾನ ಸೌಧದಲ್ಲಿ ಪ್ರಶ್ನಿಸಿ ನಿಮಗೆ ಸಂವಿಧಾನ ಆ ಹಕ್ಕನ್ನು ನೀಡಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸಮಾನತೆ ಬೋಧಿಸಿದ ಸಂವಿಧಾನದ ಮೌಲ್ಯವನ್ನು ಮರೆತಿದ್ದೇವೆ. ಇಂದಿನ ಸಭೆ ಅದಕ್ಕೆ ಪುನರ್ ಚಾಲನೆ ದೊರೆತಂತಾಗಿದೆ. ನಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವ ಎಂದರು. ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಯಪ್ರಕಾಶ್ ಹೆಗ್ಡೆ, ರಕ್ಷಣಾಪುರ ಜವನೆರ್ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ, ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್‌, ಶ್ರೀನಿವಾಸ ತಂತ್ರಿ ಮತ್ತು ಇರ್ಶಾದ್‌ ಸಅದಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಢೆ ಕೊಳ್ಕೆಬೈಲು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಶೇಖರ್ ಹೆಜಮಾಡಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್,  ಶಿವಾಜಿ ಸುವರ್ಣ, ಹರೀಶ್ ಕಿಣಿ, ರಮೇಶ್ ಕಾಂಚನ್, ಕಾಪು ದಿವಾಕರ ಶೆಟ್ಟಿ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.  ಸಭೆಗು ಮುನ್ನ ಕಾಪು ಜನಾರ್ಧನ ದೇಗುಲದ ಆವರಣದಿಂದ ಕಾಪು ಪೇಟೆಯವರೆಗೆ ಸಾವಿರಾರು ಜನರಿಂದ ಜಾಥವು ನಡೆಯಿತು. ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಂಕರ್ ಮಲ್ಪೆ ತಂಡ ಸಂವಿಧಾನದ ಗೀತೆ ಹಾಡಿದರು. ಸುಮಾರು ಮೂರು ಸಾವಿರ ಮಹಿಳೆಯರಿಗೆ ಕೊಡುಗೆಯಾಗಿ ಸೀರೆಯನ್ನು ನೀಡಲಾಯಿತು.

ಹಿರಿಯರೆಡೆಗೆ ಸಾಹಿತ್ಯದ ನಡಿಗೆ : ಸಾಂತೂರು ವಿಠ್ಠಲ ಜೋಯಿಸರಿಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ

Thumbnail
Posted On: 26 Nov 2024, 03:27 PM

ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ಸೋಮವಾರ 92ರ ಹರೆಯದ ನಿವೃತ್ತ ಶಿಕ್ಷಕರು, ಪ್ರತಿಪರ ಕೃಷಿಕರು, ಹಿರಿಯ ವಿದ್ವಾಂಸರು, ಗ್ರಾಮದೊಡೆಯ ಶ್ರೀಸುಬ್ರಹ್ಮಣ್ಯನ ಪರಮ ಆರಾಧಕರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರಿಗೆ ಸಾಂತೂರು ಇವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ನೇತೃತ್ವದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತೋಕೂರು ಇಲ್ಲಿನ ಪ್ರಾಂಶುಪಾಲ ಹರಿ ಎಚ್ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ, ತಪಸ್ಸಿಗೆ ತಕ್ಕ ಜೀವನ, ಉತ್ತಮ ಪಾಂಡಿತ್ಯವನ್ನು ಹೊಂದಿದ ಕನ್ನಡವನ್ನು ಪೋಷಿಸಿ ಬೆಳೆಸಿದ ಮಹಾನ್ ವಿದ್ವಾಂಸರಾದ ವಿಠ್ಠಲ ಜೋಯಿಸರವರನ್ನು ಅವರ ನಿವಾಸದಲ್ಲಿಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾರ್ಪಣೆ ಮಾಡುತ್ತಿರುವುದು ತೀವ್ರ ಆನಂದವನ್ನು ತಂದಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ ಇಂತಹ 144 ಕಡೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಪ್ರತೀ ಒಬ್ಬರೂ ಕನ್ನಡ ನಾಡು, ನುಡಿ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಮಹಾನ್ ಸಾಧಕರ ಜೀವನದ ಸಂಕ್ಷಿಪ್ತ ಮಾಹಿತಿಯನ್ನು ದಾಖಲಿಸಿ ಪುಸ್ತಕ ರೂಪದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಮಾಡಲಿದೆ ಎಂದರು. ಗೌರವ ಸ್ವೀಕರಿಸಿದ ವೇದಮೂರ್ತಿ ಶ್ರೀವಿಠ್ಠಲ ಜೋಯಿಸರು ಮಾತನಾಡಿ ತಮ್ಮ ಜೀವನದ ಹೆಜ್ಜೆಗುರುತುಗಳನ್ನು ಸ್ಮರಿಸಿ ನೆರೆದ ಶಿಷ್ಯ ವರ್ಗ ಹಾಗೂ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗಿರೀಶ್ ಪಲಿಮಾರು, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ರಾಘವೇಂದ್ರ ಭಟ್, ವಿದ್ವಾಂಸರಾದ ಪದ್ಮನಾಭ ಭಟ್, ರಘುಪತಿ ಭಟ್ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ರವೀಶ್ ಶೆಟ್ಟಿ ಪಿಲಾರು ಹೊಸಮನೆ, ಸಾನದಮನೆ ಗುಣಕರ ಪೂಜಾರಿ, ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಂದ್ರ ಪ್ರಭು, ಗ್ರಾ.ಪಂ.ಸದಸ್ಯರುಗಳಾದ ಬಾಲಚಂದ್ರ ಶೆಟ್ಟಿ, ಶಿವರಾಮ ಭಂಡಾರಿ, ಯಶೋದಾ ಪೂಜಾರಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮನೋಹರ ಪಿ. ಸದಸ್ಯರಾದ ನರಸಿಂಹಮೂರ್ತಿ, ಮುಡಾಡಿ ಮನೆ ಶುಭಕರ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ ಸಾಂತೂರು,ಸುಬ್ರಹ್ಮಣ್ಯ ಭಟ್, ಪದ್ಮನಾಭ ಜೋಯಿಸ, ಪರಶುರಾಮ್ ಉಪಸ್ಥಿತರಿದ್ದರು. ಸ್ವಾತಿ, ರಾಜಶ್ರೀ, ಪ್ರೇರಣಾ ಪ್ರಾರ್ಥಿಸಿದರು. ಪಲಿಮಾರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಪರಿಷತ್ತು ತಾಲೂಕು ಘಟಕದ ಸದಸ್ಯ ಪಿಲಾರು ಸುಧಾಕರ ಶೆಣೈ ಪ್ರಾಸ್ತಾವನೆಗೈದರು. ಸದಸ್ಯ ದೇವದಾಸ್ ಪಾಟ್ಕರ್ ಮುದರಂಗಡಿ ಸನ್ಮಾನಪತ್ರ ವಾಚಿಸಿದರು. ಬಿ.ರಾಮಕೃಷ್ಣ ಭಟ್ ನಿರೂಪಿಸಿದರು. ಕಸಾಪ ತಾಲೂಕು ಘಟಕದ ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ - ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ನಂದಿನಿ ರಾವ್

Thumbnail
Posted On: 24 Nov 2024, 11:07 PM

ಕಾಪು : ಸಂಗೀತ ನಾಟಕ ಅಕಾಡೆಮಿಯಿಂದ ಲಘು ಶಾಸ್ತ್ರೀಯ ಸಂಗೀತಕ್ಕಾಗಿ ಸಂಗೀತ ಕಲಾವಿದೆ ನಂದಿನಿ ರಾವ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ - ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಶಿರ್ವ : ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ ವಿಮೋಚನ ಸಮಿತಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಆಯ್ಕೆ

Thumbnail
Posted On: 24 Nov 2024, 10:59 PM

ಶಿರ್ವ : ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ ವಿಮೋಚನ ಸಮಿತಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಆಯ್ಕೆಯಾಗಿದ್ದಾರೆ. ನವಂಬರ್ 27ರಂದು ಮಥುರಾ ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆಗಾಗಿ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ಕೇಶವ ಧಾಮ ಶ್ರೀ ಧಾಮ ವೃಂದಾವನದಲ್ಲಿ ಅಂತರರಾಷ್ಟ್ರೀಯ ಸಂಸತ್ತು ನಡೆಯಲಿದೆ. ಪ್ರಥಮ ಸಂಸತ್ ಸಭೆಯಲ್ಲಿ ಕರ್ನಾಟಕದಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ನ. 25 : ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ

Thumbnail
Posted On: 24 Nov 2024, 08:46 AM

ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ನವೆಂಬರ್ 25, ಸೋಮವಾರ ಸಂಜೆ ಗಂಟೆ 4ಕ್ಕೆ ನಿವೃತ್ತ ಶಿಕ್ಷಕರು, ಹಿರಿಯ ವಿದ್ವಾಂಸರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರು ಸಾಂತೂರು ಇವರ ನಿವಾಸದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಗೌರವಾರ್ಪಣೆ ಜರುಗಲಿದೆ. ಕಸಾಪ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಆಹ್ವಾನಿತ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕಾಪು ತಾಲೂಕು ಕಸಾಪದ ಪ್ರಕಟನೆ ತಿಳಿಸಿದೆ.