Updated News From Kaup
ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ಕಾಪು ತಾಲೂಕಿನ 6 ಸಾಧಕರು ಆಯ್ಕೆ
Posted On: 31 Oct 2024, 03:27 PM
ಕಾಪು : 2024ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 41 ಮಂದಿ ಸಾಧಕರು ಹಾಗೂ ಸಂಘ ಸಂಸ್ಥೆಗಳ ಪಟ್ಟಿ ಪ್ರಕಟಗೊಂಡಿದ್ದು, ಇದರಲ್ಲಿ ಕಾಪು ತಾಲೂಕಿನ ಆರು ಸಾಧಕರು ಮತ್ತು ಒಂದು ಸಂಘ ಆಯ್ಕೆಯಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಶ್ರೀನಿವಾಸ ತಂತ್ರಿ, ದೈವಾರಾಧನೆಯಲ್ಲಿ ರಾಘು ಪೂಜಾರಿ, ಸಮಾಜ ಸೇವೆಯಲ್ಲಿ ಶೇಖರ್ ಹೆಜಮಾಡಿ, ರಂಗಭೂಮಿಯಲ್ಲಿ ಬಾಸುಮ ಕೊಡಗು, ಕೃಷಿ/ ಸಮಾಜ ಸೇವೆಯಲ್ಲಿ ಕೆ. ಮಹೇಶ್ ಶೆಣೈ, ಕೃಷಿಯಲ್ಲಿ ಜೋಸೆಫ್ ಲೋಬೋ ಆಯ್ಕೆ ಆಗಿದ್ದಾರೆ. ಸಂಘ ಸಂಸ್ಥೆ ವಿಭಾಗದಲ್ಲಿ ಶಿರ್ವ ಮಹಿಳಾ ಮಂಡಲ (ರಿ.) ಆಯ್ಕೆಯಾಗಿದೆ.
ಎಲ್ಲೆಡೆ ಬೆಳಗಲಿ ಹಣತೆಯ ದಿವ್ಯ ಪ್ರಭಾವಳಿ ಮತ್ತೆ ಬಂದಿದೆ ದೀಪಾವಳಿ
Posted On: 31 Oct 2024, 01:44 PM
ದೀಪಾವಳಿ ಹಬ್ಬವು ಕೇವಲ ಹಬ್ಬವಲ್ಲ ಇದು ಜನಸಾಮಾನ್ಯರ ಸಂತೋಷದ ಕ್ಷಣವೆಂದರೆ ತಪ್ಪಾಗಲಾರದು. ಇದು ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಈ ಸಡಗರ ವಿಸ್ತರಿಸುತ್ತದೆ. ನವರಾತ್ರಿ ಉಕ್ಕಿಸಿದ ನವಸಡಗರ ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಬಂದಿದೆ. ಅದು ಬೆಳಕಿನ,ಬದುಕಿನ ಹಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ. ಪ್ರಕೃತಿಯಲ್ಲಿ ಹೊಸ ಹೂವು ಅರಳುವ ಸಮಯ. ಈ ಘಳಿಗೆ ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ. ಭಕ್ತಿ ಶಕ್ತಿ-ಪ್ರೇಮ-ಪ್ರಕೃತಿಯ ಹಬ್ಬ : ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಈ ಎಲ್ಲ ದಿನಗಳಲ್ಲಿ ಮೆರೆಯವುದು ಭಕ್ತಿ, ಶಕ್ತಿ ಪ್ರೀತಿ ಮತ್ತು ಪ್ರಕೃತಿ. ಇದು ಬದುಕಿಗೆ ಆಧಾರವಾದ ಜೀವ ಶಕ್ತಿಯ ವೈವಿಧ್ಯಮಯ ಸ್ವರೂಪಗಳ ಆರಾಧನೆ, ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ದೀಪಾವಳಿ ಎಂದರೆ ಮನೆ-ಮನ ಎಲ್ಲವೂ ಒಮ್ಮೆ ಸ್ವಚ್ಛವಾಗಿ ಲಕಲಕಿಸುತ್ತದೆ. ಅಂತೆಯೇ ಹಳೆ ನೆನಪು, ನೋವುಗಳ ದು:ಖಗಳ ಕೊಳೆಯೂ ಗುಡಿಸಿ ಹೋಗುತ್ತದೆ. ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ' ಮಿಂಚು ಹಿತವಾಗುತ್ತದೆ. ದೇವ, ದೈವದೊಂದಿಗಿನ ಕುಟುಂಬ,ಪ್ರಕೃತಿಯೊಂದಿಗಿನ ಸಂಬಂಧ ಮತ್ತೆ ನವೀಕರಣಗೊಳ್ಳುತ್ತದೆ. ದುಷ್ಟ ಶಿಕ್ಷಣದ ಕಥಾನಕ : ಶ್ರೀಕೃಷ್ಣ ನರಕಾಸುರನನ್ನು ಸಂಹಾರ ಮಾಡಿದ್ದು, ರಾವಣ ಸಂಹಾರದ ಬಳಿಕ ಶ್ರೀರಾಮ ಸೀತಾ ಸಮೇತನಾಗಿ ಮತ್ತೆ ಅಯೋಧ್ಯೆ ಪ್ರವೇಶಿಸಿದ್ದು, ಅಸಾಮಾನ್ಯ ಶೂರನಾದರೂ ಅತಿಯಾಸೆಗೆ ಬಲಿಯಾದ ಬಲಿ ಚಕ್ರವರ್ತಿಯನ್ನು ವಾಮನ ಮೂರ್ತಿ ಪಾತಾಳಕ್ಕೆ ತುಳಿದದ್ದು, ಸಮುದ್ರ ಮಥನ ಕಾಲದಲ್ಲಿ ಲಕ್ಷ್ಮೀ ದೇವಿಯ ಜನನವಾಗಿದ್ದು, ಇಂದ್ರನ ಕ್ರೋಧ ರೂಪವಾದ ಮಳೆಯಿಂದ ಗೋವುಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದದ್ದು ಎಲ್ಲವೂ ದೀಪಾವಳಿಯ ಜತೆಗೆ ಬೆಸೆದುಕೊಂಡ ಪೌರಾಣಿಕ ಕಥನಗಳು. ಎಲ್ಲ ಕಥೆಗಳ ಆಳದಲ್ಲಿರುವುದು ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ; ಅಸಹಾಯಕತೆಯ ಕ್ಷಣಗಳಲ್ಲಿ ಕೈಹಿಡಿವ ದೇವರ ದಯೆ. ಸ್ತ್ರೀಶಕ್ತಿ ಮೆರೆವ ಹಬ್ಬ : ಪುರುಷ ಮಾತ್ರರಿಂದ ಮರಣವಿಲ್ಲದ ವರ ಪಡೆದ ನರಕಾಸುರನನ್ನು ಸಂಹರಿಸುವಲ್ಲಿ ಕೃಷ್ಣ ನಿಮಿತ್ತ ಮಾತ್ರ. ಧನುರ್ಧಾರಿಣಿಯಾಗಿ ಕದನ ಕಣದಲ್ಲಿ ಸೆಣಸಿ ಗೆದ್ದದ್ದು ಸತ್ಯಭಾಮೆ. ಅವಳಿಂದಾಗಿಯೇ 16 ಸಾವಿರ ಗೋಪಿಕಾ ಸ್ತ್ರೀಯರ ಬಂಧಮುಕ್ತಿ. ಸಮುದ್ರ ಮಥನ ಕಾಲದಲ್ಲಿ ಎದ್ದು ಬಂದ ಲಕ್ಷಿ ್ಮ ಮುಂದೆ ಐಶ್ವರ್ಯ ತಾಯಿಯಾಗಿ ಮೆರೆದಾಡಿದ್ದರ ಮೂಲವಿರುವುದು ಇಲ್ಲಿ. ಇದು ಸ್ತ್ರೀಶಕ್ತಿಯ ದ್ಯೋತಕ. ದೀಪಾವಳಿಯ ಸರ್ವ ದಿನಗಳಲ್ಲೂ ಮಹಿಳೆಯರೇ ಪ್ರಧಾನ ಪಾತ್ರ ವಹಿಸುವುದು ಅತ್ಯಂತ ವಿಶೇಷ ವಲ್ಲವೇ ? ದೀಪಾವಳಿ ಹೊಸ ಹೊಸ ಬೆಳಕಿನ ಹಬ್ಬ : ದೀಪಾವಳಿ ಎಂದರೆ ಹಣತೆಗಳ ಸಾಲು, ಈ ಸಾಲುಗಳು ಕತ್ತಲೆ ಓಡಿಸುವುದು ಮಾತ್ರವಲ್ಲ ಸೌoದಯ೯ದ ದ್ಯೋತಕವಾಗಿದೆ. ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ. ಬದುಕಿನ ಒಳಗೂ ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ. ಈ ಬೆಳಕು ಬರೀ ಕಣ್ಣಿಗಲ್ಲ. ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ಈ ಸಡಗರ ಪ್ರೀತಿ ಇರುತ್ತದೆ. ಇದು ಪ್ರತಿ ಕುಟುಂಬದ ಹಬ್ಬ: ದೀಪಾವಳಿ ನಿಜಾರ್ಥದಲ್ಲಿ ಕುಟುಂಬದ ಹಬ್ಬ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಎದ್ದು ನಿಲ್ಲಿಸುವಂತೆ ಮಾಡುವ ಘನತೆ ಇದರಲ್ಲಿದೆ. ಮಾನವೀಯ ಸಂಬಂಧಗಳು ದೂರವಾಗುತ್ತಿರುವ ಈ ಕಾಲದಲ್ಲೂ ಕುಟುಂಬದ ಎಲ್ಲರೂ ಜತೆ ಸೇರಲು, ಖುಷಿಪಡಲು, ಜತೆಯಾಗಿ ಊಟ ಸವಿಯಲು, ಸಂತೋಷದಿಂದ ಕುಣಿದಾಡಲು ವೇದಿಕೆ ಕೊಡುವುದು ಈ ದೀಪಾವಳಿ. ಸಣ್ಣವರಿಗೆ.ಆಶೀರ್ವಾದದ ಮೂಲಕ ಹಿರಿಯರು ಎತ್ತರಕ್ಕೇರುತ್ತಾರೆ, ಎಣ್ಣೆಹಳದಿ ಸ್ನಾನದ ಮೂಲಕ ತಾಯಿ-ಮಕ್ಕಳು, ಗಂಡ-ಹೆಂಡತಿ, ಸಹೋದರ, ಸಹೋದರಿಯರು ಹತ್ತಿರವಾಗುತ್ತಾರೆ. ಇದು ಕೃತಜ್ಞತೆಯ ಹಬ್ಬವಾಗಿದೆ : ದೀಪಾವಳಿ ಬಂದ ಕೂಡಲೇ ಎಲ್ಲವೂ ದೈವೀ ಸ್ಥಾನ ಪಡೆಯುತ್ತದೆ.ಎಣ್ಣೆ ಸ್ನಾನಕ್ಕೆ ಮುನ್ನ ನೀರಿನ ಹಂಡೆಯೂ ಹೂವಿನಿಂದ ಅಲಂಕಾರಗೊಳ್ಳುತ್ತದೆ, ದೀಪದ ಬೆಳಕಲ್ಲಿ ಅದು ದೇವರಾಗುತ್ತದೆ. ಪೈರು ಗದ್ದೆಯ ನಡುವೆ ದೀಪವಿಟ್ಟು ಸಲ್ಲಿಸುವ ಪ್ರಾರ್ಥನೆ, ಎಲ್ಲ ಕೃಷಿ ಪರಿಕರಗಳಿಗೆ ನಡೆಯುವ ಪೂಜೆ ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ರೂಪಕಗಳಾಗುತ್ತವೆ. ಬದುಕಿನ ಭಾಗವಾಗಿ ಜತೆಯಾಗಿ ಬಾಳುವ ಗೋವುಗಳ ಮೇಲಿನ ಪ್ರೀತಿ ಉತ್ತುಂಗಕ್ಕೇರುವ ಕಾಲ ಇದು. ಹಿತವಾದ ಸ್ನಾನ, ಬಣ್ಣ ಬಣ್ಣದ ಹೂವುಗಳ ಅಲಂಕಾರ, ರುಚಿಕರ ತಿನಿಸಿನ ಜತೆಗೆ ಬೆಳಗುವ ದೀಪಾರತಿಯಲ್ಲಿ ಒಲವಿನ ಧಾರೆಯೇ ಹರಿಯುತ್ತದೆ. ಹೊಸ ವಸ್ತು ಖರೀದಿ ಹಬ್ಬ : ಬಂದ ಫಸಲಿನಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರ. ಧನಲಕ್ಷ್ಮೀ ಪೂಜೆಯೇ ಈ ಸಡಗರ. ದೀಪಾವಳಿಯ ಈ ಖರೀದಿ ಸಂಭ್ರಮ ಈಗಂತೂ ಹೊಸ ಎತ್ತರಕ್ಕೇರಿದೆ. ಮನೆ-ಮನೆಗಳ ಸಂಭ್ರಮ ಹೆಚ್ಚಿಸುವ ಸಲಕರಣೆಗಳ ಖರೀದಿಗೆ ಸಾವಿರ ವೈವಿಧ್ಯಗಳು ಹಿತವಾಗಿ ತೆರೆದುಕೊಳ್ಳುವುದರಿಂದ ದೀಪಾವಳಿ ಕಾತರವನ್ನು ಉಂಟು ಮಾಡುತ್ತದೆ. ಬಡವರಿಂದ ಹಿಡಿದು ಶ್ರೀಮಂತರವರೆಗಿನ ಸರ್ವರಿಗೂ ಹಿತಕರವಾಗಿರುವ ಬೆಲೆ ಮತ್ತು ಗುಣಮಟ್ಟದ ವಿಸ್ತಾರ ಲೋಕ ದೀಪಾವಳಿಯ ವಿಶೇಷ. ಜಗತ್ತಿನ ಹಬ್ಬ : ಈ ಹಬ್ಬ ವಿವಿಧ ದೇಶದಲ್ಲಿ ಆಚರಿಸಲ್ಪಡುತ್ತದೆ. ಅಮೇರಿಕಾದ ವೈಟ್ ಹೌಸ್ ನಲ್ಲಿ ಕೂಡ ಈ ಹಬ್ಬ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಈ ಬೆಳಕಿನ ಹಬ್ಬ ಜಗತ್ತಿನ ಹಬ್ಬ ವಾಗಿ ಬದಲಾಗುತ್ತಿರುವುದು ಸಂತೋಷದ ವಿಚಾರ. ಮನೆ ಮನದ ಹಬ್ಬ ಗಡಿ ದಾಟಿ ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಮತ್ತೊಮ್ಮೆ ಹಳೆಯ ದಿನಗಳು ಮರುಕಳಿಸಲಿ. ಈ ಬೆಳಕು ದೂರ ದೂರ ಸಾಗಿ ಸಮಸ್ತ ಕತ್ತಲೆ ದೂರವಾಗಲಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ಕಾಪು : ಯುವಸೇನೆ ಮಡುಂಬು ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಮಡುಂಬು ಆಯ್ಕೆ
Posted On: 30 Oct 2024, 11:01 PM
ಕಾಪು : ಯುವಸೇನೆ ಮಡುಂಬು ಇದರ 2024-2026 ಸಾಲಿನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಮಡುಂಬು, ಕಾರ್ಯದರ್ಶಿಯಾಗಿ ಸೂರಜ್ ಅಂಚನ್ ಮಡುಂಬು ಆಯ್ಕೆಯಾಗಿರುತ್ತಾರೆ.
ಕಾಪು ಹೊಸ ಮಾರಿಗುಡಿ : ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಚಾಲನೆ
Posted On: 29 Oct 2024, 07:29 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ದೇಶ ವಿದೇಶದ ಭಕ್ತರನ್ನು ಒಂದುಗೂಡಿಸುವ ಪ್ರಯತ್ನಕ್ಕೆ ಕಾಪು ಶ್ರೀ ಹೊಸಮಾರಿಗುಡಿ ನಾಂದಿ ಹಾಡಿದೆ. ಲೇಖನ ಯಜ್ಞದ ಪ್ರತಿ ಅಕ್ಷರದಲ್ಲೂ ದೇವರ ಸಾನಿಧ್ಯವಿದೆ. ಅಕ್ಷರದ ಮೂಲಕ ತಾಯಿಯ ಆರಾಧನೆ. ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು. ದಾರಿ ತಪ್ಪುತ್ತಿರುವ ಯುವ ಪೀಳಿಗೆಗ ಲೇಖನ ಯಜ್ಞ ಅನಿವಾರ್ಯ. ಧರ್ಮ ಮತ್ತು ದೇವರ ಬಗೆಗಿನ ಭಕ್ತಿಯು ನಮ್ಮನ್ನು ಸರಿ ದಾರಿಯತ್ತ ನಡೆಯಲು ಪ್ರೇರಕವಾಗಿದೆ ಎಂದು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ, ಲೇಖಕಿ ವೀಣಾ ಬನ್ನಂಜೆ, ಪಡುಬಿದ್ರಿ ಪಂಚಕಾಡು ಕೊರಗ ಕುಟುಂಬ ಗುರಿಕಾರ ಬಾಲರಾಜ್ ಕೋಡಿಕಲ್, ಶಿಕ್ಷಣ ತಜ್ಞೆ ಮಾಲಿನಿ ಹೆಬ್ಬಾರ್ ಮಾತನಾಡಿದರು. ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ.ಮೂ.ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯು ಜಂಟಿಯಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 99,999 ಮಂದಿಯಿಂದ ಪುಸ್ತಕ ಬರೆಸುವ ಸಂಕಲ್ಪವಿದೆ. ರೂ. 199/- ಪಾವತಿಸಿ ನವದುರ್ಗಾ ಲೇಖನ ಬರೆಯಲು ಭಕ್ತರು ಹೆಸರು ನೋಂದಾವಣೆ ಮಾಡಿಕೊಂಡು ಪುಸ್ತಕ ಪಡೆಯಬಹುದು. ಪ್ರಪಂಚದಾದ್ಯಂತ ಇರುವ ಭಕ್ತರಿಂದ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ನೋಂದಾವಣೆ ಮಾಡಿದ ಭಕ್ತರಿಗೆ ಅ. 29ರಿಂದ ಪುಸ್ತಕ ನೀಡಲಾಗುತ್ತದೆ. ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುಸ್ತಕವನ್ನು ಮರಳಿಸಬೇಕಿದೆ. 2025ರ ಫೆ. 4ರಂದು ನಡೆಯುವ ನವಚಂಡಿಕಾಯಾಗದಲ್ಲಿ ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ. ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಪ್ರತೀ ವರ್ಷ ನವರಾತ್ರಿಯ ಒಂದು ದಿನ ಅದಕ್ಕೆ ವಾಗೀಶ್ವರಿ ಪೂಜೆ ನೆರವೇರುತ್ತದೆ ಎಂದು ವಿವರಿಸಿದರು. ಸಮಿತಿ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್ ಕೆ., ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಕೆ.ಮನೋಹರ ಎಸ್. ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಮಲ್ಲಾರು, ಹುಬ್ಬಳ್ಳಿ ಸಮಿತಿಯ ಸುಗ್ಗಿ ಸುಧಾಕರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಡಾ.ವಿದ್ಯಾ ಶಂಕರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಮಂಜ, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ನವದುರ್ಗಾ ಲೇಖನ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ವಂದಿಸಿದರು. ದಾಮೋದರ ಶರ್ಮ ನಿರೂಪಿಸಿದರು.
ಕಾಪು ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಎಸ್. ಶೆಟ್ಟಿ ಆಯ್ಕೆ
Posted On: 29 Oct 2024, 07:15 AM
ಕಾಪು : ಇಲ್ಲಿನ ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಮನೋಹರ್ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಸೋಮವಾರ ನಡೆದ ನೂತನ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು. ನಿರ್ಮಾಣ ಕ್ಷೇತ್ರದ ಪ್ರಮುಖ ಉದ್ಯಮಿಯಾಗಿರುವ ಮನೋಹರ್ ಎಸ್. ಶೆಟ್ಟಿ, ಔಷಧೋದ್ಯಮ ಹಾಗೂ ಪ್ರವವಾಸೋದ್ಯಮ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದು, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂನ ಜಿಲ್ಲಾಧ್ಯಕ್ಷರಾಗಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ, ಕಾಪು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಿತಿಯ ಇತರ ಸದಸ್ಯರಾಗಿ ರವಿ ಕುಮಾರ್ ಭಟ್, ಅಶ್ವಿನಿ ಎಸ್. ಅಂಚನ್, ಶಾಂತಲತಾ ಎಸ್. ಶೆಟ್ಟಿ, ನಾಗರಾಜ ಎಸ್., ಶಶಿಧರ ಎನ್. ಸುವರ್ಣ, ಸದಾನಂದ ಎ.ಸುವರ್ಣ, ಶ್ರೀಕಾಂತ್ ಸೇರಿಗಾರ್ ಕಾಪು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಆಯ್ಕಯಾಗಿದ್ದಾರೆ.
ಪಡುಬಿದ್ರಿ : ರಾಗ್ ರಂಗ್ ಕಲ್ಚರಲ್ ಹಾಗೂ ಸೋರ್ಟ್ಸ್ ಕ್ಲಬ್ - ಗೂಡುದೀಪ ಸ್ಪರ್ಧೆ ; ಬಹುಮಾನ ವಿತರಣೆ
Posted On: 29 Oct 2024, 07:13 AM
ಪಡುಬಿದ್ರಿ : ಪಡುಬಿದ್ರಿಯ ರಾಗ್ ರಂಗ್ ಕಲ್ಚರಲ್ ಹಾಗೂ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಸ್ಪರ್ಧೆ ನಡೆಯಿತು. ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿ, ಪಡುಬಿದ್ರಿಯ ರಾಗ್ ರಂಗ್ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಗೂಡುದೀಪಗಳ ಸ್ಪರ್ಧೆಯನ್ನೂ ಆಯೋಜಿಸಿ ರಾಷ್ಟ್ರೀಯ ಸಮಗ್ರತೆ, ಭಾವೈಕ್ಯತೆಯ ಸಂಕೇತದೊಂದಿಗೆ ಸಾಂಸ್ಕೃತಿಕವಾಗಿ ಗ್ರಾಮದ ಜನರೆಲ್ಲರೂ ಸಂತೋಷಿತರಾಗುವಂತೆ ಮಾಡಿದ್ದಾರೆ. ದೀಪಗಳ ಹಬ್ಬ ದೀಪಾವಳಿಗೆ ಅದರದ್ದೇ ಆದ ವಿಶಿಷ್ಟ ಮಹತ್ವವಿರುವುದಾಗಿ ಹೇಳಿದರು. ಸನ್ಮಾನ : ಭಾರತೀಯ ನೌಕಾದಳದ ನಿವೃತ್ತ ಗುಣವಂತ ನಿಯಂತ್ರಣ ಅಧಿಕಾರಿ ನಟರಾಜ್ ಪಿ. ಎಸ್ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮುಂಬಯಿಯ ಶಿವಾಯ ಫೌಂಡೇಶನ್ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಹಾಜಿ ಗುಲಾಂ ಮಹಮ್ಮದ್, ನವೀನ್ ಎನ್. ಶೆಟ್ಟಿ, ಪಿ. ಕೃಷ್ಣ ಬಂಗೇರ, ರಮೀಝ್ ಹುಸೈನ್, ಶಿವಕುಮಾರ್ ಕರ್ಜೆ, ಗೀತಾ ಅರುಣ್, ರಾಜೇಶ್ವರಿ ಅವಿನಾಶ್ ಮಾತನಾಡಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ ಹೇಮಚಂದ್ರ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಣೇಶ್ ಎನ್. ಕೋಟ್ಯಾನ್, ಸುನಿಲ್ ಕುಮಾರ್, ವೈ. ಸುಕುಮಾರ್, ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್ ಸಾಲ್ಯಾನ್ ಪೆರ್ಡೂರು, ಎಂ. ಎಸ್. ಶಾಫಿ, ಕರುಣಾಕರ ಪೂಜಾರಿ, ಪ್ರಕಾಶ್ ಶೆಟ್ಟಿ ಬಜಗೋಳಿ, ನಮೃತಾ ಮಹೇಶ್, ರಚನ್ ಸಾಲ್ಯಾನ್ ಉಪಸ್ಥಿತರಿದ್ದರು. ರಾಗ್ ರಂಗ್ ಸಂಸ್ಥೆಯ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು. ಅವಿತಾ ಪಡುಬಿದ್ರಿ ವಂದಿಸಿದರು. ಉಭಯ ಜಿಲ್ಲೆಗಳಿಂದ 35 ಗೂಡುದೀಪ ಸ್ಪರ್ಧಾಳುಗಳು ಭಾಗವಹಿಸಿದ್ದರು. ರೋಹಿತ್ ಕುಮಾರ್ ಪಜಿರ್, ಮನೋಜ್ ಕನಾಪಡಿ ಮತ್ತು ರಮಾಂಜಿ ಉಡುಪಿ ತೀರ್ಪುಗಾರರಾಗಿದ್ದರು. ಸಾಂಪ್ರದಾಯಿಕ ವಿಭಾಗ : ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ), ಆದಿತ್ಯ ಗುರುಪುರ (ದ್ವಿತೀಯ), ದಿಯಾನ್ ಉಡುಪಿ(ತೃತೀಯ). ಆಧುನಿಕ ವಿಭಾಗ : ವಿಠಲ್ ಭಟ್ ಮಂಗಳೂರು (ಪ್ರಥಮ), ಜಗದೀಶ್ ಅಮೀನ್ ಸುಂಕದಕಟ್ಟೆ (ದ್ವಿತೀಯ), ಉಮೇಶ್ ಮಂಗಳೂರು (ತೃತೀಯ) ಬಹುಮಾನಗಳನ್ನು ಗಳಿಸಿದ್ದಾರೆ.
ಡಾ. ವಿಜಯ್ ನೆಗಳೂರು ರವರಿಗೆ ಜೇಸಿ ಟೊಬಿಪ್ ಪ್ರಶಸ್ತಿ
Posted On: 29 Oct 2024, 05:21 AM
ಕಾಪು : ಜೇಸಿಐ ಭಾರತ ವಲಯ 15 ರ ವಲಯ ಸಮ್ಮೇಳನ "ಸಮ್ಮಿಲನ " 2024 ದಲ್ಲಿ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಜೆಸಿಐ ಇಂಡಿಯಾ ದಿಂದ ಕೊಡಲ್ಪಡುವ ಮಹೋನ್ನತ ವೃತ್ತಿಪರತೆಯ ಟೋಬಿಪ್ ಪ್ರಶಸ್ತಿಯನ್ನು ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಯವರು ಜೇಸಿಐಉಡುಪಿ ಇಂದ್ರಾಳಿಯ ಸದಸ್ಯ, ಖ್ಯಾತ ವೈದ್ಯರಾದ ಮತ್ತು ರಾಷ್ಟ್ರೀಯ ತರಬೇತುದಾರ ಡಾ. ವಿಜಯ್ ನೆಗಳೂರುರವರಿಗೆ ಪ್ರದಾನ ಮಾಡಿದರು. ಈ ಸಂದಭ೯ದಲ್ಲಿ ಘಟಕಾಧ್ಯಕ್ಷೆ ಡಾ. ಚಿತ್ರಾ ನೆಗಳೂರು, ವಲಯಾಡಳಿತ ಮಂಡಳಿ ಸದಸ್ಯರು ಘಟಕದ ಪೂವಾ೯ದ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
ಕುಲಾಲ ಸಂಘ ಹೆಬ್ರಿ : ದ್ವಿತೀಯ ವರ್ಷದ ಕ್ರೀಡಾಕೂಟ ಸಂಪನ್ನ
Posted On: 29 Oct 2024, 05:17 AM
ಉಡುಪಿ : ಕುಲಾಲ ಸಂಘ (ರಿ.) ಹೆಬ್ರಿ ತಾಲೂಕು ವತಿಯಿಂದ ನಡೆದ ದ್ವಿತೀಯ ವರ್ಷದ ಕ್ರೀಡಾಕೂಟವು ಹೆಬ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಉಪಾಧ್ಯಕ್ಷರಾದ ಅಣ್ಣಪ್ಪ ಕುಲಾಲ್ ಚಾರ ಮಾತನಾಡಿ ಕ್ರೀಡಾ ಕೂಟವು ಮತ್ತು ನವೆಂಬರ್ 17 ರಂದು ನಡೆಯುವ ಮಹಾಸಭೆಯು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದರು. ಗೌರವಾದ್ಯಕ್ಷರದ ಬೋಜ ಕುಲಾಲ್ ಬೆಳ್ಳಂಜೆ ಮಾತನಾಡಿ ಸಂಘದ ಅಭಿವೃದ್ಧಿ ಆದರೆ ಸಮಾಜವು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು. ಅಧ್ಯಕ್ಷರಾದ ಸುರೇಂದ್ರ ವರಂಗ ಮಾತನಾಡಿ ಕ್ರೀಡಾ ಕೂಟವು ಸಂಘದ ಭವಿಷ್ಯಕ್ಕಾಗಿ ನಮ್ಮ ಸಮಾಜದ ಐಕ್ಯತೆಗಾಗಿ ಎಂದು ಹೇಳಿದರು. ಶ್ರೀರಾಮ್ ಜುವೆಲ್ಲರ್ ಮಾಲಕರಾದ ನಾರಾಯಣ್ ಕೆ ಕುಲಾಲ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಪ್ರಸನ್ನ ಕುಲಾಲ್, ಕೋಶಾಧಿಕಾರಿ ಜಯರಾಮ್ ಹಾಂಡ, ಮಹಿಳಾ ಘಟಕದ ಅದ್ಯಕ್ಷರಾದ ಸುಮಿತ್ರಾ ಕುಲಾಲ್, ಮಹಿಳಾ ಘಟಕದ ಕ್ರೀಡಾ ಕಾರ್ಯದರ್ಶಿ ಅನುಷಾ ಕುಲಾಲ್ ಗುಡ್ಡೆಯಂಗಡಿ, ಹೆಬ್ರಿ ತಾಲೂಕು ಕುಲಾಲ ಸಮಾಜದ ಹಿರಿಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ರಚಿತಾ ಕುಲಾಲ್ ಸ್ವಾಗತಿಸಿದರು. ಸುಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷರಾಗಿ ರಚನ್ ಸಾಲ್ಯಾನ್ ಹೆಜಮಾಡಿ ಆಯ್ಕೆ
Posted On: 27 Oct 2024, 04:03 PM
ಪಡುಬಿದ್ರಿ : ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ( ರಿ.) ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷರಾಗಿ ಯುವ ನಾಯಕ ರಚನ್ ಸಾಲ್ಯಾನ್ ಹೆಜಮಾಡಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ( ರಿ.) ಕರ್ನಾಟಕ ಇದರ ವಿವಿಧ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದ ಒಡಂಬಡಿಕೆ
Posted On: 27 Oct 2024, 12:35 PM
ಶಿರ್ವ : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಸುರತ್ಕಲ್ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದೊಂದಿಗೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಒಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಸೀಮನ್ಸ್ ಕೇಂದ್ರವನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡಲು ಬೇಕಾದ ಸೂಕ್ತ ಕೌಶಲ್ಯಗಳ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಪ್ರಸ್ತುತ ಈ ಕೇಂದ್ರದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳಾದ ಪ್ರಾಡಕ್ಟ್ ಡಿಜಿಟಲೈಜೇಷನ್ ಲ್ಯಾಬ್, ಪ್ರೋಸಸ್ ಡಿಜಿಟಲೈಜೇಷನ್ ಲ್ಯಾಬ್, ಫ್ಯಾಕ್ಟರಿ ಆಟೋಮೇಶನ್ ಲ್ಯಾಬ್, ಮೆಕಟ್ರಾನಿಕ್ಸ್ ಲ್ಯಾಬ್, ಪ್ರೋಟೋಟೈಪ್ ಲ್ಯಾಬ್ ಮತ್ತು ಅಡ್ವಾನ್ಸ್ ಅನಾಲಿಸಿಸ್ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಬಡಂಬಡಿಕೆಯಿ೦ದ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ವಿವಿಧ ಅತ್ಯಾಧುನಿಕ ಮೆಕ್ಯಾನಿಕಲ್ ಸಾಫ್ಟ್ವೇರ್ ಕೋರ್ಸ್ ಗಳನ್ನು ಕಲಿಯಲು ಮತ್ತು ಇಂಟರ್ನ್ಪ್ ತರಬೇತಿ ಪಡೆಯಲು ಅನುಕೂಲವಾಗಿದೆ. ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜ ಯತೀಶ್ ಯಾದವ್, ವಿಭಾಗದ ಪ್ರಾಧ್ಯಾಪಕರಾದ ಡಾ. ಭರತ್ ಕೆ ಭಟ್, ಸೀಮನ್ಸ್ ಕೇಂದ್ರದ ಸಂಚಾಲಕರಾದ ಅರುಣಾಚಲಂ ಮತ್ತು ಕೇಂದ್ರದ ವಿದ್ಯಾರ್ಥಿ ಸಂಚಾಲಕರಾದ ಆರೀ ರಾಯ್ಸನ್ಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರಕ್ಕೆ ತಂತ್ರಜ್ಞಾನ ನೆರವು ಒದಗಿಸುವ ಪುಣೆಯ 3ಡಿ ಇಂಜಿನಿಯರಿಂಗ್ ಆಟೋಮೇಶನ್ ಸಂಸ್ಥೆಯ ವ್ಯವಸ್ಥಾಪಕರಾದ ಹೃಷಿಕೇಶ್ ಕೋಲಪ್ಕರ್ ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಮಾಡಿಕೊಂಡ ಒಡಂಬಡಿಕೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅಭಿನಂದಿಸಿದ್ದಾರೆ.
