Updated News From Kaup

ಉಚ್ಚಿಲ ರೋಟರಿ ಕ್ಲಬ್ ಪದಗ್ರಹಣ

Posted On: 21-07-2024 03:01PM

ಉಚ್ಚಿಲ : ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಮಾಡುವ ಸೇವೆ ದೊಡ್ಡದಾಗಬೇಕಂತಿಲ್ಲ ಸಣ್ಣದಾದರೂ ಸೇವೆಯೇ ಆಗಿದೆ. ನಾಯಕತ್ವದ ಜೊತೆಗೆ ಜವಾಬ್ದಾರಿಯ ಬಗೆಗೂ ತಿಳಿಯುವ ಕಾರ್ಯ ರೋಟರಿ ಸಂಸ್ಥೆಯಲ್ಲಿದೆ. ಹೆಚ್ಚಿನ ಸದಸ್ಯರು ಸೇರ್ಪಡೆಯಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಝೋನ್ V ಆರ್.ಐ. ಜಿಲ್ಲೆ 3182 ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಪಿಎಚ್ಎಫ್ ಸೂರ್ಯಕಾಂತ್ ಶೆಟ್ಟಿ ಹೇಳಿದರು‌. ಅವರು ಉಚ್ಚಿಲದಲ್ಲಿ ಜರಗಿದ ಉಚ್ಚಿಲ ರೋಟರಿ ಸಂಸ್ಥೆಯ 2024 -25ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿ ಮಾತನಾಡಿದರು.

ನೂತನ ಅಧ್ಯಕ್ಷರಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಕುಂಡಂತಾಯ ಮತ್ತು ತಂಡದ ಪದಗ್ರಗಣ ನೆರವೇರಿತು.

ಗೌರವ/ಸನ್ಮಾನ : ಉಚ್ಚಿಲ ವ್ಯಾಪ್ತಿಯ ಶಾಲೆಗಳ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಮಥ್೯ ಆರ್ ಜೋಶಿ, ಶಹನ ಪಾತಿಮ, ಅಬ್ಶೀನ್ ಆಯೇಷ, ಶ್ರಿಷನ್ ಶೆಟ್ಟಿ, ಗಾಯತ್ರಿ ಪೈ, ಸಂಸ್ಥೆಗೆ ಸೇರ್ಪಡೆಗೊಂಡ ನೂತನ ಸದಸ್ಯರಾದ ನಗ್ಮ, ಶಿಮಾಝ್, ಚಂದ್ರಹಾಸ ಆಚಾರ್ಯರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶ್ರೀಮತಿ ಪಿ ಎಸ್ ಪುತ್ರಾಯರನ್ನು, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾದ ಶೇಖಬ್ಬ, ಅಚ್ಯುತ ಶೆಣೈ, ನೂತನ ಅಧ್ಯಕ್ಷ, ಕಾರ್ಯದರ್ಶಿಯಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಸತೀಶ್ ಕುಂಡಂತಾಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್ ಅನಿಲ್ ಡೇಸಾ, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ, ನಿಕಟಪೂರ್ವ ಕಾರ್ಯದರ್ಶಿ ಅಚ್ಯುತ ಶೆಣೈ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ ಸ್ವಾಗತಿಸಿದರು. ಅಚ್ಯುತ ಶೆಣೈ ವರದಿ ವಾಚಿಸಿದರು. ಸತೀಶ್ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಂಡಂತಾಯ ವಂದಿಸಿದರು.

ಕನ್ನಡ ಶಾಲೆ ಬೆಳೆಸಿ- ಕಲೆ ಸಂಸ್ಕೃತಿ ಉಳಿಸಿ ಅಭಿಯಾನ : ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

Posted On: 20-07-2024 07:22PM

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಬೆಳಕಿನ ಬಾಗಿಲು ಕನ್ನಡ ಶಾಲೆ~ಉಳಿಸಲು ಬೇಕು ಮಕ್ಕಳ ಲೀಲೆ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ಶಾಲೆ ಬೆಳೆಸಿ- ಕಲೆ ಸಂಸ್ಕೃತಿ ಉಳಿಸಿ ಅಭಿಯಾನದ ಬಿತ್ತಿಪತ್ರವನ್ನು ಉಡುಪಿ ಜನಪ್ರಿಯ ಶಾಸಕ ಯಶ್ ಪಾಲ್ ಸುವರ್ಣ ಅವರು ಉಡುಪಿಯ ಬೋರ್ಡ್ ಹೈಸ್ಕೂಲಿನ ಆವರಣದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿ ಕಸಾಪ ಉಡುಪಿ ತಾಲೂಕು ಘಟಕ ನಡೆಸುತ್ತಿರುವ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ ಮತ್ತು ಶ್ಲಾಘನೀಯ ಕೆಲಸ ಎಂದರು. ಶಾಸಕರ ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರು ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜಿನಿ ವಸಂತ್ , ಮಾರುತಿ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಡಾ. ಎಲ್ಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಲೀಲಾ ಭಟ್ ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ಕಿದಿಯೂರು ಹೋಟೆಲ್ ನ ಜಿತೇಶ್ ಕಿದಿಯೂರು, ಕಸಾಪ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸದಸ್ಯರಾದ ವಸಂತ್, ಈರಣ್ಣ ಕುರುವತ್ತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ಶೆಡ್

Posted On: 20-07-2024 02:00PM

ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯ ನಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಿದ್ದು ಕೆಲವು ದಿನಗಳ ಹಿಂದೆ ಅಪಾಯದಂಚಿನಲ್ಲಿದ್ದ ಮೀನುಗಾರಿಕಾ ಶೆಡ್ ಕಡಲಬ್ಬರಕ್ಕೆ ಸಿಲುಕಿ, ಹಾನಿಯಾಗಿದೆ. ಮೀನುಗಾರಿಕಾ ರಸ್ತೆಗೂ ಹಾನಿಯಾಗುವ ಸಂಭವವಿದೆ.

ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಇದಾಗಿದೆ. ಮೀನುಗಾರಿಕಾ ರಸ್ತೆಗೂ ಅಪಾಯದ ಸಂಭವವಿದೆ.

ಈ ಬಗ್ಗೆ ಕೂಡಲೇ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಜುಲೈ 21: ಕುಲಾಲ ಸಂಘ ನಾನಿಲ್ತಾರು ವತಿಯಿಂದ ಆಟಿಡೊಂಜಿ ಕೂಟ

Posted On: 19-07-2024 08:30PM

ಕಾರ್ಕಳ : ತಾಲೂಕಿನ ಮುಂಡ್ಕೂರು ಮುಲ್ಲಡ್ಕದ ಕುಲಾಲ ಸಂಘ (ರಿ.) ನಾನಿಲ್ತಾರು ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವು ಕುಲಾಲ ಭವನ ನಾನಿಲ್ತಾರು ಇಲ್ಲಿ ಜುಲೈ 21, ಆದಿತ್ಯವಾರದಂದು ಜರಗಲಿದೆ ಎಂದು ಸಂಘದ ಅಧ್ಯಕ್ಷರಾದ ಜಯರಾಮ ಕುಲಾಲ್ ಅಗರಟ್ಟ ಪ್ರಕಟಣೆಯಲ್ಲಿ ತಿಳಿಸಿರುವರು.

ಡೆಂಗ್ಯು ಬಗ್ಗೆ ನಿರ್ಲಕ್ಷ್ಯ ಬೇಡ : ಉಡುಪಿ ಜಿಲ್ಲಾಧಿಕಾರಿ

Posted On: 19-07-2024 08:21PM

ಉಡುಪಿ : ಡೆಂಗ್ಯೂ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ಡೆಂಗ್ಯೂನ ಬಗ್ಗೆ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನಮ್ಮ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ರೋಟರಿ ಕ್ಲಬ್ ಉದ್ಯಾವರ ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ನಡೆದ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಪಿ ಜಿಲ್ಲಾಧಿಕಾರಿ ಮಾತನಾಡಿದರು.

ಬೆಳಗ್ಗಿನ ಅವಧಿಯಲ್ಲಿ ಕಚ್ಚುವಂತಹ ಈ ಸೊಳ್ಳೆಗಳ ಮೂಲಕ ಡೆಂಗ್ಯೂ ಜ್ವರ ಹರಡುತ್ತಿದೆ. ಮನೆ ಪರಿಸರದಲ್ಲಿ ಚಿಪ್ಪು, ಚಹಾಲೋಟ ಸಹಿತ ವಿವಿಧ ಸ್ಥಳಗಳಲ್ಲಿ ನೀರು ನಿಂತರೆ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ಬಯಸುವುದು ಅತ್ಯಗತ್ಯ. ಕಹಿಬೇವಿನ ಎಣ್ಣೆ ಹಚ್ಚುವುದರ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು. ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮೂಲಕ ವಿವಿಧ ಕಡೆಗಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಶುಕ್ರವಾರ ಇಲಾಖಾ ವತಿಯಿಂದ ಡ್ರೈ ಆಚರಿಸಲಾಗುತ್ತಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ನೀಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡದ, ಜಿಲ್ಲಾ ರೋಗವಾಹಕ ಆಶ್ರುತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಪಿಡಿಒ ರಮೇಶ್, ಪಶುವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಉಡುಪಿ ಜಿಲ್ಲಾ ಕೀಟಶಾಸ್ತ್ರಜ್ಞ ಮುಕ್ತ ಆಚಾರ್, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಮೂಡಬೆಟ್ಟು ಆರೋಗ್ಯಧಿಕಾರಿ ಡಾ. ಶೈನಿ, ಲಯನ್ಸ್ ಇಂಟರ್ನ್ಯಾಷನಲ್ ಫೌಂಡೇಶನ್ ಜಿಲ್ಲಾ ಸಂಯೋಜನಾಧಿಕಾರಿ ಲಯನ್ ಹರಿಪ್ರಸಾದ್ ರೈ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್, ರೋಟರಿ ಕ್ಲಬ್ ಉದ್ಯಾವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರೆ, ರೋಟರಿ ಕ್ಲಬ್ ಉದ್ಯಾವರ ಅಧ್ಯಕ್ಷ ರೋಟೇರಿಯನ್ ಜೀವನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ನಾಳೆ (ಜುಲೈ 20) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 19-07-2024 07:57PM

ಉಡುಪಿ : ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 20) ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐ ಗಳಿಗೆ ರಜೆ ಘೋಷಿಸಿರುವುದಿಲ್ಲ.

ಜುಲೈ 19 : ಉದ್ಯಾವರದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ

Posted On: 18-07-2024 09:19PM

ಉದ್ಯಾವರ : ಕರ್ನಾಟಕ ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ರೋಟರಿ ಕ್ಲಬ್ ಉದ್ಯಾವರ ಹಾಗೂ ಗ್ರಾಮ ಪಂಚಾಯತ್ ಉದ್ಯಾವರ ಇವರ ಜಂಟಿ ಆಶ್ರಯದಲ್ಲಿ ಜುಲೈ 19 ಶುಕ್ರವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಬಳಿಯ ಕಾಲೋನಿಯಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ., ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಭಾಗವಹಿಸುತ್ತಿರುವ ಈ ಕಾರ್ಯಕ್ರಮವು ಬೆಳಿಗ್ಗೆ ಗಂಟೆ 9.45ಕ್ಕೆ ಸರಿಯಾಗಿ ಆರಂಭವಾಗಲಿದೆ. ಮಾಹಿತಿ ಕಾರ್ಯಕ್ರಮದ ಬಳಿಕ ಮನೆಮನೆ ಭೇಟಿಗೆ ನೀಡಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡದ, ಜಿಲ್ಲಾ ರೋಗವಾಹಕ ಆಶ್ರುತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲೆ ತ್ರಿ 317C ಲಯನ್ ಮುಂದಾಳು ಲಯನ್ ಹರಿಪ್ರಸಾದ್ ರೈ, ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ, ಪಿಡಿಒ, ಜನಪ್ರತಿನಿಧಿಗಳು ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉಚ್ಚಿಲ ದಸರಾ ಉತ್ಸವ - 2024 ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ : ಡಾ. ಜಿ. ಶಂಕರ್

Posted On: 18-07-2024 07:53PM

ಉಚ್ಚಿಲ : ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ ಅಕ್ಟೋಬರ್ 3 ರಿಂದ 12ರವರೆಗೆ ಸರ್ವರ ಸಹಕಾರದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಸಮಿತಿ, ಉಚ್ಚಿಲ ದಸರಾ ಸಮಿತಿಯ ಸಹಯೋಗದೊಂದಿಗೆ ಬುಧವಾರ ಉಚ್ಚಿಲ ಮೊಗವೀರ ಭವನದ ಶಾಲಿನಿ ಜಿ. ಶಂಕರ್ ವೇದಿಕೆಯಲ್ಲಿ ನಡೆದ ಉಚ್ಚಿಲ ದಸರಾ-2024 ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ದಿನಂಪ್ರತಿ ಚಂಡಿಕಾ ಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಪ್ರತಿನಿತ್ಯ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಮಹಿಳೆಯರಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾರ್ವಜನಿಕ ಉಪಹಾರದ ವ್ಯವಸ್ಥೆ ಮಾಡಲಾಗುವುದು. ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶ್ರೀ ಶಾರದಾ ಮಾತೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗಾಗಿ ಹುಲಿಕುಣಿತ ಸ್ಪರ್ಧೆ ನಡೆಯಲಿದೆ. ಮಾತ್ರವಲ್ಲದೆ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗುವುದು. ಸಾಮೂಹಿಕ ದಾಂಡಿಯ ನೃತ್ಯ, ಅವಿಭಜಿತ ದ.ಕ. ಜಿಲ್ಲೆ ವಿವಿಧ ತಂಡಗಳಿಂದ ಸಾಮೂಹಿಕ ಕುಣಿತ ಭಜನೆ ಇರಲಿದೆ. ಅ.12 ರಂದು ಶೋಭಾಯಾತ್ರೆಯು ಹೊರಡಲಿದ್ದು, ಕಾಪು ದೀಪಸ್ಥಂಭ ಬಳಿಯ ಸಮುದ್ರ ತೀರದಲ್ಲಿ ವಿಗ್ರಹಗಳ ವಿಸರ್ಜನೆ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ನವ ನವೀನ ಮಾದರಿಯ ಟ್ಯಾಬ್ಲೋಗಳು, ಹುಲಿವೇಷ ತಂಡಗಳು, ಭಜನಾ ತಂಡಗಳು, ಚೆಂಡೆ ಬಳಗ ಸೇರಿದಂತೆ ವಿವಿಧ ವೇಷ ಭೂಷಣಗಳು ಇರಲಿದೆ. ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರ ಮಧ್ಯೆ ಬೋಟುಗಳಿಂದ ವಿದ್ಯುತ್ ದೀಪಾಲಂಕಾರ, ಲೇಸರ್ ಶೋ, ಮಹಿಳೆಯರಿಂದ ಏಕಕಾಲದಲ್ಲಿ ಸಾಮೂಹಿಕ ಮಂಗಳಾರತಿಯ ಕಾರ್ಯಕ್ರಮವಿರುತ್ತದೆ. ಕಾಶಿಯ ಶ್ರೀ ವಿಶ್ವನಾಥ ಕ್ಷೇತ್ರದಿಂದ ಆಗಮಿಸುವ ಅರ್ಚಕರಿಂದ ಬ್ರಹತ್ ಗಂಗಾರತಿ ಬೆಳಗಿಸುವ ಕಾರ್ಯಕ್ರಮ, ಆಕರ್ಷಕ ಸುಡು ಮದ್ದು ಪ್ರದರ್ಶನ ಆಯೋಜಿಸಲಾಗುವುದು ಎಂದರು.

ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ, ವಿಭಿನ್ನವಾಗಿ ಹಾಗೂ ವಿಶ್ವಕ್ಕೆ ಮಾದರಿಯಾಗಿ ಉಚ್ಚಿಲ ದಸರಾ ನಡೆಸಲಾಗುತ್ತದೆ. ಹಿಂದಿನಂತೆ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ಮೀನು ಮಾರಾಟ ಫೆಡರೇಶನ್ ಉಚ್ಚಿಲ ದಸರಾದ ಭಾಗವಾಗಲಿದೆ. ಈ ಬಾರಿ ಮಹಿಳಾ ಹುಲಿ ವೇಷ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಸಂಸ್ಥೆಯ ವತಿಯಿಂದ ನಡೆಸಲಾಗುವುದು ಎಂದರು. ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಉಚ್ಚಿಲ ದಸರಾ ಮಹೋತ್ಸವವನ್ನು ಈ ಬಾರಿ ನಾಡಿಗೆ ಮಾದರಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಬಾರಿ ಸುಮಾರು ರೂ.4 ಕೋ. ವೆಚ್ಚದ ಬಜೆಟ್ ನಿರ್ಧರಿಸಲಾಗಿದ್ದು, ಜಾತಿ ಮತ ಬೇಧ ಮರೆತು ಸರ್ವರ ಸಹಕಾರ ಹಾಗೂ ವಿವಿಧ ಗ್ರಾಮಸಭೆಗಳು, ಮೀನುಗಾರ ಸಂಘಟನೆಗಳ ಬೆಂಬಲದೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು. ದ.ಕ.ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ ಮಾತನಾಡಿ, ಮೊಗವೀರ ಸಮಾಜದ ವೀರ ಪರಂಪರೆಯ ಪ್ರತೀಕವಾಗಿ ಈ ಬಾರಿ ಉಚ್ಚಿಲ ದಸರಾದಲ್ಲಿ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದರು.

ದಸರಾ ಸಮಿತಿಗೆ ಪುನರಾಯ್ಕೆ: ಕಳೆದ ಬಾರಿ ಉಚ್ಚಿಲ ದಸರಾ ಯಶಸ್ವಿಯ ವಿನಯ ಕರ್ಕೇರ ಮಲ್ಪೆಯವರನ್ನು ಈ ಬಾರಿ ಉಚ್ಚಿಲ ದಸರಾ-2024 ಸಮಿತಿಯ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಅವರು ಈ ಬಾರಿಯ ದಸರಾ ಮಹೋತ್ಸವದ ವಿವಿಧ ಸಮಿತಿಗಳನ್ನು ಘೋಷಿಸಿದರು. ಶ್ರೀ ಕ್ಷೇತ್ರ ಉಚ್ಚಿಲದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ಹಿರಿಯ ಮೊಗವೀರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ದಯಾನಂದ ಸುವರ್ಣ, ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಬೋಳೂರು, ಮಹಾಜನ ಸಂಘದ ಕೋಶಾಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಚೇತನ್ ಬೇಂಗ್ರೆ, ಮನೋಜ್ ಪಿ. ಕಾಂಚನ್, ಸುಗುಣಾ ಕರ್ಕೇರ, ಉದಯಕುಮಾರ್ ಹಟ್ಟಿಯಂಗಡಿ, ವರದರಾಜ್ ಬಂಗೇರ, ಸತೀಶ್ ಅಮೀನ್ ಬಾರ್ಕೂರು, ಮನೋಹರ್ ಬೋಳೂರು, ಯುವರಾಜ್ ಕಿದಿಯೂರು ಉಪಸ್ಥಿತರಿದ್ದರು. ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಭಾರತ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಕಲ್ಯಾಣಪುರ - ವಾರ್ಷಿಕ ಮಹಾಸಭೆ, ಪುನಶ್ಚೇತನ ಕಾರ್ಯಾಗಾರ

Posted On: 18-07-2024 07:40PM

ಉಡುಪಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಲ್ಯಾಣಪುರ ಇದರ ವಾರ್ಷಿಕ ಮಹಾಸಭೆ ಮತ್ತು ಪುನಶ್ಚೇತನ ಕಾರ್ಯಾಗಾರ ಜರಗಿತು.

ಜಿಲ್ಲಾ ಮುಖ್ಯ ಆಯುಕ್ತರಾಗಿ ಆಯ್ಕೆಯಾದ ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡಿ, ಶಿಸ್ತು, ತಾಳ್ಮೆ, ಸೇವೆ ಹಾಗೂ ಎಲ್ಲಾ ದಳ ನಾಯಕರ ಸಹಕಾರವಿದ್ದರೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸಲು ಹಾಗೂ ಮಾದರಿ ಜಿಲ್ಲೆಯನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯ ಎಂದು ತಿಳಿಸಿದರು.

ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಅಲನ್ ಲುವಿಸ್ ರವರು ವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಫ್ಲೋರಿನ ಡಿಸಿಲ್ವ ವಾರ್ಷಿಕ ವರದಿ , ನಡಾವಳಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಗೈಡ್ ಆಯುಕ್ತ ಜ್ಯೋತಿ ಜೆ ಪೈ. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಡಾ.ಜಯರಾಮ್ ಶೆಟ್ಟಿ ಹಾಗೂ ಖಜಾಂಚಿ ವಿಜಯ ಮಾಯಾಡಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆಯಾದ ಸುಮನ ಶೇಖರ್ ಜಿಲ್ಲಾ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ, ರಾಜ್ಯ ಸಂಸ್ಥೆ ನೀಡಿರುವ ವಾರ್ಷಿಕ ಯೋಜನಾ ಪುಸ್ತಕ ಹಸ್ತಾಂತರಿಸಿ ಅದರ ಬಗ್ಗೆ ವಿವರಿಸಿದರು.

ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಜಿಲ್ಲಾ ಕಾರ್ಯದರ್ಶಿ ಆನಂದ ಬಿ ಅಡಿಗ ನೆರವೇರಿಸಿದರು. ಸತ್ಯಾವತಿ ಸ್ವಾಗತಿಸಿದರು. ಕಬ್ ಮಾಸ್ಟರ್ ಶ್ರೀಪಾದ ಕಾರ್ಯಕ್ರಮ ನಿರ್ವಹಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕಾಪುಗೆ ಸಹಾಯಕ ಜಿಲ್ಲಾ ಆಯುಕ್ತರಾಗಿ ಸಮಾಜ ಸೇವಕ ಫಾರೂಕ್ ಚಂದ್ರನಗರ ನೇಮಕ

Posted On: 18-07-2024 07:29PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆಯ ಸಹಾಯಕ ಜಿಲ್ಲಾ ಆಯುಕ್ತರಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ ಎಂದು ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ಮರಿಯ ಅನಿತಾ ಮೆಂಡೋನ್ಸ ತಿಳಿಸಿದ್ದಾರೆ.

ಇವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರು ಶುಭ ಹಾರೈಸಿದ್ದಾರೆ.