Updated News From Kaup

ಜ.25 : ಶಿರ್ವದಲ್ಲಿ ರಥ ಸಪ್ತಮಿ -ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ

Thumbnail
Posted On: 23 Jan 2026, 05:04 PM

ಶಿರ್ವ : ಪತಂಜಲಿ ಯೋಗ ಸಮಿತಿ, ಉಡುಪಿ ಜಿಲ್ಲೆ ಮತ್ತು ಶಿರ್ವ ಇದರ ನೇತೃತ್ವದಲ್ಲಿ ಮಹಿಳಾ ಮಂಡಲ(ರಿ.) ಶಿರ್ವ, ಯುವಕ ಮಂಡಲ(ರಿ.) ಕುತ್ಯಾರು, ಮತ್ತು ಶಿರ್ವ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.25 ರವಿವಾರ 'ರಥಸಪ್ತಮಿ"(ಸೂರ್ಯ ಜಯಂತಿ)ಯ ಶುಭಾವಸರದಲ್ಲಿ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಳದ ವಠಾರದಲ್ಲಿ  "ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞದ ದಶಮಾನೋತ್ಸವ" ಸಂಪನ್ನಗೊಳ್ಳಲಿದೆ.

"ರಥಸಪ್ತಮಿ"ಯ ದಿನವನ್ನು ಭಾರತೀಯ ಶಾಸ್ತ್ರಗಳ ಪ್ರಕಾರ "ಸೂರ್ಯ ಜಯಂತಿ'ಯಾಗಿ ಆಚರಿಸಲಾಗುತ್ತಿದೆ.  ಸೂರ್ಯನು ಮಕರ ರಾಶಿಯಿಂದ  ಉತ್ತರಾಭಿಮುಖವಾಗಿ  ಚಲನೆಯನ್ನು ಆರಂಭಿಸಿ ಏಳನೇಯ ದಿನವನ್ನು "ಮಾಘ ಶುಕ್ಲಸಪ್ತಮಿ" ಎಂದು ಕರೆಯುತ್ತಾರೆ. ಜಗತ್ತಿನ ಜೀವ ಜಂತುಗಳಿಗೆ  ಚೈತನ್ಯವನ್ನು  ತುಂಬಿದ ಸೂರ್ಯ ಜಯಂತಿಯಂದು  ನಾವು ನಿರೋಗಿಗಳಾಗಿ  ಶತಸಂವತ್ಸರ ಕಾಲ ಬಾಳುವಂತಾಗಲಿ ಎಂಬ ಆಶಯದೊಂದಿಗೆ  ಶಿರ್ವದಲ್ಲಿ ಪತಂಜಲಿ ಯೋಗ ಸಮಿತಿಯ ನೇತೃತ್ವದಲ್ಲಿ ಕಳೆದ ಒಂಭತ್ತು ವರ್ಷಗಳಿಂದ "ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ" ನಡೆಯುತ್ತಿದೆ.
 

ಕಾಂಗ್ರೆಸ್ ಪಕ್ಷವೇ ಇಲ್ಲದ ಕಾಲದಲ್ಲಿ ಕೇಸರಿ ಧ್ವಜದ ಅಸ್ಥಿತ್ವ ಪ್ರಾರಂಭ : ರಮಿತಾ ಸೂರ್ಯವಂಶಿ

Thumbnail
Posted On: 23 Jan 2026, 03:35 PM

ಕಾಪು : ಉಡುಪಿ ಪರ್ಯಾಯದಲ್ಲಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿದರು ಅನ್ನುವ ವಿಷಯದಲ್ಲಿ ಗೊಂದಲ ಮಾಡಿಕೊಂಡು ಹಿಂದೂಗಳ ಭಾವನೆಗೆ ಹಾಗೂ ಪರ್ಯಾಯಕ್ಕೆ ಅವಮಾನ ಮಾಡುವ ವ್ಯಕ್ತಿಗಳಿಗೆ ಮೊದಲು ಶಿಕ್ಷೆ ನೀಡಬೇಕು ಎಂದು ಬಿಜೆಪಿ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಹೇಳಿದ್ದಾರೆ.

ಪರ್ಯಾಯ ಹಿಂದೂ ಕಾರ್ಯಕ್ರಮವಾಗಿದ್ದು ಇಲ್ಲಿ ಎಲ್ಲರೂ ಪಕ್ಷವನ್ನು ಮರೆತು ಕೆಲಸ ಮಾಡುವ ಅಗತ್ಯ ಇತ್ತು. ಅಲ್ಲದೇ ಕಾಂಗ್ರೆಸ್ ನವರು ಭಾಗವ ಧ್ವಜಕ್ಕೆ ಅವಮಾನಿಸಿದ್ದಲ್ಲದೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಭಾಗವ ಧ್ವಜ ಬುದ್ಧರು ಬಳಸಿದ ಇತಿಹಾಸ ಕಾಣಬಹುದು. ಮುಂದೆ ಶಿವಾಜಿ ಮಹಾರಾಜರ ಕಾಲದಲ್ಲಿ ಕೇಸರಿ ಧ್ವಜವನ್ನು ಶಿವಾಜಿಯ ಅಧ್ಯಾತ್ಮಿಕ  ಗುರು ಸಮರ್ಥ ರಾಮದಾಸ್  ತನ್ನ ಅಂಗ ವಸ್ತ್ರದಿಂದ ಹರಿದು ಕೊಟ್ಟಿದ್ದರಿಂದಾಗಿ ಅದು ತ್ರಿಕೋನ ಆಕಾರದಲ್ಲಿ ಇತ್ತು ಅನ್ನುವ ಇತಿಹಾಸ ಇದೆ.

 ರಾಮಾಯಣ, ಮಹಾಭಾರತ ಕಾಲದಲ್ಲೂ ಇದ್ದ ಇತಿಹಾಸವಿದೆ ಅಂತೂ ಕಾಂಗ್ರೆಸ್ ಪಕ್ಷವೇ ಇಲ್ಲದ ಕಾಲದಲ್ಲಿ ಕೇಸರಿ ಧ್ವಜದ ಅಸ್ಥಿತ್ವ ಪ್ರಾರಂಭವಾಗಿದೆ. ಅಂದ ಮೇಲೆ ಅದರ ಬಗ್ಗೆ ಮಾತಾಡುವ ನೈತಿಕತೆಯು ಇವರಿಗಿಲ್ಲ. ಅನ್ಯಧರ್ಮದವರನ್ನು ಓಲೈಕೆ ಮಾಡುವ ಕಾರಣಕ್ಕೆ ಇಂತಹ ನೀಚ ಕೆಲಸಕ್ಕೆ ಕೈ ಹಾಕಿ ಅದ್ಧುರಿ ಆಗಿರುವ ಪರ್ಯಾಯಕ್ಕೆ ಅವಮಾನ ಮಾಡಬೇಡಿ.  ಮುಂದೆ ಇದರಿಂದ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಮಾಡಿದಲ್ಲಿ ಮಾತೃ ಶಕ್ತಿ ರಸ್ತೆಗಿಳಿಯಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ರೀ ಕ್ಷೇತ್ರ ಶಂಕರಪುರ: ಶ್ರೀ ಸೌಭಾಗ್ಯ ಕಾರ್ಯಕ್ರಮದಡಿ ಚಿನ್ನದ ಮೂಗುತಿ ಧಾರಣೆ

Thumbnail
Posted On: 23 Jan 2026, 03:28 PM

ಕಾಪು :  ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ದ್ವಾರಕಾಮಾಯಿ ಮಠದ ಏಕಾಜಾತಿ ಧರ್ಮ ಪೀಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಂತೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸೌಭಾಗ್ಯ ಕಾರ್ಯಕ್ರಮದ ಮುಖ್ಯೆನ ಚಿನ್ನದ ಮೂಗುತಿ ಧಾರಣೆಯು ಶುಕ್ರವಾರ ಜರಗಿತು.

 ಹಿಂದೂ ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು ಶ್ರೀ ಸೌಭಾಗ್ಯ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಶಂಕರಪುರದಲ್ಲಿ ಆಯೋಜಿಸಿದ್ದು, ಗುರೂಜಿ ಅವರು ಪ್ರತಿ ಗುರುವಾರ ಹಾಗೂ ಶುಕ್ರವಾರ 5 ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಇಂದು 4 ಹೆಣ್ಣು ಮಕ್ಕಳಿಗೆ ಗುರೂಜಿಯವರ ಉಪಸ್ಥಿತಿಯಲ್ಲಿ ಮೂಗುತಿ ಧಾರಣೆಯು ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಕಾಶ್ ಆಚಾರ್ಯರವರ ತಂಡ ಮೂಗುತಿ ಚುಚ್ಚುವ ಕಾರ್ಯಕ್ರಮವನ್ನು ಕೈಗೊಂಡಿದ್ದರು ಎಂದು ಮಠದ ಪ್ರಕಟಣೆ ತಿಳಿಸಿದೆ.

ಮಾ.1 ರಿಂದ 3 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿ ಪ್ರಯುಕ್ತ ಮಾತೃ ವೈಭವ

Thumbnail
Posted On: 19 Jan 2026, 05:57 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿಯ ಪ್ರಯುಕ್ತ ಮಾರ್ಚ್ 1 ರಿಂದ 3 ರ ವರೆಗೆ ಕಾಪುವಿನ ಅಮ್ಮನ ಸನ್ನಿದಾನದಲ್ಲಿ  ಭಕ್ತರ ಸಹಕಾರದೊಂದಿಗೆ  ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ " ಮಾತೃ ವೈಭವ " ವನ್ನು ವಿಜೃಂಭಣೆಯಿಂದ  ಆಚರಿಸಲು ಭಾನುವಾರ ಶ್ರೀಮಾತಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು, ದೇಶ ವಿದೇಶಗಳಲ್ಲಿ ನೆಲೆಸಿರುವ ಭಕ್ತರು ಮತ್ತು ಕಾಪುವಿನ ಅಮ್ಮನ ಮಕ್ಕಳೆಲ್ಲರ ಸಹಕಾರದೊಂದಿಗೆ ಕಾಪು ಮಾರಿಯಮ್ಮನ ದೇವಸ್ಥಾನದ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೈಭವದಿಂದ ಸಂಪನ್ನಗೊಂಡಿದೆ. ಪ್ರತೀ ವರ್ಷ ಮಾರ್ಚ್ 1, 2, 3 ರಂದು ಪ್ರತಿಷ್ಠಾ ವರ್ಧಂತಿಯನ್ನು
 ವಿಜ್ರಂಭಣೆಯಿಂದ  ಆಚರಿಸಲು ಎಲ್ಲರೂ ಒಗ್ಗೂಡಿಕೊಂಡು ಮಾತೃ ವೈಭವ ಉತ್ಸವ ಸಮಿತಿಯನ್ನು ರಚಿಸಿ, ವಾರ್ಷಿಕ ಉತ್ಸವವನ್ನು ಆಚರಿಸುವಂತಾಗಬೇಕು‌ ಎನ್ನುವುದು ನಮ್ಮ ಅಭಿಲಾಷೆಯಾಗಿದೆ. ಎಲ್ಲರ ಸಹಕಾರವಿರಲಿ ಎಂದರು.

ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆದು ಬಂದಿದೆ. ದೇಶ ವಿದೇಶಗಳಲ್ಲಿಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಜ್ಯ, ಕೇಂದ್ರ ಸರಕಾರಗಳ ಪ್ರತಿ‌ನಿಧಿಗಳು, ಎಲ್ಲಾ ರಾಜಕಾರಣಿಗಳೂ ಮಾರಿಗುಡಿಯ‌ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಪ್ರತಿಷ್ಠಾ ವರ್ಧಂತಿಯನ್ನು ವಿಶೇಷವಾಗಿ ಕಾಪುವಿಗೆ ಪ್ರಸಿದ್ಧಿ ತರುವ ಉತ್ಸವವನ್ನಾಗಿ ಆಚರಿಸೋಣ. ಈ ಉತ್ಸವ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೇ ಮಾದರಿಯಾಗಿ ಆಯೋಜನೆಗೊಳ್ಳಬೇಕಿದೆ ಎಂದರು.

ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರವು ಎಲ್ಲರ ಸಹಕಾರದೊಂದಿಗೆ ತಪಸ್ಸಿನ ರೀತಿಯಲ್ಲಿ  ಸಂಪನ್ನಗೊಂಡಿದೆ. ಅದರ ವಾರ್ಷಿಕ ವರ್ಧಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಮಿತಿಯ ಉದ್ದೇಶ ಸ್ವಾಗತಾರ್ಹವಾಗಿದೆ. ಭಕ್ತರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ಆಯೋಜನೆಗೊಳ್ಳುವಂತಾಗಲಿ ಎಂದು ಹಾರೈಸಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ‌ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್‌ ಸ್ವಾಗತಿಸಿದರು. ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಕಾಪು ಶ್ರೀ ಹೊಸಮಾರಿಗುಡಿ‌ಗೆ ಮಾಜಿ ಸಚಿವ, ನಟ ಕುಮಾರ್ ಬಂಗಾರಪ್ಪ ಭೇಟಿ

Thumbnail
Posted On: 18 Jan 2026, 11:23 AM

ಕಾಪು : ಮಾಜಿ ಸಚಿವ ಮತ್ತು ಕನ್ನಡ ಚಿತ್ರರಂಗದ ನಟ ಕುಮಾರ್ ಬಂಗಾರಪ್ಪ ಅವರು ಪತ್ನಿ ಮತ್ತು ಮಕ್ಕಳ ಜೊತೆ ಜ.17ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ಅಮ್ಮನ ಅನುಗ್ರಹ ಪ್ರಸಾದ ನೀಡುವ ಮೂಲಕ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ,  ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಸಾಲ್ಯಾನ್ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  

ಮುದರಂಗಡಿ : ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ - ರೆ.ಫಾ.ವಿನ್ಸೆಂಟ್ ಡಿಸೋಜ

Thumbnail
Posted On: 15 Jan 2026, 07:10 PM

ಮುದರಂಗಡಿ : ಯಾವುದೇ ಜಾತಿ,ಮತ, ಪಂಥಗಳ ಭೇದವಲ್ಲದೆ ಸಂಕಷ್ಟಕ್ಕೆ ಒಳಗಾದ  ಅಸಾಯಕರಿಗೆ ಸಹಾಯ ಮಾಡಿ ಸಾಂತ್ವಾನ ನೀಡುವ ಕಾರ್ಯವೇ ದೇವರ ಸೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ಈಶಸೇವೆ, ದೇಶಸೇವೆ, ಜನಸೇವೆ, ಕಲಾಸೇವೆಯ ಮೂಲಕ ಜನರಿಗೆ ಹತ್ತಿರವಾಗುತ್ತೇವೆಯೋ ಆಗ ದೇವರಿಗೂ ಹತ್ತಿರವಾಗುತ್ತೇವೆ. ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ ಎಂದು  ಮೂಡುಬಿದ್ರೆ ಸಂಪಿಗೆ ನಗರದ  ಹೋಲಿ ಸ್ವಿರಿಟ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಡಿಸೋಜಾ ನುಡಿದರು.
ಅವರು ಮುದರಂಗಡಿ ಸಂತ ಪ್ರಾನ್ಸಿಸ್ ದೇವಾಲಯದ ವಾರ್ಷಿಕೋತ್ಸವ ಶುಭಾವಸರದಲ್ಲಿ ಕಂಪ್ಯಾಶನೇಟ್ ಫ್ರೆಂಡ್ಸ್ ಎಸೋಸಿಯೇಶನ್ (ರಿ.) ಮುದರಂಗಡಿ ಇದರ ವತಿಯಿಂದ ಸಾರ್ವಜನಿಕ ಆಟದ ಮೈದಾನದಲ್ಲಿ ಜರುಗಿದ 9ನೇ ವರ್ಷದ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನದಲ್ಲಿ ಈ ಕರುಣಾಮಯೀ ಸಂಸ್ಥೆ ಬಡವರ್ಗದ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆರ್ಥಿವಾಗಿ ಬಲ ತುಂಬುವ ಕಾರ್ಯವನ್ನು ನಡೆಸುತ್ತಿರುವುದು ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.

  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ  ಮೂಲತ: ಮುದರಂಗಡಿಯವರೇ ಆದ ಗಲ್ಫ್ ಕಂಟ್ರಿಯಲ್ಲಿ ಉದ್ಯೋಗ ಮಾಡಿ ವಯೋನಿವೃತ್ತಿಯ ಬಳಿಕ ಊರಿನಲ್ಲಿ ಸೇವೆಗಾಗಿಯೇ ಸಂಘಟನೆಯನ್ನು ಕಟ್ಟಿ ತಮ್ಮ ಆದಾಯದ ಸ್ವಲ್ಪಾಂಶವನ್ನು ಕ್ರೋಢೀಕರಿಸಿ ಆ ಮೂಲಕ  ಪರಿಸರದ ಬಡ ಅನಾರೋಗ್ಯ ಪೀಡಿತರಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ವಿಕಲಚೇತರರು, ಆಕಸ್ಮಿಕ ಅಪಘಾತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ, ಮನೆರಿಪೇರಿ, ತುರ್ತುಚಿಕಿತ್ಸೆ, ವಿದ್ಯುತ್ ಸಂಪರ್ಕ ಇತ್ಯಾದಿ ಮಾನವೀಯ ನೆಲೆಯಲ್ಲಿ ಕಳೆದ 9 ವರ್ಷಗಳಿಂದ 45 ಲಕ್ಷಕ್ಕೂ ಅಧಿಕ ನಿಧಿಯನ್ನು ವಿತರಿಸಿರುವುದು ಇತರರಿಗೂ ಮಾದರಿಯಾದ ಸೇವೆಯಾಗಿದೆ ಎಂದರು.

  ಸಂಸ್ಥೆಯ ಗೌರವಾಧ್ಯಕ್ಷರೂ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಹಬ್ಬದ ಶುಭ ದಿನದಲ್ಲಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಕೊಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯಕ್ಕೆ ಸಮಾಜದ ಸ್ಪಂದನವೂ ಸಿಗುತ್ತದೆ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ, ಜಗತ್ತಿಗೆ ಮಾದರಿಯಾಗಿದೆ. ಇಂತಹ ಕಾರ್ಯ ಬೆಳೆಯಬೇಕು, ಬೆಳೆಸಬೇಕು ಎಂದರು.

  ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಮೈಕಲ್ ರಮೇಶ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಂಸ್ಥೆಯ ಆಶಯಕ್ಕೆ ಸ್ಪಂದಿಸಿ ಕೈಜೋಡಿಸಿದ ಸಮಾನಮನಸ್ಕರ ಕೊಡುಗೆಯನ್ನು ಸ್ಮರಿಸಿ, 9ವರ್ಷಗಳ ಈ ಕಾರ್ಯ ಸಂತೃಪ್ತಿಯನ್ನು ನೀಡಿದೆ. ಮುಂದಿನ ವರ್ಷ ದಶಮಾನೋತ್ಸವದ ಸಂದರ್ಭದಲ್ಲಿ ಈ ಸ್ತುತ್ಯ ಕಾರ್ಯಕ್ಕೆ ಕೈಜೋಡಿಸುವಂತೆ ವಿನಂತಿಸಿದರು.

 ಮುಖ್ಯ ಅತಿಥಿಗಳಾಗಿ ಮುದರಂಗಡಿ ಗ್ರಾ.ಪಂ.ಉಪಾಧ್ಯಕ್ಷ ಶರತ್ ಶೆಟ್ಟಿ,  ಉಡುಪಿ ಶೋಕಮಾತಾ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಬರ್ಟ್ ಮ್ಯಾಕ್ಸಿಮ್ ಡಿಸೋಜ, ಪಿಲಾರು ಉದ್ಯಮಿ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕುತ್ಯಾರು ಸಾಯಿನಾಥ್ ಶೆಟ್ಟಿ, ಫೆಲಿಕ್ಸ್ ಡಿಸೋಜ, ಸ್ಟೀವನ್ ಕೊಲಾಸೋ ಉದ್ಯಾವರ ಭಾಗವಹಿಸಿದ್ದರು. ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು. ಅನಿತಾ, ಗ್ರೆಟ್ಟಾ ಪ್ರಾರ್ಥಿಸಿದರು. 

ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ : ರಜತ ಸಂಭ್ರಮ - ಗ್ರಾಮೀಣ ಕ್ರೀಡಾಕೂಟ

Thumbnail
Posted On: 15 Jan 2026, 07:33 AM

ಉಡುಪಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ ಇದರ ರಜತ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಲಾಯಿತು. 

ಭತ್ತದ ಕಳಸಕ್ಕೆ ಭತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಉಪ್ಪೂರು ವ್ಯ.ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಹೂವಯ್ಯ ಸೇರ್ವೇಗಾರ್, ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ಕುಟ್ಟಿ ದೊಣ್ಣೆ, ಲಗೋರಿ ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ ಪರಿಚಯಿಸುವ ಹಾಗೂ ಸಾರ್ವಜನಿಕರಿಗೆ ನೆನಪಿಸುವ ಮಾದರಿ ಕಾರ್ಯಕ್ರಮ ಹಾಗೂ ಜಗವೆಲ್ಲ ಸಿಹಿ ನಿದ್ದೆಯಲ್ಲಿ ಮಲಗಿರುವ ಹೊತ್ತು ಜಗದ ಸುದ್ದಿಯನ್ನು ಮನೆ ಮನೆ ಮುಟ್ಟಿಸುವ ಪತ್ರಿಕಾ ವಿತರಕರನ್ನು ಗೌರವಿಸಿರುವುದು ಶ್ಲಾಘನೀಯ ಹಾಗೂ ಮಳೆ ಗಾಳಿನ್ನು ಲೆಕ್ಕಿಸದೆ ಜೀವ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಪವರ್ ಮ್ಯಾನ್ಗಳನ್ನು ಗುರುತಿಸಿ ಗೌರವಿಸಿದ್ದು ಜಿಲ್ಲಾ ರಾಜ್ಯೋತ್ಸ್ವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಕಾರ್ಯವು ಅಭಿನಂದನೀಯ ಎಂದರು. 

ವೇದಿಕೆಯಲ್ಲಿ ಗಣ್ಯರಾದ ಡಾ.ಸಂದೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ಮರಕಾಲ, ಉ, ವ್ಯ,ಸೇ,ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ 48 ವರ್ಷಗಳಿಂದ ಸುದೀರ್ಘವಾಗಿ ದಿನ ಪತ್ರಿಕೆ ವಿತರಣೆ ಮಾಡುತ್ತಿರುವ ಪುಂಡಲೀಕ ಶಣೈ, ಪತ್ರಿಕಾ ವಿತರಕರಾದ ಅಶೋಕ್ ಚಾತ್ರ, ಮೆಸ್ಕಾಂ ಪವರ್ ಮ್ಯಾನ್ ಗಳಾದ ಶರಣಪ್ಪ ಹಳ್ಳಪ್ಪನವರ್, ಮಂಜುನಾಥ ಹಾದಿಮನಿ, ಹಾಗೂ ಅಡಿವೆಪ್ಪ ಪಾಟೀಲ ರವರನ್ನು ಗೌರವಿಸಿ ಸಮ್ಮಾನಿಸಲಾಯಿತು.

 ಶಾಲಾ ವಿದ್ಯಾರ್ಥಗಳು ಹಾಗೂ ಸಾರ್ವಜನಿಕರು ಸೇರಿ 250 ಕ್ಕೂ ಹೆಚ್ಚಿನ ಸ್ಪರ್ಧಿಗಳು ವಿವಿಧ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. 

ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಸಂಘದ ಸದಸ್ಯರಾದ ಶೋಭಾ ಯೋಗೀಶ್, ಶಾಂತ ಸೆಲ್ವರಾಜ್ ಹಾಗೂ ಸುಕನ್ಯರವರು ಸಮ್ಮಾನಿತರ ಪರಿಚಯ ವಾಚಿಸಿದರು. ಶಕುಂತಲಾ ಸುಕೇಶ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಸದಾಶಿವ ರವರು ಸ್ವಾಗತಿಸಿ, ಸುರೇಶ್ ರವರು ವಂದಿಸಿ, ಯೋಗೀಶ್ ಕೊಳಲಗಿರಿ ನಿರೂಪಿಸಿದರು.

    

ಜ. 26: ಕುಲಾಲ ಸಂಘ ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ ವಾರ್ಷಿಕ ಮಹಾಸಭೆ

Thumbnail
Posted On: 15 Jan 2026, 07:25 AM

ಪುಣೆ : ಕುಲಾಲ ಸಂಘ (ರಿ.) ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ  ವಾರ್ಷಿಕ ಮಹಾಸಭೆಯು ಜನವರಿ 26 ರಂದು ಬೆಳಿಗ್ಗೆ 10 ರಿಂದ ಜ್ಞಾನಜ್ಯೋತಿ ಸಾವಿತ್ರಿದಾಯಿ  ಸ್ಮಾರಕ ಭವನ, ಅಂಬೇಡ್ಕರ್ ಪ್ರತಿಮೆಯ ಹಿಂಭಾಗ ಪಿಂಪ್ರಿ ಇಲ್ಲಿ ಸಂಘದ ಅಧ್ಯಕ್ಷರು  ರವಿ.ಕೆ.ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸುಚಿತ್ರ ದಿನಕರ್ ಬಂಜನ್, ಶ್ರೀಧರ್ ಕೆ ಶೆಟ್ಟಿ, ದೊಡ್ಡಣ್ಣ ಸಿ ಮೂಲ್ಯ, ವಕೀಲರು  ಅಪ್ಪು ಮೂಲ್ಯ ಸೇರಿದಂತೆ ಅನೇಕ ಸ್ವಜಾತಿ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಪುಣೆಯ ಪಿಂಪ್ರಿ ಕುಲಾಲ ಸಂಘ ಪ್ರಕಟಣೆಯಲ್ಲಿ ತಿಳಿಸಿರುವರು.

ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ರೂ.4 ಲಕ್ಷ ವೆಚ್ಚದ ಜನರೇಟರ್ ಕೊಡುಗೆ

Thumbnail
Posted On: 14 Jan 2026, 07:59 PM

ಪಡುಬಿದ್ರಿ : ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಇದರ ಸದಸ್ಯರಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲಕ್ಕೆ ಬುಧವಾರ ಸಂಜೆ 15 ಕೆವಿ ಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ ಹಸ್ತಾಂತರಿಸಿದ್ದಾರೆ.
 ದೇವಳದ ಅರ್ಚಕ ಗೋವಿಂದ ಭಟ್ ರವರು ಪೂಜಾ ವಿಧಾನ ಪೂರೈಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

 ವಿಷ್ಣುಮೂರ್ತಿ ಭಟ್ ಜನರೇಟರ್ ಉದ್ಘಾಟನೆಯನ್ನು ನೆರವೇರಿಸಿದರು.

  ಈ ಸಂದರ್ಭ ಉದ್ಯಮಿ ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಧ್ಯುಮಣಿ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕಾರ್ಯದರ್ಶಿ ರವಿಕಿರಣ್, ಕೋಶಾಧಿಕಾರಿ ವಿಷ್ಣುಮೂರ್ತಿ ಭಟ್, ಮನೋಜ್ ಶೆಟ್ಟಿ, ಗುರುರಾಜ್ ಉಚ್ಚಿಲ, ವಿನೋದ್ ಸುವರ್ಣ, ಪ್ರಮೋದ್ ದೇವಾಡಿಗ, ಸಂಪತ್ ಕುಮಾರ್, ಹರ್ಷಿತ್ ಆಚಾರ್ಯ,ಸತೀಶ್ ಆಚಾರ್ಯ, ದಾಮೋದರ್ ದೇವಾಡಿಗ, ಲೀಲಾಧರ, ಹೃತಿಕ್ ಪೂಜಾರಿ, ದೇವಳದ ಮೆನೇಜರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಮಹಾಸಭೆ

Thumbnail
Posted On: 14 Jan 2026, 07:52 PM

ಕಾಪು : ನಮ್ಮ ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಿರ್ವಹಿಸಬೇಕೆಂದು ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್ ಹೇಳಿದರು.
   ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಮಹಾಸಭೆಯಲ್ಲಿ ಅಧ್ಯಕ್ಷತೆ  ವಹಿಸಿ ಅವರು ಮಾತನಾಡಿದರು.

 ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಸಂಘದ ಅಧ್ಯಕ್ಷ ಶೇಖರ್ ನಾಯ್ಕ್, ಶ್ರೀದೇವಿ - ಭೂದೇವಿ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು ಇದರ ಅಧ್ಯಕ್ಷ ಸದಾನಂದ ನಾಯ್ಕ್ ಕೆಳಾರ್ಕಳಬೆಟ್ಟು,  ರವೀಂದ್ರ ನಾಯ್ಕ್ ಬೆಳಪು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ವೇದಿಕೆಯಲ್ಲಿ ಪಾಂಡರಂಗ ನಾಯ್ಕ್ ಕಲ್ಯಾಣಪುರ, ಪ್ರಶಾಂತ್ ಶಿವ ನಾಯ್ಕ್, ಮಾಧವ ನಾಯ್ಕ್ ಪಯ್ಯಾರು, ಸಂಘದ ಉಪಾಧ್ಯಕ್ಷ ರಾಜೇಶ್ ನಾಯ್ಕ್ ಮಟ್ಟಾರ್, ಗೋಪಾಲ್ ನಾಯ್ಕ್  ಕರಂದಾಡಿ, ಕಾರ್ಯದರ್ಶಿ ರೋಹಿತ್ ನಾಯ್ಕ್ , ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು.

  ಈ ಸಂದರ್ಭದಲ್ಲಿ ಕಾಪು ತಾಲೂಕಿನಲ್ಲಿ 2025 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ  85% ಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಹುಲ್ ನಾಯ್ಕ್, ನಮಿತ ನಾಯ್ಕ್ , ಶುಭಶ್ರೀ ನಾಯ್ಕ್ ಇವರನ್ನು ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

  ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಂಘದ ಸದಸ್ಯರಾದ ಗಣೇಶ್ ನಾಯ್ಕ್ ಉಳಿಯಾರು, ಮೀನಾಕ್ಷಿ ನಾಯ್ಕ್ ಕರಂದಾಡಿ, ಸಂತೋಷ್ ನಾಯ್ಕ್ ಉಳಿಯಾರು  ಇವರನ್ನು ಸನ್ಮಾನಿಸಲಾಯಿತು.

  ಈ ಸಂದರ್ಭದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಧನ ಸಹಾಯ ನೀಡಿದ ಸದಸ್ಯರನ್ನು ಗೌರವಿಸಲಾಯಿತು.

  ಸಂಘದ ಅಧ್ಯಕ್ಷ ನೀಲಾನಂದ ನಾಯ್ಕ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ನಾಯ್ಕ್ ವರದಿ ವಾಚಿಸಿದರು. ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಲೆಕ್ಕ-ಪತ್ರ ಮಂಡಿಸಿದರು. ಸುನಿಲ್ ನಾಯ್ಕ್ ಹಾಗೂ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.  ಸುಜಾತ ವಂದಿಸಿದರು.