Updated News From Kaup
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯಾರಿಗೆ ಅಭಿನಂದನೆ
Posted On: 12 Nov 2024, 06:19 PM
ಕಾಪು : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯಾ ಅವರನ್ನು ಮಂಗಳವಾರ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಸಮ್ಮಾನಿಸಿ, ಗೌರವಿಸಲಾಯಿತು. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶುಭಾಶಂಸನೆಗೈದರು. ಅಭಿನಂದನೆ ಸ್ವೀಕರಿಸಿದ ವೇ| ಮೂ| ಶ್ರೀನಿವಾಸ ತಂತ್ರಿ ಮಾತನಾಡಿದರು. ಪುರೋಹಿತ್ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಅಭಿನಂದನಾ ಭಾಷಣ ಮಾಡಿದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಕೋಶಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ. ರವಿಕಿರಣ್, ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಉದ್ಯಮಿಗಳಾದ ನೈಮಾಡಿ ನಾರಾಯಣ್ ಶೆಟ್ಟಿ, ಲಕ್ಷ್ಮೀಶ ತಂತ್ರಿ ಕಲ್ಯ, ಪ್ರಮುಖರಾದ ಬೀನಾ ವಿ. ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ದೇಗುಲದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಲೆ ತುಲು ಲಿಪಿ ಕಲ್ಪುಗ - ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನೆ
Posted On: 12 Nov 2024, 10:53 AM
ಉಡುಪಿ : ಜೈ ತುಲುನಾಡ್ (ರಿ.) ಉಡುಪಿ ಘಟಕ ಹಾಗೂ ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು ಇದರ ಜಂಟಿ ಆಶ್ರಯದಲ್ಲಿ 'ಬಲೆ ತುಲುಲಿಪಿ ಕಲ್ಪುಗ' ತುಳು ಲಿಪಿ ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಡಾ| ಆಕಾಶರಾಜ್ ಜೈನ್ ಉದ್ಘಾಟಿಸಿ ಮಾತನಾಡಿ, ತುಳು ಭಾಷೆಯು ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಭಾಷೆ. ಸಂಸ್ಥೆಯು ಇಲ್ಲಿಯವರೆಗೆ ಸುಮಾರು 30000ಕ್ಕಿಂತ ಹೆಚ್ಚು ಜನರಿಗೆ ತುಳು ಲಿಪಿಯನ್ನ ಉಚಿತವಾಗಿ ಕಲಿಸಲಾಗಿದೆ. ಈ ಕ್ರಾಂತಿ ಎಲ್ಲಿಯ ತನಕ ಮುಟ್ಟಿದೆ ಎಂದರೆ ಇಂದಿನ ರಾಜಕಾರಣಿಗಳು ಮತದಾನದ ಸಂದರ್ಭದಲ್ಲಿ ತುಳು ಶಾಲು ಧರಿಸಿ, ತುಳು ಲಿಪಿಯನ್ನ ಪ್ರಚಾರದಲ್ಲಿ ಬಳಸಿ ತುಳುಭಾಷೆಯಲ್ಲಿಯೇ ಮತ ಯಾಚಿಸುವಂತಾಗಿದೆ. ಇದಕ್ಕೆ ಮೂಲ ಕಾರಣ ಜೈತುಲುನಾಡ್(ರಿ.) ಸಂಸ್ಥೆಯ ಉತ್ಸಾಹಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದಂತಹ ಮಹತ್ತರ ಬದಲಾವಣೆ. ಮುಂದೊಂದು ದಿನ ತುಳುನಾಡಿನ ಜನರೇ ನಿಮಗೆ ಮಾತೃಭಾಷೆ ತುಳುಲಿಪಿಯ ಬಗ್ಗೆ ತಿಳಿದಿಲ್ಲವೇ ಎಂದು ತಮ್ಮವರಲ್ಲಿ ಕೇಳುವ ಕಾಲ ಬರಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ, ಜೈ ತುಲುನಾಡ್ (ರಿ.) ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ತುಳು ಲಿಪಿಯನ್ನು ತುಳುನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಶಿಕ್ಷಣ ಕ್ರಾಂತಿಯನ್ನೇ ಪ್ರಾರಂಭಿಸಿದ್ದಾರೆ. ಅವರ ಸಹಕಾರದಿಂದ ಇಂದು ಎರಡನೇ ಬಾರಿಗೆ ತುಳು ಲಿಪಿ ಕಲಿಕಾ ತರಬೇತಿ ಕಾರ್ಯಾಗಾರವನ್ನು ಈ ಶಾಲೆಯಲ್ಲಿ ನಡೆಸುವಂತಾಯಿತು. ಅವರ ಈ ಕಾರ್ಯಕ್ಕೆ ಚಿರರುಣಿಯಾಗಿದ್ದೇನೆ ಹಾಗೂ ತುಳುವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯಲ್ಲಿ ಮಾತನಾಡಿಕೊಂಡು ತಮ್ಮವರನ್ನ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇದು ಅವರ ಮಣ್ಣಿನ ಗುಣ ಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದಂತಹ ಜೈ ತುಲುನಾಡ್ (ರಿ.) ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜಾ ತಾರಿಪಾಡಿಗುತ್ತು ತುಳುಲಿಪಿ ಕಲಿಕೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ರಾಧಾಕೃಷ್ಣ ಪೈ, ಶಂಕರನಾರಾಯಣ ಪ್ರತಿಷ್ಠಾನ (ರಿ) ಕೊಡವೂರು ಇದರ ಅಧ್ಯಕ್ಷರಾದ ಟಿ. ರಾಘವೇಂದ್ರ ರಾವ್, ಸುಮನಸಾ ಕೊಡವೂರು (ರಿ.)ಇದರ ಅಧ್ಯಕ್ಷರಾದ ಪ್ರಕಾಶ್.ಜಿ ಕೊಡವೂರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕೊಡವೂರು, ಯುವಕ ಸಂಘ (ರಿ.) ಕೊಡವೂರು ಇದರ ಅಧ್ಯಕ್ಷರಾದ ದೀಪಕ್ ಕೊಡವೂರು, ಹಳೆ ವಿದ್ಯಾರ್ಥಿ, ಯುವಕ ಸಂಘದ ಕ್ರೀಡಾ ಕಾರ್ಯದರ್ಶಿ ಅಶೋಕ್ ಶೆಟ್ಟಿಗಾರ್, ತುಳುಲಿಪಿ ಶಿಕ್ಷಕರಾದ ಸ್ವಾತಿ ಸುವರ್ಣ, ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶರತ್ ರಾಜ್, ಉಡುಪಿ ಘಟಕದ ಉಪಾಧ್ಯಕ್ಷರಾದ ಕಿರಣ್ ಒಡಿಪು, ಕೋಶಾಧಿಕಾರಿಯಾದ ಸುಪ್ರೀತಾ ಕೊಡವೂರು, ಉಡುಪಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಗೀತ ಮಣಿಪಾಲ್, ಸದಸ್ಯರಾದ ಯೋಗಿನಿ ಬೈಲೂರು ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್ ಎನ್.ಎಸ್ ಸ್ವಾಗತಿಸಿದರು. ಜೈ ತುಲುನಾಡ್ (ರಿ.) ಉಡುಪಿ ಘಟಕದ ಕಾರ್ಯದರ್ಶಿಯಾದ ಸಾಗರ್ ಬನ್ನಂಜೆ ಪ್ರಸ್ತಾವನೆಗೈದರು. ಜೈ ತುಲುನಾಡ್(ರಿ.) ಉಡುಪಿ ಘಟಕದ ಸದಸ್ಯರಾದ ಶಿಲ್ಪಾ ಕೇಶವ್ ಕೊಡವೂರು ಕಾರ್ಯಕ್ರಮವನ್ನ ನಿರೂಪಿಸಿದರು. ಜೈ ತುಲುನಾಡ್ (ರಿ) ಇದರ ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಅನುದಾನ ಹಸ್ತಾಂತರ
Posted On: 11 Nov 2024, 09:08 PM
ಕಾಪು : ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಕ್ಕೆ ಮೂರು ಲಕ್ಷದ ಅನುದಾನ ಮಂಜೂರುಗೊಂಡಿದ್ದು ಡಿ ಡಿ ಯನ್ನು ದೇವಸ್ಥಾನ ಸಮಿತಿ ಅವರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಅಮಿನ್, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ವಳದೂರು, ದೇವಸ್ಥಾನದ ಆಡಳಿತ ಸಮಿತಿಯ ಪದ್ಮನಾಭ ಶ್ಯಾನುಭೋಗ, ನಾಗಭೂಷಣ್ ರಾವ್, ರವಿರಾಜ ಶೆಟ್ಟಿ, ಶ್ರೀಧರ್ ಶೆಟ್ಟಿಗಾರ್, ನಿರ್ಮಲ್ ಕುಮಾರ್ ಹೆಗ್ಡೆ, ಕುಮಾರಿ ಪ್ರಜ್ಞ ಮಾರ್ಪಳ್ಳಿ, ಗೋಪಾಲ್ ನಾಯಕ್, ಜನಜಾಗೃತಿ ವೇದಿಕೆಯ ಸದಸ್ಯರಾದ ಜನಾರ್ಧನ್ ಆಚಾರ್ಯ ಕಳತ್ತೂರು, ಪಂಚಾಯತ್ ಸದಸ್ಯರಾದ ಭಾಸ್ಕರ, ಶರ್ಮಿಳ ಆಚಾರ್ಯ, ಮಜೂರು ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನಾಪತ್ತೆಯಾದ ವ್ಯಕ್ತಿಯ ಮೃತದೇಹ ಎಲ್ಲೂರು ಇರಂದಾಡಿ ಹಾಡಿಯಲ್ಲಿ ಪತ್ತೆ
Posted On: 11 Nov 2024, 07:32 PM
ಪಡುಬಿದ್ರಿ : ನಾಪತ್ತೆಯಾಗಿದ್ದ ಕಟಪಾಡಿ ನಿವಾಸಿಯೋರ್ವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಎಲ್ಲೂರು ಗ್ರಾಮದ ಇರಂದಾಡಿಯ ಹಾಡಿಯೊಂದರಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದೆ. ಹಾಡಿಯಲ್ಲಿ ತಲೆಬುರುಡೆ ಹಾಗೂ ಸೊಂಟದ ಭಾಗಗಳು ಇರುವುದರ ಬಗ್ಗೆ ಸ್ಥಳಿಯರು ಪೋಲಿಸರಿಗೆ ಕರೆಮಾಡಿ ತಿಳಿಸಿದ್ದು, ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸುನೀಲ್ ಕುಮಾರ್ (54) ಎಂಬುವವರ ಮೃತದೇಹದ ಇದಾಗಿದ್ದು, ಘಟನಾ ಸ್ಥಳದಲ್ಲಿ ಒಂದು ತಲೆ ಬುರುಡೆ, ಸೊಂಟದ ಭಾಗ, ಕಪ್ಪು ಪ್ಯಾಂಟ್ ಮತ್ತು ಎದೆಯ ಭಾಗದಲ್ಲಿ ಟೀ-ಶರ್ಟ್ ಧರಿಸಿದ ರೀತಿಯಲ್ಲಿತ್ತು. ಸುನಿಲ್ ಕುಮಾರ್ ಮನೆಯವರು ಶವದ ಮೈಮೇಲಿದ್ದ ಬಟ್ಟೆಗಳ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಮನೆಗೂ ಬಾರದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಶೆಟ್ಟಿಯವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳತ ಸ್ಥಿಯಲ್ಲಿದ್ದ ಮೃತದೇಹವನ್ನು ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ಆಂಬುಲೆನ್ಸ್ ಚಾಲಕ, ನಾಗರಾಜ್ ಎಚ್. ಕೆ.ರವರು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸುವಲ್ಲಿ ಸಹಕರಿಸಿದ್ದರು. ಸುನಿಲ್ ಕುಮಾರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕಾಪು : ವೀರ ವನಿತೆ ಒನಕೆ ಓಬವ್ವ ದಿನಾಚರಣೆ
Posted On: 11 Nov 2024, 06:03 PM
ಕಾಪು : ಒನಕೆ ಓಬವ್ವ ತಮ್ಮ ಅಸಾಧಾರಣ ಸಮಯ ಪ್ರಜ್ಞೆ, ಧೈರ್ಯ, ದೇಶಪ್ರೇಮಗಳ ಮೂಲಕ ಸಬಲ ನಾರೀಶಕ್ತಿ ಪ್ರತೀಕವಾಗಿದ್ದು ನಾವೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಕರೆ ನೀಡಿದರು. ಅವರು ಸೋಮವಾರ ತಹಶಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಒನಕೆ ಓಬವ್ವ ದಿನಾಚರಣೆಯಲ್ಲಿ ಮಾತನಾಡಿದರು. ವೀರವನಿತೆ ಒನಕೆ ಓಬವ್ವರ ಆದರ್ಶಗಳು ನಮ್ಮ ಬಾಳಿನ ಬೆಳಕು. ಆಕೆ ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಉಪತಹಶೀಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೆಕಾರ್, ದೇವಕಿ, ಸಿಬ್ಬಂದಿ ಹಾಜರಿದ್ದರು. ಸತೀಶ್ ರವರು ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರಿನಲ್ಲಿ ನ.17ರಂದು ಆಯೋಜಿಸಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲು ಮನವಿ
Posted On: 11 Nov 2024, 06:51 AM
ಕಾಪು : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಲಾದ ನವದುರ್ಗಾ ಲೇಖನ ಯಜ್ಞದಲ್ಲಿ ಬೆಂಗಳೂರಿನ ಜನತೆ ಪಾಲ್ಗೊಳ್ಳುವ ದೃಷ್ಟಿಯಿಂದ ನ.17 ರಂದು ಬೆಂಗಳೂರಿನ ಗಾಯತ್ರಿ ವಿಹಾರ, ಗೇಟ್ ನಂ 4, ಪ್ಯಾಲೇಸ್ ಗ್ರೌಂಡ್ ಇಲ್ಲಿ ಹಮ್ಮಿಕೊಂಡಿರುವ ವಾಗೀಶ್ವರಿ ಪೂಜೆಯ ಮೂಲಕ ನವದುರ್ಗಾ ಲೇಖನವನ್ನು ಬರೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನವದುರ್ಗಾ ಲೇಖನ ಯಜ್ಞ ಬರೆದು ಕಾಪು ಅಮ್ಮನ ಕೃಪೆಗೆ ಪಾತ್ರರಾಗುವಂತೆ ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ ರಘುಪತಿ ಭಟ್ ಮನವಿ ಮಾಡಿದರು. ಅವರು ಕರ್ನಾಟಕ ಕರಾವಳಿ ಮಿತ್ರ ಮಂಡಳಿ ಹಾವನೂರು ಬಡಾವಣೆ, ನಾಗಸಂದ್ರ ಬೆಂಗಳೂರು ಇವರು ಬೆಂಗಳೂರಿನಲ್ಲಿ ರವಿವಾರ ಆಯೋಜಿಸಿದ ಕ್ರೀಡಾಕೂಟದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ- ಬೆಂಗಳೂರು ಸಮಿತಿ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿಗಳಾದ ವಿಜಯ್ ಶೆಟ್ಟಿ, ನಾಗರಾಜ್ ರಾವ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಲಿಮಾರುವಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
Posted On: 10 Nov 2024, 04:41 PM
ಪಲಿಮಾರು : ಹೊಯ್ಗೆ ಫ್ರೆಂಡ್ಸ್ ಹೊಯ್ಗೆ ಪಲಿಮಾರು, ಶ್ರೀದೇವಿ ಫ್ರೇಂಡ್ಸ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಶ್ರೀ ಗಣೇಶ ಮಂಟಪ ಪಲಿಮಾರಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನ ಇದರ ಪ್ರಧಾನ ಅರ್ಚಕರರಾದ ಶ್ರೀನಿವಾಸ ಉಡುಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೊಯ್ಗೆ ಫ್ರೇಂಡ್ಸ್ ಹಾಗೂ ಶ್ರಿದೇವಿ ಫ್ರೆಂಡ್ಸ್ ಕಳೆದ ಏಳು ವರ್ಷಗಳಿಂದ ರಕ್ತದಾನದಂತಹ ಮಹತ್ಕಾರ್ಯ ಆಯೋಜಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಕ್ತದ ಆಪತ್ಬಾಂದವ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ ಪೈ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಪ್ರಬಂಧಕರು, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಪ್ರಬಂಧಕ ಕಿರಣ್ ಶೆಟ್ಟಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದ ವೈದ್ಯ ಡಾ.ಲಿಂಗೇಶ್, ಹೊಯ್ಗೆ ಫ್ರೇಂಡ್ಸ್ ಪಲಿಮಾರು ಅಧ್ಯಕ್ಷ ರಿತೇಶ್ ದೇವಾಡಿಗ, ಹರೀಶ್ ಪೂಜಾರಿ, ಶ್ರೀದೇವಿ ಫ್ರೆಂಡ್ಸ್ ಅವರಾಲು ಮಟ್ಟು ಅಧ್ಯಕ್ಷ ಹರೀಶ್ ಪೂಜಾರಿ, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯ ಶಿವರಾಂ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಾಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿದರು. ಸತೀಶ್ ಪಲಿಮಾರು ವಂದಿಸಿದರು.
ಡಿ. 12 : ದಿ. ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ಸ್ಮರಣಾರ್ಥ ಕಾಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ
Posted On: 09 Nov 2024, 06:56 AM
ಕಾಪು : ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಇವರ ನೇತೃತ್ವದಲ್ಲಿ ಡಿಸೆಂಬರ್ 12 ರಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಸಮಾಜರತ್ನ ದಿ. ಕೆ. ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ. ವಸುಂದರಾ ಶೆಟ್ಟಿ ಸ್ಮರಣಾರ್ಥ ಅವರ ಕುಟುಂಬಿಕರ ಹಾಗೂ ಅವರ ಸರ್ವ ಧರ್ಮಗಳ ಅಭಿಮಾನಿ ಬಂಧುಗಳ ಸಹಕಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ ಮಜೂರು ಸರ್ಕಲ್ ಬಳಿಯ ಕೆ. ಲೀಲಾಧರ ಶೆಟ್ಟಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ನಂತರ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭಾ ಕಾರ್ಯಕ್ರಮ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲ್ಲಿದ್ದು, ಕಾಪು ಪುರಸಭೆಯ ಕಾರ್ಮಿಕರು, ಚಾಲಕರು ಒಟ್ಟು 38 ಜನರಿಗೆ ಸನ್ಮಾನ, ಸಮಾಜ ಸೇವಕ ದೆಂದೂರು ಅಶೋಕ್ ಶೆಟ್ಟಿಯವರಿಗೆ ಸನ್ಮಾನ ಸಭಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಾಜ ಸೇವಕ ಸೂರಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಶಾಸಕರು ಶಾಸಕ ಸ್ಥಾನದ ಘನತೆಗೆ ತಕ್ಕಂತೆ ವರ್ತಿಸಿ, ಅಭಿವೃದ್ಧಿಯ ಕಡೆ ಗಮನಹರಿಸಲಿ : ಶರ್ಫುದ್ದಿನ್ ಶೇಖ್ ಮಜೂರು
Posted On: 09 Nov 2024, 06:47 AM
ಕಾಪು : ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಾಸಕ ಸ್ಥಾನದ ಘನತೆಯನ್ನು ಮರೆತು ವರ್ತಿಸುತ್ತಿದ್ದಾರೆ. ಈ ವ್ಯಕ್ತಿ ಶಾಸಕರೋ ಅಥವಾ ಪುಡಿ ರೌಡಿಯೋ ಎಂಬ ಅನುಮಾನ ಮೂಡುತ್ತಿದೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅವ್ಯವಹಾರದ ಆರೋಪ ವ್ಯಾಪಕವಾಗಿ ಇವರ ಮೇಲಿದೆ ಎಂದು ಉಡುಪಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಶರ್ಫುದ್ದಿನ್ ಶೇಖ್ ಮಜೂರು ಹೇಳಿದ್ದಾರೆ. ಈ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆಯಲು ವಕ್ಫ್ ನೆಪವಾಗಿಸಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಶಾಸಕ ಸ್ಥಾನದ ಘನತೆಯನ್ನು ಮರೆತು ಮಾತನಾಡುತ್ತಿದ್ದಾರೆ. ನಿನ್ನೆ ಇವರೊಂದಿಗೆ ಬಹಳಷ್ಟು ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ವಕ್ಫ್ ವಿಚಾರದಲ್ಲಿ ಪ್ರತಿಭಟನೆಯ ನೆಪದಲ್ಲಿ ನುಗಿದ್ದಾರೆ. ವಕ್ಫ್ ಸಂಬಂಧವಾಗಿ ಅತಿಹೆಚ್ಚು ನೋಟಿಸ್ ಗಳನ್ನು ರೈತರಿಗೆ ನೀಡಿದ್ದು ಇವರ ಹಿಂದಿನ ಸರ್ಕಾರ. 2014ರಲ್ಲಿ ಬಿಜೆಪಿಯವರ ಕೇಂದ್ರ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ವಕ್ಫ್ ಭೂಮಿಯನ್ನು ತೆರವುಗೊಳಿಸುತ್ತೇವೆ ಎನ್ನುವ ವಾಗ್ದಾನವಿದೆ. 2012 ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅನ್ವರ್ ಮಾಣಿಪ್ಪಾಡಿ ವರದಿ ತರಿಸಿಕೊಂಡು ರಾಜ್ಯಾದ್ಯಂತ ರೈತರಿಗೆ ನೋಟಿಸ್ ಕೊಟ್ಟಿದೆ. ಇಷ್ಟೆಲ್ಲಾ ಇತಿಹಾಸ ಇದ್ದರೂ ಈಗ ರಾಜ್ಯ ಸರ್ಕಾರ ನೋಟಿಸ್ ಕೊಟ್ಟಿದೆ ಎಂದು ಕಂಡಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವ ಸರ್ಕಾರ ಹಲವು ಗ್ಯಾರಂಟಿಗಳನ್ನು ಘೋಷಿಸಿ ಜನಪ್ರಿಯತೆಯ ಉತ್ತುಂಗದಲ್ಲಿದೆ. ಹೀಗೆ ಗ್ಯಾರಂಟಿಗಳು ಬಡವರಿಗೆ ತಲುಪಿ ಅವರ ಬದುಕು ಹಸನಾದರೆ ಮತ್ತೆ ನಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಬಗೆದು ಈಗ ಸರ್ಕಾರದ ವಿರುದ್ಧ ವಕ್ಫ್ ನೋಟಿಸುಗಳನ್ನೇ ನೆಪವಾಗಿಸಿಕೊಂಡು ಡಿಸಿ ಕಚೇರಿಗೆ ನುಗ್ಗುವುದು, ರಸ್ತೆಯ ಮೇಲೆ ಪ್ರತಿಭಟನೆ ಮಾಡುವ ನಾಟಕಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಈ ನಾಟಕದ ಹಿಂದಿನ ಉದ್ದೇಶ ಮತ್ತು ಹುನ್ನಾರ ಅರ್ಥವಾಗಿದೆ. ಮೂರು ಉಪಚುನಾವಣೆಗಳು ಮತ್ತು ಮಹಾರಾಷ್ಟ್ರ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂದಿನ ಅಲ್ಪಸಂಖ್ಯಾತರ ವಿರೋಧದ ರಾಜಕಾರಣ ಇದೆಂಬುದು ಸಾಮಾನ್ಯ ಜ್ಞಾನ ಇದೆ ಎಲ್ಲರಿಗೂ ತಿಳಿಯುತ್ತದೆ. ಬಿಜೆಪಿಯವರು ಇಂತಹ ನಾಟಕಗಳನ್ನು ಬಿಟ್ಟು ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಭಾರತದ ತಮ್ಮ ಆಡಳಿತ ಇರುವ ರಾಜ್ಯ ಸರ್ಕಾರಗಳಿಗೆ ಸಿದ್ದರಾಮಯ್ಯ ಸರ್ಕಾರದ ರೀತಿಯಲ್ಲಿ ಜನಕಲ್ಯಾಣ ಯೋಜನೆಯನ್ನು ಬುದ್ಧಿ ಬೆಳೆಸಿಕೊಳ್ಳಬೇಕಿದೆ. ಅದನ್ನು ಮಾಡುವ ಸಾಮರ್ಥ್ಯವಿಲ್ಲದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಜನರ ಗಮನವನ್ನು ಬೇರೆ ಕಡೆ ಸೆಳೆಯುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರ್ವ ರೋಟರಿ : ದೀಪಾವಳಿ ಸಂಭ್ರಮ - 2024
Posted On: 08 Nov 2024, 07:22 AM
ಶಿರ್ವ : ಹಬ್ಬಗಳ ರಾಜ "ದೀಪಾವಳಿ" ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕ ಎಂದು ಅನಿವಾಸಿ ಭಾರತೀಯ, ಬಂಟಕಲ್ಲು ಹೇರೂರಿನ ದತ್ತಾತ್ರೇಯ ಪಾಟ್ಕರ್ ನುಡಿದರು. ಅವರು ಬುಧವಾರ ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ಏರ್ಪಡಿಸಿದ "ದೀಪಾವಳಿ ಸಂಭ್ರಮ-2024" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿ ಹಬ್ಬದ ಶುಭಾಶಯ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಶೂಭಾಶಂಸನೆಗೈದರು. ಸಹ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪರಿಚಯಿಸಿದರು. ಶ್ರೀನಿಧಿ, ಉಷಾ ಮರಾಠೆ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕರಾದ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜೂಡ್ ಡಿಸೋಜ ವಂದಿಸಿದರು. ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಮೈಕಲ್ ಮತಾಯಸ್ ಸಹಕರಿಸಿದರು. ಸಾಮೂಹಿಕವಾಗಿ ದೀಪ ಪ್ರಜ್ವಲನ, ರಘುಪತಿ ಐತಾಳ್ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.
