Updated News From Kaup

ಉಡುಪಿ ಶಾಸಕರು ಶಾಸಕ ಸ್ಥಾನದ ಘನತೆಗೆ ತಕ್ಕಂತೆ ವರ್ತಿಸಿ, ಅಭಿವೃದ್ಧಿಯ ಕಡೆ ಗಮನಹರಿಸಲಿ : ಶರ್ಫುದ್ದಿನ್ ಶೇಖ್ ಮಜೂರು

Thumbnail
Posted On: 09 Nov 2024, 06:47 AM

ಕಾಪು : ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಾಸಕ ಸ್ಥಾನದ ಘನತೆಯನ್ನು ಮರೆತು ವರ್ತಿಸುತ್ತಿದ್ದಾರೆ. ಈ ವ್ಯಕ್ತಿ ಶಾಸಕರೋ ಅಥವಾ ಪುಡಿ ರೌಡಿಯೋ ಎಂಬ ಅನುಮಾನ ಮೂಡುತ್ತಿದೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅವ್ಯವಹಾರದ ಆರೋಪ ವ್ಯಾಪಕವಾಗಿ ಇವರ ಮೇಲಿದೆ ಎಂದು ಉಡುಪಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಶರ್ಫುದ್ದಿನ್ ಶೇಖ್ ಮಜೂರು ಹೇಳಿದ್ದಾರೆ. ಈ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆಯಲು ವಕ್ಫ್ ನೆಪವಾಗಿಸಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಶಾಸಕ ಸ್ಥಾನದ ಘನತೆಯನ್ನು ಮರೆತು ಮಾತನಾಡುತ್ತಿದ್ದಾರೆ. ನಿನ್ನೆ ಇವರೊಂದಿಗೆ ಬಹಳಷ್ಟು ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ವಕ್ಫ್ ವಿಚಾರದಲ್ಲಿ ಪ್ರತಿಭಟನೆಯ ನೆಪದಲ್ಲಿ ನುಗಿದ್ದಾರೆ. ವಕ್ಫ್ ಸಂಬಂಧವಾಗಿ ಅತಿಹೆಚ್ಚು ನೋಟಿಸ್ ಗಳನ್ನು ರೈತರಿಗೆ ನೀಡಿದ್ದು ಇವರ ಹಿಂದಿನ ಸರ್ಕಾರ. 2014ರಲ್ಲಿ ಬಿಜೆಪಿಯವರ ಕೇಂದ್ರ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ವಕ್ಫ್ ಭೂಮಿಯನ್ನು ತೆರವುಗೊಳಿಸುತ್ತೇವೆ ಎನ್ನುವ ವಾಗ್ದಾನವಿದೆ. 2012 ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅನ್ವರ್ ಮಾಣಿಪ್ಪಾಡಿ ವರದಿ ತರಿಸಿಕೊಂಡು ರಾಜ್ಯಾದ್ಯಂತ ರೈತರಿಗೆ ನೋಟಿಸ್ ಕೊಟ್ಟಿದೆ. ಇಷ್ಟೆಲ್ಲಾ ಇತಿಹಾಸ ಇದ್ದರೂ ಈಗ ರಾಜ್ಯ ಸರ್ಕಾರ ನೋಟಿಸ್ ಕೊಟ್ಟಿದೆ ಎಂದು ಕಂಡಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವ ಸರ್ಕಾರ ಹಲವು ಗ್ಯಾರಂಟಿಗಳನ್ನು ಘೋಷಿಸಿ ಜನಪ್ರಿಯತೆಯ ಉತ್ತುಂಗದಲ್ಲಿದೆ. ಹೀಗೆ ಗ್ಯಾರಂಟಿಗಳು ಬಡವರಿಗೆ ತಲುಪಿ ಅವರ ಬದುಕು ಹಸನಾದರೆ ಮತ್ತೆ ನಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಬಗೆದು ಈಗ ಸರ್ಕಾರದ ವಿರುದ್ಧ ವಕ್ಫ್ ನೋಟಿಸುಗಳನ್ನೇ ನೆಪವಾಗಿಸಿಕೊಂಡು ಡಿಸಿ ಕಚೇರಿಗೆ ನುಗ್ಗುವುದು, ರಸ್ತೆಯ ಮೇಲೆ ಪ್ರತಿಭಟನೆ ಮಾಡುವ ನಾಟಕಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಈ ನಾಟಕದ ಹಿಂದಿನ ಉದ್ದೇಶ ಮತ್ತು ಹುನ್ನಾರ ಅರ್ಥವಾಗಿದೆ. ಮೂರು ಉಪಚುನಾವಣೆಗಳು ಮತ್ತು ಮಹಾರಾಷ್ಟ್ರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂದಿನ ಅಲ್ಪಸಂಖ್ಯಾತರ ವಿರೋಧದ ರಾಜಕಾರಣ ಇದೆಂಬುದು ಸಾಮಾನ್ಯ ಜ್ಞಾನ ಇದೆ ಎಲ್ಲರಿಗೂ ತಿಳಿಯುತ್ತದೆ. ಬಿಜೆಪಿಯವರು ಇಂತಹ ನಾಟಕಗಳನ್ನು ಬಿಟ್ಟು ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಭಾರತದ ತಮ್ಮ ಆಡಳಿತ ಇರುವ ರಾಜ್ಯ ಸರ್ಕಾರಗಳಿಗೆ ಸಿದ್ದರಾಮಯ್ಯ ಸರ್ಕಾರದ ರೀತಿಯಲ್ಲಿ ಜನಕಲ್ಯಾಣ ಯೋಜನೆಯನ್ನು ಬುದ್ಧಿ ಬೆಳೆಸಿಕೊಳ್ಳಬೇಕಿದೆ. ಅದನ್ನು ಮಾಡುವ ಸಾಮರ್ಥ್ಯವಿಲ್ಲದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಜನರ ಗಮನವನ್ನು ಬೇರೆ ಕಡೆ ಸೆಳೆಯುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರ್ವ ರೋಟರಿ : ದೀಪಾವಳಿ ಸಂಭ್ರಮ - 2024

Thumbnail
Posted On: 08 Nov 2024, 07:22 AM

ಶಿರ್ವ : ಹಬ್ಬಗಳ ರಾಜ "ದೀಪಾವಳಿ" ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕ ಎಂದು ಅನಿವಾಸಿ ಭಾರತೀಯ, ಬಂಟಕಲ್ಲು ಹೇರೂರಿನ ದತ್ತಾತ್ರೇಯ ಪಾಟ್ಕರ್ ನುಡಿದರು. ಅವರು ಬುಧವಾರ ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ಏರ್ಪಡಿಸಿದ "ದೀಪಾವಳಿ ಸಂಭ್ರಮ-2024" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿ ಹಬ್ಬದ ಶುಭಾಶಯ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಶೂಭಾಶಂಸನೆಗೈದರು. ಸಹ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪರಿಚಯಿಸಿದರು. ಶ್ರೀನಿಧಿ, ಉಷಾ ಮರಾಠೆ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕರಾದ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜೂಡ್ ಡಿಸೋಜ ವಂದಿಸಿದರು. ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಮೈಕಲ್ ಮತಾಯಸ್ ಸಹಕರಿಸಿದರು. ಸಾಮೂಹಿಕವಾಗಿ ದೀಪ ಪ್ರಜ್ವಲನ, ರಘುಪತಿ ಐತಾಳ್ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.

ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು ವತಿಯಿಂದ ದೀಪಾವಳಿ ಸಂಭ್ರಮಾಚರಣೆ

Thumbnail
Posted On: 08 Nov 2024, 06:59 AM

ಬಂಟಕಲ್ಲು : ಹಬ್ಬಗಳು ಕೇವಲ ಆಡಂಬರದ ಹಬ್ಬವಾಗಿದೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಬ್ಬವಾಗಬೇಕು ಎಂದು 92ನೇ ಹೇರೂರು ವಿಕಾಸ ಸೇವಾ ಸಮಿತಿ ಅಧ್ಯಕ್ಷರಾದ ಮಾಧವ ಆಚಾರ್ಯರು ತಿಳಿಸಿದರು. ಅವರು ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು ವತಿಯಿಂದ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಹೇರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗಿರಿಜಾ ತನಿಯ ಪೂಜಾರಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ, ಅತಿಥಿಯಾಗಿ ಆಗಮಿಸಿದ ಮಾಧವಾಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಉಮೇಶ್ ಕುಲಾಲ್, ಕಾರ್ಯದರ್ಶಿ ಟೋನಿ ಮೋನಿಸ್ , ಕೋಶಾಧಿಕಾರಿ ಸದಾನಂದ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಿತಾ ಪಂಜಿಮಾರು, ವಿಜಯ ಧೀರಜ್ ನಿರ್ವಹಿಸಿದರು. ಕಾರ್ಯದರ್ಶಿ ವಂದಿಸಿದರು.

ಜೈ ತುಲುನಾಡ್ ಉಡುಪಿ ಘಟಕದ ಉದ್ಘಾಟನೆ

Thumbnail
Posted On: 07 Nov 2024, 10:49 PM

ಉಡುಪಿ : ತುಳುಲಿಪಿ ತುಳುಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಕಳೆದ 10 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ಜೈತುಲುನಾಡ್ (ರಿ.) ಇದರ ಉಡುಪಿ ಘಟಕದ ಉದ್ಘಾಟನಾ ಸಮಾರಂಭವು ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿರಿ ತುಳು ಚಾವಡಿ ಉಡುಪಿ ಇದರ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರ್, ಸಮಾಜದಲ್ಲಿ ಬೇರೆ ಭಾಷೆಗಳಿಗೆ ಆಡಳಿತಾತ್ಮಕ ರಕ್ಷಣೆ ಇದೆ. ಆದರೆ ತುಳುಭಾಷೆಗೆ ಆಡಳಿತಾತ್ಮಕ ರಕ್ಷಣೆ ಇಲ್ಲ. ಹಾಗಾಗಿ ತುಳುಭಾಷೆಯನ್ನು ರಕ್ಷಣೆಮಾಡಬೇಕಾದ ಅಗತ್ಯ ತುಳು ಸಂಘಟನೆಗಳಿಗಿದೆ ಆ ನಿಟ್ಟಿನಲ್ಲಿ ಜೈತುಲುನಾಡ್ (ರಿ.) ಸಂಘಟನೆ ತುಳುಭಾಷೆಗೆ ಕೊಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ರಾಜಕಾರಣಿಗಳು ವೇದಿಕೆಯಲ್ಲಿ ಮಾತ್ರ ತುಳುವಿನ ಬಗ್ಗೆ ಮಾತನಾಡುತ್ತಾರೆ ಆದರೆ ತುಳು ಭಾಷೆಯ ಏಳಿಗೆಗೆ ಯಾರೂ ಬಲವಾಗಿ ನಿಲ್ಲುವುದಿಲ್ಲ ಹಾಗಾಗಿ ತುಳು ಭಾಷೆ ತುಳುವರ ಬದುಕು ಹಿಂದುಳಿಯುತ್ತಿದೆ. ಆದರೆ ತುಳುಪರ ಸಂಘಟನೆಗಳು ತುಳುಭಾಷೆಗೆ ಗಟ್ಟಿಯಾದ ರಕ್ಷಣೆ ಕೊಟ್ಟ ಸಲುವಾಗಿ ತುಳುಭಾಷೆ ಉಳಿಯುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.)ಉಡುಪಿ ವಲಯದ ಅಧ್ಯಕ್ಷೆಯಾಗಿ ಸುಶೀಲ ಜಯಕರ್ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜೈ ತುಲುನಾಡ್ (ರಿ.) ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಪೂರ್ಣಿಮಾ ಬಂಟ್ವಾಳರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದಲ್ಲಿ ತುಳು ಭಾಷೆಗೆ ತುಳುಭಾಷಿಗರಿಂದಲೇ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿದರು. ತುಳುಭಾಷೆ ಹಾಗೂ ಲಿಪಿಯ ಉಳಿವಿಗಾಗಿ ಸಂಘಟನೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ವಲಯದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸುಮಂತ್ ಹೆಬ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವೇದಿಕೆಯಲ್ಲಿ ಉಡುಪಿಯ ಹಿರಿಯ ವಕೀಲರಾದ ರಮೇಶ್.ಎಲ್.ದೇವಾಡಿಗ, ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಯಶೋದ ಕೇಶವ್, ಜೈ ತುಲುನಾಡ್ (ರಿ.) ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸದಾಶಿವ ಮುದ್ರಾಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್.ಎನ್.ಎಸ್ ಕಟಪಾಡಿ ಉಪಸ್ಥಿತರಿದ್ದರು. ಉಡುಪಿ ವಲಯದ ಕಾರ್ಯದರ್ಶಿಯಾಗಿರುವ ಸಾಗರ್ ಬನ್ನಂಜೆ ಸ್ವಾಗತಿಸಿದರು. ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು. ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ಪ್ರಜ್ಞಾಶ್ರೀ ಎಮ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು

ಕಾಪು : ಕೊಪ್ಪಲಂಗಡಿಯಲ್ಲಿ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಚಾಲನೆ

Thumbnail
Posted On: 07 Nov 2024, 10:37 PM

ಕಾಪು : ಶ್ರೀ ಜನಾರ್ದನ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ವಾಸುದೇವ ಸ್ವಾಮಿ ಸೇವಾ ಭಜನಾ ಮಂಡಳಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ ಕೊಪ್ಪಲಂಗಡಿ ಇಲ್ಲಿ ಗುರುವಾರ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವವು ನ.7, ಗುರುವಾರದಿಂದ, ನ.10, ಆದಿತ್ಯವಾರದವರೆಗೆ ಜರಗಲಿದೆ. ನ.10, ಆದಿತ್ಯವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಪರಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ.

ಕಾಪು : ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ

Thumbnail
Posted On: 07 Nov 2024, 10:20 PM

ಕಾಪು : ಇಲ್ಲಿನ ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ನ.7 ರಂದು ಉರ್ದು ಶಾಲೆಯ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶಹನವಾಜ್ ಫಾಝಲೂದ್ದಿನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟದ ಪಥ ಸಂಚಲನದ ವಂದನ ಸ್ವೀಕಾರವನ್ನು ಮಹೇಶ್ ಬೆಳಪು ಅವರು ಸ್ವೀಕರಿಸಿ ಶುಭ ಹಾರೈಸಿದರು. ಸಭಾ ಅಧ್ಯಕ್ಷತೆಯನ್ನು ಮುಸ್ತಾಕ್ ಬೆಳಪು ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೌಲನಾ ಅಜಾದ್‌ ಕಾರ್ಕಳ ಶಾಲೆಯ ಶಿಕ್ಷಕರಾದ ಸಂತೋಷ್, ಜಮಾ ತೇ ಇಸ್ಲಾಂ ಹಿಂದ್ ಕಾಪು ಅಧ್ಯಕ್ಷರಾದ ಅನ್ವರ್ ಅಲಿ, ಕಾಪು ತಾಲ್ಲೂಕು ಕ್ರೀಡಾಧಿಕಾರಿ ರಿತೇಶ್‌ ಶೆಟ್ಟಿ, ಶಾಹಿದ್, ಫಾರೂಕ್, ರಾಜೇಂದ್ರ, ವೀಣಾ, ಖಾತುನ್ ಬಿ ಉಪಸ್ಥಿತರಿದ್ದರು. ನದಾ ಬಾನು ಸ್ವಾಗತಿ ಸಿದರು. ದಾಕ್ಷಾಯಣಿ ಶೆಟ್ಟಿ ವಂದಿಸಿದರು. ನೀಹಾ ನಿರೂಪಿಸಿದರು.

ಹೆಜಮಾಡಿ ಮೀನುಗಾರಿಕಾ ಬಂದರು ಕಾಮಗಾರಿ ಪೂರ್ಣಗೊಳಿಸಲು ಕಾಪು ಶಾಸಕರಿಂದ ಮನವಿ

Thumbnail
Posted On: 05 Nov 2024, 07:38 PM

ಕಾಪು : ತಾಲೂಕಿನ ಹೆಜಮಾಡಿ ಬಂದರಿಗೆ 2021-22 ಸಾಲಿನಲ್ಲಿ 180 ಕೋಟಿ ಮಂಜುರಾಗಿದ್ದು ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಮತ್ತು ಸುತ್ತಮುತ್ತಲಿನ ಮೀನುಗಾರರಿಗೆ ತೊಂದರೆ ಆಗುತ್ತಿದ್ದು ಮೀನುಗಾರಿಕಾ ದೋಣಿ ತಂಗುದಾಣಕ್ಕೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಹೆಜಮಾಡಿ ಬಂದರಿನ ಕಾಮಗಾರಿಯನ್ನು ಕೂಡಲೆ ಕೈಗೊಳ್ಳಬೇಕೆಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮೀನುಗಾರಿಕಾ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭ ಮನವಿ‌ ಸ್ವೀಕರಿಸಿದ ಮೀನುಗಾರಿಕಾ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರು ಕೂಡಲೇ ಕಾಮಗಾರಿಗೆಯನ್ನು ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ನವೆಂಬರ್ 24 : ಉದ್ಯಾವರದಲ್ಲಿ ಎಚ್ ಪಿ ಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ

Thumbnail
Posted On: 05 Nov 2024, 07:22 PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317Cಯ ಲಯನ್ ದಂಪತಿಗಳಿಗೆ ವಿನೂತನ ರೀತಿಯ ಆದರ್ಶ ದಂಪತಿ ಸ್ಪರ್ಧೆ ಉದ್ಯಾವರ ಚರ್ಚ್ ವಠಾರದಲ್ಲಿ ನವಂಬರ್ 24 ಆದಿತ್ಯವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯ ಪೋಸ್ಟರ್ ಅನ್ನು ಎಚ್'ಪಿಆರ್ ಫಿಲಂಸ್ ಮುಖ್ಯಸ್ಥ ಮತ್ತು ಎಲ್'ಸಿಯಫ್ ಕೋಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಶೇಕ್ ವಹಿದ್ ಉಡುಪಿ, ಕಾಪು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಮತ್ತು ಪತ್ರಕರ್ತ ರಾಕೇಶ್ ಕುಂಜೂರು, ಪ್ರಾಂತೀಯ ಅಧ್ಯಕ್ಷ ಲಯನ್ ಮೆಲ್ವಿನ್ ಆರನ್ನ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ ಜಿಲ್ಲೆ 317Cಯಲ್ಲಿ 115 ಕ್ಲಬ್ ಗಳಿದ್ದು, ಆದರ್ಶ ದಂಪತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದೆ. ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಈ ಸ್ಪರ್ಧೆಯನ್ನು ವಿನೂತನ ರೀತಿಯಲ್ಲಿ ಹಮ್ಮಿಕೊಂಡಿದ್ದು, ಮೊದಲು ನೋಂದಾಯಿಸಿದ 25 ಲಯನ್ಸ್ ದಂಪತಿಗಳಿಗೆ ಮಾತ್ರ ಅವಕಾಶ ಇದೆ. ಮೂರು ಸುತ್ತುಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯು ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುದೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊoದಿಗೆ ನಡೆಯಲಿದೆ. ಶಿಕ್ಷಕರು ಮತ್ತು ರಾಷ್ಟ್ರೀಯ ಜೆಸಿ ತರಬೇತುದಾರರಾಗಿರುವ ಜೆ ಸಿ ರಾಜೇಂದ್ರ ಭಟ್ ಕಾರ್ಯಕ್ರಮದ ನಿರೂಪಣೆ ನಡೆಸಲಿದ್ದು, ವಿಶೇಷ ಆಕರ್ಷಣೆಯಾಗಿ ತುಳುರಂಗಭೂಮಿಯ ಪ್ರಬುದ್ಧ ಹಾಸ್ಯ ಮತ್ತು ಚಲನಚಿತ್ರ ನಟರಾದ ಅರವಿಂದ ಬೋಳಾರ್, ದಾಯ್ಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ, ಗಿನ್ನೆಸ್ ದಾಖಲೆ ಖ್ಯಾತಿಯ ಯೋಗರತ್ನ ತನುಶ್ರೀ ಪಿತ್ರೋಡಿ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರ ತಂಡ ಆಗಮಿಸಲಿದ್ದಾರೆ. ಪ್ರತಿಷ್ಠಿತ ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯು ಉಚಿತ ಪ್ರವೇಶವಾಗಿದ್ದು, ಪ್ರಥಮ ಬಹುಮಾನ ರೂ. 15,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ತೃತೀಯ ಬಹುಮಾನ 7.5 ಸಾವಿರ ರೂ. ವೆಚ್ಚದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ಫೈನಲ್ ಸ್ಪರ್ಧಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ವೋಚರ್ ಲಭಿಸಲಿದೆ. ಒಂದು ಕ್ಲಬ್ ನಿಂದ ಒಂದು ದಂಪತಿಗೆ ಮಾತ್ರ ಅವಕಾಶವಿದ್ದು, ನವೆಂಬರ್ 10 ಹೆಸರು ನೋಂದಾಯಿಸಲು ಕೊನೆಯ ದಿನಾಂಕ. ಕಾರ್ಯಕ್ರಮದ ಸಂಚಾಲಕ ಲಯನ್ ಸ್ಟೀವನ್ ಕುಲಾಸೊ ಇವರ ಮೊಬೈಲ್ ಸಂಖ್ಯೆ 9901701381 ಗೆ ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಬಹುದಾಗಿದೆ.

ಕಾಪು ಪ್ರೆಸ್ ಕ್ಲಬ್‌ನಲ್ಲಿ ದೀಪಾವಳಿ ಸಂಭ್ರಮ

Thumbnail
Posted On: 05 Nov 2024, 07:09 PM

ಕಾಪು : ದೀಪದ ಬೆಳಕು ಎಲ್ಲೆಡೆ ಪಸರಿಸುವಂತೆ ಪತ್ರಕರ್ತರು ಸುದ್ದಿಯ ಮೂಲಕ ಜ್ಞಾನದ ಅರಿವನ್ನು ಸಮಾಜಕ್ಕೆ ಪಸರಿಸುತ್ತಾರೆ. ಸುದ್ದಿ ಸಮಾಚಾರಗಳು ಜನರನ್ನು ಜಾಗೃತರನ್ನಾಗಿಸಿದೆ ಎಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ಕಾಪು ತಾಲೂಕಿನ ಪತ್ರಕರ್ತರು ಒಗ್ಗಟ್ಟಾಗಿ ನಡೆಸುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗುವಂತದ್ದಾಗಿದೆ ಎಂದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಮತ್ತು ಬಿಕ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ನವೀನ್ ಎನ್. ಶೆಟ್ಟಿ, ಡಾ. ಮನೋಜ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಂತೋಷ್ ನಾಯ್ಕ್ ವಂದಿಸಿದರು. ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ನ. 8 : ಕಾಪು ದಂಡತೀರ್ಥ ಪಿಯು ಕಾಲೇಜಿನ ರಜತ ಮಹೋತ್ಸವ

Thumbnail
Posted On: 05 Nov 2024, 06:49 PM

ಕಾಪು : ಕಾಪು ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆ ಸಂಚಾಲಿತ ದಂಡತೀರ್ಥ ಪಿಯು ಕಾಲೇಜಿನ  ರಜತ ಮಹೋತ್ಸವ ನವಂಬರ್ 8 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಡಾ. ಕೆ ಪ್ರಶಾಂತ್ ಶೆಟ್ಟಿ ಹೇಳಿದರು. ಅವರು ಮಂಗಳವಾರ ಉಳಿಯಾರಗೋಳಿ ದಂಡ ತೀರ್ಥ ವಿದ್ಯಾ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು. 1999ರಲ್ಲಿ ದಂಡತೀರ್ಥ ಪಿಯು ಕಾಲೇಜು ಪ್ರಾರಂಭಗೊಂಡಿದ್ದು, ನ.8 ರಂದು ರಜತ ಮಹೋತ್ಸವ ಆಚರಿಸುತ್ತಿದೆ. ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಲಿದ್ದು, ಎಮ್ ಆರ್ ಜಿ ಗ್ರೂಪ್ ನ ಅಧ್ಯಕ್ಷರಾಗಿರುವ ಡಾ. ಕೆ ಪ್ರಕಾಶ್ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಡಾ. ಎಮ್ ಶಾಂತಾರಾಮ್ ಶೆಟ್ಟಿ- ಪ್ರೊ ಚಾನ್ಸಲರ್ ನಿಟ್ಟೆ ಯುನಿವರ್ಸಿಟಿ, ಮಣಿಪಾಲ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ಎಚ್‌ ಎಸ್ ಬಲ್ಲಾಳ್ ಪುತ್ಥಳಿ ಅನಾವರಣ ಮಾಡಲಿದ್ದು, ಎಂಡಿ ಮಲ್ಟಿಟೆಕ್ ಗ್ರೂಪ್ ಮಸ್ಕತ್ ನ ಸಂಸ್ಥಾಪಕ ದಿವಾಕರ ಶೆಟ್ಟಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಹಮ್ಮದ್ ಅಸ್ಲಾಂ ಖಾಝಿ, ಚಂದ್ರಶೇಖರ ಶೆಟ್ಟಿ,ಅಶೋಕ್‌ ಹೆಗ್ಡೆ, ಮಾರುತಿ, ಕಾಪು ದಿವಾಕರ ಶೆಟ್ಟಿ, ಕೆ ವಾಸುದೇವ ಶೆಟ್ಟಿ, ಮನೋಹರ ಎಸ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ದಿವಂಗತ ಡಾ .ಪ್ರಭಾಕರ್ ಶೆಟ್ಟಿ ಅವರ ಪುತ್ಥಲಿ ಅನಾವರಣ, ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ವಿದ್ಯಾರ್ಥಿವೇತನ ಸಂಗ್ರಹದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ಗೌರವ ಸಲಹೆಗಾರ ಅಲ್ಬನ್‌ ರಾಡ್ರಿಗಸ್‌, ಪ್ರಾಂಶುಪಾಲ ನೀಲಾನಂದ ನಾಯ್ಕ್‌, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್‌,  ಶಿವಣ್ಣ ಬಾಯರಿ ಉಪಸ್ಥಿತರಿದ್ದರು.