Updated News From Kaup

ಕಾಪು ಜೆಸಿಐ ವತಿಯಿಂದ ಮುದ್ದು ಕೃಷ್ಣ ‌ವೇಷ ಸ್ಪರ್ಧೆ

Thumbnail
Posted On: 19 Aug 2022, 10:36 PM

ಕಾಪು : ಜೆಸಿಐ ನೇತೃತ್ವದಲ್ಲಿ ದಿ. ಜಗದೀಶ್ ಆಚಾರ್ಯ ಇವರ ಸ್ಮರಣಾರ್ಥ ಕಾಪು ಜಯಲಕ್ಷ್ಮೀ ಜ್ಯುವೆಲ್ಲಸ್೯ ಪ್ರಾಯೋಜಕತ್ವದಲ್ಲಿ ಆಗಸ್ಟ್ 19ರಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು.‌ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ‌. ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಪರಿಸರದಲ್ಲಿ ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಜೇಸಿಐ ಕಾಪು ಜನಮಾನಸದಲ್ಲಿ ಉತ್ತಮ ಹೆಸರು ಗಳಿಸಿದೆ. ರಜತ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯು ಪ್ರತೀ ವರ್ಷ ನಡೆಸುತ್ತಿರುವ ಮುದ್ದುಕೃಷ್ಣ ವೇಷ ಸ್ಪರ್ಧೆಯು ಭಾಂಧವ್ಯ ವೃದ್ಧಿಗೆ ಕಾರಣವಾಗಲಿ ಎಂದರು. ಜೇಸಿಐ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಮಂಜುನಾಥ ದೇವಾಡಿಗ ಉಪ್ಪುಂದ, ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಸುರೇಖಾ ಜೆ. ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ನಿರ್ದೇಶಕ ಜಗದೀಶ್ ಬಂಗೇರ, ಮಹಿಳಾ ಜೇಸಿ ನಿರ್ದೇಶಕಿ ಶ್ರುತಿ ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಆದಿತ್ಯ ಗುರ್ಮೆ ಹಾಗೂ ಕಾಪು ಜೇಸಿಐನ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ ಸ್ವಾಗತಿಸಿದರು. ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು. 3 ವರ್ಷಕ್ಕಿಂತ ಕೆಳಗಿನ ವಿಭಾಗ, ಅಂಗನವಾಡಿ, ಎಲ್ ಕೆ ಜಿ ಮತ್ತು ಯು ಕೆ ಜಿ ವಿಭಾಗ ಹಾಗೂ 1 ನೇ ಮತ್ತು 2 ನೇ ತರಗತಿಯ ಮಕ್ಕಳಿಗಾಗಿ ಮುದ್ದು ಕೃಷ್ಣ ‌ವೇಷ ಸ್ಪರ್ಧೆ ಜರಗಿತು. ಪ್ರಕಾಶ್ ಸುವರ್ಣ ಕಟಪಾಡಿ, ಅಶ್ವಿನಿ ಬಂಗೇರ, ಗಾಯತ್ರಿ‌ ಆಚಾರ್ಯ ತೀರ್ಪುಗಾರರಾಗಿ ಸಹಕರಿಸಿದರು.

ಡಾ| ಅಣ್ಣಯ್ಯ ಕುಲಾಲ್‌ ಗೆ ಡಿ. ದೇವರಾಜ ಅರಸು ಪ್ರಶಸ್ತಿ

Thumbnail
Posted On: 19 Aug 2022, 10:27 PM

ಉಡುಪಿ : ಜಿಲ್ಲೆಯ ಕೋಟ ಬಳಿಯ ತೆಕ್ಕಟ್ಟೆ ಗ್ರಾಮದ ಡಾ| ಅಣ್ಣಯ್ಯ ಕುಲಾಲ್‌ ಸಮಾಜಮುಖಿ, ಜಾತ್ಯತೀತ ಚಿಂತನೆಯಿಂದ ಬಡವರು, ವೈದ್ಯಕೀಯ ಸೇವೆ ನೀಡುವ ಮೂಲಕ ಕರಾವಳಿ-ಮಲೆನಾಡು ಭಾಗವಲ್ಲದೆ ರಾಜ್ಯವ್ಯಾಪಿ ಉತ್ತಮ ವೈದ್ಯ ಹಾಗೂ ಸಮಾಜ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದಾರೆ. ಇವರು 2022-23 ಸಾಲಿನ ಡಿ. ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ. ಆಗಸ್ಟ್ 20ರಂದು ವಿಧಾನ ಸೌಧದಲ್ಲಿ ಆಯೋಜಿಸಲಾಗಿರುವ ದೇವರಾಜ ಅರಸು 107ನೇ ಜನ್ಮದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇವರು ಶ್ರೀನಿವಾಸ್ ಯೂನಿವರ್ಸಿಟಿ ಹಾಗೂ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಪ್ಯಾಲಿಯೇಟೀವ್ ವಿಭಾಗದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನಂಜೆ : ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ಮೊಸರು ಕುಡಿಕೆ ಕ್ರೀಡಾಕೂಟ 2022 "ಮುದ್ದು ಕೃಷ್ಣ ವೇಷ ಸ್ಪರ್ಧೆ"

Thumbnail
Posted On: 19 Aug 2022, 07:29 PM

ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇನ್ನಂಜೆ ಒಕ್ಕೂಟ, ನಿಸರ್ಗ ಫ್ರೆಂಡ್ಸ್ (ರಿ.) ಪಾದೆಕೆರೆ, ರೋಟರಿ ಸಮುದಾಯ ದಳ ಇನ್ನಂಜೆ, ಬಿಲ್ಲವ ಸೇವಾ ಸಂಘ ಇನ್ನಂಜೆ ಇವರ ಸಹಕಾರದೊಂದಿಗೆ ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ಮೊಸರು ಕುಡಿಕೆ ಕ್ರೀಡಾಕೂಟ 2022 "ಮುದ್ದು ಕೃಷ್ಣ ವೇಷ ಸ್ಪರ್ಧೆ" ಆಗಸ್ಟ್ 20 ರಂದು ಇನ್ನಂಜೆ ದಾಸ ಭವನದಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

Thumbnail
Posted On: 19 Aug 2022, 06:57 PM

ಶಿರ್ವ: ಕೆ ಆರ್ ಪಾಟ್ಕರ್ ರವರು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ವೈಯುಕ್ತಿಕ ಕಾರಣಗಳಿಗಾಗಿ ರಾಜಿನಾಮೆ ನೀಡಿದ್ದು ಪಂಚಾಯತ್ ಸದಸ್ಯನಾಗಿ ಮುಂದುವರಿಯುವುದಾಗಿ ತಿಳಿಸಿರುವ ಅವರು ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೆ, ದಾನಿಗಳಿಗೆ, ಹಿತೈಷಿಗಳಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ಸಹಾಯಕ ಕಮಿಷನರ್ ಉಪ ವಿಭಾಗ ಕುಂದಾಪುರ ಇವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದು ಇದೀಗ ಅದು ಅಂಗೀಕಾರಗೊಂಡಿದೆ ಎಂದು ತಿಳಿಸಿದ್ದಾರೆ.

ಕಟಪಾಡಿ‌ : ಟಿಕ್ಕಾ ಅಂಗಡಿಯೊಳಕ್ಕೆ ಕಾರು : ಇಬ್ಬರಿಗೆ ಗಾಯ

Thumbnail
Posted On: 18 Aug 2022, 11:08 PM

ಕಟಪಾಡಿ : ನಿಂತಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಟಿಕ್ಕಾ ಅಂಗಡಿಗೆ ಕಾರು ನುಗ್ಗಿ ಅಂಗಡಿಯವ ಮತ್ತು ಗ್ರಾಹಕ ಗಾಯಗೊಂಡ ಘಟನೆ ಗುರುವಾರ ರಾತ್ರಿ ‌ಕಟಪಾಡಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಗ್ರಾಹಕ ಕಟಪಾಡಿ ಕಟಪಾಡಿ ನಿವಾಸಿಯಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಟಿಕ್ಕಾ ಅಂಗಡಿಯವ ಉತ್ತರಪ್ರದೇಶ ಮೂಲದವನಾಗಿದ್ದು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಂಕರಪುರ ರೋಟರಿ, ಅಂಗಸಂಸ್ಥೆಗಳಿಂದ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ

Thumbnail
Posted On: 18 Aug 2022, 09:44 PM

ಕಾಪು : ರೋಟರಿ ಶಂಕರಪುರ ಹಾಗೂ ಅಂಗ ಸಂಸ್ಥೆಗಳಾದ ರೋಟರಿ ಸಮುದಾಯದಳ ಇನ್ನಂಜೆ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರ, ಇನ್ನರ್ ವೀಲ್ ಕ್ಲಬ್ ಶಂಕರಪುರ ಜೊತೆಯಾಗಿ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಯೂತ್ ಡೇ ಬಗ್ಗೆ ಡಾ| ರಾಯನ್ ಮತಾಯಸ್ ರವರು ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದರು. ರಕ್ಷಾ ಬಂಧನ ಕಾರ್ಯಕ್ರಮದ ಮಹತ್ವದ ಬಗ್ಗೆ ರೊ. ನಂದನ್ ಕುಮಾರ್ ಮಾತನಾಡಿದರು. ಹುಟ್ಟುಹಬ್ಬವನ್ನು ಆಚರಿಸಲಿರುವ ಮಾಲಿನಿ ಶೆಟ್ಟಿ ಹಾಗೂ ನವೀನ್ ಅಮೀನ್ ಗೆ ಶುಭ ಕೋರಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಶಂಕರಪುರ, ರೋಟರಾಕ್ಟ್ ಸುಭಾಷ್ ನಗರ, ಇನ್ನರ್ ವೀಲ್ ಶಂಕರಪುರ, ರೋಟರಿ ಸಮುದಾಯದಳದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ರೊ.ಗ್ಲಾಡಸನ್ ಕುಂದರ್ ರವರು ಸ್ವಾಗತ ಮಾಡಿದರು. ರೋಟರಿಯ ಕಾರ್ಯದರ್ಶಿ ರೊ.ಸಿಲ್ವಿಯಾ ಕಸ್ಟಲೀನೋ ವಂದಿಸಿದರು.

ಉಡುಪಿ ರಜತ ಮಹೋತ್ಸವ ಕಾರ್ಯಕ್ರಮ ಹಬ್ಬದಂತೆ ಆಚರಣೆಗೆ ಶಾಸಕ ರಘುಪತಿ ಭಟ್ ಕರೆ

Thumbnail
Posted On: 18 Aug 2022, 09:32 PM

ಉಡುಪಿ : ಉಡುಪಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಜಿಲ್ಲೆಯ ಜನತೆ ಹಾಗೂ ಸಂಘ ಸಂಸ್ಥೆಗಳಿಗೆ ಶಾಸಕ ಕೆ.ರಘುಪತಿ ಭಟ್ ಕರೆ ನೀಡಿದರು. ಅವರು ಇಂದು ಉಡುಪಿ ರಜತ ಉತ್ಸವ ಆಚರಣೆ ಕುರಿತು ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕೇಂದ್ರಕ್ಕೆ ಜನ ಸಾಮಾನ್ಯರು ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲು ಅನುಕೂಲವಾಗಲು ಉಡುಪಿ ಜಿಲ್ಲೆಯನ್ನು ರಚನೆ ಮಾಡಬೇಕೆಂಬ ಜನರ ಒತ್ತಾಸೆಯನ್ನು ಅರಿತು ಸರ್ಕಾರ ಉಡುಪಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿತ್ತು. ಪ್ರಸಕ್ತ ಮಾಹೆಯ 25 ಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲೆಯು ಇದುವರೆಗೆ ಬೆಳದು ಬಂದಿರುವ ಹಾದಿ ಮತ್ತು ಇನ್ನೂ ಗಳಿಸಬೇಕಿರುವ ಅಭಿವೃಧ್ದಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿದೆ , ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು. ವೇದಿಕೆ ಕಾರ್ಯಕ್ರಮವು ಆಗಸ್ಟ್ 25 ರಂದು ಅಜ್ಜರಕಾಡುನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವ ಸಂಪುಟದ ವಿವಿಧ ಸಚಿವರುಗಳು ಸಹ ಆಗಮಿಸಲಿದ್ದಾರೆ ಎಂದರು. ರಜತ ಮಹೋತ್ಸವದ ಅಂಗವಾಗಿ ಉಡುಪಿಯ ಬೋರ್ಡ್ ಶಾಲೆಯಿಂದ ಅಜ್ಜರಕಾಡು ಕ್ರೀಡಾಂಗಣದವರೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಆಯೋಜಿಸುವಂತೆ ತಿಳಿಸಿದ ಅವರು, ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು. ಆಗಸ್ಟ್ 24 ರಿಂದ ನೇಷನ್ ಫಸ್ಟ್ ತಂಡ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲೆಯಾದ್ಯಂತ 75 ಕಿ.ಮೀ.ಗಳ ಓಟದ ಕಾರ್ಯಕ್ರಮ ನಡೆಯಲಿದೆ ಎಂದರು. ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಜಿಲ್ಲೆಯ ಆರಂಭದ ದಿನಗಳಿಂದ ಇದುವರೆಗಿನ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು. ಉತ್ಸವದ ಯಶಸ್ವಿ ಆಚರಣೆ ಕುರಿತು ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮಗೆ ನೀಡಿರುವ ಜವಾಬ್ದಾರಿಗಳನ್ನು ಪರಸ್ಪರ ಸಮನ್ವಯದಿಂದ ನಿಭಾಯಿಸುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ.ಸಿಇಓ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ , ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಅದಮಾರು : ಉಡುಪಿ ವಲಯ ಮಟ್ಟದ ಬಾಲಕಿಯರ ಖೋ - ಖೋ ಪಂದ್ಯಾಟ

Thumbnail
Posted On: 18 Aug 2022, 09:08 PM

ಪಡುಬಿದ್ರಿ : ಅದಮಾರು ಪೂರ್ಣಪ್ರಜ್ಞ ಪಿಯು ಕಾಲೇಜು ಇಲ್ಲಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಉಡುಪಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಮತ್ತು ಅದಮಾರು ಪೂರ್ಣಪ್ರಜ್ಞ ಪಿಯು ಕಾಲೇಜು ಇವರ ಸಹಯೋಗದಲ್ಲಿ ಉಡುಪಿ ವಲಯ ಮಟ್ಟದ ಬಾಲಕಿಯರ ಖೋ - ಖೋ ಪಂದ್ಯಾಟ ಗುರುವಾರ ನಡೆಯಿತು. ಈ ಪಂದ್ಯಾಟಕ್ಕೆ ಖ್ಯಾತ ಉದ್ಯಮಿ ಪುಣೆಯ ನಾರಾಯಣ ಶೆಟ್ಟಿ ಎರ್ಮಾಳು ಚಾಲನೆ ನೀಡಿದರು. ಉಡುಪಿ ವಲಯದ ೧೨ ಬಾಲಕಿಯರ ಖೋ ಖೋ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೂರ್ಣಪ್ರಜ್ಞ ಅದಮಾರಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎರ್ಮಾಳು ಉದಯ ಕೆ ಶೆಟ್ಟಿ, ಆದರ್ಶ ಯುವಕ ಮಂಡಳ ಅಧ್ಯಕ್ಷ ಬರ್ಪಾಣಿ ಸಂತೋಷ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಕಾಪು ತಾಲ್ಲೂಕು ಕ್ರೀಡಾ ಸೇವಾ ಯುವಜನ ಅಧಿಕಾರಿ ರಿತೇಶ್ ಶೆಟ್ಟಿ, ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಸತೀಶ್ ಸಾಲಿಯಾನ್, ಪ್ರಾಂಶುಪಾಲ ಎಂ ರಾಮಕೃಷ್ಣ ಪೈ, ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕಿ ಲಕ್ಷ್ಮಿ ನಾಯಕ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ನಿಶ್ಮಿತಾ ಶೆಟ್ಟಿ, ಪಂಚಾಯತ್ ಸದಸ್ಯ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ಭಟ್ ಕಾರ್ಯಕ್ರಮ ನಿರೂಪಿದರು. ದೈಹಿಕ ಶಿಕ್ಷಕ ಸಂದೀಪ್ ಕುಮಾರ್ ವಂದಿಸಿದರು.

ಆಗಸ್ಟ್ 21 : ಯುವವಾಹಿನಿ ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ - ಡೆನ್ನಾನ ಡೆನ್ನನ

Thumbnail
Posted On: 18 Aug 2022, 08:56 PM

ಕಾಪು : ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಯುವವಾಹಿನಿಯು ಪ್ರತಿವರ್ಷ ನಡೆಸುತ್ತಾ ಬಂದಿರುವ ಅಂತರ್ ಘಟಕ ಸಾಂಸ್ಕೃತಿಕ ಕಾರ್ಯಕ್ರಮವಾಗಿರುವ ಡೆನ್ನಾನ ಡೆನ್ನನ ಆಗಸ್ಟ್ 21 ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಗಿರಿ ಸಭಾಗ್ರಹದಲ್ಲಿ ನಡೆಯಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಉದಯ್ ಕುಮಾರ್ ಮಟ್ಟು ತಿಳಿಸಿದರು. ಇವರು ಕಾಪು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ಅಂತರ್ ಜಿಲ್ಲೆಯಲ್ಲಿ 33 ಘಟಕಗಳು ಹೊಂದಿರುವ ಎಲ್ಲಾ ಸದಸ್ಯರ ಪ್ರತಿಭೆ ಅನಾವರಣಗೊಳ್ಳಲಿದೆ. ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕದೊಡನೆ ಪ್ರಥಮ, ದ್ವಿತೀಯ, ತ್ರತೀಯ ಕ್ರಮವಾಗಿ 25,000, 15,000, 10000 ಹಾಗೂ ವೈಯಕ್ತಿಕವಾಗಿ ಶ್ರೇಷ್ಠ ನಿರ್ವಹಣೆ ನೀಡಿದ 4 ಸ್ಪರ್ಧಿಗಳಿಗೆ ಮತ್ತು ಎರಡು ಬಾಲ ಪ್ರತಿಭೆಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದರು. ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಲೀಲಾಕ್ಷ ಕರ್ಕೇರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪೂರ್ಣಿಮಾ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಲ್ಲಿ ಮುಖ್ಯ ಅತಿಥಿ ಗಳಾಗಿ ಕೋಟ ಶ್ರೀನಿವಾಸ ಪೂಜಾರಿ, ವಿನಯ್ ಕುಮಾರ್ ಸೊರಕೆ, ಸುರೇಶ್ ಶೆಟ್ಟಿ ಗುರ್ಮೆ,ಯಶ್ ಪಾಲ್ ಸುವರ್ಣ, ದೀಪಕ್ ಕುಮಾರ್ ಎರ್ಮಾಳ್, ಕಾಪು ಪ್ರಭಾಕರ್ ಪೂಜಾರಿ, ಯು.ಶಿವಾನಂದ, ಪ್ರವೀಣ್ ಡಿ.ಪೂಜಾರಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಪ್ರವೀಣ್ ಡಿ.ಪೂಜಾರಿ, ಸಂತೋಷ ಪೂಜಾರಿ, ಅಶೋಕ್ ಕೋಟ್ಯಾನ್, ಮಹಾಬಲ ಅಮೀನ್, ದಯಾನಂದ ಕರ್ಕೇರ ಉಪಸ್ಥಿತರಿದ್ದರು.

ಕಟಪಾಡಿ : ಏಣಗುಡ್ಡೆ ಗರಡಿಯಲ್ಲಿ ಸೋಣ ಸಂಕ್ರಮಣ ಪೂಜೆ

Thumbnail
Posted On: 17 Aug 2022, 10:56 PM

ಕಟಪಾಡಿ : ತುಳುನಾಡಿನ ಅತ್ಯಂತ ಕಾರಣಿಕದ ಗರಡಿಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಹೆಸರಾಂತ ಬ್ರಹ್ಮ ಬೈದೇರುಗಳ ಗರಡಿಯಾದ ಏಣಗುಡ್ಡೆ ಗರಡಿಯಲ್ಲಿ ಇಂದು ಸೋಣ ಸಂಕ್ರಮಣ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಗರಡಿಯ ಪೂ ಪೂಜಾರಿಯಾದ ಇಂಪು ಪೂಜಾರಿ ಯವರ ನೇತೃತ್ವ ದಲ್ಲಿ ನಡೆದ ಪೂಜೆಯು ಊರಿನ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆಯಿತು. ಸೋಣ ಸಂಕ್ರಮಣದ ಪ್ರಯುಕ್ತ ಗರಡಿ ಜವನೇರ್ ಸದಸ್ಯರ ವತಿಯಿಂದ ಬಂದಂತಹ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಗರಡಿಮನೆ ಅಶೋಕ್. ಎನ್. ಪೂಜಾರಿ, ಗರಡಿ ಜವನೇರ್ ತಂಡದ ಪ್ರಮುಖರಾದ ಸುಧೀರ್ ಪೂಜಾರಿ, ಆರು ಮಾಗಣೆಯ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.