Updated News From Kaup

ಕಾಪು : ಇನ್ನಂಜೆ ಮಹಿಳಾ ಮಂಡಳಿ - ಆಟಿಡೊಂಜಿ ದಿನ ಕಾರ್ಯಕ್ರಮ

Posted On: 31-07-2024 07:43PM

ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇದರ ವತಿಯಿಂದ ನಡೆದ "ಆಟಿಡೊಂಜಿ ದಿನ" ಕಾರ್ಯಕ್ರಮವು ಜುಲೈ 28ರಂದು ಇನ್ನಂಜೆ ಯುವಕ ಮಂಡಲದ ಸುವರ್ಣ ಸಭಾಭವನದಲ್ಲಿ ನಡೆಯಿತು. ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಸಖುನಂದನ್ ಕುಮಾರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿವೃತ್ತ ಅಧಿಕಾರಿ ಮೀರಾರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಿಂದಿನ ಕಾಲದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಭಾಷೆ, ಹಬ್ಬಗಳು, ಆಹಾರಗಳ ಬಗ್ಗೆ ತಿಳಿಸುತ್ತಾ ಇದು ನಾಶವಾಗದಂತೆ ಉಳಿಸಿ ಆಚರಿಸಿ ಮುಂದಿನ ಜನಾಂಗಕ್ಕೆ ತಿಳಿಸಿ ಉಳಿಸುವ ಜವಾಬ್ದಾರಿ ನಮ್ಮ ಮಹಿಳೆಯರಿಗಿದೆ. ತುಳು ಸಾಂಸ್ಕೃತಿಯ ಚಿಂತನೆ ಕಾಲಮಾನದ ಬಗ್ಗೆ ಆಟಿಯ ತಿನಿಸುಗಳಲ್ಲಿರುವ ಪೌಷ್ಟಿಕಾಂಶ , ಔಷಧೀಯ ಗುಣಗಳ ಬಗ್ಗೆ ತಿಳಿಸಿದರು. ಗ್ರಾಮದ ಹಿರಿಯ ನಾಟಿ ವೈದ್ಯರಾದ ನಾಗಿ ಮಡಿವಾಳ ಹಾಗೂ ಕಮಲ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಹಿಳಾ ಮಂಡಲದ ಅಧ್ಯಕ್ಷೆ ಶ್ವೇತಾ ಲಕ್ಷ್ಮಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ, ಮಂಡಳಿಯ ಉಪಾಧ್ಯಕ್ಷರಾದ ವಸಂತಿ ಆಚಾರ್ಯ, ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳಾ ನಾಯ್ಕ್, ಮಂಡಳಿಯ ಗೌರವ ಆಹ್ವಾನಿತರಾದ ಪರಿಮಳಾ ರಮೇಶ್ ಮಿತ್ತಂತಾಯ, ಕಾರ್ಯದರ್ಶಿ ಸಿಲ್ವಿಯಾ ವಿನಿಫೈಡ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು. ಅಧ್ಯಕ್ಷೆ ಶ್ವೇತಾ ಲಕ್ಷ್ಮಣ್ ಶೆಟ್ಟಿ ಸ್ವಾಗತಿಸಿದರು. ಟ್ರೀಜಾ ಮೆಚಾಡೋರವರು ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಸಿಲ್ವಿಯಾ ವಿನಿಫೈಡ್ ಕ್ಯಾಸ್ತಲಿನೋ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಂಡಳಿಯ ಸದಸ್ಯರಿಗೆ ವಿಶೇಷ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಯಿತು. ಸುಮಾರು 30 ಬಗೆಯ ಆಟಿ ಖಾದ್ಯಗಳನ್ನು ಉಣ ಬಡಿಸಲಾಯಿತು.

ಬೆಳಪು ಹಾಲು ಉತ್ಪಾದಕರ ಸಂಘದ ಮಹಾಸಭೆ ; 25% ಡಿವಿಡೆಂಡ್ ಘೋಷಣೆ

Posted On: 31-07-2024 07:32PM

ಬೆಳಪು : ಬೆಳಪು ಹಾಲು ಉತ್ಪದಕರ ಸಂಘ ಕಳೆದ 25 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿದ್ದು, ಪ್ರತಿದಿನ 89೦ ರಿಂದ 1,000 ಲೀಟರ್ ಹಾಲು ಸ್ಥಳೀಯ ಸದಸ್ಯರಿಂದ ಒಕ್ಕೂಟಕ್ಕೆ ನೀಡುತ್ತಿದ್ದು, 2023- 24ನೇ ಸಾಲಿನಲ್ಲಿ ಸದಸ್ಯರಿಗೆ 25% ಡಿವಿಡೆಂಡ್ ನೀಡಿ ದಾಖಲೆ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬೆಳಪು ಹಾಲು ಉತ್ಪದಕರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಬೆಳಪು ಹಾಲು ಉತ್ಪಾದಕರ ಸಂಘ ಇನ್ನೂ ಪ್ರಗತಿಯತ್ತ ಸಾಗಬೇಕಿದೆ. ಪ್ರತಿ ಮನೆಯಲ್ಲಿಯೂ ಹಸು ಸಾಕಣೆ ಮಾಡಬೇಕು. ಮಾನವನಿಗೆ ಕೇಳಿದ್ದನ್ನು ಕೊಡುವ ಕಾಮಧೇನು ಹಸುವಾಗಿದ್ದು, ಇದರಿಂದ ಕುಟುಂಬ ನಿರ್ವಹಣೆ, ಮನಸಿಗೆ ನೆಮ್ಮದಿ ಸಾಧ್ಯ. ಹಸು ಸಾಕಲು ಮುಂದೆ ಬಂದರೆ ಕಡಿಮೆ ಬಡ್ಡಿಯಲ್ಲಿ ಬೆಳಪು ಸಹಕಾರಿ ಸಂಘದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದರು.

ಸಂಘದ ಅಭಿವೃದ್ಧಿ ಮತ್ತು ಪಶುಗಳಲ್ಲಿ ಸಲಹೆ ವಿಧಾನವನ್ನು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಸದ್ರಿ ವರ್ಷ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಪ್ರಥಮ, ಸಂದೀಪ್‌ ಶೆಟ್ಟಿ ದ್ವಿತೀಯ ಬಹುಮಾನ, ಗಣೇಶ್‌ ದೇವಾಡಿಗ ತೃತೀಯ ಬಹುಮಾನ ಪಡೆದರು.

ಸಂಘದ ಸದಸ್ಯರಿಗೆ ೨ ಲಕ್ಷ ೪೨ ಸಾವಿರ ಬೋನಸ್‌ ವಿತರಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ, ನಿರ್ದೇಶಕರುಗಳಾದ ರಮಾನಂದ ಮೂಲ್ಯ, ಚಂದ್ರಕಾಂತ್‌ ಶೆಟ್ಟಿ, ಗಣೇಶ್‌ ದೇವಾಡಿಗ, ದಿನೇಶ್‌ ಪೂಜಾರಿ, ಜೆನ್ನಿ ನರಸಿಂಹ ಭಟ್, ಗುರುರಾಜ ಆಚಾರ್ಯ, ಅಣ್ಣು ಮುಖಾರಿ, ದಿವಾಕರ ಶೆಟ್ಟಿ, ಗೌರಿ ಶೆಟ್ಟಿ, ಶ್ರೀದೇವಿ ಎಸ್‌ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದವ್‌ ರಾವ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜುಲೈ 31 : ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 31-07-2024 08:45AM

ಕಾಪು‌ : ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ ಗಳು ಆದೇಶ ನೀಡಿದ್ದಾರೆ.

ಭಾರೀ ಮಳೆ : ದ.ಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ - ಜುಲೈ 31 (ನಾಳೆ) ಪಿಯುಸಿವರೆಗಿನ ಮಕ್ಕಳಿಗೆ ರಜೆ ಘೋಷಣೆ

Posted On: 30-07-2024 08:25PM

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 31 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿಗೆ ರಜೆಯನ್ನು ಘೋಷಿಸಿದೆ.

ಕಾಪು : ಧ್ವನಿ ಬೆಳಕು ಸಂಯೋಜಕರ ಸಂಘಟನೆಯಿಂದ ಕಾಪು ಬಿಲ್ಲವರ ಸಮುದಾಯ ಭವನದ ಕಾಮಗಾರಿಗೆ ಧನಸಹಾಯ

Posted On: 30-07-2024 06:58PM

ಕಾಪು : ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾಪು ವಲಯ ವತಿಯಿಂದ ಕಾಪು ಬಿಲ್ಲವರ ಸಮುದಾಯ ಭವನದ ಕಾಮಗಾರಿಗೆ ರೂಪಾಯಿ 25,000 ಧನ ಸಹಾಯ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕಾಪು ಬಿಲ್ಲವ ಸಂಘ ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಸಿ ಎ ಫೌಂಡೇಶನ್ ಫಲಿತಾಂಶದಲ್ಲೂ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಪಿಯು ಕಾಲೇಜು

Posted On: 30-07-2024 06:43PM

ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು 29 ಜುಲೈ 2024 ರಂದು ಪ್ರಕಟಗೊಂಡಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಕೆ.ವಿ ಮೌರ್ಯ, ಭಕ್ತಿ ಕಾಮತ್, ಸುಪ್ರೀತ್ ಎಸ್ ಹೆಗ್ಡೆ, ವಿನಯ್ ಪ್ರಶಾಂತ ಹಿರೇಮಠ, ಸಾನ್ವಿ ರಾವ್ ರವರು ಕ್ರಮವಾಗಿ 273, 253, 248, 238, 223 ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ (ಅನು ಬೆಳ್ಳೆ) ರವರು ಶ್ಲಾಘಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ತಡೆ ಒಡ್ಡುತ್ತಿದ್ದಾರೆ : ಗುರ್ಮೆ ಸುರೇಶ್ ಶೆಟ್ಟಿ

Posted On: 30-07-2024 06:39PM

ಕಾಪು : ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಇವರು 2 ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು, ಜನಾದೇಶ ಇವರ ಪರವಾಗಿ ಇಲ್ಲದೇ ಇದ್ದು, 2 ಬಾರಿ ಸೋತು ಈ ಹತಾಶೆಯಿಂದ ಪ್ರಸ್ತುತ ಶಾಸಕನಾದ ನನ್ನ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲವೆಂದು ಸುಳ್ಳು ಆಪಾದನೆಯನ್ನು ಹೊರಿಸಿರುತ್ತಾರೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಪತ್ರಿಕಾಗೋಷ್ಟಿಯಲ್ಲಿ ಶಾಸಕನಾದ ನನ್ನ ಮೇಲೆ ವ್ಯವಹಾರಿಕರಣದ ಉದ್ದೇಶದಿಂದ ಕೆಲಸ ಮಾಡುತ್ತಿರುವರೆಂದು ಅಪಾದನೆಯನ್ನು ಮಾಡಿರುತ್ತಾರೆ. ಆದರೆ ನಾನು ಕಳೆದ 40 ವರ್ಷಗಳಿಂದ ನ್ಯಾಯೋಚಿತವಾಗಿ ವಿವಿಧ ಕಡೆಗಳಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು, ಬಂದ ಆದಾಯದ ಸ್ವಲ್ಪ ಭಾಗವನ್ನು ಶಾಸಕನಾಗುವ ಪೂರ್ವದಿಂದಲೂ ಇಂದಿನವರೆಗೆ ಸಮಾಜದ ಕಟ್ಟ ಕಡೆಯ ನೊಂದ ವ್ಯಕ್ತಿಗಳ ಕಣ್ಣೀರು ಒರೆಸುವ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವುದು ಸಾರ್ವಜನಿಕ ವೇದ್ಯವಾಗಿರುತ್ತದೆ. ಆದರೆ ಯಾವುದೇ ಆದಾಯ ಮೂಲಗಳಿಲ್ಲದೆ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಸಂಪಾದಿಸಿರುವುದು ಯಾವ ವ್ಯವಹಾರದಿಂದ ಎಂಬುದು ಸೊರಕೆ ಅವರು ಸ್ಪಷ್ಟಪಡಿಸಬೇಕಿರುತ್ತದೆ? ವಿನಯ ಕುಮಾರ್ ಸೊರಕೆ ಇವರು ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾಪು ಪುರಸಭಾ ವ್ಯಾಪ್ತಿಯ 500 ವಸತಿ ರಹಿತ ಕುಟುಂಬಗಳಿಗೆ ವಸತಿ ಸಮುಚ್ಚಯದ ಸೌಲಭ್ಯವನ್ನು ಒದಗಿಸುವುದಾಗಿ ಹಾಗೂ 100 ಕೋಟಿ ವಿಶೇಷ ಅನುದಾನವನ್ನು ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಒದಗಿಸಿರುವುದಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದು ಅದು ಇನ್ನು ಕಾರ್ಯಗತವಾಗದೇ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸೊರಕೆಯವರು ಉತ್ತರಿಸಬೇಕು? ಕಾಪು ಪುರಸಭಾ ರಚನಾ ಸಂದರ್ಭದಲ್ಲಿ ಪೂರ್ವ ಯೋಜನೆ ಇಲ್ಲದೆ ಪುರಸಭೆಯನ್ನಾಗಿ ಘೋಷಿಸಿದ್ದರಿಂದ ಕಾಪು ಪುರಸಭಾ ವ್ಯಾಪ್ತಿಯ 5 ಕೀಮೀ ಒಳಗಿನ ಗ್ರಾಮಂತರ ಪ್ರದೇಶವನ್ನು ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿದ್ದರಿಂದ ಸಾರ್ವಜನಿಕರು ಅನುಭವಿಸುವ ಸಂಕಷ್ಟಗಳಿಗೆ ಸೊರಕೆಯವರು ನೇರ ಕಾರಣಿಭೂತರಾಗಿರುತ್ತಾರೆ. ಎಲ್ಲೂರು ಐ.ಟಿ.ಐ ಕಾಲೇಜಿಗೆ ನಿವೇಶನವನ್ನು ಕಾಲೇಜಿನ ಹೆಸರಿಗೆ ಮಂಜೂರು ಮಾಡದೇ 5 ಕೋಟಿ ಅನುದಾನವನ್ನು ಸೊರಕೆಯವರು ಬಿಡುಗಡೆಗೊಳಿಸಿರುವುದು ಯಾವ ಉದ್ದೇಶಕ್ಕೆ ? ಆದ್ದರಿಂದ ಈಗಿನ ಎಲ್ಲೂರು ಐ.ಟಿ.ಐ ಕಾಲೇಜಿನ ಪರಿಸ್ಥಿತಿಗೆ ಸೊರಕೆ ನೇರ ಕಾರಣರಾಗಿರುತ್ತಾರೆ.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದಲ್ಲದೇ ಗುತ್ತಿಗೆದಾರರಿಗೆ ಶಿಫಾರಸ್ಸು ಪತ್ರವನ್ನು ನೀಡಿ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಇಲ್ಲಿಯವರೆಗೆ ಕಡಲ್ಕೊರೆತ ತಡೆಗೋಡೆಗೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಹಿಂದಿನ ಸರ್ಕಾರದ ಅವಧಿಯಲ್ಲಿ ಕಡಲ್ಕೊರೆತ ಸಂರಕ್ಷಣೆಗೆ ಕಾಮಗಾರಿಯ ಪೂರ್ಣಗೊಳಿಸದ ಗುತ್ತಿಗೆದಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿರುವುದೇ ಹೊರತು ಇದರಲ್ಲಿ ನನ್ನ ವ್ಯವಹಾರದ ಉದ್ದೇಶವಿರುವುದಿಲ್ಲ ಎಂಬವುದು ಸೊರಕೆಯವರ ಗಮನಕ್ಕೆ ಬಾರದಿರುವುದು ತೀರಾ ವಿಷಾದನೀಯ. ಇತ್ತೀಚೆಗೆ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ಈ ಬಗ್ಗೆ ಮೀನುಗಾರಿಕಾ ಸಚಿವರಾದ ಮಾಂಕಾಳ್ ವೈದ್ಯರಲ್ಲಿ ಖುದ್ದು ಭೇಟಿ ಮಾಡಿ ಪ್ರಸ್ತಾಪಿಸಿದ ಮೇರೆಗೆ ನಡಿಪಟ್ಟ ಕಡಲಕೊರೆತ ಪ್ರದೇಶಕ್ಕೆ ಬೇಟಿ ನೀಡಿದ್ದು, ತುರ್ತು ಕಡಲ್ಕೊರೆತ ಸಂರಕ್ಷಣಾ ಕಾಮಗಾರಿಗೆ 1 ಕೋಟಿ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿರುತ್ತಾರೆ. ಸೊರಕೆ ಇವರು ಮೇಲ್ನೋಟದಲ್ಲಿ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇನೆಂದು ಸಾರ್ವಜನಿಕರಲ್ಲಿ ಬಿಂಬಿಸುತ್ತಾರೆ ಹೊರತು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರವಾಗಿರುತ್ತದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾದ್ಯತೆಗಳಿಗೆ ತಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟು ಮಾಡಿರುತ್ತಾರೆ. ಅಲ್ಲದೇ ಸರಕಾರಿ ನೌಕರರ ಹಾಗೂ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ತನ್ನ ಶಿಫಾರಸ್ಸು ಪತ್ರವನ್ನು ಶಾಸಕನಾದ ನನ್ನ ಹಕ್ಕು ಭಾದ್ಯತೆಗೆ ವ್ಯತಿರಿಕ್ತವಾಗಿ ವರ್ಗಾವಣೆ ದಂಧೆಯನ್ನು ನಡೆಸಿರುತ್ತಾರೆ. ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳ ಅಭಿವೃದ್ಧಿ, ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೊಕೋಪಯೋಗಿ ರಸ್ತೆಗಳ ಅಭಿವೃದ್ಧಿ, ಪ.ಜಾತಿ ಮತ್ತು ಪ.ಪಂಗಡಗಳ ಕಾಲನಿಗಳಿಗೆ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು ಭೇಟಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಮಾಡದೇ ಇದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಅವರೆ ತಡೆ ಒಡ್ಡುತ್ತಿದ್ದಾರೆ.

ಕೆಲವೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಬಾರಿ ಅನುದಾನ ಮಂಜೂರಾಗಿದ್ದರೂ ಪ್ರಸ್ತುತ ಬಿ.ಜೆ.ಪಿ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅನುದಾನವನ್ನು ಬಜೆಟ್ ಕೊರತೆಯ ನೆಪವೊಡ್ಡಿ ತಡೆಹಿಡಿದಿರುವುದು ಅಭಿವೃದ್ಧಿಯ ಕೆಲಸಕ್ಕೆ ಹಿನ್ನಡೆ ಉಂಟಾಗಿರುತ್ತದೆ. ಸೊರಕೆ ಇವರು ಅಭಿವೃದ್ಧಿಯ ವಿಚಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವ ಬಗ್ಗೆ ಆಪಾದನೆ ಮಾಡಿರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಬಿ.ಜೆ.ಪಿ ಶಾಸಕರು ಇರುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಚಟುವಟಿಕೆಗೆ ಅನುದಾನ ಬಿಡುಗಡೆ ಮಾಡದೇ ಇರುವುದು ವಿಷಾದನೀಯ ಸಂಗತಿ. ಹಿಂದಿನ ವರ್ಷದಲ್ಲಿ ಭಾರತ ಸರಕಾರದ ಕೇಲೋ ಇಂಡಿಯಾ ಯೋಜನೆಯಡಿಯಲ್ಲಿ ನನ್ನ ವಿಶೇಷ ಪ್ರಯತ್ನದಿಂದಾಗಿ ಕಾಪು ತಾಲೂಕು ಕ್ರೀಡಾಂಗಣದಲ್ಲಿ ಸಮಗ್ರ ಕ್ರೀಡಾ ಚಟುವಟಿಕೆಗಳಾದ ಪುಟ್ ಬಾಲ್ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಹಾಲ್, ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಬಗ್ಗೆ ರೂ.25.20 ಕೋಟಿ ಮಂಜೂರಾಗಿರುತ್ತದೆ. ಅಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಯತ್ನದಲ್ಲಿರುವುದು ನನ್ನ ಇಚ್ಚಾ ಶಕ್ತಿಯಿಂದಲೇ ಎನ್ನುವುದು ಸೊರಕೆಯವರು ಅರಿಯುವಂತಾಗಲಿ. ಅಲ್ಲದೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವ ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಬಂದಿಸಿದ ತಾಲೂಕು ವ್ಯಾಪ್ತಿಯ ತಹಶೀಲ್ದರಾರಿಗೆ ಸೂಚಿಸಿದ್ದು, ಅಲ್ಲದೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ನಿವೇದಿಸಿಕೊಂಡಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿರುವುದರಿಂದ ನಿವೇಶನ ಹಂಚಿಕೆ ವಿಳಂಬಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಬಿ.ಜೆ.ಪಿ ಸರಕಾರ ಇದ್ದ ಸಂದರ್ಭದಲ್ಲಿ ಎ.ಬಿ.ಸಿ ಕೆಟಗರಿವಾರು ಅನುದಾನ ನೀಡುತ್ತಿದ್ದು, ಪ್ರಸ್ತುತ ತಡೆಹಿಡಿದು, ಸಂಪೂರ್ಣ ಹಾನಿಯಾದ ಮನೆಗಳಿಗೆ ಕೇವಲ 1.20 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ 6,500 ದಂತೆ ನೀಡುತ್ತಿದ್ದು, ಇದರಿಂದ ನೊಂದ ಕುಟುಂಬಗಳ ಸಮಸ್ಯೆ ಸೊರಕೆಯವರ ಗಮನಕ್ಕೆ ಬಂದಿಲ್ಲವೇ..? ಇದು ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಬಾರಿ ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಾ ಮತ ಪಡೆಯಲು ವಿಫಲ ಪ್ರಯತ್ನ ಮಾಡಿ ಇನ್ನೂ ರಾಜಕೀಯದಲ್ಲಿ ಇರುವುದು ಸೊರಕೆಯವರ ಸುಳ್ಳಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾನು ಶಾಸಕನಾದ ನಂತರ ಪಕ್ಷ, ಜಾತಿ, ಧರ್ಮ ಭೇದ ಮಾಡದೇ ಜನರ ಸಂಕಷ್ಟಗಳಿಗೆ ಸ್ಪಂಧಿಸುವುದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ನನ್ನ ಸಾರ್ವಜನಿಕ ಹಾಗೂ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನನ್ನಿಂದಾದ ಸಹಾಯ ಸರಕಾರದ ವತಿಯಿಂದಲೂ ಹಾಗೂ ವೈಯುಕ್ತಿಕ ನೆಲೆಯಲ್ಲಿ ಮಾಡುತ್ತ ಬಂದಿರುತ್ತೇನೆ. ಇದರಿಂದ ಸಹಿಸದೆ ಸುಳ್ಳನ್ನೆ ತನ್ನ ಮನೆ ದೇವರು ಮಾಡಿಕೊಂಡಿರುವ ವಿನಯ ಕುಮಾರ್ ಸೊರಕೆ ಇವರು ಹತಾಶ ಮನೋಭಾವದಿಂದ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಇಲ್ಲ ಸಲ್ಲದ ಆರೋಪ ಮಾಡಿರುವುದು ಹಿರಿಯವರಾದ ವಿನಯ್ ಕುಮಾರ್ ಸೊರಕೆ ಅವರಿಗೆ ಇದು ಶೋಭೆ ತರುವುದೇ..? ಈ ರೀತಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಕಾಲು ಹಾಕಿ ಪಕ್ಷತೀತಾವಾಗಿ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಇರುವ ಸ್ವಲ್ಪ ಮರ್ಯಾದೆಯನ್ನು ಉಳಿಸಿಕೊಂಡರೇ ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜನಾ ಜೆ. ಸುವರ್ಣ : ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ

Posted On: 29-07-2024 10:39PM

ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಸಂಜನಾ ಜೆ. ಸುವರ್ಣ ಇವರು ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.

ಇವರು ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಇಲ್ಲಿನ ಗುರು ವಿದ್ವಾನ್ ಕೆ. ಭವಾನಿಶಂಕರ್ ಇವರ ಶಿಷ್ಯೆಯಾಗಿದ್ದು, ತೋನ್ಸೆ ಹೊನ್ನಪ್ಪ ಕುದ್ರುವಿನ ಸಾವಿತ್ರಿ ಹಾಗೂ ಅಂಬಲಪಾಡಿ ದಿ।ಜಯರಾಮ್ ಪೂಜಾರಿಯವರ ಸುಪುತ್ರಿ.

ರೋಟರಿ ಕ್ಲಬ್ ಉದ್ಯಾವರ : ಕೃಷಿ ಕಾಯಕ ಉತ್ತೇಜಿಸುವ ರೈತ ಮಿತ್ರ ಕಾರ್ಯಕ್ರಮ

Posted On: 29-07-2024 10:35PM

ಉಡುಪಿ : ಗಾಳಿ, ಮಳೆ ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ದುಡಿಯುತ್ತಿರುವ ರೈತರು ಮತ್ತು ಕೃಷಿಕರನ್ನು ಗುರುತಿಸಿ, ರೋಟರಿ ಕ್ಲಬ್ ಉದ್ಯಾವರದ ಸದಸ್ಯರು ಗದ್ದೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಉದ್ಯಾವರದಲ್ಲಿ ನಡೆಯಿತು.

'ರೈತ ಮಿತ್ರ' ಹೆಸರಿನ ಕಾರ್ಯಕ್ರಮದ ಮೂಲಕ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ರೋ. ಪ್ರಸಾದ್ ಶೆಟ್ಟಿರವರ ಕೃಷಿ ಭೂಮಿಯಲ್ಲಿ ರೈತರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ರೈತರನ್ನು ರೋಟರಿ ಕ್ಲಬ್ ಉದ್ಯಾವರದ ಅಧ್ಯಕ್ಷ ರೋ. ಜೀವನ್ ಡಿಸೋಜ ಹಾಗೂ ಸರ್ವ ಸದಸ್ಯರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ರೈತರ ಕೆಲಸಗಳಿಗೆ ಕ್ಲಬ್ಬಿನ ಸದಸ್ಯರು ಸಾಥ್ ನೀಡಿದರು.

ಕಾಪು ಶ್ರೀ ಲಕ್ಷ್ಮಿಜನಾರ್ದನ ದೇವಳಕ್ಕೆ ಚಲನಚಿತ್ರ ನಟ ರಂಗಾಯಣ ರಘು ಭೇಟಿ

Posted On: 29-07-2024 10:21PM

ಕಾಪು : ಇಲ್ಲಿನ ಶ್ರೀ ಲಕ್ಷ್ಮಿಜನಾರ್ದನ ದೇವಳಕ್ಕೆ ಕನ್ನಡ ಖ್ಯಾತ ಚಲನಚಿತ್ರ ನಟ ರಂಗಾಯಣ ರಘು ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಳದ ಪ್ರಮುಖರು, ಪ್ರಕಾಶ್ ಅಮ್ಮಣ್ಣಾಯ ಮತ್ತಿತರರು ಇದ್ದರು.