Updated News From Kaup
ಸೆ.17 : ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
Posted On: 13 Sep 2024, 10:37 AM
ಉಡುಪಿ : ಸಮಾನತೆಯನ್ನು ಬೋಧಿಸಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ನಂಬುವ ಕುಲದವರಿಂದಲೇ ನಾರಾಯಣಗುರುಗಳಿಗೆ ಮತ್ತು ಮಹಿಳೆಯೋರ್ವರಿಗೆ ಅವಮಾನವಾದ ಘಟನೆ ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಸಭೆಯಲ್ಲಿ ನಡೆದಿದ್ದು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಸಭೆಯಲ್ಲಿ ವ್ಯಕ್ತಿಯೋರ್ವ, ಬಿಲ್ಲವ ಸಮಾಜದ ಮಹಿಳೆಯ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಸಂಘದ ಅಧ್ಯಕ್ಷರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ ಗುರುಜಯಂತಿ ಆಚರಣೆಯ ಕಾರ್ಯಕ್ರಮಕ್ಕೆ ಹೆಜಮಾಡಿ ಬಿಲ್ಲವ ಮಹಿಳೆಯರು ಯಾರೂ ಬರುವುದಿಲ್ಲ ಎಂದು ಹೇಳುವ ಮೂಲಕ ನಾರಾಯಣ ಗುರುಗಳಿಗೆ ಅಗೌರವ ತೋರಿ, ಅಸಂಖ್ಯಾತ ಗುರುಗಳ ಅನುಯಾಯಿಗಳೂ ಸೇರಿದಂತೆ ಬಿಲ್ಲವ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಇದೀಗ ಬಿಲ್ಲವ ಸಮಾಜದ ಪ್ರಮುಖರು ಪ್ರಕರಣ ದಾಖಲು ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಬಿಲ್ಲವ ಸಮಾಜದ ಸಂಘಟನೆಗಳಿಗೂ ಮನವಿ ನೀಡಲಾಗಿದೆ. ಈಗಾಗಲೇ ಸಂತ್ರಸ್ತೆ ಉಡುಪಿ ಮಹಿಳಾ ಠಾಣೆಯಲ್ಲಿ 5 ಜನ ತಪ್ಪಿತಸ್ಥರ ವಿರುದ್ಧ ದೂರು ನೀಡಿ, ಅವಹೇಳನಗೈದ ವ್ಯಕ್ತಿಯನ್ನು ಹೊರತುಪಡಿಸಿ ಉಳಿದವರು ಕ್ಷಮೆಯಾಚಿಸಿರುತ್ತಾರೆ. ಆದರೆ ಒಣ ಪ್ರತಿಷ್ಠೆ, ದುಡ್ಡಿನ ಮದದಿಂದ ನಾನು ಯಾಕೆ ಕ್ಷಮೆ ಕೇಳಬೇಕು ನಾನು ದೊಡ್ಡ ಸಿ.ಎ ಎನ್ನುವ ಉದ್ಧಟನವನ್ನು ತೋರಿರುತ್ತಾರೆ. ಹಲವಾರು ಜನ ಇವರಿಗೆ ಬುದ್ಧಿ ಹೇಳಿದರು ಕ್ಯಾರೆ ಎನ್ನದೆ ನಾನು ಗುರುಗಳಿಗಿಂತ ದೊಡ್ಡವನು ಎನ್ನುವ ರೀತಿ ದುರ್ವರ್ತನೆ ತೋರಿರುತ್ತಾರೆ. ಸಾಕಷ್ಟು ಕಾಲಾವಕಾಶ ನೀಡಿದರು ಇನ್ನು ಗುರುಗಳಲ್ಲಿ ಕ್ಷಮೆ ಯಾಚಿಸಿಲ್ಲ ಎಂದರೆ ಇದು ದುರಂಕಾರದ ಪರಮವಾದಿ ಎಂದು ಗುರುಗಳ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸೆ. 17ರಂದು ಗುರುಗಳ ಅನುಯಾಯಿಗಳು, ಹಲವಾರು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಆ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಪು ಕೈಗಾರಿಕಾ ಪಾರ್ಕಿನಲ್ಲಿ ಕೆ.ಐ.ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ
Posted On: 11 Sep 2024, 12:43 PM
ಕಾಪು : ಬೆಳಪು ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪಣಿಯೂರು ಬೆಳಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುರಿತು ಸಭೆ ಮಂಗಳವಾರ ಎಸ್ ಎನ್ ಕ್ರಯೋಜೆನಿಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಜರಗಿತು. ಬೆಳಪು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 54 ಕೈಗಾರಿಕಾ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು ಈಗಾಗಲೇ ಹಲವಾರು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿದ್ದು ಅದಕ್ಕೆ ಪಣಿಯುರಿನಿಂದ ಬೆಳಪುವಿಗೆ ಬರುವ ಸಂಪರ್ಕ ರಸ್ತೆ ತೀರಾ ಹದೆಗಟ್ಟಿದ್ದು ಇದರ ಅಗಲೀಕರಣಗೊಳಿಸಲು ಅಭಿವೃದ್ಧಿಪಡಿಸಲು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು KIADB ಯವರು ಸಿದ್ಧಪಡಿಸಿದ್ದು ಸುಮಾರು 2.70 ಎಕರೆ ಜಾಗ ರೈತರಿಂದ ಭೂಸ್ವಾಧೀನ ಪಡಿಸಿಕೊಂಡಿದ್ದು ಗ್ರಾಮಸ್ಥರಿಗೆ ಪರಿಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರು ತಕ್ಷಣ ಪರಿಹಾರವನ್ನು ರೈತರಿಗೆ ನೀಡಿ ಎಲ್ಲಾ ಸಣ್ಣ ಕೈಗಾರಿಕೆಗಳು ತೀರಾ ನಷ್ಟದಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಪಡಿಸಿ 6 ಕೋಟಿ ಹೊರೆಯನ್ನ ಕೈಗಾರಿಕಾ ಮಾಲಕರಿಗೆ ಹಾಕುವುದು ಸೂಕ್ತವಲ್ಲ ಇದನ್ನು ಸರಕಾರ, ಸಂಸದರು, ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಗೊಳಿಸಲು ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು. ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆ, ತ್ಯಾಜ್ಯ ಹರಿಯುವ ನೀರಿನ ಚರಂಡಿಗಳು ಸರಿಯಾಗಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ಕೃತಕ ನೆರೆ ಉದ್ಭವವಾಗಿರುತ್ತದೆ ಎಂದು ಕೆಇಡಿಬಿಯ ಅಧಿಕಾರಿಗಳ ಗಮನಕ್ಕೆ ತಂದರು ಅಲ್ಲದೆ ಶಿವಾಲಯದಿಂದ ಜನರಿಗೆ ಬೆಳಪು ವಿಗೆ ಕಾಲುದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಕೆಐಎಡಿಬಿ ವಲಯದಲ್ಲಿರುವ ಶಿವಾಲಯದ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಮಾಲಕರು ಕೈಜೋಡಿಸಬೇಕು, ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡಬೇಕಾಗಿ ಕಾರ್ಖಾನೆಯ ಮಾಲಕರಲ್ಲಿ ವಿನಂತಿಸಿದ್ದರು. ಅಲ್ಲದೆ ಕೈಗಾರಿಕಾ ಪ್ರದೇಶದ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕಾ ಸ್ಥಳಗಳ ಕ್ರಯಾಸಾದನವನ್ನ ಮಾಡಿ ಕೈಗಾರಿಕಾ ಮಾಲೀಕರಿಗೆ ನೀಡಬೇಕಾಗಿ ಎಸ್ ಎನ್ ಕ್ರಯೋಯೋಜನಿಕ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ನಟರಾಜ ಹೆಗ್ಡೆ ಕೆ ಐ ಡಿ ಬಿ ಯ ಅಧಿಕಾರಿಗಳ ಗಮನಕ್ಕೆ ತಂದರು. ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿಯಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ಮಂಜೂರು ಮಾಡಿ ಕೊಡಿಸುವಂತೆ , ಅಲ್ಲದೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವಂತೆ ಡಾ ದೇವಿ ಪ್ರಸಾದ್ ಶೆಟ್ಟಿ ಅವರು ವಿನಂತಿಸಿದರು ಇದಕ್ಕೆ KIADB ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಧ್ವನಿಗೂಡಿಸಿದ್ದರು. ಆರು ಕೋಟಿ ವೆಚ್ಚದಲ್ಲಿ ಕೈಗಾರಿಕಾ ರಸ್ತೆ ಅಭಿವೃದ್ಧಿಪಡಿಸುವ ಮೊತ್ತವನ್ನು ಕೈಗಾರಿಕಾ ಮಾಲೀಕರಿಗೆ ಹೊರೆಯಾಗದ ರೀತಿಯಲ್ಲಿ ಸರಕಾರ ಬರಿಸುವಂತೆ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರಲ್ಲಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ದೂರವಾಣಿ ಮುಖಾಂತರ ಮಾತನಾಡಿದ ಕಾಪು ಶಾಸಕರು ಅವರು ಅದಕ್ಕೆ ಸಂಸದರು ಒಪ್ಪಿಗೆಯನ್ನು ನೀಡಿದರು. ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ರಸ್ತೆ ಕಾಮಗಾರಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು. ಬೆಳಪು ಕೈಗಾರಿಕಾ ಪ್ರದೇಶದ ಕೈಗಾರಿಕಾ ವಲಯದ ಮಾಲಕರು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಹಾಯಕ ಆಯುಕ್ತರು, ವಿಶೇಷ ಭೂಸ್ವಾಧೀನ ಅಧಿಕಾರಿ ರಾಜು, ಜಂಟಿ ನಿರ್ದೇಶಕರು, ಡಿಐಸಿ ಉಡುಪಿ, ನಾಗರಾಜ್ ಡಿಐಸಿ ಸೀತಾರಾಮ ಶೆಟ್ಟಿ, ಉಡುಪಿ, ಕೆಐಡಿಬಿಯ ಅಧಿಕಾರಿಗಳಾದ ದತ್ತಾತ್ರಿ, ಇಂಜಿನಿಯರ್ ಗಣಪತಿ, ರತ್ನಾಕರ್ ಹಾಗೂ ಕೈಗಾರಿಕಾ ಪ್ರದೇಶದ ಮಾಲಕರುಗಳಾದ ವಸಂತ ಹೆಗ್ಡೆ, ಹರೀಶ್ ನಾಯಕ್ ಕಾಪು, ಸುಧಾಕರ್ ಶೆಟ್ಟಿ, ಮಕರ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ ಅಯೋಧ್ಯಾ, ದುರ್ಗಾ ನಾಯ್ಕ, ಇನ್ನಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಸಿಎ ಸೊಸೈಟಿ : ಪಲಿಮಾರು ಶಾಖೆಯ ನೂತನ ಕಟ್ಟಡ ಸಹಕಾರ ಸಂಕೀರ್ಣ ; ನವೀಕೃತ ಹವಾನಿಯಂತ್ರಿತ ಶಾಖೆ ಲೋಕಾರ್ಪಣೆ
Posted On: 10 Sep 2024, 11:39 AM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಇದರ ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಮತ್ತು ನವೀಕೃತ ಹವಾನಿಯಂತ್ರಿತ ಶಾಖೆಯು ಉದ್ಘಾಟನೆಗೊಂಡಿತು. ನೂತನ ಶಾಖೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಂಸ್ಥೆಯ ಅಭಿವೃದ್ಧಿಯ ಜೊತೆಗೆ ಸದಸ್ಯರಿಗೆ ಪ್ರೋತ್ಸಾಹ, ರೈತರು, ಗ್ರಾಹಕರಿಗೆ ಸಂತೃಪ್ತ ಸೇವೆಯನ್ನು ನೀಡುವ ಮೂಲಕ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಜನರ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ಸೇವೆಯ ಮೂಲಕವೇ ವಾಣಿಜ್ಯ ಬ್ಯಾಂಕ್ಗಳಿಂದ ವಿಮುಖರಾಗಿ ಜನರು ಸಹಕಾರ ಸಂಸ್ಥೆಗಳಲ್ಲಿ ಮುಖ ಮಾಡುವಂತಾಗಿದೆ. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಮಾದರಿ ಶಾಖೆಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ. ಆರ್. ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರು ಅಧ್ಯಕ್ಷ ನವೀನ್ಚಂದ್ರ ಡಿ. ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಅಧ್ಯಕ್ಷ ಮತ್ತು ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಬಿ. ಜಯಕರ ಶೆಟ್ಟಿ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ, ಕುಂದಾಪುರ ಉಪವಿಭಾಗ ಸುಕನ್ಯ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ನಿರ್ದೇಶಕರಾದ ಡಾ। ಐಕಳಬಾವ ದೇವಿಪ್ರಸಾದ್ ಶೆಟ್ಟಿ, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕುಂದಾಪುರ ಉಪ ವಿಭಾಗ ಕುಮಾರ್ ಎಸ್. ವಿ., ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ, ಮಹಾಲಿಂಗೇಶ್ವರ ದೇವಸ್ಥಾನ, ಪಲಿಮಾರು ಪ್ರಧಾನ ಆರ್ಚಕ ಶ್ರೀನಿವಾಸ ಉಡುಪ, ಪಲಿಮಾರು ಚಚ್೯ ಧರ್ಮಗುರು ವಂದನೀಯ ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಮಾಜಿ ತಾಲೂಕು ಪಂಚಾಯತ್ ಸದಸ್ಯರು ಲಕ್ಷ್ಮಣ ಶೆಟ್ಟಿ, ದಿನೇಶ್ ಕೋಟ್ಯಾನ್, ಡಾ. ಪ್ರಭಾ ನಂಬಿಯಾರ್, ಪಲಿಮಾರು ಹಾಜಿ ಎಂ.ಪಿ ಶೇಕಬ್ಬ, ಪಲಿಮಾರು ದಿನೇಶ್ ಪ್ರಭು, ಸಿ ಎ ಸೊಸೈಟಿ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಶಾಖಾ ವ್ಯವಸ್ಥಾಪಕಿ ಶೋಭ ಎಚ್ ಪುತ್ರನ್, ಸೊಸೈಟಿಯ ನಿರ್ದೇಶಕರುಗಳಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಮಾಧವ ಆಚಾರ್ಯ, ರಾಜಾರಾಮ್ ರಾವ್, ಸ್ಟ್ಯಾನಿ ಕ್ವಾಡ್ರಸ್, ಕುಸುಮ ಪುತ್ರನ್, ಕಾಂಚನಾ, ಸುಚರಿತ ಎಲ್ ಅಮೀನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಶ್ಮಿತಾ ಪಿ.ಎಚ್ ಉಪಸ್ಥಿತರಿದ್ದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿ ಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು.
ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯಿಲ್ಲದ ಕಾಂಗ್ರೆಸ್ಸಿಗರಿಗೆ ಸೇಡಿನ ರಾಜಕೀಯವೊಂದೇ ಶ್ರೀ ರಕ್ಷೆಯಾಗಿದೆ : ಶಿಲ್ಪಾ ಜಿ ಸುವರ್ಣ
Posted On: 09 Sep 2024, 08:21 PM
ಉಡುಪಿ : ಜಿಲ್ಲೆಯ ಕುಂದಾಪುರದ ಶಿಕ್ಷಕರಾದ ಬಿ ಜಿ ರಾಮಕೃಷ್ಣ ಅವರಿಗೆ ಅಂತಿಮಗೊಳಿಸಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿಯುವ ಮೂಲಕ ಮತೀಯವಾದಿಗಳ ಆಶಯಗಳಿಗೆ ಪೂರಕವಾಗಿ ನಡೆದುಕೊಂಡಂತಹ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾವು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯನ್ನು ನಡೆಸಿದಂತಹ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಸಹಿತ ನಮ್ಮ ಪಕ್ಷದ 11 ಮಂದಿ ಪದಾಧಿಕಾರಿಗಳ ಮೇಲೆ ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೆ ಸುವರ್ಣ ತಿಳಿಸಿದ್ದಾರೆ. ನಿರಂತರವಾಗಿ ಚುನಾವಣೆಗಳಲ್ಲಿ ತಮ್ಮ ವಿರುದ್ಧದ ಜನಾದೇಶದಿಂದಾಗಿ ಉಡುಪಿ ಜಿಲ್ಲೆಯಲ್ಲಿ ನೆಲೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೂ ಅಸಹನೀಯ ಸ್ಥಿತಿಯನ್ನು ತಲುಪಿದೆ ಹಾಗೂ ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯನ್ನು ಹೊಂದಿರದ ಕಾಂಗ್ರೆಸ್ ಪಕ್ಷವೂ ಸೇಡಿನ ರಾಜಕಾರಣವನ್ನು ತನ್ನ ಶ್ರೀ ರಕ್ಷೆಯನ್ನಾಗಿಸಿಕೊಂಡಿದೆ. ತಮ್ಮ ವಿರುದ್ಧದ ಪ್ರತಿಭಟನೆಯನ್ನು ರಾಜಕೀಯ ಸವಾಲಾಗಿ ಸ್ವೀಕರಿಸುವ ಬದಲು ದ್ವೇಷದ ರಾಜಕಾರಣಕ್ಕೆ ಬಳಸಿಕೊಂಡು ಪ್ರತಿಭಟನಾಕಾರರ ಮೇಲೆ ಪ್ರಕರಣವನ್ನು ದಾಖಲಿಸುವ ಮೂಲಕ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಿದೆ. ಅಧಿಕಾರದ ದುರ್ಬಳಕೆಯ ಮೂಲಕ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಬೆದರಿಸಬಹುದೆಂದು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್ಸಿನ ಈ ಗೊಡ್ಡು ಬೆದರಿಕೆಗಳನ್ನು ಸವಾಲಾಗಿ ಸ್ವೀಕರಿಸುತ್ತಾರೆ ವಿನಃ ಹೆದರುವ ಜಾಯಮಾನದ ಮನೋಸ್ಥಿತಿಯನ್ನು ನಮ್ಮ ಕಾರ್ಯಕರ್ತರು ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಪಡುಬಿದ್ರಿ ರೋಟರಿ, ಇನ್ನರ್ವೀಲ್ ಕ್ಲಬ್ - ಮುದ್ದು ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ
Posted On: 08 Sep 2024, 08:21 AM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಮತ್ತು ಇನ್ನರ್ವೀಲ್ ಕ್ಲಬ್ ಪಡುಬಿದ್ರಿ ಇವರ ಸಂಯುಕ್ತಾಶ್ರಯದಲ್ಲಿ "ಮುದ್ದು ಕೃಷ್ಣ" ಮತ್ತು "ಯಶೋಧ ಕೃಷ್ಣ" ಸ್ಪರ್ಧೆಯನ್ನು ಪಡುಬಿದ್ರಿಯ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉದ್ಘಾಟಿಸಿದರು. ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷೆ ತಸ್ನೀನ್ ಅರಾಹ್, ಇನ್ನರ್ವೀಲ್ ಅಧ್ಯಕ್ಷರು ಮಾತನಾಡಿದರು. ಕಾರ್ಯಕ್ರಮದ ಸಂಚಾಲಕರಾದ ಗಣೇಶ್ ಶೆಟ್ಟಿಗಾರ್, ಗೀತಾ ಅರುಣ್, ಧನಲಕ್ಷ್ಮಿ, ರೋಟರಿ ಕ್ಲಬ್ ಕಾರ್ಯದರ್ಶಿ ಹೇಮಲತಾ, ಇನ್ನರ್ವೀಲ್ ಕಾರ್ಯದರ್ಶಿ ಸ್ನೇಹಾ ಪ್ರವಿಣ್ ವೇದಿಕೆಯಲ್ಲಿದ್ದರು. ತಸ್ನೀನ್ ಅರಾ ಸ್ವಾಗತಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮವನ್ನು ನೆರವೇರಿಸಿದರು. ಸುಹಾನ್ ಪೂಜಾರಿ ಕುಳಾಯಿ ಮತ್ತು ಸಹನಾ ಕುಳಾಯಿ ತೀರ್ಪುಗಾರರಾಗಿ ಸಹಕರಿಸಿದ್ದರು. ಬಿ.ಎಸ್.ಆಚಾರ್ಯ ಮತ್ತು ಅನಿತಾ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು. 75 ಸ್ಪರ್ಧಿಗಳು ಭಾಗವಹಿಸಿದ್ದರು.
ಸೌಹಾರ್ದ ಸಮಿತಿ ಉದ್ಯಾವರ : ವಿವಿಧ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ
Posted On: 07 Sep 2024, 10:07 PM
ಉದ್ಯಾವರ : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವ್ಯಾಪ್ತಿಯಲ್ಲಿರುವ ಸೌಹಾರ್ದ ಸಮಿತಿಯು ಉದ್ಯಾವರ ಗ್ರಾಮದ ಆಸುಪಾಸಿನಲ್ಲಿ ನಡೆಯುತ್ತಿರುವ ವಿಜೃಂಭಣೆಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಸೌಹಾರ್ದತೆ ಮೆರೆಯಿತು. ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಅನಿಲ್ ಡಿಸೋಜ ಮಾತನಾಡಿ, ವಿಘ್ನ ನಿವಾರಕ ದೇವರು ಎಲ್ಲರ ಕಷ್ಟಗಳನ್ನು ನಿವಾರಿಸಲಿ, ಶಾಂತಿ ನೆಮ್ಮದಿಯನ್ನು ನೀಡಲಿ. ಶಾಂತಿ ಸೌಹಾರ್ದತೆ ಇರುವ ಉದ್ಯಾವರದಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸೌಹಾರ್ದತೆಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದರು. ಫ್ರೆಂಡ್ಸ್ ಗಾರ್ಡನ್ ಆರೂರು ತೋಟ ಸಂಪಿಗೆನಗರ ಇವರ ನೇತೃತ್ವದ ಬಾಲ ಗಣೇಶೋತ್ಸವ ಸಮಿತಿ, ಉದ್ಯಾವರ ಯುವಕ ಮಂಡಲ ನೇತೃತ್ವದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಂಗಮ ಸಾಂಸ್ಕೃತಿಕ ವೇದಿಕೆಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ ಸೌಹಾರ್ದತೆ ಮೆರೆದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ಸ್ಟೇಫನ್ ರೋಡ್ರಿಗಸ್, ಸೌಹಾರ್ದ ಸಮಿತಿಯ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ಪ್ರತಾಪ್ ಕುಮಾರ್ ಉದ್ಯಾವರ, ರಿಯಾಜ್ ಪಳ್ಳಿ, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ಜೆರಾಲ್ಡ್ ಪಿರೇರಾ, ವಿಲ್ಫ್ರೆಡ್ ಡಿಸೋಜ, ಪ್ರಿತೇಶ್ ಪಿಂಟೊ, ಮೇಲ್ವಿನ್ ನೋರನ್ನ, ಸ್ಟೀವನ್ ಲುವಿಸ್, ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರಾದ ಜಿತೇಂದ್ರ ಶೆಟ್ಟಿ, ದಿನೇಶ್ ಜತ್ತನ್ನ, ಯೋಗೀಶ್ ಕೋಟ್ಯಾನ್, ಲಕ್ಷ್ಮಣ್ ಸನಿಲ್, ಗಣೇಶ್ ಕುಮಾರ್, ಅಶೋಕ್ ಭಂಡಾರಿ, ವೆಂಕಟ್ ಬಂಗೇರ, ರಮಾನಂದ ಸೇರಿಗಾರ್, ಸನಿಮ್, ಆಲ್ವಿನ್ ಅಂದ್ರಾದೆ, ಪ್ರಸಾದ್ ಪೂಜಾರಿ, ಚೇತನ್ ಕುಮಾರ್, ಸುಹೇಲ್ ಅಬ್ಬಾಸ್, ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ
Posted On: 07 Sep 2024, 02:27 PM
ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಮನೆ ನಿರ್ಮಾಣಕ್ಕೆ ಹಾಗೂ ಕಮರ್ಷಿಯಲ್ ಕಟ್ಟಡಕ್ಕೆ ಬೇಕಾಗುವ ಎಲ್ಲಾ ವಸ್ತುಗಳು ಕ್ಲಪ್ತ ಸಮಯದಲ್ಲಿ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಶ್ರೀ ದುರ್ಗಾ ಹಾರ್ಡ್ ವೇರ್ ಸೇವೆಗೆ ಲಭ್ಯವಿದೆ. ತಲ್ಲೂರು, ಹಟ್ಟಿ ಅಂಗಡಿ, ಉಪ್ಪಿನ ಕುದ್ರು, ಹೆಮ್ಮಾಡಿ, ಜಾಲಾಡಿ ಭಾಗದವರಿಗೆ ಮನೆ, ಹಾಗೂ ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡುವವರಿಗೆ ನಿಮ್ಮ ಹತ್ತಿರದ ತಲ್ಲೂರು ಶ್ರೀ ದುರ್ಗಾ ಹಾರ್ಡ್ ವೇರ್ ಒಮ್ಮೆ ಭೇಟಿ ನೀಡಿ. ಗ್ರಾಮೀಣ ಭಾಗದ ಜನರ ಜೀವನದ ಶೈಲಿಯ ಮನೆ ನಿರ್ಮಾಣದ ಎಲ್ಲಾ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ : ಗಣೇಶ ಮೂರ್ತಿ ಪ್ರತಿಷ್ಠೆ
Posted On: 07 Sep 2024, 12:25 PM
ಉಚ್ಚಿಲ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉಚ್ಚಿಲ ಇದರ ಆಯೋಜನೆಯಲ್ಲಿ 37ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರ್ತಿ ಪ್ರತಿಷ್ಠೆಯು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ ನೆರವೇರಿತು. ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಶುಕ್ರವಾರ ಸಂಜೆ ಮೃಣ್ಮಯ ಗಣೇಶನ ಮೂರ್ತಿಯನ್ನು ಮಲ್ಪೆಯಿಂದ ತಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇರಿಸಲಾಗಿತ್ತು. ಶನಿವಾರ ಬೆಳಿಗ್ಗೆ ವಿಗ್ರಹ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ಧೀಕರಣ, ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಗಣ ಯಾಗ, ಮಹಾಪೂಜೆ ನೆರವೇರಿತು. ಪೂಜಾವಿಧಿ ವಿಧಾನಗಳನ್ನು ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯ ನೆರವೇರಿಸಿದರು. ಇಂದಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ಸಂದರ್ಭ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಉಪಾಧ್ಯಕ್ಷ ಕೃಷ್ಣ ಕುಮಾರ್ ಪೊಲ್ಯ, ಕಾರ್ಯದರ್ಶಿ ರವಿಕಿರಣ್ ಉಚ್ಚಿಲ, ಜೊತೆ ಕಾರ್ಯದರ್ಶಿ ವಿನೋದ್ ಸುವರ್ಣ, ಕೋಶಾಧಿಕಾರಿ ವೇ.ಮೂ. ವಿಷ್ಣುಮೂರ್ತಿ ಉಪಾಧ್ಯಾಯ, ಮನೋಜ್ ಶೆಟ್ಟಿ ಪೊಲ್ಯ, ಮಹೇಶ್ ಉಚ್ಚಿಲ, ಅಶೋಕ್ ಆರ್. ಕರ್ಕೇರಾ, ಅಶೋಕ್ ಆಚಾರ್ಯ, ವಿಜಯ ಆಚಾರ್ಯ ಉಚ್ಚಿಲ, ಸುನಿಲ್ ಶೆಟ್ಟಿ, ಅಕ್ಷಯ್ ದೇಜಾಡಿ, ಗುರುರಾಜ್ ಉಚ್ಚಿಲ, ಮಹೇಶ್ ಶೆಟ್ಟಿ ಪೊಲ್ಯ, ಮಾಧವ ಆಚಾರ್ಯ ಉಚ್ಚಿಲ, ಅಕ್ಷಯ್ ಉಚ್ಚಿಲ, ಪ್ರಮೋದ್ ಆಚಾರ್ಯ, ವಿಶು ಉಚ್ಚಿಲ, ಅನಿಲ್ ಉಚ್ಚಿಲ, ರಾಜೇಶ್ ಶೆಟ್ಟಿ ಎರ್ಮಾಳು, ಆಯುಷ್ ಪೂಜಾರಿ, ಅಶಿತ್ ಪೊಲ್ಯ, ಕಿರಣ್, ಮನ್ವೀತ್, ಹರ್ಷಿತ್ ಆಚಾರ್ಯ, ಸೃಜನ್ ಪೂಜಾರಿ, ಹರ್ಷಿತ್ ಪೂಜಾರಿ, ಸಂಪತ್ ಪೊಲ್ಯ, ಪ್ರಥಮ್ ಉಚ್ಚಿಲ, ಸಾಗರ್ ಪೊಲ್ಯ ಉಪಸ್ಥಿತರಿದ್ದರು.
ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ
Posted On: 06 Sep 2024, 02:03 PM
ಉಚ್ಚಿಲ : ಶಿಕ್ಷಕರ ದಿನಾಚರಣೆ ಅಂಗವಾಗಿ ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ 6 ಶಿಕ್ಷಕರನ್ನು ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದ ಓರ್ವ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ, ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ವಿದ್ಯಾರ್ಥಿಯಾಗಿದ್ದ ಸಮಥ್೯ ಜೋಶಿ, ಶಾಲೆಯ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ, ಶಿಕ್ಷಕರಾದ ಸದಾಶಿವ ನಾಯಕ್, ಮಮತ, ವಿಜಯಲಕ್ಷ್ಮಿ, ಜ್ಯೋತಿ, ಪ್ರಗತಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ರೋಟರಿ ಅಧ್ಯಕ್ಷರಾದ ಇಬಾದುಲ್ಲ ವಹಿಸಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಸದಸ್ಯರಾದ ಕಾರ್ಯದರ್ಶಿ ಸತೀಶ್ ಕುಂಡಂತಾಯ, ಅಚ್ಯುತ ಶೆಣೈ, ನಜ್ಮ, ಚಂದ್ರಹಾಸ ಪೂಜಾರಿ, ಸತೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಕರಾವಳಿಯಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ವಾತಾವರಣ : ಜಿಲ್ಲಾಧಿಕಾರಿಗೆ ಮನವಿ
Posted On: 06 Sep 2024, 01:25 PM
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ವಾತಾವರಣವನ್ನು ಮಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಚನ್ ಸಾಲಿಯಾನ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಮಂಗಳೂರು ಪಬ್ ಗಳಲ್ಲಿ ಗಾಂಜಾ, ಚರಸ್, ಡ್ರಗ್ಸ್ ಮುಂತಾದ ಮಾದಕ ವಸ್ತುಗಳನ್ನು ಬಳಸುವ ಬಗ್ಗೆ, ಕೆಲವು ಪ್ರಕರಣಗಳಲ್ಲಿ ಬಂಧಿತ ಆರೋಪಿತರ ಹೇಳಿಕೆಗಳಿಂದ ತಿಳಿದುಬಂದಿದೆ. ರಾತ್ರಿ ಸಮಯದಲ್ಲಿ ನಿಯಮ ಮೀರಿ ಮ್ಯೂಸಿಕ್ ಡಿಜೆ ಅಳವಡಿಸಿಕೊಂಡು ಕಾರ್ಯಚರಿಸುತ್ತಿರುವ ಪಬ್ಗಳ ಸಂಖ್ಯೆ ಗಣನೀಯ ಪಬ್ಗಳ ವಿರುದ್ಧ ಧ್ವನಿ ಎತ್ತಿದರೆ ಅಂತ ಸಂಘಟನೆಗಳಿಗೆ ಬೆದರಿಕೆ ಕರೆ ಕೂಡ ಬರುತ್ತಿರುವುದರಿಂದ ಯಾರೂ ಕೂಡ ಈ ಬಗ್ಗೆ ದೂರು ನೀಡಲು ಮುಂದಾಗುತ್ತಿಲ್ಲ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ಕಾರ್ಯಚರಿಸುತ್ತಿರುವ ಪಬ್ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಜೋಡಿಗಳಿಗೆ ಮಾತ್ರ ಪ್ರವೇಶ ಎಂಬ ನಿಯಮ ರೂಪಿಸಿ ಪಬ್ ಗೆ ಪ್ರವೇಶಿಸುವರು ಆನೈತಿಕ ಚಟುವಟಿಕೆ ನಡೆಸಲು ಪರೋಕ್ಷವಾಗಿ ಸಹಕಾರಿಯಾಗಿದ್ದು ಮಂಗಳೂರು ನಗರ, ಪರಿಸರದಲ್ಲಿ ವಸತಿ ಗೃಹಗಳಲ್ಲಿ, ಪ್ರತ್ಯೇಕ ಇರುವ ಮನೆಗಳಲ್ಲಿ, ಪ್ಲಾಟ್ಗಳಲ್ಲಿ, ಕೆಲವು ಜನಪ್ರತಿನಿಧಿಗಳ ಬೆಂಬಲದಿಂದ ಆಮಾಯಕ ವಿದ್ಯಾರ್ಥಿನಿಯರನ್ನು, ಯುವತಿಯರನ್ನು, ಮಹಿಳೆಯರನ್ನು ಬಳಸಿಕೊಂಡು ಹೈಟೆಕ್ ಅನೈತಿಕ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಮಾದಕ ವಸ್ತುಗಳ ಮಾರಾಟ ಚಾಲ ಬಹಿರಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇಂತಹ ಅಕ್ರಮ ಚಟುವಟಿಕೆ ಮೇಲೆ ಕಠಿಣ ಕ್ರಮ ಕೈಗೊಂಡು, ಸುಮೊಟೋ ಕೇಸ್ ದಾಖಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ರಾತ್ರಿ 11 ಗಂಟೆ ಒಳಗೆ ತಮ್ಮ ತಮ್ಮ ಹಾಸ್ಟೆಲ್ ಪಿ ಜಿ ಸೇರಿಕೊಳ್ಳುವಂತೆ ನಿಯಮ ರೂಪಿಸುವ ಮೂಲಕ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬಹುದಾಗಿದೆ. ಅದೇ ರೀತಿ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆ ವಿರುದ್ಧ ತಾವು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
