Updated News From Kaup
ಬಂಟಕಲ್ಲು : ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮಹಿಳೆಯ ಚಿನ್ನ ದೋಚಿದ ಅಪರಿಚಿತ
Posted On: 21 Nov 2020, 11:03 PM
ಇಂದು ಸಂಜೆ ಗಂಟೆ 6.30 ರ ಹೊತ್ತಿಗೆ ಬಂಟಕಲ್ಲು ದೇವಸ್ಥಾನದ ಬಳಿಯಲ್ಲಿ ವಾಸವಿರುವ ಒಬ್ಬಂಟಿ ಮಹಿಳೆಯ ಮನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಆ ಮಹಿಳೆ ನೀರು ತರಲು ಮನೆಯೊಳಗೆ ಹೋದಾಗ ಆ ವ್ಯಕ್ತಿ ಅವರನ್ನು ಹಿಂಬಾಲಿಸಿ ಮನೆಯೊಳಗೆ ಹೋಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 1.75 ಲಕ್ಷ ರೂ ಮೌಲ್ಯದ ಬಂಗಾರದ ಚೈನನ್ನು ಎಳೆದು ಕೊಂಡು ಬೈಕಿನಲ್ಲಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪರಿಚಿತರ ಮೇಲೆ ಕರುಣೆ ತೋರದಿರಿ
ಅಪರಿಚಿತ ವ್ಯಕ್ತಿಗಳು ಯಾರೇ ಆಗಲಿ ನೀರು ಕೇಳುವ ಅಥವಾ ಯಾವುದೇ ಕಾರಣಕ್ಕೂ ಮನೆ ಬಳಿ ಬಂದರೆ ಅವರನ್ನು ಒಳಬರಲು ಬಿಡಬೇಡಿ. ಅಥವಾ ನೀರು ಕೊಡುವೂದಕ್ಕೂ ಹೋಗಬೇಡಿ.
ಯಾವುದೇ ಸಹಾಯ ಯಾಚಿಸಿ ಬಂದರೂ , ಮಹಿಳೆ ಅಥವಾ ಪುರುಷರೇ ಆಗಿರಲಿ ಅವರು ಅಪರಿಚಿತರಾದರೆ ಅವರಿಗೆ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಕರುಣೆ, ಪಾಪ ಪುಣ್ಯ ನೋಡಲು ಹೋಗಬೇಡಿ. ಯಾವಾಗ ಯಾರು ಯಾವ ವೇಷದಲ್ಲಿ ಬಂದು ನಮ್ಮನ್ನು ವಂಚಿಸುತ್ತಾರೆ ಎಂದು ಊಹಿಸಲೂ ಕಷ್ಟ.
ಮುಖ್ಯವಾಗಿ ಒಬ್ಬಂಟಿಯಾಗಿರುವವರು, ಮಹಿಳೆಯರು ಎಚ್ಚರಿಕೆಯಿಂದಿರಬೇಕು.
ನೀರು ಕೇಳುವುದು, ದಾರಿ ಕೇಳುವುದು, ವಸ್ತುಗಳನ್ನು ಮಾರಾಟ ಮಾಡಲು ಬರುವುದು ಹೀಗೆ ಯಾವುದೇ ವಿಧದಲ್ಲೂ ಬರುವವರಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋಗುವವರೂ ಎಚ್ಚರಿಕೆಯಿಂದಿರಬೇಕು.. ಬೆಲೆಬಾಳುವ ಆಭರಣಗಳ ಬಗ್ಗೆ ಜಾಗರೂಕರಾಗಿರಿ.
ಯಾರೇ ಅಪರಿಚಿತರು ಬಂದಾಗ ಅತೀ ಜಾಗರುಕತೆ ಇರಲಿ.
ಯಾರಿಗೂ ಕರುಣೆ,ಪಾಪ,ಪುಣ್ಯ ನೋಡಬೇಡಿ.
ಈ ಬಗ್ಗೆ ಮಕ್ಕಳಿಗೂ ತಿಳಿಹೇಳಬೇಕು, ನಾವು ಎಷ್ಟೇ ಬುದ್ದಿವಂತರಿದ್ದರೂ ಮೋಸಹೋಗುತ್ತೇವೆ. ಎಚ್ಚರಿಕೆ ಇರಲಿ.
ಕೆ ಆರ್ ಪಾಟ್ಕರ್ ಬಂಟಕಲ್ಲು
ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣ: ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
Posted On: 21 Nov 2020, 08:47 AM
ಉಡುಪಿ : ಪ್ರಸ್ತುತ ಉಡುಪಿಯಲ್ಲಿರುವ ಜಿಲ್ಲಾಸ್ಪತ್ರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ, 115 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ನಿರ್ಮಿಸಲು ಲಭ್ಯವಿರುವ ಸ್ಥಳದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಗುರುವಾರ ನಡೆಸಿದರು. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ, ನೂತನ ಜಿಲ್ಲಾಸ್ಪತ್ರೆ ನಿರ್ಮಿಸಲು ಅಗತ್ಯವಿರುವ ಸ್ಥಳ ಲಭ್ಯವಿದ್ದು, ಇಲ್ಲಿಯೇ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನೀಲ ನಕ್ಷೆಯನ್ನು ಸಿದ್ಧಪಡಿಸುವಂತೆ ಸಂಬAದಪಟ್ಟ ಇಂಜಿನಿಯರ್ಗೆ ಜಿಲ್ಲಾಧಿಕಾರಿ ಸೂಚಿಸಿದರು. ಜಿ.ಪಂ. ಸಿಇಓ ಡಾ ನವೀನ್ ಭಟ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.
ಇನ್ನಂಜೆ ಮಾತೃಶಕ್ತಿ, ದುರ್ಗಾವಾಹಿನಿ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು
Posted On: 19 Nov 2020, 09:53 PM
ಇನ್ನಂಜೆ ವಿಷ್ಣುವಲ್ಲಭ ಘಟಕದ ಮಾತೃ ಶಕ್ತಿ ಸಂಚಾಲಕರಾಗಿ ಶ್ರೀಮತಿ ಆಶಾ, ಸಹ ಸಂಚಾಲಕರಾಗಿ ಶ್ರೀಮತಿ ಲಕ್ಷ್ಮಿ. ದುರ್ಗಾವಾಹಿನಿ ಸಂಚಾಲಕರಾಗಿ ಕುಮಾರಿ ವಿದ್ಯಾ, ಸಹ ಸಂಚಾಲಕರಾಗಿ ಕುಮಾರಿ ಪದ್ಮ ಶ್ರೀ ಆಯ್ಕೆಯಾಗಿದ್ದಾರೆ
ಪಡುಬಿದ್ರಿ : ಕನ್ನಂಗಾರ್ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿ ನೇಮಕ
Posted On: 19 Nov 2020, 09:28 PM
ಪಡುಬಿದ್ರಿ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಜುಮ್ಮಾ ಮಸೀದಿಗಳಲ್ಲಿ ಒಂದಾದ ಕಣ್ಣಂಗಾರ್ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮಸೀದಿಯ ಆಡಳಿತ ಸಮಿತಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ವಜಾಗೊಳಿಸಿದೆ. ಆಡಳಿತಾಧಿಕಾರಿಯಾಗಿ ದ. ಕ. ಜಿಲ್ಲೆಯ ಉಳ್ಳಾಲ ಹರೇಕಳದ ಸೆಯ್ಯದ್ ಮದನಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಮೊಯ್ದೀನ್ ಕುಂಜ್ಞಿ ಮಂಜನಾಡಿ ಇವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಅವರು ನವಂಬರ್ ೧೨ ರಿಂದ ಆಡಳಿತಾಧಿಕಾರಿ ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಎಲ್ಲೂರಿನ ದೀಪೋತ್ಸವ ಮಹತ್ವ
Posted On: 18 Nov 2020, 11:03 PM
ಉಮಯಾ ಸಹವರ್ತತೇ ಇತಿ ಸೋಮಃ : ಶಿಷ್ಟ ಸಂಪ್ರದಾಯ ,ನಡೆದು ಬಂದ ಪದ್ಧತಿ , ನಡವಳಿಕೆ ,ಕ್ರಮಬದ್ಧತೆಗಳೇ ಪ್ರಧಾನವಾಗಿದ್ದು , "ಸೀಯಾಳ ಅಭಿಷೇಕ"ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900 - 1000 ವರ್ಷ ಪುರಾತನ ಸೀಮೆಯ ದೇವಾಲಯ . ಇಲ್ಲಿ ನೆರವೇರುವ ಪ್ರತಿಯೊಂದು ಪರ್ವಗಳಿಗೆ , ಆಚರಣೆಗಳಿಗೆ, ಉತ್ಸವಾದಿಗಳಿಗೆ ಅವುಗಳದ್ದೇ ಆದ ಹಿನ್ನೆಲೆಗಳಿವೆ. ನಿಯಮ ನಿಬಂಧನೆಗಳಿವೆ . ಕಾರ್ತಿಕ ಮಾಸದ ಸೋಮವಾರಗಳು ಮತ್ತು ಕಾರ್ತಿಕದ ಕೊನೆಯ ದಿನವಾದ ಅಮಾವಾಸ್ಯೆಯಂದು ಪೂರ್ಣಗೊಳ್ಳುವ 'ಲಕ್ಷದೀಪೋತ್ಸವ' ಧಾರ್ಮಿಕ - ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ,ಅಸಾಮಾನ್ಯ ಲಕ್ಷಣವುಳ್ಳದ್ದಾಗಿದೆ . ಈ ನಂಬಿಕೆ - ಶಿಸ್ತು ಉಳಿದು ಕೊಂಡಿದೆ ; ನಡೆದುಬರುತ್ತಿವೆ. ವಾರಕ್ಕೊಮ್ಮೆ ಬರುವ ಸೋಮವಾರವೂ ಶಿವನ ಆರಾಧಕರಿಗೆ ಹಬ್ಬದ ದಿನವೇ . "ಉಮಯಾ ಸಹವರ್ತತೇ ಇತಿ ಸೋಮಃ" ಉಮೆಯೊಂದಿಗೆ ಈಶ್ವರನು ಸೇರಿದಾಗ 'ಸೋಮ'ನೆಂದು ಕರೆಯಲ್ಪಡುತ್ತಾನೆ .ಉಮೆಯೊಂದಿಗೆ ಆತನು ವಿಹರಿಸುವ ,ಅವನಿಗೆ ಪ್ರಿಯವೆನಿಸಿದ ಸೋಮವಾರದಂದು ನಡೆಸುವ ಉಪವಾಸ ,ಪೂಜೆ , ಅಭಿಷೇಕ ಇತ್ಯಾದಿಗಳು ಅವನನ್ನು ಪ್ರಸನ್ನಗೊಳಿಸುತ್ತದೆ. ಸೋಮವಾರ ಅಥವಾ ಶನಿವಾರ ದಿನಗಳಂದು ತ್ರಯೋದಶಿ ತಿಥಿ ಕೂಡಿ ಬಂದರೆ ಅದು 'ಪ್ರದೋಷ'. ಈ ಪವಿತ್ರ ಮುಹೂರ್ತದಲ್ಲಿ ವಿಶ್ವೇಶ್ವರನನ್ನು ಆರಾಧಿಸಿದರೆ ದೇವರ ದೇವನು ಶೀಘ್ರ ಅನುಗ್ರಹಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಬರುವ ಎಲ್ಲಾ ಸೋಮವಾರಗಳು ವಿಶ್ವನಾಥನ ಆರಾಧನೆಯಿಂದ ಸಂತೃಪ್ತಿ ಪಡೆಯಲು ಬಯಸುವ ಭಕ್ತರ ಪಾಲಿಗೆ ಅತ್ಯುತ್ಕ್ರಷ್ಟವೆಂದು ವೇದಗಳು ಹೇಳಿವೆ. ಕಾರ್ತಿಕ ಸೋಮವಾರಗಳಲ್ಲಿ ಶತರುದ್ರಾಭಿಷೇಕ , ದೀಪೋತ್ಸವ , ಲಕ್ಷ ಬಿಲ್ವಾರ್ಚನೆಗಳಿಂದ ಶಿವಾರಾಧನೆ ಮಾಡುವುದು ಶ್ರೇಯಸ್ಕರವೆನಿಸಿದೆ . ಕಾರ್ತಿಕ ಸೋಮವಾರ :ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಕಾರ್ತಿಕದ ನಾಲ್ಕು ಸೋಮವಾರಗಳು ಮಧ್ಯಾಹ್ನ ಅನ್ನಸಂತರ್ಪಣೆ ಸಹಿತವಾಗಿ ರಾತ್ರಿ ತುಳಸಿಪೂಜೆ , ದೊಡ್ಡರಂಗಪೂಜೆ , ದೀಪೋತ್ಸವ , ಉತ್ಸವ ಬಲಿ ನೆರವೇರುತ್ತಿದ್ದುವು - ಪರಂಪರೆಯ ಸೇವಾರ್ಥಿಗಳಿದ್ದರು. 'ಸೋಮವಾರ ವ್ರತಸ್ಥರಾಗುವವರು ದೂರದ ಊರುಗಳಿಂದಲೂ ಬಹುಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಿದ್ದರು.ಕೊನೆಯ ಸೋಮವಾರ ಕಾರ್ತಿಕ 'ಸೋಮವಾರ ವ್ರತ'ದ ಶಿವಾರ್ಪಣೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಕಾಲ ಕಾರಣವಾಗಿ ಕಾರ್ತಿಕ ಮಾಸದ ಮೊದಲ ಎರಡು ಸೋಮವಾರಗಳು ದೇವರ ಭಂಡಾರದಿಂದ ನೆರವೇರುವಂತಾಯಿತು. ಉಳಿದ ಎರಡು ( ಮೂರನೇ ಮತ್ತು ನಾಲ್ಕನೇ) ಸೋಮವಾರಗಳು ನಿರ್ಧರಿತ ಮನೆತನದವರಿಂದ ವಿಸ್ತೃತವಾಗಿ ನಡೆದು ಬರುತ್ತಿವೆ .ಆದರೆ ಈ ವರ್ಷ ಮೊದಲೆರಡು ಸೋಮವಾರಗಳಲ್ಲಿ ಒಂದನ್ನು ನೆರವೇರಿಸಲು ಸೇವಾರ್ಥಿಗಳು ಒದಗಿ ಬಂದಿದ್ದಾರೆ . ಎರಡನೇ ಸೋಮವಾರದ ರಾತ್ರಿಯ ರಂಗಪೂಜೆ , ಉತ್ಸವಬಲಿ ನಡೆಸಲೂ ಸೇವಾರ್ಥಿಗಳು ಸಿದ್ಧರಾಗಿದ್ದಾರೆ. ಈ ನಡುವೆ ಕಾರ್ತಿಕ ಮಾಸದ ಹುಣ್ಣಿಮೆಯ ರಂಗಪೂಜೆಯು ಮಾಮೂಲಿನಂತೆ ಸೇವಾರ್ಥಿಗಳಿಂದ ನಡೆಯುವುದು. 'ಎಲ್ಲೂರುದೀಪ' :"ಎಲ್ಲೂರಿನ ಲಕ್ಷದೀಪ" ಪ್ರಸಿದ್ಧವಾದುದು. ಮಧ್ಯಾಹ್ನ ಅನ್ನಸಂತರ್ಪಣೆ , ರಾತ್ರಿ ತುಳಸಿಪೂಜೆ , ದೊಡ್ಡರಂಗಪೂಜೆ ನೆರವೇರಿ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ದೀಪಾರಾಧನೆ ,ದೀಪೋತ್ಸವದ ಬಲಿ ಹೊರಡುತ್ತದೆ .ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದು ಮಾರ್ಗಶಿರ ಮಾಸದ ಶುದ್ಧ ಪಾಡ್ಯದ ಸೂರ್ಯೋದಯಕ್ಕೆ ಎಲ್ಲೂರು ದೀಪೋತ್ಸವವು ಸಮಾಪನಗೊಳ್ಳುತ್ತದೆ. ಕಾಲ ಬದಲಾಗುತ್ತಾ ಬಂತು , ಮನೋಧರ್ಮಗಳೂ ಬದಲಾದುವು , ಬೆಳಗಿನ ಜಾವದ ಲಕ್ಷದೀಪೋತ್ಸವದ ಬಲಿಯನ್ನು ಸಂಜೆಯಾಗುತ್ತಿರುವಂತೆ ಅಥವಾ ರಾತ್ರಿ ಬೇಗನೇ ಏಕೆ ಮುಗಿಸಬಾರದು , ಪಕ್ಕದ ಗ್ರಾಮಗಳಲ್ಲಿ , ತಾಲೂಕಿನಲ್ಲಿ , ಜಿಲ್ಲೆಗಳಲ್ಲಿ ಎಲ್ಲೂರಿನಂತೆ ಅಮಾವಾಸ್ಯೆಯಂದು ಬೆಳಗಿನ ಜಾವ ಲಕ್ಷದೀಪೋತ್ಸವ ನಡೆಯುತ್ತಿದ್ದ ಬಹುತೇಕ ದೇವಾಲಯಗಳಲ್ಲಿ ಬೇಗನೇ ನೆರವೇರುತ್ತಿವೆ ,ಎಲ್ಲೂರಿನಲ್ಲಿ ಏಕೆ ಬೇಗನೇ ಮುಗಿಸಬಾರದು ಎಂಬ ಪ್ರಶ್ನೆಗಳು ಸಹಜವಾಗಿ ಕಳೆದ ಹತ್ತು - ಹದಿನೈದು ವರ್ಷಗಳಿಂದ ಕೇಳಲಾಗುತ್ತಿದೆ . 'ದೀಪಪ್ರಭೆ' ಸೂರ್ಯಕಿರಣದಲ್ಲಿ ಐಕ್ಯ : ಈಗ ಎಲ್ಲೂರು ದೇವರನ್ನು ಮುಟ್ಟಿ ,ತಮ್ಮ ಪರಂಪರೆಯ ತಂತ್ರ ನಿರ್ವಹಿಸುತ್ತಿರುವ ಎಲ್ಲೂರು ಸೀಮೆಯ ಒಂಬತ್ತುಮಂದಿ ತಂತ್ರಿಗಳ ಹಿಂದಿನ ತಲೆಮಾರಿನ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ತಂತ್ರಾಗಮ ತಜ್ಞರಲ್ಲಿ ಸುಮಾರು ನಲ್ವವತ್ತು ವರ್ಷಗಳಷ್ಟು ಹಿಂದೆಯೇ ಈ ಲೇಖಕ "ನಮ್ಮಲ್ಲಿ ಯಾಕೆ ಬೆಳಗಿನ ಜಾವ ಲಕ್ಷದೀಪೋತ್ಸವ" ಎಂಬ ಪ್ರಶ್ನೆಯನ್ನು ಕೇಳಿದ್ದು ; ಆಕಾಲದ ವಿದ್ವಾಂಸರು ವಿವರಿಸಿದ್ದ ಉತ್ತರ ಹೀಗಿದೆ : "ವಿಶ್ವೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ನಿರಂತರ ದೀಪಾರಾಧನೆಯ ದೀಪದ ಜ್ಯೋತಿಯು ( ಪ್ರಕಾಶ ,ಕಾಂತಿ) ಮಧ್ಯರಾತ್ರಿ ಕಾಲದಲ್ಲಿ ಅಥವಾ ಕತ್ತಲಲ್ಲಿ ಕರಗಿಹೋಗಬಾರದು. ಬೆಳಗಿನಜಾವ ಉತ್ಸವಬಲಿ ಹೊರಟಾಗ ದೇವಳದ ಒಳ ,ಹೊರ ಅಂಗಣಗಳಲ್ಲಿ ದಳಿ ಅಳವಡಿಸಿ ಹಣತೆಗಳಲ್ಲಿ ಬೆಳಗುವ ಬಹುಸಂಖ್ಯೆಯ ದೀಪಗಳು ಉರಿಯುತ್ತಿರುವಂತೆ ಉತ್ಸವ ಮುಗಿಯುತ್ತದೆ ,ಆಗ ಬೆಳಗಾಗುತ್ತಾ ಅರುಣೋದಯ ಅನಂತರ ಸೂರ್ಯೊದಯವಾಗುತ್ತದೆ . ದೇವಳದ ಸುತ್ತಲೂ ಬೆಳಗಿದ ದೀಪಗಳು ನಂದಿಹೋಗಲು(ಆರಿಹೋಗಲು) ಆರಂಭವಾಗುತ್ತವೆ , ಹೀಗೆ ನಂದಿಹೋಗುವ ದೀಪದ 'ಪವಿತ್ರ ಜ್ಯೋತಿಯು' ಸೂರ್ಯಕಿರಣದೊಂದಿಗೆ ಐಕ್ಯವಾಗುತ್ತದೆ . ಆಗ ಬೆಳಗಾಗುತ್ತದೆ .ಅಂದರೆ ದೀಪ - ಜ್ಯೋತಿ ಆರಿಹೋಗದೆ ಸೂರ್ಯ ಪ್ರಭೆಯೊಂದಿಗೆ ನಿರಂತರ ಬೆಳಗುತ್ತಿರುತ್ತವೆ " ಎಂಬ ಧಾರ್ಮಿಕ - ಸಾಂಸ್ಕೃತಿಕ ವಸ್ತು ಸ್ಥಿತಿಯ ವಿವರಣೆ ನೀಡಿದ್ದರು . ಈ ಮೇಲಿನ ವಿವರಣೆಯ ಹೊರತಾಗಿ ದೇವಾಲಯದ ಪುರಾತನ ಶಿಸ್ತು ಅಥವಾ ಒಪ್ಪಿಗೆಯೂ ಬೆಳಗಿನಜಾವದ ಲಕ್ಷದೀಪ ಹಾಗೂ ಆಯನೋತ್ಸವವನ್ನು ದೃಢೀಕರಿಸುತ್ತದೆ . ಎಲ್ಲೂರಿನಲ್ಲಿ ಲಕ್ಷದೀಪದ ಉತ್ಸವ ಇಂದಿಗೂ ಬೆಳಗಿನಜಾವದಲ್ಲೆ ಆರಂಭವಾಗಿ ಸೂರ್ಯೋದಯಕ್ಕೆ ಸಮಾಪನಗೊಳ್ಳುತ್ತದೆ . ಇದು ಇಲ್ಲಿಯ ವಿಶೇಷ .ಕನಿಷ್ಠ ನೂರು ವರ್ಷಗಳಿಂದ ಲಕ್ಷದೀಪೋತ್ಸವ , ಆಯನೋತ್ಸವಗಳಂದು ರಾತ್ರಿ ಯಕ್ಷಗಾನ ತಾಳಮದ್ದಳೆ - ಬಯಲಾಟಗಳು ಬೆಳಗಿನ ಜಾವ ಬಲಿಹೊರಡುವವರೆಗೆ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ .ಈ ಲಕ್ಷದೀಪ , ಆಯನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಥ ಹೇಳಿದ್ದ ಆ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳ ಜೀವನ ವೃತ್ತಾಂತಗಳಲ್ಲಿ (ಮುದ್ರಿತ) ಉಲ್ಲೇಖಗಳು ಸಿಗುತ್ತವೆ. ಸ್ಥಳೀಯ ಉತ್ಸಾಹಿ ಯಕ್ಷಗಾನಾಸಕ್ತರು ಇದ್ದರು,ಅವರು ಅರ್ಥ ಹೇಳುತ್ತಿದ್ದ ,ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆಯೂ ವಿವರಗಳು ಸಿಗುತ್ತವೆ. ಎಲ್ಲೂರು ದೇವಾಲಯವು ಜಿಲ್ಲೆಯ ಯಾವುದೇ ಧಾರ್ಮಿಕ ಕೇಂದ್ರಗಳ, ಮಂದಿರ , ದೇವಸ್ಥಾನ, ಗುಡಿಗಳನ್ನು ಅನುಸರಿಸಬೇಕಾದ ಅಗತ್ಯವಿಲ್ಲ .ಇಲ್ಲಿ ಎಲ್ಲವೂ ಇದೆ.ನೋಡಬೇಕು - ತಿಳಿಯಬೇಕು. ಇದ್ದುದರಲ್ಲೆ ಮಹತ್ತನ್ನು ಸಾಧಿಸಬಹುದು. "ಲಕ್ಷ್ಯ"ವನ್ನು ಬೆಳಗುವ 'ಲಕ್ಷದೀಪೋತ್ಸವ' :ದೀಪವು ಲೌಕಿಕ - ಅಲೌಕಿಕಗಳನ್ನು ಬೆಸೆಯುತ್ತಾ ಭವ್ಯದಲ್ಲಿ ದಿವ್ಯವನ್ನು ಸೃಷ್ಟಿಸುತ್ತದೆ . ಅಂಧಕಾರದಲ್ಲಿ ಅಸಂಖ್ಯ ದೀಪಗಳ ಪ್ರಜ್ವಲನೆ , ಗಗನದ ತಾರೆಗಳು ಭುವಿಗಿಳಿದು ಭವವೆಲ್ಲ ಬೆಳ್ಳಂಬೆಳಗು . ಈ ಪರ್ವ ಭಗವಂತನ ಹಲವು ಆರಾಧನೆಗಳಲ್ಲಿ ಒಂದು ಪರ್ವ ; ದೀಪದ ಪರ್ವ.ಈ ಪರ್ವ ಒದಗಿಬರುವ ಮಾಸವೇ ಕಾರ್ತಿಕ ಮಾಸ .'ಲಕ್ಷ್ಯ'ವನ್ನು ಬೆಳಗುವ 'ದೀಪೋತ್ಸವ'ದ ವ್ಯಕ್ತಿ ಜೀವನದ ಸಿದ್ಧಿ ದೃಷ್ಟಾಂತವನ್ನು ದೃಢ ಪಡಿಸಲು 'ದೀಪ'ವು ಲಕ್ಷಣವಾದಾಗ 'ಲಕ್ಷ್ಯ" ಸಾಧಿಸಲ್ಪಡುತ್ತದೆ. ಆಗ ಸಹಜವಾಗಿ ಅಜ್ಞಾನ , ದಾಷ್ಟ್ಯ ,ದುರಹಂಕಾರ ನಾಶವಾಗಿ ಸುಜ್ಞಾನ ಪ್ರಾಪ್ತಿಯಾಗುತ್ತದೆ .ಬೆಳಗಿದ 'ದೀಪ' ಅರ್ಥಪೂರ್ಣ 'ಜ್ಞಾನ'ವೇ ಆಗುತ್ತದೆ. ಉದ್ದೇಶ ಸಫಲವಾಗುತ್ತದೆ .ಅಂದರೆ "ದೀಪ" ಗೆದ್ದಂತೆ. ಲಕ್ಷ ಅಲ್ಲ ಲಕ್ಷ ಲಕ್ಷ ಸಂಖ್ಯೆಯ ದೀಪ ಬೆಳಗಿದರೂ ದೀಪದ "ಜ್ಞಾನ" ಪ್ರತಿಪಾದ್ಯ ಧರ್ಮವು ವಿಜೃಂಭಿಸಬೇಕೆಂದಿಲ್ಲ .ಅಜ್ಞಾನ , ದಾಷ್ಟ್ಯ ಮತ್ತು ದುರಹಂಕಾರಗಳ ಪ್ರಖರತೆಯ ಮುಂದೆ ಕೆಲವೊಮ್ಮೆ "ದೀಪ - ಜ್ಞಾನ" ತನ್ನ ಸಹಜ 'ಲಕ್ಷ್ಯ'ವನ್ನು ಸಾಧಿಸಲಾಗದೆ ಸೋಲುವುದಿದೆ .ಇದು ದೀಪದ ಸೋಲಲ್ಲ ; ಬದಲಿಗೆ ಸಮುದಾಯದ ಪರಾಭವ. (ಸಂಗ್ರಹ) "ದೀಪ ಬೆಳಗಲಿ ,ದೀಪ ಗೆಲ್ಲಲಿ" ಇದು ದೀಪೋತ್ಸವದ ಆಶಯವಾಗಲಿ. ಲೇಖನ : ಕೆ. ಎಲ್.ಕುಂಡಂತಾಯ.
ಇನ್ನಂಜೆಯಲ್ಲಿ ಮಾತೃಶಕ್ತಿ, ದುರ್ಗಾವಾಹಿನಿ ಘಟಕ ಉದ್ಘಾಟನೆ
Posted On: 18 Nov 2020, 10:38 PM
ಹಿಂದುತ್ವದ ಭದ್ರಕೋಟೆ ಇನ್ನಂಜೆಯಲ್ಲಿ ಕಳೆದ ಒಂದೆರಡು ತಿಂಗಳ ಹಿಂದೆಯಷ್ಟೇ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವಿಷ್ಣು ವಲ್ಲಭ ಘಟಕ ಉದ್ಘಾಟನೆಯಾಗಿದ್ದು ಇದೀಗ ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿ ಘಟಕ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಮಾತೃ ಶಕ್ತಿ ಪ್ರಖಂಡದ ಪೂರ್ಣಿಮಾ ಸುರೇಶ್ ನಾಯಕ್ ಹಿಂದುತ್ವದ ಉಳಿವಿಗಾಗಿ ಎಲ್ಲರು ಸಹೋದರತೆಯ ಭಾವನೆಯಿಂದ ಹೋರಾಟ ಮಾಡಬೇಕು, ಸಾವಿರಾರು ಜನರು ಹಿಂದುತ್ವಕ್ಕಾಗಿ ಬಲಿದಾನಗೈದಿದ್ದು, ನಾವು ಅವರಂತೆ ಹಿಂದುತ್ವದ ಉಳಿವಿಗಾಗಿ ಶ್ರಮಿಸಬೇಕಿದೆ ಎಂದರು.
ನಂತರ ಮಾತೃ ಶಕ್ತಿ ಸಂಚಾಲಕರಾಗಿ ಶ್ರೀಮತಿ ಆಶಾ, ಸಹ ಸಂಚಾಲಕರಾಗಿ ಶ್ರೀಮತಿ ಲಕ್ಷ್ಮಿ. ದುರ್ಗಾವಾಹಿನಿ ಸಂಚಾಲಕರಾಗಿ ಕುಮಾರಿ ವಿದ್ಯಾ, ಸಹ ಸಂಚಾಲಕರಾಗಿ ಕುಮಾರಿ ಪದ್ಮ ಶ್ರೀ ಇವರಿಗೆ ಶಾಲು ಹಾಕಿ, ತಿಲಕ ಹಚ್ಚಿ ನೂತನ ಜವಾಬ್ದಾರಿ ಘೋಷಣೆ ಮಾಡಿದರು.
ಉದ್ಘಾಟಕರಾಗಿ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯ ದೀಪ ಬೆಳಗುವುದರ ಮೂಲಕ ಕಾರ್ಯಕರ್ತರಿಗೆ ಹಿತವಚನಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಕಾಪು ತಾಲೂಕು ಪ್ರಖಂಡದ ಕಾರ್ಯದರ್ಶಿಗಳಾದ ಜಯಪ್ರಕಾಶ್, ವಿಶ್ವ ಹಿಂದೂ ಪರಿಷತ್ ವಿಶ್ವ ವಲ್ಲಭ ಘಟಕದ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು, ಜಿಲ್ಲಾ ಮಾತೃ ಶಕ್ತಿ ಪ್ರಧಾನರಾದ ಪ್ರತೀಕ್ಷಾ ಗುರುರಾಜ್, ಮಾಲಿನಿ ಶೆಟ್ಟಿ ಇನ್ನಂಜೆ, ವಿಷ್ಣು ವಲ್ಲಭ ಘಟಕ ಭಜರಂಗದಳದ ಸಂಚಾಲಕರಾದ ರಾಜೇಶ್ ಕುಲಾಲ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಿತೇಶ್ ಸಾಲ್ಯಾನ್ ಕಲ್ಯಾಲು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ತಂತ್ರಿ ಸ್ವಾಗತಗೈದರು, ಮಾಲಿನಿ ಶೆಟ್ಟಿ ಇನ್ನಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಿರುವೆರ್ ಕುಡ್ಲ ಸಂಘಟನೆಯ ನೂತನ ಪಲಿಮಾರು ಘಟಕದ ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಪಲಿಮಾರು ಆಯ್ಕೆ
Posted On: 18 Nov 2020, 10:33 PM
ಪಡುಬಿದ್ರಿ : ಸಮಾಜ ಸೇವೆಯಲ್ಲಿ ತೊಡಗಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಿರುವೆರ್ ಕುಡ್ಲ ಸಂಘಟನೆಯ ನೂತನ ಪಲಿಮಾರು ಘಟಕದ ಅಧ್ಯಕ್ಷರನ್ನಾಗಿ ಪ್ರಸಾದ್ ಪೂಜಾರಿ ಪಲಿಮಾರು ಇವರನ್ನುಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಭವನ, ಅವರಾಲು ಮಟ್ಟುವಿನಲ್ಲಿ ಬಿರುವೆರ್ ಕುಡ್ಲದ ಕೇಂದ್ರ ಸಮಿತಿಯ ಸಂಘಟನಾ ಅಧ್ಯಕ್ಷರಾದ ಚಂದ್ರಶೇಖರ್ ಎಂ. ಅಮೀನ್ ಇವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಕಿಶೋರ್ ಅವರಾಲು, ದಾಮೋದರ್ ಕೋಟ್ಯಾನ್ ಅಡ್ವೆ. ಪ್ರದಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ ಗರಡಿಮನೆ, ಕಾರ್ಯದರ್ಶಿ ಪ್ರತಾಪ್ ಸುವರ್ಣ, ಅವರಾಲು, ಗೌರವ ಸಲಹೆಗಾರರಾಗಿ ಸುರೇಶ್ ಪೂಜಾರಿ, ನಾರಾಯಣ ಪೂಜಾರಿ. ಸಲಹೆಗಾರರಾಗಿ ರಾಮದಾಸ್ ಅವರಾಲು, ಯೋಗೇಶ್ ಪೂಜಾರಿ ಅವರಾಲು. ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಅವರಾಲು. ಕೋಶಾಧಿಕಾರಿ ತಾರಾನಾಥ ಕೋಟ್ಯಾನ್. ಜೊತೆ ಕೋಶಾಧಿಕಾರಿ ಸಂದೀಪ್ ಸಾಲಿಯಾನ್. ಸಾಮಾಜಿಕ ಜಾಲತಾಣ ಉಸ್ತುವಾರಿ ಪ್ರಶಾಂತ್ ಪೂಜಾರಿ ಅವರಾಲು, ನಿಶಾನ್ ಸಾಲಿಯಾನ್ ಅವರಾಲು, ಸಂದೀಪ್ ಅಡ್ವೆ ಗರಡಿಮನೆ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಲ್ಲವ - ಈಡಿಗ ಅಭಿವೃದ್ಧಿ ಪ್ರಾಧಿಕಾರ ರಚನೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಆಗ್ರಹ
Posted On: 18 Nov 2020, 11:37 AM
ಕಾಪು : ಬಿಲ್ಲವ ಈಡಿಗ ಸಮಾಜದ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿ ಬಿಲ್ಲವ ಈಡಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯರ ಹೆಸರಿಡ ಬೇಕೆಂಬ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಪ್ರಸ್ತಾವನೆಯನ್ನು ಪರಿಗಣಿಸಿ ಮರುನಾಮಕರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಆಗ್ರಹಿಸಿದೆ. ಬಿಲ್ಲವ ಸಮಾಜದ ನಿರ್ಣಯ ಮತ್ತು ಬೇಡಿಕೆಗಳ ಬಗ್ಗೆ ಸರಕಾರಗಳ ನಿರ್ಲಕ್ಷ್ಯ ಬಗ್ಗೆ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದು, ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವ ಮತ್ತು ಈಡಿಗ ಸಮುದಾಯ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದು ಈ ಬಗ್ಗೆ ಉಡುಪಿಯಲ್ಲಿ ಜರಗಿದ್ದ ಬೃಹತ್ ಬಿಲ್ಲವ ಸಮಾವೇಶದಲ್ಲಿ ಬಿಲ್ಲವ ಈಡಿಗ ಸಮಾಜದ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿ ಬಿಲ್ಲವ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬ ನಿರ್ಣಯದ ಜೊತೆ ಸಮಾಜದ ಅಭಿವೃದ್ಧಿಗೆ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ನಮ್ಮ ಸಮಾಜದ ನಿರ್ಣಯ ಮತ್ತು ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಆದುದರಿಂದ ಈ ಕೂಡಲೇ ಬಿಲ್ಲವ ಈಡಿಗ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಸಮಾಜದ ಬಡವರು ಹಿಂದುಳಿದವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ತುಳುನಾಡಿನ ಸಮಸ್ತ ಜನರ ಹಲವಾರು ವರ್ಷಗಳ ಆಗ್ರಹದಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯರ ಹೆಸರನ್ನು ನಾಮಕರಣ ಮಾಡಬೇಕೆಂದು ಬಜ್ಪೆಯ ಮಳವೂರು ಗ್ರಾಮ ಪಂಚಾಯತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜನವರಿ 2019 ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ಸರ್ವಾನುಮತದ ತೀರ್ಮಾನದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯ ಹೆಸರನ್ನು ಮರುನಾಮಕರಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಂಡು ಸರಕಾರಕ್ಕೆ ಮುಂದಿನ ಕ್ರಮಗಳಿಗೆ ಕಳುಹಿಸಿಕೊಡಲಾಗಿತ್ತು. ಜಿಲ್ಲಾ ಪಂಚಾಯತ್ ನಿರ್ಣಯ ಕೈಗೊಂಡು ವಿಧಾನ ಮಂಡಲದ 4 ಅಧಿವೇಶನ ಗಳು ಕಳೆದು ಹೋಯಿತು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಕೋಟಿ ಚೆನ್ನಯ ಹೆಸರಿನ ಮರುನಾಮಕರಣದ ಬಗ್ಗೆ ವಿಧಾನ ಮಂಡಲದಲ್ಲಿ ಈ ಬಗ್ಗೆ ಪ್ರಶ್ನೆ ಯನ್ನು ಕೂಡ ಕೇಳಿದ್ದರು. ಆದರೆ ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಬೇಕಾದ ಪ್ರಸ್ತಾಪ ಈಗ ಕೂಡ ಕಡತದಲ್ಲಿ ಬಾಕಿಯಾಗಿದೆ. ಉಭಯ ಜಿಲ್ಲೆಗಳ ಶಾಸಕರು ಈ ಪ್ರಸ್ತಾಪದ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಡಹೇರಿ ವಿಧಾನ ಮಂಡಲದಲ್ಲಿ ಈ ಬಗ್ಗೆ ಮಾತನಾಡಿ ಮುಂದಿನ ಕ್ರಮಗಳಿಗೆ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ ತುಳುನಾಡಿನ ಸತ್ಯ ಧರ್ಮದ ವೀರ ಪುರುಷರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಮರುನಾಮಕರಣ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ ಹಾಗೂ ಈ ಬಗ್ಗೆ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ತುಳುನಾಡಿನ ಸರ್ವ ಜಾತಿ ಧರ್ಮದ ಬಂಧುಗಳನ್ನು ಸೇರಿಸಿಕೊಂಡು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ತೀವ್ರ ಹೋರಾಟವನ್ನು ಸಂಘಟಿಸಲಾಗುವುದು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ರಾದ ಡಾ. ರಾಜಶೇಖರ್ ಕೋಟ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಂಕರಪುರದಲ್ಲಿ ಎಂಟು ಅಡಿ ಎತ್ತರದ ಗೂಡುದೀಪ - ನಿಸರ್ಗ ಫ್ರೆಂಡ್ಸ್ ಪಾದೆಕೆರೆ
Posted On: 16 Nov 2020, 07:30 PM
ಕಳೆದ ಹತ್ತು ಹದಿನೈದು ವರ್ಷಗಳಿಂದ ಶಂಕರಪುರ ಸಮೀಪದ ಇನ್ನಂಜೆಯ ಪಾದೇಕೆರೆ ಎಂಬ ಸಣ್ಣ ಊರಿನಲ್ಲಿ ಯುವಕರು ಕಟ್ಟಿದ ತಂಡವೊಂದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಪ್ರತಿಭೆಗಳನ್ನು ಗುರುತಿಸಿ ಜನಮನ್ನಣೆಗೆ ಪಾತ್ರರಾಗಿರುತ್ತಾರೆ. ನಿಸರ್ಗ ಫ್ರೆಂಡ್ಸ್ ಪಾದೇಕೆರೆ ಕಳೆದ ಹತ್ತು ವರ್ಷದ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೂಡುದೀಪವನ್ನು ತಯಾರಿಸಿ ಶಂಕರಪುರ ಜಂಕ್ಷನ್ ನಲ್ಲಿ ಹಾಕುತ್ತಿದ್ದರು. ವರ್ಷ ಕಳೆದಂತೆ ಗೂಡುದೀಪದ ಗಾತ್ರದಲ್ಲಿ ಬದಲಾವಣೆ ಮಾಡುತ್ತಿದ್ದರು. ಇದೀಗ ಹತ್ತನೇ ವರ್ಷಕ್ಕೆ 8 ಅಡಿ ಎತ್ತರ 5 ಅಡಿ ಅಗಲದ ಗೂಡುದೀಪ ತಯಾರಿಸಿದ್ದು ಜನರಿಂದ ಬಹಳಷ್ಟು ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ರಾಜ್ಯ ಖಾಸಗಿ ಶಿಕ್ಷಕರ ಸಂಘ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಆಯ್ಕೆ
Posted On: 16 Nov 2020, 07:30 PM
ರಾಜ್ಯ ಖಾಸಗಿ ಶಾಲಾ- ಕಾಲೇಜು ಶಿಕ್ಷಕ ಹಾಗೂ ಉಪನ್ಯಾಸಕರ ಸಂಘದ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಲಕ್ಷ್ಮಿಕಾಂತ್ ಆಯ್ಕೆಯಾಗಿರುತ್ತಾರೆ. ಘಟಕದ ಗೌರವ ಅಧ್ಯಕ್ಷರಾಗಿ ವಿದ್ಯಾಧರ ಪುರಾಣಿಕ್, ಉಪಾಧ್ಯಕ್ಷರಾಗಿ ಶೋಭಾ, ಜೊತೆ ಕಾರ್ಯದರ್ಶಿ ಲತಾ, ಕೋಶಾಧಿಕಾರಿ ವಿನುತಾ, ನಿರ್ದೇಶಕರಾಗಿ ಸುರಥ್ ಕುಮಾರ್, ಭವಾನಿ ನಾಯಕ್, ದೀಪಕ್ ಕೆ. ಬೀರ, ಸಂಗೀತ ಆಯ್ಕೆಯಾಗಿರುತ್ತಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಕೆ. ಉಡುಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
