Updated News From Kaup
ಕರೋನಾ ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ

Posted On: 23-07-2020 07:25PM
ಕರೋನಾದಿಂದ ಎಲ್ಲಾ ಜನರ ಮನಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗುತ್ತಿದೆ.ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧ ಮತ್ತು ಬದುಕಿನ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಆದರೆ ನಾವು ಈ ಬದಲಾವಣೆ ಒಪ್ಪಿಕೊಳ್ಳಲು ತಯಾರಾಗಿಲ್ಲ. ಬದುಕು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತದೆ ನಾವು ಯಾಕೆ ಬದಲಾವಣೆಯಾಗಬೇಕು ಎನ್ನುವ ಪ್ರಶ್ನೆ, ಹಲವರದ್ದಾಗಿದೆ. ಇದನ್ನು ನಾವು ಗುಣಾತ್ಮಕ ಸ್ಥಿತಿಗತಿಗಿಂತಲೂ ಬದಲಾವಣೆಗೆ ಒಗ್ಗಿಕೊಳ್ಳಲು ಸಿದ್ದವಾಗದ ಹೆದರಿಕೆ ಎಂದು ಹೇಳಬಹುದು. ಮಾನವ ಜನಾಂಗ ಸಹಸ್ರಾರು ವಷ೯ಗಳಿಂದ ಎಲ್ಲಾ ಸಂಕಷ್ಟಗಳು ಎದುರಿಸಿಯೂ ವಿಕಸನಗೊಂಡು ಬಲಗೊಳ್ಳಲು ಅದಕ್ಕೆ ಕಾರಣ ನಮ್ಮ ಲಕ್ ಅಲ್ಲ ಬದಲಾಗಿ ಬದಲಾವಣೆಗೆ ತ್ವರಿತವಾಗಿ ಒಗ್ಗಿಕೊಳ್ಳುವ ಗುಣ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಈ ವಷ೯ ಜನರ ಬಿಡುವಿಲ್ಲದ ಜಂಜಾಟಕ್ಕೆ ಬ್ರೇಕ್ ಬಿದ್ದಿದೆ.ಜನರ ಅಸೆ ಆಕಾಂಕ್ಷೆಗಳ ಈಡೇರಿಕೆಗೆ ತೊಂದರೆಯಾದರೂ ಹಲವಾರು ವಷ೯ಗಳಿಂದ ಸವಿ೯ಸ್ ಇಲ್ಲದೆ ತೊಂದರೆಗಳ ಮಧ್ಯೆ ಸಿಲುಕಿದ ಬದುಕಿಗೆ ಹೊಸ ಚೈತನ್ಯ ತುಂಬಿ ರಿಪೇರಿ ಮಾಡಲು ಹೊಸ ಅವಕಾಶ ಈ ಕರೋನಾ ಅವಧಿ ನಮಗೆ ಕೊಟ್ಟಿದೆ. ಹಲವಾರು ಜನರಿಗೆ ಅದರಲ್ಲಿಯೂ ಉದ್ಯೋಗಿಗಳಿಗೆ, ಹೊಸ ಉದ್ಯಮಿಗಳಿಗೆ ಈಗ ನಿಸ್ಸಂದೇಹವಾಗಿ ಅತ್ಯಂತ ಬಿಕ್ಕಟ್ಟಿನ ಸಮಯವಾದರೂ ಈ ಹಿನ್ನಲೆಯಲ್ಲಿ ಸಾಗಿ ಬಂದ ಹಾದಿಯ ಅವಲೋಕನ ನಡೆಸಿ ಹೊಸ ರೂಪುರೇಶೆ ಮತ್ತು ನಾವು ಮುಂದೆ ಯಾವ ರೀತಿಯಲ್ಲಿರಬೇಕು ಎಂದು ಯೋಜನೆ ರೂಪಿಸಲು ಅಪೂವ೯ ಅವಕಾಶ. ಈ ಕರೋನಾ ನಮಗೆ ನೀಡಿದೆ ಇದನ್ನು ಸಮಥ೯ವಾಗಿ ಎಲ್ಲರೂ ಬಳಸಿದರೆ ಮುಂದೆ ಉತ್ತಮ ಜೀವನ ಸಾಗಿಸಲು ಸಹಾಯವಾಗುತ್ತದೆ. ಜಗತ್ತಿನ ಹಲವಾರು ದೇಶಗಳು ಸೇರಿದಂತೆ ನಮ್ಮ ವಿವಿಧ ರಾಜ್ಯಗಳಲ್ಲಿ ಜನರು ತಮ್ಮ ಬದುಕಿನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಸರಕು ಸರಂಜಾಮುಗಳೊಂದಿಗೆ ನಗರ ಬಿಟ್ಟು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.ಇವರು ನಗರಗಳಿಗೆ ಹೆದರಿ ಹೋಗುತ್ತಿದ್ದಾರೆ ಎಂದರೆ ತಪ್ಪಾಗ ಬಹುದು ಅವರು ಹಳ್ಳಿಗೆ ಹೋದಾಗ ತಮ್ಮ ಹೊಸ ಜೀವನ ರೂಪಿಸಲು ಬೇಕಾದ ಯೋಜನೆ ರೂಪಿಸಲು ಪ್ರಾರಂಭಿಸಿದ್ದಾರೆ.ಭಾರತದಲ್ಲಿ ಇಷ್ಟು ವಷ೯ಗಳಲ್ಲಿ ನಡೆಯದ ಕೃಷಿ ಕ್ರಾಂತಿ ಈ ವಷ೯ ನಡೆಯುತ್ತಿದೆ. ಪಾಳು ಬಿದ್ದ ಹಲವಾರು ಗದ್ದೆಗಳು ಕೃಷಿಯ ಹೊಸ ಉಡುಗೆಯಲ್ಲಿ ಕಂಗೊಳ್ಳಿಸುತ್ತಿದೆ.ಹಳ್ಳಿಗಳಲ್ಲಿ ನವೀನ ಮಾದರಿಯ ಉದ್ಯಮಗಳು ಪ್ರಾರಂಭವಾಗಿವೆ. ನಿಧಾನವಾಗಿ ಉದ್ಯೋಗ ಸೃಷ್ಠಿಯ ಹೊಸ ಪವ೯ ಪ್ರಾರಂಭವಾಗಿದೆ. Back to Basic ಎಂಬಂತೆ ಮೂಲ ತತ್ವಕ್ಕೆ ನಾವು ಬರಲಾರಂಭಿಸಿದ್ದೆವೆ.ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗುತ್ತಿವೆ. ಆತ್ಮ ನಿಭ೯ರ ದೇಶವಾಗಲು ನಾವು ಸಾಗುತ್ತಿದ್ದೇವೆ. ಆದರೆ ಕೆಲವರು ಒತ್ತಡಗಳಿಗೆ ಒಳಗಾಗಿ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಎಲ್ಲಿ ನಮ್ಮ ಇಮೇಜ್ ಕಡಿಮೆಯಾಗಬಹುದು ಎಂಬ ಕಾರಣದಿಂದ ಹತಾಶೆಯ ಮನೋಭಾವನೆ ಕಾಡಲಾರಂಭಿಸಿದೆ. ಎಲ್ಲಿ ನಾವು ಬೇರೆಯವರ ಎದುರು ಇಮೇಜ್ ಕಡಿಮೆಯಾಗಿ ಅವರಲ್ಲಿ ನಗೆಪಾಟಳಿಗೆ ಒಳಗಾಗುತ್ತವೆಯೋ ಎಂಬ ಹತಾಶೆ ಬೇಗುದಿಯಿಂದ ಸಾಲ ಮಾಡಿದರೂ ಪರವಾಗಿಲ್ಲ ನಮ್ಮ ಜೀವನ ಮೊದಲಿನ ರೀತಿಯಲ್ಲಿ ಇರಬೇಕು ಯಾವುದೇ ಬದಲಾವಣಿ ಯಾಗಬಾರದು ಎಂದು ಸಾಲ ಮಾಡಿ ನಿಜವಾದ ರೀತಿಯಲ್ಲಿ ನಗೆಪಾಟಿ ಒಳಗಾಗುತ್ತಿರುವುದು ದುರಂತದ ವಿಷಯ. ಸಾಮಾಜಿಕ ಸ್ಟೇಟಸ್ಗೆ ಹೆದರಿ ಈ ರೀತಿ ಮಾಡುವುದು ಸರಿಯಲ್ಲ ಯಾರದೋ ಎದುರು ನನ್ನ ಇಮೇಜ್ ಕಾಪಾಡಲು ಈ ರೀತಿ ಮಾಡುವುದು ಬಿಟ್ಟು ನಾವು ಬಿದ್ದಾಗ ನೆಗಾಡುವವರನ್ನು ಬಿಟ್ಟು ಬಿದ್ದಾಗ ಕೈ ಎತ್ತಿ ನಡೆಸುವವರ ಬಗ್ಗೆ ನಾವು ಚಿಂತನೆ ಮಾಡೋಣ .ಈಗ ನಮ್ಮ ಸ್ಟೇಟಸ್ ಮುಖ್ಯವಲ್ಲ ಬೇರೆಯವರನ್ನು ಒಲೈಸಲು ಸಾಲ ಮಾಡಿ ಅದನ್ನು ಕಟ್ಟಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾಗಿ ಮಾನಸಿಕ ದುಗುಡವನ್ನು ಮೈಗೆ ಎಳೆಯುವುದು ಸರಿಯಲ್ಲ. ಈ ರೀತಿಯಲ್ಲಿ ನಡೆಯದೆ ಹೊಸ ಬದುಕಿಗೆ ಪರಿವತ೯ನೆಗೊಳ್ಳವ ಸಂದಭ೯ ಆಗುವ ಬದಲಾವಣೆಗೆ ನಾವು ಸಿದ್ದರಿರಬೇಕು . *ನಮ್ಮ ಬದುಕು ನಮ್ಮ* *ಕೈಯಲ್ಲಿದೆ*: - ಯಾವ ರೀತಿಯ ನಿಧಾ೯ರ , ನಮ್ಮ ಬದುಕಿಗೆ ಅದೇ ರೀತಿ ನಮ್ಮನ್ನು ನಂಬಿರುವವರ ಬದುಕಿಗೆ ಒಳ್ಳೆಯದು ಮಾಡುತ್ತದೆ ಯೋ ಆ ನಿಧಾ೯ರ ಕೈಗೊಳ್ಳಲು ಹಿಂದೆ ಸರಿಯಬಾರದು. ನಾವು ಬದುಕುವುದು ನಮಗಾಗಿ ಬೇರೆಯವರು ಏನೆಂದಾರು ಎಂದು ಯೋಚಿಸುವ ಬದಲು ನಮ್ಮ ಆತ್ಮಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸೋಣ. ಇನ್ನೋಬ್ಬರಿಗಾಗಿ ನಾವು ಕಟ್ಟಿಕೊಂಡ ಭ್ರಮೆ ಕನಸುಗಳನ್ನು ತ್ಯಾಗ ಮಾಡದೆ ನಮಗಾಗಿ ನಾವು ಯೋಚಿಸೋಣ ಯೋಜನೆ ಹಾಕಿಕೊಳ್ಳಲು ತಯಾರಾಗೋಣ. ಬೇರೆಯವರ ಎದುರು ನಾವು ಸಂತೋಷವಾಗಿದ್ದೇವೆ ಎಂದು ನಂಬಿಸಲು ಪ್ರಯತ್ನ ಮಾಡದೆ ನಮಗೆ ನಾವು ಸಂತೋಷಗೊಳ್ಳಬೇಕಾಗಿದೆ. ಇದಕ್ಕಿಂತ ದೊಡ್ಡ ಇಮ್ಯುನಿಟಿ ಮತ್ತೊoದಿಲ್ಲ. ಮತ್ತೊಬ್ಬರ ಖುಷಿಗಾಗಿ ನಮ್ಮ ಖುಷಿಯನ್ನು ಬಲಿ ಕೊಡದೆ ಮತ್ತೊಬ್ಬರಿಗೆ ನಾವು ನಗುವಾಗದಿದ್ದರೂ ಪರವಾಗಿಲ್ಲ ನಮಗಾಗಿ ನಾವು ನಗೋಣ. ನಮ್ಮ ನಕಲಿ ನಗುಮುಖ ಮತ್ತೊಬ್ಬರಿಗೆ ತೋರಿಸುವುದು ಬೇಡ ಆ ನಿಜವಾದ ನಗು ಮುಖ ನಮ್ಮ ಅಂತರಂಗದ ಹೊಸ ಭಾವನೆ ಬೆಳೆಸಲು ಸಹಾಯವಾಗುತ್ತದೆ. ಕರೋನಾಕ್ಕಾಗಿ ಅಳದೆ ಅದನ್ನು ಅಭಿಮನ್ಯುವಿನಂತೆ ಎದುರಿಸಬೇಕು. ನಮ್ಮ ಆರೋಗ್ಯ ಸಕಾ೯ರ ಕೈಯಲಿಲ್ಲ ಅದು ನಮ್ಮ ಕೈಯಲ್ಲಿದೆ. ಹೊಸ ಪವ೯ತೆ ಎರಲು ತಯಾರು ಮಾಡಿಕೊಳ್ಳಿ ಏಳು ಬೀಳು ಸಹಜ ಇದರೊಂದಿಗೆ ಬದುಕಿದಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕ್ಯ ಬರುವುದು. ಕರೋನಾದೊಂದಿಗೆ".ಕುಚ್ ತೋ ಕರನಾ ಹೈ " ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ದೈವಾರಾಧಕರ ಒಕ್ಕೂಟದಿಂದ ಧಾರ್ಮಿಕ ಕಾರ್ಯಕ್ರಮ ನಡೆಸಲು ಕಾಪು ಶಾಸಕ ಲಾಲಾಜಿಗೆ ಮನವಿ

Posted On: 23-07-2020 06:59PM
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ಕಾಪು ಘಟಕ ವತಿಯಿಂದ ಕಾಪು ವಲಯ ಶಾಸಕರಾದ ಲಾಲಾಜಿ ಮೆಂಡನ್ ಅವರಿಗೆ ಉಡುಪಿ ಜಿಲ್ಲಾ ಸಮಸ್ತ ದೈವ ಚಾಕ್ರಿ ವರ್ಗದವರ ಮನವಿಯನ್ನು ಕೊಡಲಾಯಿತು, ಈ ಮನವಿಯಲ್ಲಿ ದೈವ ಚಾಕ್ರಿ ವರ್ಗದವರಿಗೆ ಸಿಕ್ಕಬೇಕಾದ ಸರ್ಕಾರದಿಂದ ಸವಲತ್ತು ಹಾಗೂ ಕೋರನದ ತುರ್ತು ಸಂದರ್ಭದಲ್ಲಿ ತಕ್ಕಮಟ್ಟಿಗೆ 150 ಜನರ ಒಳಗೆ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮ ನೇಮೋತ್ಸವ ಮಾರಿಪೂಜೆ ದರ್ಶನ ಸೇವೆ ಇತರ ಸೇವೆಗಳಿಗೆ ಸರ್ಕಾರದಿಂದ ಅನುಮತಿ ಕೊಡಬೇಕಾಗಿ ಮನವಿ ಸಲ್ಲಿಸಿರುತ್ತಾರೆ. ನಂತರ ಶಾಸಕರು ಮನವಿಯನ್ನು ತೆಗೆದುಕೊಂಡು ನಿಮ್ಮ ಸಮಸ್ಯೆಗೆ ನಾನು ಡಿಸಿ ಅವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಯವರಿಗೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಎಲ್ಲಾ ಸದಸ್ಯರಿಗೆ ಧೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ರಾಘವ ಸೇರಿಗಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ಕೋಶಾಧಿಕಾರಿ ಶ್ರೀಧರ್ ಪೂಜಾರಿ ಕ್ರೀಡಾ ಕಾರ್ಯದರ್ಶಿ ದಯೆಶಾ ಕೋಟ್ಯಾನ್ ಕಾಪು ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಸತೀಶ್ ಪೂಜಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

Posted On: 23-07-2020 03:06PM
ಜೆಸಿಐ ಕಟಪಾಡಿ ರೀಜನ್ ಎ ಝೋನ್ xv ಮತ್ತು ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ಮನೆಯಲ್ಲಿಯೇ ರಚಿಸಿ ಕಳುಹಿಸಿದ ಉತ್ತಮ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಟ್ರೋಫಿ, ಪ್ರಮಾಣಪತ್ರವಿದ್ದು, ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ನೀಡಲಾಗುವುದು. ಬಹುಮಾನವನ್ನು ಆಗಸ್ಟ್ 15 ರಂದು ಕಟಪಾಡಿ ಪಳ್ಳಿಗುಡ್ಡೆ ಜೆಸಿ ಭವನದಲ್ಲಿ ವಿತರಿಸಲಾಗುವುದು. ಕಿರಿಯ ಪ್ರಾಥಮಿಕ ವಿಭಾಗ (LKG-UKG-1std) ನಮ್ಮ ರಾಷ್ಟ್ರ ಧ್ವಜ, ಪ್ರಾಥಮಿಕ ವಿಭಾಗ (2-3-4std) ಧ್ವಜಾರೋಹಣ ಸಮಾರಂಭ. ಹಿರಿಯ ಪ್ರಾಥಮಿಕ ವಿಭಾಗ (5-6-7std) ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಹೈಸ್ಕೂಲ್ ವಿಭಾಗ (8-9-10std) ಸೇವ್ ಅವರ್ ನೇಶನ್- ಸ್ಟಾಪ್ ಚೈನ ಮೆಟೀರಿಯಲ್ಸ್ ಅಥವಾ ಮೈ ನೇಶನ್ ಮೈ ಆರ್ಮಿ. ಆಗಸ್ಟ್ 12 ರೊಳಗೆ ಮಕ್ಕಳ ಹೆಸರು, ತರಗತಿ, ಶಾಲೆಯ ಹೆಸರು, ಮನೆಯ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಚಿತ್ರವನ್ನು ಕೆ. ನಾಗೇಶ್ ಕಾಮತ್, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್, ದೇವ ಸುಮ, ಚಿಲ್ಮಿ ಮನೆ, ಕಟಪಾಡಿ-574105 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜೆಸಿ ದಿನೇಶ್ ಎಸ್. ಜೆ : 9448623400 ಕೆ.ನಾಗೇಶ್ ಕಾಮತ್ : 9886432197
ಜಿಲ್ಲಾ ರಂಗಮಂಟಪ ಮೈದಾನ ದುಸ್ಥಿತಿ ವರದಿಗೆ ಸ್ಪಂದಿಸಿದ ನಗರಾಭಿವೃದ್ಧಿ ಪ್ರಾಧಿಕಾರ

Posted On: 21-07-2020 10:36PM
ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿದ್ದರು ಈ ಬಗ್ಗೆ ವರದಿ ಗೆ ಸ್ಪಂದಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈಗಾಗಲೇ ಈ ಕಟ್ಟಡವನ್ನು ನಗರಸಭೆಗೆ ಹಸ್ತಾoತರಿಸಲಾಗಿದೆ.ಈ ಕೂಡಲೇ ಈ ಬಗ್ಗೆ ಕಾಮಗಾರಿ ನಡೆಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ರೀತಿಯ ತುತು೯ ಸ್ಪಂದನೆಗೆ ಸಾವ೯ಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ಉಡುಪಿಯಲ್ಲಿ ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲನೆಯಾಗದಿದ್ದರೆ ದಂಡ ವಸೂಲಿ

Posted On: 21-07-2020 08:31PM
ಉಡುಪಿ ಜುಲೈ 21 (ಕರ್ನಾಟಕ ವಾರ್ತೆ): ಕೋವಿಡ್ -19 ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತಂತೆ ,ಸಾರ್ವಜನಿಕರು ಈ ನಿಯಮಗಳ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು , ಜಿಲ್ಲಾಧಿಕಾರಿ ಜಿ.ಜಗದೀಶ್ ಮಂಗಳವಾರ , ಉಡುಪಿ ನಗರದಲ್ಲಿ ದಿಡೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದರು. ಮಂಗಳವಾರ ಜಿಲ್ಲೆಯ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲಕ್ಕೆ ನಡೆಸಲಾದ ಈ ಕಾರ್ಯಾಚರಣೆಯಲ್ಲಿ , ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಜೊತೆಯಲ್ಲಿ , ಕೋವಿಡ್-19 ನಿಯಂತ್ರಣ ಕುರಿತಂತೆ ಪ್ರತಿಯೊಬ್ಬರ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು. ಬಸ್ ಸ್ಟಾöಡ್ ಬಳಿಯ ಹೋಟೆಲ್ ಒಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೋಟೆಲ್ ನಲ್ಲಿ ಗ್ರಾಹಕರಿಗೆ ಕೈ ತೊಳೆಯಲು ಸೋಪ್ ಇಡದ ಕಾರಣ ಮಾಲೀಕರಿಗೆ ದಂಡ ವಿಧಿಸಿದರು, ಪೆಟ್ರೋಲ್ ಬಂಕ್ ನಲ್ಲಿ ಕ್ಯಾಷಿಯರ್ ಕೈಗವಸು ತೊಡದೆ ಹಣ ಪಡೆಯುವುದನ್ನು ಕಂಡ ಜಿಲ್ಲಾಧಿಕಾರಿಗಳು, ನೋಟಿನಿಂದಲೂ ಸಹ ಕೋವಿಡ್-19 ಹರಡಲಿದ್ದು , ಎಚ್ಚರಿಕೆ ವಹಿಸುವಂತೆ ಸೂಚಿಸಿ, ಸುರಕ್ಷತಾ ಕ್ರಮ ಪಾಲಿಸಿದ ಕ್ಯಾಷಿಯರ್ ಗೆ ದಂಢ ವಿಧಿಸಿದರು. ಮೆಡಿಕಲ್ ಶಾಪ್ ಒಂದರಲ್ಲಿ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ, ಮೆಡಿಕಲ್ ನಲ್ಲಿ ವೈದ್ಯರ ಅನುಮತಿಯಿಲ್ಲದೇ ಜ್ವರ ಶೀತ ಕೆಮ್ಮು ರೋಗಗಳಿಗೆ ಔಷಧ ವಿತರಿಸದಂತೆ ಸೂಚನೆ ನೀಡಿದರು. ಅಂಗಡಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕ ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಿದರು. ಹೋಟೆಲ್ ಒಂದರಲ್ಲಿ ಅಗತ್ಯ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕುರಿತು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಿಲಯನ್ಸ್ ಮಳಿಗೆಗೆ ತೆರಳಿದ ಜಿಲ್ಲಾಧಿಕಾರಿ, ಮಳಿಗೆ ಒಳಗೆ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ಅನುಮತಿ ನೀಡುವಂತೆ ಹಾಗೂ ಎಲ್ಲಾ ಗ್ರಾಹಕರು ಮಾಸ್ಕ್ ಧರಿಸಿ ಖರೀದಿ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚಿಸಿ, ಒಂದೇ ವಸ್ತುಗಳ ಬಳಿ ಸಾಮಾಜಿಕ ಅಂತರವಿಲ್ಲದೇ ಗ್ರಾಹಕರು ಖರೀದಿ ನಡೆಸದಂತೆ ಒಬ್ಬ ಸಿಬ್ಬಂದಿಯನ್ನು ಪರಿಶೀಲನೆಗೆ ನಿಯೋಜಿಸುವಂತೆ ಸೂಚನೆ ನೀಡಿದರು. ನಗರಸಭೆಯ ಅಧಿಕಾರಿಗಳು ಪ್ರತಿದಿನ ಕೋವಿಡ್-19 ನಿಯಮ ಉಲ್ಲಂಘನೆ ಕುರಿತು ಪರಿಶೀಲಿಸಿ, ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿ, 2100 ರೂ ದಂಡ ವಸೂಲಿ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್, ಇಂಜಿನಿಯರ್ ದುರ್ಗಾಪ್ರಸಾದ್, ಕಂದಾಯ ಅಧಿಕಾರಿ ಧನಂಜಯ, ಮೆನೇಜರ್ ವೆಂಕಟರಮಣಯ್ಯ, ಸಮುದಾಯ ಆರೋಗ್ಯ ವಿಭಾಗದ ನಾರಾಯಣ್, ಆರೋಗ್ಯ ನಿರೀಕ್ಷಕ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರದಲ್ಲಿ ಹೀಗೊಬ್ಬ ಮಾದರಿ ಜನ ಸೇವಕನನ್ನು ನೋಡಿ

Posted On: 21-07-2020 08:01PM
ಇವರ ಹೆಸರು ಸತೀಶ್ ಸುವಣ೯ ವೃತ್ತಿಯಲ್ಲಿ ತನ್ನದೇ ಆದ ಸಲೂನ್ ಶಾಪ್ ಇಟ್ಟುಕೊಂಡಿರುವ ಇವರು ಕಳೆದ ಹಲವಾರು ವಷ೯ಗಳಿಂದ ಸಲ್ಲಿಸುತ್ತಿರುವ ಸೇವೆಯಿಂದ ಜನ ಪ್ರೀತಿಗೆ ಪಾತ್ರರಾಗಿದ್ದಾರೆ.ಇವರ ಬಗ್ಗೆ ನಿಮಗೆ ತಿಳಿಸಲು ಕಾರಣವಿದೆ ಇವರು ಬೇರೆ ಕ್ಷವ್ರಿಕರಂತೆ ಅಲ್ಲ ತನ್ನ ವಾರದ ರಜೆಯನ್ನು ಸಮಾಜಮುಖಿಯಾಗಿ ಕಳೆಯುತ್ತಾರೆ.ಜಿಲ್ಲೆಯಲ್ಲಿರುವ ಅನಾಥಾಶ್ರಮ, ವೃದ್ದಾಶ್ರಮದ ಆಶ್ರಮವಾಸಿಗಳಿಗೆ ಉಚಿತವಾಗಿ ಕ್ಷವ್ರ ಮಾಡುವ ಕಾಯಕವನ್ನು ಕಳೆದ ಹಲವಾರು ವಷ೯ಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಸ್ಪoದನ ವಿಶೇಷ ಮಕ್ಕಳ ಶಾಲೆ, ಆಶಾ ನಿಲಯ, ಹೊಸ ಬೆಳಕು ಮಣಿಪಾಲ, ಕಾರುಣ್ಯ ಕಟಪಾಡಿ ಅದೇ ರೀತಿ ಕಾಕ೯ಳ ವಿಜೇತ ವಿಶೇಷ ಶಾಲೆಯ ನಿವಾಸಿಗಳಿಗೆ ಕ್ಷವ್ರ ಮಾಡಿ ಅವರಿಗೆ ನೆರವಾಗುತ್ತಿದ್ದಾರೆ. ಆಶ್ರಮವಾಸಿಗಳಿಗೆ ಕ್ಷವ್ರ ಮಾಡಲು ಈ ಹಿಂದೆ ಸಲೂನ್ ಗಳಿಗೆ ಕರೆದುಕೊಂಡು ಹೋಗಬೇಕಾದ ಅನಿವಾಯ೯ತೆ ಆಶ್ರಮದ ಮುಖ್ಯಸ್ಥರಿಗೆ ಇತ್ತು. ಅಲ್ಲದೆ ಹಿರಿಯ ನಾಗರೀಕರಾದ ಕಾರಣ ಅವರನ್ನು ಕರೆದುಕೊಂಡು ಹೋಗುವುದು ಕಷ್ಟದ ಕಾಯ೯ ವಾಗಿತ್ತು. ಇದಕ್ಕಾಗಿ ಸಾವಿರಾರು ರೂ ಆಶ್ರಮಕ್ಕೆ ವ್ಯಯವಾಗುತ್ತಿತ್ತು ದಾನಿಗಳ ನೆರವಿನಿಂದ ನಡೆಯುವ ಈ ಆಶ್ರಮಗಳಿಗೆ ಈ ಹಣವನ್ನು ಭರಿಸುವ ಶಕ್ತಿ ಇರಲಿಲ್ಲ ಹೀಗಾಗಿ ಸತೀಶ್ ರವರು ಪ್ರತಿ ತಿಂಗಳು ತಪ್ಪದೆ ಭೇಟಿ ನೀಡಿ ಉಚಿತವಾದ ಸೇವೆ ನೀಡಲಾರಂಭಿಸಿರುದರಿಂದ ಆಶ್ರಮದ ಮುಖ್ಯಸ್ಥರು ನಿರಾಳರಾಗಿದ್ದಾರೆ. ಅದೇ ರೀತಿ ಆಶ್ರಮವಾಸಿಗಳಿಗೆ ತುಂಬಾನೇ ಖುಷಿಯಾಗಿದೆ. ಸತೀಶ್ ರವರು ಕೆಲವು ವಷ೯ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿದ ಅನುಭವ ಇದೆ ನಂತರ ಊರಿಗೆ ಬಂದು ಕೆಲಸದೊಂದಿಗೆ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಅಭಿನಂದನೀಯ. ಕರೋನಾ ಬರುವ ಮುಂಚೆಯೇ ಮಾಸ್ಕ್ ಅದೇ ರೀತಿ ವಿವಿಧ ಆರೋಗ್ಯ ಕ್ರಮ ಕೈಗೊಂಡಿದ್ದರು. ಸದಾ ಕಾಲ ಬಿಳಿ ಬಣ್ಣದ ಅಂಗಿ ಧರಿಸುವ ಸತೀಶ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ಊಟ ನೀಡುವಲ್ಲಿ ಸಹಕರಿಸಿದ್ದಾರೆ.ಹೋಂ ಡಾಕ್ಟರ್ಸ್ ಫ್oಡೇಶನ್ ತಂಡದ ಸಕ್ರೀಯ ಸದಸ್ಯರಾಗಿ ವಿವಿಧ ಸಮಾಜ ಮುಖಿ ಕಾಯ೯ದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಈ ರೀತಿಯ ಅಪೂವ೯ ಸೇವಕರಿಗೆ ಹಲವಾರು ಸನ್ಮಾನ ದೊರಕಿದೆ. ಸಕಾ೯ರ ಕೂಡ ಇವರ ಸೇವೆಯನ್ನು ಗುರುತಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಬಂಟಕಲ್ಲು ಪರಿಸರದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭ

Posted On: 20-07-2020 09:47PM
ನಾಗರೀಕ ಸೇವಾ ಸಮಿತಿ (ರಿ) ಬಂಟಕಲ್ಲು ಇವರ ಮಹತ್ವಾಕಾಂಕ್ಷೆ ಯೋಜನೆ ಬಂಟಕಲ್ಲು ಪರಿಸರದ ನಾಗರಿಕರಿಗೆ ಅಪಘಾತ ಮುಂತಾದ ತುರ್ತು ಸಂಧರ್ಭದಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಉಚಿತ ಸೇವೆಯ ಅಂಬುಲೆನ್ಸ್ ಸೇವೆ ಯನ್ನು ನೀಡುವ ಸಲುವಾಗಿ ಖರೀದಿಸಿದ ನೂತನ ಅಂಬುಲೆನ್ಸ್ ವಾಹನ ಸೇವೇಯನ್ನು ಪಾಂಬೂರ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ ಹೆನ್ರಿ ಮೆಸ್ಕರೇನಸ್ರವರು ಹಸಿರು ನಿಶಾನೆ ತೋರುವುದರ ಮೂಲಕ ಲೋಕಾರ್ಪಣೆಗೈದರು. ಬಂಟಕಲ್ಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಶಿರ್ವ ಗ್ರಾ.ಪಂ ಆಡಳಿತಾಧಿಕಾರಿ ಡಾ. ಅರುಣ್ ಹೆಗ್ಡೆ, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಿರ್ವ ದ ಕೊರೊನಾ ವಾರಿಯರ್ಸ್ ಆಗಿ ಕೊರೋನಾ ವಿರುದ್ದ ಕೆಲಸ ನಿರ್ವಹಿಸುತ್ತಿರುವ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್ ಕುಮಾರ್ ಬೈಲೂರು, ಶಿರ್ವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶ್ರಿ ಅನಂತಪದ್ಮನಾಭ ನಾಯಕ್, ಶಿರ್ವ ಗ್ರಾಮ ಕರಣಿಕರಾದ ಶ್ರೀ ವಿಜಯ್ ಕುಕ್ಯಾನ್ ಇವರ ಗೌರವ ಉಪಸ್ಥಿತಿಯಲ್ಲಿ ಅವರನ್ನು ನಾಗರೀಕ ಸೇವಾ ಸಮಿತಿ ಪರವಾಗಿ ಅಭಿನಂದಿಸಲಾಯಿತು. ನಾ ಸೇ ಸಮಿತಿ ಅಧ್ಯಕ್ಷರಾದ ಕೆ.ಆರ್ ಪಾಟ್ಕರ್ ರವರು ಯೋಜನೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ಈ ಯೋಜನೆಯ ಯಶಸ್ವಿಗೆ ಕಾರಣಕರ್ತರಾದ ಎಲ್ಲಾ ದಾನಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಸಮಿತಿ ಕಾರ್ಯದರ್ಶೀ ಶ್ರೀ ದಿನೇಶ್ ದೇವಾಡಿಗ, ಕೋಶಾಧಿಕಾರಿ ಶ್ರೀ ಜಗದೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ರೋಹಿಣಿ ನಾಯಕ್ ಸಮಿತಿ ಸದಸ್ಯರು , ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು ಬಂಟಕಲ್ಲು ರಾ.ಸಾ ಯುವ ವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್, ಕಾರ್ಯದರ್ಶಿ ಆಷಿಶ್ ಪಾಟ್ಕರ್ ಹಾಗೂ ಯುವ ವೃಂದದ ಸದಸ್ಯರು, ಬಂಟಕಲ್ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಬಂಟಕಲ್ಲು ಪರಿಸರದ ನಾಗರಿಕರು ಉಪಸ್ಥಿತರಿದ್ದರು.
ಕೊಡಂಗಳದ ಈ ಕೋರಿ ರೊಟ್ಟಿಗಿದೆ ಕಡಲಾಚೆಯೂ ಬೇಡಿಕೆ

Posted On: 20-07-2020 07:50PM
ಸೆಗಣಿ ನೀರಲ್ಲಿ ಗುಡಿಸಿದ ನೆಲ. ಗೂಟಕ್ಕೆ ಕಟ್ಟಿದ ಹತ್ತು ಹದಿನೈದು ಅಂಕದ ಕೋಳಿಗಳು. ಗದ್ದೆ ಹುಣಿಯ ಅಂಚಿನಲ್ಲಿ ಅವಳು ಕಾಣಿಸುವುದೇ ತಡ ಕಿಟಕಿಯ ಸರಳಿಗೆ ಕಟ್ಟಿ ಹಾಕಿದ ನಾಯಿಗಳ ಬೊಬ್ಬೆ. ಮನೆಯ ಯುವಕರು ಚುರುಕು! ಸಮಯ ವ್ಯರ್ಥವಿಲ್ಲ. ಒಂದಷ್ಟು ಕಲ್ಲುಗಳನ್ನು ಜೋಡಿಸಿ ಅಂಗಳದಲ್ಲೇ ಒಲೆ ನಿರ್ಮಿಸಲಾಗುತ್ತದೆ. ಕಟ್ಟಿಗೆಗಳ ರಾಶಿಯನ್ನೂ ಪಕ್ಕದಲ್ಲೇ ತಂದು ಹೇರಲಾಗುತ್ತದೆ. ಕಡೆಯುವ ಕಲ್ಲಿಗೆ ಸೋನಾಮಸೂರಿ ಅಕ್ಕಿಯ ನುಚ್ಚು, ಉದ್ದು, ಜೀರಿಗೆ, ಉಪ್ಪು ಬೀಳುತ್ತದೆ. ಅವಳು ಅಂಗಳದಲ್ಲಿ ನಿಂತದ್ದೇ ಕುಳಿತುಕೊಳ್ಳಲು ಕಾಲು ಮಣೆ ಊಐಕೊಟ್ಟರಾಯ್ತು. ಹಿಟ್ಟು ತಯಾರಾಗುವ ಹೊತ್ತಿಗೆ ಕಾವಲಿ ಹದವಾಗುತ್ತದೆ. ಅವಳು ಅಂದರೆ ಕಮಲ, ಜಲಜ, ಪಿಲ್ಲು, ಗುಲಾಬಿ, ಬೇಬಿ. ಯಾರೂ ಆಗಿರಬಹುದು. ಕಾದ ಕಾವಲಿಗೆ ನೀರ ಹನಿಗಳನ್ನು ಚಿಮುಕಿಸಿ ಉಷ್ಣತೆಯನ್ನು ಪರೀಕ್ಷಿಸಲಾಗುತ್ತದೆ. ಬೋಗುಣಿ ಅಥವಾ ದೊಡ್ಡ ಸೌಟಿನಲ್ಲಿ ಹಿಟ್ಟನ್ನು ಕಾವಲಿಗೆ ಸುರಿದು, ತೆಳ್ಳಗೆ ಸವರಿದ ಮೇಲೆ ಬಿಸಿ ಹೊಗೆಯೊಂದು ಏಳುತ್ತದಲ್ಲ! ಅಂಗಳದಲ್ಲಿದ್ದ ಕೋಳಿಗಳೂ ಆ ಹೊತ್ತಿಗೊಮ್ಮೆ ಕತ್ತು ಮೇಲೆತ್ತುತ್ತವೆ. ಸೋರ್ತಿ, ಮಾರಿ, ತಂಬಿಲ, ತಮ್ಮಣದ ಊಟಕ್ಕೆ ಅದಾವುದರ ತಲೆ ಬಲಿಯಾಗುತ್ತದೋ, ಅವುಗಳಿಗೂ ಗೊತ್ತಿಲ್ಲ. ಒಲೆಯನ್ನು ಸುತ್ತುವರಿದ ಮಕ್ಕಳ ಬಾಯಲ್ಲಂತೂ ನೀರು ಸುರಿಯುತ್ತದೆ. ಇಡೀ ಮನೆಯವರಿಗೆ ನಾಟಿ ಕೋಳಿ ಸುಕ್ಕ, ಸಾರು ಮತ್ತು ಊರ ರೊಟ್ಟಿಯ ಊಟದ್ದೇ ಕನಸು. ಕಾವಲಿಯಿಂದ ತೆಗೆದ ರೊಟ್ಟಿಯನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಾಕೋದಕ್ಕಿದೆ. ಒಣಗಿಸಲು ಇಟ್ಟಲ್ಲಿಂದಲೇ, ಜಾಸ್ತಿ ಸುಟ್ಟು ಕೆಂಪಗಾದ ರೊಟ್ಟಿಯ ತುಂಡನ್ನು ಹುಡುಕಿ, ಎಗರಿಸಿ, ಕುರು ಕುರು ಎಂದು ತಿನ್ನುವುದಿದೆಯಲ್ಲ! ಊ ಕೋಳಿ ರೊಟ್ಟಿಗೋಸ್ಕರವೇ ಮತ್ತೆ ಮತ್ತೆ ತುಳುನಾಡಲ್ಲೇ ಹುಟ್ಟಬೇಕೆನಿಸುತ್ತದೆ. ಹಿಂದಿನ ಕಾಲದ ಹಳ್ಳಿ ಮನೆಗಳಲ್ಲಿ ಒಬ್ಬರಿಗಾದರೂ ರೊಟ್ಟಿಯ ವಿದ್ಯೆ ಗೊತ್ತಿತ್ತು. ಊರಲ್ಲಿ ಒಂದೆರಡು ಹೆಂಗಸಾದರೂ ಮನೆ ಮನೆಗೆ ಹೋಗಿ ರೊಟ್ಟಿ ತಯಾರಿಸುವ ಕಾಯಕದಲ್ಲಿ ಹೆಸರು ಪಡೆದವರುಂಟು. ಆದರೀಗ ಈ ಸರಳ ವಿದ್ಯೆ ಮರೆತೇ ಹೋದಂತಿದೆ. ಕೊಡಂಗಲದ ಶಾರದಕ್ಕನ ಕಥೆಯೂ ಅಷ್ಟೇ ಆಗಿತ್ತು. ಅವರ ಅಮ್ಮ, ಅಜ್ಜಿ ಮಾಡ್ತಿದ್ದರು. ಗಂಡನ ಮನೆಯಲ್ಲಿ ಅತ್ತೆಯ ಕೈರುಚಿಯೂ ಚೆನ್ನಾಗಿತ್ತು. ಅಂಗಡಿಯಲ್ಲಿ ಸಿಗೋಕೆ ಶುರುವಾದ ಮೇಲೆ ಆ ರಗಳೆ ಯಾರಿಗೆ ಬೇಕು? ಗರಿ ಗರಿಯಾದ, ರುಚಿಕಟ್ಟಾದ, ಹಿಟ್ಟಿಗೆ ಯಾವುದೇ ಕಲಬೆರಕೆ ಇಲ್ಲದ, ಆರೋಗ್ಯಕರ ತಿನಿಸು ಬರೀ ನೆನಪು ಮಾತ್ರ ಅಂದುಕೊಂಡಾಗ ಅವರ ಕುಟುಂಬದಲ್ಲಿ ಎದುರಾದ ಅನಿವಾರ್ಯವೊಂದು ರೊಟ್ಟಿಯ ಕಾಯಕವನ್ನು ಮುಂದುವರೆಸುವಂತೆ ಮಾಡಿತು. ಶಾರದಕ್ಕನಿಗೆ ಒಟ್ಟು ಮೂರು ಜನ ಹೆಣ್ಮಕ್ಕಳು. ಮೂವರಿಗೂ ಮದುವೆಯಾಗಿದೆ. ಇಬ್ಬರು ಮುಂಬೈಯಲ್ಲಿದ್ದರೆ ಕಡೆಯವಳನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಅಳಿಯ ಆಟೋ ಚಾಲಕ. ಆದರೆ ಅದೊಂದು ದಿನ ಅಪಘಾತವಾಗಿ ರಿಕ್ಷಾ ಮಗುಚಿ ಬೀಳುತ್ತದೆ. ಪ್ರವೀಣ್ ಪೂಜಾರಿಯವರ ಕಾಲಿನ ಎಲುಬು ಮುರಿಯುತ್ತೆ . ಮುಂದಿನ ಆರು ತಿಂಗಳು ಅವರು ಮನೆಯಲ್ಲೇ. ಶಾರದಕ್ಕ ಹಾಗೂ ಹಿರಿಯಣ್ಣ ದಂಪತಿಗಳದ್ದು ಸಣ್ಣ ಮಟ್ಟದ ಬೇಸಾಯದ ಮನೆ. ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ. ಅಳಿಯನಿಗೆ ಬೇಸರ, ಪಶ್ಚತ್ತಾಪ. ಕಾಲಿನ ಮೂಳೆಯೇ ಮುರಿದದ್ದರಿಂದ ಹೊರಗೆಲ್ಲೂ ಕೆಲಸಕ್ಕೆ ಹೋಗುವಂತಿಲ್ಲ. ಆಲೋಚನೆ ಮಾಡಿ ಮಾಡಿ ಕೊನೆಗೆ ಅತ್ತೆಯ ಬಳಿ ಕೇಳಿಯೇ ಬಿಟ್ಟರು. ನೀವು ಹಿಂದೆ, ಮನೆಯ ಖರ್ಚಿಗೆ ಅಕ್ಕಿ ರೊಟ್ಟಿ ಮಾಡ್ತಿದ್ರಿ ಅಂತಿದ್ರಲ್ಲ. ಈಗ ಮತ್ತೆ ಮಾಡ್ಬಹುದಾ? ನಮ್ಗೆ ಕಲಿಸಿಕೊಡ್ಬಹುದಾ? ಒಂದಷ್ಟು ಅಂಗಡಿಗಳನ್ನು ಗೊತ್ತು ಮಾಡ್ಕೋಬಹುದು. ಕೂತಲ್ಲೇ ಮಾಡಬಹುದಾದ ಕೆಲಸವಿದು ಎಂದು ಕೇಳಿಕೊಂಡರು. ಶಾರದಕ್ಕನಿಗೆ ಅಳುಕು. ನಾವು ನಾವೇ ತಿನ್ನೋಕೆ ಮಾಡ್ತಿದ್ದದ್ದು. ಮಾರೋದಕ್ಕಾಗುತ್ತಾ? ಬೇರೆಯವ್ರಿಗಿದು ಇಷ್ಟವಾಗುತ್ತಾ? ಮಗಳು, ಅಳಿಯ ಹಠ ಬಿಡಲೇ ಇಲ್ಲ. ಮನೆಯೊಳಗಿದ್ದೇ ಒಲೆ, ಸಣ್ಣ ಕಾವಲಿಯಲ್ಲಿ ಮಾಡೋಕೆ ಶುರು ಮಾಡಿದರು. ಅಳಿಯ ಬೇರೊಂದು ರಿಕ್ಷಾ ಗೊತ್ತು ಮಾಡಿ ಊರ ಅಂಗಡಿಗಳಿಗೆ ಅಲೆದರು. ಮೊದಲ ದಿನ ಸ್ಯಾಂಪಲ್ ಗಳನ್ನು ಕೊಟ್ಟು ಬಂದರು. ಮರು ದಿನ ಆಶ್ಚರ್ಯ. ಅಂಗಡಿಗಳಿಂದ ಒಳ್ಳೆಯ ಬೇಡಿಕೆ ಬರಲಾರಂಭಿಸಿತು. 20 ಕೇಜಿ ಅಕ್ಕಿಯಿಂದ ಹಿಡಿದು ದಿನಕ್ಕೆ 100 ಕೇಜಿ ರೊಟ್ಟಿಯವರೆಗೂ ಡಿಮಾಂಡ್ ಬರಲು ಶುರು. ಶಾರದಕ್ಕನ ಕೈಗುಣವಿರಬೇಕು. ಸಾಮಾನ್ಯ ಊರ ರೊಟ್ಟಿ ಇಷ್ಟೊಂದು ಗರಿ ಗರಿಯಾಗಿರುವುದಿಲ್ಲ. ಆದರಿವರ ಶ್ರೀ ವಿಷ್ಣು ಅಕ್ಕಿ ರೊಟ್ಟಿ ತೆಳುವಾಗಿ, ಗರಿ ಗರಿಯಾಗಿ ಬಾಯೊಳಗೆ ಹಾಕಿದ ಕೂಡಲೇ ನೀರು! ಹೀಗೆ ರೊಟ್ಟಿಯ ವ್ಯಾಪಾರ ಶುರುವಾಗಿ 8 ವರ್ಷಗಳಾಗಿವೆ. ಪ್ರತೀ ದಿನ ಬೆಳಿಗ್ಗೆ 5 ಗಂಟೆಗೆಯಿಂದ 11 ಗಂಟೆಯ ವರೆಗೆ ಹೊಗೆ ಹಾಗೂ ತಡೆಯಲಾಗದ ಬಿಸಿಯ ನಡುವೆ ತಯಾರಿ. ಆ ನಂತರ ಪ್ಯಾಕಿಂಗ್. ಮಧ್ಯಾಹ್ನದ ಬಳಿಕ ಅಂಗಡಿಗಳಿಗೆ ವಿತರಣೆ. ಉಡುಪಿಯಲ್ಲೂ ಕೊಡಂಗಳದ ಈ ರೊಟ್ಟಿಗೆ ಬಹಳ ಬೇಡಿಕೆ ಇದೆ. ಶ್ರೀ ವಿಷ್ಣು ರೊಟ್ಟಿಯೇ ಬೇಕೆಂದು ಹಠ ಹಿಡಿಯುವ ಗ್ರಾಹಕರಿದ್ದಾರೆ. ಆದರೆ ಮನೆಯ ಈ ಮೂವರಷ್ಟೇ ಸೇರಿ ಮಾಡುವುದರಿಂದ, ಸಣ್ಣ ಶೆಡ್ ಒಂದರ ಅಡಿಯಲ್ಲಿ ಸೀಮಿತ ಪ್ರಮಾಣದಲ್ಲಷ್ಟೇ ತಯಾರಿಸಲು ಸಾಧ್ಯವಾಗ್ತಿದೆ. ತಮ್ಮ ಮನೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಗುಡ್ಡೆಯಂಗಡಿ, ಕೊಡಂಗಳ, ದೆಂದೂರುಕಟ್ಟೆ, ಕುಕ್ಕಿಕಟ್ಟೆ, ಕುಂತಲನಗರ, ಮರ್ಣೆಯ ಅಂಗಡಿಗಳಲ್ಲೇ ಇವರು ತಯಾರಿಸಿದ ರೊಟ್ಟಿ ಮುಗಿಯುತ್ತದೆ. ಕೆಲವು ಕೆಟರಿಂಗ್ ಸಂಸ್ಥೆಗಳು ಮೊದಲೇ ಹೇಳಿಟ್ಟು, ಮನೆಗೇ ಬಂದು ಖರೀದಿಸುವುದುಂಟು. ಬೆಂಗ್ಳೂರು, ಮುಂಬೈ, ದುಬೈಗೂ ಇವರ ರೊಟ್ಟಿ ಹೋಗುವುದುಂಟು. ಸರಕಾರ ನೆರವಾದರೆ ಸಣ್ಣ ಪ್ರಮಾಣದ ಉದ್ಯಮವನ್ನಾಗಿಸುವ ಕನಸು ಈ ಕುಟುಂಬದ್ದು. ಬ್ಯಾಂಕುಗಳಲ್ಲಿ ವಿಚಾರಿಸಿದಾಗ ಸಾಮಾನ್ಯ ಸಾಲ ವ್ಯವಸ್ಥೆ ಬಿಟ್ಟರೆ ವಿಶೇಷ ನೆರವು, ಸಬ್ಸಿಡಿ ಇಲ್ಲವೆಂದರಂತೆ. ಆತ್ಮನಿರ್ಭರ ಭಾರತ ಕಟ್ಟುವ ಪ್ರತಿಜ್ಞೆಗಳಾಗುತ್ತಿರುವ ಈ ಹೊತ್ತಿನಲ್ಲಿ ಕಡಲಾಚೆಗೂ ಬೇಡಿಕೆ ಇರುವ ಕೊಡಂಗಲದ ಈ ರೊಟ್ಟಿಯ ತಯಾರಿ, ಮಾರಾಟದ ವಿಸ್ತರಣೆಗೆ ಸರಕಾರದಿಂದ ಸಹಕಾರ ದೊರೆಯಲಿ ಎಂಬೊಂದು ಆಶಯ. ಮಂಜುನಾಥ್ ಕಾಮತ್
ರಸ್ತೆಯಲ್ಲಿ ಕಸವೋ ಅಥವಾ ಕಸದಲ್ಲಿ ರಸ್ತೆಯೋ ತಿಳಿಯದಾಗಿದೆ

Posted On: 19-07-2020 09:59PM
ಕಟಪಾಡಿ ರಾಷ್ಟ್ರೀಯ ಹೆದ್ದಾರಿ (ಕೆನರಾ ಬ್ಯಾಂಕ್) ಎದುರಿನ ರಸ್ತೆಯು ಕಸಮಯವಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಮನೆ, ವಾಣಿಜ್ಯ ಸಂಕೀಣ೯ಗಳಿವೆ ಇಲ್ಲಿಂದ ನಡೆದುಕೊಂಡು ಹೋಗುವವರ ಪಾಡು ದೇವರಿಗೆ ಪ್ರೀತಿ. ಕಸದಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬರುವ ಬೀದಿ ನಾಯಿಗಳ ಹಿಂಡಿನಿಂದ ಈ ರಸ್ತೆಯಲ್ಲಿ ಸಾಗಲು ಆಗದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯರ ಪ್ರಕಾರ ವಾಹನಗಳಲ್ಲಿ ಬಂದು ಕಸವನ್ನು ಎಸೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಈ ರಸ್ತೆಯು ಮಿನಿ ಡಂಪಿಂಗ್ ಯಾಡ್೯ ಯಾಗಿ ಪರಿಣಮಿಸಿದೆ.ಇದರಿಂದ ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ .ಕೂಡಲೇ ಸಂಬಂಧ ಪಟ್ಟ.ಗ್ರಾ.ಪಂ ಕ್ರಮ ಕೈಗೊಳ್ಳಬೇಕು ಅಲ್ಲದೆ ಕಸ ಹಾಕುವವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಉಡುಪಿ
ಅಂತಾರಾಷ್ಟ್ರೀಯ ಮಟ್ಟದ ಭಾಷಾ ವಿಜ್ಞಾನಿ ಯು.ಪಿ.ಉಪಾಧ್ಯಾಯ ಇನ್ನಿಲ್ಲ

Posted On: 19-07-2020 09:12AM
ಕಾಪು, ಜು. 18 : ಹಿರಿಯ ಸಂಶೋಧಕ, ತುಳು ವಿದ್ವಾಂಸ, ಅಂತಾರಾಷ್ಟೀ ಯ ಮಟ್ಟದ ಭಾಷಾ ವಿಜ್ಞಾನಿ ಮಹೋಪಾಧ್ಯಾಯ ಡಾ| ಉಳಿಯಾರು ಪದ್ಮನಾಭ ಉಪಾಧ್ಯಾಯ (88) ಅವರು ಜು. 17ರಂದು ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದಾಗಿ ನಿಧನ ಹೊಂದಿದರು. ಉಡುಪಿ ಜಿಲ್ಲೆಯ, ಕಾಪು ತಾಲೂಕಿನ ಮಜೂರು ಗ್ರಾಮದ ಉಳಿಯಾರು ನಿವಾಸಿಯಾಗಿದ್ದ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಭಾಷೆ, ಜನಪದ, ಸಂಸ್ಕೃತಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಪತ್ನಿ ಬಹುಭಾಷಾ ವಿಜ್ಞಾನಿ ಡಾ| ಸುಶೀಲಾ ಉಪಾಧ್ಯಾಯ ಅವರು 2014ರಲ್ಲಿ ನಿಧನ ಹೊಂದಿದ್ದರು. ಕನ್ನಡ, ತುಳು, ಸಂಸ್ಕೃತ, ಮಲಯಾಳಂ, ತಮಿಳು, ಇಂಗ್ಲೀಷ್, ಫ್ರೆಂಚ್, ಆಫ್ರಿಕನ್ ಭಾಷೆಗಳಲ್ಲಿ ಪ್ರಭುತ್ವವನ್ನು ಸ್ಥಾಪಿಸಿದ್ದ ಅವರು ಭೂತ ವರ್ಷಿಪ್, ಫೋಕ್ ರಿಚುವಲ್ಸ್, ಫೋಕ್ ಎಫಿಕ್ಸ್ ಆಫ್ ತುಳುನಾಡು, ಕಾನ್ವರ್ಸೇಶನಲ್ ಕನ್ನಡ ಮೊದಲಾದ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿ ನೀಡಿದ್ದ ಉಪಾಧ್ಯಾಯರು ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದ ಉಪಾಧ್ಯಾಯ ಅವರು ಹಲವಾರು ಕೃತಿಗಳನ್ನು ರಚಿಸಿದ್ದರು. ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಕೊಂಡಿದ್ದ ಅವರು ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿದ್ದರು. ಎಳೆವೆಯಲ್ಲಿಯೇ ಹಿಂದಿ ಶಿಕ್ಷಣ ಮತ್ತು ಹಿಂದಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಾಹಿತ್ಯದ ಅಭಿರುಚಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದರು. ಹಾರ್ಮೋನಿಯಂ, ಕೊಳಲು ವಾದನದಲ್ಲೂ ತರಬೇತಿ ಪಡೆದಿದ್ದ ಅವರು ವೇದಾಧ್ಯಯನ, ಪೌರೋಹಿತ್ಯ ನಿರ್ವಹಣೆಯ ಜೊತೆಗೆ ನಾಟಕ ಅಭಿನಯ, ನಿರ್ದೇಶನ, ರಚನೆ ಮತ್ತು ಹರಿಕಥಾ ಕಾರ್ಯಕ್ರಮದ ನಿರ್ವಹಣೆಗೈದಿದ್ದರು. ನಿರಂತರ ಅಧ್ಯಯನಶೀಲರಾಗಿದ್ದ ಅವರು 1955ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿಎ ಆನರ್ಸ್ ಪದವಿ, ಎಂ.ಎ. ಪದವಿ ಪಡೆದಿದ್ದು, 1958ರಲ್ಲಿ ಮದರಾಸಿನ ಪ್ರಾಚ್ಯ ಹಸ್ತಪ್ರತಿ ಗ್ರಂಥಾಲಯದ ಉಪಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಮದರಾಸು ವಿವಿಯಲ್ಲಿ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 1959ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ / ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು 1965ರಲ್ಲಿ ಪೂನಾ ಡೆಕ್ಕನ್ ಕಾಲೇಜು ಭಾಷಾ ವಿಜ್ಞಾನ ಸಂಸ್ಥೆಯ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ 1969ರಲ್ಲಿ ಮೈಸೂರಿನ ಭಾರತೀಯ ಭಾಷಾ ವಿಜ್ಞಾನದ ದಕ್ಷಿಣ ಭಾರತ ಭಾಷಾ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 1973ರಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್ ಮೂಲಕ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದ ಡಕಾರ್ ವಿವಿಯಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಜೊತೆಗೆ ಲಂಡನ್ ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ 9 ತಿಂಗಳುಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿ, ಸಿದ್ಧ ಸಮಾಽ ಯೋಗದ ಸಾಧನೆಗೈದಿದ್ದರು. 1998ರಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇದರ ಉಡುಪಿ ಶಾಖೆಯಲ್ಲಿ ಸಿದ್ಧ ಸಮಾಜ ಯೋಗ ಶಿಕ್ಷಕರಾಗಿ, ಕೇಂದ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. 2005ರಲ್ಲಿ ಮುಂಬಯಿಯಲ್ಲಿ ನಡೆದ ಭಾರತೀಯ ಸ್ಥಳನಾಮ ಪರಿಷತ್ನ ವಾರ್ಷಿಕ ಅಧ್ಯಯನದ ಅಧ್ಯಕ್ಷತೆ ವಹಿಸಿದ್ದರು. ನಿರಂತರ ಮಾರ್ಗದರ್ಶಕರು : ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿ , ತುಳುನಿಘಂಟುಕಾರ, ರಾಷ್ಟ್ರಮಟ್ಟದ ಬಹು ಶ್ರುತ ವಿದ್ವಾಂಸರಾಗಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಬಳಿಯಲ್ಲಿ ಪದ್ಮನಾಭ ಕೇಕುಣ್ಣಾಯ, ಸಂಗೀತಾ ಎಂ. ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯ, ಅರುಣ್ ಕುಮಾರ್ ಎಸ್.ಆರ್. ಮೊದಲಾದವರಿಗೆ ಸಂಶೋಧಕನಾ ಮಾರ್ಗದರ್ಶಕರಾಗಿದ್ದು, ಡಾ| ಎಂ. ಪ್ರಭಾಕರ ಜೋಷಿ, ಡಾ| ರಾಘವ ನಂಬಿಯಾರ್, ಡಾ| ಜನಾರ್ದನ ಭಟ್ ಮೊದಲಾದವರಿಗೆ ಪಿಎಚ್ಡಿ ಗೈಡ್ ಆಗಿದ್ದರು. ಪ್ರಶಸ್ತಿ - ಪುರಸ್ಕಾರಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ಗುಂಡರ್ಟ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅಂತಾರಾಷ್ಟ್ರೀಯ ನಿಘಂಟುಕಾರ ರಚನಾಕಾರರ ಸಮ್ಮೇಳನ ಪ್ರಶಸ್ತಿ, ದ್ರಾವಿಡ ಭಾಷಾ ವಿeನಿಗಳ ಸಮ್ಮೇಳನದ ಬಹುಮಾನ, ಕನ್ನಡ ಸಂಘದ ತ್ರಿದಶಮಾನೋತ್ಸವ ಪ್ರಶಸ್ತಿ, ಶ್ರೀ ರಾಮ ವಿಠಲ ಪ್ರಶಸ್ತಿ, ಸುವರ್ಣ ಕರ್ನಾಟಕ ದಿಬ್ಬಣ ಪ್ರಶಸ್ತಿ, ಶಂಭಾ ಜೋಷಿ ಪ್ರಶಸ್ತಿ, ಹುಟ್ಟೂರ ಸಮ್ಮಾನ ಸಹಿತವಾಗಿ ನೂರಾರು ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ಸಮ್ಮಾನಗಳು ದೊರಕಿದ್ದವು. ಸಂತಾಪ : ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಯೂ ಕಾರ್ಯನಿರ್ವಹಿಸಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಅಗಲುವಿಕೆಗೆ ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ವಲಯದ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.