Updated News From Kaup
ಪಡುಬಿದ್ರಿ : ಕ್ರೀಡಾ ಮನೋಭಾವ ಬದುಕಿನಲ್ಲಿರಲಿ - ನವೀನಚಂದ್ರ ಜೆ ಶೆಟ್ಟಿ
Posted On: 17 Nov 2024, 12:08 PM
ಪಡುಬಿದ್ರಿ : ಕ್ರೀಡಾ ಸ್ಫೂರ್ತಿಯ ಗುಣಲಕ್ಷಣಗಳನ್ನು ದೃೆನಂದಿನ ಜೀವನಕ್ಕೆ ಅನ್ವಯಿಸಿದರೆ ಮೃೆದಾನ ಮತ್ತು ಬದುಕಿನಲ್ಲಿ ಯಶಸ್ವಿಗೆ ಕಾರಣವಾಗುತ್ತದೆ. ಉತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವುದು ಒಬ್ಬ ನಾಯಕನ ಯಶಸ್ವಿನ ಗುಣಲಕ್ಷಣವಾಗಿದೆ. ಆಟಗಾರರು ತೀರ್ಪುಗಾರಿಕೆಗೆ ಗೌರವ ಸಲ್ಲಿಸುವುದರ ಮೂಲಕ ಪ್ರೀತಿ, ಸೌಹಾರ್ದತೆ ಪಂದ್ಯಕೂಟವಾಗಲಿ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ನವೀನಚಂದ್ರ ಜೆ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಕಡಲ್ ಫಿಶ್ ಕ್ರಿಕೆಟರ್ಸ ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ ನಡೆಯುವ "ಕಡಲ್ ಫಿಶ್ 2024" ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಡಲ್ ಫಿಶ್ ಕ್ರಿಕೆಟರ್ಸ್ ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಶ್ರೀಲಂಕಾ ಹಾಗು ಭಾರತ ಟೆನ್ನಿಸ್ ಬಾಲ್ ತಂಡದ ನಡುವೆ ಉದ್ಘಾಟನ ಪಂದ್ಯಾಟ ನಡೆಯಿತು. ಪಡುಬಿದ್ರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್ , ಪಡುಬಿದ್ರಿ ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಶರತ್ ಶೆಟ್ಟಿ , ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್ , ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ಅಮೀನ್, ಸುರತ್ಕಲ್ ತುಳುನಾಡ ಬಿರುವೆರ್ ಸಂಸ್ಥಾಪಕ ಲೊಕೇಶ್ ಕೊಡಿಕೆರೆ, ಪಡುಬಿದ್ರಿ ಬಂಟರ ಸಂಘ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕಾಪು ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಶೆಟ್ಟಿ, ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು , ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಾಜಿ ನಿರ್ದೇಶಕ ಮಿಥುನ್ ಹೆಗ್ಡೆ, ಪಡುಬಿದ್ರಿ ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಪೂಜಾರಿ, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಪೂಜಾರಿ, ಉದ್ಯಮಿ ಅಶ್ವಿನ್ ಕೋಟ್ಯಾನ್, ಕಡಲ್ ಫಿಶ್ ಕ್ರಿಕೆಟರ್ಸ್ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಅಧ್ಯಕ್ಷ ರಚನ್ ಸಾಲ್ಯಾನ್, ಬಾಡಿ ಬಿಲ್ಡರ್ ವಿರಾಜ್ ಸುರತ್ಕಲ್, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರೇಮ ವಾಸುದೇವ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಪ್ರಶಾಂತ್ ಸಾಲ್ಯಾನ್ ವಂದಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.
ಪಲಿಮಾರು ಕನ್ನಡ ಸಾಹಿತ್ಯ ಸಮ್ಮೇಳನ - ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯ
Posted On: 15 Nov 2024, 10:45 AM
ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಲಿಮಾರು ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನ.16, ಶನಿವಾರ ಹಿರಿಯ ಸಾಮಾಜಿಕ ಕಾರ್ಯಕರ್ತ, ಸಂಘಟಕ,ಕೊರಗಭಾಷಾ ಸಂಶೋಧಕ ಸಾಹಿತಿ, ಪಾಂಗಾಳ ಬಾಬು ಕೊರಗ ಇವರ ಸರ್ವಾಧ್ಯಕ್ಷತೆಯಲ್ಲಿ ದಿನವಿಡೀ ವಿವಿಧ ಗೋಷ್ಠಿ/ಸಂವಾದ/ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯವಾಗಿ ಜರುಗಲಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಉಡುಪಿ ವಲಯದ ಎಲ್ಲ ಸರಕಾರಿ/ಅನುದಾನಿತ/ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ಸೌಲಭ್ಯವನ್ನು ಒದಗಿಸಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಡುಪಿ ಇವರು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಶಾಲಾ ಶಿಕ್ಷಣ ಇಲಾಖೆ(ಪ.ಪೂ) ಕಾಪು ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಆಸಕ್ತ ಉಪನ್ಯಾಸಕರಿಗೆ ಉಪನಿರ್ದೇಶಕರು , ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಇವರು ಅನ್ಯಕಾರ್ಯ ನಿಮಿತ್ತ ಸೌಲಭ್ಯ ನೀಡಿ ಆದೇಶಿಸಿದ್ದಾರೆ ಎಂದು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ.16-18 : ಪಡುಬಿದ್ರಿಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟ - ಕಡಲ್ ಫಿಶ್ ಟ್ರೋಫಿ
Posted On: 14 Nov 2024, 09:44 PM
ಕಾಪು : ಕಡಲ್ ಫಿಶ್ ಕ್ರಿಕೆಟರ್ಸ್ ಆಶ್ರಯದಲ್ಲಿ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನ.16-18ರ ವರೆಗೆ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ತಂಡವೊಂದು ಭಾಗವಹಿಸುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಕಡಲ್ ಫಿಶ್ ಟ್ರೋಫಿ-2024 ನಡೆಯಲಿದೆ. ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಮಾಹಿತಿ ನೀಡಿದರು. ಪಂದ್ಯಾಟದಲ್ಲಿ ಪ್ರಥಮ ಬಾರಿಗೆ ಶ್ರೀಲಂಕಾದ ತಂಡ ಪಾಲ್ಗೊಳ್ಳಲಿದೆ. ಅಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜ್ಯದ ಪ್ರತಿಷ್ಠಿತ ತಂಡಗಳು, ಉಭಯ ಜಿಲ್ಲೆಯ ಬಲಿಷ್ಠತಂಡಗಳು ಭಾಗವಹಿಸಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ವಿಜೇತರಿಗೆ ಪ್ರಥಮ ಪ್ರಶಸ್ತಿ ಸಹಿತ ನಗದು 5 ಲಕ್ಷ ರೂ., ದ್ವಿತೀಯ ಪ್ರಶಸ್ತಿ ಸಹಿತ ನಗದು 3ಲಕ್ಷ ರೂ. ಬಹುಮಾನವಿದೆ. ಜತೆಗೆ ಪಂದ್ಯಶ್ರೇಷ್ಠ ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಬೌಲರ್ ವೈಯಕ್ತಿಕ ಪ್ರಶಸ್ತಿಗಳಿವೆ. ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು, ನ.18ರಂದು ಸಂಜೆ ಹೊನಲು ಬೆಳಕಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ನ.16ರಂದು ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ 11 ತಂಡಗಳು ಸೆಣಸಾಟ ನಡೆಸಲಿದ್ದು, ಎಂಆರ್ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಚಾಲನೆ ನೀಡಲಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಸಹಿತ ಗಣ್ಯರು ಉಪಸ್ಥಿತರಿರುವರು. ನ.18ರಂದು ರಾತ್ರಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ಯಶಪಾಲ್ ಎ.ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್ ಭಾಗವಹಿಸುವರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್, ಪದಾಧಿ ಕಾರಿಗಳಾದ ಸಂತೋಷ್ ಪಡುಬಿದ್ರಿ, ರಚನ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್ ಉಪಸ್ಥಿತರಿದ್ದರು.
ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟೀಯ ಪ್ರಶಸ್ತಿ ಪ್ರದಾನ
Posted On: 13 Nov 2024, 09:54 PM
ಕಾಪು : ತುಳುಕೂಟ ಪುಣೆ (ರಿ.) ವತಿಯಿಂದ ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆ ತುಳುಕೂಟ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೊಡಲ್ಪಡುವ 'ಸಮಾಜ ಸೇವಾ ಮಾಣಿಕ್ಯ' ರಾಷ್ಟೀಯ ಪ್ರಶಸ್ತಿಯನ್ನು ಪುಣೆಯ ಬಾಣೆರ್ ನ ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂನ ನಾಡೋಜ ಡಾ.ಜಿ ಶಂಕರ್ ವೇದಿಕೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪರಮಾಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಓಡಿಯೂರು, ಮತ್ತು ಶ್ರೀ ಅನಂತ ಕೃಷ್ಣ ಅಸ್ರಣ್ಣ ಕಟೀಲು ಆಶೀರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ತುಳುಕೂಟ ರಜತ ಮಹೋತ್ಸವ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ವಹಿಸಿದ್ದರು. ಈ ಸಂದರ್ಭ ಉಡುಪಿ ಜಿ ಫ್ಯಾಮಿಲಿ ಟ್ರಸ್ಟ್ ಸ್ಥಾಪಕದ್ಯಾಕ್ಷರಾದ ನಾಡೋಜ ಡಾ.ಜಿ ಶಂಕರ್, ಎಂ.ಆರ್. ಜಿ ಗ್ರೂಪ್ಸ್ ಡಾ.ಪ್ರಕಾಶ್ ಶೆಟ್ಟಿ, ಜಾಗಾತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷರಾದ ಎ ಸಿ ಭಂಡಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ.ಕೆ ಧರಣಿದೇವಿ ಮಾಲಗತ್ತಿ ಐ.ಪಿ.ಎಸ್, ಅನಿವಾಸಿ ಭಾರತೀಯ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಮುನಿಯಾಲು ಟ್ರಸ್ಟ್ ಉದಯಕುಮಾರ್ ಶೆಟ್ಟಿ ಮುನಿಯಾಲು, ಉಡುಪಿ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮೊಗವೀರ ಸಭಾ ಅಧ್ಯಕ್ಷರಾದ ಜಯ ಕೋಟ್ಯಾನ್, ತುಳುಕೂಟ ಪುಣೆ ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು, ಪ್ರ.ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು, ರವಿಶಂಕರ್ ಶೆಟ್ಟಿ ಬಡಾಜೆ ಬಂಟ್ವಾಳ, ಭಾರತ್ ಕೋ ಆಪರೇಟಿವ್ ಮುಂಬೈ ಕಾರ್ಯಧ್ಯಕ್ಷರಾದ ಸೂರ್ಯಕಾಂತ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಉತ್ಥಾನ ದ್ವಾದಶಿ ಬದುಕಿನ ಜಾಗೃತಿ ಸಾರುವ ತುಳಸಿ ಪೂಜೆ
Posted On: 13 Nov 2024, 06:53 AM
ಹಲವು ಔಷಧ ಗುಣವುಳ್ಳ ಪವಿತ್ರ ತುಳಸಿಯನ್ನು ಪೂಜಿಸುವ ತುಳಸಿ ಹಬ್ಬವನ್ನು ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ಪದ್ಧತಿ ನೂರಾರು ವಷ೯ಗಳಿಂದ ರೂಢಿಯಲ್ಲಿದೆ. ಹಬ್ಬಗಳ ಮಾಸವಾದ ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ಇದೊಂದು ಪ್ರಸಿದ್ಧವಾದ ಹಬ್ಬ. ಉತ್ಥಾನ ದ್ವಾದಶಿ, ಕಾರ್ತಿಕ ಶುಕ್ಲ ದ್ವಾದಶಿಯಂದು ಆಚರಿಸಲಾಗುವ ಈ ಹಬ್ಬ ಪ್ರಮುಖವಾಗಿದೆ. ‘ಉತ್ಥಾನ’ ಎಂದರೆ ‘ಏಳುವುದು-ಜಾಗೃತಿ. ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವ ದ್ವಾದಶಿ ತಿಥಿಯ ದಿನವಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ವಿದ್ವಾಂಸರು ತಿಳಿಸಿದ್ದಾರೆ. ಉತ್ಥಾನ ದ್ವಾದಶಿಯ ದಿನ ವಿಷ್ಣುವಿನ ಪೂಜೆ ಹಾಗೂ ವಿಷ್ಣುವಿನೊಡನೆ ಧಾತ್ರೀ (ನೆಲ್ಲಿ ಗಿಡ) ಸಹಿತವಾದ ತುಳಸಿ ಗಿಡ ನೆಟ್ಟು ಪೂಜಿಸುತ್ತಾರೆ. ದೀಪಗಳಿಂದ ತುಳಸಿ ಬೃಂದಾವನ (ಕಟ್ಟೆ)ವನ್ನು ಅಲಂಕರಿಸುತ್ತಾರೆ. .ಈ ಹಬ್ಬದಂದು ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸನ್ನಿದಾನವಿದೆ. ಹೀಗಾಗಿ ಶ್ರೀಹರಿಯ ಜತೆ ಲಕ್ಮ್ಷೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಗೆಲ್ಲನ್ನು ತುಳಸಿಯ ಜತೆ ನೆಡುವ ಕ್ರಮವಿದೆ. ದಿನದ ಪೂಜೆಗಳಲ್ಲೂ ಶ್ರೇಷ್ಠವಾದದ್ದು ತುಳಸಿ ಪೂಜೆ : ಸಂಸ್ಕೃತದಲ್ಲಿ ‘ತುಳಸಿ ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಮ್ಷೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ’-ಹೀಗೆ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ. ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ. ತುಳಸಿಯ ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುವ ಶಕ್ತಿ ಹೊಂದಿದೆ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ, ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತಮುತ್ತಲೂ ಇದ್ದರೆ ಸೊಳ್ಳೆಕಾಟ ಕಡಿಮೆಯಾಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸುರ್ಯೋದಯಕ್ಕೆ ಮುನ್ನ ಅಂದರೆ ಬ್ರಾಹ್ಮಿ ಮೂಹರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿಯಾಗಿರುತ್ತದೆ. ಎಂದು ವೈದ್ಯರು ಹೇಳುತ್ತಾರೆ. ಏಳು ವಿಧಗಳ ತುಳಸಿ : ಸುಗಂಧ ದ್ರವ್ಯ ಸಸ್ಯ ತುಳಸಿಯಲ್ಲಿ ಏಳು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ಶ್ರೀ ತುಳಸಿ, ಕೃಷ್ಣ ತುಳಸಿ, ರಾಮ ತುಳಸಿ. ತುಳಸಿಯು ಭಾರತೀಯರ ಪಾಲಿಗೆ ಸಂಜೀವಿನಿ : ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿಯಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಈ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಲು ಇದೊಂದು ಅಪೂವ೯ ಅವಕಾಶವಾಗಿವೆ. ಈ ಮೂಲಕ ಪ್ರಕೃತಿಯ ಆರಾಧನೆಯೊಂದಿಗೆ ಮನೆ ಮಂದಿಯಲ್ಲ ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟವಾದ ಹಬ್ಬ ಈ ಹಬ್ಬದಲ್ಲಿ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಕಾಣಿಕೆಯನ್ನು ತೆಗೆದಿಡುವ ಕ್ರಮ ಹಳ್ಳಿಗಳಲ್ಲಿ ಇದೆ ಈ ಮೂಲಕ ಕುಟುಂಬದೊಂದಿಗೆ ಈ ಹಬ್ಬದ ಆಚರಣೆ ಮಾಡಿ ನಂತರ ಪ್ರಸಾದ ಸೇವಿಸಿ ಖುಷಿಯಾಗಿ ಬದುಕುವುದನ್ನು ನಮಗೆ ಈ ಹಬ್ಬ ತಿಳಿಸುತ್ತದೆ. ಪ್ರಕೃತಿಯಲ್ಲಿ ಭಗವಂತನ ದಶ೯ನ ಅದೇ ರೀತಿ ಪ್ರಕೃತಿಯೇ ದೇವರೆಂಬ ಕಲ್ಪನೆಯನ್ನು ಸಾರುವ ಹಬ್ಬ ಮತ್ತೊಮ್ಮೆ ಬಂದಿದೆ. ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಲೇಖಕ/ತರಬೇತುದಾರರು
ಶ್ರೀ ಕ್ಷೇತ್ರ ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ಆಚರಣೆ
Posted On: 13 Nov 2024, 06:34 AM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾಸಂಕಲ್ಪದಂತೆ ಹೃದಯವಂತ ಪ್ರಾಣಿ ಪ್ರಿಯರ ಉಪಸ್ಥಿತಿಯಲ್ಲಿ ಬೀದಿ ಶ್ವಾನ ಸಂರಕ್ಷಣಾ ಆಚರಣೆಯನ್ನು ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ರಘರಾಮ್ ಶೆಟ್ಟಿ ಕೊಪ್ಪಲಂಗಡಿ, ವಿಕ್ಕಿ ಪೂಜಾರಿ ಮಡುಂಬು, ರಾಘವೇಂದ್ರ ಪ್ರಭು ಕರ್ವಾಲು, ತನುಲ, ಗೀತಾಂಜಲಿ ಎಮ್.ಸುವರ್ಣ, ವೀಣಾ ಎಸ್.ಶೆಟ್ಟಿ, ದಾಮೋದರ ಶರ್ಮಾ , ಸುಧೀಂದ್ರ ಐತಾಳ್ ಸಾಲಿಗ್ರಾಮ, ರವೀಂದ್ರ ಹೆಬ್ಬಾರ್ ಬ್ರಹ್ಮಾವರ, ಪ್ರಶಾಂತ್ ಪೂಜಾರಿ ಕಾಪು, ಶ್ರೀ ನವೀನ್ ಕಾಪು ಮತ್ತು ಶ್ರೀಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು. ನಂತರ ಉಡುಪಿ ಜಿಲ್ಲೆಯಲ್ಲಿ ಬೀದಿ ಶ್ವಾನಗಳಿಗೆ ಆಹಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರದ ಭಕ್ತರಿಗೆ ವಾಗ್ಮಿ, ನಿರೂಪಕರಾದ ದಾಮೋದರ ಶರ್ಮಾ ಅವರು ಕಾಪು ಹೊಸ ಮಾರಿಗುಡಿಯ ಮಾರಿಯಮ್ಮನ ಕ್ಷೇತ್ರ ಜೀರ್ಣೋದ್ಧಾರ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯಾರಿಗೆ ಅಭಿನಂದನೆ
Posted On: 12 Nov 2024, 06:19 PM
ಕಾಪು : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯಾ ಅವರನ್ನು ಮಂಗಳವಾರ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಸಮ್ಮಾನಿಸಿ, ಗೌರವಿಸಲಾಯಿತು. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶುಭಾಶಂಸನೆಗೈದರು. ಅಭಿನಂದನೆ ಸ್ವೀಕರಿಸಿದ ವೇ| ಮೂ| ಶ್ರೀನಿವಾಸ ತಂತ್ರಿ ಮಾತನಾಡಿದರು. ಪುರೋಹಿತ್ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಅಭಿನಂದನಾ ಭಾಷಣ ಮಾಡಿದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಕೋಶಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ. ರವಿಕಿರಣ್, ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಉದ್ಯಮಿಗಳಾದ ನೈಮಾಡಿ ನಾರಾಯಣ್ ಶೆಟ್ಟಿ, ಲಕ್ಷ್ಮೀಶ ತಂತ್ರಿ ಕಲ್ಯ, ಪ್ರಮುಖರಾದ ಬೀನಾ ವಿ. ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ದೇಗುಲದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಲೆ ತುಲು ಲಿಪಿ ಕಲ್ಪುಗ - ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನೆ
Posted On: 12 Nov 2024, 10:53 AM
ಉಡುಪಿ : ಜೈ ತುಲುನಾಡ್ (ರಿ.) ಉಡುಪಿ ಘಟಕ ಹಾಗೂ ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು ಇದರ ಜಂಟಿ ಆಶ್ರಯದಲ್ಲಿ 'ಬಲೆ ತುಲುಲಿಪಿ ಕಲ್ಪುಗ' ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಡಾ| ಆಕಾಶರಾಜ್ ಜೈನ್ ಉದ್ಘಾಟಿಸಿ ಮಾತನಾಡಿ, ತುಳು ಭಾಷೆಯು ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಭಾಷೆ. ಸಂಸ್ಥೆಯು ಇಲ್ಲಿಯವರೆಗೆ ಸುಮಾರು 30000ಕ್ಕಿಂತ ಹೆಚ್ಚು ಜನರಿಗೆ ತುಳು ಲಿಪಿಯನ್ನ ಉಚಿತವಾಗಿ ಕಲಿಸಲಾಗಿದೆ. ಈ ಕ್ರಾಂತಿ ಎಲ್ಲಿಯ ತನಕ ಮುಟ್ಟಿದೆ ಎಂದರೆ ಇಂದಿನ ರಾಜಕಾರಣಿಗಳು ಮತದಾನದ ಸಂದರ್ಭದಲ್ಲಿ ತುಳು ಶಾಲು ಧರಿಸಿ, ತುಳು ಲಿಪಿಯನ್ನ ಪ್ರಚಾರದಲ್ಲಿ ಬಳಸಿ ತುಳುಭಾಷೆಯಲ್ಲಿಯೇ ಮತ ಯಾಚಿಸುವಂತಾಗಿದೆ. ಇದಕ್ಕೆ ಮೂಲ ಕಾರಣ ಜೈತುಲುನಾಡ್(ರಿ.) ಸಂಸ್ಥೆಯ ಉತ್ಸಾಹಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದಂತಹ ಮಹತ್ತರ ಬದಲಾವಣೆ. ಮುಂದೊಂದು ದಿನ ತುಳುನಾಡಿನ ಜನರೇ ನಿಮಗೆ ಮಾತೃಭಾಷೆ ತುಳುಲಿಪಿಯ ಬಗ್ಗೆ ತಿಳಿದಿಲ್ಲವೇ ಎಂದು ತಮ್ಮವರಲ್ಲಿ ಕೇಳುವ ಕಾಲ ಬರಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ, ಜೈ ತುಲುನಾಡ್ (ರಿ.) ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ತುಳು ಲಿಪಿಯನ್ನು ತುಳುನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಶಿಕ್ಷಣ ಕ್ರಾಂತಿಯನ್ನೇ ಪ್ರಾರಂಭಿಸಿದ್ದಾರೆ. ಅವರ ಸಹಕಾರದಿಂದ ಇಂದು ಎರಡನೇ ಬಾರಿಗೆ ತುಳು ಲಿಪಿ ಕಲಿಕಾ ತರಬೇತಿ ಕಾರ್ಯಾಗಾರವನ್ನು ಈ ಶಾಲೆಯಲ್ಲಿ ನಡೆಸುವಂತಾಯಿತು. ಅವರ ಈ ಕಾರ್ಯಕ್ಕೆ ಚಿರರುಣಿಯಾಗಿದ್ದೇನೆ ಹಾಗೂ ತುಳುವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯಲ್ಲಿ ಮಾತನಾಡಿಕೊಂಡು ತಮ್ಮವರನ್ನ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇದು ಅವರ ಮಣ್ಣಿನ ಗುಣ ಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದಂತಹ ಜೈ ತುಲುನಾಡ್ (ರಿ.) ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜಾ ತಾರಿಪಾಡಿಗುತ್ತು ತುಳುಲಿಪಿ ಕಲಿಕೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ರಾಧಾಕೃಷ್ಣ ಪೈ, ಶಂಕರನಾರಾಯಣ ಪ್ರತಿಷ್ಠಾನ (ರಿ) ಕೊಡವೂರು ಇದರ ಅಧ್ಯಕ್ಷರಾದ ಟಿ. ರಾಘವೇಂದ್ರ ರಾವ್, ಸುಮನಸಾ ಕೊಡವೂರು (ರಿ.)ಇದರ ಅಧ್ಯಕ್ಷರಾದ ಪ್ರಕಾಶ್.ಜಿ ಕೊಡವೂರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕೊಡವೂರು, ಯುವಕ ಸಂಘ (ರಿ.) ಕೊಡವೂರು ಇದರ ಅಧ್ಯಕ್ಷರಾದ ದೀಪಕ್ ಕೊಡವೂರು, ಹಳೆ ವಿದ್ಯಾರ್ಥಿ, ಯುವಕ ಸಂಘದ ಕ್ರೀಡಾ ಕಾರ್ಯದರ್ಶಿ ಅಶೋಕ್ ಶೆಟ್ಟಿಗಾರ್, ತುಳುಲಿಪಿ ಶಿಕ್ಷಕರಾದ ಸ್ವಾತಿ ಸುವರ್ಣ, ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶರತ್ ರಾಜ್, ಉಡುಪಿ ಘಟಕದ ಉಪಾಧ್ಯಕ್ಷರಾದ ಕಿರಣ್ ಒಡಿಪು, ಕೋಶಾಧಿಕಾರಿಯಾದ ಸುಪ್ರೀತಾ ಕೊಡವೂರು, ಉಡುಪಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಗೀತ ಮಣಿಪಾಲ್, ಸದಸ್ಯರಾದ ಯೋಗಿನಿ ಬೈಲೂರು ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್ ಎನ್.ಎಸ್ ಸ್ವಾಗತಿಸಿದರು. ಜೈ ತುಲುನಾಡ್ (ರಿ.) ಉಡುಪಿ ಘಟಕದ ಕಾರ್ಯದರ್ಶಿಯಾದ ಸಾಗರ್ ಬನ್ನಂಜೆ ಪ್ರಸ್ತಾವನೆಗೈದರು. ಜೈ ತುಲುನಾಡ್(ರಿ.) ಉಡುಪಿ ಘಟಕದ ಸದಸ್ಯರಾದ ಶಿಲ್ಪಾ ಕೇಶವ್ ಕೊಡವೂರು ಕಾರ್ಯಕ್ರಮವನ್ನ ನಿರೂಪಿಸಿದರು. ಜೈ ತುಲುನಾಡ್ (ರಿ) ಇದರ ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಅನುದಾನ ಹಸ್ತಾಂತರ
Posted On: 11 Nov 2024, 09:08 PM
ಕಾಪು : ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಕ್ಕೆ ಮೂರು ಲಕ್ಷದ ಅನುದಾನ ಮಂಜೂರುಗೊಂಡಿದ್ದು ಡಿ ಡಿ ಯನ್ನು ದೇವಸ್ಥಾನ ಸಮಿತಿ ಅವರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಅಮಿನ್, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ವಳದೂರು, ದೇವಸ್ಥಾನದ ಆಡಳಿತ ಸಮಿತಿಯ ಪದ್ಮನಾಭ ಶ್ಯಾನುಭೋಗ, ನಾಗಭೂಷಣ್ ರಾವ್, ರವಿರಾಜ ಶೆಟ್ಟಿ, ಶ್ರೀಧರ್ ಶೆಟ್ಟಿಗಾರ್, ನಿರ್ಮಲ್ ಕುಮಾರ್ ಹೆಗ್ಡೆ, ಕುಮಾರಿ ಪ್ರಜ್ಞ ಮಾರ್ಪಳ್ಳಿ, ಗೋಪಾಲ್ ನಾಯಕ್, ಜನಜಾಗೃತಿ ವೇದಿಕೆಯ ಸದಸ್ಯರಾದ ಜನಾರ್ಧನ್ ಆಚಾರ್ಯ ಕಳತ್ತೂರು, ಪಂಚಾಯತ್ ಸದಸ್ಯರಾದ ಭಾಸ್ಕರ, ಶರ್ಮಿಳ ಆಚಾರ್ಯ, ಮಜೂರು ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನಾಪತ್ತೆಯಾದ ವ್ಯಕ್ತಿಯ ಮೃತದೇಹ ಎಲ್ಲೂರು ಇರಂದಾಡಿ ಹಾಡಿಯಲ್ಲಿ ಪತ್ತೆ
Posted On: 11 Nov 2024, 07:32 PM
ಪಡುಬಿದ್ರಿ : ನಾಪತ್ತೆಯಾಗಿದ್ದ ಕಟಪಾಡಿ ನಿವಾಸಿಯೋರ್ವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಎಲ್ಲೂರು ಗ್ರಾಮದ ಇರಂದಾಡಿಯ ಹಾಡಿಯೊಂದರಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದೆ. ಹಾಡಿಯಲ್ಲಿ ತಲೆಬುರುಡೆ ಹಾಗೂ ಸೊಂಟದ ಭಾಗಗಳು ಇರುವುದರ ಬಗ್ಗೆ ಸ್ಥಳಿಯರು ಪೋಲಿಸರಿಗೆ ಕರೆಮಾಡಿ ತಿಳಿಸಿದ್ದು, ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸುನೀಲ್ ಕುಮಾರ್ (54) ಎಂಬುವವರ ಮೃತದೇಹದ ಇದಾಗಿದ್ದು, ಘಟನಾ ಸ್ಥಳದಲ್ಲಿ ಒಂದು ತಲೆ ಬುರುಡೆ, ಸೊಂಟದ ಭಾಗ, ಕಪ್ಪು ಪ್ಯಾಂಟ್ ಮತ್ತು ಎದೆಯ ಭಾಗದಲ್ಲಿ ಟೀ-ಶರ್ಟ್ ಧರಿಸಿದ ರೀತಿಯಲ್ಲಿತ್ತು. ಸುನಿಲ್ ಕುಮಾರ್ ಮನೆಯವರು ಶವದ ಮೈಮೇಲಿದ್ದ ಬಟ್ಟೆಗಳ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಮನೆಗೂ ಬಾರದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಶೆಟ್ಟಿಯವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳತ ಸ್ಥಿಯಲ್ಲಿದ್ದ ಮೃತದೇಹವನ್ನು ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ಆಂಬುಲೆನ್ಸ್ ಚಾಲಕ, ನಾಗರಾಜ್ ಎಚ್. ಕೆ.ರವರು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸುವಲ್ಲಿ ಸಹಕರಿಸಿದ್ದರು. ಸುನಿಲ್ ಕುಮಾರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
