Updated News From Kaup

ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆ

Thumbnail
Posted On: 24 Jul 2025, 08:42 AM

ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆಯು ಭಾಸ್ಕರ ಸೌಧ ಸಭಾಭವನ ಕಾಪು ಇಲ್ಲಿ ಕಾಪು ವಲಯ ಸಮಿತಿಯ ಅಧ್ಯಕ್ಷರಾದ ಸುರೇಖಾ ಶೈಲೇಶ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯಲ್ಲಿ 2025 -26ನೇ ಸಾಲಿನ ನೂತನವಾಗಿ ಕಾರ್ಯಕಾರಿ ಸಭೆಯನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುಧಾಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಮಣಿ ಆಚಾರ್ಯ, ಕೋಶಾಧಿಕಾರಿಯಾಗಿ ನರೇಂದ್ರ ಸಾಲಿಯಾನ್ ಹಾಗು ಉಪಾಧ್ಯಕ್ಷರಾಗಿ ಶುಭಕರ್ ಕಾಪು ಹಾಗು ಜೊತೆ ಕಾರ್ಯದರ್ಶಿ ಯಾಗಿ ಆಶಾ ಆಚಾರ್ಯ ಇವರನ್ನು ನೇಮಕ ಮಾಡಲಾಯಿತು. ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಬಿ ಕೆ ಶ್ರೀನಿವಾಸ್, ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಮಾನಂದ ಅತ್ತೂರು, ಪ್ರಧಾನ ಕಾರ್ಯದರ್ಶಿ ದಿವಾಕರ್, ಸುರೇಶ್ ಶೆಟ್ಟಿಗಾರ್ ಮತ್ತು ಕಾಪು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಯಾಜ್ ಕೋಶಾಧಿಕಾರಿ ಆಶಾ ಆಚಾರ್ಯ, ಉಪಾಧ್ಯಕ್ಷರಾದ ಕೃಷ್ಣ ಬಂಗೇರ ಹಾಗು ಕಾಪು ವಲಯ ಸಮಿತಿಯ ಮಾಜಿ ಅಧ್ಯಕ್ಷರಾದ ಮೋಹಿನಿ ಸುವರ್ಣ, ಹಿರಿಯರಾದ ಕೃಷ್ಣಬಂಗೇರ ಉಪಸ್ಥಿತರಿದ್ದರು.

ಎನ್ ಹೆಚ್ 66ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಸಮಾಜ ಸೇವಕ ಕಾಪು ಜಯರಾಮ ಆಚಾರ್ಯ ಆಗ್ರಹ

Thumbnail
Posted On: 24 Jul 2025, 08:33 AM

ಕಾಪು : ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಕಾಪು ಜಯರಾಮ ಆಚಾರ್ಯರವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಒಪ್ಪಿಗೆ, ಕೋಟೇಶ್ವರ, ಹೆಜಮಾಡಿ ಮದ್ದೆ 26 ಕಿ.ಮೀ ಸರ್ವಿಸ್ ರಸ್ತೆಗೆ ಅನುಮೋದನೆ ವಿಚಾರ ಕೇಳಿ ಸಂತೋಷವಾಯಿತು. ಆದರೆ ಎಲ್ಲೆಲ್ಲಿ ಅತೀ ಅವಶ್ಯಕಥೆ ಇದೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಯಾದೃಚ್ಛಿಕ ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಸ್ಕೈ ವಾಕ್ ವ್ಯವಸ್ಥೆ ಸರಿಯಲ್ಲ. ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಅತಿ ಅಗತ್ಯವಾಗಿ ನಿರ್ಮಾಣವಾಗಬೇಕು, ಅಂತೆಯೇ ಪುರಸಭೆ, ತಾಲೂಕು ವ್ಯಾಪ್ತಿ ಮತ್ತು ಹೆಜಮಾಡಿಯಿಂದ ಬೈಂದೂರು ತನಕ ಸರ್ವಿಸ್ ರಸ್ತೆ ನಿರ್ಮಾಣವಾಗಲೇ ಬೇಕು. ಹಲವಾರು ಕಡೆ ಸರ್ವಿಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಈಗಾಗಲೇ ನಡೆದು ಹೋಗಿರುತ್ತದೆ. ಉಡುಪಿ ಜಿಲ್ಲೆಯ ಮಾನ್ಯ ಸಂಸದರು ಈ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಮಾನ್ಯ ಶಾಸಕರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಉಡುಪಿ ಜಿಲ್ಲೆಯ ಎನ್ ಎಚ್ 66 ರ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಆಗುವವರೆ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.

ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾಗಿ ಜಯರಾಮ ಕುಲಾಲ್ ಅಗ್ಗರಟ್ಟ ಮರು ಆಯ್ಕೆ

Thumbnail
Posted On: 20 Jul 2025, 05:17 PM

ಕಾರ್ಕಳ : ತಾಲೂಕಿನ ನಾನಿಲ್ತಾರು ಕುಲಾಲ ಸಂಘದಲ್ಲಿ ಜರಗಿದ ಸಂಘದ 37 ನೇ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಜಯರಾಮ ಕುಲಾಲ್ ಅಗ್ಗರಟ್ಟರನ್ನು ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡಲಾಯಿತು. ಈ ಸಂದರ್ಭ ನಾನಿಲ್ತಾರು ಕುಲಾಲ ಸಂಘದ ಸದಸ್ಯರು ಉಪಸ್ಥಿತರಿದ್ದರು.

ರೋಟರಿ ಸಮುದಾಯದಳ ಇನ್ನಂಜೆ - ಪದಪ್ರಧಾನ ಕಾರ್ಯಕ್ರಮ

Thumbnail
Posted On: 20 Jul 2025, 05:11 PM

ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದಲ್ಲಿ ಜರುಗಿತು. ಪದ ಪ್ರಧಾನ ಅಧಿಕಾರಿಯಾಗಿ ರೋಟರಿ ಶಂಕರಪುರದ ಅಧ್ಯಕ್ಷರಾದ ಪ್ಯಾಟ್ರಿಕ್ ಡಿಸೋಜ ರೋಟರಿ ಸಮುದಾಯದಳ ಇನ್ನಂಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಜ್ರೇಶ್ ಆಚಾರ್ಯ ಇವರಿಗೆ ಪದ ಪ್ರಧಾನ ಮಾಡಿದರು. ನೂತನ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ, ದಂಡಪಾಣಿಯಾಗಿ ಜೇಸುದಾಸ್ ಸೋನ್ಸ್ ಇವರು ಅಧಿಕಾರ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಂಘ ಇದರ ಕಾರ್ಯನಿರ್ವಹಣಾಧಿಕಾರಿಯಾದ ಸುಬ್ರಮಣ್ಯ ಎನ್ ಭಟ್, ಅತಿಥಿಗಳಾಗಿ ರೋಟರೆಕ್ಟ್ ಜಿಲ್ಲಾ ಸಭಾಪತಿಯಾದ ನವೀನ್ ಅಮೀನ್, ರೋಟರಿ ಶಂಕರಪುರದ ಕಾರ್ಯದರ್ಶಿಯಾದ ಎದ್ವಿನ್ ನೋಯಲ್ ಡಿಸಿಲ್ವಾ, ಆರ್ ಸಿ ಸಿ ಸಭಾಪತಿಯಾದ ಮಾಲಿನಿ ಇನ್ನಂಜೆ, ಆರ್ ಸಿ ಸಿ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

ಇನ್ನಂಜೆ ಎಸ್ ವಿ ಎಚ್ ಕಾಲೇಜು : ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳ ಹಸ್ತಾಂತರ

Thumbnail
Posted On: 20 Jul 2025, 05:05 PM

ಕಾಪು : ರೋಟರಿ ಸಮುದಾಯದಳ ಇನ್ನಂಜೆ, ಯುವಕ ಮಂಡಲ (ರಿ.) ಇನ್ನಂಜೆ, ಇನ್ನಂಜೆ ಫ್ರೆಂಡ್ಸ್ ಇನ್ನಂಜೆ ಇದರ ವತಿಯಿಂದ ಇನ್ನಂಜೆ ಎಸ್ ವಿ ಎಚ್ ಕಾಲೇಜಿಗೆ ಸುಮಾರು 80,000 ವೆಚ್ಚದಲ್ಲಿ ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಿಕ್ರೆಟ್ ಪಿಚ್ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳ ಇನ್ನಂಜೆ ಅಧ್ಯಕ್ಷರಾದ ವಜ್ರೇಶ್ ಆಚಾರ್ಯ, ರೋಟರಿ ಅಧ್ಯಕ್ಷರಾದ ಪ್ಯಾಟ್ರಿಕ್ ಡಿ ಸೋಜ, ಯುವಕ ಮಂಡಲ ಪೂರ್ವ ಅಧ್ಯಕ್ಷರಾದ ದೀವೇಶ್ ಶೆಟ್ಟಿ ಮತ್ತು ವಿಜಯ್ ಜಿ. ಇವರುಗಳು ಪ್ರಾಂಶುಪಾಲರಾದ ರಾಜೇಂದ್ರ ಪ್ರಭು ಇವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಇನ್ನಂಜೆ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಇನ್ನಂಜೆ, ರೋ. ನವೀನ್ ಅಮೀನ್, ಕನ್ನಡ ಮಾಧ್ಯಮ ಮುಖ್ಯ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ದೈಹಿಕ ಶಿಕ್ಷಕರಾದ ನವೀನ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ವಿಶ್ವನಾಥ್ ನಾಯ್ಕ್ ಪೇತ್ರಿ ಮತ್ತು ಆರ್ ಸಿ ಸಿ ಸದಸ್ಯರು, ಯುವಕ ಮಂಡಲ ಸದಸ್ಯರು, ಇನ್ನಂಜೆ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ : ಆಟಿದ ಲೇಸ್ ಕಾರ್ಯಕ್ರಮ

Thumbnail
Posted On: 20 Jul 2025, 04:28 PM

ಪಡುಬಿದ್ರಿ : ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಆಶ್ರಯದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಸಭಾಂಗಣದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಜಾನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರುರವರು ಕಳಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಅಂದು ಆಟಿಯು ಕಷ್ಟದ ಕಾಲವಾಗಿತ್ತು. ಅವಿಭಕ್ತ ಕುಟುಂಬದಲ್ಲಿಯ ಒಡನಾಟದ ಜೊತೆಗೆ ಕೃಷಿ ಬದುಕಿನ ಅನಾವರಣದ ನೆನಪು ಅಜರಾಮರ. ಇಂದು ಆಟಿಯು ವೈಭವೀಕರಣವಾಗಿದೆ. ಹಾಳೆಯ ಮುಟ್ಟಾಲೆಯಿಂದ ಹಿಡಿದು ಬಳಸುವ ಪರಿಕರಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ಆಟಿಯ ಆಹಾರಗಳು ದೈಹಿಕ ವ್ಯವಸ್ಥೆಗೆ ಶಕ್ತಿದಾಯಕವಾಗಿತ್ತು ಎಂದರು. ಪಡುಬಿದ್ರಿ ಸಿ.ಎ.ಸೊಸೈಟಿ ನಿರ್ದೇಶಕ ಗಿರೀಶ್ ಪಲಿಮಾರು ಮಾತನಾಡಿ, ಪ್ರಸ್ತುತ ಆಟಿ ಎಲ್ಲಾ ಕಡೆ ಜರಗುತ್ತಿದೆ. ಆದರೆ ಅಂದಿನ ವಾಸ್ತವಿಕತೆಯನ್ನು ನೆನಪಿಸಿ ಯುವ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕಿದೆ. ಕೃಷಿ ಕಾರ್ಯ ಮುಗಿದು ಮನೆ ತುಂಬಾ ಜನರಿದ್ದ ಸಂದರ್ಭದಲ್ಲಿ ಊಟಕ್ಕೂ ತತ್ವಾರದಲ್ಲಿದ್ದ ಸಮಯ ಪ್ರಕೃತಿದತ್ತವಾಗಿ ಸಿಗುತ್ತಿದ್ದ ವಸ್ತುಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದ ಕಾಲ. ಆಟಿಯ ಸಮಯ ವಿವಿಧ ಪರಿಕರಗಳನ್ನು ತಯಾರಿಸುತ್ತಿದ್ದು, ವಕ್೯ ಫ್ರಮ್ ಹೋಮ್ ಪರಿಕಲ್ಪನೆ ಅಂದೂ ಇತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಕೊರೋನಾದ ಬಳಿಕ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿದೆ. ಆಟಿಯ ತಿಂಡಿ ತಿನಿಸುಗಳು ಹಲವಾರು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್, ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಉಪಾಧ್ಯಕ್ಷ ರವಿ ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ ವೇದಿಕೆಯಲ್ಲಿದ್ದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸುಜಾತ ಹರೀಶ್ ಪ್ರಾರ್ಥಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಸುಚರಿತ ಎಲ್ ಅಮೀನ್ ನಿರೂಪಿಸಿ, ತೇಜಾವತಿ ವಂದಿಸಿದರು. ಸುಗಂಧಿ ಶ್ಯಾಮ್ ಆಟಿಯ ಕವನ ವಾಚಿಸಿದರು. ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಜರಗಿತು. ಸುಮಾರು 26 ಬಗೆಯ ಆಟಿ ಆಹಾರ ಖಾದ್ಯಗಳನ್ನು ಉಣಬಡಿಸಲಾಯಿತು.

ರೋಟರಿ ಕ್ಲಬ್ ಪಡುಬಿದ್ರಿ : ಅಧ್ಯಕ್ಷರಾಗಿ ಸುನಿಲ್ ಕುಮಾರ್, ತಂಡದ ಪದಗ್ರಹಣ

Thumbnail
Posted On: 20 Jul 2025, 04:21 PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇದರ 25ನೇ ವರ್ಷದ 2025-26 ರ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಹಾಗೂ ತಂಡದ ಪದಗ್ರಹಣ ಸಮಾರಂಭ ಪಡುಬಿದ್ರಿಯ ಸುಜಾತ ಅಡಿಟೋರಿಯಂನಲ್ಲಿ ಶನಿವಾರ ಜರಗಿತು. ಪದಪ್ರಧಾನ ಅಧಿಕಾರಿಯಾಗಿದ್ದ ರೋ. ಎಮ್ ಜೆ ಡಿ, ಪಿಡಿಜಿ ಅಭಿನಂದನ್ ಎ. ಶೆಟ್ಟಿ ಪದಪ್ರಧಾನ ನಡೆಸಿ, ರೋಟರಿ ಸಂಸ್ಥೆಯು ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಪ್ರತೀಕವಾದ ಸಂಸ್ಥೆ. ಆಹಾರ, ಆರೋಗ್ಯ, ಶಿಕ್ಷಣದ ಬಗೆಗೂ ನಾವೆಲ್ಲ ಗಮನಹರಿಸಬೇಕು. ರೋಟರಿಯು ಸಮಾಜಮುಖಿ ಚಿಂತನೆಯನ್ನು ಮಾಡುವ ಸಂಸ್ಥೆಯಾಗಿದೆ ಎಂದರು. 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಕುಮಾರ್, ಪವನ್ ಸಾಲ್ಯಾನ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಸನ್ಮಾನ/ವಿದ್ಯಾರ್ಥಿವೇತನ ವಿತರಣೆ : ರೋ. ಎಮ್ ಜೆ ಡಿ, ಪಿಡಿಜಿ ಅಭಿನಂದನ್ ಎ. ಶೆಟ್ಟಿ, ಚಂದ್ರ ಪೂಜಾರಿ, ಅನಿಲ್ ಡಿಸಿಲ್ವ, ಮೆಲ್ವಿನ್ ಡಿಸೋಜ, ಹೇಮಲತಾ ಸುವರ್ಣರವರನ್ನು ಸನ್ಮಾನಿಸಲಾಯಿತು. ದಿ.ವೈ. ಹಿರಿಯಣ್ಣ ದಂಪತಿಗಳ ಸ್ಮರಣಾರ್ಥ ಅವರ ಪುತ್ರರಿಂದ ನೀಡಲ್ಪಟ್ಟ ರೋಲಿಂಗ್ ಶೀಲ್ಡನ್ನು ಸತತ ನೂರು ಶೇಕಡ ಫಲಿತಾಂಶ ಪಡೆದ ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಗೆ ನೀಡಿ ಗೌರವಿಸಲಾಯಿತು. ದಿ. ಮಾಧವ ಆಚಾರ್ಯ ದಂಪತಿಗಳ ಸ್ಮರಣಾರ್ಥ ಅವರ ಸಂಬಂಧಿಕರಿಂದ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ಸೈಂಟ್ ಫ್ರಾನ್ಸಿಸ್ ಶಾಲೆ ಮುದರಂಗಡಿಯ ಸೌರಭ್ ರವರಿಗೆ ವಿದ್ಯಾರ್ಥಿವೇತನ ಹಸ್ತಾಂತರಿಸಲಾಯಿತು. ನೂತನ 25 ಸದಸ್ಯರು ಪಡುಬಿದ್ರಿ ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡರು. ಪತ್ರಕರ್ತ ಹಮೀದ್ ಪಡುಬಿದ್ರಿ ಸಂಪಾದಕತ್ವದಲ್ಲಿ ಮೂಡಿಬಂದ ಸದಸ್ಯರ ಮಾಹಿತಿ ಒಳಗೊಂಡ ಸ್ಪಂದನ ಮ್ಯಾಗಜೀನ್ ನ್ನು ರೋ. ವಿಜೇಶ್ ಶೆಣೈ ಬಿಡುಗಡೆಗೊಳಿಸಿದರು. ಸ್ಥಾಪಕ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನೂತನ ಅಧ್ಯಕ್ಷ ಸುನೀಲ್ ಕುಮಾರ್ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ವೈ. ಸುಧೀರ್ ಕುಮಾ‌ರ್, ರೋಟರಿ ಪ್ರಮುಖರಾದ ವಿಜೇಶ್ ಶೆಣೈ, ಅನಿಲ್ ಡಿಸಿಲ್ವ, ಮೆಲ್ವಿನ್ ಡಿಸೋಜ, ಪವನ್ ಸಾಲ್ಯಾನ್, ನಿಕಟಪೂರ್ವ ಕಾರ್ಯದರ್ಶಿ ಹೇಮಲತಾ ಸುವರ್ಣ ಉಪಸ್ಥಿತರಿದ್ದರು. ಶಿಕ್ಷಕ ಬಿ.ಎಸ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಕಾಪು ತಾಲ್ಲೂಕು ಕ.ಸಾ.ಪ. : ವಿದ್ಯಾರ್ಥಿಗಳಿಗೆ ಅಭಿನಂದನೆ, ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Thumbnail
Posted On: 14 Jul 2025, 07:54 PM

ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕ ವತಿಯಿಂದ 2024-25 ಸಾಲಿನ ಎಸ್ಎಸ್ಎಲ್ ಸಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಪೂರ್ಣ ಅಂಕಗಳಿಸಿದ ಕಾಪು ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಅಭಿನಂದನೆ ಹಾಗೂ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ ಶೇ.100ಫಲಿತಾಂಶ ದಾಖಲಿಸಿದ ಪಲಿಮಾರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಸ್ ಇವರಿಗೆ ಅಭಿನಂದನೆ ಕಾರ್ಯಕ್ರಮ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಾಲೆಯೆಂಬ ಅರಿವಿನ ಬಾಗಿಲನ್ನು ತೆರೆದಾಗ ಜ್ಞಾನವನ್ನು ಪಡೆಯಬಹುದು. ಭಾಷಾ ಜ್ಞಾನದೊಂದಿಗೆ ಕಲಿಕೆಯ ಬಗ್ಗೆ ಆಸಕ್ತಿ ವಹಿಸಿದಾಗ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ ಎಂದರು. ಬಹುಮಾನ ವಿತರಣೆ/ ಅಭಿನಂದನೆ : ಭಾಷಣ ಸ್ಪರ್ಧೆಯಲ್ಲಿ ಸಮಥ್೯ ಜೋಶಿ ದಂಡತೀರ್ಥ ಪ.ಪೂ.ಕಾಲೇಜು ಕಾಪು ಪ್ರಥಮ, ಕೀರ್ತಿ ಆನಂದ ತೀರ್ಥ ಪ.ಪೂ. ಕಾಲೇಜು ಪಾಜಕ ದ್ವಿತೀಯ, ಬೇಬಿ ಒ ಜೈನ್ ಪೂರ್ಣಪ್ರಜ್ಞ ಪ‌.ಪೂ . ಕಾಲೇಜು ಅದಮಾರು ತೃತೀಯ ಮತ್ತು ನಿಧಿ ಅನಿತಾ ಸುರೇಶ್ ಶೆಟ್ಟಿ ಪ.ಪೂ.ಕಾಲೇಜು ‌ಎರ್ಮಾಳ್ , ವಸುಪ್ರದಾ ತ್ರಿಶಾ ವಿದ್ಯಾ ಕಾಲೇಜು ಸಮಾಧಾನಕರ ಬಹುಮಾನ ಪಡೆದರು. ಶೇ.100 ಫಲಿತಾಂಶ ದಾಖಲಿಸಿದ ಪಲಿಮಾರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಸ್ ಇವರಿಗೆ ಅಭಿನಂದನೆ ಕಾರ್ಯಕ್ರಮ ಜರಗಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಟಪಾಡಿ ತ್ರಿಶಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹರಿಪ್ರಸಾದ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀಲಾನಂದ ನಾಯ್ಕ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣ ಕುಮಾರ್ ರಾವ್ ಬಹುಮಾನಿತರ ಪಟ್ಟಿ ವಾಚಿಸಿದರು.ವಿದ್ಯಾಧರ್ ಪುರಾಣಿಕ್ ನಿರೂಪಿಸಿ, ಅನಂತ ಮೂಡಿತ್ತಾಯ ವಂದಿಸಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಪದಗ್ರಹಣ

Thumbnail
Posted On: 14 Jul 2025, 07:25 PM

ಕಾಪು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಇದರ ಪದಗ್ರಹಣ ಸಮಾರಂಭ ನೆರವೇರಿತು. ಎಸ್ಎನ್‌ಆರ್. ಪಿಪಿಎಫ್ ರೇಖಾ ಮರಳಿಧರನ್, ಎನ್ ವಿ ಪಿ ಏರಿಯಾ ಜಿ ಸಿಎಸ್ಐಯವರು ನೂತನ ಅಧ್ಯಕ್ಷ ಎಸ್ಎನ್‌ಆರ್. ರಮೇಶ್ ಬಂಟಕಲ್ ಅವರಿಗೆ ಪ್ರಮಾಣ ವಚನ ನೀಡಿದರು ಮುಖ್ಯ ಅತಿಥಿ ಎಸ್ಎನ್‌ಆರ್, ಸಿ ಎಸ್ ಎಲ್., ಪಿ. ಪಿ. ಎಫ್ ಚಿತ್ರ ಕುಮಾರ್ ಸಮಾಜಮುಖಿ ಕೆಲಸಗಳನ್ನು ಮಾಡಿರಿ ಎಂದು ತಿಳಿಸಿದರು. ಪಿಪಿಎಫ್ ನವೀನ್ ಅಮೀನ್ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಇರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾರಾಯಣ ಶೆಟ್ಟಿ ಪೊದಮಾಲೆ, ಬಂಟಕಲ್ಲು ಹಿರಿಯ ಕೃಷಿಕರು ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಸ್ಎನ್‌ಆರ್ ವಿಘ್ನೇಶ್ ಶೆಟ್ಟಿ ಮೇಲ್ಮನೆ ಇವರು ನೂತನ ಅಧ್ಯಕ್ಷರ ಪರಿಚಯ ಮಾಡಿದರು. ನೂತನ ಅಧ್ಯಕ್ಷರಾದ ರಮೇಶ್ ಬಂಟಕಲ್ ಅನಿಸಿಕೆ ವ್ಯಕ್ತಪಡಿಸಿದರು. ಸ್ಥಾಪಕ ಅಧ್ಯಕ್ಷ ಎಸ್ ಎಸ್ ಎನ್ ಆರ್ ಸಂದೀಪ್ ಬಂಗೇರ ಸ್ವಾಗತಿಸಿದರು. ಎಸ್ ಎನ್ ಆರ್ ವಿವೇಕ್ ಶೆಟ್ಟಿ ಸೀನಿಯರ್ ಚೇಂಬರ್ ವಾಣಿಯನ್ನು ಓದಿದರು. ಎಸ್ಎನ್‌ಆರ್ ಪ್ರಸಾದ್ ಶೆಟ್ಟಿ ವಳದೂರುರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮನೋಜ್ ಕಡಬ ಶುಭ ಹಾರೈಸಿದರು. ಎಸ್ಎನ್‌ಆರ್. ರವೀಂದ್ರ ಪಾಟ್ಕರ್ ವಂದಿಸಿದರು.

ಇನ್ನಂಜೆ ಎಸ್ ವಿ ಎಸ್, ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

Thumbnail
Posted On: 14 Jul 2025, 07:09 PM

ಕಾಪು : ಇಲ್ಲಿನ ಇನ್ನಂಜೆ ಎಸ್ ವಿ ಎಸ್ ಮತ್ತು ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಾಲಾ ಆಡಳಿತ ಅಧಿಕಾರಿಯವರಾದ ಪ್ರಭಾವತಿ ಎಸ್ ಅಡಿಗರವರ ಅಧ್ಯಕ್ಷತೆಯಲ್ಲಿ ಶಾಲಾ ಪೋಷಕರಾದ ಶ್ರೀ ಶ್ರೀ ವಿಶ್ವವಲ್ಲಭ ಸ್ವಾಮೀಜಿಯವರ ಭಾವಚಿತ್ರವನ್ನು ಇಟ್ಟು ಅವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಅನಂತರ ಆಡಳಿತ ಅಧಿಕಾರಿ ಅವರಿಗೆ ಮುಖ್ಯ ಶಿಕ್ಷಕಿಯರು, ಶಿಕ್ಷಕಿಯರು ಹಾಗೂ ಮಕ್ಕಳು ಪಾದಪೂಜೆಯನ್ನು ಮಾಡಿ ಗುರುವಂದನೆಯನ್ನು ನೆರವೇರಿಸಿದರು.