Updated News From Kaup
ಕೀಳಂಜೆ ದೇವಳ: ಸ್ವಚ್ಛತಾ ಅಭಿಯಾನ
Posted On: 29 Nov 2020, 09:49 PM
ಸ್ವರ್ಣಾರಾಧನಾ ಅಭಿಯಾನದ ಪ್ರಯುಕ್ತ ಸ್ವಚ್ಛ ಭಾರತ್ ಫ್ರೆಂಡ್ಸ್, ಯುವ ವಿಚಾರ ವೇದಿಕೆ ಉಪ್ಪೂರು ಜಂಟಿ ಆಶ್ರಯದಲ್ಲಿ ಕೀಳಂಜೆ ಮಹಾವಿಷ್ಣು ಮಹೇಶ್ವರ ದೇವಾಲಯದ ವಠಾರದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಯಿತು. ಎರಡು ಗಂಟೆಗಳ ಕಾಲ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಸ್ಥಾನದ ಒಳ ಮತ್ತು ಹೊರ ಆವರಣದಲ್ಲಿ ಮತ್ತು ಪುಷ್ಕರಣಿಯನ್ನು ಶುಚಿಗೊಳಿಸಲಾಯಿತು. ಅಭಿಯಾನ ನಡೆಯುತ್ತಿರುವ ಸಮಯದಲ್ಲಿ ವರುಣನ ಆಗಮನವಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕ ಪ್ರಭಾಕರ ಭಟ್, ವೇದಮೂರ್ತಿ ರವೀಂದ್ರ ಭಟ್, ಡಾ. ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಸಂಯೋಜಕ ರಾಘವೇಂದ್ರ ಪ್ರಭು, ಜಗದೀಶ್ ಶೆಟ್ಟಿ, ನ್ಯಾಯವಾದಿ ರಫೀಕ್ ಖಾನ್, ನಾಗರಾಜ್ ಭಂಡಾರ್ಕರ್, ಪುಷ್ಕರ್ ಭಟ್, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಸುಕೇಶ, ಯೋಗೀಶ್ ಕೊಳಲಗಿರಿ, ಸದಾಶಿವ್, ಅಶೋಕ್, ರವೀಂದ್ರ, ಸುಬ್ರಹ್ಮಣ್ಯ ಆಚಾರ್ಯ, ಶಶಿಕುಮಾರ್, ಶೋಭಾ ಯೋಗೀಶ್, ಸಂದೀಪ್ ಶೆಟ್ಟಿ, ಸುಕನ್ಯಾ, ಕಾವ್ಯ, ಹೇಮಂತ್, ಅವಿನಾಶ್, ವೈಭವ್, ನಾಗರಾಜ್, ಶಾಂತ, ದಾಮೋದರ ನಾಯ್ಕ್ ಮಣಿಪಾಲ, ಮುಂತಾದವರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಆಯ್ಕೆ
Posted On: 29 Nov 2020, 07:39 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ನೂತನ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿ, ಘೋಷಿಸಲಾಯಿತು. ಅಭಿವೃದ್ಧಿ ಸಮಿತಿಯ ಖಾಯಂ ಆಹ್ವಾನಿತರಾಗಿ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದ್ದು, ಜಯ ಸಿ. ಸುವರ್ಣ ಅವರ ನಿಧನದಿಂದ ತೆರವಾದ ಗೌರವಾಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗೌರವಾಧ್ಯಕ್ಷ ಮೂಳೂರು ಸುಧಾಕರ ಹೆಗ್ಡೆ ಮುಂಬಯಿ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಽಕಾರಿ ರವಿ ಕುಮಾರ್, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ :ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ
Posted On: 29 Nov 2020, 05:21 PM
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದಿಂದ ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನದ ಮೂಲಕ ಪರಿಸರಕ್ಕೆ ಅಳಿಲು ಸೇವೆ ಮಾಡಲಾಯಿತು. ಹೂಡೆಯ ಬೀಚ್ ಅನ್ನು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಈ ತಂಡವು ಶ್ರಮಿಸಿತು. ಈ ಸಂದರ್ಭದಲ್ಲಿ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.
ಸಂತೆಕಟ್ಟೆ : ಸ್ವರ್ಣೆಯ ಸ್ವಚ್ಛತೆ ಅಭಿಯಾನ
Posted On: 29 Nov 2020, 02:08 PM
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ತಂಡದ ವತಿಯಿಂದ ಸಂತೆಕಟ್ಟೆಯ ಸ್ವರ್ಣ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಪ್ರಜ್ಞಾವಂತ ನಾಗರೀಕರು ಎಸೆದ ಕಸ ಕಶ್ಮಲ ಗಳನ್ನೂ ಒಟ್ಟು ಮಾಡಿ ಸ್ವರ್ಣೆಯ ನ್ನು ಶುದ್ದೀಕರಿಸುವ ಕಾರ್ಯಕ್ರಮ ನ.29 ಆದಿತ್ಯವಾರ ನಡೆಯಿತು. ಪ್ಲಾಸ್ಟಿಕ್ ತ್ಯಾಜ್ಯ ಹಾಗು ಇತರ ಕಶ್ಮಲ ಗಳನ್ನೂ ಸಂಗ್ರಹಿಸಿಪ್ಲಾಸ್ಟಿಕ್, ಸೀಸ,ಬಟ್ಟೆ ಇತ್ಯಾದಿ ಗಳನ್ನೂ ವಿಭಾಗಿಸಲಾಯಿತು.ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದ ಕಸಗಳು ನದಿಗೆ ಸೇರಿ ಎಲ್ಲರಿಗೂ ತೊಂದರೆಯಾಗಿತ್ತು. ಈ ಭಾಗದಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಕಸವನ್ನು ನದಿಗೆ ಎಸೆಯಲಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಕಾಯ೯ಕ್ರಮದಲ್ಲಿ ತಂಡದ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಶಶಿ, ಸವಿತಾ ಶೆಟ್ಟಿ, ಸುಜಯಾ ಶೆಟ್ಟಿ, ನಗರಸಭಾ ಸದಸ್ಯೆ ಇಂದಿರಾ ರಮೇಶ್, ರಾಘವೇಂದ್ರ ಪ್ರಭು ಕವಾ೯ಲು ಪಂಚಾಯತ್ ಪಿ.ಡಿ.ಒ ಸತೀಶ್ ನಾಯ್ಕ, ಸ್ಥಳೀಯರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
ಇನ್ನಂಜೆ : ಅಧಿಕಾರಿಗಳಿಂದ ಕ್ರಾಸಿಂಗ್ - ಪಾಸಿಂಗ್ ಸ್ಟೇಷನ್ ಕಾಮಗಾರಿ ಪರಿಶೀಲನೆ
Posted On: 29 Nov 2020, 02:00 PM
ಕಾಪು ತಾಲೂಕಿನ ಇನ್ನಂಜೆ ರೈಲ್ವೇ ನಿಲ್ದಾಣ ರಚನೆ ಸಹಿತವಾಗಿ ಕ್ರಾಸಿಂಗ್ ಮತ್ತು ಪಾಸಿಂಗ್ ಸ್ಟೇಷನ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಮೈನ್ ಲೈನ್ನಿಂದ ಕ್ರಾಸಿಂಗ್ ಲೈನ್ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕೊಂಕಣ್ ರೈಲ್ವೇ ಕಾರವಾರ ರೀಜನ್ ರೀಜನಲ್ ಪ್ರಬಂಧಕ ಬಿ. ಬಿ. ನಿಕ್ಕಂ ಹೇಳಿದ್ದಾರೆ. ಇನ್ನಂಜೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ನಿಲ್ದಾಣ ಮತ್ತು ಕ್ರಾಸಿಂಗ್-ಪಾಸಿಂಗ್ ಸ್ಟೇಷನ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದರು. ಇನ್ನಂಜೆ ರೈಲ್ವೇ ನಿಲ್ದಾಣ ಮತ್ತು ಪಾಸಿಂಗ್ - ಕ್ರಾಸಿಂಗ್ ಸ್ಟೇಷನ್ ಕಾಮಗಾರಿಗೆ ಅಂದಾಜು ೧೨ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನೂತನ ರೈಲ್ವೇ ನಿಲ್ದಾಣ ನಿರ್ಮಾಣ, ೬೨೦ ಮೀಟರ್ ಉದ್ದದ ಕ್ರಾಸಿಂಗ್ - ಪಾಸಿಂಗ್ ಟ್ರ್ಯಾಕ್, ೫೬೦ ಮೀಟರ್ ಉದ್ದದ ಫ್ಲಾಟ್ ಫಾರಂ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮೂಲಭೂತ ಸೌಕರ್ಯಗಳ ಜೋಡಣಾ ಕಾರ್ಯಪೂರ್ಣಗೊಂಡಿದೆ ಎಂದರು. ರೈಲ್ವೇ ನಿಲ್ದಾಣ ರಚನೆ ಕಾಮಗಾರಿಯು ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ೧೯ ಕಾಮಗಾರಿ ವಿಳಂಭವಾಗಿತ್ತು. ಲಾಕ್ಡೌನ್ ತೆರವಾದ ಬಳಿಕ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದ್ದು ಮುಂದೆ ನೂತನ ಟ್ರ್ಯಾಕ್ನಲ್ಲಿ ಪ್ರಾಯೋಗಿಕವಾಗಿ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ ಎಂದರು. ಸಾಮಾನ್ಯ ರೈಲ್ವೇ ಸ್ಟೇಷನ್, ಪಾಸಿಂಗ್ ಸ್ಟೇಷನ್ಗಳಲ್ಲಿ ಯಾವೆಲ್ಲಾ ವ್ಯವಸ್ಥೆಗಳು ಇರುತ್ತವೆಯೋ ಅದೇ ಮಾದರಿಯ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿ ಜೋಡಿಸಲಾಗಿದೆ. ವಿಶ್ರಾಂತಿ ಗೃಹ, ಕ್ಯಾಂಟಿನ್, ಟಿಕೆಟ್ ಕೌಂಟರ್ ಸಹಿತ ವಿವಿಧ ಸೌಲಭ್ಯಗಳು ದೊರಕಲಿವೆ ಎಂದರು. ರೈಲು ಓಡಾಟ ಯಾವಾಗ ಆರಂಭಗೊಳ್ಳುತ್ತದೆ ಎನ್ನುವುದರ ಬಗ್ಗೆ ರೈಲ್ವೇ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ಜಾರಿಗೆ ಬಂದ ಲಾಕ್ಡೌನ್ನಿಂದಾಗಿ ತೊಂದರೆಗೊಳಗಾದ ರೈಲ್ವೇ ಮಂಡಳಿ ಇನ್ನೂ ಚೇತರಿಕೆಯ ಹಾದಿಯನ್ನು ಕಂಡಿಲ್ಲ. ಕೆಲವೊಂದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಗಿದ್ದರೂ, ಶೇ. ೫೦ರಷ್ಟು ಮಾತ್ರಾ ಜನ ಸ್ಪಂಧನೆ ನೀಡುತ್ತಿದ್ದಾರೆ. ಇದರಿಂದಾಗಿ ಇಲಾಖೆಗೆ ಹೊರೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಎರಡನೇ ಹಂತದ ಭೀತಿ ಎದುರಾಗಿರುವುದರಿಂದ ಪೂರ್ಣ ಪ್ರಮಾಣದ ರೈಲು ಓಡಾಟ ಇನ್ನೂ ವಿಳಂಭವಾಗುವ ಸಾಧ್ಯತೆ ಇದೆ. ರೈಲ್ವೇ ರೀಜನಲ್ ಅಧಿಕಾರಿಗಳಾದ ಆರ್.ಐ. ಪಾಟೀಲ್, ದೀಪಕ್ ಶೆಟ್ಟಿ, ಎ.ಬಿ. ಪುಲೆ, ಭಾಗ್ಯಪ್ರಕಾಶ್ ಶೆಟ್ಟಿ, ವಿನಯಕುಮಾರ್, ಚೀಪ್ ಇಂಜಿನಿಯರ್ ಗೋಪಾಲ್ ರಾಜ್, ಸೀನಿಯರ್ ಇಂಜಿನಿಯರ್ ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಹಳೆಯಂಗಡಿ : ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಾನಾರಂಭ ಕಾರ್ಯಕ್ರಮ
Posted On: 29 Nov 2020, 09:16 AM
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಾನಾರಂಭ ಕಾರ್ಯಕ್ರಮ ಶ್ರೀ ನಾಗವೃಜ ಕ್ಷೇತ್ರ ಪಾವಂಜೆ ಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿ ಮಾತನಾಡಿ ಯಕ್ಷಗಾನಾರಾಧನೆ ಮೂಲಕ ನೂತನ ಮೇಳ ಆರಂಭಿಸಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಯಶಸ್ಸು ದೊರೆಯಲಿ, ನಿರಂತರ ಯಕ್ಷಗಾನದ ಮೂಲಕ ಕಷ್ಟದಲ್ಲಿರುವ ಕಲಾವಿದರ ಕಣ್ಣೊರೆಸುವ ಕೆಲಸ ಸಮಾಜದಿಂದ ಆಗಲಿ ಎಂದರು. ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ವೇದ ಕೃಷಿಕ ಕೆಎಸ್ ನಿತ್ಯಾನಂದ ಶುಭಾಶಂಸನೆಗೈದರು. ಸಮಾರಂಭದ ವಿಶೇಷ ಅಭ್ಯಾಗತರಾಗಿ, ಮಾಜೀ ಸಚಿವರಾದ ಅಭಯಚಂದ್ರ ಜೈನ್, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು,ತಾ. ಪಂ. ಸದಸ್ಯ ಜೀವನ್ ಪ್ರಕಾಶ್,ಮುಂಬೈ ಭವಾನಿ ಶಿಪ್ಪಿಂಗ್ ನ ಕೆ.ಡಿ ಶೆಟ್ಟಿ, ಬರೋಡ ತುಳು ಕೂಟದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ವಿದ್ವಾನ್ ಯೋಗಿಂದ್ರ ಭಟ್ ಪುತ್ತಿಗೆ ಮಠ, , ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್, ಮುಗುಳಿ ತಿರುಮಲೇಶ್ವರ ಭಟ್, ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಎಸ್ ವಿ ಮಯ್ಯ ತಡಂಬೈಲ್, ಶ್ರೀಪತಿ ಭಟ್ ಮೂಡಬಿದ್ರೆ, ಸುದೇಶ್ ಕುಮಾರ್ ರೈ, ದಿವಾಕರ್ ರಾವ್, ಪಂಚ ಮೇಳದ ಸಂಚಾಲಕರಾದ ಕಿಶನ್ ಹೆಗ್ಡೆ, ಮಹಾಬಲ ಶೆಟ್ಟಿ ಪಟ್ಲ ಗುತ್ತು, ಯಾದವ ಕೋಟ್ಯಾನ್ ಪೆರ್ಮುದೆ, ಸುರತ್ಕಲ್ ಬಂಟರ ಸಂಘದ ಸುಧಾಕರ ಪೂಂಜ, ಧರ್ಮೇಂದ್ರ ಗಣೇಶಪುರ, ಚಂದ್ರಶೇಖರ ನಾಣಿಲ್, ರಾಮದಾಸ ಪಾವಂಜೆ, ಶಿವಾನಂದ ಪ್ರಭು, ರಾಮ ಟಿ ಕಾಂಚನ್, ಪೀತಾಂಬರ ಶೆಟ್ಟಿಗಾರ, ವಾಮನ್ ಇಡ್ಯಾ, ಬುಜಬಲಿ ಧರ್ಮಸ್ಥಳ, ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಯಾಜಿ ನಿರಂಜನ ಭಟ್, ಹಾಗೂ ಮೇಳದ ಸಂಚಾಲಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ,ಮತ್ತಿತರರು ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ದಾನಿಗಳು ಮೇಳಕ್ಕೆ ಕೊಡುಗೆಯಾಗಿ ನೀಡಿದ ದೇವರ ಬೆಳ್ಳಿಯ ಪ್ರಭಾವಳಿ ,ಶ್ರೀದೇವಿಯ ಉಯ್ಯಾಲೆ ಕಿರೀಟ, ಚಕ್ರ, ಗದೆ, ಹಾಗೂ ಇನ್ನಿತರ ವಸ್ತುಗಳನ್ನು ಭವ್ಯ ಮೆರವಣಿಗೆ ಮೂಲಕ ಶ್ರೀ ಜ್ಞಾನಶಕ್ತಿ ದೇವಸ್ಥಾನದಿಂದ ಚೌಕಿ ವರೆಗೆ ತಂದು ದೇವರಿಗೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ತೆಂಕು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಆರಾಧನೆ ನಡೆಯಿತು. ಸಭಾಕಾರ್ಯಕ್ರಮದ ಬಳಿಕ ಸಂಜೆ ನೂತನ ಮೇಳದಿಂದ ಸೇವಾ ಬಯಲಾಟವಾಗಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಿತು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ
Posted On: 27 Nov 2020, 09:07 PM
2019-20 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಸೊಸೈಟಿ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಿ ನಿಶ್ಮಿತಾ ಪಿ. ಎಚ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಪತ್ರಕರ್ತ, ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆ.
Posted On: 27 Nov 2020, 02:18 PM
ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಪತ್ರಕರ್ತ, ಸಿನೆಮಾ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಉದ್ಯಮಿ ಕೆ.ಸತ್ಯೇಂದ್ರ ಪೈ ಕಟಪಾಡಿ, ಗೌರವ ಸಲಹೆಗಾರರಾಗಿ ಹಿರಿಯ ಚಿಂತಕ ಬಿ.ಪುಂಡಲೀಕ ಮರಾಠೆ ಶಿರ್ವ, ಪ್ರಧಾನ ಕಾರ್ಯದರ್ಶಿಯಾಗಿ ಭುವನೇಶ್ ಪ್ರಭು ಹಿರೇಬೆಟ್ಟು, ಜತೆ ಕಾರ್ಯದರ್ಶಿಯಾಗಿ ಕಲಾವಿದೆ ಪವಿತ್ರ ಶೆಟ್ಟಿ ಕಟಪಾಡಿ, ಕೋಶಾಧಿಕಾರಿಯಾಗಿ ರಂಗನಟ ಕೆ.ನಾಗೇಶ್ ಕಾಮತ್ ಕಟಪಾಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಪತ್ರಕರ್ತ ರಾಕೇಶ್ ಕುಂಜೂರ್, ಸಂಘಟನಾ ಕಾರ್ಯದರ್ಶಿಯಾಗಿ ಸಮಾಜಸೇವಕ ರಾಘವೇಂದ್ರ ಪ್ರಭು ಕರ್ವಾಲ್, ಸಂಚಾಲಕರಾಗಿ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕ ದಯಾನಂದ ಡಿ, ಸಂಪಾದಕರಾಗಿ ಯುವಸಾಹಿತಿ ದೀಪಕ್ ಕೆ. ಬೀರ ಪಡುಬಿದ್ರಿ, ಸಮಿತಿ ಸದಸ್ಯರಾಗಿ ಸಮಾಜಸೇವಕ ಸುನೀಲ್ ಜಾನ್ ಡಿಸೋಜಾ ಶಂಕರಪುರ, ಜಾನಪದ ಕಲಾವಿದ ಹರೀಶ್ ಹೇರೂರು, ಆಕಾಶವಾಣಿ ಕಲಾವಿದೆ ಭಾಗ್ಯಲಕ್ಷ್ಮೀ ಉಪ್ಪೂರು, ಶಂಕರ್ ಶೇರಿಗಾರ್ ಮಟ್ಟು, ನ್ಯತ್ಯಕಲಾವಿದೆ ಕಾವ್ಯ ಪೈ ಕುತ್ಯಾರು, ಗೀತಾ ಆಚಾರ್ಯ ಕಾಪು, ಲಕ್ಷ್ಮಣ್ ಟಿ ಕಟಪಾಡಿ ಇವರನ್ನು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಎಸ್. ಆಯ್ಕೆಮಾಡಿದ್ದಾರೆ ಎಂದು ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
101 ವರ್ಷ ಹಳೆಯ ಯೆಲ್ಲೂರು ಮಹಾತ್ಮ್ಯಂ
Posted On: 26 Nov 2020, 05:24 PM
ಉಡುಪಿ ಜಿಲ್ಲೆ , ಕಾಪು ತಾಲೂಕಿನ ಎಲ್ಲೂರಿನಲ್ಲಿರುವ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಕುರಿತಂತೆ ವಿಶೇಷ ಆಸಕ್ತಿಯಿಂದ ನಿರಂತರ ಶೋಧನೆಗಳು ನಡೆಯುತ್ತಿದ್ದು ಹೊಸಹೊಸ ವಿಚಾರಗಳು , ಪ್ರಸ್ತುತ ರೂಢಿಯಲ್ಲಿರುವ ಸಂಪ್ರದಾಯ - ಶಿಷ್ಟಾಚಾರಗಳಿಗೆ ಹಾಗೂ ನಂಬಿಕೊಂಡು ಬಂದಿರುವ ಒಡಂಬಡಿಕೆಗಳಿಗೆ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತಲೇ ಇವೆ. ಈಗಾಗಲೇ ದಾಖಲೆಯಾಗಿರುವ ದೇವಾಲಯದ ಇತಿಹಾಸ , ಪೌರಾಣಿಕ ಹಿನ್ನೆಲೆಗಳು ಮತ್ತಷ್ಟು ಹೆಚ್ಚು ಆಧಾರಗಳೊಂದಿಗೆ ದೃಢವಾಗುತ್ತಿವೆ . ಹಿರಿಯ ಶಿಕ್ಷಕ - ವೈದಿಕ ವಿದ್ವಾಂಸರಾಗಿದ್ದ ಮಾಣಿಯೂರು ಮಠದ ಮುಖ್ಯಪ್ರಾಣಾಚಾರ್ಯರು 1918ರಲ್ಲಿ ದೇವಾಲಯದ ಆಗ ಮ್ಯಾನೇಜರ್ ಆಗಿದ್ದ ರಾಘವೇಂದ್ರರಾಯರ ಮೂಲಕ ಒಂದು ಸಣ್ಣ ಪುಸ್ತಕವನ್ನು ನನಗೆ ಕಳುಹಿಸಿದ್ದರು . "ಈ ಪುಸ್ತಕ ಅವನಿಗೆ ಬೇಕಾದೀತು , ಹೊಸ ವಿಷಯ ಏನಾದರೂ ಸಿಗಬಹುದು" ಎಂದೂ ಸೂಚಿಸಿದ್ದರು . ಸಂಸ್ಕೃತ ಶ್ಲೋಕಗಳಿರುವ ಪುಸ್ತಕವು ಹಳೆಯ ಮಗ್ಗಿ ಪುಸ್ತಕದ ಅಳತೆಯಲ್ಲಿದ್ದು ಇದರ ಹೆಸರು "ಯೆಲ್ಲೂರು ಮಹಾತ್ಮ್ಯಂ". ಕೇವಲ ೨೦+೨ ಹಾಗೂ ಹೊದಿಕೆಯ ನಾಲ್ಕು ಪುಟಗಳನ್ನು ಹೊಂದಿದೆ .11- 2- 1919 ರಂದು ಪ್ರಕಟವಾಗಿತ್ತು .ಆಗ ಪುಸ್ತಕದ ಬೆಲೆ ಎರಡಾಣೆ. 2020 ನೇ ಇಸವಿಯ ಫೆಬ್ರವರಿ ಎರಡನೇ ತಾರೀಕಿಗೆ ಈ ಪುಸ್ತಕಕ್ಕೆ 101 (ನೂರ ಒಂದು) ವರ್ಷವಾಯಿತು . 'ಯೆಲ್ಲೂರು ಮಹಾತ್ಮ್ಯಂ' :ಒಟ್ಟು ನಾಲ್ಕು ಅಧ್ಯಾಯಗಳಾಗಿ ಯೆಲ್ಲೂರು ಮಹಾತ್ಮ್ಯೆಯನ್ನು ವಿವರಿಸಲಾಗಿದೆ .೧೪೩ ಶ್ಲೋಕಗಳಿವೆ . ಈ ಪುಸ್ತಕಕ್ಕೆ ಸಂಗ್ರಾಹಕರು ಬರೆದ 'ಪ್ರಸ್ತಾವನೆ'ಯಲ್ಲಿ ಕ್ಷೇತ್ರ ಮಹಾತ್ಮೆಯ ಕತೆಯ ಸಂಕ್ಷಿಪ್ತ ವಿವರಣೆ ಇದೆ . " ದೇವಾಲಯದ ಗರ್ಭಗುಡಿಯ ದೀಪದಳಿಯ ಮೇಲಿನ ಹಂತದಲ್ಲಿ ಜೀರ್ಣೋದ್ಧಾರದ ವೇಳೆ ಅಳವಡಿಸಿರುವ ಕ್ಷೇತ್ರ ಪರಿಚಯದ ದೃಶ್ಯಗಳ ಕಥೆಯನ್ನು ಈ ಪುಸ್ತಕ ದೃಢೀಕರಿಸುತ್ತದೆ" . ಕಥಾಸಾರ : ಕುಂದಕುಲೋತ್ಪನ್ನನಾದ ರಾಜನು ಗ್ರಾಮಸಮೀಪಕ್ಕೆ ಬಂದ ಭಾರ್ಗವ ಮುನಿಯನ್ನು ತನ್ನ ಗ್ರಾಮಕ್ಕೆ ಬರಬೇಕೆಂದು ಬೇಡಿದನು .ಆಮುನಿಯು ದೇವಾಲಯ ಶೂನ್ಯವಾದ ನಿನ್ನ ದೇಶಕ್ಕೆ ಬರಲಾರೆನೆಂದು ಹೇಳಿಹೋದನು .ರಾಜನು ದುಃಖದಿಂದ ಕಡಂಬಳಿತ್ತಾಯ ಕುಲಜನಾದ ವಿಪ್ರನಿಂದ ಕೂಡಿ ಕಾಶಿಗೆ ಹೋಗಿ ರುದ್ರನನ್ನು ಸೇವಿಸಿ ಪ್ರಸನ್ನನಾದ ದೇವನಿಂದ ಹುಲಿ - ದನ ಕೂಡಿ ವೈರವಿಲ್ಲದೆ ವಾಸಿಸುವ ಮೈಲಾರನೆಂಬ ಶಿವಾರ್ಚಕ ಬ್ರಾಹ್ಮಣನ ಶುದ್ಧ ಸ್ಥಳದಲ್ಲಿ ಉದ್ಭವಿಸುವೆನೆಂದು ವರವನ್ನು ಪಡೆದು ತನ್ನ ದೇಶಕ್ಕೆ ಹಿಂದಿರುಗಿ ಬಂದನು . ಹಾಗೆಯೇ ಅಲ್ಲಿ ಮಹಾದೇವನು ಉದ್ಭವಿಸುತ್ತಿರುವಾಗ ಬುಡಕಟ್ಟು ಮಹಿಳೆಯೊಬ್ಬಳು ಗಡ್ಡೆಯನ್ನು ಕೀಳುವುದಕ್ಕೆ ಕತ್ತಿಯನ್ನು ಭೂಮಿಗೆ ಹೊಡೆಯಲು ಅಲ್ಲಿ ರಕ್ತವು ತೋರಿತು.ಆಗ ಅವಳು ಹೆದರಿ ತನ್ನ ಮೃತ ಪುತ್ರನ ರಕ್ತವೆಂದು ಭಾವಿಸಿ "ಯೆಲ್ಲೋ ..." ಎಂದು ಕೂಗುತ್ತಾ ಓಡಿದಳು .ಆ ದೇವನು ತಲೆಯಲ್ಲಿ ಆ ಗಾಯವನ್ನು ಧರಿಸಿ ಮೇಲಕ್ಕೆ ಬಂದನಾದುದರಿಂದ ಆಸ್ಥಳಕ್ಕೆ "ಯೆಲ್ಲೂರು" ಎಂಬ ಹೆಸರಾಯಿತು .ಈ ರೀತಿ ಅರಸನಿಗೆ ಪ್ರಸನ್ನನಾದ ಮಹಾದೇವನು ಆ ಸ್ಥಳದಲ್ಲಿ ಭಕ್ತ ಜನರಿಗೆ ಸರ್ಮಾಭೀಷ್ಟವನ್ನು ಕೊಡುತ್ತಿರುವನು ....... (ಕತೆ ಇನ್ನೂ ವಿಸ್ತಾರವಾಗಿ ಮಹಾತ್ಮ್ಯೆಯಲ್ಲಿದೆ) ಇದೇ ಪುಸ್ತಕದ ಕೊನೆಯ ಪುಟದಲ್ಲಿ (ಹೊದಿಕೆಯ ಪುಟ) ಮುದ್ರಿತವಾದ 'ಸೂಚನೆ" : ಇಂತಹ ಪ್ರಸಿದ್ಧವಾದ ಕ್ಷೇತ್ರದ ಮಹಿಮೆಯನ್ನು ಪ್ರಕಟಿಸಬೇಕಾಗಿ ಈ ಕ್ಷೇತ್ರದ ಸಂದರ್ಶನಾರ್ಥಿಗಳಾಗಿ ಬಂದಿದ್ದ ಮದರಾಸು ಸಂಸ್ಥಾನದ ಸಂಸ್ಕೃತ ಶಾಲೆಗಳ ಸೂಪರಿಂಟೆಂಡೆಂಟ್ ಆದ ಮ.ರಾ.ರಾ. ಸೇಲಂ ಸುಬ್ರಾವ್ ಎಂ.ಎ. ಇವರ ಸೂಚನಾನುಸಾರ ದೇವಸ್ಥಾನದ ಅರ್ಚಕರೊಬ್ಬರಲ್ಲಿದ್ದ ಅತಿ ಜೀರ್ಣ "ತಾಲಪ್ರತಿ"ಯಿಂದ ಸಂಗ್ರಹಿಸಿ ಶ್ರೀಮದದಮಾರು ಮಠದ ಶ್ರೀ ವಿಬುಧಪ್ರಿಯ ಶ್ರೀ ಪಾದಂಗಳವರ ಆಜ್ಞೆಯಂತೆ ಛಾಪಿಸಿ ಪ್ರಕಟಿಸಲ್ಪಟ್ಟಿತು . ಕುಂಜೂರು ವ್ಯಾಸರಾವ್. ಆಡಳಿತೆದಾರ ಎಲ್ಲೂರು ದೇವಸ್ಥಾನ . (ಈಗಾಗಲೇ ಜನಪ್ರಿಯವಾಗಿದ್ದು ,ಬಹು ಸಂಖ್ಯೆಯ ಭಕ್ತರು ಒಪ್ಪಿರುವ ಕಥೆ ಹಾಗೂ 1996 ರಲ್ಲಿ ದೇವಸ್ಥಾನದ ವತಿಯಲ್ಲಿ ಪ್ರಕಟವಾಗಿ, ಈಗ ಮೂರನೇ ಅವೃತ್ತಿಯಾಗಿ ಲಭ್ಯವಿರುವ "ಮಹತೋಭಾರ ಯೆಲ್ಲೂರು ವಿಶ್ವನಾಥ" ಪುಸ್ತಕದಲ್ಲಿ ದಾಖಲೆಯಾಗಿರುವ ಮೂರು ಕತೆಗಳಲ್ಲಿ ವಿಸ್ತಾರವಾದ ಒಂದು ಕತೆಗೆ ಈ 'ನೂರ ಒಂದು' ವರ್ಷ ಹಳೆಯ ಪುಸ್ತಕ ಕತೆ ಸಮರ್ಥನೆಯನ್ನು ನೀಡುತ್ತದೆ.) ಅನುವಾದ ಸಹಿತ ಪ್ರಕಟವಾಗುತ್ತದೆ : ಬಳಿಕ ಎರಡುಬಾರಿ ಈ "ಯೆಲ್ಲೂರು ಮಹಾತ್ಮ್ಯಂ" ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕಗಳ ಅನುವಾದ ಸಹಿತದ 'ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ'ದಲ್ಲಿರುವ "ಯೆಲ್ಲೂರು ಮಹಾತ್ಮೆ" ಎಂದು ಕನ್ನಡ ತಾತ್ಪರ್ಯ ಸಹಿತದ ಪುಸ್ತಕವು ದೇವಾಲಯದ ವತಿಯಲ್ಲಿ ಮುದ್ರಣವಾಗುತ್ತದೆ (ಭಕ್ತರ ಪ್ರಯೋಜನಾರ್ಥವಾಗಿ ಎಲ್ .ನರಸಿಂಗರಾಯರು ಕನ್ನಡ ತಾತ್ಪರ್ಯ ಸಹಿತವಾದ ಈ ಪುಸ್ತಕವನ್ನು ಮುದ್ರಿಸಿಕೊಟ್ಟರು ಎಂದು ಒಂದನೇಯ ಅಥವಾ ಎರಡನೇ ಆವೃತ್ತಿಯ ಪ್ರಸ್ತಾವನೆಯಲ್ಲಿದೆ.). ಆ ಎರಡು ಆವೃತ್ತಿಗಳು ಲಭ್ಯವಿಲ್ಲ .ಮುದ್ರಣವಾದ ವರ್ಷ ತಿಳಿದು ಬರುವುದಿಲ್ಲ. ಆದರೆ 1974ರ ವೇಳೆ ದ್ವಿತೀಯ ಮುದ್ರಣದ ಪ್ರತಿಗಳು ಲಭ್ಯವಿತ್ತು ಎಂಬುದಕ್ಕೆ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಆ ದ್ವಿತೀಯ ಆವೃತ್ತಿಯನ್ನು ಆಧರಿಸಿ "ಕುಂಜೂರು ಶ್ರೀ ದುರ್ಗಾ ದೇವಸ್ಥಾನ" ಎಂಬ ಒಂದು ಸಣ್ಣ ಕೈಪಿಡಿಯನ್ನು ಕುಂಜೂರು ದೇವಸ್ಥಾನಕ್ಕಾಗಿ ಬರೆದು ಕೊಡುತ್ತಾರೆ . ಈಗ ಹಲವೆಡೆ ಲಭ್ಯವಿರುವ "ಎಲ್ಲೂರು ಮಹಾತ್ಮೆ" ಅದು 1976 ರಲ್ಲಿ ಮುದ್ರಣವಾದ ಮೂರನೇ ಆವೃತ್ತಿಯ ಪ್ರತಿಗಳು ದೇವಾಲಯದ ಕಚೇರಿಯಲ್ಲಿ ಇರಬೇಕು .ಕನ್ನಡ ತಾತ್ಪರ್ಯ ಸಹಿತದ ಈ ಪುಸ್ತಕದ ಒಂದು ಮೂಲ ಪ್ರತಿ (ಸಂಸ್ಕೃತ ಶ್ಕೋಕಗಳು ಮಾತ್ರ ಇರುವ. ಪುಸ್ತಕ ಸಂಗ್ರಹಿಸುವವರಲ್ಲಿ ಈ ಪ್ರತಿಗಳು ಇರಬಹುದು) ಈಗ ಲಭ್ಯವಾಗಿದೆ .ಈ ಪುಸ್ತಕ ಈ ವರೆಗೆ ದಾಖಲಿಸಿದ ಕತೆಗಳಿಗೆ ನೂರೊಂದು ವರ್ಷ ಪುರಾತನ ಆಧಾರವಾಗುತ್ತದೆ. 1996 ನೇ ಇಸವಿ ಏಪ್ರಿಲ್13 ನೇ ತಾರೀಕಿನಂದು ಪ್ರಸ್ತುತ ಲಭ್ಯವಿರುವ ಕ್ಷೇತ್ರ ಪರಿಚಯ ಪುಸ್ತಕ 'ಮಹತೋಭಾರ ಎಲ್ಲೂರು ವಿಶ್ವನಾಥ' ದೇವಾಲಯದ ವತಿಯಲ್ಲಿ ಮುದ್ರಿಸಲ್ಪಟ್ಟು ಬಿಡುಗಡೆಯಾಗುತ್ತದೆ .ಕಳೆದ 24 ವರ್ಷಗಳಲ್ಲಿ ಇದೇ ಪುಸ್ತಕ ದೇವಾಲಯದ ವತಿಯಲ್ಲಿ ಮತ್ತೆರಡು ಬಾರಿ ಮುದ್ರಣಗೊಳ್ಳುತ್ತದೆ. ಈಗ ದೇವಾಲಯದಲ್ಲಿ ಮಾರಾಟಕ್ಕೆ ಲಭ್ಯವಿರುವ ಪುಸ್ತಕ, ಮೂರನೇ ಆವೃತ್ತಿಯದ್ದು. ಎಲ್ಲೂರು ಮಹಾತ್ಮ್ಯೆ : ತಾನು ಎಲ್ಲೂರಿಗೆ ಹೇಗೆ ,ಯಾಕೆ ಹೋದೆನು , ಎಲ್ಲಿ ,ಯಾವ ಸುಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ : "ಪಿಲಾರುಕಾನ , ಸಾಂತೂರು , ನಂದಿಕೂರು , ಪಾದೆಬೆಟ್ಟು ,ಕುಂಜೂರು ,ಉಳಿಯಾರು , ಕಾಪು ಸಮೀಪದ ಪಾಂಗಾಳ , ಕಳತ್ತೂರು ,ಪೇರೂರು , ಶಿರ್ವ , ಮುಂತಾದ ಹತ್ತು ಪುಣ್ಯ ಕ್ಷೇತ್ರಗಳನ್ನು ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವನೆಂಬ ಮಹರ್ಷಿಯು ಸಂಕಲ್ಪಸಿದ್ದನು .ಆ ಹತ್ತು ಕ್ಷೇತ್ರಗಳ ಮಧ್ಯೆ ನಾನು ಆವಿರ್ಭವಿಸಿದೆ ಅದೇ 'ಯೆಲ್ಲಾಪುರ' ಅಥವಾ ಯೆಲ್ಲೂರು" ಎಂದು ಈಶ್ವರನು ಹೇಳುತ್ತಾನೆ . ಈ ಹತ್ತು ಕ್ಷೇತ್ರಗಳಲ್ಲಿ "ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದೂ ಉದ್ಗರಿಸುತ್ತಾನೆ . ಹೀಗೆ ಕುಂಜಪುರ - ಕುಂಜೂರು ಕ್ಷೇತ್ರ ಸಂಕಲ್ಪದ ಕತೆಯನ್ನು ಹೇಳುತ್ತಾ ಹರಿಯುತ್ತಿರುವ ವಾರುಣಿ ಎಂಬ ನದಿಯನ್ನು ಮುಚ್ಚಿ ಬದಿಯಲ್ಲಿ ಭೂಮಿಯನ್ನು ಪವಿತ್ರವಾಗಿಸಲು ಯಾಗವೊಂದನ್ನು ಮಾಡಲು ಸಂಕಲ್ಪಿಸುತ್ತಾನೆ (ಈ ಕುರಿತ ವಿಸ್ತಾರವಾದ ವಿವರಣೆ ಇದೆ , ಪ್ರಮಾಣಗಳಿವೆ .ಯಾಗ ನೆರವೇರಿಸಿದ ಕ್ರಮವಿದೆ , ಸಹಕರಿಸಿದ ವಂಶಸ್ಥರ , ವಂಶಗಳ ಹೆಸರುಗಳಿವೆ). ಯಾಗ ಪೂರೈಸಿದ ಬಳಿಕ ದುರ್ಗಾ ಶಕ್ತಿಯನ್ನು ಸಂಕಲ್ಪಿಸುತ್ತಾನೆ. ಈ ವಿವರಗಳು ಈಗಾಗಲೇ ನಮೂದಾಗಿದೆಯಾದರೂ ಆ ವಿವರಣೆಗೆ ನೂರೊಂದು ವರ್ಷ ಪುರಾತನ ದಾಖಲೆಯೊಂದು ಸಿಕ್ಕಿದೆ (ಇನ್ನಷ್ಟು ಹೊಸ ವಿಷಯಗಳು ಇತ್ತೀಚೆಗೆ ಲಭ್ಯವಾಗಿದ್ದು ಮುಂದೆ ವಿವರಿಸುವ). ಲೇಖನ : ಕೆ.ಎಲ್.ಕುಂಡಂತಾಯ
ಕಾಪು : ಜಾರ್ದೆ ಮಾರಿಪೂಜೆ ಸಂಪನ್ನ
Posted On: 25 Nov 2020, 08:34 PM
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜಾರ್ದೆ ಮಾರಿಪೂಜೆಯು ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಕಾಪುವಿನ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗಳಲ್ಲಿ ಸಂಪನ್ನಗೊಂಡಿತು. ಲಾಕ್ ಡೌನ್ ಸಂದರ್ಭ ನಡೆದ ಸುಗ್ಗಿ ಮಾರಿಪೂಜೆ, ಆಟಿ ಮಾರಿಪೂಜೆಗಳಲ್ಲಿಯೂ ದೇವಳದ ಅರ್ಚಕರು, ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಮಾರಿ ಪೂಜೆಗೆ ಸರಕಾರದ ನಿರ್ದೇಶನದಂತೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು ಸುಗ್ಗಿ, ಆಟಿ, ಜಾರ್ದೆ ಮಾರಿಪೂಜೆಯಲ್ಲಿ ಬಾಕಿ ಉಳಿಸಿದ ಹರಕೆಗಳನ್ನು ಸಮರ್ಪಿಸಲು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ಅವಕಾಶ ನೀಡಲಾಗುವುದು ಎಂದು ಹೊಸ ಮಾರಿಗುಡಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಹಳೆ ಮಾರಿಗುಡಿ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮೂರನೇ ಮಾರಿಗುಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ಬಂಗೇರ ತಿಳಿಸಿದ್ದಾರೆ. ಮಾರಿಪೂಜೆ ಸಂದರ್ಭ ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಭಕ್ತಾದಿಗಳ ಸಂದಣಿ ನಿಯಂತ್ರಿಸಲು ಮೂರು ದೇವಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
