Updated News From Kaup

ಪಡುಬಿದ್ರಿ : ಪತ್ರಿಕಾ ದಿನಾಚರಣೆ, ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿನಿಧಿ ವಿತರಣೆ

Posted On: 25-07-2024 07:28PM

ಪಡುಬಿದ್ರಿ : ಪತ್ರಕರ್ತರು ನಿರ್ಭೀತ ವರದಿ ಮಾಡುವ ಎದೆಗಾರಿಕೆ ಹಾಗೂ ನ್ಯಾಯ ನಿಷ್ಟುರವಾಗಿ ಸಮಾಜಮುಖಿ ಚಿಂತನೆಗಳನ್ನು ಮಂಡಿಸುವ ಗುಣಗಳನ್ನು ಹೊಂದಿರಬೇಕು ಎಂದು ತುಳು ಜಾನಪದ ಸಂಶೋಧಕ ಡಾ.ವೈ. ಎನ್. ಶೆಟ್ಟಿ ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪಡುಬಿದ್ರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಚರಣೆ ಹಾಗೂ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ- ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಉಪನ್ಯಾಸಗೈದರು. ಪತ್ರಕರ್ತರಲ್ಲಿ ಹಲವಾರು ಮಂದಿ ಆದರ್ಶ ವ್ಯಕ್ತಿತ್ವದವರಿದ್ದಾರೆ. ಈ ಪೈಕಿ ಹಿರಿಯ ಪತ್ರಕರ್ತ ದಿ. ಜಯಂತ್ ಅವರನ್ನು ಪರಿಗಣಿಸಬಹುದು ಎಂದು ಅವರು ನುಡಿದರು.

ಪತ್ರಕರ್ತ ಜಯಂತ್ ಪಡುಬಿದ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಮರಣೆಗೈಯಲಾಯಿತು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ವಿವಿಧ ದಿನಪತ್ರಿಕೆಗಳನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕಸಪಾ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ನೀಡಿದ್ದ 120 ಸಾಹಿತ್ಯಿಕ ಕೃತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತ ಜಯಂತ್ ಪಡುಬಿದ್ರಿ ದತ್ತಿನಿಧಿಯನ್ನು ಕಾಲೇಜಿನ 12 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತನ್ನ ಆಧುನಿಕತೆಗೆ ತಕ್ಕಂತೆ ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಮಾದ್ಯಮ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಜಯ್ ಕುಮಾರ್ ಎಸ್, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಗೀತಾ ಮಾತನಾಡಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಉಪಸ್ಥಿತರಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ಕುಂಜೂರು ವಂದಿಸಿದರು.

ಪಡುಬಿದ್ರಿ : ಕಡಲಬ್ಬರಕ್ಕೆ ಸಿಲುಕಿದ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನಮರಗಳು

Posted On: 25-07-2024 06:00PM

ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯ ನಡಿಪಟ್ಣ ಪ್ರದೇಶದಲ್ಲಿ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನ ಮರಗಳು ಸಮುದ್ರ ಪಾಲಾಗಿದೆ.

ಕಡಲ ಅಲೆಗಳ ಅಪ್ಪಳಿಸುವಿಕೆ ಹೆಚ್ಚಾಗುತ್ತಿದ್ದು ನಡಿಪಟ್ಣ ವಿಷ್ಣು ಭಜನಾ ಮಂದಿರ ಸಮೀಪದ ಮೀನುಗಾರರ ವಿಶ್ರಾಂತಿ ಗೃಹ ಪತನಗೊಂಡಿದೆ. ಇದರ ಜೊತೆಗೆ ಕೆಲವೊಂದು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಇತ್ತೀಚಿಗೆ ಇಲ್ಲಿಗೆ ಸಮೀಪದ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕಾ ಶೆಡ್ ಗೂ ಹಾನಿಯಾಗಿ, ಸಮೀಪದ ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಸಹಿತ ಜಿಲ್ಲಾಧಿಕಾರಿ, ತಹಶಿಲ್ದಾರ್ ಭೇಟಿ ನೀಡಿ, ತಾತ್ಕಾಲಿಕ ಪರಿಹಾರ ಎಂಬಂತೆ ತಡೆಕಲ್ಲುಗಳನ್ನು ಹಾಕುವ ಪ್ರಕ್ರಿಯೆ ಶುರುವಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ವಿಷ್ಣು ಭಜನಾ ಮಂದಿರದ ಸಮೀಪದ ಕಡಲ್ಕೊರೆತದ ಮುನ್ಸೂಚನೆ ನೀಡಿದ್ದರು.

ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಭರವಸೆಯಾಗಿ ಉಳಿದು ಈ ಭಾಗದ ಜನರು ಭಯದಿಂದ ಇರುವಂತಾಗಿದೆ.

ಈ ಭಾಗದಲ್ಲಿ ತಕ್ಷಣ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಬಂದು ನೋಡಿ ಭರವಸೆ ನೀಡುವುದು ನಮಗೆ ಬೇಕಿಲ್ಲ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ

Posted On: 25-07-2024 07:05AM

ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿಯು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಜರುಗಿತು. ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುಬ್ರಹ್ಮಣ್ಯ ಎಚ್, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಇವರು ಮಾತನಾಡಿ, ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದರು.

ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಸಂತೋಷ್ ರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ, ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ ಘನಶ್ಯಾಮ್ ರವರು ಉಪಸ್ಥಿತರಿದ್ದರು. ಕಾನೂನು ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಬೋಧಕೇತರ ಸಿಬ್ಬಂದಿ ವರ್ಗದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಭಾಷಾ ಉಪನ್ಯಾಸಕರಾದ ಶಿವಕುಮಾರ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಉಮೇಶ್ ರವರು ವಂದಿಸಿದರು.

ಉಡುಪಿ : ಆಟಿಡೊಂಜಿ ದಿನ ಮತ್ತು ಬಲೆ ತುಲುಟು ಪುದರ್ ಬರೆಕ ಅಭಿಯಾನ

Posted On: 25-07-2024 06:53AM

ಉಡುಪಿ : ಕರಾವಳಿ ಯುವಕ/ಯುವತಿ ಮಂಡಲ(ರಿ.) ಬಡಾನಿಡಿಯೂರ್ ಇವರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕರಾದ ಸುಲೋಚನಾ ಪಚ್ಚಿನಡ್ಕ ತುಳುನಾಡಿನ ಆಟಿ ತಿಂಗಳ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಜೈ ತುಲುನಾಡ್(ರಿ.) ಉಡುಪಿ ಘಟಕದ ವತಿಯಿಂದ ಬಲೆ ತುಲುಟು ಪುದರ್ ಬರೆಕ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ತುಲು ಭಾಷೆಯ ಉಳಿವಿಗಾಗಿ ಯಾವುದೇ ಒಂದು ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಜೈ ತುಲುನಾಡ್(ರಿ.) ಸಂಘಟನೆಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಜೈ ತುಲುನಾಡ್ (ರಿ.) ಕೇಂದ್ರ ಘಟಕದ ಮಾಜಿ ಅಧ್ಯಕ್ಷರಾದ ವಿಶು ಶ್ರೀಕೇರ ಮಾತನಾಡಿ, ಸಂಘವು ತುಲು ಭಾಷಾ ಉಳಿವಿಗಾಗಿ ನಡೆಸುತ್ತಿರುವ ಕಾರ್ಯವೈಖರಿಯ ಬಗ್ಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಕರಾವಳಿ ಮಹಿಳಾ ಮಂಡಲ ಅಧ್ಯಕ್ಷರಾದ ನಳಿನಿ ಸದಾಶಿವ, ಗೌರವಾಧ್ಯಕ್ಷೆ ಅಶ್ವಿನಿ ಉಮೇಶ್, ಕರಾವಳಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಂದ್ರ ಮೆಂಡನ್, ಸ್ಥಾಪಕಧ್ಯಕ್ಷರಾದ ಶಿವಾನಂದ ಸುವರ್ಣ ಗೌರವಾಧ್ಯಕ್ಷರಾದ ಗಂಗಾಧರ್ ಮೈಂದನ್, ಮಹಿಳಾ ಮಂಡಲ ಸ್ಥಾಪಕದ್ಯಕ್ಷರಾದ ಶೋಭಾ ಸಾಲ್ಯಾನ್, ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾದ ಪ್ರಜ್ಞಾಶ್ರೀ.ಎಂ ಕೊಡವೂರ್, ಸಂಘಟನಾ ಕಾರ್ಯದರ್ಶಿ ಯಾದ ಸಂತೋಷ್. ಎನ್. ಎಸ್ ಕಟಪಾಡಿ,ಕಾರ್ಯಕಾರಿ ಸಮಿತಿಯಸದಸ್ಯರಾದ ಸಾಗರ್ ಉಡುಪಿ, ವಿಶಾಂತ್ ಪೂಜಾರಿ ಉದ್ಯಾವರ,ತುಲುಲಿಪಿ ಶಿಕ್ಷಕಿಯಾದ ಸುಶೀಲಾ ಜಯಕರ್ ಕೊಡವೂರ್, ಮಾಜಿ ಸಂಘಟನಾ ಕಾರ್ಯದರ್ಶಿಯಾದ ಶೇಖರ್ ಶ್ರೀಗಂಗೆ, ಉಡುಪಿ ಹಾಗೂ ಕಾರ್ಕಳ ಘಟಕದ ಸದಸ್ಯರಾದ ಶಿವಪ್ರಸಾದ್ ಮಣಿಪಾಲ್, ಸುನಿಲ್ ಕುಮಾರ್ ಕಾರ್ಲ, ಸುರೇಶ್ ಶ್ರೀದುರ್ಗಾ, ಸುಹಾನಿ ಸುಜನ್ ಉಪಸ್ಥಿತರಿದ್ದರು.

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಅಪ್ಪ ಸೇವೆ

Posted On: 22-07-2024 08:25PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ವಾರ್ಷಿಕ ಸಾಮೂಹಿಕ ಅಪ್ಪ ಸೇವೆ ಸೋಮವಾರ ಸಂಜೆ ಸಂಪನ್ನಗೊಂಡಿತು.

ಅರ್ಚಕ ಗೋವಿಂದ ಭಟ್ ನೇತೃತ್ವದಲ್ಲಿ ಪೂಜಾ ವಿಧಿ - ವಿಧಾನ ನೆರವೇರಿತು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ದೇವಳದ ಅರ್ಚಕ ವೃಂದ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ 2025-26 ಸಾಲಿನಲ್ಲಿ ಬೆಳ್ಳಿ ಹಬ್ಬ ಸಂಭ್ರಮ - ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆ

Posted On: 22-07-2024 07:03AM

ಪಡುಬಿದ್ರಿ : ರೋಟರಿ ಕ್ಲಬ್ 2025-26 ಸಾಲಿನಲ್ಲಿ 25 ರ ಸಂವತ್ಸರದ‌ ಆಚರಣೆಯಲ್ಲಿದ್ದು ಇದರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆಗೊಂಡಿರುತ್ತಾರೆ.

ಉಪಾಧ್ಯಕ್ಷರಾಗಿ ಮಾಧವ ಸುವರ್ಣ, ಕಾರ್ಯದರ್ಶಿಯಾಗಿ ರಮೀಜ್ ಹುಸೇನ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪಿ .ಕೃಷ್ಣ ಬಂಗೇರ, ಸಮಿತಿ ಸದಸ್ಯರಾಗಿ ವೆೃ .ಸುಕುಮಾರ್, ಗಣೇಶ್ ಅಚಾರ್ಯ ಉಚ್ಚಿಲ, ಅಬ್ದುಲ್ ಹಮೀದ್, ರಿಯಾಜ್ ಮುದರಂಗಡಿ, ಗಣೇಶ್ ಅಚಾರ್ಯ ಎರ್ಮಾಳ್, ಕೇಶವ ಸಾಲ್ಯಾನ್, ಮಹಮ್ಮದ್ ನಿಯಾಜ್, ಗೀತಾ ಅರುಣ್, ತಸ್ನೀನ್ ಅರಾ, ಜ್ಯೋತಿ ಮೆನನ್, ಸುನಿಲ್ ಕುಮಾರ್ ಆಯ್ಕೆಯಾಗಿರುತ್ತಾರೆ.

ಯುವವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ - ವನಮಹೋತ್ಸವ ಕಾರ್ಯಕ್ರಮ

Posted On: 22-07-2024 06:53AM

ಉಡುಪಿ : ಯುವವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮದ ಎರಡನೇ ಕಾರ್ಯಕ್ರಮವಾದ ವನಮಹೋತ್ಸವವು ಜರಗಿತು. ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇದರ ಮಾಲಕರು, ಜಯಂಟ್ಸ್ ಗ್ರೂಪ್ ನ ಸಂಚಾಲಕರಾಗಿರುವ ಮಧುಸೂಧನ್ ಹೇರೂರು ಇವರು ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಸಿರೇ ಉಸಿರು ಅದಕ್ಕಾಗಿ ಗಿಡ ನೆಟ್ಟು ಪಾಲಿಸಿ ಪೋಷಿಸಿ ಹಾಗೂ ಸಂರಕ್ಷಿಸಿ, ಪ್ರತಿಯೊಂದು ಗಿಡಗಳಿಗೂ ದೈವೀಕ ಶಕ್ತಿ ಇದ್ದು ಗಿಡಗಳೊಂದಿಗೆ ನಾವಿದ್ದಾಗ ಮಾತ್ರ ಆಯಾ ಶಕ್ತಿಗಳ ಸಂಚಲನ ಸಾಧ್ಯ ಎಂದು ತಿಳಿಸಿದರು.

ಭವಿಷ್ಯದ ಬದುಕಿಗೆ ವೃಕ್ಷ ಬೆಳೆಸುವ ಸಂಕಲ್ಪದೊಂದಿಗೆ ಗಿಡ ನೆಡುವ ಮತ್ತು ಗಿಡ ವಿತರಣಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಸಹಭಾಗಿತ್ವ ಬ್ರಹ್ಮಾವರದ ಸುವರ್ಣ ಎಂಟರ್ಪ್ರೈಸಸ್ ವಹಿಸಿದ್ದು, ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಉಪ್ಪೂರು ವ್ಯ. ಸೇ. ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಜಯಕರ್ ಆಚಾರ್ ಮುಟ್ಟಿಕಲ್, ಸ್ಪಂದನ ವಿಶೇಷ ಚೇತನ ಸಂಸ್ಥೆಯ ಜನಾರ್ಧನ್ ಗಿಡ ನೆಟ್ಟು ಶುಭ ಹಾರೈಸಿದರು.

ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕುತ್ಯಾರು : ಕುತ್ಕುಲ್ ಬಳಿ ಕಾಲು ಸಂಕ ಇಲ್ಲದೆ ಗ್ರಾಮಸ್ಥರ ಪರದಾಟ

Posted On: 21-07-2024 07:14PM

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಕುಲ್ ಬಳಿ ಕಾಲು ಸಂಕ ಇಲ್ಲದೆ ಗ್ರಾಮಸ್ಥರಿಗೆ ಸಮಸ್ಯೆ ಆಗಿದ್ದು, ಈ ಬಗ್ಗೆ ಪಂಚಾಯತ್ ಗೆ ಮನವಿ ನೀಡಿದ್ದು ಈ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಾಗಿ ಸಮಾಜ ಸೇವಕ ಅಲ್ವಿನ್ ಪ್ರಕಾಶ್ ಡಿಸೋಜ, ಕೇಂಜ ಕುತ್ಯಾರು ಪ್ರಕಟಣೆಯಲ್ಲಿ ತಿಳಿಸಿರುವರು.

ಪಡುಬಿದ್ರಿ : ಬಿಲ್ಲವ ಸಂಘದಲ್ಲಿ ಆಟಿದ ಲೇಸ್

Posted On: 21-07-2024 06:41PM

ಪಡುಬಿದ್ರಿ : ತುಳುನಾಡಿನ ಪ್ರತಿ ಪದ್ದತಿಗೂ ಅದರದೇ ಮಹತ್ವವಿದೆ. ಹಿರಿಯರಿಂದ ಸಂಸ್ಕೃತಿ ಉಳಿದಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಆಟಿಯ ತಿನಿಸುಗಳು ವಿಶೇಷವಾಗಿದ್ದು, ಈ ತಿಂಗಳಿನಲ್ಲಿ ಇದು ದೇಹಕ್ಕೆ ಅವಶ್ಯವಾಗಿದೆ. ಹೆತ್ತವರ ಜೊತೆಗೆ ಮಕ್ಕಳು ಇಂತಹ ಕಾರ್ಯಕ್ರಮಗಳಿಗೆ ಬಂದರೆ ಯಶಸ್ವಿಯಾದಂತೆ. ಆಟಿಯ ಪದ್ಧತಿಗಳನ್ನು ಮುಂದುವರೆಸೋಣ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾಗ್ರಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಹಾಗೂ ಕಲ್ಪತರು ಮಹಿಳಾ ಸ್ವ ಸಹಾಯ ಗುಂಪಿನ ಆಶ್ರಯದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಕಲಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ ‌ಮಾತನಾಡಿದರು.

ಕವಯಿತ್ರಿ ಸುಗಂಧಿ ಶ್ಯಾಮ್ ಆಟಿ ತಿಂಗಳಿನ ಮಹತ್ವದ ಬಗೆಗಿನ ಕವನ ವಾಚಿಸಿದರು. ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿದ ಮಹಿಳೆಯರನ್ನು ಗುರುತಿಸಲಾಯಿತು.

ವೇದಿಕೆಯಲ್ಲಿ ಕನ್ನಂಗಾರು ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸೀನ ಪೂಜಾರಿ, ಪಡುಬಿದ್ರಿ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್, ಪಡುಬಿದ್ರಿ ಬಿಲ್ಲವ ಸಂಘದ ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು, ವೈದ್ಯೆ ಡಾ.ಐಶ್ವರ್ಯ ಸಿ. ಅಂಚನ್, ಪಡುಬಿದ್ರಿ ಬಿಲ್ಲವ ಸಂಘದ ಅರ್ಚಕರಾದ ಚಂದ್ರಶೇಖರ ಶಾಂತಿ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್ ಉಪಸ್ಥಿತರಿದ್ದರು

ಸುಜಾತ, ಪೂರ್ಣಿಮ ಪ್ರಾರ್ಥಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ‌ ಆನಂದ್ ಸ್ವಾಗತಿಸಿದರು. ಚಿತ್ರಾಕ್ಷಿ ಕೆ. ಕೋಟ್ಯಾನ್ ಆಟಿ ರಸಪ್ರಶ್ನೆ ನಡೆಸಿಕೊಟ್ಟರು. ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ತೇಜಾವತಿ ವಂದಿಸಿದರು. ಮಹಿಳೆಯರಿಂದ ಜಾನಪದ ನೃತ್ಯ, ಗಾಯನವು ಜರಗಿತು. ಆಟಿ‌ ವಿಶೇಷತೆಯ ಸುಮಾರು 20 ಬಗೆಯ ತಿನಿಸುಗಳನ್ನು ಉಣ ಬಡಿಸಲಾಯಿತು.

ಪಡುಬಿದ್ರಿ : ನಡಿಪಟ್ಣ ಕಡಲ್ಕೊರೆತ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಭೇಟಿ

Posted On: 21-07-2024 06:33PM

ಪಡುಬಿದ್ರಿ : ಇಲ್ಲಿನ ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷೀ ಹೆಬ್ಬಾಳ್ಕರ್ ರವಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ 478 ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದ 3,100 ಕಿ.ಮೀ. ಕರಾವಳಿ ತೀರದಲ್ಲಿ ಉಡುಪಿ ಜಲ್ಲೆಯಲ್ಲಿಯೇ ಹೆಚ್ಚು ಭಾಗವಿದೆ. ಕಡಲ್ಕೊರೆತಕ್ಕೆ ತೀರದಲ್ಲಿ ಪ್ರಸ್ತುತ ಹಾಕಲಾಗುತ್ತಿರುವ ಕಲ್ಲುಗಳು ತಾತ್ಕಾಲಿಕ ಪರಿಹಾರವಾಗಿದ್ದು, ತಡೆಗೋಡೆ ನಿರ್ಮಾಣವೊಂದೇ ಶಾಶ್ವತ ಪರಿಹಾರ. ಮುಂಬಯಿ, ಗುಜರಾತ್ ಮಾದರಿಯ ತಡೆಗೋಡೆ ನಿರ್ಮಾಣವಾಗಬೇಕಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಸೇರಿ ಮಾಡಬೇಕಾಗಿದೆ. ಅನುದಾನದ ವಿಷಯದಲ್ಲಿ ಬೇರೊಬ್ಬರ ಮೇಲೆ ಆರೋಪ ಮಾಡಲ್ಲ. ನನ್ನ ಅವಧಿಯಲ್ಲಿಯೇ ಈ ಕಾರ್ಯ ಆಗಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭ ಸ್ಥಳೀಯರು ಕಡಲ್ಕೊರೆತ ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.

ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಸಿಸ್ಟೆಂಟ್ ಕಮಿಷನರ್ ರಶ್ಮಿ, ಕಾಪು ತಹಶಿಲ್ದಾರ್ ಡಾ. ಪ್ರತಿಭ ಆರ್., ಕಾಪು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ' ಸಿಲ್ವ, ಇಲಾಖಾ ಆಧಿಕಾರಿಗಳು ಉಪಸ್ಥಿತರಿದ್ದರು.