Updated News From Kaup
ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ

Posted On: 01-03-2024 01:44PM
ಶಂಕರಪುರ : ರಾಷ್ಟ್ರೀಯ ಅಧ್ಯಕ್ಷರು ಜಗದೂರು ಅವಿಚಲ ದೇವಾಚಾರ್ಯ ಜಿ ಅವರ ಒಪ್ಪಿಗೆಯೊಂದಿಗೆ ಮತ್ತು ಗೌರವಾನ್ವಿತ ಮುಖ್ಯ ನಿರ್ದೇಶಕ ಶ್ರೀ ಮಹಂತ್ ಜ್ಞಾನದೇವ್ ಸಿಂಗ್ ಜಿ ಯವರ ಸಮಾಲೋಚನೆಯೊಂದಿಗೆ 2024 ಮಾರ್ಚ್ 02, 03 ಶನಿವಾರದಂದು ಪ್ರಬೋಧಿನಿ, ಜ್ಞಾನ ಶ್ರೇಷ್ಠ ಕೇಂದ್ರ, ಕೇಶವ ಸೃಷ್ಟಿ, ಉತ್ತಾನ್ ರಸ್ತೆ, ಭಯಂದರ್ ಪಶ್ಚಿಮ ಥಾಣೆ (ಮುಂಬೈ) ಮಹಾರಾಷ್ಟ್ರದಲ್ಲಿ ನಡೆಯುವ ಸಭೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಭಾಗವಹಿಸಲಿದ್ದಾರೆ ಎಂದು ಶಂಕರಪುರ ದ್ವಾರಕಾಮಾಯಿ ಮಠದ ಪ್ರಕಟಣೆ ತಿಳಿಸಿದೆ.
ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ
.jpg)
Posted On: 29-02-2024 07:39PM
ಪಡುಬಿದ್ರಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮ ಅಂಗವಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಾರ್ಚ್ 5, ಮಂಗಳವಾರ ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ಅಯೋಜಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳ ಪತ್ರಕರ್ತರ ಸಂಘಗಳ ತಂಡಗಳು ಪಂದ್ಯಾಟದಲ್ಲಿ ರಜತ ಸಂಭ್ರಮ ಟ್ರೋಫಿಗಾಗಿ ಸೆಣಸಾಡಲಿದೆ. ಮಾಚ್೯ 5, ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾಟ ಆರಂಭಗೊಳ್ಳಲಿದೆ. 11 ಗಂಟೆಗೆ ಕಾಪು ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಅಧ್ಯಕ್ಷತೆಯಲ್ಲಿ ಉಡುಪಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪಂದ್ಯಾಟ ಉದ್ಘಾಟಿಸುವರು.
ಪಡುಬಿದ್ರಿ ಆಸ್ಪಿನ್ ಇನ್ಫ್ರಾ ಲಿ.ನ ಜಿ.ಎಮ್. ಅಶೋಕ್ ಶೆಟ್ಟಿ, ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಆರ್., ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾ.ಪಂ.ಮಾಜಿ ಸದಸ್ಯ ಸಚಿನ್ ನಾಯಕ್, ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ ಮುಖ್ಯ ಅತಿಥಿಗಳಾಗಿರುವರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಶಸ್ತಿ ವಿತರಿಸುವರು. ಅದಾನಿ ಪವರ್ ಲಿ. ಅಧ್ಯಕ್ಷ ಕಿಶೋರ್ ಆಳ್ವ, ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್, ಕಾಪು ಗಾರ್ಡನ್ ಪ್ಯಾಲೇಸ್ ಎಮ್.ಡಿ. ಗೌರವ್ ಶೇಣವ, ಪಡುಬಿದ್ರಿ ಅಮರ್ ಕಂಫರ್ಟ್ಸ್ನ ಮಿಥುನ್ ಆರ್.ಹೆಗ್ಡೆ, ಕೆಪಿಸಿಸಿ ಕೋರ್ಡಿನೇಟರ್ ನವೀನ್ಚಂದ್ರ ಜೆ.ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು ಎಂದು ಕ್ರೀಡಾ ಸಮಿತಿಯ ಸಂಚಾಲಕ ರಾಕೇಶ್ ಕುಂಜೂರು ತಿಳಿಸಿದ್ದಾರೆ.
ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ನೇಮಕ

Posted On: 29-02-2024 04:15PM
ಕಾಪು : ತಾಲೂಕು ಭೂನ್ಯಾಯ ಮಂಡಳಿಗೆ ಸರಕಾರ ನಾಲ್ವರನ್ನು ಸದಸ್ಯರನ್ನಾಗಿ ನೇಮಿಸಿ ನಾಮ ನಿರ್ದೇಶನ ಮಾಡಿದೆ.
ರೋಹನ್ ಕುಮಾರ್ ಕುತ್ಯಾರು, ಶ ಮೆಲ್ವಿನ್ ಡಿ'ಸೋಜಾ, ರಮೀಜ್ ಹುಸೈನ್ ಪಡುಬಿದ್ರಿ ಮತ್ತು ರಾಘವ ಕೋಟ್ಯಾನ್ ಬೆಳ್ಳೆ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರನ್ನು ಮಂಡಳಿಯ ಅಧ್ಯಕ್ಷರನ್ನಾಗಿ, ಕಾಪು ತಾಲೂಕು ತಹಶೀಲ್ದಾರ್ರವರನ್ನು ಸದಸ್ಯ ಕಾರ್ಯದರ್ಶಿಯಾಗಿ ರಾಜ್ಯಪಾಲರ ಆಜ್ಞಾನುಸಾರ ಮುಂದಿನ ಆದೇಶದವರೆಗೆ ನೇಮಿಸಿ ನಾಮನಿರ್ದೇಶನ ಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿ ಗೌರಮ್ಮ ಆರ್. ಆದೇಶದಲ್ಲಿ ತಿಳಿಸಿದ್ದಾರೆ.
ಶಿರ್ವ : ವಿಶ್ವ ಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗ ಶಿರ್ವ - ಏಕಾದಶ ವರ್ಷದ ವಾರ್ಷಿಕೋತ್ಸವ

Posted On: 29-02-2024 10:29AM
ಶಿರ್ವ : ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗ ಶಿರ್ವ ಇದರ ಏಕಾದಶ ವರ್ಷದ ವಾರ್ಷಿಕೋತ್ಸವ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಬುರಾಯ ಆಚಾರ್ಯ ಮತ್ತು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವ್ಯ ವಿ. ಆಚಾರ್ಯ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿರ್ವ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾದ ಶ್ರೀಧರ ಕೆ. ಜಿ., ಹಿರಿಯ ಭಜನಾ ತರಬೇತುದಾರರಾದ ಗಂಗಾಧರ ಆಚಾರ್ಯ ಕುತ್ಯಾರು, ನಾಟಕ ಕಲಾವಿದರಾದ ಪಡುಕುತ್ಯಾರು ಶಶಿರಾಜ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಮೂರು ಜನ ಅಶಕ್ತರಿಗೆ ಧನ ಸಹಾಯ ನೀಡಲಾಯಿತು ಮತ್ತು 27 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಯುವ ಸಂಗಮದ ಅಧ್ಯಕ್ಷ ಉಮೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಬಳಗದ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ, ಕಾರ್ಯದರ್ಶಿ ಮಂಜುಳಾ ಉಮೇಶ್ ಆಚಾರ್ಯ, ಗೌರವಾಧ್ಯಕ್ಷ ಸುರೇಶ ಆಚಾರ್ಯ, ಸ್ಥಾಪಕರಾದ ಕಾಪು ಶ್ರೀಕಾಂತ ಆಚಾರ್ಯ, ಗಣೇಶ್ ಆಚಾರ್ಯ, ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಕಾರ್ಯದರ್ಶಿ ಮಾದವ ಆಚಾರ್ಯ ಪ್ರಾಸ್ತಾವನೆಗೈದರು. ಪುರೋಹಿತ್ ರವಿ ಆಚಾರ್ಯ ವಿಶ್ವಕರ್ಮ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶರ್ಮಿಳ ಸದಾಶಿವ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ದೇಶಿಸಿದ್ದರು.
ಪತಂಜಲಿ ಕಟಪಾಡಿ ಕಕ್ಷೆಯ ವತಿಯಿಂದ ಮನೋಹರ್ ಕಾಮತ್ ಮುಂಬೈ ಇವರಿಗೆ ಸನ್ಮಾನ

Posted On: 29-02-2024 10:23AM
ಕಟಪಾಡಿ : ಮೂಲದ ಪ್ರಸ್ತುತ ಮುಂಬೈ ಯಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮನೋಹರ್ ಕಾಮತ್ ಇವರು ತಮ್ಮ ಇಳಿ ವಯಸ್ಸಿನಲ್ಲೂ ಕಳೆದ 30 ವರ್ಷಗಳಿಂದ ಯೋಗ ಸಾಧನೆಯನ್ನು ಮಾಡುತ್ತಿದ್ದು, ಇವರ ಯೋಗ ಶ್ರದ್ಧೆ, ಜೀವನೋತ್ಸಾಹ ಹಾಗೂ ಶ್ವಾನ ಪ್ರಿಯತೆಯನ್ನು ಮನಗಂಡು ಕಟಪಾಡಿ ಪತಂಜಲಿ ಯೋಗ ಕಕ್ಷೆಯ ವತಿಯಿಂದ ಸನ್ಮಾನಿಸಲಾಯಿತು.
ಪಾಂಗಾಳ : ಹಾಳಾಗಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಚಾಲಕ ಮೃತ್ಯು

Posted On: 28-02-2024 09:53PM
ಪಾಂಗಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದು, ಕಾರು ಚಾಲಕ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ
ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ನಾಗೇಶ್ ಮೃತ ದುರ್ದೈವಿ. ಇವರು ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಕಾರು ಹಾಗು ಲಾರಿಯನ್ನು ತೆರವುಗೊಳಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಉಪ ಅಂಚೆ ಕಚೇರಿ ನೂತನ ಕಟ್ಟಡ - ಉದ್ಘಾಟನೆ

Posted On: 28-02-2024 08:22PM
ಪಡುಬಿದ್ರಿ : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 55.65 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ ಪಡುಬಿದ್ರಿ ಉಪ ಅಂಚೆ ಕಚೇರಿ ನೂತನ ಕಟ್ಟಡದ ಉದ್ಘಾಟನೆಯನ್ನು ಫೆ.28ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಅಹಾರ ಸಂಸ್ಕರಣ ಉದ್ಯಮ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರೊಂದಿಗೆ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಅಂಚೆ ಇಲಾಖೆ ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ. ಪಡುಬಿದ್ರಿ ಉಪ ಅಂಚೆ ಕಚೇರಿ ಜನಸಾಮಾನ್ಯರ ಕಚೇರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ಟಿ.ಎಸ್ ಅಶ್ವತ್ಥನಾರಾಯಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮುಲ್ಕಿ : ಶಿವಾಯ ಫೌಂಡೇಶನ್ ಮುಂಬೈ ವತಿಯಿಂದ ದಿನಸಿ ಸಾಮಾಗ್ರಿ, ವಿಧವಾ ವೇತನದ ಚೆಕ್ ಹಸ್ತಾಂತರ

Posted On: 28-02-2024 07:42PM
ಮುಲ್ಕಿ : ಶಿವಾಯ ಫೌಂಡೇಶನ್ (ರಿ.) ಮುಂಬೈ ಸಂಸ್ಥೆಯ ವತಿಯಿಂದ ಫೆ.28ರಂದು ಮುಲ್ಕಿ ಕಾರ್ನಾಡು ಅಮೃತಮಯಿ ನಗರ ನಿವಾಸಿ ಗೀತಾ ರವರ ಕುಟುಂಬಕ್ಕೆ 4ನೇ ತಿಂಗಳಿನ ದಿನಬಳಕೆಯ ದಿನಸಿ ಸಾಮಾಗ್ರಿ ಹಾಗೂ ವಿಧವಾ ವೇತನದ ಚೆಕ್ ನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ರವಿ ಶೆಟ್ಟಿ ಶಾರದೆ, ಪಡುಬಿದ್ರಿ ರಮಣಿ ಐಸ್ ಕ್ರೀಮ್ ಪಾರ್ಲರ್ ಮಾಲಿಕರಾದ ಜಗನ್ನಾಥ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ನವೀನ್, ಸದಸ್ಯರಾದ ಮಹೇಶ್ ದೇವಾಡಿಗ ಹಳೆಯಂಗಡಿ, ಸಂಸ್ಥೆಯ ಹಿತೈಷಿ ಸುಧಾಕರ್ ಕೆ ಪಡುಬಿದ್ರಿ ಉಪಸ್ಥಿತರಿದ್ದರು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿಗೆ “Incridea - 24” ರನ್ನರ್ ಆಫ್ ಟ್ರೋಫಿ
Posted On: 28-02-2024 07:04PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯ, ಬಂಟಕಲ್ಲುವಿನ ಒಟ್ಟು 60 ವಿದ್ಯಾರ್ಥಿಗಳು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ(ಎಮ್.ಎ.ಎಮ್.ಐ.ಟಿ)ದಲ್ಲಿ ದಿನಾಂಕ 22 ರಿಂದ 24 ಫೆಬ್ರವರಿ 2024 ರಂದು ನಡೆದ "Incridea-24" ರಲ್ಲಿ ಭಾಗವಹಿಸಿ ರನ್ನರ್ ಆಫ್ ಟ್ರೋಫಿ ಹಾಗೂ ರೂ. 20,000 ನಗದು ಬಹುಮಾನವನ್ನು ಪಡೆದಿರುತ್ತಾರೆ.
"Incridea-24" ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಾದ ಕೋಡ್ 45, ವೆಬೆಡ್, ಮೂವಿಡಿಯಾ- ಫೋಟೋಗ್ರಫಿ ಮತ್ತು ಲೈನ್ ಫಾಲೋವರ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದರೆ, ಶೆರ್ಲಾಕ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಮೆಮೆ ವಾರ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಪತ್ಯೇತರ ಚಟುವಟಿಕೆಯ ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
ಮಾಚ್೯ 2 : ಸಾಂತೂರು ದೊಡ್ಡಮಠ ಕುಟುಂಬಸ್ಥರ ಮೂಲ ನಾಗಬನದಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ, ದೈವದ ನೇಮೋತ್ಸವ

Posted On: 28-02-2024 11:48AM
ಕುತ್ಯಾರು : ಸಾಂತೂರು ದೊಡ್ಡಮಠ ಕುಟುಂಬಸ್ಥರ ಮೂಲ ನಾಗಬನದಲ್ಲಿ ಮಾಚ್೯ 02, ಶನಿವಾರ ಶ್ರೀ ಸೋದೆ ವಾದಿರಾಜ ಮಠದ ಯತಿಗಳಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ ಏಕ ಪವಿತ್ರ ನಾಗಮಂಡಲೋತ್ಸವ ಮತ್ತು ದೈವದ ನೇಮೋತ್ಸವವು ಜರಗಲಿದೆ.
ಸಾಂತೂರು ವೇ|ಮೂ| ಶ್ರೀ ರಘುಪತಿ ಜೋಯಿಸರ ನೇತೃತ್ವದಲ್ಲಿ ಹಾಗೂ ಕಲ್ಲಂಗಳ ವೇ। ಮೂ| ಶ್ರೀ ಬಿ. ಎನ್ ರಾಮಚಂದ್ರ ಕುಂಜಿತ್ತಾಯ ಇವರ ಸಹಕಾರದೊಂದಿಗೆ ಮತ್ತು ಕೃಷ್ಣಪ್ರಸಾದ ವೈದ್ಯ, ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಮತ್ತು ಬಳಗದ ಸಹಯೋಗದೊಂದಿಗೆ ನೆರವೇರಲಿದೆ.
ಮಾಚ್೯ 2 ರಂದು ಬೆಳಿಗ್ಗೆ 7:30ರಿಂದ ಪುಣ್ಯಾಹವಾಚನೆ, ಮಧ್ಯಾಹ್ನ 12 :30ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ನಾಗಬನದಲ್ಲಿ ಹಾಲಿಟ್ಟು ಸೇವೆ, ನಾಗಮಂಟಪದಲ್ಲಿ ಕಲ್ಪೋಕ್ತ ಪೂಜೆ, ಸಂಜೆ 6 ಗಂಟೆಗೆ ನಾಗಮಂಡಲ ಸೇವೆ, ರಾತ್ರಿ 8 ಗಂಟೆಗೆ ಪ್ರಸಾದ ವಿತರಣೆ, 8:30 ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 9ಗಂಟೆಗೆ ಪಂಜುರ್ಲಿ ನೇಮೋತ್ಸವ ಜರಗಲಿದೆ ಎಂದು ಸಾಂತೂರು ದೊಡ್ಡಮಠ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.