Updated News From Kaup
ಸೂರ್ಯಕಾಂತ್ ಜಯ ಸುವರ್ಣರಿಗೆ ಬೆಸ್ಟ್ ಚೇರ್ಮೆನ್ ಪ್ರಶಸ್ತಿ
Posted On: 24 May 2024, 05:08 PM
ಮಂಗಳೂರು : ಸೂರ್ಯಕಾಂತ್ ಜಯಸುವರ್ಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತ್ ಬ್ಯಾಂಕ್ ಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ. “ಭಾರತ ರತ್ನ ಸಹಕಾರಿತ ಸನ್ಮಾನ-2024” ರಲ್ಲಿ ಬಹು-ರಾಜ್ಯ ಅನುಸೂಚಿತ ಸಹಕಾರಿ ಬ್ಯಾಂಕ್ಗಳ ವಿಭಾಗದಲ್ಲಿ “ಕೊ-ಅಪರೇಟಿವ್ ಬ್ಯಾಂಕ್ ಸಮ್ಮಿಟ್” ನಲ್ಲಿ ಬೆಸ್ ಚೇರ್ಮೆನ್ ಅವಾರ್ಡ್ಅನ್ನು ಸೂರ್ಯಕಾಂತ್ ಜಯಸುವರ್ಣ ಪಡೆದುಕೊಂಡಿದ್ದಾರೆ. ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕ ಸುಮ್ನೇಶ್ ಜೋಶಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಹಿಂದೆ 1991ರಲ್ಲಿ ಬ್ಯಾಂಕ್ ಜವಬ್ದಾರಿಯನ್ನು ಹೊತ್ತಿದ್ದ ಜಯ ಸುವರ್ಣರವರಿಗೆ ‘ಬೆಸ್ಟ್ ಚ್ಯಾರ್ಮ್ಯಾನ್ ಅವಾರ್ಡ್’ ಲಭಿಸಿತ್ತು. ಕೊ-ಅಪರೇಟಿವ್ ಬ್ಯಾಂಕ್ಗಳಲ್ಲಿ ಭಾರತ್ ಬ್ಯಾಂಕ್ ಮೊಟ್ಟ ಮೊದಲು ಆರ್ಬಿಐನಿಂದ ಮಾನ್ಯತೆ ಪಡೆದ ಹೆಗ್ಗಳಿಕೆ ಕೂಡಾ ಇದೆ. ಇದೀಗ ಜಯ ಸುವರ್ಣರವರ ಬಳಿಕ ಕಾರ್ಪರೇಟ್ ಬ್ಯಾಂಕ್ ವಲಯದಲ್ಲಿ ಬೆಸ್ಟ್ ಚ್ಯಾರ್ಮ್ಯಾನ್ ಅವಾರ್ಡ್ ಅನ್ನು ಸೂರ್ಯಕಾಂತ್ ಜಯಸುವರ್ಣ ತಮ್ಮದಾಗಿಸಿಕೊಂಡಿದ್ದಾರೆ ಮೇ 23 ಭಾರತ್ ಬ್ಯಾಂಕ್ ಗೆ 25 ವರ್ಷ ಪೂರೈಸಿದ ಸಂಭದ್ರದ ದಿನವಾಗಿದ್ದು ಅಂದೇ ಈ ಪ್ರಶಸ್ತಿ ಲಭಿಸಿರುವುದು ಬಹಳ ವಿಶೇಷ. ಭಾರತ್ ಬ್ಯಾಂಕ್ ಇಂದು ದೇಶದ ಹಲವು ರಾಜ್ಯಗಳಲ್ಲಿ 100 ಕ್ಕೂ ಅಧಿಕ ಬ್ರಾಂಚ್ಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.
ಪಡುಬಿದ್ರಿ : ಅದಾನಿ ಪವರ್ ಕಂಪನಿ ಭದ್ರತಾ ಸಿಬ್ಬಂದಿ ಪ್ರತಿಭಟನೆ ; ಬೇಡಿಕೆ ಈಡೇರಿಕೆಗೆ ಒಪ್ಪಿಗೆ
Posted On: 24 May 2024, 04:28 PM
ಪಡುಬಿದ್ರಿ : ವೇತನ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅದಾನಿ ಪವರ್ ಕಂಪನಿಯ ಭದ್ರತಾ ಸಿಬ್ಬಂದಿಗಳು ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಕಂಪನಿ ಒಪ್ಪಿಗೆ ಸೂಚಿಸಿ ಪ್ರತಿಭಟನೆಗೆ ಜಯ ಸಿಕ್ಕಿದಂತಾಗಿದೆ. ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಸೆಕ್ಯೂರಿಟಿ ಕಂಪೆನಿ ಗುತ್ತಿಗೆ ಕಾರ್ಮಿಕರಾಗಿ 19 ವರ್ಷಗಳಿಂದ ದುಡಿಯುತ್ತಿರುವ ಸುಮಾರು 74 ಭದ್ರತಾ ಸಿಬ್ಬಂದಿ ಶಾಂತಿಯುತ ಹೋರಾಟ ಆರಂಭಿಸಿದ್ದರು. ಮೊದಲು ಇಲ್ಲಿನ ಸಿಬ್ಬಂದಿ ಪ್ರತೀಕ್ ಹೆಗ್ಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರಿಗೆ ಇತರೆ ಭದ್ರತಾ ಸಿಬ್ಬಂದಿ ಬೆಂಬಲ ಸೂಚಿಸಿದ್ದರು. ತುಟ್ಟಿಭತ್ಯೆ ಜತೆಗೆ ರೂ.400 ಸಂಬಳ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಎಪ್ರಿಲ್ ತಿಂಗಳಿಂದ ಗಾರ್ಡಿಯನ್ ಹಾಗೂ ಅದಾನಿ ಕಂಪೆನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದೂವರೆ ತಿಂಗಳಾದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಆರಂಭಿಸಿದ್ದೆವು. ಶಾಸಕರ ಮಧ್ಯಸ್ಥಿಕೆಯಲ್ಲಿ ಕಂಪೆನಿ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಮಿಕ ಮುಖಂಡ ಸುನಿಲ್ ಹೇಳಿದರು.
ಶಿರ್ವ : ಸಿಡಿಲು ಬಡಿದು ಯುವಕ ಮೃತ್ಯು
Posted On: 24 May 2024, 03:57 PM
ಶಿರ್ವ : ಸ್ನಾನಕ್ಕೆಂದು ತೆರಳಿದ್ದ ವೇಳೆ ಸಿಡಿಲು ಬಡಿದು ಕಾಲೇಜು ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಶಿರ್ವ ಸಮೀಪದ ಮಾಣಿಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ ಮೃತ ವಿದ್ಯಾರ್ಥಿಯನ್ನು, ಶಿರ್ವ ಮಾಣಿಬೆಟ್ಟು ತೋಟದ ಮನೆ ನಿವಾಸಿ ರಮೇಶ್ ಪೂಜಾರಿಯವರ ಮಗ ರಕ್ಷಿತ್ ಪೂಜಾರಿ (20) ಎಂದು ಗುರುತಿಸಲಾಗಿದೆ. ಈತ ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು. ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಯ ವೇಳೆಗೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಮನೆಯೇ ಗ್ರಂಥಾಲಯ - ವಿನೂತನ ಕಾರ್ಯಕ್ರಮಕ್ಕೆ ಚಾಲನೆ
Posted On: 22 May 2024, 04:12 PM
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ "ಮನೆಯೇ ಗ್ರಂಥಾಲಯ" ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ .ಪಿ .ರಾವ್ ಅವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ "ವಾಟಿಕಾ"ದಲ್ಲಿ ಚಾಲನೆ ನೀಡಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರ ರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣ ಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ ಆಗುವುದೇ ಹೊರತು ಬೇರೆ ಯಾವುದರಿಂದಲೂ ಆಗುವುದಿಲ್ಲ ಎಂದು ನಾಡೋಜ ಕೆ. ಪಿ. ರಾವ್ ಅವರು ತಿಳಿಸಿದರು. ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ನುಡಿಗಳನ್ನಾಡುತ್ತಾ ಇದೊಂದು ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಉಡುಪಿ ತಾಲೂಕಿನ ಮನೆ ಮಂದಿರಗಳಲ್ಲಿ ಆಸ್ಪತ್ರೆಗಳಲ್ಲಿ ಅಂಗಡಿಗಳಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತೇವೆ . ಈ ಮೂಲಕ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಜಿಲ್ಲಾ ಸಹಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ,ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ - ಷಷ್ಟ್ಯಬ್ದ ಸಂಭ್ರಮ ; ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ
Posted On: 21 May 2024, 06:31 PM
ಎಲ್ಲೂರು : ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ) ಇದರ ಅರವತ್ತನೇ ವರ್ಷದ ಸಂಭ್ರಮಾಚರಣೆ ಷಷ್ಟ್ಯಬ್ದ ಸಂಭ್ರಮ ಪ್ರಯುಕ್ತ ಸತತ 288 ಗಂಟೆಗಳ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ "ಅಖಂಡ ದ್ವಾದಶಾಹ ವೈಭವಂ " ಊರ ಪರವೂರ ಮಹನೀಯರು ನಂದಾದೀಪವನ್ನು ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಆಗಮ ಪಂಡಿತರಾದ ವಿದ್ವಾನ್ ಕೇಂಜ ಶ್ರೀಧರ ತಂತ್ರಿಗಳು, ಅಖಂಡ ದ್ವಾದಶಾಹ ಭಜನಾ ವೈಭವಮ್ ಸಮಿತಿಯ ಗೌರವಾಧ್ಯಕ್ಷರಾದ ಕೆ.ಎಲ್ ಕುಂಡಂತಾಯರು, ನಂದಿಕೂರು ದೇವಳದ ಮಧ್ವರಾಯ ಭಟ್, ರಘು ಶೆಟ್ಟಿಗಾರ್, ಡಾ.ಭವಾನಿ ಶಂಕರ್, ಸುನೀಲ್ ಕುಮಾರ್ ಶೆಟ್ಟಿ ಸಾಂತೂರು, ನಾಗರತ್ನ ರಾವ್ ದಂಪತಿಗಳು, ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ದಂಪತಿಗಳು, ಕಾರ್ಯದರ್ಶಿ ಕೃಷ್ಣಾನಂದ ರಾವ್, ಅರ್ಚಕ ಗುರುರಾಜ ಆಚಾರ್ಯ ಮತ್ತಿತರು ಹಾಜರಿದ್ದರು. ಮಾತೃ ಮಂಡಳಿಯ ಭಜಕರಿಂದ ಆರಂಭಗೊಂಡ ಭಜನಾ ವೈಭವದಲ್ಲಿ ಪ್ರಸಿದ್ದ ದಾಸವಾಣಿ ಕೀರ್ತನಕಾರ ಮೈಸೂರು ರಾಮಚಂದ್ರಚಾರ್ ಭಜನೆ ಹಾಡಿದ್ದು ವಿಶೇಷವಾಗಿತ್ತು.
ಮಂಗಳೂರು ಸಮುದ್ರ ತೀರದಲ್ಲಿ ಹೈ ಅಲರ್ಟ್, ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ಧ
Posted On: 21 May 2024, 01:52 PM
ಮಂಗಳೂರು : ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಸಮುದ್ರ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನಲೆ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ. ಮಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ. ಇಂದಿನಿಂದ 2 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದವಾಗಿದೆ. ಉರಿ ಬಿಸಿಲಿನ ನಡುವೆ ಮೋಡದ ವಾತಾವರಣವಿದೆ. ಈ ವಾರದಲ್ಲಿ ಗುಡುಗು ಸಿಡಿಲು ಮಳೆಯ ಮುನ್ನೆಚ್ಚರಿಕೆಯನ್ನ ಜಿಲ್ಲಾಡಳಿತ ನೀಡಿದೆ. ಭಾರೀ ಗಾತ್ರದ ಸಮುದ್ರದಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮೇ 28 - 30 : ಉಡುಪಿಯ ಬೊಬ್ಬರ್ಯ ಕಟ್ಟೆ ದೈವಗಳ ವಾರ್ಷಿಕ ನೇಮೋತ್ಸವ
Posted On: 21 May 2024, 12:00 PM
ಉಡುಪಿ : ಇಲ್ಲಿನ ವುಡ್ಲಾಂಡ್ಸ್ ಹೋಟೆಲ್ ಬಳಿಯ ಬೊಬ್ಬರ್ಯ ಕಟ್ಟೆ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜ, ಪರಿವಾರ ದೈವಗಳ ದೇವಸ್ಥಾನದಲ್ಲಿ ಮೇ 28 ರಿಂದ 30 ರವರೆಗೆ ವಾರ್ಷಿಕ ನೇಮೋತ್ಸವ ಜರಗಲಿದೆ. ಮೇ 28, ಮಂಗಳವಾರ ರಾತ್ರಿ ಗಂಟೆ 9 ರಿಂದ ಬೊಬ್ಬರ್ಯ ದೈವದ ಕೋಲ, ಮೇ 29, ಬುಧವಾರ ಸಂಜೆ 4 ಗಂಟೆಗೆ ಕಾಂತೇರಿ ಜುಮಾದಿ ಪರಿವಾರ ದೈವಗಳ ಬಂಡಾರ ಮೆರವಣಿಗೆ, ರಾತ್ರಿ 8:30ಕ್ಕೆ ಸನ್ಮಾನ ಕಾರ್ಯಕ್ರಮ, ರಾತ್ರಿ ಗಂಟೆ 9 ರಿಂದ ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ನೇಮೋತ್ಸವ, ಮೇ 30, ಗುರುವಾರ ಸಂಜೆ 5 ರಿಂದ ಕಲ್ಕುಡ ದೈವದ ನೇಮೋತ್ಸವ, ರಾತ್ರಿ ಗಂಟೆ 7ರಿಂದ ಕೊರಗಜ್ಜ ದೈವದ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ : ಟೋಲ್ ವಿನಾಯಿತಿ ರದ್ದು - ಮೇ 24ರಂದು ಮನವಿ ಸಲ್ಲಿಸಲು ಸಮಿತಿ ನಿರ್ಧಾರ
Posted On: 21 May 2024, 11:40 AM
ಹೆಜಮಾಡಿ : ಇಲ್ಲಿಯ ಟೋಲ್ ಪ್ಲಾಝಾದಲ್ಲಿ ಈ ಹಿಂದೆ ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು. ಕಳೆದ ವಾರದಿಂದ ವಿನಾಯಿತಿ ರದ್ದುಗೊಳಿಸಿ ಫಾಸ್ಟ್ಟ್ಯಾಗ್ನಲ್ಲಿ ಟೋಲ್ ಸುಂಕ ಕಡಿತಗೊಳಿಸಲಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು ಪೂರ್ವಭಾವಿಯಾಗಿ ಶಾಂತಿಯುತವಾಗಿ ಮೇ 24ರಂದು ಮನವಿ ಸಲ್ಲಿಸಲು ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ. ಹೆಜಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು. ಹೆಜಮಾಡಿ ಒಳ ರಸ್ತೆಗೂ ಹೆದ್ದಾರಿ ಇಲಾಖೆ ಟೋಲ್ ಕೇಂದ್ರ ಸ್ಥಾಪಿಸಿರುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಹೋರಾಟ ಸಮಿತಿಯ ಶೇಖರ್ ಹೆಜಮಾಡಿ, ಶೇಖಬ್ಬ ಕೋಟೆ, ನವೀನ್ಚಂದ್ರ ಜೆ. ಶೆಟ್ಟಿ, ವೈ. ಸುಕುಮಾರ್, ಅಬ್ದುಲ್ ಅಝೀಝ್ ಹೆಜಮಾಡಿ, ರೋಲ್ಫಿ ಡಿ ಕೋಸ್ತ, ಅಬ್ಬಾಸ್ ಹಾಜಿ, ವಿಶ್ವಾಸ್ ವಿ.ಅಮೀನ್, ಗಣೇಶ್ ಆಚಾರ್ಯ ಉಚ್ಚಿಲ, ಉಮಾನಾಥ್ ಕೋಟ್ಯಾನ್, ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಅಬ್ಬಾಸ್ ಹಾಜಿ, ಸಂತೋಷ್ ಪಡುಬಿದ್ರಿ, ನಿರ್ಮಲಾ, ತೇಜ್ಪಾಲ್ ಸುವರ್ಣ, ರಘುವೀರ್ ಸುವರ್ಣ, ಸುಧೀರ್ ಕರ್ಕೇರ, ಸನಾ ಇಬ್ರಾಹಿಂ, ಸುಭಾಸ್ ಸಾಲ್ಯಾನ್, ಅರುಣ್ ಶೆಟ್ಟಿ, ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಮೇ 22: ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ
Posted On: 20 May 2024, 05:31 PM
ಕಾರ್ಕಳ : ತಾಲೂಕಿನ ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಮೇ 22 ರ ರಾತ್ರಿ 8 ಗಂಟೆಯಿಂದ ಸತ್ಯದೇವತೆ, ವರ್ತೆ ಪಂಜುರ್ಲಿ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ.
ಕಟಪಾಡಿ : ಶ್ರೀ ಶಂಕರಪುರ ಕ್ಷೇತ್ರದಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ಪಾನ ಪ್ರಿಯ ಕಾಲಭೈರವ ಸ್ವಾಮಿ
Posted On: 20 May 2024, 03:51 PM
ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ 2018 ರಂದು ಸ್ಥಾಪನೆಯಾದ ಪ್ರಾಣಿ-ಪಕ್ಷಿ ಮೋಕ್ಷಕಟ್ಟೆ ಬಳಿಕ ಈ ಕಟ್ಟೆಯಲ್ಲಿ ಕಾಲಭೈರವ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಉಜ್ಜಯಿನಿ ಸಂಕಲ್ಪದಲ್ಲಿ ಸೇವೆ ನಡೆಯಬೇಕು ಎಂದು ಗುರು ನೀಡಿದ ಆಜ್ಞೆಯಂತೆ 2023ರ ಡಿಸೆಂಬರ್ ನಲ್ಲಿ ದೇಶದಾದ್ಯಂತ ಶ್ರೀ ಕ್ಷೇತ್ರಕ್ಕೆ ಬಂದ 150ಕ್ಕೂ ಹೆಚ್ಚು ಸಾಧು-ಸಂತರ ಉಪಸ್ಥಿತಿಯಲ್ಲಿ ಶಿಲಾಮಯ ಗುಡಿಯಲ್ಲಿ ಕಾಲಭೈರವ ಸ್ವಾಮಿಯ ಪ್ರತಿಷ್ಠೆ ನಡೆದಿತ್ತು. ಅಂದಿನಿಂದ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಪ್ರಾರ್ಥನೆಯನ್ನು ಕಾಲಭೈರವ ಸ್ವಾಮಿಗೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡ ಸಾವಿರಾರು ಉದಾಹರಣೆಗಳಿವೆ. ಕಾಲಭೈರವ ಸ್ವಾಮಿಗೆ ಉಜ್ಜಯಿನಿಯ ಸಂಕಲ್ಪದಂತೆ ಪ್ರತಿದಿನ ಸಂಜೆ ಭಕ್ತರು ನೀಡಿದ ಮದ್ಯವನ್ನು ನೈವೇದ್ಯವಾಗಿ ಸಲ್ಲಿಸಲಾಗುತ್ತದೆ. 2024 ಮೇ 19ರ ಆದಿತ್ಯವಾರ ಸಂಜೆ ನೈವೇದ್ಯ ಸೇವೆಯನ್ನು ಸಮರ್ಪಿಸುವಾಗ ಮಧ್ಯ ಹಾಕಿದ ತಟ್ಟೆಯಿಂದ ಮದ್ಯವನ್ನು ಹೀರಿಕೊಳ್ಳುವ ಘಟನೆಯನ್ನು ಆಶ್ಚರ್ಯಚಕಿತರಾಗಿ ಗಮನಿಸಿದ ಭಕ್ತರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಕಾರಣ ಮತ್ತಷ್ಟು ಭಕ್ತರನ್ನು ಶ್ರೀ ಕ್ಷೇತ್ರಕ್ಕೆಆಕರ್ಷಿಸುತ್ತಿದೆ. ಮಧ್ಯ ನೀಡುವುದರಿಂದ ಭಕ್ತರಿಗೆ ಬರುವ ಅನಾರೋಗ್ಯ, ಸಂಕಷ್ಟ ನೋವುಗಳನ್ನ ತನ್ನಲ್ಲಿಗೆ ಹೀರಿಕೊಳ್ಳುತ್ತಿದ್ದಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.
