Updated News From Kaup

ಪಡುಬಿದ್ರಿಯಲ್ಲಿ ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ

Thumbnail
Posted On: 21 Nov 2024, 10:54 PM

ಪಡುಬಿದ್ರಿ : ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ನಿರ್ಮಾಣದ ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಶೋಧನ್ ಶೆಟ್ಟಿ ನಾಯಕ‌ ನಟನಾಗಿರುವ ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ ಎಂದು ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕುಸಲ್ದರಸೆ ನವೀನ್ ಡಿ. ಪಡೀಲ್ ಶುಭ ಹಾರೈಸಿದರು. ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, 2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿ ಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ ಎಂದರು. ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಸಂದೀಪ್ ಉಡುಪಿ ಛಾಯಾಗ್ರಹಣ, ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ. ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ. ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಪಡುಬಿದ್ರಿ ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ. ಪ್ರತೀಕ್ಷಾ, ಡಾ. ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ. ವೈ.ಎನ್. ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

ಉದ್ಯಾವರ ನದಿಯಲ್ಲಿ ಅಪರಿಚಿತ ಶವ ಪತ್ತೆ

Thumbnail
Posted On: 21 Nov 2024, 07:12 PM

ಉದ್ಯಾವರ : ಇಲ್ಲಿನ ಕಾನಕೊಡ ಪಡುಕೆರೆ ಪಾಪನಾಷಿನಿ‌ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು ನೀಲಿ ಬಣ್ಣದ ಬರ್ಮುಡಾ ಚಡ್ಡಿ, ಕೆಂಪು ಬಣ್ಣದ ಎಡಗೈಯಲ್ಲಿ ಕಪ್ಪು ರಬ್ಬರ್ ಬ್ಯಾಂಡ್ ಇದ್ದು, ಬಲಗೈಯಲ್ಲಿ ಕೆಂಪು ಬಣ್ಣದ ನೂಲು ಕಟ್ಟಿರುತ್ತಾನೆ. ಕೆಂಪು ಬಣ್ಣದ ಒಳ ಚಡ್ಡಿ ಧರಿಸಿರುತ್ತಾನೆ. ಮೃತದೇಹ ಸಾಗಿಸಲು ಸೂರಿ ಶೆಟ್ಟಿ ಮತ್ತು ನಾಗರಾಜ್ ಸಹಕರಿಸಿದ್ದರು.

ನವೆಂಬರ್ 24 : ಉದ್ಯಾವರದಲ್ಲಿ ಎಚ್ ಪಿ ಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ

Thumbnail
Posted On: 21 Nov 2024, 05:47 PM

ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಎಚ್ ಪಿ ಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆ ನವಂಬರ್ 24ರಂದು ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ. 25 ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸ್ಪರ್ಧೆಯು ಮೂರು ಸುತ್ತುಗಳಲ್ಲಿ ನಡೆಯಲಿದ್ದು, ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುಧೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮದ್ ಹನೀಫ್ ಎಮ್'ಜೆಎಫ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲಯನ್ಸ್ ಮತ್ತು ಸಾಮಾಜಿಕ ನಾಯಕರುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೆಸಿಐನ ರಾಷ್ಟ್ರೀಯ ತರಬೇತುದರಾಗಿರುವ ಜೆಸಿ ರಾಜೇಂದ್ರ ಭಟ್ ಕಾರ್ಯಕ್ರಮದ ನಿರೂಪಣೆ ನಡೆಸಲಿದ್ದು, ವಿಶೇಷ ಆಕರ್ಷಣೆಯಾಗಿ ತುಳುರಂಗಭೂಮಿಯ ಪ್ರಭುದ್ಧ ಹಾಸ್ಯ ಮತ್ತು ಚಲನಚಿತ್ರ ನಟರಾದ ಅರವಿಂದ ಬೋಳಾರ್, ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಗಿನ್ನೆಸ್ ದಾಖಲೆ ಖ್ಯಾತಿಯ ಯೋಗರತ್ನ ತನುಶ್ರೀ ಪಿತ್ರೋಡಿ, ಖ್ಯಾತ ಜೀವ ರಕ್ಷಕ ಈಶ್ವರ ಮಲ್ಪೆ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರ ತಂಡ ಹಾಜರಿರಲಿದ್ದಾರೆ. ಪ್ರತಿಷ್ಠಿತ ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯು ಉಚಿತ ಪ್ರವೇಶವಾಗಿದ್ದು, ಪ್ರಥಮ ಬಹುಮಾನ ರೂ. 15,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ತೃತೀಯ ಬಹುಮಾನ ರೂ. 7500 ವೆಚ್ಚದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ಫೈನಲ್ ಸ್ಪರ್ಧಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ವೋಚರ್ ಲಭಿಸಲಿದೆ. ಲಯನ್ಸ್ ಕ್ಲಬ್ ಮತ್ತು ಸಾರ್ವಜನಿಕರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಹೆಸರು ನೋಂದಾಯಿಸಲು ಕಾರ್ಯಕ್ರಮದ ಸಂಚಾಲಕ ಲಯನ್ ಸ್ಟೀವನ್ ಕುಲಾಸೊ (9901701381) ಇವರನ್ನು ಸಂಪರ್ಕಿಸಬಹುದಾಗಿದೆ. ಮಾತ್ರವಲ್ಲದೆ ಕರಾವಳಿಯ ಮಾಂಸಾಹಾರಿ, ಸಸ್ಯಾಹಾರಿ, ಮೀನು ಮತ್ತು ತಂಪು ಪಾನೀಯಗಳು ಲಭ್ಯವಿದ್ದು, ಪ್ರೇಕ್ಷಕರಿಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರಕಟನೆ ತಿಳಿಸಿದೆ.

ನ.23 ಮತ್ತು 24 : ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ - ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್.

Thumbnail
Posted On: 21 Nov 2024, 11:23 AM

ಕಾಪು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕುವ ಕುರಿತು ನವೆಂಬರ್ 23 ಮತ್ತು 24 ರಂದು ಬೆಳೆಗ್ಗೆ 10 ರಿಂದ ಸಂಜೆ 5.30 ರವರೆಗೆ ಕಾಪು ತಾಲ್ಲೂಕಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೊದಲು ನವೆಂಬರ್ 9 ಮತ್ತು 10 ರಂದು ನಡೆದ ವಿಶೇಷ ಮತಪಟ್ಟಿ‌ ಪರಿಷ್ಕರಣೆಗೆ ಕಾಪು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಶೇಷ ಅಭಿಯಾನದ ದಿನಗಳಂದು ಎಲ್ಲಾ BLO ಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು, ಆನ್ ಲೈನ್ ಸಾಫ್ಟ್‌ವೇರ್ ಮೂಲಕ ಈ ಪ್ರಕ್ರಿಯೆ ಮಾಡಲಿದ್ದಾರೆ. 18 ತುಂಬಿದ ಹೊಸ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ BLO ಗಳ ಬಳಿ‌ ನಿಗದಿತ ನಮೂನೆ ತುಂಬಿ ಕೊಟ್ಟು ಹೆಸರು ಸೇರ್ಪಡೆ ಮಾಡಲು ತಿಳಿಸಿದೆ. ನಮೂನೆಗಳು: ನಮೂನೆ 6 : ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ ನಮೂನೆ 7 : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಕ್ಷೇಪಣೆಗಾಗಿ ಅರ್ಜಿ (ನಮೂನೆ 7 ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಥವಾ ಬೇರೊಬ್ಬ ವ್ಯಕ್ತಿಯ ಹೆಸರು ಅಥವಾ ಮರಣ ಹೊಂದಿದ್ದ ವ್ಯಕ್ತಿಯ ಹೆಸರನ್ನು ತೆಗೆದುಹಾಕುವಂತೆ ಕೋರಿ ಅರ್ಜಿ) ನಮೂನೆ 8 : ಮತದಾರರ ನಿವಾಸ ಬದಲಾವಣೆ/ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಾಗಿ/ ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ/ ಅಂಗವಿಕಲ ವ್ಯಕ್ತಿಯನ್ನು ಗುರುತಿಸುವುದಕ್ಕೆ ಅರ್ಜಿ ನವೆಂಬರ್ 23 ಮತ್ತು 24 ರ ಶನಿವಾರ ಮತ್ತು ಭಾನುವಾರದಂದು ನಡೆಯಲಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಸದುಪಯೋಗಪಡಿಸಿಕೊಳ್ಳಲು ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.22 - 24 : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಕಾಲಭೈರವ ಜಯಂತಿ

Thumbnail
Posted On: 21 Nov 2024, 10:53 AM

ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನ ಇಲ್ಲಿ ನವೆಂಬರ್ 22 ಶುಕ್ರವಾರದಿಂದ 24 ಆದಿತ್ಯವಾರದವರೆಗೆ ಶ್ರೀಕಾಲಭೈರವ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನವೆಂಬರ್ 22ನೇ ಶುಕ್ರವಾರ ಸಂಜೆ ಕಟಪಾಡಿಯಿಂದ ಕಾಲಭೈರವ ಸ್ವಾಮಿಗೆ ಬೆಳ್ಳಿ ಕವಚ ಹಾಗೂ ಹೊರಕಾಣಿಕೆ ಮೆರವಣಿಗೆಯೊಂದಿಗೆ ಸಾಗಿ ಬರಲಿದೆ. 23ನೇ ಶನಿವಾರ ಬೆಳಗ್ಗೆ ಗಣ ಹೋಮ, ಕಲಶಾಭಿಷೇಕ 10ಗಂಟೆಗೆ ಅಘೋರ ಅಖಾಡ್ ನ ಅಘೋರಿಗಳಿಂದ ಅಘೋರ ಭೈರವ ಹವನ್ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ ರಾತ್ರಿ 7ಗಂಟೆಗೆ ಅಷ್ಟಭೈರವ ಬಲಿ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ಕನಸುಗಳ ಪೆಟ್ಟಿಗೆ ವಿನೂತನ ಕಾರ್ಯಕ್ರಮ

Thumbnail
Posted On: 20 Nov 2024, 06:55 AM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬ್ರಹ್ಮಾವರ ಮಟಪಾಡಿ ಶ್ರೀ ವಿಜಯ ಬಾಲನಿಕೇತನ ಮಕ್ಕಳ ಆಶ್ರಮದಲ್ಲಿ ಕನಸಿನ ಪೆಟ್ಟಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಶನ್ ನ ಮುಖ್ಯ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ಹೋಂ ಡಾಕ್ಟರ ಫೌಂಡೇಶನ್ ನಡೆದುಬಂದ ಹಾದಿ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಕಾನ್ಸೆಪ್ಟ್ ಗಳ ಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು. ವೇದಿಕೆಯಲ್ಲಿ ಆಶ್ರಮದ ಅಧ್ಯಕ್ಷರಾದ ಗಿರಿಶ್ಚಂದ್ರ ಆಚಾರ್ಯ, ವಿಶ್ವನಾಥ್ ಶೆಟ್ಟಿ, ಜಯರಾಮ್ ನಾಯರಿ, ಮುದ್ದು ಜತ್ತನ್ನ ಪೂರ್ಣೇಶ್ ಶೆಟ್ಟಿ, ಬಂಗಾರಪ್ಪ ಡಾ. ಸುಮಾ ಶೆಟ್ಟಿ, ರಾಘವೇಂದ್ರ ಕವಾ೯ಲು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಕನಸುಗಳ ಪೆಟ್ಟಿಗೆಯಲ್ಲಿ ಬಂದ ವಸ್ತುಗಳನ್ನು ಮಕ್ಕಳಿಗೆ ನೀಡಲಾಯಿತು.

ಕಾಪು ಕೋಟೆ ಮನೆ ಹವಾಲ್ದಾರ್ ಸಂಜೀವ ಸೇರ್ವೇಗಾರ್ ನಿಧನ

Thumbnail
Posted On: 19 Nov 2024, 11:36 PM

ಕಾಪು : ಕೋಟೆ ಮನೆ ಹವಾಲ್ದಾರ್ ಸಂಜೀವ ಸೇರ್ವೇಗಾರ್ (92) ರವರು ಮಂಗಳವಾರ ವಿಧಿವಶರಾಗಿದ್ದಾರೆ. ಕಾಪು ಮಾರಿಯಮ್ಮನ ನಿರಂತರ ಸೇವಾಕರ್ತರಾಗಿದ್ದರು.

ಪಡುಬಿದ್ರಿ : ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಕೂಟ - ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡಕ್ಕೆ ಕಡಲ್ ಫಿಶ್ ಟ್ರೋಫಿ -2024

Thumbnail
Posted On: 19 Nov 2024, 09:33 PM

ಪಡುಬಿದ್ರಿ : ಕಡಲ್ ಫಿಶ್ ಕ್ರಿಕೆಟರ್ಸ್ ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ 3 ದಿನ ಕಾಲ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಕೂಟದಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡವು ಪಂದ್ಯ ಗೆದ್ದು ರೂ. 5 ಲಕ್ಷದ ಜೊತೆಗೆ ಕಡಲ್ ಟ್ರೋಫಿ, ವಿಷ್ಣುಮೂರ್ತಿ ಕರ್ನಿರೆ ತಂಡ ರನ್ನಸ್೯ ಆಗಿ ರೂ. 3 ಲಕ್ಷದ ಜೊತೆಗೆ ಕಡಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೊನೆಯ ದಿನ ನಡೆದ ಸಮಿಫೃೆನಲ್ ಪಂದ್ಯದಲ್ಲಿ ವಿಷ್ಣುಮೂರ್ತಿ ಕರ್ನಿರೆ ತಂಡ ಹೆಜಮಾಡಿ ದುರ್ಗ ಎಜಿಫ್ ತಂಡವನ್ನು ಸೋಲಿಸಿ ಫೃೆನಲ್ ಪ್ರವೇಶಿಸಿತು. ಬಹಳ ರೋಮಾಂಚಕಾರಿಯಾಗಿ ನಡೆದ ದ್ವಿತೀಯ ಸಮಿಫೃೆನಲ್ ನಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡ ಮತ್ತು ಪಂಚ್ಯಜನ್ಯಾ ಕೋಟ ತಂಡದ ವಿರುದ್ಧ ನಡೆದ ಪಂದ್ಯ ಟೃೆ ಗೊಂಡು ನಂತರ ನಡೆದ ಸೂಪರ್ ಓವರ್ ನಲ್ಲಿ ಪಂದ್ಯದಲ್ಲಿ ಪಂಚ್ಯಾಜನ್ಯ ತಂಡ ವನ್ನು ಮಣಿಸಿ ಇಝಾನ್ ಸ್ಪೋರ್ಟ್ಸ್ ಉಡುಪಿ ಫೈನಲ್ ಪ್ರವೇಶಿಸಿತು. ನಂತರ ನಡೆದ ಫೃೆನಲ್ ಹಣಾಹಣಿಯಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡ ವಿಷ್ಣುಮೂರ್ತಿ ಕರ್ನಿರೆ ತಂಡವನ್ನು ಮಣಿಸಿತು. ಫೃೆನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡದ ತರುಣ್ ಪಡುಬಿದ್ರಿ , ಉತ್ತಮ ದಾಂಡಿಗ ಪ್ರಶಸ್ತಿಯನ್ನು ದುರ್ಗ ‌ಎಜಿಎಫ್ ತಂಡದ ಇರ್ಫಾನ್ ಹೆಜಮಾಡಿ , ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಇಝಾನ್ ಸ್ಪೋರ್ಟ್ಸ್ ತಂಡದ ಇರ್ಪಾನ್ ಪಟೇಲ್ ಮಧ್ಯಪ್ರದೇಶ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಸುದರ್ಶನ್, ಬೆಸ್ಟ್ ಫಿಲ್ಡರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಪ್ರಸಿದ್ಧ್ ಅಚಾರ್ಯ, ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಜೀತು , ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನು ಫ್ರೆಂಡ್ಸ್ ಕಂಚಿನಡ್ಕ ತಂಡ ಪಡೆದು ಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅತ್ಲೆಟಿಕ್ ಕೀಡಾಪಟು ಅನುರಾಗ್ ಜಿ. ರವರನ್ನು ಸನ್ಮಾನಿಸಲಾಯಿತು. ಕಡಲ್ ಫಿಶ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಚೇತನ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಪ್ರಸಾದ್ ಕಾಂಚನ್, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಮೆಂಡನ್ , ಸಂಸ್ಥೆಯ ಗೌರವ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ , ಮುಂಬೃೆ ಉದ್ಯಮಿ ಜಿತೇಂದ್ರ ಜೆ. ಶೆಟ್ಚಿ , ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ಸುಧೀರ್ ಕುಮಾರ್, ಉದ್ಯಮಿಗಳಾದ ಸಂತೋಷ್ ಕುಮಾರ್ ಶೆಟ್ಟಿ , ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ನಂದಿಕೂರು ಎಮ್ ಇಲೆವನ್ ಇಂಡಸ್ಟೀಸ್ ಸೂಪರ್ವೃೆಸರ್ ಅಹಮದ್ ಕಭೀರ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಕರುಣಾಕರ್ ಪೂಜಾರಿ, ಉದ್ಯಮಿಗಳಾದ ಬಾಲಚಂದ್ರ ಶೆಟ್ಟಿ ಪುಣೆ ಎರ್ಮಾಳ್ ಪುಚ್ಚೊಟ್ಟು , ಪ್ರಭಾಕರ್ ಶೆಟ್ಟಿ ಕರ್ನಿರೆ, ಸಂಪತ್ ಶೆಟ್ಟಿ ಕರ್ನಿರೆ, ರಕ್ಷಿತ್ ಶೆಟ್ಟಿ ‌ಕರ್ನಿರೆ, ಮತ್ಸೋದ್ಯಮಿ ತಿಲಕ್ ರಾಜ್ ಮಲ್ಪೆ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರೇಮ ವಾಸುದೇವ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಕಡಲ್ ಫಿಶ್ ಸಂಸ‌್ಥೆಯ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಪಡುಬಿದ್ರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸದಸ್ಯರಾದ ಮುಬೀನಾ ಬೇಗಂ, ಸುನಂದಾ ದೇವಾಡಿಗ, ಮಹಮ್ಮದ್ ನಿಯಾಝ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿ , ಸಂತೋಷ್ ನಂಬಿಯಾರ್ ನಿರೂಪಿಸಿ , ವಂದಿಸಿದರು.

ಕಾಪು ಹೊಸ ಮಾರಿಗುಡಿ ದೇವಸ್ಥಾನ : ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ವತಿಯಿಂದ ಶಿಲಾಸೇವೆಯ ದೇಣಿಗೆ ಸಮರ್ಪಣೆ

Thumbnail
Posted On: 19 Nov 2024, 08:40 PM

ಕಾಪು : ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ವತಿಯಿಂದ ಶಿಲಾಸೇವೆಯ ದೇಣಿಗೆಯನ್ನು ಸಮರ್ಪಿಸಲಾಯಿತು. ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು. ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿಯವರು ನವದುರ್ಗಾ ಲೇಖನ ಯಜ್ಞದ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬ ಮೀನುಗಾರರ ಮನೆಯಲ್ಲೂ ನವದುರ್ಗಾ ಲೇಖನ ಬರೆಯುವ ಮೂಲಕ ಮನೆ ಮನದಲ್ಲೂ ಮಾರಿಯಮ್ಮ ನೆಲೆಯಾಗುವಂತೆ ಆಗಬೇಕು ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕುಟುಂಬ ಸಮೇತರಾಗಿ ನವದುರ್ಗಾ ಲೇಖನ ಬರೆಯಬೇಕೆಂದು ವಿನಂತಿಸಿದರು. ಈ ಸಂದರ್ಭ ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷರಾದ ನಾಗರಾಜ್ ಸುವರ್ಣ ಮತ್ತು ಪದಾಧಿಕಾರಿಗಳು ಹಾಗೂ ಪರ್ಸಿನ್ ಬೋಟ್ ಮಾಲಕರು ಮತ್ತು ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ.ಶೆಟ್ಟಿ ಬಾಲಾಜಿ , ನವದುರ್ಗಾ ಲೇಖನ ಯಜ್ಞ ಸಮಿತಿಯ ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಮೋಹನ್ ಬಂಗೇರ, ಮಧುಕರ್ ಎಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕುಲಾಲ ಸಂಘ ಹೆಬ್ರಿ ತಾಲೂಕು : ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ

Thumbnail
Posted On: 19 Nov 2024, 08:32 PM

ಉಡುಪಿ : ಕುಲಾಲ ಸಂಘ (ರಿ.) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಹೆಬ್ರಿ ಚೈತನ್ಯ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಕೆ ಎ ಲಕ್ಷ್ಮಣ್ ಕುಲಾಲ್, ಯುವಕ ಯುವತಿಯರು ಸ್ವಂತ ಉದ್ಯೋಗದಿಂದ ಸ್ವಾವಲಂಬಿಯಾಗಿ ಸಮಾಜದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಹೇಳಿದರು. ಸನ್ಮಾನ/ ಪ್ರೋತ್ಸಾಹ ಧನ ವಿತರಣೆ : ಕುಂಬಾರಿಕೆ ಕುಲ ಕಸುಬುದಾರರಿಗೆ, ಕೃಷಿಕರಿಗೆ ಮತ್ತು ಸಾಧಕರು, ಸಂಘದ ಮಹಾಪೋಷಕರನ್ನು ಗೌರವದಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಗುತ್ತಿಗೆದಾರ ರಾಜೀವ ಕುಲಾಲ್, ಭೋಜ ಕುಲಾಲ್ ಬೆಳಂಜೆ, ಕಾಳು ಕುಲಾಲ್, ಪ್ರಭಾಕರ್ ಕುಲಾಲ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಮಾತನಾಡಿ ನಾವು ತಾಲೂಕಿನಾದ್ಯಂತ ಸಂಘಟನೆಯನ್ನು ವಿಸ್ತರಿಸಬೇಕು, ಕುಲಾಲ ಸಮಾಜದ ಸರ್ವರು‌ ತಾಲೂಕು ಸಂಘದ ಒಟ್ಟಿಗೆ ಇದ್ದು, ಎಲ್ಲರೂ ಕಾರ್ಯಾಪ್ರವೃತ್ತರಾಗಬೇಕೆಂದು ಹೇಳಿದರು. ಸಭೆಯಲ್ಲಿ ಕೆ ನಾರಾಯಣ್ ಕುಲಾಲ್, ವಿಠಲ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಸುಮಿತ್ರಾ ಕುಲಾಲ್ ಬೆಪ್ದೆ, ಪ್ರದಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್ ದರ್ಬುಜೆ ಉಪಸ್ಥಿತರಿದ್ದರು. ಅಣ್ಣಪ್ಪ ಕುಲಾಲ್ ಚಾರ ಸ್ವಾಗತಿಸಿದರು. ವಂದನಾ ಕುಲಾಲ್ ಚಾರ ನಿರೂಪಿಸಿದರು. ಸುನಂದ ಕುಲಾಲ್ ಮುಳ್ಳಾಗುಡ್ಡೆ ವಂದಿಸಿದರು.