Updated News From Kaup
ಕಾಪು : ಪರ್ಯಾಯೋತ್ಸವ ಪ್ರಯುಕ್ತ ಕಾಪು ವಲಯ ವತಿಯಿಂದ ಹೊರೆಕಾಣಿಕೆ ಸಮರ್ಪಣೆ
Posted On: 14 Jan 2024, 12:24 PM
ಕಾಪು : ಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವ ಪ್ರಯುಕ್ತ ಕಾಪು ವಲಯ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ಜರುಗಿತು. ಕಾಪು ಶ್ರೀ ಹೊಸಮಾರಿಗುಡಿಯಿಂದ ಹೊರಟ ವಾಹನ ಶೋಭಾಯಾತ್ರೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಕಾಪುವಿಂದ ಹೊರಟು ಉಡುಪಿ ಜೋಡುಕಟ್ಟೆ ತಲುಪಿ ಅಲ್ಲಿಂದ ಶ್ರೀಕೃಷ್ಣಮಠಕ್ಕೆ ಮೆರವಣಿಗೆಯ ಮೂಲಕ ಸಾಗಿ ಹಸಿರು ಹೊರೆಕಾಣಿಕೆಯನ್ನು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಸಮರ್ಪಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ವಿಶ್ವದೆಲ್ಲೆಡೆ ಸಂಚರಿಸಿ ಮಠಮಂದಿರಗಳನ್ನು ಸ್ಥಾಪಿಸುವ ಮೂಲಕ ನಮ್ಮ ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ವಿಶ್ವವ್ಯಾಪಿಗೊಳಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಸಿಂಗಪುರ, ದುಬೈ ಸಹಿತ ಎಲ್ಲಾ ಕಡೆ ಹಿಂದೂ ಧರ್ಮವನ್ನು ಪಸರಿಸಿ ವಿಶ್ವಮಾನ್ಯಗೊಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಕಾಪು ವಲಯ ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಗೀತಾಂಜಲಿ ಎಮ್. ಸುವರ್ಣ, ಶಿಲ್ಪಾ ಜಿ. ಸುವರ್ಣ, ಶಶಿಕಾಂತ್ ಪಡುಬಿದ್ರಿ, ಅರುಣ್ ಶೆಟ್ಟಿ ಪಾದೂರು, ಹೊರೆ ಕಾಣಿಕೆ ಸಮಿತಿಯ ಸಂಚಾಲಕರುಗಳಾದ ಶ್ರೀಕರ ಶೆಟ್ಟಿ ಕಲ್ಯಾ, ಪ್ರಭಾತ್ ಶೆಟ್ಟಿ ಮೂಳೂರು, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಉದಯ ಶೆಟ್ಟಿ ಭಾರ್ಗವ, ಪ್ರಮುಖರಾದ ವೈ ಪ್ರಫುಲ್ಲ ಶೆಟ್ಟಿ, ದಯಾನಂದ ಹೆಜಮಾಡಿ, ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಮೋಹನ್ ಬಂಗೇರ, ಕಾಪು ಪುರಸಭಾ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ್, ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಅಭಿರಾಜ್ ಸುವರ್ಣ ಕಟಪಾಡಿ, ರಾಧಾರಮಣ ಶಾಸ್ತ್ರಿ, ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಸುಬ್ರಮಣ್ಯ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ಇಂದು : ಲೇಖಕಿ ಅನಿತಾ ಪಿ. ತಾಕೊಡೆ ಯವರ 'ಸುವರ್ಣ ಯುಗ' ಕೃತಿ ಬಿಡುಗಡೆ ಸಮಾರಂಭ
Posted On: 14 Jan 2024, 08:52 AM
ಮಂಗಳೂರು : ಜನಸೇವಕ, ಶಿಕ್ಷಣಪ್ರೇಮಿ ಜಯ ಸಿ. ಸುವರ್ಣ ಅವರ ಜೀವನ ಸಾಧನೆಯ ಕುರಿತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಿಸಿರುವ ಅನಿತಾ ಪಿ. ತಾಕೊಡೆ ಬರೆದಿರುವ 'ಸುವರ್ಣ ಯುಗ' ಕೃತಿ ಬಿಡುಗಡೆ ಸಮಾರಂಭ ಜನವರಿ 14, ಆದಿತ್ಯವಾರದಂದು (ಇಂದು) ಸಂಜೆ 4 ಗಂಟೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ. ಸುವರ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಅಡ್ವೆ ರವೀಂದ್ರ ಪೂಜಾರಿ ಹೇಳಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ಕೇಂದ್ರದ ಮಾಜಿ ಮಾಜಿ ಸಚಿವ ಜನಾರ್ದನ ಪೂಜಾರಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಬಿ. ಕೆ. ಹರಿಪ್ರಸಾದ್, ಹರೀಶ್ ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಬಿ. ರಮಾನಾಥ ರೈ, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಗೋಪಾಲ ಪೂಜಾರಿ, ರುಕ್ಮಯ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ನಮ್ಮ ಕುಡ್ಲ ವಾಹಿನಿ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ
Posted On: 14 Jan 2024, 08:32 AM
ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ ಕಾಪು ತಾಲೂಕಿನ ಆಡಳಿತ ಸೌಧದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಡಾ.ಪ್ರತಿಭಾ ಆರ್ ನಾಗರೀಕ ಸಮಾಜದಿಂದ ದೂರ ಉಳಿದ ಕೊರಗ ಸಮಾಜ ಹಾಗೂ ಇದೇ ರೀತಿ ಶೋಷಿತ ವರ್ಗಗಳಿಗೆ ಸೇರಿದ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕೊಟ್ಟು ಜೊತೆಗೆ ಅವರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಹೊಣೆಯಾಗಿದೆ. ಸದ್ಯದಲ್ಲಿಯೇ ತಾಲೂಕು ಪಂಚಾಯತ್ ಸಹಯೋಗದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಿ ಸಮಾನತೆ ಸಾಧಿಸಿ ಕೊರಗರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹೆಲ್ತ್ ಕ್ಯಾಂಪ್ ನಡೆಸಲಾಗುವುದು ಹಾಗೂ ಆಯುಷ್ಮಾನ್ ಕಾಡುಗಳ ವಿತರಣೆ ಮಾಡಲಾಗುವುದು. ಕೊರಗ ಸಮುದಾಯದವರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಭರವಸೆ ನೀಡಿದರು. ಸಮಸ್ಯೆಗಳಿದ್ದರೆ ನೇರವಾಗಿ ಕಚೇರಿಗೆ ಬಂದು ತಹಶೀಲ್ದಾರ್ ರವರನ್ನು ಖುದ್ದಾಗಿ ಭೇಟಿ ಮಾಡಬಹುದು ಎಂದರು. ಸರಕಾರಿ ಕೆಲಸಗಳು ಕಾಲಕ್ರಮೇಣ ಎಲ್ಲವೂ ಕಂಪ್ಯೂಟರೀಕರಣ ಆಗುತ್ತಿರುವುದರಿಂದ ಕೆಲವು ದಾಖಲೆಗಳು ಇಲ್ಲದಿರುವುದರಿಂದ ಮೇಲಾಧಿಕಾರಿಗಳ ನಿರ್ದೇಶನದಂತೆ ಕೊರಗ ಜನಾಂಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲಾ ಅವಶ್ಯ ಪ್ರಯತ್ನಗಳನ್ನು ಮಾಡಲಾಗುವುದು ಕೊರಗರು ಶಿಕ್ಷಣವಂತರಾಗಿ ಜಾಗೃತಿ ಮೂಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು. ಕೊರಗರ ವಾಸ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ನಮ್ಮ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹಲವಾರು ಸಮುದಾಯಗಳಿರಬಹುದು ಅಂತಹ ಸಮುದಾಯದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಬೇಕು ಎಂದಾಗ ಖುದ್ದಾಗಿ ಅಧಿಕಾರಿಗಳಾದ ನಾವು ಇಂತಹ ಸಮುದಾಯಗಳ ಹಾಡಿ(ಕ್ಯಾಂಪ್) ಗಳಿಗೆ ಭೇಟಿ ನೀಡಿ, ಅವರ ನೈಜ ಪರಿಸ್ಥಿತಿಯನ್ನು ನೋಡುವುದರ ಮೂಲಕ ಅವರಿಗೆ ನಾಗರೀಕತೆ ಬಗ್ಗೆ ತಿಳಿಹೇಳುವುದರ ಮೂಲಕ, ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳಿವೆ, ಆ ಸೌಲಭ್ಯ ಪಡೆದುಕೊಳ್ಳಬೇಕಾದರೆ ಮೊದಲು ಶಿಕ್ಷಣವಂತರಾಗಿ, ಶಿಕ್ಷಣ ಬಂದರೆ ಸರ್ಕಾರದಿಂದ ಬರುವ ಸೌಲಭ್ಯಗಳು ಏನೆಲ್ಲಾ ಬಂದಿವೆ ಅನ್ನೋದು ನಿಮಗೂ ಗೊತ್ತಾಗುತ್ತದೆ, ನೀವು ಉನ್ನತ ಉದ್ಯೋಗ ಮಾಡಲು ಅವಕಾಶಗಳಿವೆ ನಮ್ಮಂತೆ ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶಗಳು ಸಿಗುತ್ತವೆ ಅಂತ ಅವರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕಾಗಿದೆ ಅಂತ ಮಾನವೀಯ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ನೆರೆದಿರುವ ಕೊರಗ ಸಮುದಾಯಕ್ಕೂ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಕೊರಗರ ಬಗ್ಗೆ ಅಧ್ಯಯನ ಮಾಡಿರುವ ಅಶೋಕ ಶೆಟ್ಟಿಯವರು 2011ರಲ್ಲಿ ಕೊರಗರ ಜನಸಂಖ್ಯೆ 11500 ಇತ್ತು ಈಗ 8500 ಕ್ಕೆ ಇಳಿಕೆ ಆಗಿರುವುದು ವಿಷಾದನೀಯ ಹಾಗೂ ಸಮುದಾಯದವರು ತುಂಬಾ ಹಿಂದುಳಿದವರಾಗಿರುವುದರಿಂದ ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊರಗ ಜನಾಂಗದವರಲ್ಲಿ ನಿವೇಶನ ರಹಿತರ ಒಟ್ಟು 165 ಕುಟುಂಬಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲಾಗಿತ್ತು. ಕೂಡಲೇ ಕ್ರಮ ವಹಿಸುವಂತೆ ಅನುಸೂಯರವರು ತಹಶೀಲ್ದಾರ್ ಪ್ರತಿಭಾ ಅವರನ್ನು ವಿನಂತಿಸಿಕೊಂಡರು. ರೇಷನ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿಕೊಟ್ಟು ಕೂಡಲೇ ಆ ಕುರಿತು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಕಾಪು ತಾಲೂಕಿನ ಆಹಾರ ಅಧಿಕಾರಿ ಲೀಲಾನಂದರವರು ತಿಳಿಸಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್, ತಾಲೂಕು ಆರೋಗ್ಯ ಅಧಿಕಾರಿ ವಾಸುದೇವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಎಸ್ ಎನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್, ಕಂದಾಯ ಇಲಾಖೆಯ ರವಿಕಿರಣ್, ದೀಕ್ಷಿತಾ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಪು ತಾಲೂಕು ಕಚೇರಿಯ ದೇವಕಿ ಸ್ವಾಗತಿಸಿದರು. ಕೊರಗ ಮುಖಂಡರಾದ ಸುರೇಶ್ ವಂದಿಸಿದರು.
ಪಡುಬಿದ್ರಿ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ
Posted On: 10 Jan 2024, 03:55 PM
ಪಡುಬಿದ್ರಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಇಂದು ಪಡುಬಿದ್ರಿ ಗ್ರಾಮ ಪಂಚಾಯತ್ ಬಳಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು, ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ವಿಕಸಿತ ಭಾರತ ಸಂಕಲ್ಪ ಯಾತ್ರೆ ನೊಡಲ್ ಅಧಿಕಾರಿಗಳಾದ ಅಜಿತ್, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ಕರುಣಾಕರ್, ಉಡುಪಿ ಅಂಚೆ ಇಲಾಖೆಯ ಕೃಷ್ಣರಾಜ ಭಟ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿಗಳಾದ ಮಥಾಯಿಸ್ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮನೆ ಪುನರ್ ನಿಮಾ೯ಣ ಕಾಯ೯
Posted On: 08 Jan 2024, 12:47 PM
ಉಡುಪಿ : ದಶಮಾನೋತ್ಸವದ ಸಂಭ್ರಮದಲ್ಲಿರುವ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಕಳೆದ 10 ವಷ೯ಗಳ ಹಿಂದೆ ಕಟ್ಟಿದ ಮನೆ ಆಥಿ೯ಕ ಸಮಸ್ಯೆಯಿಂದ ಪೂತಿ೯ಗೊಳಿಸಲಾಗದೆ ತೊಂದರೆಗೆ ಸಿಲುಕಿದ್ದ ಹಾವಂಜೆ ಸಮೀಪದ ನೆರೆ ಕಾಲನಿ ಸುಕೇಶ ನಾಯ್ಕ್ ರವರ ಮನೆ ಪುನರ್ ನಿಮಾ೯ಣ ಕಾಯ೯ ಜನವರಿ 7ರಂದು ನಡೆಯಿತು. ಈ ಸಂದಭ೯ದಲ್ಲಿ ಪೆಡೂ೯ರು ಶೌರ್ಯ ತಂಡದ ಸದಸ್ಯರು ಹೋಂ ಡಾಕ್ಟರ್ ಫೌಂಡೇಶನ್ ನ ಪ್ರಮುಖರಾದ ಡಾI ಶಶಿಕಿರಣ್ ಶೆಟ್ಟಿ, ಡಾI ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಉದಯ್ ನಾಯ್ಕ್ , ರವಿ , ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು
ಜನವರಿ 11-21: ಪಾಂಬೂರಿನ ಪರಿಚಯ ಪ್ರತಿಷ್ಠಾನದಿಂದ ಚಿತ್ರ ಪರಿಚಯ - ನಿಸರ್ಗ ಚಿತ್ರಣ ಶೈಕ್ಷಣಿಕ ವಸತಿ ಶಿಬಿರ
Posted On: 08 Jan 2024, 11:59 AM
ಕಾಪು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು 'ಚಿತ್ರ ಪರಿಚಯ - ನಿಸರ್ಗ ಚಿತ್ರಣ ಶೈಕ್ಷಣಿಕ ವಸತಿ ಶಿಬಿರವನ್ನು ಜನವರಿ11 ರಿಂದ ಜನವರಿ 21ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಅವರು ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜನವರಿ 11ರಂದು ಸಾಯಂಕಾಲ 6 ಗಂಟೆಗೆ ಚಿತ್ರಕಲಾವಿದ ಹಾಗೂ ಶಿಕ್ಷಕ ಮಾನ್ಯ ರಮೇಶ್ ಬಂಟಕಲ್ಲು ಇವರಿಂದ ಉದ್ಘಾಟನೆಗೊಳ್ಳುವ ಈ ಶಿಬಿರದಲ್ಲಿ ಮಂಗಳೂರು ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಸುಮಾರು 30 ವಿದ್ಯಾರ್ಥಿಗಳು ರಂಗಪರಿಚಯದಲ್ಲಿ ಇದ್ದು ಹಗಲುಹೊತ್ತು ವಿವಿಧ ಸ್ಥಳಗಳಲ್ಲಿ ಪ್ರಕೃತಿ ಚಿತ್ರಣ ನಿರತರಾಗಿದ್ದು ಸಾಯಂಕಾಲ 6:30ರಿಂದ ರಂಗಪರಿಚಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಶಿಬಿರದ ಎಲ್ಲಾ ದಿನಗಳಲ್ಲಿ ರಂಗಪರಿಚಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸಗಳು ಹಾಗೂ ಸಿನೆಮಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜನವರಿ 12, ಶುಕ್ರವಾರದಂದು 'ಕತ್ತಲೆ ಹಾಡು ನಾದ ಮಣಿನಾಲ್ಕೂರು ಇವರಿಂದ; ಜನವರಿ 13, ಶನಿವಾರದಂದು 'ಕಲಾಸಕ್ತಿಯ ಜೀವನಶೈಲಿ ಆರೋಗ್ಯಕ್ಕೆ ಪೂರಕ ನಾಡಿನ ಖ್ಯಾತ ವೈದ್ಯ ಹಾಗೂ ಸಂಗೀತ ಕಲಾವಿದ ಡಾ| ಆರ್. ಎನ್. ಭಟ್ರವರಿಂದ ಉಪನ್ಯಾಸ, ಸಂವಾದ ಹಾಗೂ ಸಂಗೀತ ಪ್ರಸ್ತುತಿ; ಜನವರಿ 14, ಭಾನುವಾರದಂದು 'ಹಾಸ್ಯದೊಂದಿಗೆ ಜೀವನಮೌಲ್ಯಗಳು ಖ್ಯಾತ ವಿನೋದ ಭಾಷಣಗಾರ್ತಿ ಸಂಧ್ಯಾ ಶೆಣೈ, ಉಡುಪಿ ಇವರಿಂದ; ಜನವರಿ 15, ಸೋಮವಾರದಂದು 'ಹಕ್ಕಿ ಪರಿಚಯ ಹವ್ಯಾಸಿ ಪಕ್ಷಿ ವೀಕ್ಷಕ ಮತ್ತು ವನ್ಯಜೀವಿ ಅಧ್ಯಯನಕಾರ ಅರವಿಂದ ಕುಡ್ಲ ಇವರಿಂದ ಪಕ್ಷಿಲೋಕದ ಸಾಕ್ಷ್ಯಚಿತ್ರ ಮತ್ತು ಸಂವಾದ; ಜನವರಿ 16, ಮಂಗಳವಾರದಂದು ಖ್ಯಾತ ಕಲಾವಿದರಿಂದ ತಾಳಮದ್ದಲೆ, ಪ್ರಸಂಗ : ಪಾದುಕಾ ಪ್ರದಾನ; ಜನವರಿ 17, ಬುಧವಾರದಂದು ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ವಿದ್ಯಾರ್ಥಿಗಳಿಂದ ಕನ್ನಡ ನಾಟಕ 'ಹ್ಯಾಂಗ್ ಆನ್; ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪುರಸ್ಕೃತ ಕನ್ನಡ ಸಿನೆಮಾಗಳ ಪ್ರದರ್ಶನ, ಜನವರಿ 18, ಗುರುವಾರದಂದು ಚಂಪಾ ಪಿ. ಶೆಟ್ಟಿ ನಿರ್ದೇಶನ 'ಕೋಳಿ ಎಸ್ರು; ಜನವರಿ 19, ಶುಕ್ರವಾರದಂದು ಉತ್ಸವ್ ಗೋನವಾರ ನಿರ್ದೇಶನದ 'ಫೋಟೋ; ಜನವರಿ 20, ಶನಿವಾರದಂದು ಉಮೇಶ್ ಬಡಿಗೇರ್ ನಿರ್ದೇಶನದ 'ದಿ ಗಾರ್ಡ್ ಪ್ರದರ್ಶನಗೊಳ್ಳಲಿದೆ. ಜನವರಿ 21, ಭಾನುವಾರದಂದು ಅಪರಾಹ್ನ 3ರಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾದ್ದು, ಸಾಯಂಕಾಲ 6:30ರಿಂದ ಶಿಬಿರ ಸಮಾರೋಪಗೊಳ್ಳಲಿದ್ದು ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮಾನ್ಯ ಪ್ರಸನ್ನ ಹೆಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಸಮಾರಂಭದಲ್ಲಿ ಖ್ಯಾತ ಚಿತ್ರ ಹಾಗೂ ಶಿಲ್ಪ ಕಲಾವಿದ ಬೆಂಗಳೂರಿನ ಮಾನ್ಯ ಸುದೇಶ್ ಮಹಾನ್ ಸಮಾರೋಪ ಸಂದೇಶ ನೀಡಲಿದ್ದಾರೆ. ನಂತರ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಿಗೊಳ್ಳಲಿವೆ. ಎಲ್ಲಾ ಕಾರ್ಯಕ್ರಮಗಳಿಗೆ ಕಲಾಸಕ್ತರಿಗೆ ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪುಂಡಲೀಕ ಮರಾಠೆ, ಟ್ರಸ್ಟಿಗಳಾದ ವಿಲ್ಸನ್ ಡಿಸೋಜ, ಅರುಳ್ ಡಿಸೋಜ, ಪೀಠರ್ ಓಸ್ತಾ ಉಪಸ್ಥಿತರಿದ್ದರು.
ಕಾಪು : ದಂಡತೀರ್ಥ ಮಠದಲ್ಲಿ ಹೊಸತನದೆಡೆಗೆ ಮೊದಲ ಹೆಜ್ಜೆ - ಚಿಂತನ-ಮಂಥನ
Posted On: 07 Jan 2024, 05:30 PM
ಕಾಪು : ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ ಇದರ ರಜತ ಮಹೋತ್ಸವದ ಸಂಭ್ರಮದಲ್ಲಿ ಕಾಪು ವಲಯ ಬ್ರಾಹ್ಮಣ ಸಂಘ ಕಾಪು ಇದರ ವತಿಯಿಂದ ರವಿವಾರ ಕಾಪು ದಂಡತೀರ್ಥ ಮಠದಲ್ಲಿ ಹೊಸತನದೆಡೆಗೆ ಮೊದಲ ಹೆಜ್ಜೆ -ಚಿಂತನ-ಮಂಥನ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀ ಮಠದ ದೇವರ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಿಂತನ ಮಂಥನ ಕಾರ್ಯಕ್ರಮದ ಸಮನ್ವಯಕಾರರಾಗಿ ಹಿರಿಯ ಪತ್ರಕರ್ತರು, ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ವಹಿಸಿದ್ದರು. ಸಮಾಜದ ಹಿರಿಯ ವಿದ್ವಾಂಸರು, ಧಾರ್ಮಿಕ,ಸಾಮಾಜಿಕ ಮುಖಂಡರ ಉಪಸ್ಥಿತಿಯಲ್ಲಿ ವಿಷಯಗಳ ಮಂಡನೆ, ಚರ್ಚೆ, ಸಂವಾದಗಳು ನಡೆದವು. ಅಶೌಚ ವಿಷಯದಲ್ಲಿ ಸುದರ್ಶನ ಆಚಾರ್ಯ ಕಲ್ಯಾ, ಸಂಪ್ರದಾಯ-ಪೂಜೆ, -ಪುನಸ್ಕಾರಗಳಲ್ಲಿ ಕಾಲಕ್ಕೆ ತಕ್ಕ ಬದಲಾವಣೆಗಳು ವಿಷಯದಲ್ಲಿ ಪ್ರೊ.ಹೆರ್ಗ ಹರಿಪ್ರಸಾದ ಭಟ್, ಬ್ರಾಹ್ಮಣರಲ್ಲಿ ವಿವಾಹ ಸಮಸ್ಯೆಗಳು -ಪರಿಹಾರ ಈ ಬಗ್ಗೆ ಸುಬ್ರಹ್ಮಣ್ಯ ತಂತ್ರಿ ಪಾದೂರು, ಮಹಿಳೆಯರಿಗೆ ಪೂಜಾ ಅರ್ಹತೆ ಬಗ್ಗೆ ವಸುಧಾ ಮುರಳೀಧರ ತಂತ್ರಿ ಕಲ್ಯಾ, ಬ್ರಾಹ್ಮಣ ಸಂಘಟನೆ, ಸವಾಲುಗಳು ಮತ್ತು ಪರಿಹಾರ ವಿಷಯದಲ್ಲಿ ರಜತೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್, ಕರ್ಮದಿಂದ ಬ್ರಾಹ್ಮಣತ್ವ ಈ ಬಗ್ಗೆ ವಿದ್ಯಾಧರ ಪುರಾಣಿಕ್ ವಿಷಯ ಮಂಡಿಸಿದರು. ಕಾಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಚಿಂತನ ಮಂಥನದಲ್ಲಿ ವಿದ್ವಾಂಸರಾದ ಕಲ್ಯ ಅಶೋಕ ಆಚಾರ್ಯ, ಖ್ಯಾತ ಜ್ಯೋತಿಷ್ಯ ವಿದ್ವಾಂಸರಾದ ಪ್ರಕಾಶ್ ಅಮ್ಮಣ್ಣಾಯ, ವೇದವ್ಯಾಸ ಐತಾಳ್ ಉಡುಪಿ, ಡಾ.ಸೀತಾರಾಮ ಭಟ್ ದಂಡತೀರ್ಥ, ಎಂ.ಬಿ.ಪುರಾಣಿಕ್ ಮಂಗಳೂರು, ಮಂಜುನಾಥ ಉಪಾಧ್ಯಾಯ ಪರ್ಕಳ, ಶ್ರೀರಾಮ್ ಭಟ್ ಸಾಣೂರು, ವಿದ್ಯಾ ಅಮ್ಮಣ್ಣಾಯ, ಗಣೇಶ್ ಐತಾಳ್ ಉಡುಪಿ, ಲಕ್ಷ್ಮೀನಾರಾಯಣ ತಂತ್ರಿ, ಲಕ್ಷೀಶ ತಂತ್ರಿ, ರವಿಪ್ರಕಾಶ್, ಹರಿಕೃಷ್ಣ ಭಟ್, ಸದಾಶಿವ ಭಟ್ ಕೆ, ಪುರಂದರ ಭಟ್, ಗಣೇಶ್ ರಾವ್, ಕಾಪು ವಲಯ ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ವಿಪ್ರರು ಉಪಸ್ಥಿತರಿದ್ದರು. ಕಾಪು ವಲಯ ಬ್ರಾಹ್ಮಣ ಸಂಘದ ಕಾರ್ಯದರ್ಶಿ ವಿದ್ಯಾಧರ ಪುರಾಣಿಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ವಿದ್ವಾಂಸರುಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೋಶಾಧಿಕಾರಿ ಮನೋಹರ ರಾವ್ ವಂದಿಸಿದರು.
ಬಂಟಕಲ್ಲು : ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಪುಸ್ತಕಗಳ ಕೊಡುಗೆ
Posted On: 07 Jan 2024, 03:12 PM
ಬಂಟಕಲ್ಲು : ಇಲ್ಲಿನ ನಾಗರಿಕ ಸೇವಾ ಸಮಿತಿ (ರಿ.) ಇವರು ಜಿಲ್ಲೆಯಲ್ಲೇ ಪ್ರಥಮವಾಗಿ ಬಂಟಕಲ್ಲು ಬಸ್ಸು ನಿಲ್ದಾಣದಲ್ಲಿ ಪ್ರಾಯೋಜಿಸಿರುವ ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಆಯ್ದ ಸುಮಾರು ರೂ. 2,500 ಬೆಲೆಯ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಇತ್ತೀಚೆಗೆ ಬನ್ನಂಜೆ ನಾರಾಯಣಗುರು ಸಭಾಗೃಹದಲ್ಲಿ ನಡೆದ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ರವರ 80 ರ ಸಂಭ್ರಮದ ಸಿರಿತುಪ್ಪೆ ಕಾರ್ಯಕ್ರಮ ನಡೆದಿತ್ತು. ಈ ಸಂಧರ್ಭದಲ್ಲಿ ಅವರನ್ನು ಪುಸ್ತಕಳಿಂದ ತುಲಾಭಾರ ನಡೆಸಲಾಗಿತ್ತು. ಈ ಅಕ್ಷರ ತುಲಾಭಾರದ ಬಾಬು ಅಮೀನ್ ರವರೇ ಬರೆದ ಪುಸ್ತಕಗಳ ಸಹಿತ ಕೆಲವು ಪುಸ್ತಕಗಳನ್ನು ಅಭಿನಂದನಾ ಸಮಿತಿಯ ಅರವಿಂದ ಕಲ್ಲುಗುಡ್ಡೆಯವರು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಬಂಟಕಲ್ಲು, ನಾಗರಿಕ ಸೇವಾ ಸಮಿತಿಯ ಅನಂತರಾಮ ವಾಗ್ಲೆ, ವಿನ್ಸಂಟ್ ಕಸ್ತಲಿನೊ, ವಿರೇಂದ್ರ ಪಾಟ್ಕರ್, ಉದ್ಯಮಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.
ಪಲಿಮಾರು : ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ
Posted On: 07 Jan 2024, 03:07 PM
ಪಲಿಮಾರು : ವಿದ್ಯಾರ್ಥಿಗಳು ಕನಿಷ್ಠ 2 ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದಬೇಕು. ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರವಲ್ಲ, ಹೊರಗಿನ ಪ್ರಪಂಚದ ಜ್ಞಾನವನ್ನು ಎಲ್ಲಾ ಮೂಲಗಳಿಂದ ಗಳಿಸಿ ಜೀವನದಲ್ಲಿ ಯಶಸ್ವಿಗಳಾಗಬೇಕು. ಉತ್ತಮ ವಿದ್ಯಾರ್ಥಿಗಳಾಗಿ, ನೀವು ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಕೀರ್ತಿ ಗೌರವವನ್ನು ತರಬೇಕು ಎಂದು ಪಲಿಮಾರು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷರಾದ ಗಾಯತ್ರಿ ಡಿ. ಪ್ರಭು ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು, ಇಲ್ಲಿ ಪಲಿಮಾರು ಸುತ್ತಮುತ್ತಲಿನ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಕನ್ನಡ ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈಯವರ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಸ್ಥಳೀಯ ಐದು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಚಾಂಪಿಯನ್ಶಿಪ್ ಪಡೆದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆ ದ್ವಿತೀಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು ಕೊಪ್ಪಲ ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಪಲಿಮಾರು ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ರಾಯೇಶ್ವರ್ ಪೈ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶೋಭಾ, ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ, ಸ್ಥಳೀಯ ಉದ್ಯಮಿಗಳಾದ ದಿನೇಶ್ ಪ್ರಭು, ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಯೋಗೀಶ್ ಸುವರ್ಣ, ಹಳೆ ವಿದ್ಯಾರ್ಥಿಗಳಾದ ಪ್ರವೀಣ್, ಪ್ರಸಾದ್, ರಾಯೇಶ್ವರ್ ಪೈ ಹಾಗೂ ಪ್ರಾಂಶುಪಾಲರು ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದರು. ಹಿರಿಯ ಸಹಶಿಕ್ಷಕರಾದ ಸುನೀತಾ ಸ್ವಾಗತಿಸಿ, ಪಿಲಾರು ಸುಧಾಕರ್ ಶೆಣೈ ರಸಪ್ರಶ್ನೆ ಹಾಗೂ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಆಂಗ್ಲಭಾಷಾ ಶಿಕ್ಷಕರಾದ ಕೆ. ಶಿವಾನಂದ ವಂದಿಸಿದರು.
ಉಚ್ಚಿಲ : ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ
Posted On: 06 Jan 2024, 08:29 PM
ಉಚ್ಚಿಲ : ಅಮೇರಿಕಾದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದ ಉದ್ದೇಶದಿಂದ ಕಳೆದ 11 ವರ್ಷಗಳಿಂದ ಅಲ್ಲಿನ ಅಧ್ಯಯನಶೀಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಮಹಿಳಾ ಸಬಲೀಕರಣದ ಚಿತ್ರಣವನ್ನು ಅವರಿಗೆ ಮನದಟ್ಟು ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಅಮೇರಿಕಾದ ಪೆನೊಸೋಲೋನಿಯಾ ವಿಶ್ವವಿದ್ಯಾನಿಲಯದ ಪ್ರೊ. ಡಾ. ಫಮೀದಾ ಹ್ಯಾಂಡಿ ಹೇಳಿದ್ದಾರೆ. ಅವರು ಅಮೇರಿಕಾದ ವಿದ್ಯಾರ್ಥಿಗಳ ನಿಯೋಗದೊಂದಿಗೆ ಇಲ್ಲಿನ ಸಹಕಾರಿ ಸೊಸೈಟಿಗಳ ಸ್ವಸಹಾಯ ಸಂಘಗಳ ಅಧ್ಯಯನಕ್ಕಾಗಿ ಶನಿವಾರ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಚ್ಚಿಲ ಶಾಖೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಜತೆ ಮಾತನಾಡಿದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪ್ರೊ.ಫಮೀದಾ ಹ್ಯಾಂಡಿಯವರನ್ನು ಸನ್ಮಾನಿಸಿ ಗೌರವಿಸಿದರು. ತದನಂತರ ಅಮೆರಿಕಾ ತಂಡದ ಸದಸ್ಯರು ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭ ನವೋದಯ ಸ್ವಸಹಾಯ ಸಂಘಗಳ ಅಧಿಕಾರಿ ಹರಿನಾಥ್, ಬೆಳಪು ಸಂಘದ ನಿರ್ದೇಶಕರಾದ ದ್ಯುಮಣಿ ಭಟ್, ಪಾಂಡು ಶೆಟ್ಟಿ, ಪಾಂಡು ಶೇರಿಗಾರ್, ಮೀನಾ ಪೂಜಾರ್ತಿ, ಶೋಭಾ ಭಟ್, ಸುಗುಣಾ ಅಂಚನ್, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ವಿವಿಧ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
