Updated News From Kaup
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ
Posted On: 18 Aug 2021, 08:54 PM
ಶಿರ್ವ, ಆ. 18 : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ರಾಜ್ಯದ ಎಲ್ಲಾ ಧರ್ಮ, ಭಾಷೆಗಳ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆಯನ್ನು ಉತ್ತೇಜಿಸಿ, ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಪ್ರತಿವರ್ಷ ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ವರ್ಷ ಆಗಸ್ಟ್ 20ರಂದು ಮೊಹರಂ ಹಬ್ಬದ ಪ್ರಯುಕ್ತ ಎಲ್ಲ ಸರ್ಕಾರಿ ಕಚೇರಿಗಳ ರಜೆಯ ಕಾರಣ ಈ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಯಶೋದ, ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ಕುಮಾರ್, ಎನ್ಎಸ್ಎಸ್ ಯೋಜನಾಧಿಕಾರಿ ಪ್ರೇಮನಾಥ್, ರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಕಾಲೇಜಿನ ವಿದ್ಯಾರ್ಥಿಗಳು, ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು.
ಮೂತ್ರಪಿಂಡ ಸಮಸ್ಯೆ ಮಹಿಳೆಗೆ ಬಂಟಕಲ್ಲು - ಬಿ.ಸಿ ರೋಡು ಲಯನ್ಸ್ ಕ್ಲಬ್ ನಿಂದ ಆರ್ಥಿಕ ನೆರವು
Posted On: 17 Aug 2021, 01:41 PM
ಕಾಪು : ಮೂತ್ರಪಿಂಡ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವ ಪಡುಬೆಳ್ಳೆ ಸಮೀಪದ ರಕ್ಷಾಪುರ ಕಾಲೋನಿಯ ನಿವಾಸಿ ಶಂಕರ ಎಂಬವರ ಪತ್ನಿ ಸರಸ್ವತಿ ಎಂಬವರ ಮೂತ್ರಪಿಂಡ ಬದಲಾಯಿಸುವ ಚಿಕಿತ್ಸೆ ವೆಚ್ಚವಾಗಿ ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ ರೋಡು ಹಾಗೂ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ರವರು ಜಂಟಿಯಾಗಿ ರೂ. 72000 ವನ್ನು ಅವರ ಮನೆಗೆ ತೆರಳಿ ನೀಡಿದರು. ಸರಸ್ವತಿ ಅವರ ಈ ಚಿಕಿತ್ಸೆಗೆ ರೂ. 7 ಲಕ್ಷ ಮೊತ್ತ ವೆಚ್ಚವಾಗಲಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈ ಸಣ್ಣ ಕುಟುಂಬ ಚಿಕಿತ್ಸಾ ವೆಚ್ಚದ ಬಗ್ಗೆ ಸಹೃದಯಿ ದಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇವರ ಸಮಸ್ಯೆಯನ್ನು ತಿಳಿದ ಬಂಟಕಲ್ಲು ಬಿ.ಸಿ ರೋಡು ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಡ್ವರ್ಡ್ ಮೆನೇಜಸ್ ರವರು ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಂಸ್ಥೆಯೊಂದಿಗೆ ಸೇರಿ ಈ ಮೊತ್ತವನ್ನು ಸರಸ್ವತಿಯವರಿಗೆ ಹಸ್ತಾಂತರಿಸಿದರು. ಜಾಸ್ಮೀನ್ ಲಯನ್ಸ್ ನ ಅಧ್ಯಕ್ಷೆ ಮೇಬಲ್ ಮೆನೇಜಸ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಅನಿತಾ ಮೆಂಡೋನ್ಸಾ, ವಿಜಯ್ ಧೀರಾಜ್, ಬೆಳ್ಳೆ ಗ್ರಾ.ಪಂ ಸದಸ್ಯೆ ನಥಾಲಿಯಾ ಮಾರ್ಟಿಸ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ ಪಡುಬೆಳ್ಳೆ : ಪದಗ್ರಹಣ, ವೈದ್ಯಕೀಯ ಚಿಕಿತ್ಸೆಗೆ ನೆರವು
Posted On: 15 Aug 2021, 08:36 PM
ಕಾಪು : ಪಡುಬೆಳ್ಳೆಯ ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ (ರಿ.) ಇದರ ಪದಗ್ರಹಣ ಕಾರ್ಯಕ್ರಮ ಪಡುಬೆಳ್ಳೆಯಲ್ಲಿ ಜರಗಿತು. ಇದೇ ಸಂದರ್ಭ ಧರ್ಮಶ್ರೀ ಕಾಲೋನಿಯ ಸರಸ್ವತಿಯವರಿಗೆ ವೈದ್ಯಕೀಯ ಚಿಕಿತ್ಸೆಗೆ 15000 ರೂಪಾಯಿ ನೆರವು ನೀಡಲಾಯಿತು. ಈ ಸಂದರ್ಭ ಗೌರವಾಧ್ಯಕ್ಷರಾದ ಶಂಕರ್ ಕೋಟ್ಯಾನ್, ಗೌರವ ಸಲಹೆಗಾರರಾದ ನವೀನ್ ಅಮೀನ್, ಗೌರವ ಸಲಹೆಗಾರರು ಮತ್ತು ನಿರ್ದೇಶಕರಾದ ಮಧುಸುದನ್ ರಾವ್, ಲಯನ್ಸ್ ಕ್ಲಬ್ ಅಧ್ಯಕ್ಷರು ಮತ್ತು ಯುವ ಸ್ಪೂರ್ತಿ ಲೆಕ್ಕ ಪರಿಶೋಧಕರು ಅನಿಲ್ ಡಿಸೋಜ, ಸ್ಥಾಪಕಾಧ್ಯಕ್ಷರಾದ ಸಂತೋಷ್ ಕುಲಾಲ್, ಕಾರ್ಯದರ್ಶಿ ಅವಿನಾಶ್ ಆಚಾರ್ಯ, ಕೋಶಾಧಿಕಾರಿ ಗುರುಪ್ರಸಾದ್ ಆಚಾರ್ಯ, ನಿಕಟಪೂರ್ವ ಕೋಶಾಧಿಕಾರಿ ಸುಶ್ಮಿತಾ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಜ್ಞ ಸ್ವಾಗತಿಸಿ, ಚೈತ್ರ ನಿರೂಪಿಸಿ, ಸಂಗೀತ ವಂದಿಸಿದರು.
ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಸಂಭ್ರಮ
Posted On: 15 Aug 2021, 08:24 PM
ಕಾಪು : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ೭೫ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಪು ತಹಶೀಲ್ದಾರ್ ಪ್ರದೀಪ್ ಎಸ್. ಕುರ್ಡೇಕರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರದೀಪ್ ಕುರ್ಡೇಕರ್ ಮಾತನಾಡಿ, ನಾವು ಸಾಧಿಸಿದ್ದು ಕಡಿಮೆ, ಸಾಧಿಸಬೇಕಾದದ್ದು ಬಹಳಷ್ಟು ಇವೆ. ಸಂವಿಧಾನದ ಹಕ್ಕುಗಳ ರಕ್ಷಣೆಗೆ ಕಟಿ ಬದ್ಧರಾಗಬೇಕಿದೆ. ಕೊರೊನಾ ಮಹಾಮಾರಿಯ ಹೊಡೆತದಿಂದಾಗಿ ಜನತೆ ಕಂಗೆಟ್ಟಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಹಾರ ಕ್ಷೇತ್ರದ ಬೆಳವಣಿಗೆಯತ್ತ ಗಮನಹರಿಸಬೇಕಿದೆ. ಸಾಮಾಜಿಕ ಪಿಡುಗುಗಳ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ. ಅದರೊಂದಿಗೆ ರಾಷ್ಟ್ರೀಯತೆಯನ್ನು ಉಳಿಸಲು ನಾವೆಲ್ಲರೂ ಒಂದಾಗಬೇಕಿದೆ. ಎಲ್ಲರ ಸಹಕಾರದೊಂದಿಗೆ ಕಾಪು ತಾಲೂಕನ್ನು ಸಮಗ್ರವಾಗಿ ಕಟ್ಟುವ ವಿಶ್ವಾಸವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ದೇಶದ ಜನತೆಯನ್ನು ಕೊರೊನಾ ಮಹಾಮಾರಿ ಸಂಕಷ್ಟಕ್ಕೆ ಸಿಲುಕಿಸಿದೆ. ಕಾಪು ತಾಲೂಕಿನಲ್ಲಿ ಕೊರೊನಾ ವಿರುದ್ಧ ಮುಂಜಾಗ್ರತಾ ಕ್ರಮಗಳ ಪಾಲನೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದರ ಜೊತೆಗೆ ಅಭಿವೃದ್ಧಿಯತ್ತಲೂ ವಿಶೇಷ ಗಮನ ಹರಿಸಬೇಕಿದ್ದು, ಇದಕ್ಕೆ ಸರ್ವ ಜನರ ಸಹಕಾರದ ಅಗತ್ಯತೆಯಿದೆ. ಜಾತಿ ಮತ, ಪಕ್ಷ ಭೇಧ ಮರೆತು ಕಾಪುವಿನ ಅಭಿವೃದ್ಧಿಗೆ ಪ್ರಯತ್ನಿಸೋಣ ಎಂದರು. ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಾಪು ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ವೃತ್ತ ನಿರೀಕ್ಷಕ ಪ್ರಕಾಶ್, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ಅತಿಥಿಗಳಾಗಿದ್ದರು. ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಉಪತಹಶೀಲ್ದಾರ್ ಕೆ. ರವಿಶಂಕರ್, ಅಶೋಕ್ ಕೋಟೆಕಾರ್, ಚಂದ್ರಹಾಸ ಭಂಡಾರಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾಪು ತಾಲೂಕು ರಾಷ್ಟ್ರೀಯ ಹಾಗು ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸಾಧಕರಾದ ಗಿನ್ನೆಸ್ ದಾಖಲೆ ವೀರೆ ಯೋಗಪಟು ತನುಶ್ರೀ ಪಿತ್ರೋಡಿ, ಗೃಹರಕ್ಷಕದಳದ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಪಡುಬಿದ್ರಿ ಎಎಸೈ ದಿವಾಕರ್, ಕಾಪು ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಹಾಬಲ ಗಾಣಿಗ, ಕಂದಾಯ ಇಲಾಖೆಯ ಸಿಬಂದಿ ಫಿರೋಜ್ ಖಾನ್, ಗ್ರಾಮ ಸಹಾಯಕ ಮಂಜು ದೇವಾಡಿಗ, ಆರೋಗ್ಯ ಇಲಾಖೆಯ ಅಭಿಲಾಷ್, ಕೃಷ್ಣ, ಪುರಸಭೆಯ ರಾಘು, ಕಿರಣ್, ಗ್ರಾ.ಪಂ. ಅಧಿಕಾರಿಗಳಾದ ಪಂಚಾಕ್ಷರಿ ಕೇರಿಮಠ, ವಸಂತಿ ಬಾಯಿ ಹಾಗೂ ಸ್ಕೌಟ್ ಗೈಡ್ಸ್ ನ ಶಾಲೆಟ್ ಕರ್ಕಡ ಅವರನ್ನು ಸಮ್ಮಾನಿಸಲಾಯಿತು. ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಸ್ವಾಗತಿಸಿದರು. ಪೊಲಿಪು ಪ. ಪೂ. ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಬೊಬ್ಬರ್ಯ ಯುವ ಸೇವಾ ಸಮಿತಿಯಿಂದ ಸ್ವಚ್ಛತಾ ಕಾರ್ಯ
Posted On: 15 Aug 2021, 06:53 PM
ಉಡುಪಿ : ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಯುವಕರು ಮೋಜು-ಮಸ್ತಿ ತಿರುಗಾಟದಲ್ಲಿ ಸಮಯ ವ್ಯರ್ಥ ಮಾಡುವಾಗ ಉಡುಪಿ ಬೊಬ್ಬರ್ಯ ಯುವ ಸೇವಾ ಸಮಿತಿ ಯುವಕರು ಸಮಾಜ ಸೇವೆಯಲ್ಲಿ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ಇಂದು ಸ್ವಾತಂತ್ರೋತ್ಸವದ ಪ್ರಯುಕ್ತ ಬೊಬ್ಬರ್ಯ ದೈವಸ್ಥಾನದಲ್ಲಿ ಉಡುಪಿ ಬೊಬ್ಬರ್ಯ ಯುವ ಸೇವಾ ಸಮಿತಿ ವತಿಯಿಂದ ದೈವಸ್ಥಾನ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ, ಅಧ್ಯಕ್ಷರಾದ ವರದರಾಜ್ ಕಾಮತ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಿತ್ ಶೆಟ್ಟಿ, ವಿಜಯ್, ರವಿ, ದೀಪಕ್, ಅವಿನಾಶ್, ಸುಕೇಶ್ ಹೆಗ್ಡೆ, ಅಕ್ಷಯ್ ಪ್ರಭು ಉಪಸ್ಥಿತಿಯಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹಾರಕ್ಕೆ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಉಚಿತ ನೋಟ್ ಪುಸ್ತಕ, ಬರವಣಿಗೆ ಸಾಮಗ್ರಿಗಳ ವಿತರಣೆ
Posted On: 15 Aug 2021, 05:49 PM
ಕಾಪು : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದಿಂದ ಇಂದು ಬಿದ್ಕಲ್ ಕಟ್ಟೆ, ಮೊಳವಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹಾರಕ್ಕೆ ಭೇಟಿ ನೀಡಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಚಿತ ನೋಟ್ ಪುಸ್ತಕ ಹಾಗೂ ಬರವಣಿಗೆ ಸಾಮಗ್ರಿಗಳನ್ನು ನೀಡಲಾಯಿತು. ಆಸರೆ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಯಿತು. ಮಾಜಿ ಸೈನಿಕ ಹಾಗೂ ಶಾಲೆಯ ಪ್ರಾಂಶುಪಾಲರಾದ ಯಶವಂತ್ ಅವರು ಹಾರೈಕೆಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಾಧು ಕುಂದರ್, ಆಸರೆ ತಂಡದ ಕೋಶಾಧಿಕಾರಿ ಜಗದೀಶ್ ಬಂಟಕಲ್, ದಿನೇಶ್ ಬಿದ್ಕಲಕಟ್ಟೆ ಹಾಗೂ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧಕ್ಷೆ ಇಂದಿರಾ ಯು. ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಸಮುದಾಯದಳ ಇನ್ನಂಜೆಯ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ನೂತನ ಧ್ವಜಸ್ತಂಭ ಮಂಡೇಡಿ ಅಂಗನವಾಡಿಗೆ ಹಸ್ತಾಂತರ
Posted On: 15 Aug 2021, 04:01 PM
ಕಾಪು : ರೋಟರಿ ಶಂಕರಪುರ ಇದರ ಅಧ್ಯಕ್ಷರಾದ ರೋ. ಪ್ಲಾವಿಯಾ ಮೆನೆಜಸ್ ಇವರು ಇನ್ನಂಜೆ ರೋಟರಿ ಸಮುದಾಯ ದಳದ ವತಿಯಿಂದ ಮಂಡೇಡಿ ಅಂಗನವಾಡಿಗೆ ನೂತನವಾಗಿ ನಿರ್ಮಿಸಲಾದ ಧ್ವಜಸ್ತಂಭವನ್ನು ಉದ್ಘಾಟಿಸಿ ಮಂಡೇಡಿ ಅಂಗನವಾಡಿಗೆ ಹಸ್ತಾಂತರಿಸಿದರು. ನಂತರ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಮಂಡೇಡಿ, ಹಾಗೂ ಶ್ರೀದೇವಿ ಭಜನಾ ಮಂಡಳಿ ಅಧ್ಯಕ್ಷರಾದ ಶಿವರಾಮ ಜೆ ಶೆಟ್ಟಿ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ರೋ. ನವೀನ್ ಅಮೀನ್ ಶಂಕರಪುರ ಮತ್ತು ಇನ್ನಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ರೋಟರಿ ವಲಯ 5 ರ ವಲಯ ಸೇನಾನಿ ರೋ ಅನಿಲ್ ಡೇಸಾ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಗ್ಲಾಡ್ ಸನ್ ಕುಂದರ್, ರೋಟರಾಕ್ಟ್ ಸುಭಾಸ್ ನಗರ ಅಧ್ಯಕ್ಷರು ಆದ ಕವನ್ ಪೂಜಾರಿ, ವಲಯ 5 ರ ಕಾರ್ಯದರ್ಶಿ ಚಂದ್ರಪೂಜಾರಿ, ರೋ ಸಂದೀಪ್ ಬಂಗೇರ, ಪ್ರಶಾಂತ್ ಶೆಟ್ಟಿ ಮಂಡೇಡಿ, ನಾಗರಾಜ್ ರಾವ್ ಪಾಂಗಾಳ, ಇನ್ನಂಜೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಮಂಡೇಡಿ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಕಾರ್ಯದರ್ಶಿ ಮನೋಹರ್ ಕಲ್ಲುಗುಡ್ಡೆ, ಸ್ಥಳೀಯ ಪಂಚಾಯತ್ ಸದಸ್ಯರಾದ ಜಯಶ್ರೀ, ದೀವೇಶ್ ಶೆಟ್ಟಿ, ನಿತೇಶ್ ಸಾಲ್ಯಾನ್, ರೋಟರಿ ಪದಾಧಿಕಾರಿಗಳು, ರೋಟರಿ ಸಮುದಾಯದಳ ಪದಾಧಿಕಾರಿಗಳು, ಸದಸ್ಯರು, ಶ್ರೀ ದೇವಿ ಭಜನಾ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಇನ್ನಂಜೆ ಗ್ರಾ. ಪಂ ಸದಸ್ಯೆ ಮತ್ತು ರೋಟರಿ ಸಭಾಪತಿ ಮಾಲಿನಿ ಶೆಟ್ಟಿ ಇನ್ನಂಜೆ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಚಂದ್ರಹಾಸ್ ಶೆಟ್ಟಿ ಧನ್ಯವಾದಗೈದರು.
ಕಟಪಾಡಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದ ಅಂಗವಾಗಿ ಪ್ರಪ್ರಥಮ ಎರೆಹುಳು ಗೊಬ್ಬರ ತೊಟ್ಟಿ ಘಟಕ ರಚನೆ
Posted On: 15 Aug 2021, 03:14 PM
ಕಾಪು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದ ಅಂಗವಾಗಿ ನಾಗೇಶ ಕಾಮತ್ ಕಟಪಾಡಿ ಇವರ ಸ್ಥಳದಲ್ಲಿ ಪ್ರಪ್ರಥಮ ಎರೆಹುಳು ಗೊಬ್ಬರ ತೊಟ್ಟಿ ಘಟಕ ರಚನೆಗೆ ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಮಮತಾ ವೈ. ಶೆಟ್ಟಿ, ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಉಪಾಧ್ಯಕ್ಷ ಎ. ಆರ್. ಅಬುಬಕ್ಕರ್, ಸದಸ್ಯರುಗಳಾದ ಪ್ರಭಾ ಬಿ. ಶೆಟ್ಟಿ, ಸುಗುಣ ಪೂಜಾರ್ತಿ, ವೀಣಾ ಎನ್, ಆಗ್ನೆಸ್ ಡೇಸ, ವಿಜಯ್ ಮಾಬಿಯನ್, ಪ್ರಭಾಕರ್ ಪಾಲನ್, ಪ್ರಸೀನ್ ಜಿ. ಪೂಜಾರಿ, ಲೆಕ್ಕ ಪರಿಶೋಧಕ ವಿಜಯ್ ಉದ್ಯಾವರ, ಕೆ.ಗೋಕುಲ್ ದಾಸ್ ಕಾಮತ್ ,ಶೈಲಾ ಜಿ. ಕಾಮತ್ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು .
ಕುತ್ಯಾರು ಗ್ರಾಮಪಂಚಾಯತ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ನಿವೃತ್ತ ಯೋಧರಿಗೆ ಸನ್ಮಾನ
Posted On: 15 Aug 2021, 03:04 PM
ಕಾಪು : ಕುತ್ಯಾರು ಗ್ರಾಮಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕುತ್ಯಾರು ಗ್ರಾಮದ ನಿವೃತ್ತ ಯೋಧ ಶ್ರೀಧರ ಕುಲಾಲ್ ನೆರವೇರಿಸಿದರು. ಸನ್ಮಾನ : ನಿವೃತ್ತ ಯೋಧರಾದ ಕೇಂಜ ಜೋಸೆಫ್ ಡಿಸೋಜ ಮತ್ತು ಶ್ರೀಧರ ಕುಲಾಲ್ ರನ್ನು ಸನ್ಮಾನಿಸಲಾಯಿತು ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಉಪಾಧ್ಯಕ್ಷ ದೇವರಾಜ ಬಿ. ಶೆಟ್ಟಿ, ಪಿಡಿಓ ರಜನಿ ಭಟ್, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇನ್ನಂಜೆ : ಸಾರ್ವಜನಿಕ ಶೌಚಾಲಯ ಉದ್ಘಾಟನೆ ಮತ್ತು ಆರ್ಥಿಕ ನೆರವು
Posted On: 15 Aug 2021, 02:46 PM
ಕಾಪು : ಯುವಕ ಮಂಡಲ (ರಿ.) ಇನ್ನಂಜೆ ಇವರ ವತಿಯಿಂದ ಇನ್ನಂಜೆ ದಾಸಭವನ ವಠಾರದಲ್ಲಿ ಸಾರ್ವಜನಿಕರಿಗೆ ಉಪಯೋಗಿಸಲು ಸುಸಜ್ಜಿತ ಶೌಚಾಲಯವನ್ನು ಯುವಕ ಮಂಡಲದ ಸದಸ್ಯರೇ ನಿರ್ಮಾಣ ಮಾಡಿ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇನ್ನಂಜೆ ಎಸ್.ವಿ. ಎಚ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಂಜಾರಿನ ಯುವತಿಗೆ ಯುವಕ ಮಂಡಲದ ವತಿಯಿಂದ 10,000 ರೂಪಾಯಿ ಆರ್ಥಿಕ ನೆರವನ್ನು ನೀಡಲಾಯಿತು. ಇನ್ನಂಜೆ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ವಿ. ಜಿ. ಶೆಟ್ಟಿ, ಬಸ್ರೂರು ರಾಜೀವ ಶೆಟ್ಟಿ, ಯುವಕ ಮಂಡಲದ ಗೌರವ ಸಲಹೆಗಾರರಾದ ಮತ್ತು ರೋಟರಿ ಮಾಜಿ ಗವರ್ನರ್ ನವೀನ್ ಅಮೀನ್ ಶಂಕರಪುರ, ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, ರೋಟರಿ ಸಭಾಪತಿ ಮಾಲಿನಿ ಶೆಟ್ಟಿ ಇನ್ನಂಜೆ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಮಂಡೇಡಿ, ಯುವಕ ಮಂಡಲದ ಕಾರ್ಯದರ್ಶಿ ತರುಣ್ ಕುಮಾರ್ ಇನ್ನಂಜೆ ಶಾಲಾ ಸಿಬ್ಬಂದಿಗಳು, ಯುವಕ ಮಂಡಲ ಮತ್ತು ರೋಟರಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
