Updated News From Kaup

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲ್ಕೊರೆತ ; ಅಪಾಯದಂಚಿನಲ್ಲಿ ಮೀನುಗಾರಿಕಾ ಶೆಡ್

Posted On: 16-07-2024 10:21AM

ಪಡುಬಿದ್ರಿ : ಇಲ್ಲಿನ ಕಡಲ ತೀರದ ನಡಿಪಟ್ಣದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಇದರ ಪರಿಣಾಮವಾಗಿ ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಅಪಾಯದಂಚಿನಲ್ಲಿದೆ.

ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಪಡುಬಿದ್ರಿ ಸಿ.ಎ.ಸೊಸೈಟಿ : ನೂತನ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಯೋಜನೆಗೆ ಚಾಲನೆ

Posted On: 16-07-2024 09:35AM

ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಇ- ಅಶ್ವ ಆಟೋಮೇಟಿವ್ ಇವರೊಂದಿಗೆ ಆರಂಭಿಸಿರುವ ನೂತನ ಯೋಜನೆ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಸೋಮವಾರದಂದು ಸೊಸೈಟಿಯ ಸಿಟಿ ಶಾಖೆಯ ಆವರಣದಲ್ಲಿ ಶುಭಾರಂಭಗೊಂಡಿತು. ಇ–ಅಶ್ವ ಆಟೋಮೇಟೀವ್ ನ ಪಾಲುದಾರರಾದ ಕಪಿಲ್ ಕುಮಾರ್ ಹಾಗೂ ಜಗದೀಪ್ ಡಿ. ಸುವರ್ಣ ಸ್ಕೂಟರ್ ನ ಕೀಯನ್ನು ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಇವರಿಗೆ ಹಸ್ತಾಂತರಿಸುವ ಮೂಲಕ ಯೋಜನೆಯು ಚಾಲನೆಗೊಂಡಿತು.

ಈ ಸಂದರ್ಭ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಸಹಕಾರಿ ಸಂಸ್ಥೆಯೊಂದು ಎಲೆಕ್ಟ್ರಿಕ್ ಸ್ಕೂಟರ್ ನ ಡೀಲರ್ಶಿಪನ್ನು ಪಡೆದು, ಈಗಾಗಲೇ ಉತ್ತರಭಾರತದಲ್ಲಿ ಹೆಸರುವಾಸಿಯಾಗಿರುವ ಇ – ಅಶ್ವ ಆಟೋಮೇಟಿವ್ ಇದರ ಜನಸ್ನೇಹಿಯಾದ ಎಲೆಕ್ಟ್ರಿಕಲ್ ಸ್ಕೂಟರನ್ನು ಜಿಲ್ಲೆಗೆ ಪರಿಚಯಿಸುತ್ತಿದ್ದು ಸೊಸೈಟಿಯ ಮುಖಾಂತರ ಖರೀದಿಸುವವರಿಗೆ ರೂ.9,999/- ಡಿಸ್ಕೌಂಟ್ ಹಾಗೂ ಸಾಲ ಸೌಲಭ್ಯವನ್ನು ಕೂಡಾ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿ.ಜೆ.ಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಪ್ರಕಾಶ್ ಶೆಟ್ಟಿ ಮಾತನಾಡಿ ಈಗಾಗಲೇ ಸರಕಾರ ವಾಯುಮಾಲಿನ್ಯ ರಹಿತ ಎಲೆಕ್ಟ್ರಿಕಲ್ ವಾಹನಗಳ ಖರೀದಿ ಹಾಗೂ ಮಾರಾಟಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಈ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸಿದರು. ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪಾತ್ರಿ ಹರಿದಾಸ್ ಭಟ್ ರವರು ನೂತನ ಯೋಜನೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸೊಸೈಟಿಯ ನಿರ್ದೇಶಕರಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ಮಾಧವ ಆಚಾರ್ಯ, ಗ್ರಾಹಕರಾದ ಫೆಲಿಕ್ಸ್, ಪ್ರವೀಣ್, ಸೊಸೈಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು.

ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ : ಐವನ್ ಡಿಸೋಜ

Posted On: 16-07-2024 09:31AM

ಹೆಜಮಾಡಿ : ಅವಿನಾಭಾವ ಸಂಬಂಧವಿರುವ ಕಾಪು ಕ್ಷೇತ್ರದ ಹೆಜಮಾಡಿ ಭಾಗದಲ್ಲಿ ಅಭಿನಂದನೆ ಸ್ವೀಕರಿಸುವುದು ನನ್ನ ಭಾಗ್ಯ. ಈ ಭಾಗದ ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ. ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ನಾನು ಹಾಗು ಪತ್ನಿ ಡಾ. ಕವಿತಾರವರು ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತೇವೆ ಎಂದು ಐವನ್ ಡಿಸೋಜಾರವರು ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ವಿವಿಧ ಸಂಘಸಂಸ್ಥೆಗಳ ಗೌರವ : ಹೆಜಮಾಡಿ ಅಟೋ ರಿಕ್ಷಾ ಯೂನಿಯನ್, ಹೆಜಮಾಡಿ ಬಸ್ತಿಪಡ್ಪು ಶ್ರೀ ದೃೆವರಾಜ ಕೋರ್ದಬ್ಬು ಸಮಿತಿ, ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್, ನಡಿಕುದ್ರು ಜಾರಂದಾಯ ಸೇವಾ ಸಮಿತಿ, ಹೆಜಮಾಡಿ ಹಾಲು ಉತ್ಪಾದಕರ ಘಟಕ, ಹೆಜಮಾಡಿ ಮೊಗವೀರ ಮಹಾಸಭಾ, ಹೆಜಮಾಡಿ ಬಂದರು ಅಭಿವೃದ್ಧಿ ಸಮಿತ, ಆಲಡೆ ಶ್ರೀ ಅಬ್ಬಗ ದಾರಗ ಸೇವಾ ಸಮಿತಿ ಹಾಗೂ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯವರು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರನ್ನು ಸನ್ಮಾನಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಕ್ಷೇತ್ರದಲ್ಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಐವನ್ ಡಿ ಸೋಜಾರವರು ತನ್ನ ಬದ್ಧತೆ ಹಾಗೂ ಪ್ರಾಮಾಣಿಕ, ನಿಷ್ಠೆಯ ಸೇವೆಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವುದು ಅಭಿನಂದನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಕಾಪು ಕ್ಷೇತ್ರ ಅಭಿವೃದ್ಧಿಯನ್ನು ಹೊಂದಲು ಐವನ್ ಡಿಸೋಜ ರವರ ಕೂಡುಗೆ ಅಪಾರ ಎಂದರು. ಹೆಜಮಾಡಿಯ ನಾರಾಯಣಗುರು ‌ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸಲು ಅನುದಾನ, ಅಟೋ ರಿಕ್ಷಾ ಪಾರ್ಕ್ ಗೆ ತಗಡು ಚಪ್ಪರ ಹಾಗೂ ಇಂಟರ್ ಲಾಕ್ ಅಳವಡಿಸಲು ಅನುದಾನ ಒದಗಿಸುವಂತೆ ರಿಕ್ಷಾ ಯೂನಿಯನ್ ನವರು ಮತ್ತು ಹೆಜಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೃೆದ್ಯರನ್ನು ನೇಮಿಸುವಂತೆ ಹಾಗೂ ಜೌಷಧಿ ಹಾಗು ವೃೆದ್ಯೆಕೀಯ ಸಲಕರಣೆಗಳನ್ನು ಒದಗಿಸುವಂತೆ ಹೆಜಮಾಡಿ ಗ್ರಾ.ಪಂ ಸದಸ್ಯೆ ನಿರ್ಮಲಾ ರವರು ಮನವಿಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಗುಲಾಂ ಮೊಹಮ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಮಾಜಿ.ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ . ಕನ್ನಂಗಾರ್ ಮಸೀದಿ ಧರ್ಮ ಗುರು ಅಶ್ರಫ್ ಸಖಾಫಿ, ಗ್ರಾ.ಪಂ ಅಧ್ಯಕ್ಷೆ ರೇಷ್ಮಾ ಮೆಂಡನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ , ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ದಲಿತ ಮುಖಂಡ ರಾಜು ಹೆಜ್ಮಾಡಿ , ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ , ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ , ಕೆ.ಪಿ.ಸಿ.ಸಿ ಕೋ-ಅರ್ಡೀನೇಟರ್ ಅಬ್ದುಲ್ ಅಜೀಜ್ ಹೆಜ್ಮಾಡಿ, ಮಾಜಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಿಡಿಯೋ ಪೋರ್ಟಾಡೂ , ಉಪಸ್ಥಿತರಿದ್ದರು. ಕೇಶವ್ ಸಾಲ್ಯಾನ್ ಸ್ವಾಗತಿಸಿದರು. ಶೇಖರ್ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.

ಮೂಳೂರು - ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು

Posted On: 15-07-2024 08:22PM

ಉಚ್ಚಿಲ : ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡಿರುತ್ತಾನೆ.

ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.

ಸದಾ ಎಳನೀರು ಕುಡಿಯಲು ಆಗಮಿಸುವ ಗಿರಾಕಿಗಳು ಇರುವ ಗೂಡಂಗಡಿ ಇದಾಗಿದ್ದು, ಎದುರಿನಲ್ಲಿದ್ದ ಮರಕ್ಕೆ ಗುದ್ದಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ ಎಂದು ಗೂಡಂಗಡಿ ಮಾಲಕರು ತಿಳಿಸಿದ್ದಾರೆ.

ಜುಲೈ 16 (ನಾಳೆ) : ಮಳೆ ಹಿನ್ನೆಲೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

Posted On: 15-07-2024 07:40PM

ಕಾಪು : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿದ್ಯಾರ್ಥಿಗಳ ಹಿತರಕ್ಷಣೆಯಿಂದ ಉಭಯ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ (ಜುಲೈ 16)ದಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜುಲೈ 17 : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ - 'ಉಚ್ಚಿಲ ದಸರಾ-2024'ರ ಪೂರ್ವಭಾವಿ ಸಭೆ

Posted On: 15-07-2024 09:32AM

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದ ಈ ಬಾರಿಯ ದಸರಾ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜುಲೈ 17ರಂದು ಅಪರಾಹ್ನ ಗಂಟೆ 3 ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ.

ಕಳೆದ ಬಾರಿಯ ಉಚ್ಚಿಲ ದಸರಾ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದು ಈ ಬಾರಿಯ ಉತ್ಸವವು ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿದೆ. ಈ ಪ್ರಯುಕ್ತ ಎಲ್ಲಾ ಸಂಯುಕ್ತ ಸಭೆಗಳು, ಗ್ರಾಮಸಭೆಗಳು, ಸಮಾಜದ ವಿವಿಧ ಸಂಘಟನೆಗಳು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಗಳು, ಸಮಾಜದ ಪ್ರಮುಖರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸರ್ವ ಭಕ್ತಾಭಿಮಾನಿಗಳು ಸದ್ರಿ ಸಭೆಯಲ್ಲಿ ಭಾಗವಹಿಸಿ ಈ ಬಾರಿಯ ಉತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ಆಡಳಿತ ಮಂಡಳಿ, ದಸರಾ ಉತ್ಸವ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

ಜುಲೈ 15 : ಭಾರಿ ಮಳೆ ಹಿನ್ನೆಲೆ - ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

Posted On: 15-07-2024 06:44AM

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 15ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಸರಕಾರಿ ಅನುದಾನಿತ ಮತ್ತು ಖಾಸಗಿ ,ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಪಡುಬಿದ್ರಿ : ಸಾಗರ್ ವಿದ್ಯಾ ಮಂದಿರ ಶಾಲೆಯ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

Posted On: 15-07-2024 06:19AM

ಪಡುಬಿದ್ರಿ : ವಿದ್ಯಾ ದಾನದ ಮಹತ್ವಾಕಾಂಕ್ಷೆಯ ಮೂಲಕ ಮೊಗವೀರ ಸಮಾಜದ ಹಿರಿಯರು ಹುಟ್ಟು ಹಾಕಿದ ಶಾಲೆಯು ಇಂದು ಸಾಗರ್ ವಿದ್ಯಾಮಂದಿರ ಶಾಲೆಯಾಗಿ ಸಮಾಜದ ಮೊತ್ತಮೊದಲ ಆಂಗ್ಲ ಮಾಧ್ಯಮ ಶಾಲೆಯಾಗಿ ರೂಪು ಪಡೆದು ಬೆಳೆಯುತ್ತಿದೆ. ಈ ಶಾಲೆಯನ್ನು ಮತ್ತಷ್ಟು ಉನ್ನತಿಗೆ ಒಯ್ಯುವುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರೂ ಆಗಿರುವ ನಾಡೋಜಾ ಡಾ| ಜಿ. ಶಂಕರ್ ಹೇಳಿದರು. ಅವರು ಭಾನುವಾರ ಪಡುಬಿದ್ರಿಯ ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲಾ ಬೆಳಿಹಬ್ಬ ಸ್ಮಾರಕ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮಾತನಾಡಿದರು. ಮೂರನೇ ಬಾರಿಗೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ ಸಿ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಉಚ್ಚಿಲದ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗುತ್ತಿಗೆದಾರ ಪವನ್ ಆನಂದ್ ಎರ್ಮಾಳು, ಅರುಣಾ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಅನಂತೇಶ್ ವಿ.  ಪ್ರಭು, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್‌  ಕುಮಾರ್, ಶಾಂತಾ ಎಲೆಕ್ಟ್ರಿಕಲ್ಸ್‌ ಆಡಳಿತ ನಿರ್ದೇಶಕ ಶ್ರೀಪತಿ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅರುಣ್ ಶೆಟ್ಟಿ, ಬೆಳ್ಳಿಹಬ್ಬ ಕಟ್ಟಡ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಗ್ರಾಮಸಭೆಯ ಅಧ್ಯಕ್ಷರಾದ ಅಶೋಕ ಸಾಲ್ಯಾನ್, ಗಂಗಾಧರ ಕರ್ಕೇರ, ಪವಿತ್ರಾ ಗಿರೀಶ್, ಮಲ್ಲಿಕಾ ದಿನಕರ್, ನಾರಾಯಣ ಕರ್ಕೇರ,  ಹರಿಪ್ರಸಾದ್ ಎಚ್. ಮತ್ತಿತರರು ವೇದಿಕೆಯಲ್ಲಿದ್ದರು.

ಕಾಡಿಪಟ್ಣ ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ, ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್ ಸ್ವಾಗತಿಸಿದರು. ವಿನುತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮ್ಶಶ್ರೀ ರಾವ್ ವಂದಿಸಿದರು. ವೇ.ಮೂ.ರಾಮಕೃಷ್ಣ ಆಚಾರ್ಯ, ನಂದಕುಮಾರ್ ಆಚಾರ್ಯ ಅವರು ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಅದಮಾರು ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಪಾದೆಬೆಟ್ಟು ಆಯ್ಕೆ

Posted On: 14-07-2024 08:13PM

ಕಾಪು : ತಾಲೂಕಿನ ಅದಮಾರು ರಿಕ್ಷಾ ಚಾಲಕರ ಹಾಗೂ ಮಾಲಕರ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಪಾದೆಬೆಟ್ಟು ಆಯ್ಕೆಯಾಗಿರುತ್ತಾರೆ.

ಕುಲಾಲ ಸಂಘ (ರಿ.) ಕಾಪು ವಲಯ ಹಾಗೂ ಕುಲಾಲ ಯುವ ವೇದಿಕೆ ಕಾಪು ಇವರಿಗೆ ಅಭಿನಂದನೆ ಸಲ್ಲಿಸಿದೆ.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭೇಟಿ

Posted On: 14-07-2024 07:54PM

ಮುಲ್ಕಿ : ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ಸಂದರ್ಭ ದೇವಳ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಬಳಿಕ ರಾಹುಲ್ ಅವರು ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕೆ ಎಲ್ ರಾಹುಲ್ ಪತ್ನಿ ಬಾಲಿವುಡ್ ನಟಿ ಅತಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಅಶ್ವಿನ್ ಆಳ್ವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.