Updated News From Kaup

ಬಂಟ್ವಾಳ : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ

Thumbnail
Posted On: 30 Aug 2021, 04:17 PM

ಮಂಗಳೂರು : ಬಂಟ್ವಾಳ ತಾಲೂಕಿನ ಅಂಬೇಡ್ಕರ್ ನಗರ ನಾವೂರ ಬಂಟ್ವಾಳದಲ್ಲಿ ಆದಿತ್ಯವಾರ (29/8/21)ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ಅಂಬೇಡ್ಕರ್ ನಗರ ನಾವೂರ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು. ಅಂಬೇಡ್ಕರ್ ನಗರದ ಹಿರಿಯರಾದ ಜಾನು, ಬೆಲ್ಚಡ, ಅಣ್ಣು (ಯಾನೆ ಅನಿಲ್ ) ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಇವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ನಾವೂರಿನ ಅಂಬೇಡ್ಕರ್ ಭವನದ ಮಾರ್ಗದರ್ಶಕರಾದ ಶಂಕರ್ ಎನ್ ಎಸ್ ನಾವೂರ ಇವರು ತುಲು ಭಾಷೆಯ ಲಿಪಿಯನ್ನು ನಾವೆಲ್ಲರೂ ಕಲಿಯಬೇಕು ಮತ್ತು ತುಲುನಾಡಿನೆಲ್ಲೆಡೆ ಕಲಿಸಬೇಕು ಹಾಗೂ ತುಲು ಭಾಷೆಗೆ ಸುಮಾರು ವರ್ಷದ ಇತಿಹಾಸ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮಾತೃಭಾಷೆಗೆ ಸ್ಥಾನಮಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನದ ಗೌರವ ಅಧ್ಯಕ್ಷರಾದ ಸದಾನಂದ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ದೇಜಪ್ಪ ಉಪಸ್ಥಿತರಿದ್ದರು. ದೀಕ್ಷಾ ಗಣ್ಯರನ್ನು ಸ್ವಾಗತಿಸಿ, ಶ್ರವಣ್ ನಾವೂರ ಎಲ್ಲರಿಗೂ ಧನ್ಯವಾದಗೈದರು. ದೀಕ್ಷಾ ನಾವೂರ ಕಾರ್ಯಕ್ರಮ ನಿರೂಪಿಸಿದರು.

ಕಲಾರತ್ನ ಪುರಸ್ಕೃತರಾದ ಆರ್. ಜೆ. ಎರೋಲ್

Thumbnail
Posted On: 30 Aug 2021, 12:09 PM

ಕಾಪು : ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ರೇಡಿಯೋ ಜಾಕಿ ಎರೋಲ್ ಗೆ MAXLIFE ಸಂಸ್ಥೆಯು ಕಲಾರತ್ನ ಗೌರವವನ್ನು ನೀಡಿ ಪುರಸ್ಕರಿಸಿದೆ. ಈ ಸಂದರ್ಭ ಹಿರಿಯ ಕಲಾವಿದೆ ಮಾಳವಿಕಾ ಅವಿನಾಶ್ ಹಾಗು ಇತರ ದಿಗ್ಗಜರು ಉಪಸ್ಥಿತರಿದ್ದರು.

ಗ್ಯಾಂಗ್ ರೇಪ್, ಪುರುಷ ಪ್ರಧಾನ ಮಾನಸಿಕತೆ, ಸ್ವಾತಂತ್ರ್ಯ, ಸ್ವೇಚ್ಛೆ ಇತ್ಯಾದಿ.

Thumbnail
Posted On: 30 Aug 2021, 08:19 AM

ಅತ್ಯಾಚಾರವನ್ನು ಯಾವ ನಾಗರಿಕ ಸಮಾಜ ಕೂಡ ಸಮರ್ಥನೆ ಮಾಡಬಾರದು. ಮೈಸೂರಿನ ಗ್ಯಾಂಗ್ ರೇಪ್ ಆರೋಪಿಗಳ ಬಂಧನವು ಆಗಿದೆ. ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆ ಆಗಲಿ ಎನ್ನುವುದು ನಮ್ಮ ಪ್ರಾರ್ಥನೆ. ಇಂಥಹಾ ಪ್ರಕರಣಗಳು ಆಗುವಾಗ ಒಮ್ಮೆ ಸಮಾಜ, ಸರಕಾರ, ಮಾಧ್ಯಮಗಳು ಬೆಚ್ಚಿ ಬೀಳುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ ಮರೆತೇ ಬಿಡುತ್ತವೆ. ಇಲ್ಲಿ ಹಾಗಾಗದೇ ಇರಲಿ. ಅತ್ಯಾಚಾರಕ್ಕೆ ಒಳಗಾದ ಹುಡುಗಿ ತನ್ನ ಜೀವನ ಪೂರ್ತಿ ಮಾನಸಿಕವಾಗಿ ಜರ್ಜರಿತವಾಗಿ ಬದುಕುವಾಗ ಅದಕ್ಕೆ ಕಾರಣರಾದವರು 5-7 ವರ್ಷ ಮಾತ್ರ ಜೈಲುವಾಸ ಅನುಭವಿಸುವುದು, ಮತ್ತೆ ಹೊರಬಂದು ತಮ್ಮ ಹಳೆಯ ಚಾಳಿಗಳನ್ನು ಮುಂದುವರೆಸುವುದು ಖಂಡಿತವಾಗಿ ಸರಿಯಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ ಆಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಆಗಬೇಕು. ಅವರನ್ನು ಎನ್ಕೌಂಟರ್ ಮಾಡಿ ಸಾಯಿಸಿ ಹೀಗೆಲ್ಲ ಹೇಳಿಕೆ ಕೊಡುವವರು ಇದ್ದಾರೆ. ದೇಶದ ಕಾನೂನನ್ನು ಗೌರವಿಸುವವರು ಹಾಗೆ ಹೇಳುವುದಿಲ್ಲ! ಅತ್ಯಾಚಾರಗಳು ಸಮಾಜದ ಪುರುಷ ಪ್ರಧಾನವಾದ ಮಾನಸಿಕತೆಯ ಪ್ರತೀಕ ಎನ್ನುವವರು ಕೂಡಾ ಇದ್ದಾರೆ. ಅದನ್ನು ಕೂಡ ನಾನು ಒಪ್ಪುವುದಿಲ್ಲ. ಅವುಗಳು ಕೇವಲ ವಿಕೃತ ಮನಸ್ಸಿನ ಪ್ರತೀಕಗಳು. ಕುಡಿತ, ಧೂಮಪಾನ, ಡ್ರಗ್ಸ್ ಮೊದಲಾದ ವ್ಯಸನಗಳು, ಸಾಮಾಜಿಕ ಜಾಲತಾಣಗಳು ಹರಡುವ ವಿಕೃತ ಮನಸ್ಥಿತಿ, ಸ್ವೇಚ್ಚೆಯ ಹೆಸರಿನಲ್ಲಿ ಹಾದಿ ತಪ್ಪುತ್ತಿರುವ ಯುವಕ ಯುವತಿಯರು, ಮಕ್ಕಳು ಮಾಡಿದನ್ನೆಲ್ಲ ಸಮರ್ಥನೆ ಮಾಡಲು ಹೊರಡುವ ಪೋಷಕರು ಇವರೆಲ್ಲರೂ ಅತ್ಯಾಚಾರದ ಪ್ರಕರಣಗಳಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ. ಕ್ಯಾರೆಕ್ಟರ್ ಅನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಅದು ಗಂಡು ಮಕ್ಕಳಿಗೆ ಕೂಡ ಅನ್ವಯ ಆಗುತ್ತದೆ. ಹೆಣ್ಣು ಮಕ್ಕಳಿಗೆ ಬಿಗಿ ಬಂಧನಗಳನ್ನು ಹಾಕಿ ಗಂಡು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವ ಪೋಷಕರನ್ನು ನಾನು ನೋಡಿದ್ದೇನೇ. ಅದು ಖಂಡಿತ ತಪ್ಪು. ತುಂಬಾ ತಡವಾಗಿ ಮನೆಗೆ ಬರುವ ಮಗಳನ್ನು ಕಾರಣ ಕೇಳುವ ಅಪ್ಪ ಅಮ್ಮಂದಿರು ಗಂಡು ಮಕ್ಕಳಿಗೆ ಕೂಡ ಕಾರಣ ಕೇಳಬೇಕು ಅಲ್ವಾ? ಗೆಳೆಯ ಗೆಳತಿಯರಾಗಲಿ, ಪ್ರೇಮಿಗಳಾಗಲಿ ರಾತ್ರಿ ಕತ್ತಲಾದ ನಂತರ ನಿರ್ಜನ ಪ್ರದೇಶ ಹುಡುಕಿಕೊಂಡು ಹೋಗುವ ಅಗತ್ಯ ಇದೆಯಾ? ಇಡೀ ಜಗತ್ತಿಗೆ ಸಿಸಿ ಕ್ಯಾಮರಾ ಹಾಕಿಕೊಂಡು ಪೊಲೀಸರು ಕಾವಲು ಕಾಯಲು ಸಾಧ್ಯ ಇದೆಯಾ? ಎಲ್ಲವನ್ನೂ ಪೊಲೀಸರ ತಲೆಗೆ ಕಟ್ಟಿ, ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವ ನಮ್ಮ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಗತ್ತಿನ ಎಲ್ಲಿ ಅತ್ಯಾಚಾರ ನಡೆದರೂ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ, ಸಂತ್ರಸ್ತೆಗೆ ನ್ಯಾಯವನ್ನು ಕೊಡಿಸುತ್ತೇವೆ ಎಂದು ಮಂತ್ರಿಗಳು, ಶಾಸಕರು ತುಂಬಾ ಗಟ್ಟಿಯಾಗಿ ಹೇಳಬೇಕು. ಅದನ್ನು ಬಿಟ್ಟು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ರೇಪ್ ನಡೆದಾಗ ಅದರಲ್ಲಿ ತಮ್ಮ ರಾಜಕೀಯ ಲಾಭ ಪಡೆಯಲು ಪ್ರಯತ್ನ ಮಾಡುವರು ಕೂಡ ಅಪರಾಧಿಗಳು ಅಲ್ಲವೇ? ಇನ್ನು ಒಂದು ಪ್ರಮುಖವಾದ ಮಾತನ್ನು ಹದಿಹರೆಯದ ಮಕ್ಕಳ ಅಪ್ಪನಾಗಿ ನಾನು ಹೇಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸ ಇದೆ. ನಮ್ಮ ಮಕ್ಕಳ ಮೇಲೆ ನಮಗೆ ನಂಬಿಕೆ ಇದೆ. ಅವರು ಎಲ್ಲಿ ಬೇಕಾದರೂ ಹೋಗಬಹುದು. ಎಷ್ಟು ಲೇಟ್ ಆದರೂ ಮನೆಗೆ ಬರಬಹುದು. ನನ್ನ ಮಕ್ಕಳ ನಿಜವಾದ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೊಡ್ತೇವೆ. ನನ್ನ ಮಗ, ಮಗಳು ಮಧ್ಯರಾತ್ರಿ ಕಳೆದು ಎಷ್ಟು ಲೇಟ್ ಆದ್ರೂ ಆನ್ಲೈನ್ ಇರುತ್ತಾರೆ. ಅದನ್ನು ಪ್ರಶ್ನೆ ಮಾಡಲು ನೀವ್ಯಾರು? ತನ್ನ ಇಷ್ಟ ಪಡುವ ಗೆಳೆಯ, ಗೆಳತಿಯರ ಜೊತೆಗೆ ಬಾರ್, ಪಬ್, ರೆಸಾರ್ಟ್ಸ್, ಡ್ಯಾನ್ಸಿಂಗ್ ಬಾರ್, ಹುಕ್ಕಾ ಬಾರಗಳಿಗೆ ಹೋದರೆ ಏನು ತಪ್ಪು? ಅವರು ನಮ್ಮ ಕಾಲದವರ ಹಾಗೆ ಮನೆಯ ಮೂಲೆಯಲ್ಲಿ ಕಳೆದುಹೋಗಬೇಕೆ? ಹೀಗೆಲ್ಲ ಪ್ರಶ್ನೆ ಮಾಡುವ ತುಂಬಾ ಅಡ್ವಾನ್ಸ್ ಆದ ಪೋಷಕರನ್ನು ನಾನು ನೋಡಿರುವೆ. ಅಂತವರು ಎಲ್ಲಾ ಕಾಲ ಮಿಂಚಿ ಹೋದ ನಂತರ ಅಯ್ಯೋ! ಎಂದು ಕಣ್ಣೀರನ್ನು ಸುರಿಸುತ್ತಾ ಸರಕಾರವನ್ನು, ಪೊಲೀಸರನ್ನು ಬಯ್ಯಬಾರದು ಅಲ್ಲವೇ? ನಮ್ಮ ಮಾಧ್ಯಮಗಳಿಗೂ ಅತ್ಯಾಚಾರವು ಪ್ರಮುಖ TRP ಸರಕು ಆಗಬಾರದು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಕಾಲೇಜು ಹುಡುಗಿ ಒಬ್ಬಳು ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಅಂದಿದ್ದಳು. ಸ್ವಲ್ಪ ಮಟ್ಟಿಗೆ ಅದನ್ನಾದರೂ ಒಪ್ಪೋಣ. ಸಿನೆಮಾ ನಟಿ ಒಬ್ಬಳು ಮೂರು ಬಾರಿ ಮದುವೆಯಾದಳು ಅಂದಾಗ ಇನ್ನೊಬ್ಬಳು ಮಾಡರ್ನ್ ಹುಡುಗಿ ಅದು ಅವಳ ಪರ್ಸನಲ್ ಲೈಫ್ ಅಲ್ವಾ? ಅವಳದ್ದು ಏನೂ ತಪ್ಪಿಲ್ಲ ಅಂದಿದ್ದಳು! ಅದನ್ನು ಕೂಡ ಸ್ವಲ್ಪ ಮಟ್ಟಿಗೆ ಒಪ್ಪಬಹುದು. ಮೂರು ಮದುವೆಯಾಗಿ ಸುಖವನ್ನು ಅನುಭವಿಸಿದ ದಕ್ಷಿಣ ಭಾರತದ ಖ್ಯಾತ ನಟ ಒಬ್ಬ ನಾಲ್ಕನೇ ಹೆಂಗಸಿನ ಸೆರಗನ್ನು ಹಿಡಿದು ಲಿವಿಂಗ್ ಟುಗೆದರ್ ರಿಲೇಶನ್ ಹೊಂದುತ್ತಾನೆ. ಅವನ ಮಗಳು (ಅವಳು ಕೂಡ ಸಿನೆಮಾ ನಟಿ) ನನಗೆ ಕೂಡ ಅಪ್ಪನ ಹಾಗೆ ಮದುವೆಗಳಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ! ಅವರೆಲ್ಲರೂ ಸೆಲೆಬ್ರಿಟಿಗಳು, ಅವರನ್ನು ಫಾಲೋ ಮಾಡುವ ಬಹುದೊಡ್ಡ ಯುವಪಡೆ ಇದೆ ಅನ್ನುವುದನ್ನು ನಾವು ಯಾರೂ ಮರೆಯಬಾರದು. ಇಂಥವರ ನಡೆ ನುಡಿಗಳನ್ನು ಬ್ಲೈಂಡ್ ಆಗಿ ಸಮರ್ಥನೇ ಮಾಡುವ ಹಾಗೂ ಕಾಪಿ ಮಾಡುವ ಯುವಕ, ಯುವತಿಯರು ನಮಗೆ ಎಲ್ಲಾ ಕಾಲೇಜುಗಳಲ್ಲಿ ಸಿಗುತ್ತಾರೆ! ಇನ್ನೂ ಒಬ್ಬ ಕಾಲೇಜು ಹುಡುಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅಪ್ಪ ನನ್ನ ಅಮ್ಮನ ಜೊತೆಗೆ ಮೂವತ್ತು ವರ್ಷಗಳ ಕಾಲ ಅದು ಹೇಗೆ ಜೊತೆಯಾಗಿ ಬದುಕಿದರೋ? ನನಗೆ ಅವರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ಹೇಳಿ ಕಾಲೇಜು ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ! ಮದುವೆಯಾದ ಗಂಡ, ಹೆಂಡತಿಯರು ಪರಸ್ಪರ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿ ನಿಂತು 30-40 ವರ್ಷಗಳ ಕಾಲ ಜೊತೆಯಾಗಿ ಬದುಕಿದ ನೂರಾರು ಉದಾಹರಣೆಗಳು ಒಂದೆಡೆ! ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮನ ಮುಂದೆ ಬಂದು (ಮದುವೆಯಾದ ಕೇವಲ ಒಂದೆರಡು ತಿಂಗಳಲ್ಲಿ) ಅವನ ಬಗ್ಗೆ ಇಷ್ಟುದ್ದ ಚಾಡಿ ಹೇಳಿ ಮದುವೆ ಮುರಿಯಲು ಸಿದ್ದರಾಗುವ ಹೆಣ್ಮಕ್ಕಳು ಇನ್ನೊಂದೆಡೆ! ಇಷ್ಟವಾಗದ ಗಂಡನ ಜೊತೆಗೆ ಜೀವನ ಪೂರ್ತಿಯಾಗಿ ಬದುಕಲು ನಾನು ನನ್ನ ಅಮ್ಮ ಅಲ್ಲ ಎಂದು ಧಿಮಾಕು ತೋರುವ ಮಗಳು ಮತ್ತೊಂದು ಕಡೆ! ಐವತ್ತು ವರ್ಷಗಳ ದಾಂಪತ್ಯವನ್ನು ಯಶಸ್ವೀ ಆಗಿ ಪೂರೈಸಿದ ಹೆಂಡತಿ ತೀರಿ ಹೋದಾಗ ಪುಟ್ಟ ಮಗುವಿನ ಹಾಗೆ ಜೋರಾಗಿ ಕಣ್ಣೀರು ಸುರಿಸಿದ ಗಂಡ ಇನ್ನೊಂದು ಕಡೆ! ಮದುವೆಯ ಮೊದಲ ರಾತ್ರಿಯೇ ನನ್ನ ಮೈ ಮುಟ್ಟಿದರೆ ಜಾಗ್ರತೆ, ನಾನು ಬೇರೆ ಒಬ್ಬನನ್ನು ಪ್ರೀತಿ ಮಾಡ್ತಾ ಇದ್ದೇನೆ. ಹೆತ್ತವರ ಒತ್ತಾಯಕ್ಕೆ ನಾನು ಈ ಮದುವೆ ಆಗಬೇಕಾಯಿತು. ನನಗೆ ಡೈವೋರ್ಸ್ ಬೇಕು ಎಂದು ಕೇಳುವ ಹುಡುಗಿ ಇನ್ನೊಂದೆಡೆ! ಸಮಾಜ ಯಾವ ಕಡೆ ಹೋಗ್ತಾ ಇದೆ? ☑ಲೇಖನ : ರಾಜೇಂದ್ರ ಭಟ್ ಕೆ, ಜೇಸಿಐ ರಾಷ್ಟ್ರಮಟ್ಟದ ತರಬೇತುದಾರ.

ಈ ಬಾರಿ ಡಾಕ್೯ ಅಲೈಟ್ ವೇಷಧಾರಿಯಾಗಿ ಬರಲಿದ್ದಾರೆ ರವಿ ಕಟಪಾಡಿ - ನಮ್ಮ ಕೈಲಾದಷ್ಟು ಸಹಾಯ ಮಾಡಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗೋಣ

Thumbnail
Posted On: 29 Aug 2021, 11:42 PM

ಉಡುಪಿ : ಕೃಷ್ಣಜನ್ಮಾಷ್ಟಮಿಯೆಂದರೆ ಉಡುಪಿಯ ಜನತೆಗೆ ಎಲ್ಲಿಲ್ಲದ ಸಂತೋಷ. ಅಷ್ಟಮಿ ಎಂದಾಕ್ಷಣ ನಮಗೆ ನೆನಪು ಆಗುವುದು ವೇಷಧಾರಿಗಳು. ವೇಷಧಾರಿ ಎಂದಾಗ ನಮಗೆ ಪ್ರಪ್ರಥಮವಾಗಿ ನೆನಪು ಆಗುವುದು ರವಿ ಕಟಪಾಡಿ. ಇವರು 9 ವರ್ಷದಿಂದ ವಿವಿಧ ರೀತಿಯ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಈ ವರ್ಷ ಡಾರ್ಕ್ ಅಲೈಟ್ ಎಂಬ ವಿಭಿನ್ನ ರೀತಿಯ ವೇಷ ಧರಿಸಿ ಮಲ್ಪೆ ಹಾಗೂ ಉಡುಪಿಯ ಆಸುಪಾಸಿಗೆ 30 ಹಾಗೂ 31 ರಂದು ಬರಲಿದ್ದಾರೆ. ಈಗ ಹಣ ಕೊಡಲು ಸ್ವಲ್ಪ ಕಷ್ಟ ಆದರೂ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಇಂತವರಿಗೆ ಸಹಾಯ ಮಾಡೋಣ.

ಕುಂದಾಪುರ : ಬ್ರಹ್ಮಶ್ರೀ ನಾರಾಯಣಗುರುಗಳ 167 ನೇ ಜನ್ಮ ಜಯಂತಿಯ ಪ್ರಯುಕ್ತ ವಾಹನ ಜಾಥಾ

Thumbnail
Posted On: 29 Aug 2021, 10:06 PM

ಕುಂದಾಪುರ : ಶ್ರೀ ನಾರಾಯಣಗುರು ಯುವಕ ಮಂಡಲ ಕುಂದಾಪುರ ಇವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿಯ ಪ್ರಯುಕ್ತ ಬೃಹತ್ ವಾಹನ ಜಾಥಾ ಕಾರ್ಯಕ್ರಮವನ್ನು ಇಂದು ಹಿರಿಯರಾದ ಕಾಳಪ್ಪ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಅಧ್ಯಕ್ಷರು ಅಶೋಕ್ ಪೂಜಾರಿ ಹಾಗೂ ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಅಧ್ಯಕ್ಷರಾದ ಶ್ರೀನಾಥ ಕಡ್ಗಿಮನೆ ಚಾಲನೆ ನೀಡಿದರು. ಶ್ರೀ ನಾರಾಯಣ ಗುರು ಮಂದಿರದಿಂದ ಸರಿ ಸುಮಾರು 50 ಕಾರುಗಳ ಮೂಲಕ ಪುರ ಮೆರವಣಿಗೆ ಹೊರಟಾಗ ಹಲವಾರು ಕಡೆ ಜಾತಿ, ಮತ ಬೇಧವಿಲ್ಲದೆ ಪುರಸಭೆ ಸದಸ್ಯರುಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಶಾಸ್ತ್ರಿ ಸರ್ಕಲ್ ಸುತ್ತುವರೆದು ಚರ್ಚ್ ರಸ್ತೆಯ ಮೂಲಕ ಕೋಡಿ ಚಕ್ರಮ್ಮ ದೇವಸ್ಥಾನ ತಲುಪಿ ವಾಹನ ಜಾಥ ಸಂಪನ್ನಗೊಂಡಿತು. ತದನಂತರ ಕೋಡಿ ಚಕ್ರಮ್ಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿ ಪ್ರಯುಕ್ತ ಗುರುಗಳಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ‘ನಾರಾಯಣ ಗುರು ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರು. ಕೇರಳದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದವರು. ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾನುಭಾವರು. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಜಾತ್ಯಾತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕರಾಗಿದ್ದ ಅವರು ಓರ್ವ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದರು. ನಾರಾಯಣ ಗುರುಗಳ ಜೀವನಾದರ್ಶಗಳ ಕುರಿತು ಸಭೆಯನ್ನುದ್ದೇಶಿಸಿ ಗಣ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀನಾಥ ಕಡ್ಗಿಮನೆ ಅಧ್ಯಕ್ಷರು ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ, ಗಣೇಶ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಬೈಂದೂರು, ಗೋಪಾಲಕೃಷ್ಣ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಕೋಡಿ, ಗೋಪಾಲ ಪೂಜಾರಿ ಮೊಕ್ತೇಸರು ಚಕ್ರಮ್ಮ ದೇವಸ್ಥಾನ ಕೋಡಿ, ಶಂಕರ್ ಪೂಜಾರಿ ಕೋಡಿ, ಮಹೇಶ್ ಪೂಜಾರಿ, ಗ್ರಾಮಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ : ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸ್ವಚ್ಚತಾ ಕಾರ್ಯ

Thumbnail
Posted On: 29 Aug 2021, 09:42 PM

ಕಾಪು : ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರ್ವ ಮಂಡಲದ ಸೇವಾ ಚಟುವಟಿಕೆಯ ಅಂಗವಾಗಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣ ವನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ರಮವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಪು ತಾಲೂಕಿನ ಸೇವಾ ಪ್ರಮುಖರಾದ ಸುಬ್ರಮಣ್ಯ ವಾಗ್ಳೆ, ಸೇವಾಭಾರತಿಯ ಪ್ರಮುಖರಾದ ಗಿರಿಧರ್ ಪ್ರಭು ಶಿರ್ವ, ಪ್ರವೀಣ್ ಪೂಜಾರಿ ಇವರ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ವಯಂಸೇವಕರು ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾಜಸೇವಕರಾದ ಶ್ರೀನಿವಾಸ ಶೆಣೈ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಈ ಕಾರ್ಯಕ್ರಮದ‌ ಬಗ್ಗೆ ವೈದ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ಭಾಗವಹಿಸಿದ ಸ್ವಯಂಸೇವಕರಿಗೆ ಧನ್ಯವಾದ ಅರ್ಪಿಸಲಾಯಿತು. ಸಂಘದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ರೋಟರಿ ಶಂಕರಪುರ : ವಿದ್ಯಾಸೇತು ವಿದ್ಯಾ ಅಭಿಯಾನದ ಉದ್ಘಾಟನೆ

Thumbnail
Posted On: 26 Aug 2021, 03:24 PM

ಕಾಪು : ರೋಟರಿ ಶಂಕರಪುರ ವತಿಯಿಂದ ವಿದ್ಯಾ ಸೇತು ವಿದ್ಯಾ ಅಭಿಯಾನದ ಉದ್ಘಾಟನೆಯನ್ನು ವಲಯ ಐದರ ಎಜುಕೇಶನ್ ಮತ್ತು ಲಿಟರಸಿ ಕೋಆರ್ಡಿನೆಟರ್ ಆಗಿರುವ ಶ್ರೀನಿವಾಸ್ ರಾವ್ ಮಾಡಿದರು. ಸೈಂಟ್ ಜೋನ್ಸ್ ಕನ್ನಡ ಮಾಧ್ಯಮ ಶಾಲೆ ಶಂಕರಪುರದ ವಿದ್ಯಾರ್ಥಿಗಳಿಗೆ 52 ಪುಸ್ತಕ, ಇನ್ನಂಜೆ ಕನ್ನಡ ಮಧ್ಯಮ ಶಾಲೆಗೆ 42 ಪುಸ್ತಕ ಮತ್ತು ಪಾಂಗಾಳ ವಿದ್ಯಾವರ್ಧಕ ಶಾಲೆಗೆ 31 ಪುಸ್ತಕವನ್ನು ವಿತರಣೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ಲಾವಿಯಾ ಮೆನೆಜಸ್ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಲಯ 5 ರ ವಲಯ ಸೇನಾನಿ ಅನಿಲ್ ಡೇಸಾ, ವಲಯ 5 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಮತ್ತು ವಲಯ ತರಬೇತುದಾರರಾದ ನವೀನ್ ಅಮೀನ್, ಸೈ0ಟ್ ಜೋನ್ಸ್ ಶಂಕರಪುರದ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೋಡ್ರಿಗಸ್, ನಿಕಟಪೂರ್ವ ಅಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ಸಂದೀಪ್ ಬಂಗೇರ, ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಇನ್ನಂಜೆ ಶಾಲಾ ಮುಖ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ಪಾಂಗಾಳ ಶಾಲೆ ಮುಖ್ಯೋಪಾಧ್ಯಾಯರಾದ ಫ್ರಾನ್ಸಿಸ್, ಅಧ್ಯಾಪಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ : ಪ್ರಶಾಂತ್ ಕುಲಾಲ್ ಗೆ 96.48% ಅಂಕ

Thumbnail
Posted On: 26 Aug 2021, 10:23 AM

ಕಾಪು : 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೈಂಟ್ ಜಾನ್ ಶಾಲೆ ಶಂಕರಪುರ ಇಲ್ಲಿಯ ವಿದ್ಯಾರ್ಥಿ ಪ್ರಶಾಂತ್ ಕುಲಾಲ್ ಅವರು (603) 96.48% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಶಂಕರಪುರದ ದುರ್ಗಾನಗರದ ಬಿಳಿಯಾರು ಭಾಸ್ಕರ್ ಕುಲಾಲ್ ಹಾಗೂ ಶಕುಂತಲಾ ದಂಪತಿಯ ಸುಪುತ್ರ.

ಬಂಧಗಳಿಲ್ಲದ ಕರ್ಮ ನಿರತ ಶ್ರೀಕೃಷ್ಣ

Thumbnail
Posted On: 26 Aug 2021, 10:06 AM

"ಕರ್ಮ"ವೇ ಪ್ರಧಾನವಾಗಿ ಅದೇ ಧರ್ಮವಾಗಿ ನಿರ್ವಹಿಸಲ್ಪಟ್ಟ ಅವತಾರ ಕೃಷ್ಣಾವತಾರ . ಸಾಮಾನ್ಯವಾಗಿ ಕರ್ಮವು 'ಬಂಧ'ವಾಗಿ ವ್ಯಕ್ತವಾಗುವುದಿದೆ . ಯಾವುದೋ ಬಂಧಕ್ಕೆ ಬದ್ಧವಾಗಿ ಕರ್ಮ ಕರ್ತವ್ಯವಾಗುವುದನ್ನೇ ಕಾಣುತ್ತಿರುವಂತೆಯೇ ಬಂಧ ರಹಿತವಾದ ಕರ್ಮವೇ ಲಕ್ಷ್ಯವಾಗಿರುವ ಒಂದು ವ್ಯಕ್ತಿತ್ವ ದ್ವಾಪರಯುಗದಲ್ಲಿ ಗಮನ ಸೆಳೆಯುತ್ತದೆ ಅದೇ 'ಕೃಷ್ಣ' . ಸಮಗ್ರ ಕೃಷ್ಣಾವತಾರದಲ್ಲಿ ತಾನು ಸ್ವೀಕರಿಸಿದ , ತನಗೆ ಕರ್ತವ್ಯವಾಗಿರುವ ಕರ್ಮದ ಅನುಷ್ಠಾನವೇ ನಿಚ್ಚಳವಾಗುತ್ತದೆ . ಕೃಷ್ಣ ಈ ಮನಃಸ್ಥಿತಿಯನ್ನು ಬಾಲ್ಯದಿಂದಲೇ ರೂಢಿಸಿಕೊಂಡು ಬಂದ . ದ್ವಾಪರಾಯುಗದಲ್ಲಿ ಸನ್ನಿಹಿತವಾದ ಕುರುಕ್ಷೇತ್ರ ಸಂಗ್ರಾಮದಲ್ಲಿ ಪ್ರತಿಪಾದಿಸಿದ . 'ಬಂಧ' ಎಂಬ ಕಟ್ಟನ್ನು ಕಿತ್ತೊಗೆಯಬಹುದು , 'ಕರ್ಮದ' ಮುಂದೆ 'ನಿಯಮವನ್ನು' ತಿರಸ್ಕರಿಸಿದರೆ ಪ್ರಮಾದವಲ್ಲವೇ ಅಲ್ಲ ಎಂಬುದು ಕೃಷ್ಣನ ನಿಲುವು ಆಗಿದ್ದಿರಬೇಕು. ಬಂಧ ರಹಿತವಾದ ಕರ್ಮವೇ ಧರ್ಮ .ಇದು ಕೃಷ್ಣ ಸಾಧಿಸಿದ ಪರಮ ಧರ್ಮ ,ಇದು ವಿಚಲಿತವಾಗದ ಮಾನವಧರ್ಮ . ಬಾಲ್ಯಕ್ಕೆ ಪ್ರೀತಿಯ , ಬಾಂಧವ್ಯದ ಮಾಧುರ್ಯವನ್ನು ಒದಗಿಸಿದ ನಂದಗೋಕುಲ , ಗೋಪಾಲಕರು , ಗೋಪಿಯರು , ಗೋವುಗಳನ್ನು ಬಿಟ್ಟು ಮಧುರೆಗೆ ಹೊರಟ ಕೃಷ್ಣ ಮತ್ತೆ ಗೋಕುಲಕ್ಕೆ ಬರಲೇ ಇಲ್ಲ .ಕೊಳಲನ್ನು ನುಡಿಸಲೇ ಇಲ್ಲ . ಆದರೆ ಕಿರೀಟದಲ್ಲಿ ಒಂದು ನವಿಲುಗರಿ ಮಾತ್ರ ಉಳಿಯುತ್ತದೆ . ಗೋಕುಲದಲ್ಲಿ ಏರ್ಪಟ್ಟ ಬಾಂಧವ್ಯದ ಬಂಧ ತಾತ್ಕಾಲಿಕವಾಗಿ ಮಾತ್ರ ಇರುತ್ತದೆ . ಲಕ್ಷ್ಯ ಪ್ರಧಾನವಾದಾಗ ಬಂಧದಿಂದ ಕಳಚಿಕೊಳ್ಳುವ ಕೃಷ್ಣನನ್ನು ಬಂಧವಿಮೋಚಕನೆಂದು ಹೊಗಳಲಾಯಿತೇ ಹೊರತು ನಿಷ್ಕರುಣಿ ಎಂದು ಗೋಪರು - ಗೋಪಾಲಕರು ಆಕ್ಷೇಪಿಸಲೇ ಇಲ್ಲ . ಬಂಧ ಮತ್ತ ಕರ್ಮಗಳ ನಡುವೆ ಅಂತರವೇ ಇಲ್ಲ ಎನ್ನುತ್ತಾ ಕೊನೆಗೆ ಈ ಅಂತರ ಸುದೀರ್ಘವಾಗಿದೆ ಎನ್ನುವುದನ್ನೂ ಪ್ರತಿಪಾದಿಸುತ್ತಾನೆ ಕೃಷ್ಣ . ಕರ್ತವ್ಯದ ಮುಂದೆ "ಬಂಧ" ಗೌಣ ಎಂದು ಮುಂದೆ ಬದುಕಿನ ದೀರ್ಘ ಅವಧಿಯಲ್ಲಿ ಸಾಧಿಸುವುದನ್ನು ಗಮನಿಸ ಬಹುದು . ಮಾವ ಕಂಸನ ವಧೆ ಬಂಧ ರಹಿತವಾದ ಕರ್ಮವಲ್ಲದೆ ಮತ್ತೇನು . ಮಾವ ಎಂಬ ಬಾಂಧವ್ಯದ ಬಂಧಕ್ಕೆ ಒಳಗಾಗದೆ ಎಸಗಿದ ಕರ್ತವ್ಯ . ಕುಬ್ಜೆಯ ವಕ್ರತೆಯನ್ನು ತಿದ್ದಿದ್ದು ಕೇವಲ 'ಕರ್ಮ' ಮಾತ್ರ ,ಇಲ್ಲಿ ಯಾವುದೇ ಬಂಧುತ್ವದ ಬಂಧವಿಲ್ಲ . ಕೃಷ್ಣನ ಮದುವೆಗಳೆಲ್ಲ ಸಂದರ್ಭದ ಅನಿವಾರ್ಯತೆಯೇ ಆಗಿದ್ದುವು . ನರಕಾಸುರನ ಬಂಧನದಲ್ಲಿದ್ದ ಸ್ತ್ರೀಯರನ್ನು ಬಿಡಿಸಿದ ಕೃಷ್ಣ ಅವರಿಗೆ ಬದುಕು ಕೊಡುತ್ತಾನೆ ,ಎಂದರೆ ಕೃಷ್ಣ ರಕ್ಷೆ ಕೊಡುತ್ತಾನೆ , ಜೀವನಕ್ಕೆ ಭದ್ರತೆಯನ್ನು ಕೊಡುತ್ತಾನೆ .ಇದು ಆತನ ಕರ್ತವ್ಯವಾಗಿತ್ತು . ದ್ವಾರಕೆಯ ನಿರ್ಮಾಣ ಕಾರ್ಯವು ಯದುಗಳಿಗೆ ರಾಜತ್ವ ಇಲ್ಲ ಎಂಬ ಶಾಪ ವಾಕ್ಯದ ಮುಂದುವರಿಕೆಗೆ ಒಡ್ಡಿದ ತಡೆ .ಐವತ್ತೇಳನೇಯ ರಾಜ್ಯವಾಗಿ ಮೂಡಿದ ರಾಜ್ಯದಲ್ಲಿ ಅಣ್ಣ ಬಲರಾಮನಿಗೆ ಪಟ್ಟಕಟ್ಟುತ್ತಾನೆ ,ತಾನು ಹೆಸರಿಗೆ ಯುವರಾಜನಾಗಿ ಜವಾಬ್ದಾರಿಯೇ ಇಲ್ಲದವನಂತೆ ವರ್ತಿಸುತ್ತಾ ನಿರ್ಲಿಪ್ತತೆ ಮೆರೆಯುತ್ತಾನೆ. ಅಸಾಧ್ಯವನ್ನು ಸಾಧ್ಯವೆಂದು ಮಾಡಿ ತೋರಿಸುವ ಕೃಷ್ಣ ಅಘಟಿತ ಘಟನಾ ಪಟುವಾಗಿ ತೋರುತ್ತಾನೆ . ಈ ಸಂದರ್ಭದಲ್ಲಿ ಬಂಧವನ್ನು ಉಳಿಸಿಕೊಳ್ಳುವುದೇ ಇಲ್ಲ .ತನ್ನ ಪಾಲಿನ ಕರ್ಮ ಎಂದು ನಿರ್ವಹಿಸುತ್ತಾನೆ . ಹಾಗೆಯೇ ಬದುಕುತ್ತಾನೆ .ತನ್ನನ್ನು ಬಂಧುವೆಂದು ಭಾವಿಸಿದವರಿಗೂ ದಂಡನೆಯನ್ನು ಕೊಟ್ಟೇಕೊಟ್ಟ .ದ್ರೌಪದಿಗೆ ಅಕ್ಷಯಾಂಬರ ಕೊಡುವುದು ಕೃಷ್ಣನಿಗೆ ಧರ್ಮವಾಗುತ್ತದೆ, ಆದರೆ ಎಂತಹ ಪರೀಕ್ಷೆಯನ್ನು ಒಡ್ಡಿದ (ಬಾಲ್ಯದಲ್ಲಿ ಗೋಪಿಕೆಯರ ಸೀರೆ ಕದ್ದ ದೋಷಕ್ಕೆ ಅಕ್ಷಯಾಂಬರ ಪ್ರಧಾನ ಪ್ರಾಯಶ್ಚಿತ್ತ ಎಂಬ ವಿಶ್ಲೇಷಣೆಯೂ ಇದೆ). ಪಾಂಡವ ಪಕ್ಷಪಾತಿಯೇ ಹೊರತು ಪಾಂಡವರೊಂದಿಗೆ ಬಾಂಧವ್ಯದ ನಂಟು ಬೆಳೆಸಿಕೊಳ್ಳುವುದಿಲ್ಲ .ಲೌಕಿಕ ಬಾಂಧವ್ಯದ ಹೊರತಾದ ಸ್ನೇಹ ಮಾತ್ರ ಸ್ಪಷ್ಟ . ಧರ್ಮಾತ್ಮರಾದ ಪಾಂಡವರಿಗೂ ಬೇಕಾದುದು ಧರ್ಮಸಮ್ಮತವಾದ ರಾಜ್ಯ ಮಾತ್ರ .ಹಾಗಾಗಿ ಕೃಷ್ಣ , ಧರ್ಮದ ಪಕ್ಷವಹಿಸಿದ . ಯಾಕೆಂದರೆ ಕೃಷ್ಣನದ್ದು ಧರ್ಮ ಸಂಸ್ಥಾಪನೆಗಾಗಿ ಎತ್ತಿದ ಅವತಾರ ತಾನೆ. ಪಾಂಡವರ ಪ್ರತಿನಿಧಿಯಾಗಿ ಆ ಕಾಲದ ಚಕ್ರವರ್ತಿ ಪೀಠದ ಮುಂದೆ ಅದೇ ಮನೆತನದ ದಾಯಾದ್ಯ ಕಲಹದ ನಿವೃತ್ತಿಗೆ ಸಂಧಾನಕಾರನಾಗಿ ಕೃಷ್ಣ ಬರುತ್ತಾನೆ . ಸಾಮಾನ್ಯ ಗೋಪಾಲಕನೊಬ್ಬ ಎಂತಹ ಪಾತ್ರನಿರ್ವಹಿಸುತ್ತಾನೆ ನೋಡಿ . ಇದಕ್ಕೆ ಕೃಷ್ಣನ ಬಂಧ ರಹಿತವಾದ 'ಕರ್ಮ' ಪ್ರಧಾನವಾದ ಜೀವನ ಶೈಲಿ ಕಾರಣ . ಒಂದು ಕಡೆ ಯುದ್ಧ ಅನಿವಾರ್ಯ ,ಏಕೆಂದರೆ ಪ್ರತಿಜ್ಞೆಗಳು ನೆರವೇರಬೇಕು . ಆದರೂ ಕೃಷ್ಣ ಸಂಧಿಗಾಗಿಯೇ ಪ್ರಯತ್ನಿಸುತ್ತಾನೆ . ಅರ್ಧ ರಾಜ್ಯಕ್ಕೆ ಬದಲಾಗಿ ಐದು ಗ್ರಾಮಗಳಾದರೂ ಸಾಕು ಎಂಬಲ್ಲಿಯವರೆಗೆ ವಿನೀತನಾಗಿ ಸಾರಿ ಹೇಳುವಂತೆ ಸಂಧಿಗಾಗಿ ಯತ್ನಿಸುತ್ತಾನೆ . ಫಲಿಸದೇ ಹೋದಾಗ ಧುರವೀಳ್ಯಪಡೆಯುತ್ತಾನೆ . ಪಾಂಡವ ಪ್ರತಿನಿಧಿಯಾದರೂ ಕೌರವನಿಗೆ ಬುದ್ಧಿಹೇಳುತ್ತಾನೆ . ಪಾಂಡವರೆಂಬ ಬಾಂಧವ್ಯದ ಭಾವನೆಗಳಿದ್ದರೆ ಈ ಕ್ರಮದಲ್ಲಿ ವರ್ತಿಸಲಾರ . ಇಂತಹ ನಿರ್ಣಾಯಕ ವೇಳೆಯಲ್ಲೂ ಕೃಷ್ಣ ಕರ್ಮ - ಕರ್ತವ್ಯವನ್ನು ಮಾತ್ರ ಮಾಡುತ್ತಾನೆ .ಬಂಧಗಳಿಲ್ಲದಂತೆ ಕಾರ್ಯವೆಸಗುತ್ತಾನೆ . ಕುರುಕ್ಷೇತ್ರದಲ್ಲಿ ಗೀತಾಚಾರ್ಯನಾದಾಗ ಧರ್ಮ ಯಾವುದು ,ಕರ್ಮ ಯಾವುದು ಎಂಬ ವಿವರದ ಆಧಾರದಲ್ಲಿ ಜೀವನ ಧರ್ಮವನ್ನು ಬೋಧಿಸುತ್ತಾನೆ . ಇದು ಯುದ್ಧಕ್ಕೆ ಅರ್ಜುನನ್ನು ಸಜ್ಜುಗೊಳಿಸುವುದು , ಸ್ವಧರ್ಮ ಮರೆತವನನ್ನು ಎಚ್ಚರಿಸುವುದು , ನಿಯಾಮಕ ಪ್ರತ್ಯೇಕ ಇದ್ದಾನೆ ನೀನು ನಿಮಿತ್ತಮಾತ್ರ ಎಂದು ಅರ್ಜುನನಿಗೆ ತಿಳಿಹೇಳುತ್ತಾ "ವಿರಾಡ್ - ದರ್ಶನ" ತೋರಿಸುತ್ತಾನೆ . ತಾನು ಪ್ರತಿಜ್ಞಾಬದ್ಧನಿದ್ದರೂ ಚಕ್ರ ಧರಿಸುತ್ತಾನೆ . ಭೀಷ್ಮನ ಪ್ರತಿಜ್ಞೆ ನೆರವೇರುವಂತೆ ಮಾಡುತ್ತಾನೆ . ಇದು ಕರ್ಮಾಧ್ಯಕ್ಷನ ಕೆಲಸವಾಗಿ ಕಾಣುವುದಿಲ್ಲವೇ . ಅಭಿಮನ್ಯು ಸಹಿತ ಆತ್ಮೀಯ ಬಂಧುಗಳು ಅಸುನೀಗಿದಾಗ ನಿರ್ಲಿಪ್ತನಂತೆ ವರ್ತಿಸುತ್ತಾನೆ . ಇದೆಲ್ಲ ಕರ್ಮವೇ ಪ್ರಧಾನವಾಗಿ ಸ್ವೀಕರಿಸಲ್ಪಟ್ಟ , ಬಂಧಗಳಿಲ್ಲದ‌ ವ್ಯಕ್ತಿತ್ವಕ್ಕೆ ಮಾತ್ರ ಸಾಧ್ಯವಾದುದು . ಇಂತಹ ನೂರಾರು ಘಟನೆಗಳು ಕೃಷ್ಣನ ಬದುಕಿನಲ್ಲಿದೆ . ಪ್ರತಿ ವಿಷಯದಲ್ಲೂ ಕೃಷ್ಣ ಕರ್ಮಬಂಧಿಯಾಗುವುದಿಲ್ಲ ನಿಷ್ಕಾಮ 'ಕರ್ಮ' ನಿರತನಾಗಿ ಅನಾವರಣಗೊಳ್ಳುತ್ತಾನೆ . ಭೀಷ್ಮರಿಗೆ ಅದನ್ನೆ ತಿಳಿಹೇಳುತ್ತಾನೆ " ನಿಮ್ಮ ಕರ್ಮ , ಬಂಧ ಲಕ್ಷ್ಯವಾಗಿರುವಂತಹದ್ದು . " ನನ್ನದು "ಕರ್ಮಮಾತ್ರ" ಬಂಧ ರಹಿತವಾಗಿರುವಂತಹದ್ದು ಎಂದು .ಹೀಗೆ ಕೃಷ್ಣ ಎಂಬ ವ್ಯಕ್ತಿತ್ವವನ್ನು ಪ್ರವೇಶಿಸಿದಷ್ಟು ದರ್ಶನ ಕೊಡುತ್ತಲೇ ಇರುತ್ತದೆ .ಅರ್ಜುನ ಕಂಡ "ವಿರಾಡ್ - ದರ್ಶನ" ದ ಹರವು ಎಷ್ಟು ವಿಸ್ತಾರವಾಗಿಲ್ಲ ! ಗೀತೆಯ ಅನನ್ಯತೆ ಎಷ್ಟು ಗಾಢವಾಗಿಲ್ಲ..? | ಅಟ್ಟೆಮಿ - ಪೇರರ್ಘ್ಯೆ| ಅಷ್ಟಮಿ ಪರ್ವದಿನದಂದು ಹಗಲು ಉಪವಾಸವಿದ್ದು ರಾತ್ರಿ 'ತಿಂಗೊಲು ಮೂಡ್ನಗ' ( ಚಂದ್ರೋದಯವಾಗುವ ವೇಳೆ) ಸ್ನಾನಮಾಡಿ ಮನೆಯ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಬಿಲ್ವಪತ್ರೆ ಅರ್ಪಿಸಿ ಹಾಲು ಎರೆಯುವ ( ಪೇರರ್ಘ್ಯೆ ಬುಡ್ಪುನಿ ) ಸರಳ - ಮುಗ್ಧ ಆಚರಣೆ ನಮ್ಮಲ್ಲಿ ಇದೆ . ಚಂದ್ರೋದಯದ ವರೆಗೆ ಸಮಯ ಕಳೆಯಲು " ಎಕ್ಕಡಿ " ಆಡುವುದು ವಾಡಿಕೆಯಾಗಿತ್ತು . ಪೇರರ್ಘ್ಯೆಗೆ " ಅಡಿಗೆ ಬುಡ್ಪುನಿ " ಎಂದೂ ಹೇಳುವುದಿದೆ . 'ಅಷ್ಟಮಿ ಉಡಾರಿಗೆ' ಎಂಬುದು ವಿಶೇಷ ತಿಂಡಿ . ಇದನ್ನು ಅಷ್ಟಮಿ ಸಂದರ್ಭದಲ್ಲಿ ಮಾಡುವುದು . ಅಕ್ಕಿಯ ಹಿಟ್ಟನ್ನು ಬುಟ್ಟಿಯಲ್ಲಿ ಸುರಿದು ಪಾತ್ರೆಯಲ್ಲಿರಿಸಿ (ತೊಂದುರು) ಬೇಯಿಸುವುದು . ಇದು 'ಉಡಾರಿಗೆ' . | ಅರ್ಘ್ಯ ಪ್ರದಾನ | ಶ್ರೀ ಕೃಷ್ಣ ಜನ್ಮಾಷ್ಟಮಿ / ಶ್ರೀ ಕೃಷ್ಣ ಜಯಂತಿಯಂದು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯದ ವೇಳೆ ವಿವಿಧ ಭಕ್ಷ್ಯ , ಉಂಡೆ - ಚಕ್ಕುಲಿಗಳನ್ನು ಸಮರ್ಪಿಸಿ ಕೃಷ್ಣನಿಗೆ ಪೂಜೆ ಸಲ್ಲಿಸುವುದು ವಾಡಿಕೆ .ಇದರೊಂದಿಗೆ ' ಅರ್ಘ್ಯ ಪ್ರದಾನ ' ಅಷ್ಟಮಿ ಪರ್ವದ ವಿಶೇಷ . ಮನೆ ದೇವರ ಮುಂಭಾಗದಲ್ಲಿ ಭಕ್ಷ್ಯಗಳನ್ನಿಟ್ಟು ಸಮರ್ಪಣೆ ಮಾಡಿ ಆರತಿ ಎತ್ತುವುದು . ಬಳಿಕ ದೇವರ ಸಂಪುಷ್ಟವನ್ನಿರಿಸಿ ಕೃಷ್ಣ , ಬಲರಾಮ , ವಸುದೇವ , ದೇವಕಿ , ನಂದಗೋಪ , ಯಶೋದಾ , ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆಯನ್ನು ಅರ್ಪಿಸಿ ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡುವುದು . ಪನಃ ತುಳಸಿಕಟ್ಟೆಯ ಮುಂಭಾಗದಲ್ಲಿ ಪೂಜೆಮಾಡಿ ಒಡೆದ ತೆಂಗಿನಕಾಯಿಯನ್ನು ಇರಿಸಿ ( ತೆಂಗಿನಕಾಯಿ ಒಡೆದಾಗ ಕಣ್ಣುಳ್ಳ ಭಾಗವನ್ನು 'ಹೆಣ್ಣು' ಎಂದು , ಉಳಿದ ಭಾಗವನ್ನು 'ಗಂಡು' ಎಂದು ಗುರುತಿಸುವುದು ವಾಡಿಕೆ . ಇದರಲ್ಲಿ ಗಂಡು ಭಾಗವನ್ನು ಮಾತ್ರ ಅರ್ಘ್ಯ ಪ್ರದಾನಕ್ಕೆ ಬಳಸುವ ಸಂಪ್ರದಾಯವೂ ಇದೆ . ಕೃಷ್ಣ ಗಂಡು ಮಗುವಲ್ಲವೆ , ಸಾಂಕೇತಿಕವಾಗಿ ಗಂಡು ಭಾಗವನ್ನು ಅರ್ಘ್ಯ ಪ್ರದಾನಕ್ಕೆ ಉಪಯೋಗಿಸಿಕೊಳ್ಳುವುದು .) ಬಿಲ್ವಪತ್ರೆಯನ್ನು ಅರ್ಪಿಸಿ , ಶಂಖದಲ್ಲಿ ಹಾಲು ತುಂಬಿ ಮಂತ್ರಹೇಳುತ್ತಾ ಚಂದ್ರನಿಗೆ ಅರ್ಘ್ಯ ಅರ್ಪಿಸುವುದು ವೈದಿಕ ಕ್ರಮ . ಕೆಲವೆಡೆ ನೀರಿನಲ್ಲೆ ಅರ್ಘ್ಯ ಪ್ರದಾನ ಮಾಡುವ ಸಂಪ್ರದಾಯವಿದೆ . ||ವಿಟ್ಲಪಿಂಡಿ|| ವಿಠಲನ ಪಿಂಡಿ "ವಿಟ್ಲಪಿಂಡಿ" . ಪಿಂಡಿ ಎಂದರೆ ಗಂಟು . ವಿಠಲನಲ್ಲಿ ಇದ್ದದ್ದು ,ವಿಠಲನಲ್ಲಿಗೆ ತಂದದ್ದು ಉಂಡೆ - ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು.ಈ ಗಂಟನ್ನು ಇಟ್ಟು ಕೊಂಡು ,ಅದನ್ನು ಪಡೆಯಲು ಬೇಕಾಗಿ ಆಡಿದ್ದ ಆಟವೇ ಪಿಂಡಿಯೇ ಮುಖ್ಯವಾದ ಆಟವಾಯಿತು,ಅದು 'ವಿಟ್ಲ ಪಿಂಡಿ'ಯಾಯಿತು. ವಿಠಲನಾದ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ ಕೃಷ್ಷ ಲೀಲೆ . ಇದನ್ನು ಉತ್ಸವ ಎಂಬ ನೆನಪಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ . ಗೋಪಿಯರ ಕಣ್ಣು ತಪ್ಪಿಸಿ ಗೋಪರ ಮನೆಗೆ ಹೊಕ್ಕು ಹಾಲು ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಬಿದ್ದ ಮಡಕೆಗಳು‌ ಪುಡಿಯಾದಾಗ "ಮೊಸರು ಕುಡಿಕೆ" ಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರು ತುಂಬಿದ ಮಡಕೆ - ಕುಡಿಕೆಗಳಿಗೆ ಕಲ್ಲು ಎಸೆದು ಅಥವಾ ಕೋಲಿನಿಂದ ರಂಧ್ರಮಾಡಿ ಕೆಳಗೆ ನಿಂತು ಹಾಲಿನ ಧಾರೆಗೆ ಬಾಯಿಕೊಟ್ಟು ಕುಡಿಯುವ ಚೇಷ್ಠೆ ಕೃಷ್ಣನಾಡಿದ "ಮೊಸರು ಕುಡಿಕೆ"ಯ ಅಣಕನ್ನು‌ ಅಥವಾ ಪ್ರತಿಕೃತಿಯನ್ನು‌ ನಾವಿಂದು ಕಾಣುತ್ತೇವೆ . (ಆಧಾರ : ಓದಿದ್ದು ,ಕೇಳಿದ್ದು ,ಬರೆದದ್ದು) ಬರಹ : ಕೆ . ಎಲ್ . ಕುಂಡಂತಾಯ

ಕಲ್ಯಾಣಪುರ ರೋಟರಿ ವತಿಯಿಂದ ಪುಸ್ತಕ ವಿತರಣೆ

Thumbnail
Posted On: 25 Aug 2021, 09:52 AM

ಉಡುಪಿ : ರೋಟರಿ ಜಿಲ್ಲಾ ಯೋಜನೆ ವಿದ್ಯಾಸೇತು ಕಾರ್ಯಕ್ರಮದಡಿ ಕಲ್ಯಾಣಪುರ ರೋಟರಿ ವತಿಯಿಂದ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದ 41 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಈ ದಿನ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದಲ್ಲಿ ಶಾಲಾ ಇಂಟರಾಕ್ಟ್ ಕ್ಲಬ್ ನ ಸಹಯೋಗದಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶೇಖರ್ ರವರು ಈ ಕಾರ್ಯವನ್ನು ಶ್ಲಾಘಿಸಿ ಶಿಕ್ಷಣದ ಬಗ್ಗೆ ರೋಟರಿ ಸಂಸ್ಥೆಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು. ವಲಯ ಸೇನಾನಿ ಬ್ರಾಯನ್ ಡಿಸೋಜ, ಅಧ್ಯಕ್ಷ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತು ಚಯರ್ ಮ್ಯಾನ್ ಲಿಯೋ ವಿಲಿಯಂ ಅಂದ್ರಾದೆರವರು ಸಮಯೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ನಿಕಟಪೂರ್ವ ಅಧ್ಯಕ್ಷ ಡೆಸ್ಮಂಡ್ ವಾಸ್, ಸದಸ್ಯರುಗಳಾದ ವಿದ್ಯಾಧರ್ ಕಿಣಿ, ರಾಮ ಪೂಜಾರಿ, ರಾಮಕೃಷ್ಣ ಆಚಾರ್ಯ ರವರು ಉಪಸ್ಥಿತರಿದ್ದರು. ನಂತರ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರ, ಸರ್ಕಾರಿ ಪ್ರೌಢಶಾಲೆ ಕೆಮ್ಮಣ್ಣು ಹಾಗು ಕಾರ್ಮೆಲ್ ಪ್ರೌಢಶಾಲೆ ಕೆಮ್ಮಣ್ಣು ಶಾಲೆಗಳಿಗೆ ಭೇಟಿ ನೀಡಿ ಸಾಂಕೇತಿಕ ಕಾರ್ಯಕ್ರಮವನ್ನು ಜರುಗಿಸಿ ತಲಾ 65, 20, 20 ರಂತೆ ಒಟ್ಟು ರೂ.14,600 ವೆಚ್ಚದಲ್ಲಿ 146 ಪುಸ್ತಕಗಳನ್ನು ವಿತರಿಸಲಾಯಿತು.