Updated News From Kaup
ಕುಲಾಲ ಸಮಾಜ ಸೇವಾ ಸಂಘ ಬೆಳಪು : ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Posted On: 02-08-2024 08:51AM
ಕಾಪು : ತಾಲೂಕಿನ ಕುಲಾಲ ಸಮಾಜ ಸೇವಾ ಸಂಘ ಬೆಳಪು ಇದರ ಮಹಾಸಭೆಯು ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ ಪಣಿಯೂರು ಇದರ ಸಭಾಂಗಣದಲ್ಲಿ ಜರಗಿತು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕುಲಾಲ ಸಮಾಜದ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದ ವ್ಯವಸ್ಥೆ ಜೊತೆಗೆ ಬೆಳಪು ಭಾಗದಲ್ಲಿ ಆಗುವ ಕಾರ್ಖಾನೆಯಲ್ಲಿ ಕುಲಾಲ ಸಮುದಾಯದವರಿಗೆ ಉದ್ಯೋಗ ಕಲ್ಪಿಸಿ ಕೊಡುವುದಾಗಿ ಹೇಳಿದರು.

ಈ ಸಂದರ್ಭ ಕುಲಾಲ ಸಮುದಾಯದ ಬಾಲ ಪ್ರತಿಭೆ ಮನಸ್ವಿ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ಸುಧಾಕರ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ರಾದ ಕುಟ್ಟಿ ಮೂಲ್ಯ, ಉಪಾಧ್ಯಕ್ಷ ಪ್ರಕಾಶ್ ಕುಲಾಲ್, ಸಂದೀಪ್ ಮೂಲ್ಯ, ಗೀತಾ ವೈ, ಉಮೇಶ್ ಕುಲಾಲ್, ಜನಾರ್ದನ್ ಕುಲಾಲ್, ನಿತೇಶ್ ಕುಲಾಲ್ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಹರೀಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಮಲ್ಲಿಕಾ ಉಮೇಶ್ ಮಹಿಳಾ ಘಟಕದ ವರದಿ ಮಂಡಿಸಿದರು. ಸುಜಯ ಕುಲಾಲ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ಕುಲಾಲ್ ವಂದಿಸಿದರು.
ಕಾಪು : ಸ್ವತಃ ಫೀಲ್ಡಿಗಿಳಿದ ಸಾಹಸಿ ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 01-08-2024 08:39PM
ಕಾಪು : ಸಾಮಾನ್ಯವಾಗಿ ಅಧಿಕಾರಿಗಳೆಂದರೆ ಭರವಸೆಯ ಮಾತುಗಳಿಗೆ ಸೀಮಿತ ಎಂಬ ಅಪವಾದವಿದೆ. ಆದರೆ ಇಲ್ಲೊಬ್ಬರು ಮಹಿಳಾ ಅಧಿಕಾರಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರೇ ಕಾಪು ತಾಲ್ಲೂಕಿನ ತಹಶಿಲ್ದಾರ್ ಡಾ. ಪ್ರತಿಭಾ ಆರ್. ಬುಧವಾರ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿತಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಿಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್ ನ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ಸಂತ್ರಸ್ತರ ಮನ ಒಲಿಸಿ ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ತಹಶಿಲ್ದಾರ್ ಪ್ರತಿಭಾ ಯಶಸ್ವಿಯಾಗಿದ್ದಾರೆ.

ಹಲವು ಕುಟುಂಬಗಳ ಸ್ಥಳಾಂತರ : ಕಾಪು ತಾಲೂಕು ಫಲಿಮಾರು ಗ್ರಾಮದ ಕೊಪ್ಪಳ ಎಂಬಲ್ಲಿ ಗೋಪಾಲರವರ ಮನೆಯ ಒಟ್ಟು ಐದು ಸದಸ್ಯರನ್ನು, ಯೇಣಗುಡ್ಡೆಯ ಫಾರೆಸ್ಟ್ ಗೇಟ್ ಬಳಿಯ ನಾಗಿ ಎಂಬುವವರ ಮನೆಯ 5 ಜನರನ್ನು, ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ರವರ ಕುಟುಂಬದ ಇಬ್ಬರು ಸದಸ್ಯರು, ಶಿರ್ವದ ಮಾರಿಗುಡಿ ಸೇತುವೆ ಬಳಿಯ ಜಯಶ್ರೀಯವರ ಕುಟುಂಬದ ಮೂರು ಮಂದಿ, ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ ಸದಸ್ಯರನ್ನು ಸ್ಥಳಾಂತರಿಸಲಾಯಿತು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಹೋಮ್ ಗಾಡ್೯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಸಹಕರಿಸಿದರು.

ಚಾಲೆಂಜಿಂಗ್ ಟಾಸ್ಕ್ : ಅಪರಿಚಿತ ಪ್ರದೇಶದಲ್ಲಿ ಬೋಟ್ ನಲ್ಲಿ ತೆರಳುವುದು ಅಷ್ಟು ಸುರಕ್ಷಿತವಲ್ಲ. ಆಳ-ಅಗಲ ತಿಳಿದಿರುವುದಿಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಈ ಕಾರ್ಯವನ್ನು ಮಾಡಿದ್ದೇವೆ. ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಾನು ಮತ್ತು ನಮ್ಮ ರಕ್ಷಣಾ ತಂಡ ತೊಡಗಿದೆ. ಸಂತ್ರಸ್ತರ ರಕ್ಷಣೆಯೊಂದೇ ನಮ್ಮ ಗುರಿ. ನೆರೆ ಸಂಕಷ್ಟ ಎದುರಾದಲ್ಲಿ ಯಾವುದೇ ಸಂದರ್ಭದಲ್ಲಿ ತಹಶಿಲ್ದಾರ್ ಕಚೇರಿಯ ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಕಾಪು ತಾಲ್ಲೂಕು ಆಡಳಿತ ನೆರೆ ಸಂರಕ್ಷಣೆಗೆ ಸದಾ ಸನ್ನದ್ಧವಾಗಿದೆ - ತಹಶಿಲ್ದಾರ್ ಪ್ರತಿಭಾ ಆರ್.
ಕಟಪಾಡಿ - ಏಣಗುಡ್ಡೆ : ಎಂಟು ಮನೆಗಳು ಜಲಾವೃತ ; ತಹಶಿಲ್ದಾರ್ ಭೇಟಿ

Posted On: 01-08-2024 08:15PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಗ್ರಾಮದಲ್ಲಿ ಜಲಾವೃತಗೊಂಡ ಎಂಟು ಮನೆಗಳಿಗೆ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭೇಟಿ ನೀಡಿ, ಸಾಂತ್ವನ ಹೇಳಿದರು.
ನಾಗಿ ಮುಕ್ಕಾರ್ತಿಯವರ ಮನೆ ಪೂರ್ಣ ಜಲಾವೃತವಾಗಿದೆ.
ಈ ಸಂದರ್ಭ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗೃಹರಕ್ಷಕ ದಳದ ಸಿಬ್ಬಂದಿ ಕುಮಾರ್ ಉಪಸ್ಥಿತರಿದ್ದರು.
ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನ - ವ್ಯಸನ ಮುಕ್ತ ದಿನಾಚರಣೆ

Posted On: 01-08-2024 07:54PM
ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯಾಗಿ ಕಾಪು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಡಾ. ಪ್ರತಿಭಾ ಆರ್ ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು, ಅವರ ಬದುಕೇ ನಮಗೆ ಪ್ರೇರಣೆ . ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಡಿ ಡಿ ಎಲ್ ಆರ್ ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿದರು. ಈ ಸಂದರ್ಭ ವ್ಯಸನದಿಂದ ದೂರ ಇರುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭ ಡಿ ಡಿ ಎಲ್ ಆರ್ ರವೀಂದ್ರ, ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಉಪ ತಹಶಿಲ್ದಾರ್ ಗಳಾದ ದೇವಕಿ, ರವಿಕಿರಣ್, ಅಶೋಕ್, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ತಾಲ್ಲೂಕು ಆಡಳಿತ ಸೌಧದ ಸಿಬ್ಬಂದಿ ಉಪಸ್ಥಿತರಿದ್ದರು. ಉಪ ತಹಶಿಲ್ದಾರ್ ದೇವಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಂಟಕಲ್ಲು ಬಸ್ ನಿಲ್ದಾಣದಲ್ಲಿ ಕಸಾಪ "ಮನೆಯೇ ಗ್ರಂಥಾಲಯ" ಅಭಿಯಾನ

Posted On: 01-08-2024 07:42PM
ಬಂಟಕಲ್ಲು : ನಾಗರಿಕ ಸಮಿತಿ ಬಂಟಕಲ್ಲು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಅವರಿಗೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಉಡುಪಿ ತಾಲೂಕಿನಲ್ಲಿ ಈಗಾಗಲೇ 65 ಗ್ರಂಥಾಲಯಗಳು ಮನೆ, ಅಂಗಡಿ, ಆಸ್ಪತ್ರೆ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣಗೊಂಡಿದೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯವನ್ನು ಹೊಂದಿದ್ದು, ಕಸಾಪ ಕಾಪು ತಾಲೂಕು ಘಟಕ ಈ ಅಭಿಯಾನ ದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ ಆಚಾರ್ಯ, ಸದಸ್ಯರಾದ ವೈಲೆಟ್ ಕಾಸ್ತಲಿನೂ, ಉಮೇಶ್ ರಾವ್, ಡೆನೀಸ್ ಡಿ ಸೋಜ, ವಿನ್ಸಂಟ್ ಕಾಸ್ತಲಿನೂ, ಅಶೋಕ, ಹರೀಶ್, ವಿರೇಂದ್ರ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್, ಸುನೀಲ್, ಕಸಾಪ ಉಡುಪಿ ತಾಲೂಕು ಕಾಯ೯ದಶಿ೯ಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಮನೆಯೇ ಗ್ರಂಥಾಲಯ ಇದರ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ದೀಪಾ ಚಂದ್ರಕಾಂತ್ ಉಪಸ್ಥಿತರಿದ್ದರು.
ನಾಳೆ (ಆಗಸ್ಟ್ 2) : ಮಳೆ ಹಿನ್ನೆಲೆ - ಉಡುಪಿ ಜಿಲ್ಲೆಯ ಪಿಯುಸಿವರೆಗಿನ ಮಕ್ಕಳಿಗೆ ರಜೆ

Posted On: 01-08-2024 07:17PM
ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ 2ರಂದು (ನಾಳೆ) ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.
ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.
ಇಂದು (ಆಗಸ್ಟ್ 1) ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ
.jpg)
Posted On: 01-08-2024 12:55PM
ಪಡುಬಿದ್ರಿ : ಕಾನನದ ನಡುವಿನ ದೈವಿಕ ತಾಣ, ಮರಳೇ ಪ್ರಸಾದವಾಗಿ ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರೂ ನೆಲದ ಮೇಲೆಯೇ ಕುಳಿತುಕೊಂಡು ಭಕ್ತಿ ಪರವಶವಾಗುವ ಕ್ಷೇತ್ರವೇ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ ಸೇವೆ ವಿಶೇಷವಾಗಿದೆ. ಶ್ರೀ ಕ್ಷೇತ್ರದಲ್ಲಿ ಭಕ್ತ ಜನರು ಪಂಚಾಮೃತ ಸೇವೆ, ಹಗಲು ತಂಬಿಲ,ರಾತ್ರಿ ತಂಬಿಲ ಸೇವೆ ಸಲ್ಲಿಸಲು ಅವಕಾಶವಿದೆ. ಕರ್ಕಾಟಕ (ಆಟಿ) ಮಾಸದಲ್ಲಿ ಈ ಸೇವೆಗಳು ನಡೆಯದಿದ್ದರೂ, ಈ ತಿಂಗಳ 16 ನೇ ದಿನದಂದು ನಡೆಯುವ ಅಜಕಾಯಿ ಸೇವೆ ಪ್ರಮುಖವಾಗಿದೆ.
ಅಜಕಾಯಿ ಸೇವೆಯ ಮುನ್ನ ಕ್ಷೇತ್ರದಲ್ಲಿಯ ಮರಳನ್ನು ಬದಲಾಯಿಸಲಾಗುತ್ತದೆ. ಕ್ಷೇತ್ರದ ದೇವರ ಸೇವಕರು ಸಮುದ್ರದೆಡೆಗೆ ಸಾಗಿ ಅಲ್ಲಿ ಮಿಂದು, ಸೊಂಟಮಟ್ಟದ ಸಮುದ್ರದ ನೀರಿನಿಂದ ತೆಗೆಯಲಾಗುವ ಮರಳನ್ನು ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಸಾನಿಧ್ಯದಲ್ಲಿ ಹರಡುತ್ತಾರೆ. ನಂತರ ನಾಗ ದೇವರಿಗೆ ಎಳನೀರಿನ ಅಭಿಷೇಕ, ಅಲಂಕಾರ ನಡೆಯುತ್ತದೆ.
ನಂತರ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ದೇವರಲ್ಲಿ ಪ್ರಾರ್ಥಿಸಿ ತೆಂಗಿನಕಾಯಿಯನ್ನು ಸಮರ್ಪಿಸಿದ ಬಳಿಕ ಭಕ್ತ ಜನರಿಂದ ಬಂದ ಸಾವಿರಾರು ಕಾಯಿಗಳನ್ನು ಅಜಕಾಯಿ ಕಲ್ಲಿಗೆ ಕ್ಷೇತ್ರದ ಪಾತ್ರಿಗಳು ಒಡೆಯುತ್ತಾರೆ. ನಂತರ ಭಕ್ತರಿಗೆ ಪ್ರಸಾದ ರೂಪವಾಗಿ ಹಂಚಲಾಗುತ್ತದೆ.
ಈ ದಿನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯ ಭಕ್ತರು ಸುಮಾರು 10 ಸಾವಿರಕ್ಕೂ ಅಧಿಕ ತೆಂಗಿನಕಾಯಿ, ಎಳನೀರು ಸಮರ್ಪಿಸುತ್ತಾರೆ.
ಕುಂದಾಪುರ : ಬೃಹತ್ ಗಾತ್ರದ ಹೆಬ್ಬಾವು - ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಟ್ಟ ತಂಡ

Posted On: 31-07-2024 10:01PM
ಕುಂದಾಪುರ : ತಾಲೂಕಿನ ಗಂಗೊಳ್ಳಿ ಗ್ರಾಮದ ಲ್ಯೆಟ್ ಹೌಸ್ ಸಮೀಪ ಗದ್ದೆಮನೆ ನರಸಿಂಹ ಪೂಜಾರಿಯವರ ವಾಸ್ತವ್ಯದ ಮನೆಯ ಸಮೀಪ ಬಂದ 16 ಕೆ.ಜಿ. ತೂಕದ 11 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಒಂದನ್ನು ಸುರಕ್ಷಿತವಾಗಿ ಹಿಡಿದು, ರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಸದ್ರಿ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಗಣೇಶ ಖಾರ್ವಿ, ವಿಶ್ವನಾಥ ಗಂಗೊಳ್ಳಿ, ಸುಂದರ ಪಿ, ನಾಗೇಂದ್ರ, ನಾಗರಾಜ ಖಾರ್ವಿ, ವಿಶ್ವನಾಥ ಪೂಜಾರಿ, ರತ್ನಾಕರ ಪೂಜಾರಿ, ಸಂದೀಪ ಪೂಜಾರಿ, ರಾಜು ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
ವಯನಾಡ್ ಭೂಕುಸಿತ : ಸರ್ವ ಸಹಕಾರಕ್ಕೂ ಸಿದ್ಧ - ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ

Posted On: 31-07-2024 09:45PM
ಉಡುಪಿ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದುರಂತದಲ್ಲಿ ನಿರಾಶ್ರಿತರಾದವರ ನೆರವಿಗೆ ಧರ್ಮಪ್ರಾಂತ್ಯ ಎಲ್ಲಾ ರೀತಿಯ ಸಹಕಾರ ನೀಡಲು ಬಯಸಿದೆ ಎಂದು ಹೇಳಿದ್ದಾರೆ.
ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ ಮಾಹಿತಿಗಳ ಪ್ರಕಾರ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದು ಅವರುಗಳ ಹುಡುಕಾಟ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಎಲ್ಲಾ ಸಂತ್ರಸ್ತರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಾದಲ್ಲಿ ಸೇನೆ, ಸರಕಾರದೊಂದಿಗೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸಿವೆ.
ಭೂಕುಸಿತ, ಜಲಸ್ಫೋಟ ಹಾಗೂ ಕರ್ನಾಟಕದ ಹಲವೆಡೆ ಕೂಡ ಭಾರೀ ಮಳೆಯಿಂದ ಅಪಾರ ಹಾನಿಯಾಗುತ್ತಿದೆ. ಇವೆಲ್ಲವುಗಳಿಂದ ರಕ್ಷಣೆ ಪಡೆಯಲು ಹಾಗೂ ಮೃತರ ಆತ್ಮಗಳ ಸದ್ಗತಿಗಾಗಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ ನಿರಾಶ್ರಿತರು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ಧರ್ಮಪ್ರಾಂತ್ಯದ ವತಿಯಿಂದ ಸಂಗ್ರಹಿಸಿ ನೀಡಲು ಈಗಾಗಲೇ ನಿರ್ಧರಿಸಲಾಗಿದ್ದು ಸಹೃದಯ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಲು ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ.
ಆಗಸ್ಟ್ 1 (ನಾಳೆ) : ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

Posted On: 31-07-2024 08:46PM
ಉಡುಪಿ : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜ್ಗಳಿಗೆ ಗುರುವಾರ(ಆಗಸ್ಟ್-01) ರಂದು ಜಿಲ್ಲಾಡಳಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ.