Updated News From Kaup
ಸೆಪ್ಟೆಂಬರ್ 29 (ನಾಳೆ) : ಕಾರ್ಕಳ ಕುಲಾಲ ಸಂಘದ ವಾರ್ಷಿಕ ಮಹಾಸಭೆ
Posted On: 28 Sep 2024, 09:20 PM
ಕಾರ್ಕಳ : ತಾಲೂಕಿನ ಕುಲಾಲ ಸುಧಾರಕ ಸಂಘ (ರಿ.) ಜೋಡುರಸ್ತೆ ಕಾರ್ಕಳ ಇದರ 29 ನೇ ವರ್ಷದ ಮಹಾಸಭೆ, ಶ್ರೀ ಸತ್ಯ ನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಸಂಘದ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿರುವರು.
ನ. 16 - 18 : ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್ ವತಿಯಿಂದ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ
Posted On: 28 Sep 2024, 11:15 AM
ಪಡುಬಿದ್ರಿ : ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ವತಿಯಿಂದ ನವೆಂಬರ್ 16ರಿಂದ 18ರವರೆಗೆ ರಾಷ್ಟ್ರ ಮಟ್ಟದ ಅಹರ್ನಿಶಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪಡುಬಿದ್ರಿ ಎಸ್.ಎಸ್.ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ತಂಡದ ಅಧ್ಯಕ್ಷ ಚೇತನ್ ಕುಮಾರ್ ಮಾಹಿತಿ ನೀಡಿದರು. ವಿಜೇತರಿಗೆ ಪ್ರಥಮ ಕಡಲ್ ಫಿಶ್ ಟ್ರೋಫಿ ಸಹಿತ ನಗದು 5 ಲಕ್ಷ ರೂ., ದ್ವಿತೀಯ 3 ಲಕ್ಷ ರೂ. ಬಹುಮಾನವಿದೆ. ಪಂದ್ಯಾಕೂಟದಲ್ಲಿ ಮಧ್ಯಪ್ರದೇಶ, ಛತ್ತೀಸ್ಗಢ, ಮುಂಬಯಿ, ಹರ್ಯಾಣ, ಬೆಂಗಳೂರು, ಚಿತ್ರದುರ್ಗ, ಕೋಲಾರ ಸಹಿತ 25ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ. ಉಡುಪಿ ಮತ್ತು ದಕ್ಷಿಣ ಕನ್ನಡದ ತಂಡಗಳನ್ನು ಪಿನ್ ಕೋಡ್ ಮಾದರಿಯಲ್ಲಿ ಆಡಿಸಲಾಗುವುದು. ಇಲ್ಲಿ ವಿಜೇತ ತಂಡ ನೇರ ಫೈನಲ್ ಪ್ರವೇಶ ಪಡೆಯಲಿದೆ. ಪಂದ್ಯಾವಳಿಯ ಉಳಿಕೆಯ ಹಣವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಸಂಘಟಕರ ಪರವಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ತಿಳಿಸಿದರು. ಈ ಸಂದರ್ಭ ಅಶೋಕ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಕರುಣಾಕರ ಪೂಜಾರಿ, ರಮೀಝ್ ಹುಸೈನ್, ಸುಭಾಷ್ ಕಾಮತ್, ಕೃಷ್ಣ ಬಂಗೇರ, ಪ್ರಶಾಂತ್ ಸಾಲ್ಯಾನ್, ವಸಂತ್ ಮತ್ತಿತರರು ಉಪಸ್ಥಿತರಿದ್ದರು.
ಅಕ್ಟೋಬರ್ 3 -12 : ವೈಭವದ ಉಡುಪಿ ಉಚ್ಚಿಲ ದಸರಾ - 2024
Posted On: 25 Sep 2024, 08:04 PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷದ ಉಡುಪಿ ಉಚ್ಚಿಲ ದಸರಾ-2024ವನ್ನು ಅಕ್ಟೋಬರ್ 3 ರಿಂದ 12 ರ ತನಕ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಕ್ತರ ಸಹಕಾರದೊಂದಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಉಚ್ಚಿಲದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನವೆಂಬರ್ 02 ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಅಕ್ಟೋಬರ್ 3, ಗುರುವಾರ ಬೆಳಗ್ಗೆ ಗಂಟೆ 10ಕ್ಕೆ ಸರಿಯಾಗಿ ದಸರಾ ಉತ್ಸವದ ಉದ್ಘಾಟನೆಯು ಗಣ್ಯರು, ದಾನಿಗಳ, ಉಪಸ್ಥಿತಿಯಲ್ಲಿ ನಡೆಯಲಿದೆ. ದಸರಾ ಪ್ರಯುಕ್ತ ಆಯೋಜಿಸಿರುವ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನದ ಉದ್ಘಾಟನೆಯು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ, ಗಂಟೆ 10.45 ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು. ಪ್ರತಿ ದಿನ ಚಂಡಿಕಾ ಹೋಮ, ಕಲ್ಪೋಕ್ತ ಪೂಜೆ, ಧಾರ್ಮಿಕ ಸಭೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸಹಿತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ವಿವಿಧ ವೃತ್ತಿಪರ ತಂಡಗಳಿಂದ ಜಾದೂ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಜಾನಪದ ನೃತ್ಯ, ನೃತ್ಯ ರೂಪಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಕರಾವಳಿ ಜಿಲ್ಲೆಗಳ 40 ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಸಹಿತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸೆ. 29 : ಪಡುಬಿದ್ರಿ ಬಂಟರ ಸಂಘದಲ್ಲಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಪ್ರದಾನ
Posted On: 25 Sep 2024, 12:10 PM
ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ 'ಸಿರಿಮುಡಿ ದತ್ತಿನಿಧಿ ಟ್ರಸ್ಟ್' ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 29, ಆದಿತ್ಯವಾರ ಪಡುಬಿದ್ರಿ ಬಂಟರ ಸಂಘದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಬಂಟ ಸಮಾಜದ ದಾನಿ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ 'ಶ್ರೀ ಗುರು ನಿತ್ಯಾನಂದಾನುಗ್ರಹ' ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ಪಡುಬಿದ್ರಿ ಬಂಟರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸದ್ರಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಡಾ| ಕೆ. ಪ್ರಕಾಶ್ ಶೆಟ್ಟಿ ದಂಪತಿ ಹಾಗೂ ಇತರ ಅತಿಥಿ ಗಣ್ಯರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ ಗಂಟೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ಸ್ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಸಿ.ಎ. ಅಶೋಕ ಶೆಟ್ಟಿ ಇವರು ನೆರವೇರಿಸಲಿದ್ದಾರೆ. ಸಿರಿಮುಡಿ ದತ್ತಿನಿಧಿ ಬಂಟರ ಸಂಘ ಪಡುಬಿದ್ರಿ ಟ್ರಸ್ಟ್ ನಿಂದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನೆರವಾಗಲು ವಿದ್ಯಾರ್ಥಿವೇತನ, ಸಮಾಜದ ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 15 ಲಕ್ಷ ರೂಪಾಯಿಗಳನ್ನು ವಿತರಿಸಲಾಗುವುದು. ಸಿರಿಮುಡಿ ದತ್ತಿನಿಧಿ ಪಡುಬಿದ್ರಿ ಇದರ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ ಸುಮಾರು 1.31 ಕೋಟಿ ರೂಪಾಯಿಗಳನ್ನು ಶಾಶ್ವತ ಠೇವಣಿಯಾಗಿರಿಸಿ ಅದರಲ್ಲಿ ಬರುವ ಬಡ್ಡಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಕರುಣಾಕರ ಆರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ ಇವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬರುವ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಅಂತರ್ ರಾಜ್ಯ ಬಂಟರ ಕ್ರೀಡಾಕೂಟ ಇದರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ವಿಶ್ವ ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಣಿಸಲಿರುವ ಬಂಟಾಶ್ರಯ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳ್ ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.
ಕಾಪು ವೃತ್ತದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಸಮಾರೋಪ
Posted On: 25 Sep 2024, 09:59 AM
ಕಾಪು : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಮತ್ತು ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯಚೈತನ್ಯ ಹೈಸ್ಕೂಲ್ ಕುತ್ಯಾರು ಆಶ್ರಯದಲ್ಲಿ ಕಾಪು ವೃತ್ತದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಸಮಾರೋಪವು ಸಂಸ್ಥೆಯ ಕ್ರೀಡಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಸ್ಸೆಟ್ ಕಾರ್ಯದರ್ಶಿ ಗುರುರಾಜ ಕೆ.ಜೆ ಮಾತನಾಡಿ, ಪ್ರಥಮ ಬಾರಿಗೆ ಸಂಸ್ಥೆಯಲ್ಲಿ ಕ್ರೀಡಾಕೂಟವನ್ನು ಸಂಘಟಿಸಲು ಸಹಕರಿಸಿದ ಶಾಲಾ ಶಿಕ್ಷಣ ಇಲಾಖೆ ಮತ್ತು ದಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಶಿರ್ವದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ. ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ದಂಡತೀರ್ಥ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉಳಿಯಾರಗೋಳಿಯ ಮಹಮ್ಮದ್ ಅಯಾನ್ ಮತ್ತು ಚಿರಾಗ್ ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ , ಶಿರ್ವದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ನಿಶಾ ಮತ್ತು ಅನುಷಾ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗಳಿಸಿದರು. ಬಾಲಕರ ವಿಭಾಗದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ದಂಡತೀರ್ಥ ಶಾಲೆ ಉಳಿಯಾರಗೋಳಿ, ಬಾಲಕಿಯರ ವಿಭಾಗದ ಚಾಂಪಿಯನ್ ಮತ್ತು ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಶಿರ್ವದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಗಳಿಸಿತು. ಅಸ್ಸೆಟ್ ಪದಾಧಿಕಾರಿಗಳಾದ ವಿವೇಕ ಆಚಾರ್ಯ, ಜನಾರ್ದನ ಆಚಾರ್ಯ ಬಜಕೂಡ್ಲು, ಸುಂದರ ಆಚಾರ್ಯ ಮರೋಳಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಕಿರಣ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೇಣುಗೋಪಾಲ್, ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಪ್ರಾಂಶುಪಾಲೆ ಸಂಗೀತ ರಾವ್ ಸ್ವಾಗತಿಸಿ, ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಆಚಾರ್ಯ ವಂದಿಸಿದರು.
ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ : ಕಲಾ ಸಂಭ್ರಮದಲ್ಲಿ ದ್ವಿತೀಯ ಸ್ಥಾನಿ ಪ್ರಶಸ್ತಿ
Posted On: 23 Sep 2024, 05:42 PM
ಉಡುಪಿ : ಪದ್ಮಶಾಲಿ ಸೇವಾಸಮಿತಿ, ಕಾಡುಮಠ ಗ್ರಾಮ, ವಿಟ್ಲ ವಲಯದ ದಶಮಾನೋತ್ಸವದ ಅಂಗವಾಗಿ ನಡೆದ ಕಲಾ ಸಂಭ್ರಮದಲ್ಲಿ ವೈವಿಧ್ಯಮಯ ಮನೋರಂಜನೆ ಸ್ವರ್ಧೆಯಲ್ಲಿ ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ ದ್ವಿತೀಯ ಸ್ಥಾನಿ ಪ್ರಶಸ್ತಿ ಪಡೆದಿರುತ್ತಾರೆ. ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ ಇವರು ಚಿಕ್ಕಂದಿನಿಂದಲೂ ತುಳುನಾಡ ಗಂಡುಕಲೆಯೆಂದೇ ಪ್ರಸಿದ್ದವಾಗಿರುವ ಯಕ್ಷಗಾನ ಕಲಾಕ್ಷೇತ್ರದಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೂ ತನ್ನ ಪತಿ ಚಂದ್ರಕಾಂತ್ ಶೆಟ್ಟಿಗಾರ್ ರವರ ಸಂಪೂರ್ಣ ಬೆಂಬಲವನ್ನು ಪಡೆದು ತಮಗಿರುವ ಯಕ್ಷಗಾನ ಕಲಾ ಕ್ಷೇತ್ರದಲ್ಲಿನ ಆಸಕ್ತಿಯನ್ನು ತ್ಯಜಿಸದೆ ಸಾಂಸಾರಿಕ ಜೀವನದೊಟ್ಟಿಗೆ ಯಕ್ಷಗಾನ ಕಲಾಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.
ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿ.ಪ್ರಾ. ಶಾಲೆಗೆ ಅಗತ್ಯ ವಸ್ತುಗಳ ಹಸ್ತಾಂತರ
Posted On: 23 Sep 2024, 05:40 PM
ಕಾಪು : ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಚಪ್ಪಲ್ ಸ್ಟ್ಯಾಂಡ್, ಶಾಲಾ ಕಛೇರಿಗೆ 10 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡ ಕಾಪು ಶಾಖಾ ಪ್ರಬಂಧಕ ಶಿವಪ್ರಸಾದ್, ನಯೇಶ್ ಶೆಟ್ಟಿ ಎಲ್ಲೂರು, ಯಶೋಧರ ಶೆಟ್ಟಿ ಎರ್ಮಾಳು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಂದಾಡಿ ಪದ್ಮನಾಭ ಶಾನುಭಾಗ್, ಮುಖ್ಯ ಶಿಕ್ಷಕ ಆರ್. ಎಸ್. ಕಲ್ಲೂರ, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಆಡಳಿತ ಸಮಿತಿ ಸದಸ್ಯ ನಾಗಭೂಷಣ್ ರಾವ್, ಗೌರವ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ 102ನೇ ದಿನದ ಪ್ರದಕ್ಷಿಣೆ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ
Posted On: 23 Sep 2024, 11:35 AM
ಕಟಪಾಡಿ : ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 102ನೇ ದಿನದ ಪ್ರದಕ್ಷಿಣೆಗೆ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ದೇವಸ್ಥಾನದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಲಾಯಿತು. ಈ ಸಂದರ್ಭ ಗೀತಾಂಜಲಿ ಎಮ್. ಸುವರ್ಣ, ಸತೀಶ್ ದೇವಾಡಿಗ, ಶಶಾಂಕ್, ಆರ್ಯನ್ ಹಾಗೂ ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.
ಸೆ. 29 : ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ವರ್ಷ - ಕಾಪು ತಾಲೂಕು ವಿಶ್ವ ಹಿಂದೂ ಪರಿಷದ್ ವತಿಯಿಂದ ಪಡುಬಿದ್ರಿಯಲ್ಲಿ ಹಿಂದೂ ಸಮಾವೇಶ
Posted On: 23 Sep 2024, 10:41 AM
ಕಾಪು : ವಿಶ್ವ ಹಿಂದೂ ಪರಿಷದ್ನ ಷಷ್ಠಿಪೂರ್ತಿ ವರ್ಷದ ಪ್ರಯುಕ್ತ ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ವತಿಯಿಂದ ಸೆಪ್ಟೆಂಬರ್ 29, ಭಾನುವಾರ ಸಂಜೆ 3 ಗಂಟೆಗೆ ಬಂಟರ ಭವನ ಪಡುಬಿದ್ರಿ ಇಲ್ಲಿ ಹಿಂದೂ ಸಮಾವೇಶ ಜರಗಲಿದೆ. ಸಂಜೆ ಗಂಟೆ 3:30ರಿಂದ ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಜರಗಲಿದ್ದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿ೦ದೂ ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಇವರ ದಿಕ್ಸೂಚಿ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ (ರಿ.) ಉಡುಪಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ದೈವ ನರ್ತಕ ಸುಧಾಕರ ಪಾಣಾರ ಮೂಡುಬೆಳ್ಳೆ, ಕಾಪು ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಉಪಾಧ್ಯಕ್ಷ ಅಪ್ಪಿಸಾಲ್ಯಾನ್, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು (ಪ್ರಖಂಡ) ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : 60 ಕ್ಕೂ ಅಧಿಕ ನೂತನ ಸದಸ್ಯರ ಸೇರ್ಪಡೆಯೊಂದಿಗೆ ಮುಂಡಾಲ ಮಹಾಬಾಂಧವ್ಯ
Posted On: 22 Sep 2024, 11:41 PM
ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಇದರ ವತಿಯಿಂದ ಭಾನುವಾರ ಪಡುಬಿದ್ರಿ ಸಾಯಿ ಆರ್ಕೇಡ್ ನಲ್ಲಿ ಮುಂಡಾಲ ಮಹಾ ಬಾಂಧವ್ಯ ಕಾರ್ಯಕ್ರಮ ನಡೆಯಿತು. ಮುಂಡಾಲ ವೇದಿಕೆಗೆ ನೂತನವಾಗಿ ಸೇರ್ಪಡೆಗೊಂಡ ಸುಮಾರು 60 ಸದಸ್ಯರನ್ನು ಬರಮಾಡಿಕೊಳ್ಳುವ ವಿಶೇಷ ಕಾರ್ಯಕ್ರಮವನ್ನು ಮುಂಡ್ಕೂರು ಜಿ.ಕೆ ಲಕ್ಷ್ಮಣ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಂದಿನ ಡಿಸೆಂಬರ್ ನಲ್ಲಿ ಆಯೋಜಿಸಲಾಗಿರುವ "ತುಳುವೆರೆ ಗೊಬ್ಬುಲ್ನ ಬುಲೆಚ್ಚಿಲ್" ಕಾರ್ಯಕ್ರಮದ ಫಲಕವನ್ನು ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಸ್ಕರ್ ಪಡುಬಿದ್ರಿ, ಸುಧಾಕರ್.ಕೆ, ದಿನೇಶ್ ಪಲಿಮಾರ್, ಭಾಸ್ಕರ್ ಪಲಿಮಾರ್, ವೇದಿಕೆಯ ಅಧ್ಯಕ್ಷರಾದ ಶಿವಪ್ಪ ಸಾಲ್ಯಾನ್, ಮಂಜುನಾಥ ಎರ್ಮಾಳು, ಸವಿತಾ ಶಿವಪ್ಪ ಉಪಸ್ಥಿತರಿದ್ದರು. ಸಂತೋಷ್ ನಂಬಿಯಾರ್ ಪ್ರಾಸ್ತಾವಿಕ ಮಾತನ್ನಾಡಿದರು. ಸುರೇಶ್ ಪಡುಬಿದ್ರಿ ಸ್ವಾಗತಿಸಿ, ನಿರ್ವಹಿಸಿದರು. ಪ್ರಸನ್ನ ಪಡುಬಿದ್ರಿ ವಂದಿಸಿದರು.
