Updated News From Kaup
ಡಿಸೆಂಬರ್ 30 - 31 : ಬಿರುವೆರ್ ಕಾಪು ಸೇವಾ ಸಮಿತಿ ಕಾಪು - ಬಿರುವೆರ್ ಕಾಪು ಟ್ರೋಫಿ 2023
Posted On: 28 Dec 2023, 12:31 PM
ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಡಿಸೆಂಬರ್ 30 ಮತ್ತು 31ರಂದು ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಮಾಜ ಬಾಂಧವರಿಗೆ ಡಿಸೆಂಬರ್ 30-31 ರಂದು ಲೀಗ್ ಕಮ್ ನಾಕೌಟ್ ಮಾದರಿಯ 90 ಗಜಗಳ ಕ್ರಿಕೆಟ್ ಪಂದ್ಯಾಕೂಟವು ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ತಿಳಿಸಿದರು. ಅವರು ಗುರುವಾರ ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಈಗಾಗಲೇ ಬಿಡ್ಡಿಂಗ್ ಕಾರ್ಯ ನಡೆದಿದ್ದು ಹತ್ತು ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ರೂ.88,888 ಮತ್ತು ಬಿರುವೆರ್ ಕಾಪು ಟ್ರೋಫಿ, ದ್ವಿತೀಯ ಬಹುಮಾನ ರೂ.55,555 ಮತ್ತು ಬಿರುವೆರ್ ಕಾಪು ಟ್ರೋಫಿ ಸಿಗಲಿದೆ. ಉತ್ತಮದಾಂಡಿಗ, ಉತ್ತಮ ಎಸೆತಗಾರ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಎಂದರು. ಶನಿವಾರ ಬೆಳಗ್ಗೆ 10:30 ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ಮಾಡಲಿದ್ದಾರೆ. ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಸೇರಿದಂತೆ ಸಮಾಜದ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆದಿತ್ಯವಾರ ಸಂಜೆ ಗಂಟೆ 5:30 ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುಜನ್ ಎಲ್ ಸುವರ್ಣ ಕುತ್ಯಾರ್,ವರುಣ್ ಬಿ ಕೋಟ್ಯಾನ್, ರವಿರಾಜ್ ಶಂಕರಪುರ, ಮಾಧವ ಪೂಜಾರಿ, ಯೋಗೀಶ್ ಪೂಜಾರಿ, ಯಾದವ ಪೂಜಾರಿ ಉಪಸ್ಥಿತರಿದ್ದರು
ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ
Posted On: 25 Dec 2023, 06:38 PM
ಕರ್ನಾಟಕದ ರಾಜ್ಯದ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ. ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನಾಗಿ ಅರವಿಂದ್ ಬೆಲ್ಲದ್ ಅವರನ್ನು ನೇಮಕ ಮಾಡಲಾಗಿದೆ. ವಿಧಾನಸಭೆಯ ಮುಖ್ಯ ಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇಮಕವಾದರೆ, ವಿಧಾನಪರಿಷತ್ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರನ್ನು ನೇಮಿಸಲಾಗಿದೆ. ವಿಧಾನಪರಿಷತ್ ವಿಪಕ್ಷ ಉಪ ನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ನೇಮಕ ಮಾಡಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ವಿಧಾನಪರಿಷತ್ ವಿಪಕ್ಷ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಜೆಸಿಐ ಉಡುಪಿ ಸಿಟಿ : 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಆಯ್ಕೆ
Posted On: 25 Dec 2023, 06:25 PM
ಉಡುಪಿ : ವಲಯದ ಅತ್ಯಂತ ಪ್ರತಿಷ್ಠಿತ ಘಟಕವಾಗಿರುವ ಜೆಸಿಐ ಉಡುಪಿ ಸಿಟಿ ಇದರ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಇವರು ಆಯ್ಕೆಯಾಗಿದ್ದಾರೆ. ನೂತನ ಕಾರ್ಯದರ್ಶಿಯಾಗಿ ಸಂಧ್ಯಾ ವಿ ಕುಂದರ್, ಮಹಿಳಾ ಜೆಸಿ ಪ್ರತಿನಿಧಿಯಾಗಿ ನಯನ ಉದಯ ನಾಯ್ಕ್, ಯುವ ಜೇಸಿ ವಿಭಾಗದ ಪ್ರತಿನಿಧಿಯಾಗಿ ತನುಷ್ ಪ್ರಕಾಶ್ ದೇವಾಡಿಗ, ಉಪಾಧ್ಯಕ್ಷರುಗಳಾಗಿ ಶರತ್ ಶರತ್ ಕುಮಾರ್, ನಿಶಾ ಪ್ರಕಾಶ್ ದೇವಾಡಿಗ, ದಿಶಾ, ಸವಿತಾ ಲಕ್ಷ್ಮಣ್, ಅವಿನಾಶ್ ಕೆ. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಬ್ರಿ ತಾಲೂಕು ಕುಲಾಲ ಸಂಘದ ಪ್ರಥಮ ವರ್ಷದ ಕ್ರೀಡಾಕೂಟ ಸಂಪನ್ನ
Posted On: 25 Dec 2023, 06:20 PM
ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ವತಿಯಿಂದ ಪ್ರಥಮ ವರ್ಷದ ಕ್ರೀಡಾಕೂಟವು ಆದಿತ್ಯವಾರ ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಜರಗಿತು. ಹೆಬ್ರಿಯ ಉದ್ಯಮಿ ಬನಶಂಕರಿ ವರ್ಕ್ಸ್ ನ ಮಾಲಕರಾದ ಐತು ಕುಲಾಲ್ ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಇವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಕ್ರಿಕೆಟ್ ಪ್ರತಿಭೆ ಮಡಮಕ್ಕಿ ಸೃಜನ ಕುಲಾಲ್, ಸಂಘದ ಗೌರವಾಧ್ಯಕ್ಷರಾದ ಬೇಳಂಜೆ ಭೋಜ ಕುಲಾಲ್, ಉಪಾಧ್ಯಕ್ಷರಾದ ಚಾರ ಅಣ್ಣಪ್ಪ ಕುಲಾಲ್, ಹೆಬ್ರಿ ಶ್ರೀರಾಮ್ ಜುವೆಲರ್ಸ್ ಮಾಲಕರಾದ ಕೆ ನಾರಾಯಣ ಕುಲಾಲ್, ಶಿವಪುರ ಸಂಘದ ಅಧ್ಯಕ್ಷರಾದ ಉದಯ ಕುಲಾಲ್ , ಶಿವಪುರ ಶಾಲೆಯ ಮುಖ್ಯ ಶಿಕ್ಷಕಿ ಗುಲಾಬಿ ಕುಲಾಲ್, ಸುಮಿತ್ರ ಕುಲಾಲ್ ಬೆಪ್ಡಿ, ಕಾರ್ಯದರ್ಶಿ ಭಾಸ್ಕರ್ ಕುಲಾಲ್, ಕ್ರೀಡಾ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಮಡಮಕ್ಕಿ, ಪ್ರಸನ್ನ ಕುಲಾಲ್ ವರಂಗ, ರಾಜು ಕುಲಾಲ್ ಮುದ್ರಾಡಿ, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶ್ ಕುಲಾಲ್ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಬೆಳಂಜೆ ಜಯರಾಮ್ ಕುಲಾಲ್ ವಂದಿಸಿದರು.
ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಅಯೋಧ್ಯೆಗೆ ಆಹ್ವಾನ
Posted On: 25 Dec 2023, 11:26 AM
ಶಂಕರಪುರ : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲೆಯ ಶಂಕರಪುರ ಶ್ರೀ ದ್ವಾರಕಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀರಾಮ ಬಿಂಬ ಪ್ರಾಣ ಪ್ರತಿಷ್ಠೆಯ ಸಂದರ್ಭ ಉಪಸ್ಥಿತರಿರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿ ಅಧಿಕೃತವಾಗಿ ಆಹ್ವಾನಿಸಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಮಂಗಳೂರು : 12 ಗಂಟೆಗಳ ಕಾಲ ನಿರಂತರ ಹಾಡು - 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲು
Posted On: 25 Dec 2023, 11:18 AM
ಮಂಗಳೂರು : ಇಲ್ಲಿನ ಪುರಭವನದಲ್ಲಿ ಜರಗಿದ ಮನಃಶಾಂತಿಗಾಗಿ ಹಾಡು ಕಾರ್ಯಕ್ರಮದಲ್ಲಿ ಸುಮಾರು 12 ಗಂಟೆಗಳ ಕಾಲ ನಿರಂತರವಾಗಿ ಹಾಡಿದ 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲಾಗಿದೆ. 2023 ರ ನವೆಂಬರ್ 5 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಗಂಗಾಧರ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ, ಶ್ರೀ ರಕ್ಷ ಸರ್ಪಂಗಳ ಮತ್ತು ನೇತ್ರಾಖುಶಿ 12 ಗಂಟೆಗಳ ಕಾಲ ನಿರಂತರ ಗಾಯನ ಮಾಡಿರುತ್ತಾರೆ.
ಮುಲ್ಕಿ ಸೀಮೆ ಅರಸು ಕಂಬಳ - ಅರಸು ಪ್ರಶಸ್ತಿ ಪ್ರದಾನ
Posted On: 25 Dec 2023, 10:37 AM
ಮುಲ್ಕಿ: ಚಾರಿಟೆಬಲ್ ಟ್ರಸ್ಟ್ ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮುಲ್ಕಿ ಸೀಮೆ ಅರಸು ಕಂಬಳದ ಅಂಗವಾಗಿ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಪಡು ಪಣಂಬೂರು ಮುಲ್ಕಿ ಅರಮನೆಯ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯಲ್ಲಿ ನಡೆಯಿತು. ಸನ್ಮಾನ : ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕಂಬಳ ಕ್ಷೇತ್ರದಲ್ಲಿನ ಸಾಧನೆಗೆ ದಿ. ಪಯ್ಯೊಟ್ಟು ಸದಾಶಿವ ಸಾಲ್ಯಾನ್ (ಮರಣೋತ್ತರ), ಸಾಮಾಜಿಕ ಕ್ಷೇತ್ರದಲ್ಲಿ ಉತ್ರುಂಜೆ ಭುಜಂಗ ಎಂ. ಶೆಟ್ಟಿ, ತುಳು- ಸಾಂಸ್ಕೃತಿಕ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾರ್, ಕೃಷಿ ಕ್ಷೇತ್ರದ ಸಾಧಕ ಗಂಗಾಧರ ದೇವಾಡಿಗ, ಕ್ರೀಡಾ ಕ್ಷೇತ್ರದಲ್ಲಿ ಸುಷ್ಮಾ ತಾರಾನಾಥ್, ವೈದ್ಯಕೀಯ ಕ್ಷೇತ್ರದಲ್ಲಿ ಹಳೆಯಂಗಡಿಯ ಡಾ.ಗುರುಪ್ರಸಾದ್ ನಾವಡರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೈಸೂರಿನ ಡಾ. ಉಮೇಶ್, ಕ್ಯಾ. ಬ್ರಿಜೇಶ್ ಚೌಟ, ಗೋಕುಲ್ ದಾಸ್ ಪೈ, ಚಿತ್ತರಂಜನ್ ಬೋಳಾರ, ದಿವಾಕರ ಕದ್ರಿ, ವಿವೇಕ್ ಆಳ್ವ ಮೂಡುಬಿದಿರೆ, ರಂಜಿತ್ ಕೋಟ್ಯಾನ್, ಟ್ರಸ್ಟ್ ನ ಗೌತಮ್ ಜೈನ್ ಮುಲ್ಕಿ ಅರಮನೆ, ಮೋಹನ್ ದಾಸ್ ಸುರತ್ಕಲ್, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಪ್ರಿಯ ದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾರ್ಡ್ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು.
ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳ - ಶ್ರೀ ದೇವಿಯ ಆರಾಧನೆ ; ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಿಯ ರಂಗೋಲಿ ಚಿತ್ರ
Posted On: 24 Dec 2023, 09:02 PM
ಬಂಟಕಲ್ಲು : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ವೈಕುಂಠ ಏಕಾದಶಿಯ ಶುಭಾವಸರದಲ್ಲಿ ಸೇವಾದಾರರಿಂದ "ಶ್ರೀ ದೇವಿಯ ಆರಾಧನೆ" ಜರುಗಿತು. ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಅನುಷ್ಟಾನಗಳು ಜರುಗಿದವು. ವೈದಿಕರಾದ ನರೇಶ್ ಭಟ್ ಸಹಕರಿಸಿದರು. ಕ್ಷೇತ್ರದ ಅರ್ಚಕರಾದ ಮಂಜುನಾಥ್ ಭಟ್ ರಂಗೋಲಿಯಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷೀ ದೇವಿಯ ಚಿತ್ರವನ್ನು ರಚಿಸಿದ್ದರು.
ಬಂಟಕಲ್ಲು : ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ; ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸನ್ಮಾನ
Posted On: 24 Dec 2023, 08:49 PM
ಬಂಟಕಲ್ಲು : ಅಂದಾಜು 80 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬಂಟಕಲ್ಲು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯನ್ನು ರವಿವಾರ ಸಮಿತಿಯ ಅಧ್ಯಕ್ಷರು ಹಾಗೂ ಬಂಟಕಲ್ಲು ನಿವೃತ್ತ ಅಂಚೆ ಪಾಲಕ ಬಿ.ಭಾಸ್ಕರ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ರವಿವಾರ ದೈವಸ್ಥಾನದ ಸಾನಿಧ್ಯದಲ್ಲಿ ಜರುಗಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ದೇವಸ್ಥಾನ, ದೈವಸ್ಥಾನ, ಇನ್ನಿತರ ಶೃದ್ಧಾಕೇಂದ್ರಗಳು ಹಿರಿಯರು ನಮಗೆ ನೀಡಿದ ಬಳುವಳಿಯಾಗಿದ್ದು, ಅದನ್ನು ಉಳಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪರಮಾತ್ಮನ ಅನುಗ್ರಹ ಇಲ್ಲದಿದ್ದರೆ ಯಾವ ಕಾರ್ಯವೂ ಆಗಲ್ಲ. ಧರ್ಮ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತೀ ಮನೆಯ ಸಹಭಾಗಿತ್ವ ಅಗತ್ಯ. ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ದೇವ, ದೈವರ ಸಾನಿಧ್ಯ ಇರುತ್ತದೆ. ಜೀರ್ಣೋದ್ದಾರ ಕಾರ್ಯದಲ್ಲಿ ತಮ್ಮೊಂದಿಗೆ ತಾನೂ ಕೈಜೋಡಿಸುವುದಾಗಿ ಸ್ಪೂರ್ತಿ ತುಂಬಿದರು. ವಿಶೇಷ ಅಹ್ವಾನಿರಾಗಿ ಉಪಸ್ಥಿತರಿದ್ದ ಸ್ಥಳೀಯ ಕೊಡುಗೈದಾನಿಗಳಾದ ಪ್ರಫುಲ್ಲಾ ಜಯ ಶೆಟ್ಟಿ ಮಾತನಾಡಿ ಸಮಿತಿ ಎಂದರೆ ಒಗ್ಗಟ್ಟು. ದೈವಸ್ಥಾನದ ಜೀರ್ಣೋದ್ಧಾರ ನಮಗೆ ಭಗವಂತ ಕೊಟ್ಟ ಅವಕಾಶ. ಹತ್ತು ಜನರಿಗೆ ಖುಷಿಯಾಗುವ ಕೆಲಸದಿಂದ ಆರೋಗ್ಯವೃದ್ಧಿಯಾಗುತ್ತದೆ. ಎಲ್ಲರೂ ಜೊತೆಯಾಗಿ ಈ ಪುಣ್ಯ ಕಾರ್ಯ ಮಾಡುವ ಎಂದರು. ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಾರ್ಡ್ ಪ್ರತಿನಿಧಿ ಕೆ.ಆರ್.ಪಾಟ್ಕರ್, ದೈವಸ್ಥಾನದ ಮಧ್ಯಸ್ಥಗಾರ ರಾಮಕೃಷ್ಣ ಪಾಟ್ಕರ್(ಅಪ್ಪು ನಾಯಕ್), ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘದ ಶಿರ್ವ ಘಟಕದ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ಪಂಜಿಮಾರು ತೇರಾಡಿ ಲಕ್ಷ್ಮಿ ಸುಧಾಕರ ಶೆಟ್ಟಿ, ಸಂದೀಪ್ ಬಂಗೇರ ಉಪಸ್ಥಿತರಿದ್ದರು. ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತ್ಯಸಾಯಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು. ಸಭೆಯಲ್ಲಿ ಗೌರವ ಸಲಹೆಗಾರರಾದ ವಾಸು ಕೆ. ಸುಭಾಸ್ನಗರ, ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಕೆ.ಸಿ, ಸಂಘಟನಾ ಕಾರ್ಯದರ್ಶಿ ದಿನೇಶ್ ಎಸ್.ಕೆ, ಪ್ರಧಾನ ಅರ್ಚಕ ಸಂತೋಷ್, ಭಾನುಮತಿ ಶಂಕರ್, ರೋಹಿಣಿ ಚಂದ್ರಶೇಖರ್ ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.
ಕಾಪು : ಕಿಶೋರ ಯಕ್ಷಗಾನ - 2023 ಸಮಾರೋಪ
Posted On: 24 Dec 2023, 07:39 PM
ಕಾಪು : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ತರಬೇತಿ ನೀಡಿದ ಕಾಪು ಭಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ "ಕಿಶೋರ ಯಕ್ಷಗಾನ 2023" ಇದರ ಸಮಾರೋಪ ಸಮಾರಂಭ ಕಾಪು ಲಕ್ಷ್ಮೀಜನಾರ್ಧನ ದೇವಸ್ಥಾನ ಮುಂಭಾಗದಲ್ಲಿ ನಡೆಯಿತು. ಶಾಸಕರು, ಕಾಪು ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ, ಕಾಪು ವತಿಯಿಂದ ನಿಸ್ಪೃಹ ಸಮಾಜ ಸೇವಕ, ಕಲಾ ಸಂಘಟಕ ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣೆಯಲ್ಲಿ ಆಯೋಜಿಸಲಾದ ಈ "ಕಿಶೋರ ಯಕ್ಷಗಾನ - 2023" ಕಾಪು ಲಕ್ಷ್ಮೀಜನಾರ್ಧನ ದೇವಸ್ಥಾನ ಮುಂಭಾಗದಲ್ಲಿ ಡಿಸೆಂಬರ್ 21ರಿಂದ 24 ರವರೆಗೆ ಸಂಜೆ 5.30 ರಿಂದ ರಾತ್ರಿ 9.00 ರವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ್ ಶೆಟ್ಟಿ, ದಂಡತೀರ್ಥ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಪ್ರಶಾಂತ್ ಶೆಟ್ಟಿ, ಮಂಗಳೂರು ಶ್ರೀನಿವಾಸ್ ಮೆಡಿಕಲ್ ಕಾಲೇಜು ಮೂಳೆ ತಜ್ಞರಾದ ಶಶಿರಾಜ್ ಕೆ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ ಗಂಗಾಧರ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕಾಪು ಪ್ರದರ್ಶನಾ ಸಂಘಟನಾ ಸಮಿತಿ ಸಂಯೋಜಕರಾದ ವಿ.ಜಿ ಶೆಟ್ಟಿ, ಕೋಶಾಧಿಕಾರಿಗಳಾದ ಶ್ರೀಕರ ಶೆಟ್ಟಿ ಕಲ್ಯಾ ಹಾಗೂ ಪ್ರಭಾತ್ ಶೆಟ್ಟಿ ಉಪಸ್ಥಿತರಿದ್ದರು.
