Updated News From Kaup

ಕಾಪು : ಪಕ್ಷದ ಕಾರ್ಯಕರ್ತರೊಂದಿಗೆ ಮನ್ ಕಿ ಬಾತ್ ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ

Posted On: 30-04-2023 05:49PM

ಕಾಪು : ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ವಿಧಾನಸಭಾ ಕ್ಷೇತ್ರ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 36ರ ಬೂತ್ ಅಧ್ಯಕ್ಷರಾದ ಸಂದೀಪ್ ಮರಾಠೆ ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಗ್ರಾಮ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು‌.

ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉಪಕಾರ ಮಾತ್ರ ಆಗುವುದು, ಅಪಕಾರವಾಗದು - ಪ್ರಮೋದ್ ಮಧ್ವರಾಜ್

Posted On: 30-04-2023 05:31PM

ಕಾಪು : ಬಿಜೆಪಿಯಲ್ಲಿ ಸಂಸ್ಕಾರ ಗುಣವಿದೆ. ಹಾಗಾಗಿ ಬಂಡಾಯವೆನ್ನುವುದು ಕಡಿಮೆ. ಶಾಸಕ ಲಾಲಾಜಿಯವರ ಸಾಧುತನ ಗುಣವೇ ಅವರಿಗೆ ಭೂಷಣ. ಅವರ ಅವಧಿಯ ಕೆಲಸ ಕಾರ್ಯಗಳು ಶ್ಲಾಘನೀಯ. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉಪಕಾರ ಮಾತ್ರ ಆಗುವುದು. ಅಪಕಾರವಾಗದು. ಎಲ್ಲರನ್ನು ಸಮಾನವಾಗಿ ನೋಡುವ ವ್ಯಕ್ತಿ ಎಂದು ಬಿಜೆಪಿ ಪಕ್ಷದ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಭಾನುವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೀನುಗಾರರ ಹಿತ ಕಾಪಾಡುವ ಪಕ್ಷ ಬಿಜೆಪಿಯಾಗಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಬಿಜೆಪಿ ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಎಲ್ಲಾ ಕಡೆ ಬಿಜೆಪಿಗೆ ಪೂರಕ ವಾತಾವರಣವಿದೆ. ಈ ಬಾರಿ ಬಹುಮತದಿಂದ ಕ್ಷೇತ್ರದ ನಾಗರಿಕರು ಗೆಲ್ಲಿಸುವರೆಂಬ ನಿರೀಕ್ಷೆಯಿದೆ ಎಂದರು.

ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಪರ ಪಕ್ಷದ ಕಾರ್ಯಕರ್ತರಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ಬಿಜೆಪಿ ಸರಕಾರದ ಕಾರ್ಯ ವೈಖರಿಯ ಜೊತೆಗೆ ಗುರ್ಮೆ ಸುರೇಶ್ ಶೆಟ್ಟಿಯವರ ಸಮಾಜಸೇವೆಯೂ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಪಕ್ಷದ ಪ್ರಮುಖರಾದ ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಆಳ್ವ, ಗೋಪಾಲಕೃಷ್ಣ ‌ರಾವ್, ಶರಣ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಬಿಜೆಪಿ ಹೈನುಗಾರರಿಗೆ ದ್ರೋಹವೆಸಗುತ್ತಿದೆ ; ಹೈನುಗಾರರ ರಕ್ಷಣೆಗೆ ಕಾಂಗ್ರೆಸ್ ಬದ್ಧ - ದೇವಿಪ್ರಸಾದ್ ಶೆಟ್ಟಿ

Posted On: 30-04-2023 11:51AM

ಕಾಪು : ಕೇಂದ್ರ ಸರಕಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ ಸಹಿತ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದೀಗ ಕೆಎಂಎಫ್ ನ್ನು ಖಾಸಗೀಕರಣ ಮಾಡಲು ಯತ್ನಿಸಲಾಗುತ್ತಿದೆ. ಗುಜರಾತ್ ಮೂಲದ ಅಮೂಲ್ ಸಂಸ್ಥೆಯವರಿಗೆ ಕೆಎಂಎಫ್ ನ್ನು ಗುತ್ತಿಗೆ ನೀಡುವ ಮಾತುಕತೆಯಾಗಿದೆ ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಆದಿತ್ಯವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಕಳೆದ 2 ದಿನಗಳಿಂದ ಹಾಲು ಒಕ್ಕೂಟದ ಪ್ರಾಥಮಿಕ ಸಂಘಗಳಿಂದ ನಮಗೆ ದೂರು ಬಂದಿದ್ದು ಅದರ ಪ್ರಕಾರ ಹೈನುಗಾರರ ಹಾಲಿಗೆ ಡಿಗ್ರಿ, ಫ್ಯಾಟ್ ಇಲ್ಲ ಎಂಬ ಸಬೂಬು ನೀಡಿ ಹಾಲನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿದ ಕುಟುಂಬಗಳಿಗೆ ತೊಂದರೆಯಾಗಿದೆ. ಅಮೂಲ್ ನ್ನು ಮಾರುಕಟ್ಟೆಗೆ ಪರಿಚಯಿಸಬೇಕೆನ್ನುವ ಹುನ್ನಾರದ ಹಿಂದೆ ಅಮಿತ್ ಶಾ ಮತ್ತು ಬಿಜೆಪಿ ಪಕ್ಷದ ಕುತಂತ್ರವಿದೆ. ರೈತರ ಜೀವನಾಡಿಯಾಗಿರುವ ಹೈನುಗಾರಿಕೆಗೆ ದ್ರೋಹವೆಸಗುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಚುನಾವಣಾ ಪೂರ್ವದಲ್ಲಿಯೇ ಕೆಎಂಎಫ್ ಗೆ ದೊಡ್ಡಮಟ್ಟದಲ್ಲಿ ಮುತ್ತಿಗೆ ಹಾಕಿ ರೈತರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ.

ಇಂದಿನಿಂದ ರೈತರ ಹಾಲನ್ನು ಹಿಂದಕ್ಕೆ ಕಳುಹಿಸಬಾರದು. ರೈತರ ಜೀವನಕ್ಕೆ ತೊಂದರೆ ಮಾಡಿದರೆ ಕಾಂಗ್ರೆಸ್ ರೈತರ ಪರವಾಗಿದ್ದೇವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಮೂಲನ್ನು ಈ ರಾಜ್ಯದಿಂದ ಒದ್ದೋಡಿಸುತ್ತೇವೆ. ಹಾಲಿಗೆ ಬೆಂಬಲ ಬೆಲೆಯನ್ನು ನೀಡುತ್ತೇವೆ ಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯಿಂದ ಕಾಪು ಕ್ಷೇತ್ರದ ಅಭಿವೃದ್ಧಿ ಯೋಜನೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ

Posted On: 30-04-2023 11:04AM

ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾಪು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಕನಸಿನ ಕಾಪು ಪ್ರಣಾಳಿಕೆಯ ಮೂಲಕ ಸುಂದರ ಕಾಪು ಸ್ವಚ್ಛ ಕಾಪು ಪರಿಕಲ್ಪನೆಯಲ್ಲಿ ಕಾಪು ಕ್ಷೇತ್ರದ ನಾಗರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇಂದು ಕಾಪು ರಾಜೀವ ಭವನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಹೆಜಮಾಡಿ‌ಯಿಂದ ಕುಕ್ಕೆಹಳ್ಳಿಯವರೆಗೆ ಈ ಯೋಜನೆ ಜಾರಿಗೊಳಿಸಲಿದ್ದೇವೆ. ಬಡವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಬಾಕಿ ಇದೆ ಹಾಗಾಗಿ ಮನೆರಹಿತರಿಗೆ ಮನೆ ನಿರ್ಮಾಣ, ವಿಜ್ಞಾನ ಕೇಂದ್ರ , ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿ, ಪ್ರವಾಸೋದ್ಯಮಕ್ಕೂ ಒತ್ತು ನೀಡಲಿದ್ದೇವೆ. ಮನೆ ಮನೆಗೆ ಶುದ್ಧ ಕುಡಿಯುವ ನೀರಿಗಾಗಿ ಶುದ್ಧ ಗಂಗಾ ಯೋಜನೆ, ಕೌಶಲ್ಯಾಭಿವೃದ್ಧಿ ಕೇಂದ್ರ, ಯುವಕರಿಗೆ ಉದ್ಯೋಗ ಮತ್ತು ಉದ್ದಿಮೆ, ಅತ್ಯಾಧುನಿಕ ತಂತ್ರಜ್ಞಾನದ ಕಸವಿಲೇವಾರಿ ಘಟಕ ಸ್ಥಾಪನೆ, ಬಹುಮಹಡಿ ವಸತಿ ಯೋಜನೆ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ , ಆರೋಗ್ಯಕ್ಕೆ ಒತ್ತು ನೀಡುವ ದಿಸೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ, ಈಜುಕೊಳ ನಿರ್ಮಾಣ, ರೈತ ಸಂಜೀವಿನಿ ಯೋಜನೆ, ಸಮುದಾಯ ಭವನಗಳ ನಿರ್ಮಾಣ, ಸರ್ವ ಧರ್ಮದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ದಲಿತ ಶ್ರೇಯಾಭಿವೃದ್ಧಿ ಯೋಜನೆ, ಸಿ ಆರ್ ಝಡ್ ನಿಯಮ ಸಡಿಲಿಕೆ, ಸುಸಜ್ಜಿತ ಬಸ್ಸು ತಂಗುದಾಣ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭ ಕಾಪು ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮಾಧವ ಪಾಲನ್, ಶರ್ಫುದ್ಧೀನ್ ಮತ್ತಿತರರು ಉಪಸ್ಥಿತರಿದ್ದರು.

ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ : ವಿನಯ್ ಕುಮಾರ್ ಸೊರಕೆ

Posted On: 29-04-2023 05:06PM

ಕಾಪು : ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ. ಆದರೂ ನನ್ನನ್ನು ಕಳೆದ ಬಾರಿ ಸೋಲಿಸಿದ್ದೀರಿ. ಈ ಬಾರಿಯಾದರೂ ಕಾಪು ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಬೆಲೆ ಇದೆ ಅಂತಾ ಸಾಬೀತು ಮಾಡೋ ಕೆಲಸವನ್ನು ಮತದಾರರು ಮಾಡಲೇಬೇಕಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಉದ್ಯಾವರ ಬಿಲ್ಲವ ಮಹಾಮಂಡಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದು ಮಾತನಾಡಿದರು.

ಈ ಬಾರಿ ಕಾಪು ಕ್ಷೇತ್ರ ಪ್ರಾಮಾಣಿಕತೆ, ಅಭಿವೃದ್ಧಿ ಮತ್ತು ಹಣದ ಹೊಳೆಯ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿದೆ. ಕಾಪುವಿನ ಮತದಾರರು ಬಹಳಷ್ಟು ಪ್ರಬುದ್ಧರಿದ್ದಾರೆ. ಈ ಬಾರಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಮತ ಹಾಕುತ್ತಾರೆ ಅನ್ನೋ ನಂಬಿಕೆ ನನಗಿದೆ. ಸೋತ ಮೇಲೂ ಐದು ವರ್ಷಗಳ ಜನರ ನಡುವೆ ಇದ್ದು ಜನತೆಯ ಎಲ್ಲಾ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ನಾರಾಯಣಗುರುಗಳ ವಿಚಾರದಲ್ಲಿ ಜಿಲ್ಲೆಯಾದ್ಯಂತ ಬಹಳಷ್ಟು ಹೋರಾಟ ಸಂಘಟಿಸಿದ್ದೇನೆ. ನಾರಾಯಣಗುರುಗಳ ಸ್ತಬ್ಧ ಚಿತ್ರದ ವಿಚಾರದಲ್ಲಿ, ಪಠ್ಯ ಪುಸ್ತಕದ ವಿಚಾರದಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಲ್ಲವ ಮುಖಂಡರ ಜೊತೆ ಇದ್ದು ಹೋರಾಟವನ್ನು ಸಂಘಟಿಸಿದ್ದೇನೆ. ಈ ಬಾರಿ ನನ್ನ‌ ಕೊನೆಯ‌ಚುನಾವಣೆ. ನನ್ನನ್ನು ಗೆಲ್ಲಿಸಿ ಜನತೆಯ ಸೇವೆ ಮಾಡಲು‌ ಅವಕಾಶ ಕಲ್ಪಿಸಿ ಕೊಡುತ್ತೀರಿ ಅನ್ನೊ ನಂಬಿಕೆ ಇದೆ ಅಂತ ಸೊರಕೆ ಹೇಳಿದರು. ಒಂದು ವೇಳೆ ಗೆದ್ದು‌ ಬಂದಲ್ಲಿ ಸಮಾಜದ ಎಲ್ಲಾ ವರ್ಗದವರ ಪರ‌ ನಿಂತು ಸಮಾನತೆಯಿಂದ‌‌ ಕೆಲಸ ಮಾಡುತ್ತೇನೆ ಎಂಬ ವಾಗ್ದಾನ‌ ಮಾಡುತ್ತೇನೆ ಎಂದು ಸೊರಕೆ ಹೇಳಿದರು.

ಈ ಸಂದರ್ಭ ಉದ್ಯಾವರ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕಾರ್ಯದರ್ಶಿ ಆನಂದ ಉದ್ಯಾವರ, ಯುವ ಜನ ಕಲಾಮಂಡಳಿ ಅಧ್ಯಕ್ಷ ಶಿವರಾಮ ಗುರಿಕಾರರರು, ಬಿಲ್ಲವ ಮಖಂಡರು , ಮಹಿಳಾ ಘಟಕದ ಎಲ್ಲಾ ಮುಖಂಡರು , ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.

ಕಟಪಾಡಿ : ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ - ಕೇಂದ್ರ ಗೃಹ ಮಂತ್ರಿ ಅಮಿತ್ ಶಾ

Posted On: 29-04-2023 04:54PM

ಕಟಪಾಡಿ : ಕಾಂಗ್ರೆಸ್ ಪಕ್ಷವು ದೇಶದ ಸುರಕ್ಷತೆಯನ್ನು ವೋಟ್ ಬ್ಯಾಂಕ್ ರಾಜಕೀಯದ ಮೂಲಕ ಆಟವಾಡಿಸುತ್ತಿದೆ. ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲಾತಿ ಮತ್ತೆ ತರುತ್ತಾರೆ. ಬಿಜೆಪಿ ಯಾವತ್ತೂ ತರುವುದಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗಿದ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪಿ ಎಫ್ ಐ ಬ್ಯಾನ್ ಮಾಡಿದ ಕೀರ್ತಿ ಬಿಜೆಪಿಗೆ ಇದೆ. ದಕ್ಷಿಣ ಭಾರತವನ್ನು ಸುರಕ್ಷಿತವಾಗಿಸಿದ್ದೇವೆ. ಈ ಸಂದರ್ಭ ಮಾಜಿ ಸಚಿವ ವಿ.ಎಸ್ ಆಚಾರ್ಯ ರನ್ನು ಸ್ಮರಿಸಿದರು.

ಕಟಪಾಡಿ ಬೂತ್ ನ ಅಧ್ಯಕ್ಷರಾದ ಶ್ರೀಧರ ಪೂಜಾರಿ ಅಮಿತ್ ಷಾ ರನ್ನು ವೇದಿಕೆಗೆ ಬರಮಾಡಿಕೊಂಡರು. ಬಿಜೆಪಿ ಜಿಲ್ಲಾ ಸಮಿತಿಯ ಪರವಾಗಿ ನಾರಾಯಣಗುರುಗಳ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಚುನಾವಣಾ ಪ್ರಭಾರಿ ವಿಜೇಂದ್ರ ಗುಪ್ತ, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಬಿಜೆಪಿ ಅಭ್ಯರ್ಥಿಗಳಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಮೋದ್ ಮಧ್ವರಾಜ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ದಿನಕರ ಬಾಬು, ಶ್ರೀಶ ನಾಯಕ್, ವೀಣಾ ಎಸ್ ಶೆಟ್ಟಿ, ಸುರೇಂದ್ರ ಪಣಿಯೂರು, ಸುಲೋಚನಾ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಯನ ಗಣೇಶ್, ಉದಯ ಕುಮಾರ್ ಶೆಟ್ಟಿ, ನವೀನ್ ಕುತ್ಯಾರು, ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಇಂದು ಕಟಪಾಡಿಗೆ ಅಮಿತ್ ಷಾ : ಬಹಿರಂಗ ಸಾರ್ವಜನಿಕ ಸಭೆ

Posted On: 29-04-2023 12:41PM

ಕಟಪಾಡಿ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಮಧ್ಯಾಹ್ನ 2ಕ್ಕೆ ಉಡುಪಿಯಿಂದ ನೇರವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗುವ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮಿತ್ ಶಾ ಬರುವಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕೇರಳದ ಬ್ರಾಹ್ಮಣರ ಬೆನ್ನತ್ತಿ ಬಂದು ಇನ್ನಂಜೆ ಗ್ರಾಮದ ಮಂಡೇಡಿಯಲ್ಲಿ ನೆಲೆಯಾದ ಕೊರತಿ ದೈವ

Posted On: 29-04-2023 07:44AM

ಸುಮಾರು ನೂರಾರು ವರುಷಗಳ ಹಿಂದೆ ಕೇರಳದ ಬ್ರಾಹ್ಮಣ ಕುಟುಂಬವೊಂದರ ಭಕ್ತಿಗೆ ಬೆನ್ನತಿ ಬಂದ ಕೊರತಿ ದೈವವು ಮಂಡೇಡಿಯ ಬಾಕ್ಯಾರಿನ ಜಾಗವೊಂದರಲ್ಲಿ ಪರಿವಾರ ದೈವಗಳಾದ ಬೊಬ್ಬರ್ಯ, ಪಂಜುರ್ಲಿ, ನೀಚ ಮತ್ತು ಗುಳಿಗ ದೈವದೊಂದಿಗೆ ನೆಲೆಯಾಗಿ ಮುಂದೆ ಆ ಜಾಗವು ಕೊರತಿ ಬಾಕ್ಯಾರು ಎಂಬ ಹೆಸರಿನಿಂದಲೇ ಪ್ರಸಿದ್ದಿಯಾಗಿ ಪಂಚದೈವಗಳ ಸಾನಿಧ್ಯವೆಂದೇ ಹೆಸರಾಯಿತು. ಕಾಲಕ್ರಮೇಣ 33 ವರ್ಷಗಳ ಹಿಂದೆ ಕೊಂಕಣ ರೈಲ್ವೆಯವರು ಟ್ರ್ಯಾಕ್ ನಿರ್ಮಿಸುವ ಸಂದರ್ಭದಲ್ಲಿ ಗುಡಿಯನ್ನು ಹಿಂದೆ ಇದ್ದ ಜಾಗದಿಂದ ತೆರವುಗೊಳಿಸಬೇಕಾದಾಗ 5,000 ರೂಪಾಯಿಯನ್ನು ನೀಡಿ ಕೈ ತೊಳೆದುಕೊಂಡಿದ್ದರು, ಆಗ ಆ ಕುಟುಂಬ ದೈವವನ್ನು ಬಿಟ್ಟು, ನಾಗನ ಕಲ್ಲನ್ನು ನೀರಿಗೆ ವಿಸರ್ಜಿಸಿ ಅಲ್ಲಿಂದ ಬೇರೆ ಕಡೆಗೆ ತೆರಳಿದ್ದರು.

ಮಂಡೇಡಿ ಗ್ರಾಮಕ್ಕೆ ಸಂಬಂಧಪಟ್ಟ ಅಸುಪಾಸಿನ ಹತ್ತು ಮನೆಯವರು ಸೇರಿ ಬ್ರಾಹ್ಮಣರ ಜಾಗದಲ್ಲಿಯೇ ಚಲನೆ ಮಾಡಿ ದೈವವನ್ನು ತೆಂಗಿನಕಾಯಿಗೆ ಅವಾಹನೆ ಮಾಡಿ ಹಾಲಿನ ಮರಕ್ಕೆ ಕಟ್ಟಿ ಇಟ್ಟಿದ್ದರು, ರೈಲ್ವೆ ಟ್ರ್ಯಾಕ್ನ ಕೆಲಸಕ್ಕೆ ಬಂದಿದ್ದ ಜೇಸಿಬಿಯವರು ಆ ತೆಂಗಿನಕಾಯಿಯನ್ನು ಒಡೆದು ತಿಂದಿದ್ದರು ಪರಿಣಾಮ ಎಷ್ಟೇ ಪ್ರಯತ್ನ ಪಟ್ಟರು ಜೇಸಿಬಿ ಕೆಟ್ಟು ಹೋಗಿ ಕೆಲಸ ಮುಂದೆ ಸಾಗಲಿಲ್ಲ, ದೊಡ್ಡ ದೊಡ್ಡ ಮೆಕ್ಯಾನಿಕ್ಗಳನ್ನು ಕರೆಸಿದರು ಕೂಡಾ ಜೇಸಿಬಿ ಮುಂದೆ ಸಾಗದೇ ಇದ್ದಾಗ ದೇವರ ಮೊರೆ ಹೋಗುವುದೋ, ದೈವಜ್ಞರ ಮೊರೆ ಹೋಗುವುದೋ ಅನಿವಾರ್ಯವಾಯಿತು. ಅವರಿಗೆ ತಿಳಿದ ಕೇರಳದ ಮಾಂತ್ರಿಕರೊಬ್ಬರನ್ನು ಕರೆಸಿ ಕೇಳಿದಾಗ ಅವರು ಸಾನಿಧ್ಯದ ಬಗ್ಗೆ ಹೇಳಲಾಗಿ ತೆಂಗಿನಕಾಯಿಯನ್ನು ತಿಂದ ಬಗ್ಗೆ ಗೋಚರಕ್ಕೆ ಬಂದು ದೈವವನ್ನು ಪ್ರತಿಷ್ಠೆ ಮಾಡದೇ ಇದ್ದರೆ ಜೇಸಿಬಿ ಯಾವುದೇ ಕಾರಣಕ್ಕೂ ಮುಂದೆ ಹೋಗುವುದಿಲ್ಲ, ಎಂದು ಕಾಣಿಸುತ್ತದೆ. ಕಲ್ಲು ಹಾಕಿ ದೈವವನ್ನು ನಂಬಿದ ನಂತರ ಜೇಸಿಬಿ ಪುನಃ ಎಂದಿನಂತೆ ಕೆಲಸ ಮಾಡಲಾರಂಭಿಸಿತು. ಬ್ರಾಹ್ಮಣರೊಬ್ಬರು ಅಲ್ಲಿನ ಕಾಡಿನಲ್ಲಿ ಇದ್ದ ಪಂಜುರ್ಲಿಯ ಕಲ್ಲಿನಲ್ಲಿ ಬಲ ಕಾಲಿನ ಹೆಜ್ಜೆಯ ಗುರುತಿನಂತಿದ್ದು ಆಕಾರವಿಲ್ಲದ ಸುಂದರವಾದ ಕಲ್ಲನ್ನು ತನ್ನ ಮನೆಯ ದನದ ಕೊಟ್ಟಿಗೆಯಲ್ಲಿ ತಂದು ಹಾಕಿದರು ಆ ದಿನ ಹಸುವಿನ ಹಾಲನ್ನು ಕರೆದಾಗ ಹಾಲಿನ ಬದಲಾಗಿ ರಕ್ತ ಸುರಿಯಲಾರಂಭಿಸಿತು, ಭಯಭೀತರಾದ ಅವರು ಎಲ್ಲಿಯೋ ಕೇಳಿ ನೋಡಿದಾಗ ಅದು ಪಂಜುರ್ಲಿಯ ಕಲ್ಲು ಎಂದು ಗೋಚರಕ್ಕೆ ಬಂದು ಇದ್ದ ಜಾಗದಲ್ಲಿಯೇ ಅದನ್ನು ಪ್ರತಿಷ್ಠೆ ಮಾಡಬೇಕೆಂದು ಕಾಣಿಸಿತು ಹೀಗೆ ಪಂಜುರ್ಲಿಯು ಕೂಡಾ ಒಂದು ಕಾಲದಲ್ಲಿ ಕಾರಣಿಕ ಮೆರೆದು ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ.

ಇನ್ನು ಕ್ಷೇತ್ರದ ಗುಳಿಗನ ಬಗ್ಗೆ ಹೇಳಬೇಕೆಂದರೆ ಸ್ವತಃ ನನಗೆ ನೇಮದ ಸಂದರ್ಭದಲ್ಲಿ ಆಗಿದ್ದ ಅನುಭವ ಎದೆ ಜಲ್ಲೆನ್ನುವ ರೀತಿಯಲ್ಲಿತ್ತು. ಐದು ವರ್ಷಗಳ ಹಿಂದೆ ಬೇರೆ ಕಡೆಯ ನೇಮಕ್ಕೆಲ್ಲ ಹೋಗುವುದು ಕಡಿಮೆ ಊರಿನ ಬೆರ್ಮೋಟ್ಟಿನ ಗುಳಿಗನ ನೇಮವೋ, ಮತ್ಯಾರದ್ದೋ ಮನೆಯ ನೇಮವನ್ನು ನೋಡಿದ್ದ ನನಗೆ ಗುಳಿಗ ಅಬತರ ಹೇಗಿರಬಹುದು, ಆರ್ಭಟ ಹೇಗಿರಬಹುದೆನ್ನುವ ಕುತೂಹಲ. ಹತ್ತಿರದಲ್ಲಿ ನೋಡಬೇಕೆನ್ನುವ ಆಸೆಯಿಂದ ನಿಂತಿದ್ದಾಗ ಗುಳಿಗ ರೈಲ್ವೆ ಟ್ರ್ಯಾಕ್ ನ ಕಡೆಗೆ ಓಡುತ್ತಾನೆ ಟ್ರ್ಯಾಕ್ ನ ಮೇಲೆ ಹೋಗಿ ಕೆಳಗೆ ಇಳಿದಾಗಲೇ ಟ್ರ್ಯಾಕ್ನಲ್ಲಿ ರೈಲೊಂದು ಹಾದು ಹೋಗುತ್ತದೆ. ಗುಳಿಗನ ಮತ್ತು ರೈಲಿನ ಅಂತರ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ , ದೈವ ನರ್ತನ ನಡೆಸುವ ಸಂದರ್ಭದಲ್ಲೆ ಇಹಲೋಕ ತ್ಯಜಿಸಿರುವ ಒಂದೆರಡು ಘಟನೆಗಳನ್ನು ಕಂಡಿರುವ ನಮಗೆ ಇಂತಹ ಘಟನೆಗಳು ಮತ್ತೆ ಮತ್ತೆ ನೆನಪಿಗೆ ಬಂದು ಗುಳಿಗನ ಕಾರಣಿಕವು ಬಹಳಷ್ಟಿದೆ ಅನ್ನುವುದಕ್ಕೆ ಸಾಕ್ಷಿಯಾಗಿದೆ. ಹಿಂದೆ ಕಾರಣಾಂತರಗಳಿಂದ ದೈವವನ್ನು ಬಿಟ್ಟುಹೋಗಿದ್ದ ಕುಟುಂಬ ಇದೀಗ ಬಂದಿದ್ದು, ನಿಮ್ಮೊಂದಿಗೆ ನಾವು ಕೂಡಾ ತನು -ಮನ -ಧನಗಳಿಂದ ದೈವದ ಸೇವೆಯನ್ನು ಮಾಡಲು ತಯಾರಿದ್ದೇವೆ ಎಂದು ಹೇಳಿರುವುದು, ಸಮಿತಿಗೆ ಮತ್ತು ಊರವರಿಗೆ ಆನೆಬಲ ಬಂದಂತಾಗಿದೆ. ಸರ್ವೇ ಜನೋ ಸುಖಿನೋ ಭವಂತು...

(ವಿಶೇಷ ಸೂಚನೆ : 2023ರ ಏಪ್ರಿಲ್ 30ರಂದು ರಾತ್ರಿ 9 ಗಂಟೆಯ ನಂತರ ನೇಮ ನಡೆಯಲಿದ್ದು ತುಳುನಾಡ ಸಂಸ್ಕೃತಿಯ ಬಗ್ಗೆ ವಿಶೇಷವಾದ ಕಾಳಜಿ ಇರುವವರು, ಭಕ್ತಾದಿಗಳು ಇದನ್ನೇ ವೈಯುಕ್ತಿಕ ಆಮಂತ್ರಣ ಎಂದು ಭಾವಿಸಿ ಬರಬಹುದು) ಬರಹ : ವಿಕ್ಕಿ ಪೂಜಾರಿ ಮಡುಂಬು

ಕಾಪು : ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ

Posted On: 29-04-2023 07:42AM

ಕಾಪು : ಇಲ್ಲಿನ ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಮತಯಾಚನೆ ಪಕ್ಷದ ಕಾರ್ಯಕರ್ತರಿಂದ ನಡೆಯಿತು.

ಈ ಸಂದರ್ಭ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್, ಕಾಪು ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆಯವರಿಗೆ ಎಲ್ಲಾ ಸಮಾಜದವರಿಂದಲೂ ಉತ್ತಮ ಸ್ಪಂದನೆಯನ್ನು ದೊರೆಯುತ್ತಿದ್ದು, ಈ ಬಾರಿ ಖಂಡಿತವಾಗಿಯೂ ಕಾಪುವಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಅಲ್ಲದೆ ಪ್ರತಿ ಮನೆಗೂ ಪ್ರತಿ ತಿಂಗಳು ಗೃಹ ಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತೀ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಮನೆ ನಿರ್ವಹಣೆಗೆ ರೂ. 2,000 ಹಾಗೂ ವಿವಿಧ ಯೋಜನೆಗಳ ಕಾಂಗ್ರೆಸ್ ಗ್ಯಾರಂಟಿಗೆ ಮತದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.

ಈ ಸಂದರ್ಭ ಪಕ್ಷದ ಪ್ರಮುಖರಾದ ಹರೀಶ್ ನಾಯಕ್ ಕಾಪು, ದೀಪಕ್ ಕುಮಾರ್ ಎರ್ಮಾಳ್, ಮಾಧವ ಪಾಲನ್, ಆಶಾ ಕಟಪಾಡಿ, ಫರ್ಝಾನ, ಆಶಾ ಶಂಕರ್, ಶೋಭ ಪಾಂಗಳ, ಪ್ರಭಾಕರ್, ಶಂಕರ್ ಕಾಪು, ಕಾರ್ಯಕರ್ತರು ಉಪಸ್ಥಿತಿಯಿದ್ದರು.

ಕಟಪಾಡಿ : ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ ಅನುಶ್ರೀಯವರನ್ನು ಅಭಿನಂದಿಸಿದ ಗುರ್ಮೆ ಸುರೇಶ್ ಶೆಟ್ಟಿ

Posted On: 28-04-2023 10:01PM

ಕಟಪಾಡಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉನ್ನತ ಸಾಧನೆಗೈದು, ರಾಜ್ಯಕ್ಕೆ 5 ನೇ ರ‍್ಯಾಂಕ್ ಪಡೆದ ಕಟಪಾಡಿಯ ಅನುಶ್ರೀ ಅವರನ್ನು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಮಾಡಿ, ಗೌರವಿಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.