Updated News From Kaup
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯ

Posted On: 01-10-2021 06:38PM
ಕಾಪು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲದ ವತಿಯಿಂದ ಗಾಂಧಿಜಯಂತಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸುರೇಂದ್ರ ಪಣಿಯೂರ್, ಹಿಂದುಳಿದ ವರ್ಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ,ಹಿಂದುಳಿದ ವರ್ಗಗಳ ಮೋರ್ಚಾದ ಕಾಪು ಮಂಡಲ ಅಧ್ಯಕ್ಷರಾದ ಸಂತೋಷ್ ಕುಮಾರ್, ಕಾರ್ಯದರ್ಶಿಗಳಾದ ರವಿ ಕೋಟ್ಯಾನ್, ಪ್ರಸಾದ್ ಪಲಿಮಾರ್, ಉಪಾಧ್ಯಕ್ಷರಾದ ಗಣೇಶ್ ಕುಮಾರ್, ಬೂತ್ ಅಧ್ಯಕ್ಷರಾದ ರಾಜೇಶ್ ಸುವರ್ಣ, ಕಾರ್ಯದರ್ಶಿ ನಿತೇಶ್ ಪುತ್ರನ್, ಮೋರ್ಚಾದ ಸದಸ್ಯರಾದ ಗಣೇಶ್ ಆಚಾರ್ಯ, ಹರೀಶ್ ಪೂಜಾರಿ, ಸುಧಾಕರ್ ಇನ್ನಂಜೆ, ಉಷಾ ಉದ್ಯಾವರ, ನಾಗೇಶ್ ತಿಂಗಳಾಯ, ಹಾಗು ಸ್ಥಳೀಯ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ದೇವಸ್ಥಾನ ಹಾಗೂ ಪ್ರಾರ್ಥನಾ ಕೇಂದ್ರಗಳ ಧ್ವಂಸವನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ

Posted On: 29-09-2021 11:31PM
ಪಡುಬಿದ್ರಿ : ಕಾಪು ಬ್ಲಾಕ್ ಕಾಂಗ್ರೆಸ್ ಹಾಗೂ ಪಡುಬಿದ್ರಿ ಜಿಲ್ಲಾಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬಿಜೆಪಿ ಸರಕಾರದಿಂದ ರಾಜ್ಯ ದೇವಸ್ಥಾನ ಹಾಗೂ ಪ್ರಾರ್ಥನಾ ಕೇಂದ್ರಗಳ ಧ್ವಂಸವನ್ನು ವಿರೋಧಿಸಿ ಪಡುಬಿದ್ರಿಯಲ್ಲಿ ಸಂಜೆ ಬ್ರಹ್ಮಬೈದರ್ಕಳ ಗರಡಿ ಕಣ್ಣಂಗಾರ್ ಬಳಿಯಿಂದ ಪಡುಬಿದ್ರಿ ಪೇಟೆ ಬಸ್ನಿಲ್ದಾಣದವರೆಗೆ ಪಂಜಿನ ಮೆರವಣಿಗೆಯು ನಡೆಯಿತು.
ಈ ಸಂದರ್ಭ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ವೈ. ಸುಕುಮಾರ್, ದೀಪಕ್ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ರಮೀಝ್ ಪಡುಬಿದ್ರಿ, ಕರುಣಾಕರ್ ಪೂಜಾರಿ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
2020 ಮತ್ತು 2021 ಸಾಲಿಗೆ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ - ಕರ್ನಾಟಕ” ಪ್ರಕಟ

Posted On: 29-09-2021 08:49PM
ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಗಾಂಧೀ ತತ್ವಾದರ್ಶಗಳನ್ನು ಆಧರಿಸಿಕೊಂಡು ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸಲು ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ” 2020 ಮತ್ತು 2021 ನೇ ಸಾಲಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸಕಾರವು ಸದರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇಚ್ಚಿಸಿದ್ದು, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಅಶೋಕ್ ಬಂಗಾರೆಪ್ಪ್ಪಾ ಹಿಂಚಿಗೇರಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯು 2020 ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ “ಶ್ರೀಮತಿ ಮೀರಾಬಾಯಿ ಕೊಪ್ಪಿಕರ್” ಮತ್ತು 2021 ನೇ ಸಾಲಿಗೆ “ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠ”ವನ್ನು ಪ್ರಶಸ್ತಿಗೆ ಆಯ್ಕೆಮಾಡಿರುತ್ತದೆ.
ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂ. ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ: “ನಡೆದಾಡುವ ದೇವರು” ಎಂದೇ ಖ್ಯಾತರಾದ ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಸತತವಾಗಿ 80 ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾದ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ, ಕ್ಯಾತಸಂದ್ರ, ತುಮಕೂರು, ಸಾಧನೆಗಳ ತವರು. ಮೀರಾಬಾಯಿ ಕೊಪ್ಪಿಕರ್: ಶ್ರೀಮತಿ ಮೀರಾಬಾಯಿ ಕೊಪ್ಪಿಕರ್, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ. ಸದ್ಯ ಇವರಿಗೆ 96 ವರ್ಷ. ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಈಗ ವಯಸ್ಸಾದ ನಿಮಿತ್ತ ನೇಯ್ಗೆ ಮಾಡುತ್ತಿಲ್ಲ. ಗಾಂಧಿವಾದಿಗಳಾಗಿದ್ದ ಶ್ರೀಮತಿ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು. ಯಾರಿಂದಲೂ ಏನನ್ನೂ ಅಪೇಕ್ಷೆ ಇಲ್ಲ. ಇವರ ಮೂಲ ಧ್ಯೇಯ “ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಏನನ್ನೂ ಬಯಸಬಾರದು” ಎಂಬುದು. ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ. “ವಾತ್ಸಲ್ಯ ಧಾಮ” ವಿನೋಬಾ ಭಾವೆಯವರ ತಾಯಿ ಮೂಲ ಜಮಖಂಡಿಯವರಾದ ರುಕ್ಮಿಣಿ ಭಾವೆಯವರದ್ದು. ಮುಧೋದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಲಾಗಿದೆ. ಆರಂಭದಲ್ಲಿ 20 ಜನರಿದ್ದರು. ಈಗ ಮೂರು ಜನರಷ್ಟೇ ವಾಸ ಮಾಡುತ್ತಾರೆ. ಶ್ರೀಮತಿ ಮೀರಾಬಾಯಿ ಕೊಪ್ಪಿಕರ್ ಅವರನ್ನು ಸಂದರ್ಶಿಸಲು ಅತಿಥಿಗಳು ಆಗಾಗ್ಗೆ ಬರುತ್ತಿರುತ್ತಾರೆ. ಜಾತ್ಯಾತೀತ ಮನೋಭಾವದವರಾಗಿದ್ದಾರೆ. 2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಇವರಿಗೆ ಕೊಡಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವನ್ನು ಕೊಟ್ಟಿದ್ದರು. ಅವರು ನೀಡಿ ಚೆಕ್ ಹಣ ಇನ್ನೂ ಬ್ಯಾಂಕ್ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ. ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.
ಹಿರಿಯ ನಾಗರಿಕರ ಕ್ರೀಡಾ ಪ್ರವೃತ್ತಿ ಯುವ ಜನತೆಗೆ ಸ್ಪೂರ್ತಿಯಾಗಬೇಕು- ಜಿಲ್ಲಾಧಿಕಾರಿ ಕೂರ್ಮಾರಾವ್

Posted On: 29-09-2021 08:32PM
ಉಡುಪಿ : ಹಿರಿಯ ನಾಗರಿಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು, ವಯೋಮಾನಕ್ಕೆ ತಕ್ಕ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಶ್ವ ಹಿರಿಯ ನಾಗರಿಕ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ, ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮದಲ್ಲಿ ವಿಕೆಟ್ಗೆ ರಿಂಗ್ ಹಾಕುವ ಮೂಲಕ ಚಾಲನೆ ನೀಡಿದರು.

ಕ್ರೀಡೆಯಲ್ಲಿ ಭಾಗವಹಿಸಲು ವಯಸ್ಸಿನ ಯಾವುದೇ ನಿರ್ಭಂಧವಿಲ್ಲ, ಕ್ರೀಯಾಶೀಲ ಮನಸ್ಸು ಮತ್ತು ಆರೋಗ್ಯಯುತ ದೇಹವನ್ನು ಉತ್ತಮವಾಗಿರಿಸಿಕೊಳ್ಳಲು ಹಿರಿಯ ನಾಗರೀಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊರೋನಾ ಸಂಕಷ್ಟದ ಸಂದಿಗ್ಧತೆಯಲ್ಲಿ ಹಿರಿಯ ನಾಗರಿಕರು ಆರೋಗ್ಯದ ದೃಷ್ಠಿಯಿಂದ ಹೊರಗೆ ಬಾರದೇ ಸಂಕಷ್ಟದ ಪರಿಸ್ಥಿಯನ್ನು ಅನುಭವಿಸಬೇಕಾಯಿತು, ಆದ್ದರಿಂದ ಈಗ ಅದನ್ನೆಲ್ಲವನ್ನು ತೊಡೆದು ಮತ್ತೆ ಯುವ ಜನಾಂಗಕ್ಕೆ ಹೊಸ ಚೈತನ್ಯದ ಸಂದೇಶ ಸಾರುವಂತೆ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದರು. ಬಹುಮಾನ ಮತ್ತು ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಮನೋಭಾವದ ಬದಲು ಮನೋಲ್ಲಾಸಕ್ಕಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವುದರೊಂದಿಗೆ ಉಡುಪಿ ಜಿಲ್ಲೆಯ ಹಿರಿಯ ನಾಗರೀಕರು ರಾಜ್ಯದ ಇತರೆ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಲು ಕ್ರೀಡಾ ಚಟುವಟಿಕೆ ಅತ್ಯವಶ್ಯಕವಾಗಿ ಅಳಡಿಸಿಕೊಳ್ಳಬೇಕು. ಸೇವೆಯಿಂದ ನಿವೃತ್ತಿ ಹೊಂದಿದ ಹಾಗೂ ಇತರ ಹಿರಿಯ ನಾಗರಿಕರು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಖುಷಿಯಿಂದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೀಡೆಗೆ ಹೊಸ ಮೆರಗು ನೀಡಬೇಕು ಎಂದರು. ಕ್ರೀಡಾಕೂಟದಲ್ಲಿ 60 ರಿಂದ 80 ವಯೋಮಾನದ ಹಿರಿಯ ನಾಗರಿಕರು (ಪುರುಷ ಮತ್ತು ಮಹಿಳೆಯರು) ಪ್ರತ್ಯೇಕವಾಗಿ ಕಾಲ್ನಡಿಗೆ, ವಿಕೆಟ್ಗೆ ರಿಂಗ್ ಹಾಕುವುದು, ಕೇರಂ, ಚಿತ್ರಕಲೆ, ಗಾಯನ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಭಾಗವಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಉಡುಪಿ ಹಿರಿಯ ನಾಗರಿಕ ಒಕ್ಕೂಟದ ಅಧ್ಯಕ್ಷ ಸಿ.ಎಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಉಚಿತ ಮಧುಮೇಹ ಶಿಬಿರ

Posted On: 29-09-2021 08:26PM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಯಿಂದ ,ರೋಟರಿ ಇಂಡಿಯಾ ಮತ್ತು ಆರ್ ಎಸ್ ಎಸ್ ಡಿ ಐ ಯೋಜನೆಯಾದ ಒಂದೇ ದಿನದಲ್ಲಿ ಮಿಲಿಯನ್ ಬ್ಲಡ್ ಶುಗರ್ ಟೆಸ್ಟ್ ಮಾಡುವ ಉದ್ದೇಶದಿಂದ ಇಡೀ ಭಾರತದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಸೈಬ್ರಕಟ್ಟೆ ರೋಟರಿಯ ಆರೋಗ್ಯ ಕೇಂದ್ರ ದಲ್ಲಿ ಹಮ್ಮಿಕೊಂಡ ಉಚಿತ ಮಧುಮೇಹ ಶಿಬಿರವನ್ನು ರೋ ವಲಯ 3 ರ ಸಹಾಯಕ ಗವರ್ನರ್ ಅವರು ದೀಪ ಬೇಳಗಿಸುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇಂದು ಇಡೀ ಭಾರತದಲ್ಲಿ ರೋಟರಿ ಅವರಿಂದ ಮಿಲಿಯನ್ ಗಟ್ಟಲೆ ಮಧುಮೇಹ ತಪಾಸಣೆ ನಡೆಸಿ ಗಿನ್ನೆಸ್ ರೆಕಾರ್ಡ್ ಮಾಡುವ ಯೋಜನೆ ಇದ್ದು, ಎಲ್ಲ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಿ ಮತ್ತು ಭಾರತವು ಸಕ್ಕರೆ ಕಾಯಿಲೆಯಲ್ಲಿ ವಿಶ್ವದಲ್ಲಿ 2 ನೆ ಸ್ಥಾನದಲ್ಲಿದ್ದು ಹೆಚ್ಚು ಹೆಚ್ಚು ವಯಸ್ಸಿನ ಭೇದ ಇಲ್ಲದೆ ಕಾಲ ಕಾಲಕ್ಕೆ ರಕ್ತ ತಪಾಸಣೆ ಮಾಡಿ ಈ ಕಾಯಿಲೆ ತಡೆಗಟ್ಟುವಲ್ಲಿ ಸಫಲಾರಗಬೇಕು ಅಂತ ಸಲಹೆ ನೀಡಿದರು.
ಇನ್ನೋರ್ವ ಅತಿಥಿ ಸೈಬ್ರಕಟ್ಟೆಯ ವೈದ್ಯಾಧಿಕಾರಿ ಡಾ.ಜಯಶೀಲ ಆಚಾರ್ ಮಾತನಾಡಿ ಸಕ್ಕರೆ ತುಂಬಾ ಸಿಹಿಯಾಗಿದ್ದು ಅದು ದೇಹದಲ್ಲಿ ಹೆಚ್ಚಾದರೆ ಅಂಗಾಂಗಗಳಿಗೆ ಮಾರಕವಾಗಿ ಬದುಕು ಕಹಿ ಆಗುತ್ತೆ ಆದ್ದರಿಂದ ಸರಿಯಾಗಿ ತಪಾಸಣೆ ನಡೆಸಿ ಮಧುಮೇಹ ಕಾಣಿಸಿಕೊಂಡರೆ ಆರಂಭದಲ್ಲಿಯೇ ಉತಮ ಚಿಕಿತ್ಸೆ ಆಹಾರಕ್ರಮ ಮತ್ತು ವ್ಯಾಯಾಮ ದಿಂದ ಹತೋಟಿಯಲ್ಲಿ ಬರಬಹುದು ,ಹೆದರದೆ ಕಾಲ ಕಾಲಕ್ಕೆ ಶುಗರ್ ಟೆಸ್ಟ್ ಅಗತ್ಯ ಅಂತ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ರೋ ಅಧ್ಯಕ್ಷ ಪ್ರಸಾದ್ ಭಟ್ ವಹಿಸಿದ್ದರು. ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿ ಅಣ್ಣಯ್ಯ ದಾಸ್, ಶಿಬಿರಾರ್ಥಿಗಳು, ರೋಟರಿ ಸದಸ್ಯರು ಭಾಗಿಯಾಗಿದ್ದರು.ಸುಮಾರು 100 ರಷ್ಟು ಮಧುಮೇಹ ತಪಾಸಣೆ ನಡೆಸಲಾಯಿತು.
ಅಕ್ಟೋಬರ್ 2 : ಶಿರ್ವದಲ್ಲಿ ಸಂಜೀವಿನಿ ಸಂತೆ

Posted On: 29-09-2021 02:45PM
ಕಾಪು : ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಸಂತೆಯನ್ನು ನಡೆಸುವಂತೆ ನೀಡಿರುವ ಆದೇಶದ ಹಿನ್ನಲೆಯಲ್ಲಿ ಅಕ್ಟೋಬರ್ 2 ರಂದು ಶಿರ್ವ ಪಂಚಾಯತ್ ವಠಾರದಲ್ಲಿ ಸಂಜೀವಿನಿ ಸಂತೆಗೆ ಚಾಲನೆ ನೀಡಲಾಗುವುದು.
ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಗ್ರಾ.ಪಂ. ಮಜೂರು, ಗ್ರಾ. ಪಂ .ಮುದರಂಗಡಿ, ಗ್ರಾ. ಪಂ. ಕುತ್ಯಾರು, ಗ್ರಾ. ಪಂ ಬೆಳ್ಳೆ ಈ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ, ಅಥವಾ ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಅವಕಾಶವನ್ನು ನೀಡುವ ಕಾರ್ಯಕ್ರಮವೇ ಸಂಜೀವಿನಿ ಸಂತೆ ಗಾಂಧೀ ಜಯಂತಿಯಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಈ ಸಂತೆಯಲ್ಲಿ ದಿನಬಳಕೆಯ ವಸ್ತುಗಳು, ತರಕಾರಿ, ಮಾಸ್ಕ್, ಬಟ್ಟೆ ಚೀಲಗಳು, ಪುಸ್ತಕ,ಸಾಂಬಾರ ಹುಡಿ, ಹೀಗೆ 50 ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಐದು ಪಂಚಾಯತ್ ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಗ್ರಾ. ಪಂ ಸದಸ್ಯರು, ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕಾಗಿ ಕೆ. ಆರ್. ಪಾಟ್ಕರ್, ಅಧ್ಯಕ್ಷರು ಶಿರ್ವ ಗ್ರಾ. ಪಂ ಮತ್ತು ಅನಂತಪದ್ಮನಾಭ ನಾಯಕ್ ಅಭಿವೃದ್ದಿ ಅಧಿಕಾರಿ ಶಿರ್ವ ಗ್ರಾ. ಪಂ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣಪುರ ರೋಟರಿ ಕ್ಲಬ್ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ

Posted On: 29-09-2021 02:41PM
ಉಡುಪಿ : ಡಾ.ಟಿ.ಎಂ.ಎ ಪೈ. ಹೈಸ್ಕೂಲು ಕಲ್ಯಾಣಪುರದ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾದ ಕುಮಾರಿ. ಪ್ರಜ್ಞಾ .ಸಿ.ದೇವಾಡಿಗ, ಕಾರ್ಯದರ್ಶಿಯಾದ ಕುಮಾರಿ ನಂದಿತಾ, ಹಾಗೂ ದಂಡಪಾಣಿಯಾದ ಕುಮಾರಿ ನಿಖಿತಾ ರವರಿಗೆ ರೋಟರಿ ಕ್ಲಬ್ಬಿನ ಅಧ್ಯಕರಾದ ರೊಟೇರಿಯನ್ ಶಂಭು ಶಂಕರ್ ರವರು ಪದಪ್ರದಾನ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ರೋಟರಿ. ವಲಯ 3ರ ಇಂಟರಾಕ್ಟ್ ಸಂಯೋಜಕರಾದ ರೋಟೇರಿಯನ್ ರಾಜಾರಾಂ ಐತಾಳ್, ವಲಯ ಸೇನಾನಿ ರೋಟೇರಿಯನ್ ಬ್ರಾನ್ ಡಿಸೋಜ ಆಗಮಿಸಿ ರೋಟರಿ ಸಂಸ್ಥೆಯ ಸೇವೆ ಮತ್ತು ಯೋಜನೆಯೊಂದಿಗೆ ಇಂಟರಾಕ್ಟ್ ಸದಸ್ಯರ ಪಾಲ್ಗೊಳ್ಳುವಿಕೆ ಬಗ್ಗೆ ತಿಳಿ ಹೇಳಿ ನೂತನ ಪದಾಧಿಕಾರಿಗಳನ್ನು ಹಾಗು ಅವರ ತಂಡವನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ. ಶೇಖರ್. ಪಿ. ರವರು ಶಾಲಾ ಯೋಜನೆಯಲ್ಲಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಮಾಹಿತಿ ನೀಡಿದರು.
ಇದೇ ವೇದಿಕೆಯಲ್ಲಿ ಶಾಲಾ ಅಭಿಮಾನಿಯಾದ ಸತೀಶ್ ರಾವ್ ರವರು ದೇಣಿಗೆಯಾಗಿ, ಕುಡಿಯುವ ನೀರಿನ ಶೇಖರಣೆ ಗಾಗಿ ನೀಡಿದ ಸ್ಟೀಲ್ ಡ್ರಮ್ ಗಳನ್ನ ಶಾಲೆಗೆ ಹಸ್ತಾಂತರಿಸಿದರು. ರೋಟರಿ ಸಂಸ್ಥೆಯ ವಿದ್ಯಾಸೇತು ಕಾರ್ಯಕ್ರಮದಡಿ ಹೆಚ್ಚುವರಿ 27 ಜೊತೆ ಪುಸ್ತಕಗಳನ್ನು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಅಧ್ಯಾಪಕರು ಇಂಟರಾಕ್ಟ್ ಸಂಯೋಜಕರೂ ಆದ ಶ್ರೀ ಸತ್ಯ ಶಂಕರ್ ಭಟ್ ಅವರು ಸಭಾ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು. ಕಾರ್ಯದರ್ಶಿಗಳಾದ ರೊಟೇರಿಯನ್ ಪ್ರಕಾಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ : ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ

Posted On: 28-09-2021 08:22PM
ಉಡುಪಿ : ಮಲ್ಪೆ ಬೀಚ್ಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸೇರಿದಂತೆ ಅವರುಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು ಅವರು ಇಂದು ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಲ್ಪೆ ಬೀಚ್ಗೆ ದೇಶ ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು , ಪ್ರವಾಸಿಗರಿಗೆ ಅನುಕೂಲಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು , ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ , ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕಲ್ಪಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ನೋಡಿಕೊಳ್ಳಬೇಕು ಎಂದರು.

ಮಲ್ಪೆ ಬೀಚ್ನಲ್ಲಿ ಈಗಾಗಲೆ ಕೈಗೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಪ್ರವಾಸಿಗರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲ್ಪೆ ಬೀಚ್ ನಲ್ಲಿ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸಮಗ್ರ ಅಭಿವೃದ್ದಿಯ ನೀಲ ನಕಾಶೆಯನ್ನು ಮುಂದಿನ 20 ವರ್ಷದ ಕಲ್ಪನೆಯೊಂದಿಗೆ ತಯಾರಿಸಲು, ಸಮಾಲೋಚಕರೊಂದಿಗೆ ಚರ್ಚಿಸಿ ಶೀಘ್ರವಾಗಿ ಕರಡು ತಯಾರಿಸಿ ತಿಳಿಸಬೇಕು ಎಂದರು. ಮಲ್ಪೆ ಬೀಚ್ ಪ್ರದೇಶದಿಂದ ಸೈಂಟ್ಮೆರಿಸ್ ದ್ವೀಪಕ್ಕೆ ಹೋಗುವ ಸ್ಪೀಡ್ಬೋಟ್ಗಳು, ಮಲ್ಪೆ ಬಂದರಿನಿಂದ ಹೋಗುವ ದೊಡ್ಡ ಬೋಟ್ಗಳು,ಮಲ್ಪೆ ಬೀಚ್ ಪ್ರದೇಶದಲ್ಲಿ ರೌಂಡಿಂಗ್ ಬೋಟ್ ಹಾಗೂ ವಾಟರ್ ಸ್ಕೂಟಿ ಬೋಟುಗಳು ಮತ್ತಿತರ ಜಲಕ್ರೀಡೆಗಳನ್ನು ನಡೆಸಲು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ,ಅವುಗಳಿಗೆ ಚಾಲನೆ ನೀಡುವಂತೆ ಸೂಚನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಬೀಚ್ ಗೆ ಬರುವ ಪ್ರವಾಸಿಗರಿಗೆ ಸಮುದ್ರದ ಅಪಾಯದ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಪ್ರಾಣಾಪಾಯಗಳು ಆಗುತ್ತಿವೆ ,ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು , ಸಮುದ್ರ ತೀರದಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಬೇಕು,ಒಂದೊಮ್ಮೆ ಅಪಾಯಕ್ಕೆ ಒಳಗಾದವರನ್ನು ರಕ್ಷಿಸಲು ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸೂಚನೆ ನೀಡಿದರು.
ಶಾಸಕ ಕೆ ರಘುಪತಿ ಭಟ್ ಮಾತನಾಡಿ, ಪಡುಕೆರೆ ಬೀಚ್ ಸಹ ಉತ್ತಮ ಪ್ರವಾಸಿ ಸ್ಥಳವಾಗಿದ್ದು , ಅಲ್ಲಿಯೂ ಸಹ ಪ್ರವಾಸಿಗರ ಆಗಮನ ದಿನೇ ದಿನೇ ಹೆಚ್ಚುತ್ತಿದೆ,ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು ,ಬೀಚ್ ನ ಅಭಿವೃಧ್ದಿಯ ನಿರ್ವಹಣೆಗೆ ಸ್ಥಳೀಯ ಜನರನ್ನು ಒಳಗೊಂಡ, ಭಜನಾ ಮಂದಿರದ ಸದಸ್ಯರುಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಮಾಡುವುದರಿಂದ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಬೀಚ್ನಲ್ಲಿ ಪ್ರವಾಸಿಗರ ಮನರಂಜನೆ ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಹೆಚ್ಚು ಹೆಚ್ಚು ಪ್ರವಾಸಿ ಬೋಟುಗಳು, ಜಲಕ್ರೀಡೆ ಹಾಗೂ ಮತ್ತಿತರ ಉತ್ತಮ ಚಟುವಟಿಕೆಗಳನ್ನು ಕೈಗೊಂಡಾಗ ಪ್ರವಾಸಿಗರಿಗೆ ಹೆಚ್ಚಿನ ಮನೋಲ್ಲಾಸ ಸಿಗುತ್ತದೆ. ಅದಕ್ಕೆ ಆಸ್ಪದ ನೀಡಬೇಕು ಎಂದರು. ಪಡುಕೆರೆ ಸಮುದ್ರತೀರಕ್ಕೆ ಹೊಂದಿಕೊಂಡಿರವ ಸರಕಾರಿ ಜಾಗವನ್ನು ಮರಿನ್ ಬೋರ್ಡ್ಗೆ ಹಸ್ತಾಂತರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ ಕಲೆ , ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳೀಯ ಕರಕುಶಲ ವಸ್ತಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಸೀವಾಕ್ ಪ್ರದೇಶದಲ್ಲಿ ಮಾರುಕಟ್ಟೆ ಮಳಿಗೆಯನ್ನು ಕಲ್ಪಿಸಬೇಕು, ಪ್ರವಾಸಿಗರು ಹೆಚ್ಚಾಗಿ ಆಗಮಿಸುವುದರಿಂದ ಸ್ಥಳೀಯ ಜನರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಅರ್ಥಿಕ ಲಾಭ ದೊರೆಯುತ್ತದೆ ಎಂದರು. ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭಾ ಆಯುಕ್ತ ಉದಯ ಶೆಟ್ಟಿ, ನಗರಸಭಾ ಸದಸ್ಯರುಗಳಾದ ಎಡ್ಲಿನ್ ಕರ್ಕಡ, ಸುಂದರ್ ಕಲ್ಮಾಡಿ, ವಿಜಯ್ ಕೊಡವೂರು, ವಿಜಯ್ ಕುಂದೂರು, ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿ ಆರ್ ಝಡ್ ಅಧಿಸೂಚನೆ ೨೦೧೯ ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ : ಜಿಲ್ಲಾಧಿಕಾರಿ ಕೂರ್ಮಾರಾವ್

Posted On: 28-09-2021 08:10PM
ಉಡುಪಿ : ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರಲ್ಲಿ ಅಭಿವೃಧ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ರಿಯಾಯಿತಿಗಳು ದೊರೆಯಲಿದ್ದು, ಈ ಕುರಿತು ತಯಾರಿಸಿದ ಕರಡು ಯೋಜನೆಯ ಕುರಿತಂತೆ ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರ ಪ್ರಕಾರ ತಯಾರಿಸಿದ, ಕರಡು ಕರಾವಳಿ ವಲಯ ನಿರ್ವಹಣಾ ಯೋಜನೆಯ ಸಾರ್ವಜನಿಕ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಡು ಯೋಜನೆಯಲ್ಲಿ, ಉಬ್ಬರವಿಳಿತದ ಪ್ರಭಾವಕ್ಕೆ ಒಳಗಾದ ಜಲನಿಕಾಯಗಳ ಭರತರೇಖೆಯಿಂದ ೧೦೦ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೫೦ಮೀ. ಗೆ ಕಡಿಮೆಗೊಳಿಸಿದೆ, ಕುದ್ರು ದ್ವೀಪಗಳಿಗೆ ಇದ್ದ ೧೦೦ ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೨೦ ಮೀ ಗೆ ಕಡಿಮೆಗೊಳಿಸಿದೆ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಅಥವಾ ಸ್ಥಳೀಯ ನಗರಾಭಿವೃಧ್ದಿ ಯೋಜನಾ ಪ್ರಾಧಿಕಾರಕ್ಕೆ ಸೇರಿಸಿ ಘೋಷಣೆಯಾದ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಬದಲಾಯಿಸಲಾಗಿದೆ, ೨೦೧೧ ರ ಜನಗಣತಿ ಆಧಾರದ ಮೇಲೆ ಚದುರ ಕಿ.ಮೀಗೆ ೨೧೬೧ ಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ಎ ಎಂದು ವಿಂಗಡಿಸಿ, ಅಭಿವೃದ್ದಿ ನಿಷಿದ್ದ ಪ್ರದೇಶದ ವ್ಯಾಪ್ತಿಯನ್ನು ಸಮುದ್ರದ ಭರತ ರೇಖೆಯಿಂದ ೫೦ ಮೀ ಗೆ ಸೀಮಿತಗೊಳಿಸಲಾಗಿದೆ ಎಂದರು.
ಕರಡು ನಕಾಶೆಯಲ್ಲಿ ಜಿಲ್ಲೆಯ ಕೋಟೆ, ಮಟ್ಟು, ಪಾಂಗಾಳ, ಬಡಾ, ಬೈಂದೂರು, ಪಡುವರಿ, ಯಡ್ತರೆ, ತಗ್ಗರ್ಸೆ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಸೇರಿಸಿರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ರಿಯಾಯತಿ ದೊರೆಯಲಿದೆ, ಗಂಗೊಳ್ಳಿ ಗ್ರಾಮವನ್ನು ಕರಾವಳಿ ನಿಯಂತ್ರಣ ವಲಯ ೩ಎ ಗೆ ಸೇರಿಸಲಾಗಿದೆ ಎಂದರು. ಸೀಗಡಿ ಕೃಷಿಕ ಸಂಘದ ಕಾರ್ಯದರ್ಶಿ ಶ್ರೀಧರ ಹೆಗಡೆ ಹಾಗೂ ಹಂಗಳೂರು ಗ್ರಾಮದ ಸೀಗಡಿ ಕೃಷಿಕರು, ಸೀಗಡಿ ಬೆಳೆಯುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆಯಲ್ಲಿ ಹೊಳೆ ಎಂದು ಪರಿಗಣಿಸಿದ್ದು, ಇದರಿಂದ ಸೀಗಡಿ ಕೃಷಿಗೆ ತೊಂದರೆಯಾಗಲಿದೆ ಈ ಬಗ್ಗೆ ಪರಿಶೀಲಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸೀಗಡಿ ಕೃಷಿಗೆ ಯೋಜನೆಯಿಂದ ಯಾವುದೇ ತೊಂದರೆಯಿಲ್ಲ, ಹೊಸದಾಗಿ ಸೀಗಡಿ ಕೃಷಿ ಮಾಡುವವರು ಅನುಮತಿ ಪಡೆಯಬೇಕಾಗುತ್ತದೆ, ಈಗಾಗಲೇ ಮಾಡುತ್ತಿರುವವರು ನವೀಕರಣ ಮಾಡಬೇಕು. ಸೀಗಡಿ ಕೃಷಿಗೆ ಅನುಮತಿ ನೀಡಲಾಗುತ್ತದೆ. ಹೊಳೆ ಎಂದು ನಮೂದಿಸಿರುವುದನ್ನು ಸರಿಪಡಿಸಲಾಗುವುದು ಎಂದರು.
ಹೇರಿಕುದ್ರು, ಕನ್ನಡಕುದ್ರುಗಳಲ್ಲಿ ಹೊಳೆ ಮಧ್ಯೆ ಕಾಂಡ್ಲಾ ಗಿಡಗಳನ್ನು ನೆಟ್ಟಿರುವ ಕಾರಣ ನೀರು ಹರಿಯಲು ತೊಂದರೆಯಾಗಿ ಮರಳು ಶೇಖರಣೆಯಾಗಿದೆ, ಇದರಿಂದ ಹರಿಯುವ ನೀರು ಗ್ರಾಮಗಳಿಗೆ ಹಿಮ್ಮುಖವಾಗಿ ಬಂದು ಪ್ರವಾಹ ಪರಿಸ್ಥಿತಿ ಬರಲಿದ್ದು ಕೂಡಲೇ ಅಲ್ಲಿರುವ ಮರಳು ದಿಬ್ಬ ತೆರವುಗೊಳಿಸುವಂತೆ ಗ್ರಾಮಸ್ಥರು ಕೋರಿದರು. ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಮಾತನಾಡಿ, ಸಿಆರ್ಝಡ್ ನಿಂದ ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಬೇಕು, ನಕ್ಷೆಯಲ್ಲಿ ಗಂಗೊಳ್ಳಿ, ಹಂಗಾರಕಟ್ಟೆ ಮತ್ತು ಹೆಜಮಾಡಿ ಪೋರ್ಟ್ಗಳನ್ನು ಗುರುತಿಸಬೇಕು ಎಂದರು. ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅಹವಾಲುಗಳನ್ನು ರಾಜ್ಯಕ್ಕೆ ಕಳುಹಿಸಲಾಗುವುದು ಅಲ್ಲಿಂದ ಅದು ಅಗತ್ಯ ಬದಲಾವಣೆಯಾಗಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಝಡ್ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸೇವಾ ಮನೋಭಾವದಿಂದ ಗೋಶಾಲೆ ನಿರ್ವಹಣೆ ಮಾಡಬೇಕು - ಜಿಲ್ಲಾಧಿಕಾರಿ ಕೂರ್ಮಾರಾವ್

Posted On: 28-09-2021 08:00PM
ಉಡುಪಿ : ಗೋಶಾಲೆಗಳಲ್ಲಿನ ಗೋವುಗಳ ಪಾಲನೆಯನ್ನು ಸೇವಾ ಮನೋಭಾವದಿಂದ ಯಾವುದೇ ಪ್ರತಿಫಲಗಳನ್ನು ಬಯಸದೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದರು. ಅವರು ಸೋಮವಾರ ತಮ್ಮ ಕಛೇರಿಯಲ್ಲಿ ನಡೆದ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸರಕಾರ ಜಾನುವಾರು ಹತ್ಯ ಪ್ರತಿಬಂಧಕ ಕಾಯ್ದೆ ಹಾಗೂ ಸಂರಕ್ಷಣೆ ಕಾನೂನು ಜಾರಿಗೆ ತಂದಿದೆ. ಗೋರಕ್ಷಣೆಗಾಗಿ ಸರಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು ಮುಂದಾಗಿದ್ದು ಪ್ರತಿ ಜಿಲ್ಲೆಗೆ ಮೊದಲನೇ ಹಂತದಲ್ಲಿ ೨೪ ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅನೇಕ ದಾನಿಗಳು ಇದ್ದಾರೆ. ಅವರ ಸಹಕಾರ ಹಾಗೂ ಜನರ ಸಹಭಾಗಿತ್ವದೊಂದಿಗೆ ಗೋಶಾಲೆಗಳನ್ನು ನಿರ್ವಹಣೆ ಮಾಡಬೇಕು ಎಂದ ಅವರು ಸರಕಾರ ಪಶುಗಳ ನಿರ್ವಹಣೆಗೆ ದಿನಕ್ಕೆ ೧೭.೫೦ ರೂ.ಗಳನ್ನು ನೀಡಲು ನಿಗದಿಪಡಿಸಿದೆ. ಆದರೆ ಪಶುಗಳ ನಿರ್ವಹಣೆಗೆ ಇದು ಸಾಕಾಗುವುದಿಲ್ಲ ಹೆಚ್ಚಿನ ಅನುದಾನ ಬೇಕು ಎಂಬ ಬಗ್ಗೆ ಸಂಘ ಸಂಸ್ಥೆಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ೨,೫೨,೭೨೪ ಗೋವುಗಳಿದ್ದು ಅವುಗಳಲ್ಲಿ ಶೇ. ೦.೭೫ ರಷ್ಟು ಜಾನುವಾರುಗಳಿಗೆ ಅಂದರೆ ೨,೦೦೦ ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಇರುವಂತೆ ಗೋಶಾಲೆಗಳನ್ನು ಜಿಲ್ಲೆಯಲ್ಲಿ ತೆರೆಯಬೇಕು ಎಂದ ಅವರು ಗೋಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಿ ದೈನಂದಿನ ಚಟುವಟಿಕೆಗಳನ್ನು ಇಲಾಖೆ ವೆಬ್ಸೈಟ್ನಲ್ಲಿ ಅಕ್ಟೋಬರ್ ೨ ರಿಂದ ಅಪ್ಲೋಡ್ ಮಾಡಬೇಕು ಎಂದರು. ಗೋಶಾಲೆಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಕರುಗಳು ಸೇರಿದಂತೆ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗೋಶಾಲೆಗಳ ಸುಸ್ಥಿರ ನಿರ್ವಹಣೆ ಹಾಗೂ ಸಂಪನ್ಮೂಲ ಕ್ರೂಢಿಕರಣ ಮಾಡಬೇಕು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ ಅದಕ್ಕೂ ಅವಕಾಶ ಕಲ್ಪಿಸಿ ಗೋಶಾಲೆಗಳಲ್ಲಿ ದಾಖಲಾಗಿರುವ ಜಾನುವಾರುಗಳು ಮರಣ ಹೊಂದಿದಲ್ಲಿ ಸ್ಥಳಿಯ ಪಶು ವೈದ್ಯಾಧಿರಿಯಿಂದ ಪ್ರಮಾಣ ಪತ್ರಪಡೆದು ದಾಖಲೆ ಇಡಬೇಕು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಈಗಾಗಲೆ ೧೨ ಖಾಸಗಿ ಗೋಶಾಲೆಗಳು ದಯಾಪೂರಕವಾಗಿ ಗೋವುಗಳ ಸಂರಕ್ಷಣೆ ಕಾರ್ಯವನ್ನು ನಿರ್ವಹಿಸುತ್ತಿವೆ. ಅವುಗಳಲ್ಲಿ ನೀಲಾವರದ ಗೋವರ್ಧನಗಿರಿ ಟ್ರಸ್ಟ್, ಶಿರೂರಿನ ಅಮೃತಧಾರ ಗೋಶಾಲೆ ಹಾಗೂ ಕಾರ್ಕಳದ ವೆಂಕಟರಮಣ ಗೋಶಾಲೆಗಳಲ್ಲಿ ೧೦೦ ಕ್ಕೂ ಹೆಚ್ಚು ಜಾನುವಾರುಗಳನ್ನು ಕಳೆದ ೫ ವರ್ಷದಿಂದ ನಿರ್ವಹಣೆ ಮಾಡುತ್ತಿದೆ ಎಂದರು. ಹೆದ್ದಾರಿಯ ಅಕ್ಕ-ಪಕ್ಕದಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿರುವ ಹುಲ್ಲನ್ನು ಸಂಗ್ರಹಿಸಿ ಗೋಶಾಲೆಗಳಿಗೆ ತಲುಪಿಸುವ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್ಗಳು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಕಾಡು ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಲು ಆಯ್ದ ಹಾವಳಿ ಇರುವ ಸ್ಥಳಗಳನ್ನು ಗುರುತಿಸಿ ಸೋಲಾರ್ ದೀಪಗಳನ್ನು ಗ್ರಾ. ಪಂ ಗಳು ಹಾಗೂ ಅರಣ್ಯ ಇಲಾಖೆಗಳು ಅಳವಡಿಸುವುದರಿಂದ ಹಾವಳಿ ತಪ್ಪಿಸಬಹುದು ಎಂದ ಅವರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಾರ್ಕಳದ ಅಭಿನಂದನ ಗೋಶಾಲೆಯ ಕೆ. ಮಾದೇವ, ಕುಂದಾಪುರ ತಾಲೂಕಿನ ಶಿರೂರಿನ ನಂದಗೋಕುಲ ಚಾರಿಟೇಬಲ್ ಟ್ರಸ್ಟ್ನ ಸುರೇಶ ಅವಭೃತ, ನೀಲಾವರ ಗೋಶಾಲೆಯ ಟ್ರಸ್ಟಿ ಹಾಗೂ ಪಶು ಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ. ಸರ್ವೋತ್ತಮ ಉಡುಪ, ಕುಮಾರ್ ಕಾಂಚನ್, ಗೋಶಾಲೆಗಳ ನಿರ್ವಹಣೆಯ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ಜಿ.ಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಂಕರ್ ಶೆಟ್ಟಿ, ಪ್ರಾಣಿದಯಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ದೀನಾನಾಥ ವಸಂತ್ ಬಿಜೂರ, ಸುಧೀರ್ ಕಾಂಚನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.