Updated News From Kaup

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ : ಕಟಪಾಡಿ ಕಾರುಣ್ಯ ವೃದ್ಧಾಶ್ರಮ ಭೇಟಿ

Thumbnail
Posted On: 25 Nov 2020, 04:53 PM

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಇಂದು ಭೇಟಿ ನೀಡಿ ಪ್ರತಿ ತಿಂಗಳು ನಡೆಸುವ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ನೀಡುವ ಜೊತೆಗೆ ತಂಡದ ಚಿರಪರಿಚಿತರಾದ ಸಿಲೋಮ್ ಅವರ ಹುಟ್ಟುಹಬ್ಬವನ್ನು ಅಲ್ಲಿಯ ವೃದ್ಧರಿಗೆ ಊಟ ಹಾಗೂ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ಊಟದ ವ್ಯವಸ್ಥೆಯನ್ನು ಮಾಡಿದ ಸಿಲೋಮ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ಸಮರ್ಪಿಸಲಾಯಿತು. ಡಾ. ಕೀರ್ತಿ ಪಾಲನ್ ಅವರು ಅಲ್ಲಿಯ ವೃದ್ಧ ಮಹಿಳೆಯರಿಗೆ ಸೀರೆ ಹಂಚಿದರು. ಆಸರೆ ತಂಡದ ಸ್ಥಾಪಕಾಧ್ಯಕ್ಷರು ಡಾ. ಕೀರ್ತಿ ಪಾಲನ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಆಸರೆ ತಂಡದ ಜಗದೀಶ್ ಬಂಟಕಲ್, ಮೋಕ್ಷ ಪಾಲನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಡುಪಿ : ಎರಡು ಕಾಲಿಲ್ಲದ ಯುವತಿಗೆ ಬಾಳು ನೀಡಿದ ದುಬೈ ಉದ್ಯೋಗಿ

Thumbnail
Posted On: 25 Nov 2020, 01:27 PM

ಉಡುಪಿಯ‌ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಹುಟ್ಟಿನಿಂದಲೇ ಸೌಂದರ್ಯವತಿಯಾಗಿದ್ದರೂ ಪೋಲಿಯೋ ಎಂಬ ಮಹಾಮಾರಿ ಆಕೆಯ ಎರಡೂ ಕಾಲುಗಳನ್ನ ಕಿತ್ತುಕೊಂಡಿತ್ತು. ಈ ಅಂಗವೈಕಲ್ಯತೆ ಆಕೆಯ ನೆಮ್ಮದಿ ಹಾಳುಮಾಡಿತ್ತು.‌ ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾರೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ‌ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ನಿನ್ನೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು. ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯ ಕರಂಬಳ್ಳಿಯಲ್ಲಿ ನಡೆದ ಈ ಆದರ್ಶ ಮದುವೆಯೇ ಸಾಕ್ಷಿ. ಈಗಿನ‌ ಕಾಲದಲ್ಲಿ ದೇಹದಲ್ಲಿ ಒಂದು ಸಣ್ಣ ವೈಕಲ್ಯತೆ ಕಂಡರೂ ಹುಡುಗಿ ನನಗೆ ಬೇಡ ಅನ್ನುವವರೆ ಜಾಸ್ತಿ. ಆದರೆ, ದುಬೈನಂತಹ ಸಿರಿತನದ ನಾಡಿನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಯುವಕ ಕಾಲಿಲ್ಲದ ಯುವತಿಗೆ ಬಾಳುಕೊಡುವ ನಿರ್ಧಾರ ಮಾಡಿ‌ ಸುನಿತಾಳ ಕೈಹಿಡಿದಿರೋದು ಮಾನವೀಯತೆಗೆ ಹಿಡಿದ‌ ಕೈಗನ್ಬಡಿ ಅಂದರೆ ತಪ್ಪಾಗಲ್ಲ.

ಮಲೈಕಾ ಸೊಸೈಟಿ : ಮಂಗಳೂರು ಶಾಖೆ ಮ್ಯಾನೇಜರ್ ಬಂಧನ

Thumbnail
Posted On: 25 Nov 2020, 01:21 PM

ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂದಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಂಗಳೂರು ಶಾಖೆಯ ಮ್ಯಾನೇಜರ್‌ವೊಬ್ಬರನ್ನು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಪೊಲೀಸರು ಬಂಧಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮ್ಯಾನೇಜರ್ ರೀನಾ ಜೋಶ್ ಎಂಬವರನ್ನು ಬಂಧಿಸಿರುವ ಪೊಲೀಸರು ಬೆಂದೂರ್‌ವೆಲ್‌ನಲ್ಲಿರುವ ಪ್ರಧಾನ ಕಚೇರಿಗೆ ಕರೆ ತಂದು ತನಿಖೆ ನಡೆಸಿ, ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಮುಂಬೈ, ಮಂಗಳೂರು, ಉಡುಪಿ ಸಹಿತ ವಿವಿಧೆಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ.ಆಕರ್ಷಕ ಗರಿಷ್ಠ ಬಡ್ಡಿ ನೀಡುವ ಆಮಿಷ ತೋರಿಸಿ 800ಕ್ಕೂ ಅಧಿಕ ಮಂದಿ 350 ಕೋಟಿ ರೂ.ಗಿಂತಲೂ ಅಧಿಕ ಹಣ ಠೇವಣಿ ಇಡುವಂತೆ ಮಾಡಿದ್ದಾರೆ. ಠೇವಣಿ ಬಡ್ಡಿ ಸಮೇತ ಹಿಂದಿರುಗಿಸುವ ಸಮಯವಾದರೂ ಹಣ ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಮಲೈಕಾ ಸೊಸೈಟಿ ಮಂಗಳೂರು ಶಾಖೆಯ ಮ್ಯಾನೇಜರ್ ರೀನಾ ಜೋಶ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮಾರಿಪೂಜೆ ಆಚರಣೆ

Thumbnail
Posted On: 25 Nov 2020, 12:27 AM

ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದಲ್ಲಿ ಇಂದು ಕಾಲಾವಧಿ ಜಾರ್ದೆ ಮಾರಿಪೂಜಾ ಜಾತ್ರೆ. ಸರಕಾರದ ಕೋರೋನಾ ನಿರ್ಭಂಧ ಕಾರಣ ಸರಳ ರೀತಿಯಲ್ಲಿ ಧಾರ್ಮಿಕ ಆಚರಣೆಗಳು ಜರಗಿತು.

ಕರಾವಳಿಯಲ್ಲಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು: ಸಚಿವ ಮಾಧುಸ್ವಾಮಿ

Thumbnail
Posted On: 24 Nov 2020, 10:55 PM

ಉಡುಪಿ : ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು. ಅವರು ಮಂಗಳವಾರ ಬೈಂದೂರಿನ ಪಡುವರಿಯಲ್ಲಿ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸಿದ್ದು, ದಕ್ಷಿಣ ಕನ್ನಡದಲ್ಲಿ 446, ಉಡುಪಿಯಲ್ಲಿ 424 ಉಡುಪಿಯಲ್ಲಿ, 466 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು 5 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಕಿಂಡಿ ಅಣೆಕಟ್ಟು ಮೂಲಕ ನೀರನ್ನು ಸಂಗ್ರಹಿಸಿ, ಕುಡಿಯುವ ನೀರಿನ ಬಳಕೆಗೆ ಮತ್ತು ರೈತರಿಗೆ ಕೃಷಿ ಬಳಕೆಗೆ ಬಳಸಲಾಗುವುದು ಎಂದ ಅವರು, ಕಿಂಡಿ ಆಣೆಕಟ್ಟುಗಳ ಹಲಗೆಗಳ ನಿರ್ವಹಣೆಗೆ 4 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸಂಗ್ರಹಗೊಳ್ಳುವ ನೀರಿನಲ್ಲಿ ಮೀನುಗಾರಿಕೆ ಸೇರಿದಂತೆ ಸೀಗಡಿ ಕೃಷಿಯನ್ನು ಕೈಗೊಳ್ಳಲು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬಯಲುಸೀಮೆಯ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ 24 ಸಾವಿರ ಕೋಟಿ ವ್ಯಯಿಸಿ ಎತ್ತಿನ ಹೊಳೆ ಯೋಜನೆಯಡಿ 24 ಟಿಎಂಸಿ ನೀರನ್ನು ಕೊಂಡೊಯ್ಯಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಆದರೆ ಕರಾವಳಿ ಭಾಗದಲ್ಲಿ 1 ಅಥವಾ 2 ಕೋಟಿ ರೂ ವೆಚ್ದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ 1 ರಿಂದ 2 ಟಿಎಂಸಿ ನೀರು ನಿಂತು, ಈ ಭಾಗದ ಜನರಿಗೆ ಕುಡಿಯುವ ನೀರು , ಕೃಷಿಗೆ ಅನುಕೂಲವಾಗುವುದರ ಜೊತೆಗೆ ಜನರು ಸೇತುವೆಯ ಬಳಕೆಯಾಗಿ ಸುತ್ತುವರಿದು ಸಂಚರಿಸುವುದು ತಪ್ಪುತ್ತದೆ ಎಂದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಲಜೀವನ್ ಮಿಷನ್ ಯೋಜನಯಡಿ ಬೈಂದೂರು ತಾಲೂಕಿನ ಪ್ರತೀ ಮನೆಗೆ ಕುಡಿಯುವ ನೀರು ನೀಡುವ ಉದ್ದೇಶ ಹೊಂದಲಾಗಿದೆ, ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗುವುದು ಮತ್ತು ಬೈಂದೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ತಾಲೂಕಿನಲ್ಲಿ 5 ನದಿಗಳು ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ, ಸುಮಾರು 50 ವರ್ಷಗಳ ಬೇಡಿಕೆಯಾದ ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಬಾಬು ಶೆಟ್ಟಿ, ಸುರೇಶ್ ಬಟವಾಡೆ, ಶಂಕರ ಪೂಜಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮಟ್ಟು ಪರಿಸರದ ಜನತೆಯನ್ನು ಭಯಭೀತರನ್ನಾಗಿಸಿದ ಬಯೋಲುಮಿನೆಸೆಂಟ್ ನೀಲಿ ಸಮುದ್ರ

Thumbnail
Posted On: 23 Nov 2020, 05:28 PM

ರಾತ್ರಿಯಲ್ಲಿ ನೀವು ಸಮುದ್ರ ತೀರಕ್ಕೆ ಹೋದಾಗ ಸಮುದ್ರ ನೀಲಿ ಹೊಳಪಿನಿಂದ ಪ್ರಕಾಶಿಸಲ್ಪಟ್ಟಾಗ ನೀವು ಹೇಗೆ ಭಾವಿಸುತ್ತೀರಿ? ನೀವು ಸ್ವಲ್ಪ ಭಯಭೀತರಾಗಬಹುದು? ಚಿಂತಿಸಬೇಕಾಗಿಲ್ಲ. ಇದು ನಿಜವಾಗಿಯೂ ನೈಸರ್ಗಿಕ ಮತ್ತು ವೈಜ್ಞಾನಿಕವಾಗಿದೆ. ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಹಾಗೂ ಪಡುಕೆರೆ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ಸಮುದ್ರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದು. ಜನರು ರಾಸಾಯನಿಕ ವಸ್ತು ವಿಲೀನವಾಗಿರಬೇಕೆಂದು ಊಹಿಸಿದ್ದಾರೆ ಆದರೇ ಇದನ್ನು ಬಯೋಲುಮಿನಿಸೆಂಟ್ ಎಂದು ಕರೆಯಲಾಗುತ್ತದೆ.
ಬಯೋಲುಮಿನೆಸೆಂಟ್ ಬೀಚ್ ವಿದ್ಯಮಾನ
ರಾತ್ರಿಯಲ್ಲಿ ಸಮುದ್ರವು ನೀಲಿ ಹೊಳಪನ್ನು ಹೊಂದಿರುವುದನ್ನು ನೀವು ನೋಡಿದ್ದರೆ, ಅದನ್ನು ಬಯೋಲುಮಿನೆಸೆಂಟ್ ಎಂದು ಹೇಳಬಹುದು. ಬೆಳಕನ್ನು ಜೀವಂತ ಜೀವಿ ಹೊರಸೂಸುತ್ತದೆ ಇದನ್ನು ಕೆಮಿಕಲ್ ಅಥವಾ ಇನ್ನೇನೋ ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಈ ಬಯೋಲುಮಿನೆಸೆಂಟ್ ವಿದ್ಯಮಾನದೊಂದಿಗೆ ಜಗತ್ತಿನಲ್ಲಿ ಕೆಲವು ಕಡಲತೀರಗಳು ಮಾತ್ರ ಇವೆ.
ಮಾಲ್ಡೀವ್ಸ್‌ನಲ್ಲಿರುವವು ಅವುಗಳಲ್ಲಿ ಒಂದು, ಜಮೈಕಾ, ಸ್ಯಾನ್ ಡಿಯಾಗೋ, ವಿಯೆಟ್ನಾಂ, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲೂ ಇವೆ. ಮಾಲ್ಡೀವ್ಸ್ನಲ್ಲಿ ಮಾತ್ರ, ಈ ಬಯೋಲುಮಿನೆಸೆಂಟ್ ವಿದ್ಯಮಾನ ಕಾಣ ಸಿಗುತ್ತವೆ. ಸಮುದ್ರದ ಅಲೆಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ರಾತ್ರಿಯಲ್ಲಿ ಕಾಣುವ ಬೆಳಕನ್ನು ಅವು ಉತ್ಪಾದಿಸುತ್ತವೆ. ಸಮುದ್ರವು ಸೂಕ್ಷ್ಮಜೀವಿಗಳು ಮತ್ತು ಸೂಕ್ಷ್ಮಾಣುಜೀವಿಗಳಿಂದ ತುಂಬಿದೆ ಎಂದು ತೋರುತ್ತದೆ, ಇದು ನೀಲಿ ಹೊಳಪನ್ನು ಉಂಟುಮಾಡುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ.
ಸಮುದ್ರದಲ್ಲಿ ಹಲವಾರು ರೀತಿಯ ಪ್ಲ್ಯಾಂಕ್ಟನ್ಗಳಿವೆ, ಅದು ತೊಂದರೆಗೀಡಾದಾಗ ಬೆಳಕನ್ನು ಹೊರಸುಸುತ್ತವೆ. ಬೆಳಕುಗಳು ಅವುಗಳ ರಕ್ಷಣಾ ಕಾರ್ಯವಿಧಾನ. ಬೆಳಕನ್ನು ಉತ್ಪಾದಿಸುವ ಲ್ಯೂಸಿಫೆರಿನ್ ಎಂಬ ರಾಸಾಯನಿಕದಿಂದ ಬೆಳಕನ್ನು ಉತ್ಪಾದಿಸಲಾಗುತ್ತದೆ. ಪ್ರತಿಯೊಂದು ಜೀವಿಗೂ ಬೆಳಕನ್ನು ಉತ್ಪಾದಿಸಲು ತಮ್ಮದೇ ಆದ ಮಾರ್ಗವಿದೆ. ಕೆಲವೊಂದು ಜೀವಿಗಳು ತಮ್ಮದೇ ಆದ ಲೂಸಿಫೆರಿನ್ ಅನ್ನು ಉತ್ಪಾದಿಸಬಹುದು, ಆದರೆ ಕೆಲವೊಂದು ಜೀವಿಗಳಿಗೆ ಜೀವಂತ ಜೀವಿಗಳನ್ನು ತಿನ್ನುವ ಅಗತ್ಯವಿರುತ್ತದೆ. , ಈ ನೈಸರ್ಗಿಕವಾದ ಬೆಳಕು ಬಹಳ ವಿಶಿಷ್ಟವಾಗಿದೆ.
ಸಂಗ್ರಹ : ವಿಕ್ಕಿ ಪೂಜಾರಿ ಮಡುಂಬು

ಉಚ್ಚಿಲ: ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತ್ಯು

Thumbnail
Posted On: 23 Nov 2020, 12:57 PM

ಉಚ್ಚಿಲ : ಸ್ಕೂಟರ್ ಸವಾರನೋರ್ವ ಲಾರಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ. ಉಚ್ಚಿಲ ಪೇಟೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸವಾರ ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಬಿ ಕೋಟ್ಯಾನ್ (65) ಎಂದು ಗುರುತಿಸಲಾಗಿದೆ.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ : ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ

Thumbnail
Posted On: 22 Nov 2020, 09:40 PM

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬಿದ್ಕಲಕಟ್ಟೆ ಮೊಳಹಳ್ಳಿ, ಕೋಣಿಹಾರ ಗ್ರಾಮಕ್ಕೆ ಭೇಟಿನೀಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದಿಗಳನ್ನು ನೀಡಲಾಯಿತು. ಮಾಜಿ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಹೆಗ್ಡೆ, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೊನಿ ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸರೆ ತಂಡದ ಅಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿ, ಜನರಿಗೆ ಕೊರೊನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಈ ಕಾರ್ಯಕ್ರಮವನ್ನು ಮಾಜಿ ಸೈನಿಕ, ಕೋಣಿಹಾರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಯಶವಂತ್ ಅವರು ಆಯೋಜಿಸಿದ್ದರು. ಈ ಕಾರ್ಯಕ್ರಮ ನಡೆಸಲು ವಿಠ್ಠಲ್ ಶೆಟ್ಟಿ ಸ್ಥಳಾವಕಾಶ ನೀಡಿದ್ದರು. ಗ್ರಾಮದ 72 ಜನ ಇಂದಿನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಆಸರೆ ತಂಡದ ಜಗದೀಶ್ ಬಂಟಕಲ್, ಬೇಬಿ ಶೆಟ್ಟಿ ಅಂಬಾಗಿಲು, ಕಾರ್ತಿಕ್ ಆಚಾರ್ಯ ಅಂಬಲ್ಪಾಡಿ, ಅರುಣ್ ಹಾಗೂ ದಿನೇಶ್ ರಾವ್ ಉಪಸ್ಥಿತರಿದ್ದರು.

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು : ರಾಘವೇಂದ್ರ ಪ್ರಭು,ಕವಾ೯ಲುಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Thumbnail
Posted On: 22 Nov 2020, 02:25 PM

ಉಡುಪಿ. :- ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನ .22 ರಂದು ಯಲಹಂಕ ಉಪನಗರ ಪ್ರಖ್ಯಾತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಗೌರವ ಕಾಯ೯ಕ್ರಮದಲ್ಲಿ ಸಾಮಾಜಿಕ ಕಾಯ೯ಕತ೯ ತರಬೇತಿದಾರ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸಾಮಾಜಿಕ ಸೇವೆ ಮತ್ತು ಯುವ ಸಂಘಟನೆ ವಿಭಾಗದಲ್ಲಿ " ಕನ್ನಡ ರಾಜ್ಯೋತ್ಸವ " ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಚ್ಛ ಭಾರತ ಫ್ರೆoಡ್ಸ್ ಸಂಯೋಜಕರಾಗಿರುವ ಇವರು ಅನೇಕ ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ.ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂತಿ೯ ಅರಳಿ ನಾಗರಾಜ್, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್, ಗುಣವಂತ ಮಂಜು ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ : ಹಿರಿಯ ಮುದ್ರಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

Thumbnail
Posted On: 22 Nov 2020, 01:36 PM

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಇವರ ವತಿಯಿಂದ ಹಿರಿಯ ಮುದ್ರಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಶ್ರಾಂತ ಉಪಸಂಪಾದಕರು, ಉದಯವಾಣಿ ಮಣಿಪಾಲದ ನಿತ್ಯಾನಂದ ಪಡ್ರೆ ಭಾಗವಹಿಸಿದ್ದರು. ಸನ್ಮಾನ : ದೊಡ್ಡಣಗುಡ್ಡೆಯ ವರದೇಂದ್ರ ಪ್ರಿಂಟರ್ಸ್ ಮಾಲಕರಾದ ಮಂಜುನಾಥ್ ಶೆಣೈ, ಕಾಪುವಿನ ವಿವೇಕ್ ಪ್ರಿಂಟರ್ಸ್ ಮಾಲೀಕರಾದ ವಿಠಲ ಪೂಜಾರಿ, ಕೋಟೇಶ್ವರದ ಅರುಣ ಪ್ರಿಂಟರ್ಸ್ ಮಾಲಕರಾದ ವೆಂಕಟರಮಣ ಐತಾಳ್, ಕಾರ್ಕಳದ ಸಮತಾ ಗ್ರಾಫಿಕ್ಸ್ ಮಾಲಕರಾದ ಶಿಶುಪಾಲ ಜೈನ್ ರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ : ಎಸ್ಸೆಸ್ಸೆಲ್ಸಿಯಲ್ಲಿ ಶೇ.75 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.75 ಕ್ಕಿಂತ ಮೇಲ್ಪಟ್ಟು ಅಂಕ ಬಂದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಮುದ್ರಣಾಲಯಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.