Updated News From Kaup
ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಪಡುಬಿದ್ರಿ ಶಾಖೆ ವತಿಯಿಂದ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣೆ

Posted On: 29-08-2025 01:57PM
ಪಡುಬಿದ್ರಿ : ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಲಿ. ಇದರ ಪಡುಬಿದ್ರಿ ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಪಡುಬಿದ್ರಿ ಶಾಖೆಯ ಆವರಣದಲ್ಲಿ ಜರಗಿತು.
ತುಳುನಾಡು ಕಲಾವಿದರು ಪಡುಬಿದ್ರಿ ಇದರ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಮುಖ್ಯ ಅತಿಥಿಯಾಗಿ ಆಗಮಿಸಿ, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿಯು ಕಡಿಮೆ ಅವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಉತ್ತಮ ಸೇವೆಯನ್ನು ನೀಡುತ್ತಿದೆ. ಲಾಭಾಂಶದಲ್ಲಿ ಪ್ರತಿವರ್ಷ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಪಡುಬಿದ್ರಿ ವಲಯ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್ ಸೊಸೈಟಿಯ ಕಾರ್ಯಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್೯ ಮಾತನಾಡಿ, ಹಳೆಯಂಗಡಿಯಲ್ಲಿ ಸೊಸೈಟಿಯ ಪ್ರಧಾನ ಕಚೇರಿಯಿದೆ. ಪಡುಬಿದ್ರಿ ಶಾಖೆಯು ಮೂರನೇ ವರ್ಷದಲ್ಲಿ 4.5 ಕೋಟಿ ಠೇವಣಿ ಹೊಂದಿದ್ದು, 4.25 ಕೋಟಿ ಸಾಲ ನೀಡಲಾಗಿದೆ. ಶೇ.98.5 ಸಾಲ ವಸೂಲಾತಿ ಮಾಡಲಾಗಿದೆ. ಗ್ರಾಹಕರಿಗೆ ಶೇ.8 ಡಿವಿಡೆಂಡ್ ನೀಡಲಾಗುತ್ತಿದೆ. ಲಾಭಾಂಶದಲ್ಲಿ ಕಳೆದ ಬಾರಿ ವಿಕಲಚೇತನರಿಗೆ ವ್ಹೀಲ್ ಚೇರ್, ಈ ಬಾರಿ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. 2023-24 ರಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸ್ತಿ ಪಡೆದಿದ್ದು, ಈ ಬಾರಿಯು ಸೊಸೈಟಿಯ ಸಾಧನೆಗೆ ದೊರೆಯಲಿದೆ ಎಂದರು.
ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಡುಬಿದ್ರಿ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.
ತಿರುವನಂತಪುರದಲ್ಲಿ ಕನ್ನಡ ಕೃತಿ `ಗುರುದರ್ಶನ' ಬಿಡುಗಡೆ

Posted On: 27-08-2025 12:02PM
ಕಾಪು : ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ನಾರಾಯಣ ಗುರುಗಳ ಕುರಿತು ಬರೆದ ಗುರುದರ್ಶನ ಕನ್ನಡ ಕೃತಿಯನ್ನು ಕೇರಳದ ತಿರುವನಂತಪುರದಲ್ಲಿ ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2025ರ ಸಮಾರೋಪ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ನೀಡಿದ ಲೇಖಕರ ಶ್ರಮ ಶ್ಲಾಘನೀಯ ಎಂದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ,ಶ್ರೀಧರ ಶೆಟ್ಟಿ ಮುಟ್ಟಮ್ ತಿರುವನಂತಪುರ ಕನ್ನಡ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜಸೇವಕ ಮಂಜುನಾಥ ಆಳ್ವ ಮಡ್ವ, ನಿವೃತ್ತ ಅಂಡರ್ ಸೆಕ್ರಟೆರಿ ಕೇರಳ ಲೋಕಸೇವಾ ಆಯೋಗದ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯ ಕಟ್ಟೆ, ತಿರುವನಂತಪುರ ತೆಲುಗು ಸಾಂಸ್ಕೃತಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ ಜಿ ಕೆ ಕಿಶೋರ್, ಸಂಘಟಕ ಸರಿನ್ ಮೊಹಮ್ಮದ್,ಡಾ ಮಲ್ಲಿಕಾರ್ಜುನ ನಾಸಿ ಏರ್ನಾಕುಲಂ, ಪ್ರೊಫೆಸರ್ ವೀರಣ್ಣ ತುಪ್ಪದ ಬೀದರ್ ಪ್ರೋ.ಶ್ರೀನಾಥ್, ವಕೀಲ ಎಂ.ಎಸ್. ಥೋಮಸ್ ಡಿ.ಸೋಜ, ಝಡ್ ಎ. ಕಯ್ಯಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪಾಲ್ಗೊಂಡಿದ್ದರು.
ಲೇಖಕ ಪತ್ರಕರ್ತ ರವಿ ನಾಯ್ಕಾಪು ನಿರೂಪಣೆಗೈದರು. ಕಾಸರಗೋಡು ಗ.ಸಾ.ಸಾ. ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ವಂದಿಸಿದರು.
ಬನ್ನಂಜೆ : ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಬಿಡುಗಡೆ

Posted On: 27-08-2025 11:58AM
ಉಡುಪಿ : ನಾರಾಯಣಗುರುಗಳ 171ನೇ ಜನ್ಮದಿನಾಚರಣೆಯನ್ನು ಸೆ.21ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯುವಜನತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾ ದರ್ಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ‘ಗುರು ಸಂದೇಶ ಸಾಮರಸ್ಯ ಜಾಥಾ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ನಡೆಯಿತು.
ರಘು ಪೂಜಾರಿ ಕಲಂಜೆ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರವೀಣ್ ಎಂ. ಪೂಜಾರಿ ಅವರು, ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾದ ಬಗ್ಗೆ ಪ್ರಸ್ತಾವನೆಗೈದರು.
ಯುವ ವೇದಿಕೆ ಗೌರವಾಧ್ಯಕ್ಷ ದಿವಾಕರ ಸನಿಲ್, ಬನ್ನಂಜೆ ಬಿಲ್ಲವರ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಯುವವಾಹಿನಿ ಉಡುಪಿ ಘಟಕ ಅಧ್ಯಕ್ಷ ದಯಾನಂದ್ ಕರ್ಕೇರ, ಮಣಿಪಾಲ ಸೀತಾ ಲಾಜಿಸ್ಟಿಕ್ ಮಾಲಕ ಪ್ರವೀಣ್ ಪೂಜಾರಿ ಹಿರೇಬೆಟ್ಟು, ಮಾರ್ಪಳ್ಳಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಸಂಜೀವ ಕೆ. ಪೂಜಾರಿ, ಬೊಳ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ದಿನೇಶ್ ಎಂ. ಸಾಲ್ಯಾನ್, ಶ್ರೀ ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಮಿಥುನ್ ಪೂಜಾರಿ, ಸಂತೆಕಟ್ಟೆ-ಕಲ್ಯಾಣಪುರ ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಗುಜ್ಜರಬೆಟ್ಟು, ಮಣಿಪುರ ಬಿಲ್ಲವ ಸಂಘದ ಅಧ್ಯಕ್ಷ ನಟರಾಜ ಪೂಜಾರಿ, ಉದ್ಯಾವರ ಬಿಲ್ಲವ ಸಂಘದ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಇಂದಿರಾನಗರ-ಕುಕ್ಕಿಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ, ಮೂಡನಿಡಂಬೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಜೀರ್ಣೋದ್ಧಾರ ಸಮಿತಿ ಜತೆಕಾರ್ಯದರ್ಶಿ ಸಂದೀಪ್ ಸನಿಲ್, ನಿರ್ದೇಶಕ, ಚಿತ್ರನಟ ಸೂರ್ಯೋದಯ ಪೆರಂಪಳ್ಳಿ, ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಅಧ್ಯಕ್ಷ ಹರೀಶ್ ಕುಮಾರ್, ನಿಡಂಬಳ್ಳಿ, ಪಕ್ಕಿಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಪಡುಮನೆ, ಕಿದಿಯೂರು ಬಿಲ್ಲವ ಸಂಘದ ಅಧ್ಯಕ್ಷ ಸುಧಾಕರ್ ಕಲ್ಯಾಡಿ, ದೆಂದೂರು ಕಲಂಜೆ ಬಿಲ್ಲವ ಸಂಘದ ಅಧ್ಯಕ್ಷ ಸುಧಾಕರ್ ಪೂಜಾರಿ ದೆಂದೂರು, ಬಿಎಸ್ಎನ್ಡಿಪಿ ಜಿಲ್ಲಾಧ್ಯಕ್ಷ ಶ್ರೀಧರ್ ಅಮೀನ್, ಯೂತ್ ಬಿಲ್ಲವ ಮೂಡುಬೆಳ್ಳೆ ಅಧ್ಯಕ್ಷ ತಿಲಕ್ ರಾಜ್ ಪೂಜಾರಿ, ಕೆಸ್ತೂರು ಬಿಲ್ಲವ ಸಂಘದ ಅಧ್ಯಕ್ಷ ದೀಪಕ್ ಸನಿಲ್, ಇನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ್ ಅಮೀನ್, ಯುವವಾಹಿನಿ ಕಟಪಾಡಿ ಘಟಕ ಅಧ್ಯಕ್ಷ ಪ್ರತಿಮಾ ವಿ. ಪೂಜಾರಿ, ಬಿಲ್ಲವ ಯುವ ವೇದಿಕೆ ಗೌರವ ಸಲಹೆಗಾರರು, ಗುರು ಸಂದೇಶ ಜಾಥಾ ಸಂಚಾಲಕರು, ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಬಿಲ್ಲವ ಯುವ ವೇದಿಕೆ ಉಪಾಧ್ಯಕ್ಷ ಮಹೇಶ್ ಕುಮಾರ್ ಮಲ್ಪೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಜೇಯ ಪೂಜಾರಿ ಮೇಲ್ಮನೆ ವಂದಿಸಿದರು. ತೇಜಸ್ ಬಂಗೇರ ನಿರೂಪಿಸಿದರು.
ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಆಯ್ಕೆ

Posted On: 25-08-2025 07:05PM
ಕಾರ್ಕಳ : ಕಾಂತಾವರ ಗ್ರಾಮದ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಬೇಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಪ್ರದೀಪ್ ಬೇಲಾಡಿ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದೊಂದಿಗೆ ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕೋಟ್ಯಾನ್ ಕೇಪ್ಲಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪೂಜಾರಿ ಗುಡ್ಡೆಯಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಧೀರಜ್ ಶೆಟ್ಟಿ ಪಡ್ಡಲ್ಲಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಪ್ರತಿನಿಧಿಯಾಗಿ ಪ್ರಶಸ್ತ್ ಶೆಟ್ಟಿ ಮುದಲೆಮನೆ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್.ಎಸ್.ಆರ್ ಅವರು ಸಂಘದ ಕೋಶಾಧಿಕಾರಿಯಾಗಿರುತ್ತಾರೆ. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ನಂತರ ನವರಾತ್ರಿ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯಲಿರುವ ಶಾರದಾ ಪೂಜಾ ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆಗಳು ಹಾಗೂ ಶಾಲಾ ಅಭಿವೃದ್ಧಿಯ ಕುರಿತಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್.ಎಸ್.ಆರ್, ಹಳೆ ವಿದ್ಯಾರ್ಥಿ ಸಂಘದ ನಿರ್ಗಮಿತ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ರಂಜಿತ್ ಶೆಟ್ಟಿ ಪುಂಚಾಡಿ ಮತ್ತು ಪ್ರಭಾಕರ ಕುಲಾಲ್, ಶಾರದಾ ಪೂಜಾ ಮಹೋತ್ಸವದ ಅರ್ಚಕರಾದ ಸುಧೀರ್ ಭಟ್ ನ್ಯಾಯತೋಟ, ಹಿರಿಯ ಹಳೆ ವಿದ್ಯಾರ್ಥಿಗಳಾದ ಸುರೇಶ್ ಭಟ್ ನ್ಯಾಯತೋಟ, ವಿದ್ಯಾ.ವಿ. ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇವರು ಬಟ್ರು ನೀರೆ ಶ್ರೀಪತಿ ಭಟ್ ನಿಧನ

Posted On: 25-08-2025 07:02PM
ಕಾಪು : ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಹಲವಾರು ವರ್ಷಗಳಿಂದ ಪಾರಂಪರಿಕವಾಗಿ ಉದ್ಭವ ಮಹಾಗಣಪತಿಯ ಉತ್ಸವ ಮೂರ್ತಿಯನ್ನು ಹೊತ್ತು ಬಲಿ ಉತ್ಸವ ನೆರವೇರಿಸಿ ಕೊಡುತ್ತಿದ್ದ ದೇವರು ಬಟ್ರು ಎಂದೇ ಪ್ರಸಿದ್ಧರಾದ ನೀರೆ ಶ್ರೀಪತಿ ಭಟ್ ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಅಸುನೀಗಿದರು.
ಕಣಂಜಾರು ಮಡಿಬೆಟ್ಟು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಹಲವಾರು ದೇವಸ್ಥಾನಗಳಲ್ಲಿ ದೇವರ ಬಲಿಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಕಾಪು ದಂಡತೀರ್ಥ ವಿದ್ಯಾಸಂಸ್ಥೆ : ಶಿಕ್ಷಕ - ರಕ್ಷಕ ಸಂಘದ ಮಹಾಸಭೆ

Posted On: 24-08-2025 11:27AM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು, ಶಿಕ್ಷಕ -ರಕ್ಷಕ ಸಂಘವು ಯಾವುದೇ ವಿದ್ಯಾಸಂಸ್ಥೆಗೆ ಬೆನ್ನೆಲುಬಾಗಿದ್ದು, ಮಕ್ಕಳ ಪ್ರಗತಿಯಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಆಡಳಿತ ಮಂಡಳಿಯ ಜೊತೆಗೆ ಅತ್ಯುತ್ತಮ ಸಲಹೆ ಸೂಚನೆಗಳು ಹೆತ್ತವರಿಂದ ದೊರಕಿದಾಗ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳು ದೊರಕುತ್ತದೆ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮೂಡಿಬರಲು ಕಾರಣರಾದ ಹೆತ್ತವರ ಸಹಕಾರಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಂಜುಳಾ ಆರ್. ಶೆಟ್ಟಿಯವರು ಮಾತನಾಡಿ, ಪ್ರೌಢ ಮತ್ತು ಪದವಿಪೂರ್ವ ವಿಭಾಗದ 2025 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಗೌರವಿಸಿ, ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುವ ಯೋಗ ನನ್ನದಾಯಿತು ಹಾಗೂ ತಮ್ಮೆಲ್ಲರ ಸಹಕಾರದಿಂದ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದರು.
ಹೆತ್ತವರನ್ನು ಉದ್ದೇಶಿಸಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಮಾತನಾಡಿದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಗತ ಸಭೆಯ ವರದಿ ಮತ್ತು ಫಲಿತಾಂಶ ವಿಶ್ಲೇಷಣೆಯನ್ನು ಮಾಡಿದರು. ಕೋಶಾಧಿಕಾರಿ ಶಿವಣ್ಣ ಬಾಯರ್ ಲೆಕ್ಕ ಪತ್ರವನ್ನು ಮಂಡಿಸಿದರು. ವಿದ್ಯಾರ್ಥಿಗಳಾದ ರಿತಿಕಾ ಆರ್. ಶೆಟ್ಟಿ, ಮೊಹಮ್ಮದ್ ಅಫ್ನಾನ್, ದಿವ್ಯಲಕ್ಷ್ಮೀ, ಶ್ರೀಪ್ರದಾ ಎಸ್. ಬಾಯರ್, ಸಾನಿಧ್ಯ ವಿ. ಶೆಟ್ಟಿ ಇವರನ್ನು ಉಪನ್ಯಾಸಕಿ ಸುಮನ ಇವರು ಪರಿಚಯಿಸಿದರು.
ಪ್ರಾಥಮಿಕ ವಿಭಾಗದ ಶಕುಂತಳಾ ಬಿ. ಮತ್ತು ಪ್ರೌಢ ಹಾಗೂ ಕಾಲೇಜು ವಿಭಾಗದ ಹಸನಬ್ಬ ಇವರು ರಕ್ಷಕ - ಶಿಕ್ಷಕ ಸಂಘದ ನೂತನ ಅಧ್ಯಕ್ಷರುಗಳಾಗಿ ಆಯ್ಕೆಗೊಂಡರು. ರಸಾಯನಶಾಸ್ತ್ರ ಉಪನ್ಯಾಸಕ ಸುರಥ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಕವಿತಾ ವಂದಿಸಿದರು.
ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ : ಶಿರ್ವ ಶಾಖೆಯಿಂದ ಅಗತ್ಯ ವಸ್ತುಗಳ ದೇಣಿಗೆ

Posted On: 24-08-2025 10:59AM
ಕಾಪು : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ವಸ್ತುಗಳ ದೇಣಿಗೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರುಗಳು ಹಾಗೂ ಉಡುಪಿ ಧರ್ಮಕ್ಷೇತ್ರದ ನ್ಯಾಯಾಧಿಕರಣದ ಮುಖ್ಯಸ್ಥರಾದಂತಹ ವ. ಫಾ. ಡಾ|ರೋಶನ್ ಡಿಸೋಜಾ, ಶಿರ್ವ ಪೋಲೀಸ್ ಉಪಠಾಣಾ ಅಧಿಕಾರಿಗಳಾದ ಶ್ರೀಧರ್ ಕೆ.ಜೆ, ಶಿರ್ವಾ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಪಾಂಬೂರು ಚರ್ಚ್ ಪಾಲನಾ ಆಯೋಗಗಳ ಸಂಯೋಜಕಿ ವೈಲೆಟ್ ಕ್ಯಾಸ್ತಲಿನೋ, ಬಂಟಕಲ್ಲಿನ ಉದ್ಯಮಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸುಧನ್ವ ಎಂಟರ್ ಪ್ರೈಸಸ್ ಮಾಲಕಿ ವಿದ್ಯಾ ಎಸ್ ಭಟ್, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಸ್ಥಾಪಕ ಟ್ರಸ್ಟಿ ಉಡುಪಿ ಡಯಾಸಿಸ್ ಹೆಲ್ತ್ ಕಮಿಷನ್ ನಿರ್ದೇಶಕ, ಹಿರಿಯ ವೈದ್ಯರೂ ಆದ ಡಾ. ಎಡ್ವರ್ಡ್ ಲೋಬೋ, ಮಾನಸ ವಿಶೇಷ ಶಾಲೆಯ ಪ್ರಾಂಶುಪಾಲರಾದ ವ. ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್, ಸೈಂಟ್ ಮಿಲಾಗ್ರಿಸ್ ಸಹಕಾರಿಯ ಆಡಳಿತ ಮಂಡಳಿಯ ಪರವಾಗಿ ಉಡುಪಿ ಮಂಗಳೂರು ವಿಭಾಗದ ಅಭಿವೃಧ್ಧಿ ವ್ಯವಸ್ಥಾಪಕರದ ಮನೀಷ್ ಮತ್ತು ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಶಿರ್ವ ಶಾಖಾ ವ್ಯವಸ್ಢಾಪಕ ವಿಲ್ಸನ್ ಪ್ರಿತೇಶ್ ಡಿಸೋಜಾ ರವರು ಉಪಸ್ಥಿತರಿದ್ದರು.
ಶಿರ್ವ ಶಾಖಾ ಸಿಬ್ಬಂದಿಗಳು ಹಾಗೂ ಮಾನಸ ಶಾಲೆಯ ಶಿಕ್ಷಕ, ಶಿಕ್ಷಕೇತರ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲೆ ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್ ವಂದಿಸಿದರು.
ಉಡುಪಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ನೂತನ ಅಧ್ಯಕ್ಷೆಯಾಗಿ ಸರಳಾ ಆರ್ ಕಾಂಚನ್ ಆಯ್ಕೆ

Posted On: 24-08-2025 10:45AM
ಉಡುಪಿ : ಉಡುಪಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಉಡುಪಿ ತಾಲೂಕು ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು. ತಾಲೂಕು ಶಿಶು ಅಭಿವೃದ್ಧಿ ವಿಜಯ ನಾರಾಯಣ್ ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ನಡೆಸಿಕೊಟ್ಟರು.
ನೂತನ ಅಧ್ಯಕ್ಷೆಯಾಗಿ ಸರಳಾ ಅರ್. ಕಾಂಚನ್ ಆಯ್ಕೆಗೊಂಡರು.
ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಉಡುಪಿ, ಕಾರ್ಯದರ್ಶಿ ಜಯಂತಿ ಎಸ್ ಪೂಜಾರಿ ಬೆಣ್ಣೆಕುದ್ರು, ಕೋಶಾಧಿಕಾರಿ ವೀಣಾ ನಾಯಕ್ ಹೆರಾಂಜೆ, ಸಮಿತಿ ಸದಸ್ಯರಾಗಿ ಪುಷ್ಪಾ ಕುಂದರ್ ಪಲಿಮಾರ್, ಲತಾ ಎಸ್ ಅಚಾರ್ಯ ಕುತ್ಯಾರ್, ಸುಮಿತ್ರಾ ಬ್ರಹ್ಮಾವರ, ಪ್ರೇಮ ಬ್ರಹ್ಮಾವರ, ಆಶಾ ಶೆಟ್ಟಿ ಉಡುಪಿ, ಅನುಸೂಯೆ ಉಡುಪಿ ಆಯ್ಕೆಗೊಂಡಿರುತ್ತಾರೆ.
ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಅದಿಮನೆ, ಹಾಗೂ ಮೇಲ್ವಿಚಾರಕರರು ಉಪಸ್ಥಿತರಿದ್ದರು.
ಕಾಪು ಮಾರಿಯಮ್ಮ ಕ್ಷೇತ್ರ ಭೇಟಿಯಾಗಿ ಘಂಟಾನಾದ ಸೇವೆ ಸಲ್ಲಿಸಿದ ನಟಿ ರಕ್ಷಿತಾ

Posted On: 20-08-2025 07:02PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ ಅವರು ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯಾ ಅವರು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ಗೌರವಿಸಿ, ಅನುಗ್ರಹ ಪ್ರಸಾದ ನೀಡಿದರು.
ರಕ್ಷಿತಾ ಪ್ರೇಮ್ ಅನ್ನದಾನ ಸೇವೆಯ ಜೊತೆಗೆ ಇಷ್ಟಾರ್ಥ ಸಿದ್ಧಿಗಾಗಿ ಘಂಟಾನಾದ ಸೇವೆಯನ್ನು ಸಲ್ಲಿಸಿದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ವಾರವಷ್ಟೇ ನನ್ನ ತಾಯಿ ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡಿದ್ದರು. ನಾನು ಕೂಡಾ ಬರಬೇಕೆಂದು ಅಂದುಕೊಂಡಿದ್ದೆ. ಆದರೆ ಅಮ್ಮ ನನ್ನನ್ನು ಇಷ್ಟು ಬೇಗ ಕರೆಸಿಕೊಳ್ಳುತ್ತಾಳೆ ಅಂದುಕೊಂಡಿರಲಿಲ್ಲ. ದೇವಸ್ಥಾನ ಬಹಳ ಸುಂದರವಾಗಿ ಮೂಡಿಬಂದಿದೆ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನಗಳಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ತುಳಸಿ ಕಟ್ಟೆ ಸಮರ್ಪಣೆಗೆ ಸಂಕಲ್ಪ, ಸಮ್ಮತಿ ಪತ್ರ ಹಸ್ತಾಂತರ

Posted On: 19-08-2025 09:55PM
ಪಡುಬಿದ್ರಿ : ಇತಿಹಾಸ ಪ್ರಸಿದ್ಧ ಪಡುಬಿದ್ರಿ ಮಾಗಣೆಯ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಪರ್ವಕಾಲದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ದೈವಸ್ಥಾನಗಳು- ಏಳು ಮಾಗಣೆ (ಮುಂಡಾಲ ಸಮುದಾಯ) ಪಡುಬಿದ್ರಿ ವತಿಯಿಂದ ನೂತನ ತುಳಸಿ ಕಟ್ಟೆ(ವೃಂದಾವನ ಕಟ್ಟೆ)ಯ ಸಂಪೂರ್ಣ ವೆಚ್ಚವನ್ನು ನೀಡಲು ಸಂಕಲ್ಪಿಸಲಾಗಿದೆ.
ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ನಿಯೋಗವು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ಭೇಟಿ ಮಾಡಿ, ಸಂಕಲ್ಪಿತ ಧರ್ಮಕಾರ್ಯವನ್ನು ಪ್ರಸ್ತಾಪಿಸಿ ಸಮ್ಮತಿ ಪತ್ರವನ್ನು ನೀಡಿ, ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ದೇವತಾ ಪ್ರಾರ್ಥನಾ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಶ್ರೀನಾಥ್ ಹೆಗ್ಡೆ, ಪ್ರಕಾಶ್ ದೇವಾಡಿಗ, ಅನಿಲ್ ಶೆಟ್ಟಿ, ಏಳು ಮಾಗಣೆಯ ಶ್ರೀಕೋಡ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷರಾದ ಶೇಖರ್ ಅಂಗಡಿಬೆಟ್ಟು, ಅಧ್ಯಕ್ಷರಾದ ಸದಾನಂದ ಬೊಗ್ಗರಿಲಚ್ಚಿಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ,ಕೋಶಾಧಿಕಾರಿ ರಮೇಶ್, ಪ್ರಮುಖರಾದ ಬಾಬು ಕೋಟ್ಯಾನ್ ಕೊಂಕನಡ್ಪು, ಕಿಟ್ಟು ಕುಮಾರ್, ಸುರೇಶ್ ಪಡುಬಿದ್ರಿ, ಪ್ರಸನ್ನ ಕುಮಾರ್, ಬಾಲಕೃಷ್ಣ ಉಪಸ್ಥಿತರಿದ್ದರು.