Updated News From Kaup

ಕಾಪು : ಸಂಸದ ಡಾ. ಶ್ರೀಕಾಂತ್ ಶಿಂಧೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ

Thumbnail
Posted On: 02 Jul 2026, 05:50 PM

ಕಾಪು : ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯಾದ ಏಕನಾಥ್ ಶಿಂಧೆ ಅವರ ಪುತ್ರ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಶಿಂಧೆ ಇವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆದರು. 

 

ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

 

ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂಧಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

    

ಜು.3 (ನಾಳೆ) : ಇನ್ನಂಜೆಯಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Thumbnail
Posted On: 02 Jul 2026, 05:45 PM

ಕಾಪು : ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತ ದಿವಂಗತ ಬಿ. ಜಯಂತ್ ಪಡುಬಿದ್ರಿ ಅವರ ಸಂಸ್ಮರಣೆ ಹಾಗೂ ದತ್ತಿನಿಧಿ ವಿತರಣೆ ಕಾರ್ಯಕ್ರಮವು ಜುಲೈ 3ರಂದು ಮಧ್ಯಾಹ್ನ 2.30ಕ್ಕೆ ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಐತಾಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಹಿರಿಯ ಜಾನಪದ ಚಿಂತಕ ಡಾ. ವೈ. ಎನ್. ಶೆಟ್ಟಿ ಅವರು ದತ್ತಿನಿಧಿ ವಿತರಿಸಿ, ದತ್ತಿ ಉಪನ್ಯಾಸ ನೀಡಲಿದ್ದಾರೆ. ವಿಜಯಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿಸೋಜ ಕುಂದಾಪುರ ಅವರು "ಪತ್ರಿಕೋದ್ಯಮ ಮತ್ತು ವಿದ್ಯಾರ್ಥಿಗಳ ಪಾತ್ರ" ಕುರಿತು ಉಪನ್ಯಾಸ ನೀಡಲಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಆಸ್ಟ್ರೋ ಮೋಹನ್ ಹಾಗೂ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    

ಅಸಹಾಯಕ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಕುತ್ಯಾರು ಕುಲಾಲ ಸಂಘ

Thumbnail
Posted On: 28 Jun 2026, 10:45 PM

ಕಾಪು : ತಾಲೂಕಿನ ಕುತ್ಯಾರುವಿನ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಮುಂದಾಳತ್ವದಲ್ಲಿ, ಸರ್ವರ ಸಹಕಾರದಲ್ಲಿ ನಿರ್ಮಿಸಿದ ಕುತ್ಯಾರು ಪಡುಗುಡ್ಡೆಯ ಪ್ರೇಮ ಶರತ್ ಕುಲಾಲ್ ದಂಪತಿಗಳಿಗೆ ಮನೆ  ಹಸ್ತಾಂತರ ಕಾರ್ಯಕ್ರಮ ಹಾಗೂ ಮನೆಯ ಧಾರ್ಮಿಕ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಆರಮನೆಯ ಜಿನೇಶ್ ಬಲ್ಲಾಳ್, ಕುತ್ಯಾರು ಸಾಯಿನಾಥ ಶೆಟ್ಟಿ, ಶಿರ್ವ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಕುತ್ಯಾರು ಪ್ರಸಾದ್ ಶೆಟ್ಟಿ, ಸಂಘದ ಅಧ್ಯಕ್ಷರು ಶೈಲೇಶ್ ಕುಲಾಲ್, ನಿಕಟಪೂರ್ವ ಅಧ್ಯಕ್ಷರು ಸತೀಶ್ ಕುತ್ಯಾರು, ಸಂಘದ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಹಿರಿ ಕಿರಿಯರು, ಊರ ಮಹನೀಯರು ಉಪಸ್ಥಿತರಿದ್ದರು.

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಉಸಿರಿಗಾಗಿ ಹಸಿರು ಅಭಿಯಾನಕ್ಕೆ ಚಾಲನೆ

Thumbnail
Posted On: 26 Jun 2026, 07:09 AM


ಕಾಪು : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ವತಿಯಿಂದ ಉಸಿರಿಗಾಗಿ ಹಸಿರು ಅಭಿಯಾನ ಕಾರ್ಯಕ್ರಮ  ನಡೆಯಿತು.
 
 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಶ್ರೀ ಕ್ಷೇತ್ರ ಶಂಕರ ಪುರ ಏಕ ಜಾತಿ ಧರ್ಮ ಪೀಠದ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ ಗುರೂಜಿ, ಇಂದು ಪ್ರಕೃತಿ ಹಲವಾರು ವೈರುಧ್ಯಗಳಿಂದ ಕೂಡಿದೆ ಮಳೆಗಾಲದಲ್ಲಿ ಸರಿಯಾಗಿ ಮಳೆ ಬರುತ್ತಿಲ್ಲ ಇದಕ್ಕೆಲ್ಲ ಕಾರಣ ಪ್ರಕೃತಿಯ ನಾಶ ಈ ನಿಟ್ಟಿನಲ್ಲಿ ಉಸಿರಿಗಾಗಿ ಹಸಿರು ಅಭಿಯಾನ ಕ್ಷೇತ್ರದ ವತಿಯಿಂದ ಪ್ರಾರಂಭಿಸಲಾಗಿದೆ.

 ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರು ನೆಟ್ಟು ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದರು. ಮುಂದಿನ ದಿನಗಳಲ್ಲಿ ಈ ಅಭಿಯಾನ ರಾಜ್ಯವಾಪಿ ನಡೆಯಲಿದೆ ಎಂದರು.

 ಮುಖ್ಯ ಅತಿಥಿ ಸಮಾಜಕಾರ್ಯ ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ಜಿ ನಾಯಕ್, ಗಿಡಗಳನ್ನು ವಿತರಿಸಿ ಮಾತನಾಡಿ, ಪ್ರಕೃತಿಯನ್ನು ಉಳಿಸಿದರೆ ಮಾತ್ರ ಜೀವಸಂಕುಲ ಉಳಿಯಬಹುದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡ ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು ಶ್ರೀ ಕ್ಷೇತ್ರದ ವತಿಯಿಂದ  ನಡೆಯುವ ಈ ಯೋಜನೆ ಅಪೂರ್ವವಾಗಿದೆ ಎಂದರು.

 ವೇದಿಕೆಯಲ್ಲಿ ಮಂದಿರದ ಟ್ರಸ್ಟಿ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ರಾಮಪ್ಪ ಪೂಜಾರಿ ಸಂತೆಕಟ್ಟೆ  ಮುಂತಾದವರು ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಭಕ್ತರಿಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಸಂಯೋಜಕ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು.

ಜೂ. 28 : ಕುತ್ಯಾರು ಕುಲಾಲ ಸಂಘದಿಂದ ಮನೆ ಹಸ್ತಾಂತರ

Thumbnail
Posted On: 24 Jun 2026, 09:37 PM

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್  ನಿವಾಸಿ ಪ್ರೇಮ ಶರತ್ ಕುಲಾಲ್ ದಂಪತಿಗಳ ಮನೆ ಬೀಳುವ ಪರಿಸ್ಥಿತಿಯಲ್ಲಿದ್ದು, ಅದನ್ನು ಗಮನಿಸಿದ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಆ ಕುಟುಂಬಕ್ಕೆ ಸರ್ವರ ಸಹಕಾರದಲ್ಲಿ ಸುಸಜ್ಜಿತ ಮನೆ ನಿರ್ಮಿಸಿದ್ದು ಅ ಪ್ರಯುಕ್ತ ಗ್ರಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮ ಜೂನ್ 28 ರಂದು  ನಡೆಯಲಿದೆ.

ಈ ಪುಣ್ಯ ಕೆಲಸಕ್ಕೆ ನೆರವಿನ ದೀವಿಗೆ ಹರಿಸಿದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಧನ್ಯವಾದ ತಿಳಿಸುತ್ತ, ಗ್ರಹ ಪ್ರವೇಶ ದಿನ ತಪ್ಪದೆ ನಮ್ಮೊಡನೆ ಜೊತೆಯಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. - ನಿರ್ದೇಶಕರಾಗಿ ಸ್ಟೀವನ್ ಕುಲಾಸೊ ಆಯ್ಕೆ

Thumbnail
Posted On: 22 Jun 2026, 09:01 PM

ಉಡುಪಿ : ಕಳೆದ ಮೂರು ವರ್ಷಗಳಿಂದ ಉಡುಪಿಯ ಎಂಜಿಎಂ ಕಾಲೇಜು ಬಳಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಗೆ ನೂತನ ನಿರ್ದೇಶಕರನ್ನಾಗಿ  ಸ್ಟೀವನ್ ಕುಲಾಸೊ ಉದ್ಯಾವರ ಇವರನ್ನು ನೇಮಕ ಮಾಡಲಾಗಿದೆ. 

ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷ ಸಹಿತ 11 ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ.

 ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಸ್ಟೀವನ್ ಕುಲಾಸೊ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಯನಿರೂಪಕರಾಗಿರುವ ಇವರು, ಕಲಾ ಸಂಸ್ಥೆಯಾದ ನಿರಂತರ್ ಉದ್ಯಾವರ ಇದರ ಸ್ಥಾಪಕರಾಗಿದ್ದಾರೆ.

 


    

ಪೆರ್ಡೂರು ಕುಲಾಲ ಸಂಘ, ದಾನಿಗಳ ಹಾಗೂ ಶ್ರಮದಾನದಿಂದ ನಿರ್ಮಿಸಲಾದ ಮನೆ ಹಸ್ತಾಂತರ

Thumbnail
Posted On: 22 Jun 2026, 08:59 PM

ಪೆರ್ಡೂರು : ಪೆರ್ಡೂರು ಕುಲಾಲ ಸಂಘ, ದಾನಿಗಳ  ನೆರವಿನಿಂದ  ಹಾಗೂ ಶ್ರಮದಾನದಿಂದ ನಿರ್ಮಿಸಲಾದ  ಮನೆ ಶಿವಲೀಲಾ ನಿಲಯ ಹಸ್ತಾಂತರ ಕಾರ್ಯಕ್ರಮ ಹಾಗೂ ಸೇವಾ ಯೋಜನೆಗೆ ಕೈ ಜೋಡಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಪೆರ್ಡೂರು ಕುಕ್ಕೆಹಳ್ಳಿ ಬೊಂಟೆಕುಮೇರಿ ಯಲ್ಲಿ ನಡೆಯಿತು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಕಾಳು ಕುಲಾಲ್ ವಹಿಸಿದ್ದರು.  

ಮುಖ್ಯ ಅತಿಥಿಗಳಾಗಿ ಸುಧಾಕರ್ ಕುಲಾಲ್ ಕುಕ್ಕೆಹಳ್ಳಿ, ಸಂತೋಷ್ ಕುಲಾಲ್ ಕುಕ್ಕೆಹಳ್ಳಿ, ರಾಮ ಕುಲಾಲ್, ಐತು ಕುಲಾಲ್, ಕೃಷ್ಣಪ್ಪ ಕುಲಾಲ್, ರತ್ನಾ ಮೇನಬೈಲು ಉಪಸ್ಥಿತರಿದ್ದರು.

ಕಾಪು : ಹಸಿರು ಪ್ರಕೃತಿ - ಯೋಗ ಸಂಸ್ಕೃತಿ ಸಸಿ ವಿತರಣೆ, ಉಪನ್ಯಾಸ, ಸಮ್ಮಾನ‌ ಕಾರ್ಯಕ್ರಮ

Thumbnail
Posted On: 22 Jun 2026, 08:54 PM

ಕಾಪು : ಯುವವಾಹಿನಿ ಕಾಪು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಮಿತಿ ಜಂಟಿ ಆಶ್ರಯದಲ್ಲಿ ಕಾಪು ಬಿಲ್ಲವರ‌ ಸಹಾಯಕ ಸಂಘದ ಸಭಾಭವನದಲ್ಲಿ ಹಸಿರು ಪ್ರಕೃತಿ - ಯೋಗ ಸಂಸ್ಕೃತಿ ಕಾರ್ಯಕ್ರಮ ನಡೆಯಿತು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಮಾಜದ ಅಭಿವೃದ್ಧಿಯಲ್ಲಿ ಯುವವಾಹಿನಿಯ ಕೊಡುಗೆ ಸ್ಮರಣೀಯವಾಗಿದ್ದು ಕಾಪು ಯುವವಾಹಿನಿ ಘಟಕದ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. 

ವಿಶ್ವ ಪರಿಸರ‌ ದಿನಾಚರಣೆ ಪ್ರಯುಕ್ತ ಉಡುಪಿ ವಲಯ ಅರಣ್ಯಾಧಿಕಾರಿ ಕೇಶವ ಪೂಜಾರಿ ಅವರಿಂದ ಉಪನ್ಯಾಸ ಕಾರ್ಯಕ್ರಮ‌ ನಡೆಯಿತು.

 ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಡುಪಿ ವಲಯದ ಮುಖ್ಯ ಶಿಕ್ಷಕ ಆರ್ ಜಿ. ಬಿರಾದಾರ್ ಯೋಗದ ಮಹತ್ವವನ್ನು ವಿವರಿಸಿದರು.

ಬಳಿಕ ಎಲ್ಲರಿಗೂ ಸಸಿ ವಿತರಿಸಲಾಯಿತು. ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. 

ಕಾಪು ಬಿಲ್ಲವರ ಸಹಾಯಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ‌ ಸುವರ್ಣ, ಪತಂಜಲಿ ಯೋಗ‌ ಸಮಿತಿಯ ಜನಾರ್ದನ ಸಾಲ್ಯಾನ್, ದಿನೇಶ್ ದೇವಾಡಿಗ, ಬಡಾ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಸುಕೇಶ್ ಎರ್ಮಾಳು, ಯುವವಾಹಿನಿ ಪೂರ್ವಾಧ್ಯಕ್ಷರಾದ ದೀಪಕ್ ಕುಮಾರ್‌ ಎರ್ಮಾಳು, ಸಚಿನ್ ಕುಮಾರ್ ಉಪಸ್ಥಿತರಿದ್ದರು. 

ಯುವವಾಹಿನಿ ಕಾಪು ಘಟಕದ ನಿಕಟ ಪೂರ್ವ ಅಧ್ಯಕ್ಷ ಸೂರ್ಯನಾರಾಯಣ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಎಸ್. ಪೂಜಾರಿ ವಂದಿಸಿದರು. ಸದಸ್ಯ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆ

Thumbnail
Posted On: 20 Jun 2026, 08:49 AM

ಉಡುಪಿ : ಲಯನ್ಸ್ ಜಿಲ್ಲೆ 317C ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ಜೋನ್ ಪ್ರಶಾಂತ್ ಗೋಮ್ಸ್, ಕೋಶಾಧಿಕಾರಿಯಾಗಿ ವಿಲ್ಫ್ರೆಡ್ ಡಿಸೋಜಾ ಆಯ್ಕೆಯಾಗಿದ್ದಾರೆ.

 ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಎಂಟನೇ ವರ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು, ಪದಗ್ರಹಣ ಕಾರ್ಯಕ್ರಮವು ಜೂನ್ 26ರಂದು ನಡೆಯಲಿದೆ. 

ನೂತನ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಉಡುಪಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಮುಖವಾಗಿ ಐಸಿವೈಎಂ ಉದ್ಯಾವರ ಘಟಕದ ಮಾಜಿ ಅಧ್ಯಕ್ಷರಾಗಿರುವ ಇವರು, ಉದ್ಯವರ ಚರ್ಚಿನ ಆರ್ಥಿಕ ಸಮಿತಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸಕ್ರಿಯ ಸದಸ್ಯರಾಗಿದ್ದಾರೆ. ಜೋನ್ ಗೋಮ್ಸ್ ಯುವ ಉದ್ಯಮಿಯಾಗಿದ್ದು, ಉದ್ಯಾವರ ಚರ್ಚ್ ಪಾಲನ ಮಂಡಳಿಯ ಸದಸ್ಯರಾಗಿದ್ದಾರೆ. ವಿಲ್ಫ್ರೆಡ್ ಡಿಸೋಜಾ ಉದ್ಯಾವರ ಚರ್ಚಿನ ಮಾಜಿ ಉಪಾಧ್ಯಕ್ಷರಾಗಿ, ಪ್ರಸ್ತುತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ ಸೌಹಾರ್ದ ಸಮಿತಿಯ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಸಲ್ಲಿಸಿದ್ದಾರೆ.

    

ಬಿಡದಿ ಹಾರೋಹಳ್ಳಿ ಭೂಸ್ವಾಧೀನ ಯೋಜನೆಗೆ ಉಡುಪಿ ಜಿಲ್ಲಾ ಜೆಡಿಎಸ್ ವಿರೋಧ

Thumbnail
Posted On: 20 Jun 2026, 08:41 AM

ಕಾಪು : ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಗಳ ವ್ಯಾಪ್ತಿಯ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. 
  ಕಾಪು ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಮೊದಲ ಹಂತದಲ್ಲಿ ಸುಮಾರು 498. 34 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯಿಂದ 755 ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಇವರಲ್ಲಿ ಬಹುಪಾಲು ಸಣ್ಣ ಮತ್ತು ಅತಿಸಣ್ಣ ರೈತರು ಎಂದು ಆರೋಪಿಸಲಾಗಿದೆ.

   1 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ನೂರಾರು ರೈತರು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಮುಂದಿನ ಹಂತದಲ್ಲಿ 7,500 ಕ್ಕೂ ಹೆಚ್ಚು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ರೈತರು ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲದಿದ್ದರೂ ಸರ್ಕಾರ ಬಲವಂತದ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಆರೋಪಿಸಲಾಗಿದೆ.

  ಈ ಪ್ರದೇಶದಲ್ಲಿ ಹೈನುಗಾರಿಕೆ, ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಹಾಗೂ ತೋಟಗಾರಿಕೆ ಪ್ರಮುಖ ಜೀವನಾಧಾರವಾಗಿದ್ದು, ಭೂಸ್ವಾಧೀನದಿಂದ ಇವುಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವ ಹೈನುಗಾರಿಕೆ ವಲಯದ ಮೇಲೂ ಪರಿಣಾಮ ಉಂಟಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

  ಇದೇ ತಿಂಗಳು ಯೋಜನೆ ವಿರೋಧಿಸಿ ನಡೆಯುವ ಪಾದಯಾತ್ರೆಗೆ ಉಡುಪಿ ಜಿಲ್ಲಾ ಜೆಡಿಎಸ್ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಅವರು ಹೇಳಿದರು. 

   ಈ ಕುರಿತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಹಾಗೂ ಸರ್ಕಾರದ ಗಮನಕ್ಕೆ ರೈತರ ಆಕ್ಷೇಪಣೆಗಳನ್ನು ತಲುಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

 ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾರ್ಯದರ್ಶಿ ಜಯರಾಮ್ ಆಚಾರ್ಯ, ಉಡುಪಿ ಘಟಕದ ಅಧ್ಯಕ್ಷ ಜಯಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ದೇವರಾಜ್, ಬಿರ್ತಿ ಗಂಗಾಧರ ಭಂಡಾರಿ, ಸುಧಾಕರ ಶೆಟ್ಟಿ, ಅಶ್ರಫ್, ವೆಂಕಟೇಶ್ ಉಪಸ್ಥಿತರಿದ್ದರು.