Updated News From Kaup
ಕುಟುಂಬದೊಂದಿಗೆ ನಡೆದುಕೊಂಡು ಬಂದೇ ಮತದಾನ ಮಾಡಿದ ವಿನಯ್ ಕುಮಾರ್ ಸೊರಕೆ

Posted On: 10-05-2023 10:08AM
ಕಾಪು : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕುಟುಂಬದೊಂದಿಗೆ ಅಜ್ಜರಕಾಡು ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಪತ್ನಿ ದಕ್ಷ ಸೊರಕೆ ಮತ್ತು ಮಗ ದ್ವಿಶನ್ ಸೊರಕೆ ಜೊತೆ ಮನೆಯಿಂದ ಮತಗಟ್ಟೆವರೆಗೆ ನಡೆದುಕೊಂಡು ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಈ ಸಂದರ್ಭ ಮಾತನಾಡಿದ ವಿನಯ್ ಕುಮಾರ್ ಸೊರಕೆ ನಾನು ಕಾಪು ಕ್ಷೇತ್ರಕ್ಕೆ ಮಾಡಿದ ಪ್ರಾಮಾಣಿಕ ಸೇವೆ ಅಭಿವೃದ್ಧಿ ಗಳು ನನ್ನ ಕೈ ಹಿಡಿಯಲಿದೆ.ಕಾಪು ಕ್ಷೇತ್ರದಲ್ಲಿ ಪ್ರಜ್ನಾವಂತ ಮತದಾರರಿದ್ದು ಈ ಬಾರಿ ಜನತೆ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಅಂತಾ ಹೇಳಿದರು.
ಮೇ 14 : ಪಡುಕುತ್ಯಾರು ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ; ಸಾಮೂಹಿಕ ಚಂಡಿಕಾಯಾಗ ; ಪ್ರಶಸ್ತಿ ಪ್ರದಾನ-ಗೌರವಾರ್ಪಣೆ- ವಸಂತ ವೇದ ಶಿಬಿರ ಸಮಾರೋಪ

Posted On: 09-05-2023 08:18PM
ಕಾಪು : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ 13ನೇ ವರ್ಷದ ವರ್ಧಂತ್ಯುತ್ಸವವು ಮೇ 14ರಂದು ಪಡುಕುತ್ಯಾರಿನಲ್ಲಿ ನಡೆಯಲಿದೆ.
ವರ್ಷಂಪ್ರತಿ ನಡೆಯುವ ಸಾಮೂಹಿಕ ಮಹಾ ಚಂಡಿಕಾಯಾಗವು ಅದೇ ದಿನ ನಡೆಯಲಿದೆ. ಅಂದು ಬೆಳಿಗ್ಗೆ ಜಗದ್ಗುರುಗಳಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ ನಡೆಯಲಿದೆ. ನಂತರ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆಯ ಬಳಿಕ ಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳ ನಡೆಯಲಿವೆ.
ಬಳಿಕ ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆಯುವ ಧರ್ಮ ಸಭೆಯ ಅಧ್ಯಕ್ಷತೆಯನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಲಿದ್ದಾರೆ. ಇದೇ ವೇಳೆ ಮಹಾಸಂಸ್ಥಾನದ ವ್ಯಾಪ್ತಿಯಲ್ಲಿರುವ ಶ್ರೀಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳು, ಸಮಾಜ ಸದಸ್ಯರಿಂದ ಸಂಗ್ರಹಿಸಿದ ಗುರುಕಾಣಿಕೆಯನ್ನು ವಾಡಿಕೆಯಂತೆ ಜಗದ್ಗುರುಗಳಿಗೆ ಫಲತಾಂಬೂಲಗಳೊಂದಿಗೆ ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ ಚಂದುಕೂಡ್ಲು , ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು ಗೌರವ ಉಪಸ್ಥಿತಿಯಲ್ಲಿ ನಡೆಯುವ ಧರ್ಮಸಭೆಯಲ್ಲಿ ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್) ಹುಬ್ಬಳ್ಳಿ ಅವರಿಂದ ಗುರುಪೀಠಗಳು ಮತ್ತು ಯುವ ಜನತೆ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಮತ್ತು ಆನೆಗುಂದಿ ಶಾಖಾ ಮಠ ಸಮಿತಿ ಬೆಂಗಳೂರು ಅಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಕರಾವಳಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳಾದ ಕೆ. ಕೇಶವ ಆಚಾರ್ಯ ಮಂಗಳೂರು, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಗಜಾನನ ಎನ್. ಆಚಾರ್ಯ ಭಟ್ಕಳ , ಪುರೋಹಿತ್ ಜಯಕರ ಆಚಾರ್ಯ ಮೂಡಬಿದ್ರೆ, ನವೀನ ಆಚಾರ್ಯ ಕಟಪಾಡಿ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶೇಖರ ಆಚಾರ್ಯ ಕಾಪು , ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಸುಂದರ ಆಚಾರ್ಯ ಕೋಟೆಕಾರು , ಶ್ರೀ ಬಿ.ಎಂ.ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಕೆ. ಪ್ರಭಾಕರ ಆಚಾರ್ಯ ಮಧೂರು, ಪುರುಷೋತ್ತಮ ಆಚಾರ್ಯ ಕಾಞಂಗಾಡು, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್ ಮುಂಬಯಿ, ಚಿಕ್ಕಣ್ಣ ಆಚಾರ್ ನಾಯಂಡರಹಳ್ಳಿ ಬೆಂಗಳೂರು, ಮನೋಹರ ಲಕ್ಕುಂಡಿ ಹುಬ್ಬಳ್ಳಿ, ಬಿ. ಜಗದೀಶ್ ಆಚಾರ್ಯ ಪಡುಪಣಂಬೂರು , ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಮೋಹನ್ ಕುಮಾರ್ ಬೆಳ್ಳೂರು, ಸುಂದರ ಆಚಾರ್ಯ ಬೆಳುವಾಯಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಪ್ರವೀಣ ಆಚಾರ್ಯ ರಂಗನಕೆರೆ, ವೈ. ಧರ್ಮೇಂದ್ರ ಆಚಾರ್ಯ ನಿವೃತ್ತ ಸುಬೇದಾರ್ ಕಾಸರಗೋಡು, ಕೃಷ್ಣ ವಿ. ಆಚಾರ್ಯ, ಮುಂಬಯಿ, ಜಿ.ಟಿ ಆಚಾರ್ಯ ಮುಂಬಯಿ, ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು, ಮೋಹನ್ ಕುಮಾರ್ ಬೊಳ್ಳೂರು, ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಮಧು ಆಚಾರ್ಯ ಮೂಲ್ಕಿ, ಸದಾನಂದ ಎಸ್. ಆಚಾರ್ಯ ಕಲ್ಯಾಣ ಪುರ, ತುಕಾರಾಮ ಆಚಾರ್ಯ ಬೆಂಗಳೂರು, ನಲ್ಕ ತ್ರಿವಿಕ್ರಮ ಆಚಾರ್ಯ ಬೆಂಗಳೂರು, ಯು.ಎಸ್.ಗಿರೀಶ್ ಆಚಾರ್ಯ ಕೊಯಂಬುತ್ತೂರು, ಯೋಗೀಶ್ ಆಚಾರ್ಯ ಕೊಯಂಬತ್ತೂರು ಇವರ ಉಪಸ್ಥಿತಿಯಲ್ಲಿ ಸಮಾರಂಭ ಸಂಪನ್ನಗೊಳ್ಳಲಿದೆ. ಇದೇ ದಿನ ವಸಂತ ವೇದ ಶಿಬಿರದ ಸಮಾರೋಪವೂ ನಡೆಯಲಿದೆ.
2023ನೇ ಸಾಲಿನ ಪ್ರಶಸ್ತಿ ಪ್ರದಾನ : ಈ ಸಮಾರಂಭದಲ್ಲಿ ಮಹಾಸಂಸ್ಥಾನದಿಂದ ವರ್ಷಂಪ್ರತಿ ನೀಡಲಾಗುವ ಪ್ರಶಸ್ತಿಗಳನ್ನು ಜಗದ್ಗುರುಗಳವರು ಪ್ರದಾನ ಮಾಡಲಿದ್ದಾರೆ. ಮಹಾಸಂಸ್ಥಾನದ ಪುನರುತ್ಥಾನಕ್ಕಾಗಿ ಸೇವೆ ಸಲ್ಲಿಸುತ್ತಿರುವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ ಹಾಗೂ ವೈದಿಕ, ಕಲೆ ಶಿಲ್ಪ ಉದ್ಯಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಿರಿಯ ಮತ್ತು ಕ್ರೀಯಾಶೀಲರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಬ್ರಹ್ಮಶ್ರೀ ಸೀತಾರಾಮ ಶಾಸ್ತ್ರಿ ಮಂಗಳೂರು (ವೈದಿಕ), ಮಂಟಪ ಕೇಶವ ಆಚಾರ್ಯ ಸಾಲಿಗ್ರಾಮ, ಮಂಜುನಾಥ ಆಚಾರ್ಯ ಚಿತ್ರಪಾಡಿ , ವ್ಯಾಸರಾಯ ಆಚಾರ್ಯ ಪಾದೂರು, ದಿವಾಕರ ಆಚಾರ್ಯ ಕೋಟೆಕಾರು(ಶಿಲ್ಪ), ವಿಘ್ನೇಶ್ವರ ಭಟ್ ಪುತ್ತೂರು (ಜ್ಯೋತಿಷ್ಯ), ಡಾ. ಸಿ.ಆರ್. ಚಂದ್ರ ಶೇಖರ್ ಬೆಂಗಳೂರು( ವೈದ್ಯಕೀಯ), ನೇಜಾರು ವಿಶ್ವನಾಥ ರಾವ್ ಕತಾರ್, ಬಿ. ವಿಶ್ವನಾಥ ರಾವ್ ಕೊಯಂಬುತ್ತೂರು( ಮರಣೋತ್ತರ) ( ಉದ್ಯಮ) ಎಂಬಿವರು ಆನೆಗುಂದಿಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಜಯ ಕುಮಾರ್ ಕುಂಟಾಡಿ ಕೆ.ಎ.ಎಸ್ , ಬ್ರಹ್ಮಾವರ ಡಾ. ಗೋಪಾಲಕೃಷ್ಣ ನವದೆಹಲಿ ಇವರಿಗೆ ವಿಶೇಷ ಗೌರವಾಭಿನಂದನೆ ನಡೆಯಲಿದೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ : 2021, 2022, 2023 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್. ಎಲ್. ಸಿ, ಪಿ.ಯು.ಸಿ/ಪ್ಲಸ್ ಟು ಪರೀಕ್ಷೆಗಳಲ್ಲಿ 95% ಮತ್ತು ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಪದವಿ, ಸ್ನಾತಕೋತ್ತರ,ವೃತ್ತಿ ಶಿಕ್ಷಣ, ಮೆಡಿಕಲ್, ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಜಗದ್ಗುರುಗಳವರಿಂದ ಅಭಿನಂದನೆ ನಡೆಯಲಿದೆ. ಪಟ್ಟಾಭಿಷೇಕ ಮಹೋತ್ಸವದ ವರ್ಧಂತಿಯ ಪುಣ್ಯ ಸಮಾರಂಭದಲ್ಲಿ ಸಮಸ್ತ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಗದ್ಗುರಗಳವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆನೆಗಂದಿ ಪ್ರತಿಷ್ಠಾನ, ಮಠದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ಭಕ್ತನೊಬ್ಬನ ಶಬರಿಮಲೆಗೆ ವಿಶೇಷ ಪಾದಯಾತ್ರೆಯ ಹರಕೆ

Posted On: 09-05-2023 07:45PM
ಕಾಪು : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹಾಗೂ ಉಡುಪಿ ಕ್ಷೇತ್ರದಲ್ಲಿ ಯಶ್ಪಾಲ್ ಸುವರ್ಣ ಮತ್ತು ಕಾಪು ಕ್ಷೇತ್ರದಲ್ಲಿ ಸುರೇಶ್ ಶೆಟ್ಟಿ ಗುರ್ಮೆಯವರು ಚುನಾವಣೆಯಲ್ಲಿ ಯಶಸ್ವಿಯಾಗಿ ಬಹುಮತಗಳಿಂದ ಗೆದ್ದು ಶಾಸಕರಾಗಬೇಕೆಂದು ಪಡುಬಿದ್ರಿಯ ವಿಶ್ವಕಲ್ಲಟ್ಟೆ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದಾರೆ.
ಈಚು ಸ್ವಾಮಿ ಎಂದು ಪರಿಚತರಾಗಿರುವ ವಿಶ್ವ ಕಲ್ಲಟ್ಟೆಯವರು ಪಾದಯಾತ್ರೆಯ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕದ ಹರಕೆ ಹೊತ್ತಿದ್ದಾರೆ.
ಇವರು ಸಮಾಜ ಸೇವಾ ಸಂಸ್ಥೆ ಪಡುಬಿದ್ರಿ ಭಗವತಿ ಗ್ರೂಪ್ ಇದರ ಸದಸ್ಯರೂ ಆಗಿದ್ದಾರೆ.
ಕಾಪು ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಭರ್ಜರಿ ಮತಯಾಚನೆ

Posted On: 08-05-2023 04:48PM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಕಾಪು ಪುರಸಭೆ ವ್ಯಾಪ್ತಿಯ ಕಾಪು ಪೇಟೆಯಲ್ಲಿ ಭರ್ಜರಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಮಂಡಲ ಅಧ್ಯಕ್ಷ ನವೀನ್ ಎಸ್.ಕೆ, ಮಾಜಿ ಪುರಸಭೆ ಸದಸ್ಯ ವಿಜಯ್ ಕರ್ಕೇರ, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಸಂದೀಪ್ ಶೆಟ್ಟಿ, ಪುರಸಭೆ ಸದಸ್ಯರು ರತ್ನಾಕರ ಶೆಟ್ಟಿ, ಹರಿಣಿ ದೇವಾಡಿಗ, ಪ್ರಕೋಷ್ಟ ಸಂಚಾಲಕ ಗೋಪ ಪೂಜಾರಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಧರ್ಮನಿಷ್ಠೆಯ ಪಕ್ಷಕ್ಕೆ ಬೆಂಬಲ ನೀಡಿ : ವಜ್ರದೇಹಿ

Posted On: 08-05-2023 04:00PM
ಮಂಗಳೂರು : ಹಿಂದೂಧರ್ಮನಿಷ್ಠೆಯನ್ನು ಬೆಂಬಲಿಸುವ ಪಕ್ಷಕ್ಕೆ ಮತನೀಡುವುದರ ಮೂಲಕ ಕರ್ನಾಟಕ ರಾಜ್ಯವನ್ನು ಸುಭದ್ರಪಡಿಸಬೇಕು. ವ್ಯಕ್ತಿ ಆಧಾರಿತ ಚಿಂತನೆಯಲ್ಲಿ ಮತ ನೀಡಿದರೆ ಅದು ನಮ್ಮ ಅಭಿವೃದ್ಧಿಯನ್ನು ಹಾಳುಮಾಡಬಹುದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಜಗತ್ತು ಇಂದು ಸಂಕಟಮಯ ಸ್ಥಿತಿಯಲ್ಲಿದೆ. ಆದರೆ ಭವ್ಯಭಾರತವಿಂದು ಸಧೃಡವಾಗಿದೆ. ಹಿಂದೂ ಧರ್ಮಾಧಾರಿತ ಆಲೋಚನೆಗಳು ಇದಕ್ಕೆ ಮುಖ್ಯ ಕಾರಣವಾಗಿದೆ. ರಾಮಮಂದಿರ ಕಾಶ್ಮೀರ 370 ವಿಧಿರದ್ಧತಿ, ಗೋಹತ್ಯಾ ನಿಷೇಧ, ಹಿಂದೂ ಧರ್ಮ ದೃಢವಾದರೆ ಎಲ್ಲಾ ಮತ, ಸಂಪ್ರದಾಯ, ಆಚರಣೆಗಳು ಸುಲಲಿತವಾಗಿ ಸಾಗುತ್ತವೆ. ಸ್ವಾರ್ಥಪರ ಚಿಂತನೆ ದೇಶ ಯಾ ರಾಜ್ಯಕ್ಕೆ ಒಳಿತು ಮಾಡದು. ಹಿಂದೂ ಧರ್ಮಕ್ಕೆ ನಿಷ್ಠವಾದ ಪಕ್ಷದ ಅಭ್ಯರ್ಥಿಗಳನ್ನು ಹಿಂದೂಧರ್ಮದ ಪುನರುತ್ಥಾನಕ್ಕಾಗಿ ಆಯ್ಕೆ ಮಾಡಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಮತವೆಂದೂ ಮೋಸ, ವಂಚನೆಗೊಳಗಾಗಬಾರದು. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಮ್ಮ ಮತ ಕರ್ನಾಟಕ ರಾಜ್ಯದ ಭದ್ರ ಬುನಾದಿಗೆ ಅಡಿಗಲ್ಲಾಗಬೇಕು. ದೇಶ ವಿಭಜಿಸುವವರು ನಮ್ಮ ಮಧ್ಯೆ ಬೆಳೆದರೆ ಕರ್ನಾಟಕ ರಾಜ್ಯ ಕಡುಬಡತನದ ಕಡೆಗೆ ಸಾಗುವುದಲ್ಲದೆ ಕೆಲವು ದೇಶಗಳು ಅತಂತ್ರಗೊಂಡ ಹಾಗೆ ನಮ್ಮ ಕರ್ನಾಟಕವೂ ನೆಲೆ ಕಳೆದುಕೊಳ್ಳಬಹುದು. ನಮ್ಮ ಸಂಘಟಿತವಾದ ವಿವೇಚನೆಯ ಮೂಲಕ ಕರ್ನಾಟಕ ರಾಜ್ಯದ ಶಾಂತಿ, ಅಭಿವೃದ್ಧಿ ಐಕ್ಯತೆಗೆ ಮತದಾನ ಕಾರಣವಾಗಬೇಕು. ಹಾಗಾಗಿ ವ್ಯಕ್ತಿಕೇಂದ್ರಿತ ಮನಸ್ಥಿತಿಗೆ ಒಗ್ಗದೆ ರಾಷ್ಟ್ರೀಯತೆಯ ಹಿಂದೂಧರ್ಮದ ಸದೃಢವಾದ ನೆಲೆಗೆ ಅಭಿವೃದ್ಧಿಪರ ಚಿಂತನೆಯ ಒಳಿತಿಗೆ ಈ ಸಲ ಮತದಾನ ಮಾಡಿ. ಹಿಂದುತ್ವದ ನೆಲೆಯನ್ನು ಭದ್ರಗೊಳಿಸಿ ದೇಶ ಹಾಗೂ ಕರ್ನಾಟಕವನ್ನು ಸುಭದ್ರಪಡಿಸಲು ಹಿಂದೂಧರ್ಮದ ಬೆಂಬಲಿತ ಪಕ್ಷವನ್ನು ಚುನಾಯಿಸಿ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಮೀಜಿ ತಿಳಿಸಿದ್ದಾರೆ.
ಕಾಪು : ಪಡು ಕುತ್ಯಾರು ಆನೆಗುಂದಿ ಮಹಾ ಸಂಸ್ಧಾನದಲ್ಲಿ ವಸಂತ ವೇದ ಶಿಬಿರಕ್ಕೆ ಚಾಲನೆ

Posted On: 08-05-2023 02:30PM
ಕಾಪು : ಸಂಸ್ಕೃತಿ ಸಂಸ್ಕಾರವನ್ನು ಬೋಧಿಸುವ ವಸಂತ ವೇದ ಶಿಬಿರಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ, ಸಂಧ್ಯಾವಂದನೆ ವಿಧಿ ವಿಧಾನಗಳ ಶಿಬಿರವು ನಮ್ಮ ಸಮಾಜದ ಸಂಸ್ಕೃತಿಯ ಮಕ್ಕಳಿಗೆ ಪ್ರಾಥಮಿಕ ಬೋಧನೆಯನ್ನು ನೀಡುತ್ತದೆ ಎಂದು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಇಲ್ಲಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ವರ್ಷಂಪ್ರತಿ ನಡೆಸಲಾಗುವ ವಸಂತ ವೇದ ಶಿಬಿರವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಕ್ಕಳು ಸುಸಂಸ್ಕೃತರಾದರೆ ಮುಂದೆ ಅವರು ಸಮಾಜದ ಆಸ್ತಿಯಾಗುತ್ತಾರೆ. ಇದಕ್ಕಾಗಿ ಆ ಸಂಸ್ಥಾನದಿಂದ ಸಂಧ್ಯಾವಂದನೆಗೆ ಒತ್ತು ನೀಡಿ. ಶಿಬಿರವನ್ನು ಆಯೋಜಿಸಲಾಗಿದೆ. ಜೊತೆಗೆ ನಮ್ಮ ಸಮಾಜದ ಸಂಸ್ಕೃತಿ, ಹಬ್ಬಗಳು, ಆಚರಣೆಗಳು, ದೇವರು, ಗುರು ಪರಂಪರೆ, ಮಹಾಪುರುಷರು, ಸೇರಿದ ವಿಚಾರಗಳನ್ನು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ನುಡಿದರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯ ಹೋಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದಲ್ಲಿ ದೊರೆತ ವಿಚಾರಗಳನ್ನು ಹೆತ್ತವರು ಕಾಳಜಿ ವಹಿಸಿ ಮಕ್ಕಳಿಂದ ಆಚರಣೆಗೆ ತರುವಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಮಂಗಳಾ ಜ್ಯುವೆಲ್ಲರ್ಸ್ ಮಾಲಕರೂ, ಕೊಡಂಕೂರು ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀಶ ಆಚಾರ್ಯ ಅಲೆಯೂರು ಮಾತನಾಡಿ ಸಂಸ್ಥಾನದಿಂದ ವರ್ಷಂಪ್ರತಿ ಶಿಬಿರವನ್ನು ನಡೆಸುತ್ತಿರುವುದು ಶ್ಲಾಘನೀಯ, ಪಂಚ ಕುಲಕಸುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು ಸೂಕ್ತ ಎಂದು ಅಭಿಪ್ರಾಯಿಸಿದರು. ಇನ್ನೋರ್ವ ಮುಖ್ಯ ಅತಿಥಿ ಎಸ್ ಕೆ ಜಿ ಐ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ ಮಾನವನಾಗಿ ಜನಿಸಿದ ಮೇಲೆ ಸಂಸ್ಕಾರಯುತ ಜೀವನವನ್ನು ದಲ್ಲಿ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ವಸಂತ ವೇದ ಶಿಬಿರವು ಅತ್ಯಂತ ಸಹಕಾರಿಯಾಗಿದೆ ಎಂದರು. ಸಮಾರಂಭದಲ್ಲಿ ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಬಿ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಉಪ ಅಧ್ಯಕ್ಷ ಗುರುರಾಜ್ ಕೆ.ಜೆ ಆಚಾರ್ಯ, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಶುಭಾ ಶಂಸನೆ ನಡೆಸಿದರು.
ಶ್ರೀ ನಾಗದರ್ಮೇಂದ್ರ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ನಡೆಸಿದರು. ಶಿಬಿರಾಧಿಕಾರಿ ಐ ಲೋಲಾಕ್ಷ ಆಚಾರ್ಯ ಕಟಪಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ವಂದಿಸಿದರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಆಯೋಜಿಸಿರುವ ವಸಂತ ವೇದ ಶಿಬಿರವು ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆ, ಆನೆಗುಂದಿ ಗುರು ಸೇವಾ ಪರಿಷತ್ತು ಕೇಂದ್ರ ಸಮಿತಿ, ಅಸೆಟ್, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಶ್ರೀ ಸರಸ್ವತೀ ಮಾತೃ ಮಂಡಳಿ ಇವುಗಳ ಸಹಕಾರದೊಂದಿಗೆ ನಡೆಯುತ್ತಿದ್ದು, 130 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಸಂತ ವೇದ ಶಿಬಿರದ ಸಮಾರೋಪವು ಮೇ 14 ರ ಜಗದ್ಗುರುಗಳವರ ಪಟ್ಟಾಭಿಷೇಕ ವರ್ಧಂತಿಯಂದು ನಡೆಯಲಿದೆ.
ಕಾಪು : ಪುರಸಭಾ ವ್ಯಾಪ್ತಿಯ ಭಾರತ್ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಿಂದ ಪ್ರಚಾರ ಸಭೆ

Posted On: 07-05-2023 11:38AM
ಕಾಪು : ಪುರಸಭಾ ವ್ಯಾಪ್ತಿಯ ಭಾರತ್ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆಯವರ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು.

ವಿನಯ್ ಕುಮಾರ್ ಸೊರಕೆಯವರು ಮತದಾರ ಬಾಂಧವರಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಮತ್ತು ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮತಯಾಚಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ ರವರು ಸೊರಕೆಯವರ ಸಾಧನೆಗಳ ಬಗ್ಗೆ ವಿವರಿಸಿ, ಮುಂದೆ ಶಾಸಕರಾಗಿ ಚುನಾಯಿತರಾದರೆ ಏನು ಮಾಡುತ್ತಾರೆ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿಸಿದರು.
ಪಕ್ಷದ ಪ್ರಮುಖರಾದ ಅಮೀರ್ ಮೊಹಮ್ಮದ್, ಹರೀಶ್ ನಾಯಕ್, ಸೌಮ್ಯ ಸಂಜೀವ, ಶೋಭಾ ಪಾಂಗಳ, ಲಕ್ಷ್ಮೀಶ ತಂತ್ರಿ, ಸಂಧ್ಯಾ ಬಾಲಕೃಷ್ಣ, ಹಬೀಬ್ ಖಾನ್, ಕೆ.ಎಂ. ರಝಕ್, ಶಂಶುದ್ದೀನ್, ರಜಾಬ್ ಉಮ್ಮರ್, ಮೋಹನ್ ದಾಸ್ ಶೆಣೈ, ಮೋಹಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಉದ್ಯಾವರ ಸಂಪಿಗೆ ನಗರದಲ್ಲಿ ಬಿಜೆಪಿ ಮತ ಬೇಟೆ

Posted On: 07-05-2023 11:23AM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಭರ್ಜರಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು, ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕ ಕ್ಷೇತ್ರಕ್ಕೆ ಹಲವಾರು ಅನುದಾನಗಳನ್ನು ನೀಡಿದೆ, ಇನ್ನಷ್ಟು ಯೋಜನೆಗಳನ್ನು ಬಿಜೆಪಿ ಸರ್ಕಾರವು ನಡೆಸಿ ಕೊಡಲಿದೆ ಕಾಪು ಕ್ಷೇತ್ರದ ಅಭಿವೃದ್ದಿಗೆ ಗುರ್ಮೆ ಸುರೇಶ್ ಶೆಟ್ಟಿಯವರ ಅಗತ್ಯವಿದೆ ನಿಮ್ಮ ಸಂಪೂರ್ಣ ಬೆಂಬಲ ಅವರಿಗೆ ನೀಡಬೇಕಾಗಿ ಕೇಳಿ ಕೊಂಡರು. ನಂತರ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರ ದ ಶಾಸಕ ಲಾಲಾಜಿ ಮೆಂಡನ್ ರವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿಯವರ ಜೊತೆಗೆ ಇದ್ದು ಬಿಜೆಪಿ ಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ, ಗುರ್ಮೆ ಸುರೇಶ್ ಶೆಟ್ಟಿ ಯವರಿಂದ ಕಾಪು ಕ್ಷೇತ್ರವು ಅಭಿವೃದ್ಧಿ ಕ್ಷೇತ್ರವಾಗಲಿದೆ ಎಂದು ತಿಳಿಸಿ ನಿಮ್ಮ ಬೆಂಬಲ ನಮಗೆ ಅಗತ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ರವರು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ತಿಳಿಸಿದರು. ಗೋ ಹತ್ಯೆ ನಿಷೇದ ಕಾಯ್ದೆ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಮರು ಆಚರಣೆ ನಡೆಸುವ ಬಗ್ಗೆ ಹಾಗೂ ಭಜರಂಗದಳ ನಿಷೇಧ ಮಾಡುವುದು, ಈ ರೀತಿಯ ಹಗಲು ಕನಸುಗಳನ್ನು ಕಾಣುವುದು ಕಾಂಗ್ರೆಸ್ ಪಕ್ಷದವರು ಬಿಡಬೇಕು. ಧರ್ಮ ರಕ್ಷಣೆ ಗೋಸ್ಕರ ಇರುವ ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ಶಾಸಕ ಲಾಲಾಜಿ ಮೆಂಡನ್ ರವರ ಅಭಿವೃದ್ಧಿ ಕೆಲಸಗಳು ಆದರ್ಶವು, ಕಾಪು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಶ್ರೀ ರಕ್ಷೆಯಾಗಲಿದೆ, ಬಿಜೆಪಿ ಪಕ್ಷದ ಸಿದ್ಧಾಂತ, ರಾಷ್ಟ್ರೀಯವಾದ ಹಾಗೂ ರಾಷ್ಟ್ರ ಪರ ಚಿಂತನೆಗಳು ಹಾಗೂ ಹಿರಿಯರೆಲ್ಲರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿ ಕೊಂಡು ಹೋಗುತ್ತೇನೆ ಎಂಬ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಉದ್ಯಾವರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿ ಕೋಟ್ಯಾನ್, ಆರ್ ಎಸ್ ಎಸ್ ಪ್ರಚಾರಕ ಪ್ರಸಾದ್ ಕುತ್ಯಾರ್, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯನ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಸಂಪಿಗೆ ನಗರ ಭೂತ್ ಅಧ್ಯಕ್ಷ ಶ್ರೀಧರ್, ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್, ಬಿಜೆಪಿ ಮುಖಂಡರಾದ ಸುರೇಂದ್ರ ಪಣಿಯೂರು, ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ, ಸಂತೋಷ್ ಬೊಲ್ಜೆ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಶಿರ್ವ : ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿ ಪೋಲಿಸ್ ವಶಕ್ಕೆ

Posted On: 07-05-2023 11:04AM
ಶಿರ್ವ : ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ.ನೇತೃತ್ವದ ತಂಡ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಬಂಧಿತರನ್ನು ಇಕ್ಬಾಲ್ ಆಲಿಯಾಸ್ ಇಕ್ಬಾಲ್ ಶೇಖ್ ಆಲಿಯಾಸ್ ಇಕ್ಬಾಲ್ ಅಹಮದ್, ಪರ್ವೇಜ್, ಅಬ್ದುಲ್ ರಾಕಿಬ್, ಮೊಹಮ್ಮದ್ ಸಕ್ಲೇನ್, ಸಲೇಮ್ ಆಲಿಯಾಸ್ ಸಲೀಂ ಮತ್ತು ಅನಾಸ್ ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿದ್ದ ಡ್ರಾಗನ್ ಒಂದು, 2 ಮೆಣಸಿನ ಹುಡಿ ಪ್ಯಾಕೆಟ್, 3 ಮರದ ವಿಕೆಟ್, 3 ದ್ವಿಚಕ್ರ ವಾಹನ ಮತ್ತು 4 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ರೂ.2,31,000 ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಕುಂಬಳೆಯಲ್ಲಿ ಗಡಿ ಉತ್ಸವ - ಸಾಂಸ್ಕೃತಿಕ ಕಾರ್ಯಕ್ರಮ ; ಕವಿಗೋಷ್ಠಿ

Posted On: 07-05-2023 10:38AM
ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೇ 6 ರಂದು ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯುವ ಮಾದರಿಯದು. ಇಲ್ಲಿಂದ ಆರು ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದು ಇಲ್ಲಿ ಕನ್ನಡ ಇತ್ತು, ಇದು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕವಾದ ಸಂಗತಿ. ಮೂರನೆಯದು ಕಾನೂನಾತ್ಮಕವಾದ ಹೋರಾಟ. ಕಳ್ಳಿಗೆ ಮಹಾಬಲ ಭಂಡಾರಿ. ಯು.ಪಿ. ಕುಣಿಕುಳ್ಳಾಯ ಮುಂತಾದವರು ಕೋರ್ಟಿಗೆ ಹೋಗಿ ಕಾಸರಗೋಡಿನ ಕನ್ನಡಿಗರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗ ಆ ರೀತಿಯ ಹೋರಾಟವೂ ತುಸು ತಗ್ಗಿದಂತೆ ಭಾಸವಾಗುತ್ತಿದೆ. ಸದ್ಯ ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕಿದ್ದರೆ ಅದನ್ನು ಸಾಂಸ್ಕೃತಿಕವಾಗಿ ಉಳಿಸಲು ಸಾಧ್ಯವಾಗಬೇಕು. ಕಾಸರಗೋಡಿನ ಜನತೆಗೆ ಸಾಂಸ್ಕೃತಿಕವಾಗಿ ಕನ್ನಡದ ಪ್ರೌಢಿಮೆಯನ್ನು ತಿಳಿಸುವಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ. ಜನಸಾಮಾನ್ಯರನ್ನು ಕನ್ನಡದ ಹೆಸರಲ್ಲಿ ಅಭಿಮಾನದಿಂದ ಒಂದುಗೂಡುವಂತೆ ಮಾಡಬೇಕಿದ್ದರೆ ಬೇರೆ ದಾರಿಗಳಿಲ್ಲ. ಕಾರ್ಯಕ್ರಮಗಳ ಆಧಿಕ್ಯ ಮತ್ತು ಸಂಘಟನೆಗಳ ಆಧಿಕ್ಯ ಎರಡೂ ಕಾಸರಗೋಡು ಕನ್ನಡ ಹೋರಾಟದ ದೃಷ್ಟಿಯಿಂದ ಕೊರತೆಗಳಾಗಿಯೇ ಕಂಡುಬರುತ್ತಿವೆ ಎಂದರು.

ಸನ್ಮಾನ : ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಎ ಎಲ್ ಪಿ ಶಾಲಾ ಮುಖ್ಯೋಪಾಧ್ಯಾಯನಿ ಸ್ಮಿತಾ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.

ಗೀತಾರವರು ಪ್ರಾರ್ಥನೆಗೈದರು. ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿದರು. ಗಂಗಾಧರ್ ಗಾಂಧಿ ವಂದಿಸಿದರು . ರೇಖಾ ಸುದೇಶ್ ರಾವ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು. ತದನಂತರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಉತ್ಸವ ಮನೋರಂಜನ ಕಾರ್ಯಕ್ರಮಗಳು ಜರುಗಿದವು. ಭಾಗವಹಿಸಿದ ಎಲ್ಲ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.