Updated News From Kaup
ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಅಯೋಧ್ಯೆಗೆ ಆಹ್ವಾನ
Posted On: 25 Dec 2023, 11:26 AM
ಶಂಕರಪುರ : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲೆಯ ಶಂಕರಪುರ ಶ್ರೀ ದ್ವಾರಕಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀರಾಮ ಬಿಂಬ ಪ್ರಾಣ ಪ್ರತಿಷ್ಠೆಯ ಸಂದರ್ಭ ಉಪಸ್ಥಿತರಿರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿ ಅಧಿಕೃತವಾಗಿ ಆಹ್ವಾನಿಸಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಮಂಗಳೂರು : 12 ಗಂಟೆಗಳ ಕಾಲ ನಿರಂತರ ಹಾಡು - 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲು
Posted On: 25 Dec 2023, 11:18 AM
ಮಂಗಳೂರು : ಇಲ್ಲಿನ ಪುರಭವನದಲ್ಲಿ ಜರಗಿದ ಮನಃಶಾಂತಿಗಾಗಿ ಹಾಡು ಕಾರ್ಯಕ್ರಮದಲ್ಲಿ ಸುಮಾರು 12 ಗಂಟೆಗಳ ಕಾಲ ನಿರಂತರವಾಗಿ ಹಾಡಿದ 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲಾಗಿದೆ. 2023 ರ ನವೆಂಬರ್ 5 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಗಂಗಾಧರ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ, ಶ್ರೀ ರಕ್ಷ ಸರ್ಪಂಗಳ ಮತ್ತು ನೇತ್ರಾಖುಶಿ 12 ಗಂಟೆಗಳ ಕಾಲ ನಿರಂತರ ಗಾಯನ ಮಾಡಿರುತ್ತಾರೆ.
ಮುಲ್ಕಿ ಸೀಮೆ ಅರಸು ಕಂಬಳ - ಅರಸು ಪ್ರಶಸ್ತಿ ಪ್ರದಾನ
Posted On: 25 Dec 2023, 10:37 AM
ಮುಲ್ಕಿ: ಚಾರಿಟೆಬಲ್ ಟ್ರಸ್ಟ್ ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮುಲ್ಕಿ ಸೀಮೆ ಅರಸು ಕಂಬಳದ ಅಂಗವಾಗಿ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಪಡು ಪಣಂಬೂರು ಮುಲ್ಕಿ ಅರಮನೆಯ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯಲ್ಲಿ ನಡೆಯಿತು. ಸನ್ಮಾನ : ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕಂಬಳ ಕ್ಷೇತ್ರದಲ್ಲಿನ ಸಾಧನೆಗೆ ದಿ. ಪಯ್ಯೊಟ್ಟು ಸದಾಶಿವ ಸಾಲ್ಯಾನ್ (ಮರಣೋತ್ತರ), ಸಾಮಾಜಿಕ ಕ್ಷೇತ್ರದಲ್ಲಿ ಉತ್ರುಂಜೆ ಭುಜಂಗ ಎಂ. ಶೆಟ್ಟಿ, ತುಳು- ಸಾಂಸ್ಕೃತಿಕ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾರ್, ಕೃಷಿ ಕ್ಷೇತ್ರದ ಸಾಧಕ ಗಂಗಾಧರ ದೇವಾಡಿಗ, ಕ್ರೀಡಾ ಕ್ಷೇತ್ರದಲ್ಲಿ ಸುಷ್ಮಾ ತಾರಾನಾಥ್, ವೈದ್ಯಕೀಯ ಕ್ಷೇತ್ರದಲ್ಲಿ ಹಳೆಯಂಗಡಿಯ ಡಾ.ಗುರುಪ್ರಸಾದ್ ನಾವಡರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೈಸೂರಿನ ಡಾ. ಉಮೇಶ್, ಕ್ಯಾ. ಬ್ರಿಜೇಶ್ ಚೌಟ, ಗೋಕುಲ್ ದಾಸ್ ಪೈ, ಚಿತ್ತರಂಜನ್ ಬೋಳಾರ, ದಿವಾಕರ ಕದ್ರಿ, ವಿವೇಕ್ ಆಳ್ವ ಮೂಡುಬಿದಿರೆ, ರಂಜಿತ್ ಕೋಟ್ಯಾನ್, ಟ್ರಸ್ಟ್ ನ ಗೌತಮ್ ಜೈನ್ ಮುಲ್ಕಿ ಅರಮನೆ, ಮೋಹನ್ ದಾಸ್ ಸುರತ್ಕಲ್, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಪ್ರಿಯ ದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾರ್ಡ್ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು.
ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳ - ಶ್ರೀ ದೇವಿಯ ಆರಾಧನೆ ; ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಿಯ ರಂಗೋಲಿ ಚಿತ್ರ
Posted On: 24 Dec 2023, 09:02 PM
ಬಂಟಕಲ್ಲು : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ವೈಕುಂಠ ಏಕಾದಶಿಯ ಶುಭಾವಸರದಲ್ಲಿ ಸೇವಾದಾರರಿಂದ "ಶ್ರೀ ದೇವಿಯ ಆರಾಧನೆ" ಜರುಗಿತು. ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಅನುಷ್ಟಾನಗಳು ಜರುಗಿದವು. ವೈದಿಕರಾದ ನರೇಶ್ ಭಟ್ ಸಹಕರಿಸಿದರು. ಕ್ಷೇತ್ರದ ಅರ್ಚಕರಾದ ಮಂಜುನಾಥ್ ಭಟ್ ರಂಗೋಲಿಯಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷೀ ದೇವಿಯ ಚಿತ್ರವನ್ನು ರಚಿಸಿದ್ದರು.
ಬಂಟಕಲ್ಲು : ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ; ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸನ್ಮಾನ
Posted On: 24 Dec 2023, 08:49 PM
ಬಂಟಕಲ್ಲು : ಅಂದಾಜು 80 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬಂಟಕಲ್ಲು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯನ್ನು ರವಿವಾರ ಸಮಿತಿಯ ಅಧ್ಯಕ್ಷರು ಹಾಗೂ ಬಂಟಕಲ್ಲು ನಿವೃತ್ತ ಅಂಚೆ ಪಾಲಕ ಬಿ.ಭಾಸ್ಕರ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ರವಿವಾರ ದೈವಸ್ಥಾನದ ಸಾನಿಧ್ಯದಲ್ಲಿ ಜರುಗಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ದೇವಸ್ಥಾನ, ದೈವಸ್ಥಾನ, ಇನ್ನಿತರ ಶೃದ್ಧಾಕೇಂದ್ರಗಳು ಹಿರಿಯರು ನಮಗೆ ನೀಡಿದ ಬಳುವಳಿಯಾಗಿದ್ದು, ಅದನ್ನು ಉಳಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪರಮಾತ್ಮನ ಅನುಗ್ರಹ ಇಲ್ಲದಿದ್ದರೆ ಯಾವ ಕಾರ್ಯವೂ ಆಗಲ್ಲ. ಧರ್ಮ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತೀ ಮನೆಯ ಸಹಭಾಗಿತ್ವ ಅಗತ್ಯ. ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ದೇವ, ದೈವರ ಸಾನಿಧ್ಯ ಇರುತ್ತದೆ. ಜೀರ್ಣೋದ್ದಾರ ಕಾರ್ಯದಲ್ಲಿ ತಮ್ಮೊಂದಿಗೆ ತಾನೂ ಕೈಜೋಡಿಸುವುದಾಗಿ ಸ್ಪೂರ್ತಿ ತುಂಬಿದರು. ವಿಶೇಷ ಅಹ್ವಾನಿರಾಗಿ ಉಪಸ್ಥಿತರಿದ್ದ ಸ್ಥಳೀಯ ಕೊಡುಗೈದಾನಿಗಳಾದ ಪ್ರಫುಲ್ಲಾ ಜಯ ಶೆಟ್ಟಿ ಮಾತನಾಡಿ ಸಮಿತಿ ಎಂದರೆ ಒಗ್ಗಟ್ಟು. ದೈವಸ್ಥಾನದ ಜೀರ್ಣೋದ್ಧಾರ ನಮಗೆ ಭಗವಂತ ಕೊಟ್ಟ ಅವಕಾಶ. ಹತ್ತು ಜನರಿಗೆ ಖುಷಿಯಾಗುವ ಕೆಲಸದಿಂದ ಆರೋಗ್ಯವೃದ್ಧಿಯಾಗುತ್ತದೆ. ಎಲ್ಲರೂ ಜೊತೆಯಾಗಿ ಈ ಪುಣ್ಯ ಕಾರ್ಯ ಮಾಡುವ ಎಂದರು. ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಾರ್ಡ್ ಪ್ರತಿನಿಧಿ ಕೆ.ಆರ್.ಪಾಟ್ಕರ್, ದೈವಸ್ಥಾನದ ಮಧ್ಯಸ್ಥಗಾರ ರಾಮಕೃಷ್ಣ ಪಾಟ್ಕರ್(ಅಪ್ಪು ನಾಯಕ್), ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘದ ಶಿರ್ವ ಘಟಕದ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ಪಂಜಿಮಾರು ತೇರಾಡಿ ಲಕ್ಷ್ಮಿ ಸುಧಾಕರ ಶೆಟ್ಟಿ, ಸಂದೀಪ್ ಬಂಗೇರ ಉಪಸ್ಥಿತರಿದ್ದರು. ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತ್ಯಸಾಯಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು. ಸಭೆಯಲ್ಲಿ ಗೌರವ ಸಲಹೆಗಾರರಾದ ವಾಸು ಕೆ. ಸುಭಾಸ್ನಗರ, ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಕೆ.ಸಿ, ಸಂಘಟನಾ ಕಾರ್ಯದರ್ಶಿ ದಿನೇಶ್ ಎಸ್.ಕೆ, ಪ್ರಧಾನ ಅರ್ಚಕ ಸಂತೋಷ್, ಭಾನುಮತಿ ಶಂಕರ್, ರೋಹಿಣಿ ಚಂದ್ರಶೇಖರ್ ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.
ಕಾಪು : ಕಿಶೋರ ಯಕ್ಷಗಾನ - 2023 ಸಮಾರೋಪ
Posted On: 24 Dec 2023, 07:39 PM
ಕಾಪು : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ತರಬೇತಿ ನೀಡಿದ ಕಾಪು ಭಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ "ಕಿಶೋರ ಯಕ್ಷಗಾನ 2023" ಇದರ ಸಮಾರೋಪ ಸಮಾರಂಭ ಕಾಪು ಲಕ್ಷ್ಮೀಜನಾರ್ಧನ ದೇವಸ್ಥಾನ ಮುಂಭಾಗದಲ್ಲಿ ನಡೆಯಿತು. ಶಾಸಕರು, ಕಾಪು ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ, ಕಾಪು ವತಿಯಿಂದ ನಿಸ್ಪೃಹ ಸಮಾಜ ಸೇವಕ, ಕಲಾ ಸಂಘಟಕ ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣೆಯಲ್ಲಿ ಆಯೋಜಿಸಲಾದ ಈ "ಕಿಶೋರ ಯಕ್ಷಗಾನ - 2023" ಕಾಪು ಲಕ್ಷ್ಮೀಜನಾರ್ಧನ ದೇವಸ್ಥಾನ ಮುಂಭಾಗದಲ್ಲಿ ಡಿಸೆಂಬರ್ 21ರಿಂದ 24 ರವರೆಗೆ ಸಂಜೆ 5.30 ರಿಂದ ರಾತ್ರಿ 9.00 ರವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ್ ಶೆಟ್ಟಿ, ದಂಡತೀರ್ಥ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಪ್ರಶಾಂತ್ ಶೆಟ್ಟಿ, ಮಂಗಳೂರು ಶ್ರೀನಿವಾಸ್ ಮೆಡಿಕಲ್ ಕಾಲೇಜು ಮೂಳೆ ತಜ್ಞರಾದ ಶಶಿರಾಜ್ ಕೆ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ ಗಂಗಾಧರ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕಾಪು ಪ್ರದರ್ಶನಾ ಸಂಘಟನಾ ಸಮಿತಿ ಸಂಯೋಜಕರಾದ ವಿ.ಜಿ ಶೆಟ್ಟಿ, ಕೋಶಾಧಿಕಾರಿಗಳಾದ ಶ್ರೀಕರ ಶೆಟ್ಟಿ ಕಲ್ಯಾ ಹಾಗೂ ಪ್ರಭಾತ್ ಶೆಟ್ಟಿ ಉಪಸ್ಥಿತರಿದ್ದರು.
ಪಲಿಮಾರು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ
Posted On: 24 Dec 2023, 06:47 PM
ಪಲಿಮಾರು : ಹೊಯಿಗೆ ಫ್ರೆಂಡ್ಸ್ (ರಿ.) ಹೊಯಿಗೆ ಪಲಿಮಾರು, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀ ಮಹಾಲಿಂಗೇಶ್ವರ ಪಲಿಮಾರು ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇದರ ಅಧ್ಯಕ್ಷ, ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ ರನ್ನು ಸನ್ಮಾನಿಸಲಾಯಿತು. ಕಳೆದ 6 ವರ್ಷಗಳಿಂದ ಪಲಿಮಾರು ಭಾಗದಲ್ಲಿ ಸತತವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಹಲವು ರೋಗಿಗಳ ಜೀವ ಉಳಿವಿಗೆ ಕಾರಣವಾದ ಹೊಯಿಗೆ ಫ್ರೆಂಡ್ಸ್ ಪಲಿಮಾರು ಹಾಗೂ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಅವರ ಕಾರ್ಯ ಶ್ಲಾಘನೀಯವಾದುದೆಂದು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತ ಶೆಟ್ಟಿ, ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಪ್ರಾಂಶುಪಾಲರಾದ ಗ್ರೆಟ್ಟ ಮೋರಸ್, ಹೊಯಿಗೆ ಫ್ರೆಂಡ್ಸ್ ಪಲಿಮಾರು ಅಧ್ಯಕ್ಷ ರಿತೇಶ್ ದೇವಾಡಿಗ, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಅಧ್ಯಕ್ಷ ಹರೀಶ್, ಕೆಎಂಸಿ ಮಣಿಪಾಲ ವೈದ್ಯ ಡಾ.ಅಕ್ಷಯ್, ಪಲಿಮಾರು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಪಲಿಮಾರು ಪ್ರೌಢಶಾಲಾ ವಿಭಾಗ ಸರಕಾರಿ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕಿ ಸುನಿತಾ, ಜಿತೇಂದ್ರ ಫುರ್ಟಾಡೋ, ಗಾಯತ್ರಿ ಡಿ ಪ್ರಭು, ಗುರುರಾಜ್ ರಾವ್, ಯೋಗೀಶ್ ಸುವರ್ಣ, ಶಿಕ್ಷಕ ಪಿಲಾರು ಸುಧಾಕರ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿಯಾದ ಪ್ರತಾಪ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ರಕ್ತದಾನ ಶಿಬಿರದಲ್ಲಿ 90 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ - ಡಾ| ಗೀತಾಮಯ್ಯ
Posted On: 24 Dec 2023, 06:27 PM
ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ ಅದನ್ನು ಬಳಸಿಕೊಂಡು ಸಮಾಜದ ವಿವಿಧ ಸ್ಥರದಲ್ಲಿರುವ ಜನರ ಸೇವೆ ಮಾಡುವ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬಹುದು ಎಂದು ಮಾಹೆ ಮಣಿಪಾಲ ವಿ.ವಿಯ ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಡಾ| ಗೀತಾಮಯ್ಯ ಹೇಳಿದರು. ಅವರು ಡಿಸೆಂಬರ್ 23 ರಂದು ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಜಗನ್ನಾಥ ಸಭಾಭವನದಲ್ಲಿ ನಡೆದ ಜೆಸಿಐ ಉಡುಪಿ ಸಿಟಿ ಇದರ 2024 ನೇ ಸಾಲಿನ ಪದ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಸಭಾ ಸದಸ್ಯ ವಿಜಯ್ ಕೊಡವೂರು, ಸಮಾಜದಲ್ಲಿ ನಾವು ವಿವಿಧ ಋಣಗಳಿಂದ ಬದುಕುತ್ತಿದ್ದೇವೆ ಈ ಋಣವನ್ನು ತೀರಿಸಬೇಕಾದರೆ ನಾವು ಬಡವರ ಸೇವೆ ಮಾಡಬೇಕೆಂದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಗಳು ಶತಮಾನ ಕಂಡಿವೆ ಲಯನ್ಸ್ ರೋಟರಿ ಮತ್ತು ಜೀಸಿಗಳು ಮಾಡುತ್ತಿರುವ ಕಾಯ೯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರಧಾನ ಮತ್ತು 18 ಜನ ನೂತನ ಸದಸ್ಯರ ಪ್ರಮಾಣವಚನ ನಡೆಯಿತು. ಪೂರ್ವ ಅಧ್ಯಕ್ಷರಾದ ಸಂದೀಪ್ ಕುಮಾರ್ -ತನುಜಾ ಮಾಬೇನ್ ಅವರನ್ನು ಗೌರವಿಸಲಾಯಿತು. ವಲಯ ಉಪಾಧ್ಯಕ್ಷ ದೀಪಕ್ ರಾಜ್ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಪೂರ್ವ ಅಧ್ಯಕ್ಷ ವಕೀಲರಾದ ವಿನಯ್ ಆಚಾರ್ಯ ಮುಡ್ಕೂರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಖ್ಯಾತ ಸಮಾಜ ಸೇವಕ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷೆ ಡಾ| ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಪದಾಧಿಕಾರಿಗಳಾದ ಕಿರಣ್ ಭಟ್, ಸಂಧ್ಯಾ ಕುಂದರ್, ನಯನ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಕಾಪು : ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ 13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆ - ದಿಶಿತಾ ಚಂದ್ರಶೇಖರ್ ಪೂಜಾರಿಗೆ ಫಿನಿಶರ್ ಪದಕ
Posted On: 24 Dec 2023, 10:09 AM
ಕಾಪು : ಸಿಂಧುದುರ್ಗ ಜಿಲ್ಲಾ ಈಜು ಸಂಘ ಮತ್ತು ಮಾಲ್ವನ್ ನಗರ ಪರಿಷತ್, ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ 13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆಯು ಡಿಸೆಂಬರ್ 16 ಮತ್ತು 17 ರಂದು ಚಿವ್ಲೆ ಸಮುದ್ರದಲ್ಲಿ ಜರಗಿದ್ದು ಈ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆ ಮೂಲದ ದಿಶಿತಾ ಚಂದ್ರಶೇಖರ್ ಪೂಜಾರಿ 2 ಕಿ.ಮೀ ಈಜನ್ನು ಯಶಸ್ವಿಯಾಗಿ ಮುಗಿಸಿ ಫಿನಿಶರ್ ಪದಕ ಪಡೆದಿರುತ್ತಾರೆ. ಈಕೆ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಶಾಂತ ಪೂಜಾರಿ ಮತ್ತು ಸಂಜೀವ ಪೂಜಾರಿ ದಂಪತಿಗಳ ಮೊಮ್ಮಗಳು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
Posted On: 22 Dec 2023, 05:41 PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗವು ಐಎಸ್ಟಿಇ ಘಟಕ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 136 ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು. ಎನ್ಐಟಿಕೆ, ಸುರತ್ಕಲ್ ನ ಎಮ್ಎಸಿಎಸ್ ವಿಭಾಗ ಪ್ರಾಧ್ಯಾಪಕರಾದ ಡಾ. ಎಸ್ ಎಮ್ ಹೆಗ್ಡೆ, ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು ಗಣಿತವನ್ನು ವಿಜ್ಞಾನದ ತಾಯಿ ಎಂದು ಏಕೆ ಕರೆಯುತ್ತಾರೆ ಮತ್ತು ಪ್ರಕೃತಿಯಲ್ಲಿ ಗಣಿತವನ್ನು ಹೇಗೆ ಕಂಡುಹಿಡಿಯ ಬಹುದೆಂದು ವಿವರಿಸಿದರು. ವೈದ್ಯಕೀಯ ವಿಜ್ಞಾನ, ನೆಟ್ ವರ್ಕ್ ವಿಜ್ಞಾನ ಮುಂತಾದವುಗಳಲ್ಲಿ ಗಣಿತವನ್ನು ಹೇಗೆ ಬಳಸಬಹುದು ಎಂಬುದನ್ನು ನಿಜ ಜೀವನದ ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದುದ್ದಕ್ಕೂ ಗಣಿತದ ಕಲಿಕೆಯನ್ನು ಮುಂದುವರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಸೆಮಿಸ್ಟರ್ ಪರೀಕ್ಷೆಯಲ್ಲಿ ಗಣಿತದಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ವಿವಿಧ ಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕಾತ್ಯಾಯಿನಿ ಮತ್ತು ದೀಕ್ಷಾ ಪೈ ನಿರೂಪಿಸಿದರು.
