Updated News From Kaup

ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕುಸುಮಾ ಕೃಷ್ಣಮೂರ್ತಿ ಕಾಮತ್

Thumbnail
Posted On: 05 Dec 2024, 07:29 PM

ಉಡುಪಿ : ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇದರ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಸಾಧಕಿ ಕುಸುಮಾ ಕೃಷ್ಣಮೂರ್ತಿ ಕಾಮತ್ ಇವರ ಸಾಧನೆಯನ್ನು ಗಮನಿಸಿ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು,ಕಲೆ ಸಾಹಿತ್ಯ ನಾಟಕ ಜನಪದ ಮತ್ತು ಮಿಮಿಕ್ರಿ ರಂಗದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ ಪ್ರಸ್ತುತ ಕನ್ನಡ ಜನಪದ ಪರಿಷತ್ ಉಡುಪಿ ತಾಲೂಕಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಸಂಘ-ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಗಣೇಶ ಶೆಣೈ, ಕೆ.ಹೆಚ್ ಮಂಜುನಾಥ್, ಉಮೇಶ್ ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ : ಕನ್ನಡ ಜಾನಪದ ರಾಜ್ಯೋತ್ಸವ ; ಅಭಿನಂದನಾ ಕಾರ್ಯಕ್ರಮ

Thumbnail
Posted On: 04 Dec 2024, 07:21 PM

ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು - ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ತಾಲೂಕು ವತಿಯಿಂದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ಬುಧವಾರ ಹನುಮಂತನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಜಾನಪದವು ಎಲ್ಲಾ ಸಾಹಿತ್ಯಕ್ಕೆ ತಾಯಿಬೇರಾಗಿದೆ. ನಮ್ಮ ಜನಪದರು ನೀಡಿದ ಅಮೂಲ್ಯ ಕೊಡುಗೆಗಳನ್ನು ದಾಖಲಿಸಿ ಅವುಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದು ಉಡುಪಿ ಜಿಲ್ಲಾ ಘಟಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಿಕಾ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಖ್ಯಾತ ಜಾನಪದ ಕಲಾವಿದರಾದ ವಾಸುದೇವ ಬನ್ನಂಜೆ ಹಾಗೂ ಕನ್ನಡ ಅಧ್ಯಾಪಕರಾದ ರೇಖಾ ಅವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಶಾಲೆಯ ವಿದ್ಯಾರ್ಥಿಗಳಾದ ದೀಕ್ಷಾ ಅಮೀನ್' ಮತ್ತು ಸೋನಿಯವರನ್ನು ಗೌರವಧನದೊಂದಿಗೆ ಅಭಿನಂದಿಸಲಾಯಿತು. ತಾಲೂಕು ಅಧ್ಯಕ್ಷೆ ಮಾಯಾ ಕಾಮತ್ ಶುಭ ಹಾರೈಸಿದರು. ವೇದಿಕೆಯಲ್ಲಿ ತಾಲೂಕು ಕಾಯ೯ದಶಿ೯ ಕುಸುಮ ಕಾಮತ್, ಜಿಲ್ಲಾ ಪದಾಧಿಕಾರಿ ಮಹಮ್ಮದ್ ಫಾರುಕ್ ಉಪಸ್ಥಿತರಿದ್ದರು. ಜಿಲ್ಲಾ ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು. ಶಿಕ್ಷಕ ಜಯಪ್ರಕಾಶ್ ವಂದಿಸಿದರು.

ಕಾಪು : ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದ ಫ್ಯಾಕ್ಟರಿಗೆ ಬೀಗ

Thumbnail
Posted On: 04 Dec 2024, 05:16 PM

ಕಾಪು : ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಷ್ ಫ್ಯಾಕ್ಟರಿಯನ್ನು ಕಾಪು ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಮುಟ್ಟುಗೋಲು ಹಾಕಿದೆ. ಈ ಕಾರ್ಖಾನೆಯನ್ನು ಪರಿಶೀಲಿಸಿ ಅಲ್ಲಿಯ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಹೊರಕ್ಕೆ ಬಿಡುತ್ತಿದೆ ಆದ್ದರಿಂದ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಪರಿಸರಮಾಲಿನ್ಯ ಇಲಾಖೆ ಶಿಫಾರಸು ಮಾಡಿತ್ತು. ಉಡುಪಿ ಜಿಲ್ಲಾಧಿಕಾರಿಯವರು ಈ ವರದಿಯ ಆಧಾರದ ಮೇಲೆ ಈ ತವಕ್ಕಲ್ ಫಿಷ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಶಿಲ್ದಾರ್ ಗೆ ಆದೇಶ ಮಾಡಿದ್ದರು.ಅದರಂತೆ ಕಾಪು ತಹಶಿಲ್ದಾರ್ ಕ್ರಮ ಕೈಗೊಂಡಿದ್ದಾರೆ. ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಯಾವುದೇ ಫ್ಯಾಕ್ಟರಿ ಪರಿಸರ ಮಾಲಿನ್ಯ ಉಂಟು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರೆ ಅದನ್ನು ತಕ್ಷಣವೇ ಮುಚ್ಚಲು ಶಿಫಾರಸು ಮಾಡಲಾಗುವುದು. ಉದ್ಯಮ-ಅಭಿವೃದ್ದಿ ಎಷ್ಟು ಮುಖ್ಯವೋ ಪರಿಸರ ರಕ್ಷಣೆಯೂ ಅಷ್ಟೇ ಮುಖ್ಯ. ಕಾರ್ಖಾನೆಗಳವರು ಸೂಕ್ತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೊಂದಿಗೆ ಉದ್ಯಮ ನಡೆಸಿದರೆ ನಮ್ಮ ಅಭ್ಯಂತರವೇನಿಲ್ಲ. ತಾಲ್ಲೂಕಿನ ನೆಲ-ಜಲದ ರಕ್ಷಣೆ ನನ್ನ ಆದ್ಯತೆ. ಇವತ್ತಿನ ಈ ಸೀಝ್ ಉಳಿದ ಫ್ಯಾಕ್ಟರಿ ಮಾಲೀಕರುಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಹೇಳಿದರು. ಕಾಪು ತಹಶಿಲ್ದಾರ್ ರವರ ಈ ದಿಟ್ಟ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಜೊತೆಗೆ ಕಾಪು ತಾಲ್ಲೂಕಿನಲ್ಲಿ ಸರಕಾರದ ಯಾವುದೇ ಮಾನದಂಡಗಳನ್ನು ಪಾಲಿಸದ ಹಲವಾರು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳ ವಿರುದ್ಧ ಇಂತಹುದೇ ಕ್ರಮ ಜರಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್ ರವರಿಗೆ ಸೀಝ್ ಮಾಡಿದ ಫ್ಯಾಕ್ಟರಿಯ ಬೀಗದ ಕೀ ಹಸ್ತಾಂತರಿಸಲಾಯಿತು. ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ವೆಂಕಟೇಶ್, ಪೋಲೀಸ್ ಇನ್ಸ್ಪೆಕ್ಟರ್, ಮೆಸ್ಕಾಂ ಎಸ್ ಒ ಅಜಯ್, ಪುರಸಭಾ ಅಧಿಕಾರಿ ಉಪಸ್ಥಿತರಿದ್ದರು.

ಶಿರ್ವ : ಪಂಜಿಮಾರು ಕೋಡು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ

Thumbnail
Posted On: 03 Dec 2024, 11:30 PM

ಶಿರ್ವ : ಹಗಲು ಹೊತ್ತಿನಲ್ಲಿಯೇ ಚಿರತೆ ಕಂಡು ಬಂದ ಘಟನೆ ಮಂಗಳವಾರ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಮಾರು ಕೋಡು ಪರಿಸರದಲ್ಲಿ ನಡೆದಿದೆ. ಪಂಜಿಮಾರು ಸೋದೆ ಮಠದ ಬಳಿ ರಸ್ತೆಯಲ್ಲಿ ಬೈಕ್ ಸವಾರನೋರ್ವ ರಸ್ತೆಯಲ್ಲಿ ಸಾಗುವಾಗ ಚಿರತೆ ಅಡ್ಡ ಬಂದ ಘಟನೆ ನಡೆದಿದೆ. ಹಲವು ದಿನಗಳಿಂದ ಪಡುಬೆಳ್ಳೆ, ಕುರ್ಕಾಲು, ಕುಂಜಾರು ಭಾಗದಲ್ಲಿ ಚಿರತೆಯ ಹಾವಳಿ ಬಗ್ಗೆ ದೂರುಗಳಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲವು ದಿನಗಳಿಂದ ಹಲವರ ಮನೆಗಳ ನಾಯಿಗಳೂ ಮಾಯವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ರಕ್ಷಕ ಚರಣ್ ಜೋಗಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬೋನು ತಂದು ಇರಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ

ಎಲ್ಲೂರಿನಲ್ಲಿ ಸಿಡಿಲಾಘಾತಕ್ಕೆ ದನ ಬಲಿ ; ವಿದ್ಯುತ್ ಉಪಕರಣಗಳಿಗೆ ಹಾನಿ

Thumbnail
Posted On: 03 Dec 2024, 08:00 PM

ಪಡುಬಿದ್ರಿ : ಫೆಂಗಲ್ ಚಂಡಮಾರುತದ ಪರಿಣಾಮ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಸಿಡಿಲಿಗೆ ದನದ ಹಟ್ಟಿಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿ, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾದ ಘಟನೆ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಎಲ್ಲೂರು ಜೋಗಿ ತೋಟದ ಶೇಖರ್ ಪೂಜಾರಿಯವರ ದನದ ಹಟ್ಟಿಗೆ ಸಿಡಿಲು ಬಡಿದಿದ್ದು ಇದರ ಪರಿಣಾಮ ದನ ಸಾವನ್ನಪ್ಪಿದೆ. ಹಾಲು ಕರೆಯುವ ದನ ಇದಾಗಿದ್ದು, ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ. ಜೊತೆಗೆ ಮನೆಯ ವಿದ್ಯುತ್ ಉಪಕರಣಗಳು ಸಿಡಿಲಿಗೆ ಹಾನಿಯಾಗಿದೆ. ಎಲ್ಲೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗರು ಘಟನಾ ಸ್ಥಳಕ್ಕೆ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ದಲಿತ ಸಂಘರ್ಷ ಸಮಿತಿ ಕಳತ್ತೂರು ಗ್ರಾಮ ಶಾಖೆ ಉದ್ಘಾಟನೆ

Thumbnail
Posted On: 03 Dec 2024, 07:55 PM

ಕಾಪು : ಪ್ರೋ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಇದರ ಕಳತ್ತೂರು ಶಾಖೆಯ ಉದ್ಘಾಟನೆ ಕಳತ್ತೂರು ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರಗಿತು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಸೃಷ್ಟಿಯಿಂದ ಪ್ರಾರಂಭವಾಗಿದ್ದಲ್ಲ, ಅದು ಮಾನವರಿಂದ ಆದದ್ದು, ಅದರ ವಿರುದ್ಧ ಅಂಬೇಡ್ಕರರು ನ್ಯಾಯೋಚಿತವಾಗಿ ಹೋರಾಡಿ ಸಂವಿಧಾನವನ್ನು ರಚಿಸಿದರು. ಅದನ್ನು ಉಳಿಸಿ ಪೋಷಿಸಿದರೆ ಮಾತ್ರ ದೇಶ ಸುಭದ್ರ. ಹಾಗಾಗಿ ನಾವೆಲ್ಲ ಸಂವಿಧಾನ ಸಂರಕ್ಷಿಸಬೇಕೆಂದು ಹೇಳಿದರು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದಲಿತ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶ್ಯಸ್ತ್ಯ ನೀಡಿದಾಗ ಹಾಗೂ ಅಂಬೇಡ್ಕರರ ಚಿಂತನೆಯೊಂದಿಗೆ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಮಾಜಿ ಶಾಸಕರಾದ ಲಾಲಾಜಿ.ಆರ್.ಮೆಂಡನ್, ಕುತ್ಯಾರು ಗ್ರಾ.ಪಂ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ನೂತನ ಶಾಖೆಗೆ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲಾಧ್ಯಕ್ಷ ರಮೇಶ್ ಕೋಟ್ಯಾನ್ ಕೆಳರ್ಕಳಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಂಗನಾಥ್ ಶೆಟ್ಟಿ ಬರಬೆಟ್ಟು, ಶ್ರೀಕೃಷ್ಣ ಬಜೆ, ಅಪ್ಪುರಾಜ್, ರವಿ ಪಲಿಮಾರ್, ನಾರಾಯಣ ಗುರಿಕಾರರು ಕಳತ್ತೂರು, ಸಂದೀಪ್ ಕರ್ಕೇರ ಕಳತ್ತೂರು, ಕುತ್ಯಾರು ಗ್ರಾ.ಪಂ. ಸದಸ್ಯರಾದ ದಿವ್ಯ ಶೆಟ್ಟಿಗಾರ್, ಸ್ಟ್ಯಾನಿ ಕೋಡ್ದ, ಲೀಲಾವತಿ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಸ್ವಾಗತಿಸಿದರು, ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸ್ವಾಮೀಜಿ ಭೇಟಿ

Thumbnail
Posted On: 03 Dec 2024, 01:00 PM

ಕಾಪು : ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಂಗಳವಾರ ಕಟಪಾಡಿ - ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಭೇಟಿ ನೀಡಿ ದೇವಳದ ಕಾಮಗಾರಿ ವೀಕ್ಷಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಮಾಲಾರ್ಪಣೆಯೊಂದಿಗೆ ಸ್ವಾಗತಿಸಿದರು. ದೇವಳದ ತಂತ್ರಿ ವೇದಮೂರ್ತಿ ಕುಮಾರಗುರು ತಂತ್ರಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ದೇವಳದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿ, ಭಕ್ತಾದಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಬ್ರಹ್ಮಕಲಶೋತ್ಸವ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಲಯ, ಮಾಧ್ಯಮ ಕೇಂದ್ರ ಉದ್ಘಾಟನೆ

Thumbnail
Posted On: 03 Dec 2024, 12:48 PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಲಯ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಲಯ ಮತ್ತು ಮಾಧ್ಯಮ ಕೇಂದ್ರ ಮಂಗಳವಾರ ಉದ್ಘಾಟನೆಗೊಂಡಿತು. ಕಟಪಾಡಿ - ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಬ್ರಹ್ಮಕಲಶೋತ್ಸವ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಶುಭ ಹಾರೈಸಿದರು. ಮಾಧ್ಯಮ ಕೇಂದ್ರವನ್ನು ಉದಯವಾಣಿಯ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಧವ ಆರ್ ಪಾಲನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ರಘುಪತಿ ಭಟ್, ದೇವಳದ ತಂತ್ರಿ ವೇಮೂ. ಕುಮಾರಗುರು ತಂತ್ರಿ, ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಜಯ ಸಿ ಕೋಟ್ಯಾನ್, ಯೋಗೀಶ್ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ, ರತ್ನಾಕರ ಶೆಟ್ಟಿ ನಡಿಕೆರೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಮಾಧ್ಯಮ ಸಂಚಾಲಕ ರಾಕೇಶ್ ಕುಂಜೂರು, ಜಯರಾಮ ಆಚಾರ್‌, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಕಾರ್ಯನಿರ್ವಹಣಾಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು.

ಹೇರೂರು : ಉಚಿತ ದಂತ ವೈದ್ಯಕೀಯ ಶಿಬಿರ

Thumbnail
Posted On: 03 Dec 2024, 07:42 AM

ಬ್ರಹ್ಮಾವರ : ಶ್ರೀರಾಮ್ ಫ್ರೆಂಡ್ಸ್ ಹೇರೂರು, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಹೇರೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಎಂಸಿ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಉಚಿತ ದಂತ ವೈದ್ಯಕೀಯ ಶಿಬಿರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಊರಿನ ಸಹಕಾರದಿಂದ ಪ್ರತಿಯೊಂದು ಗ್ರಾಮದಲ್ಲಿ ಹೊಸ ಬದಲಾವಣೆ ಅಭಿವೃದ್ಧಿ ಸಾಧ್ಯವಾಗುವುದು ಕೇವಲ ಸರ್ಕಾರದಿಂದ ಮಾತ್ರವಲ್ಲದೆ ಗ್ರಾಮಸ್ಥರ ಸಹಕಾರ ಮತ್ತು ಮಾರ್ಗದರ್ಶನ ಇದ್ದಲ್ಲಿ ಗ್ರಾಮದ ಅದೇ ರೀತಿ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಪ್ರತಿ ಹಳ್ಳಿಯಲ್ಲಿ ದಂತ ಚಿಕಿತ್ಸೆ ಶಿಬಿರಗಳನ್ನು ಸಂಘ ಸಂಸ್ಥೆಗಳು ಹಮ್ಮಿ ಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ, ಈ ಊರಿನ ಜನತೆಯ ಬೆಂಬಲದ ಪರಿಣಾಮ ಇಂದು ನಾನು ಪ್ರಾಧಿಕಾರದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು. ಈ ಸಂದರ್ಭ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಲೆಕ್ಕಪರಿಶೋಧಕ ಜೀವನ್ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುವರ್ಣ ಎಂಟರ್ಪ್ರೈಸಸ್ ನ ಸುನಿತಾ ಮಧುಸೂಧನ್ , ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಜಯಕರ್, ಡಾ. ಪ್ರಜ್ಞಾ ನಾಯಕ್, ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ಸೂರಜ್ ಕೋಟ್ಯಾನ್, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು. ವಿಜಯ್ ಸನಿಲ್ ಸ್ವಾಗತಿಸಿದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು, ರಾಮಕುಂದರ್ ವಂದಿಸಿದರು.

ತುಳು ಕಥಾ ಬರಹಗಾರರಿಗೆ ಸುವರ್ಣ ಅವಕಾಶ - “ಕುದ್ಕ ಬಚ್ಚಿರೆ” ತುಳು ಸಣ್ಣ ಕಥಾ ಸ್ಪರ್ಧೆ

Thumbnail
Posted On: 03 Dec 2024, 07:26 AM

ಕಾಪು : ತುಳು ಕಥೆ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ವತಿಯಿಂದ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು “ಕುದ್ಕ ಬಚ್ಚಿರೆ” ಎಂಬ ವೇದಿಕೆಯನ್ನು ಸಿದ್ದಪಡಿಸಿ ತುಳು ಸಣ್ಣ ಕಥಾಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮೂರು ಉತ್ತಮ ಕಥೆಗಳಿಗೆ 3,000ರೂ.ಗಳಂತೆ ಮತ್ತು 7 ಮೆಚ್ಚಿದ ಕಥೆಗಳಿಗೆ 1,500ರೂ. ಗಳಂತೆ ಒಟ್ಟಿಗೆ 10 ವಿಜೇತರಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಆಯ್ದ ಕಥೆಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 800ಪದ ಮೀರದೆ ತುಳು ಭಾಷೆಯಲ್ಲಿ ತಮ್ಮ ಸ್ವಂತ ಕಥೆ ಬರೆದು kudhkabachire@gmail.comಗೆ ಇ-ಮೇಲ್ ಅಥವಾ 9900634405 ನಂಬರಿಗೆ ಪಿಡಿಎಫ್ ಅಥವಾ ವರ್ಡ್ ಫಾರ್ಮ್ಯಾಟ್ ನಲ್ಲಿ ವಾಟ್ಸಾಪ್ ಮೂಲಕ ಜನವರಿ 31 2025ರ ಒಳಗೆ ಕಳುಹಿಸಬೇಕು. ಕೈ ಬರಹದ ಮೂಲಕ ಕಥೆ ಬರೆಯುವವರು A4 ಹಾಳೆ ಪುಟದಲ್ಲಿ ಬರೆದು “ಆರ್ ಪ್ರದೀಪ್, ತಿರ್ತಗುತ್ತು ಗರ್ಡಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, 574217” ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸ, ವಯಸ್ಸು ಮತ್ತು ಕಥೆಯ ತಲೆಬರಹವನ್ನು ಬೇರೆ ಹಾಳೆಯಲ್ಲಿ ಬರೆದು ಅದರ ಜೊತೆಗೆ ತಮ್ಮ ಕಥೆಯನ್ನು ಲಗತ್ತಿಸಿ ಪೋಸ್ಟ್ ಮೂಲಕ ಕಳಿಸಬೇಕು. ಹಾಗೂ ವಾಟ್ಸಾಪ್, ಮೇಲ್ ಮಾಡುವವರು ತಮ್ಮ ವಿವರಗಳನ್ನು ಬೇರೆಯೇ ಹಾಳೆಯಲ್ಲಿ ಬರೆದು ಕಳಿಸಬೇಕು. ನಿಮ್ಮದೇ ಸ್ವಂತ ವಿಷಯದ ಆಧಾರದ ಮೇಲೆ ಕಥೆ ಬರೆಯಬೇಕು. 14 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ. ಹೆಚ್ಚಿನ ಮಾಹಿತಿಗೆ ಆಯೋಜಕರ ಸೋಷಿಯಲ್ ಮೀಡಿಯಾವನ್ನು ಫಾಲೋ ಮಾಡಬಹುದು ಅಥವಾ 9900634405, 8762686433 ಈ ನಂಬರಿಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.