Updated News From Kaup

ಕಾಪು ಶ್ರೀ ಹೊಸ ಮಾರಿಗುಡಿಗೆ ವಿವಿಧ ಕ್ಷೇತ್ರಗಳ ಗಣ್ಯರ ಭೇಟಿ

Posted On: 23-05-2025 07:09AM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪ್ರತಿನಿತ್ಯ ಹಲವಾರು ಅಧಿಕಾರಿ ವರ್ಗದವರು, ನ್ಯಾಯಾದೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಸಿನಿಮಾ ನಟರು, ನಟಿಯರು ಸೇರಿದಂತೆ ರಾಜಕೀಯ ಧುರಿಣರು ಆಗಮಿಸುತ್ತಿದ್ದಾರೆ.

ಇದೀಗ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರ ರಾಜಕೀಯ ಧುರೀಣರ ದಂಡು ಕಾಪು ಮಾರಿಯಮ್ಮನೆಡೆಗೆ ಸಾಗಿ ಬಂದಿದೆ. ಮಹಾರಾಷ್ಟ್ರ ದಿಂಡೋಷಿ ಕ್ಷೇತ್ರದ ಶಾಸಕ ಮತ್ತು ಮುಂಬೈನ ಮಾಜಿ ಮೇಯರ್ ಸುನಿಲ್ ಪ್ರಭು, ಮಾಹಿಮ್ ಕ್ಷೇತ್ರದ ಶಾಸಕ ಮಹೇಶ್ ಸಾವಂತ್ ಮತ್ತು ಉದ್ಯಮಿ ಮಯೂರೇಶ್ ಪಾಟೀಲ್ ಅವರು ದೇವಳಕ್ಕೆ ಭೇಟಿ ನೀಡಿ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಹಾಗೂ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮಕ್ಷಮದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಅದೇ ರೀತಿ ಮಹಾರಾಷ್ಟ್ರದ ಬಾಂದ್ರ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯ ಮತ್ತು ಮಾಜಿ ಸಾರಿಗೆ ಸಚಿವ ಅನಿಲ್ ಪರಬ್, ಬಿ.ಈ. ಎಸ್. ಟಿ ಮಾಜಿ ಅಧ್ಯಕ್ಷ ಮತ್ತು ವರ್ಲಿ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯ ಮತ್ತು ಶಾಸಕ ಸುನಿಲ್ ಶಿಂದೆ, ವಿಧಾನ ಪರಿಷತ್ತಿನ ಸದಸ್ಯ ರಾಜನ್ಸ್, ಅವೆನ್ಯೂ ಹೋಟೆಲ್ ಮಾಲಕ ಉದ್ಯಮಿ ರಘುರಾಮ್ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ ಹಾಗೂ ಮತ್ತಿತರರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಜಯಲಕ್ಷ್ಮಿ ಎಸ್.ಶೆಟ್ಟಿ,ಉದ್ಯಮಿಗಳಾದ ಶರತ್ ಹೆಗ್ಡೆ, ಪರ್ವತ್ ಶೆಟ್ಟಿ, ಅಂಕಿತ್ ಶೆಟ್ಟಿ, ಉತ್ತಮ್ ಶೆಟ್ಟಿ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ : ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ

Posted On: 23-05-2025 07:00AM

ಪಡುಬಿದ್ರಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2024 - 25 ನೇ ಸಾಲಿನ ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡುಬಿದ್ರಿ ಲಯನ್ಸ್‌ ಇಂಗ್ಲಿಷ್ ಮೀಡಿಯಂ ಶಾಲೆ ಇದರ ವಿದ್ಯಾರ್ಥಿನಿ, ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ ಗಳಿಸಿದ್ದಾರೆ.

ಈಕೆ ಜಯ ನಾರಾಯಣ ಪೂಜಾರಿ ಪಡುಬಿದ್ರಿ ಪಾದೆಬೆಟ್ಟು, ಹಾಗೂ ವನಿತಾ ಜಯ ಪೂಜಾರಿ ಮುಡಾರು, ಕಾರ್ಕಳ ಅವರ ಸುಪುತ್ರಿ.

ಕ್ಯಾಂಪಸ್ ಸೆಲೆಕ್ಷನ್ : ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ 75 ವಿದ್ಯಾರ್ಥಿಗಳು ಆಯ್ಕೆ

Posted On: 21-05-2025 04:44PM

ಶಿರ್ವ : ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜು, ಶಿರ್ವ ಇಲ್ಲಿ ಅವಸರ್ ಎಚ್.ಆರ್ ಸರ್ವೀಸಸ್, ಬೆಂಗಳೂರು ಇವರು ನಡೆಸಿದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಸಂದರ್ಶನದಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ವಿಭಾಗದ 75 ವಿದ್ಯಾರ್ಥಿಗಳು ಆಯ್ಕೆಯಾದರು.

ಅವಸರ್ ಎಚ್.ಆರ್ ಸರ್ವೀಸಸ್, ಬೆಂಗಳೂರು ಇದರ ನೇಮಕಾತಿ ಕಾರ್ಯ ನಿರ್ವಾಹಕ ನಿತೇಶ್ ಮೇಟಿ ಇವರು ಲಭ್ಯವಿರುವ ಉದ್ಯೋಗ ಅವಕಾಶಗಳ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಬದ್ಧತೆ ಹಾಗೂ ಕೌಶಲ್ಯ ಉದ್ಯೋಗದ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ, ಎಲೆಕ್ಟಾçನಿಕ್ ಬಿಡಿ ಭಾಗಗಳನ್ನು ತಯಾರು ಮಾಡುವ ಬೃಹತ್ ಕಂಪೆನಿಗಳಾದ ಫಾಕ್ಸ್ಕಾನ್, ಟಾಟಾ ವಿಸ್ಟ್ರಾನ್, ಧೂತ್ ಒಳಗೊಂಡಂತೆ ಅಮೇಜಾನ್, ಫ್ಲಿಪ್‌ಕಾರ್ಟ್ನಂತಹ ಅಂತರ್ಜಾಲ ಗ್ರಾಹಕ ಸೇವಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಲು ಅವಕಾಶಗಳು ಹೇರಳವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತವಾದ ಉದ್ಯೋಗ ದೊರಕಿ ತನ್ಮೂಲಕ ಜೀವನ ಕಟ್ಟಿಕೊಳ್ಳುವ ಸೌಕರ್ಯ ಇಂದಿನ ದಿನಮಾನದಲ್ಲಿ ತುಂಬಾ ಅವಶ್ಯಕ. ಇಂತಹ ಒಂದು ಸಂದರ್ಭ ಕಾಲೇಜಿನಲ್ಲಿ ತೃತೀಯ ಪದವಿ ವಿದ್ಯಾರ್ಥಿಗಳಿಗೆ ದೊರಕಿರುವುದು ಸಂತಸ ತಂದಿದೆ ಎಂದರು.

ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕರುಗಳಾದ ಹೇಮಲತಾ ಶೆಟ್ಟಿ ಸ್ವಾಗತಿಸಿ, ರಶ್ಮಿ ವಂದಿಸಿದರು.

ಕಾಪು : ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರಿಗೆ ತ್ವರಿತ ಸೇವೆ ಸಿಗಲಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಗ್ರಹ

Posted On: 21-05-2025 04:36PM

ಕಾಪು : ಪ್ರಸ್ತುತ ಕಾಪುವಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರ ಇದೆ. ಇಲ್ಲಿ ಜನಸಾಮಾನ್ಯರ ಅರ್ಜಿ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲ. ನೂಕು ನುಗ್ಗಲು ಇದೆ. ಒಮ್ಮೆಗೆ 5 -10 ಅರ್ಜಿಗಳನ್ನು ತರುವ ದಲ್ಲಾಳಿಗಳ ಹಾವಳಿ ಇದೆ. ನೇರವಾಗಿ ಅರ್ಜಿ ಸಲ್ಲಿಸಲು ಹೋದವರನ್ನು ಕೇಳುವವರೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ಕಾಯುವ ಪರಿಸ್ಥಿತಿ. ಹಾಗಿದ್ದರೂ ಕೆಲಸವಾಗದೆ ಹಿಂದಿರುಗಿ ಹೋಗಬೇಕು. 10 -12 ಬಾರಿ ಹೋದರೂ ಯೋಜನಾ ಪ್ರಾಧಿಕಾರದ ಅಧಿಕಾರಿಯ ಭೇಟಿ ಅಸಾಧ್ಯ. ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರಿಗೆ ತ್ವರಿತವಾದ ಸೇವೆ ಸಿಗುವಂತಾಗಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಆಗ್ರಸಿದ್ದಾರೆ. ಈ ಬಗ್ಗೆ ಸೋಮವಾರ ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕಾಪು ತಹಶೀಲ್ದಾರ್‌ರವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಾಧಿಕಾರದ ಕಚೇರಿಗೆ ನೇರವಾಗಿ ಬರುವ ಅರ್ಜಿದಾರರೊಂದಿಗೆ ವಿನಯ ಮತ್ತು ಸೌಜನ್ಯದಿಂದ ವರ್ತಿಸುವಂತೆ ಪ್ರಾಧಿಕಾರದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನಿರ್ದೇಶ ನೀಡಬೇಕು. ಅರ್ಜಿಯ ಸ್ವೀಕಾರ ಮತ್ತು ಸ್ಥಿತಿಗತಿಯ ಬಗ್ಗೆ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಅರ್ಜಿಯ ಜೊತೆ ಯಾವುದೆಲ್ಲ ದಾಖಲೆಗಳ ಅಗತ್ಯವಿರುವುದೆಂದು ಪರಿಶೀಲಿಸಿ, ಅರ್ಜಿದಾರರಿಗೆ ಆಗಲೇ ತಿಳಿಸಬೇಕು. ಕ್ರಮವತ್ತಾಗಿ ಕಚೇರಿಯನ್ನು ಸಂಪರ್ಕಿಸುವ ದಿನ ಮತ್ತು ಸಮಯವನ್ನು ದೂರವಾಣಿ ಮೂಲಕ ಅರ್ಜಿದಾರರಿಗೆ ನೀಡುವ ವ್ಯವಸ್ಥೆಯಾಗಬೇಕು ಮತ್ತು ಅಂದೇ ಅರ್ಜಿಯ ವಿಲೇವಾರಿಯಾಗಬೇಕು. ಅರ್ಜಿ ಸಲ್ಲಿಸಿದ ರೀತಿಯಲ್ಲಿ ಕಡ್ಡಾಯವಾಗಿ ಅನುಮೋದನೆ ನೀಡುವುದು. ದಲ್ಲಾಳಿಗಳಿಗೆ ಪ್ರಾಧಿಕಾರದಲ್ಲಿ ಅವಕಾಶ ನೀಡಕೂಡದು. ಒಮ್ಮೆಗೆ ಒಬ್ಬರಿಂದ ಒಂದು ಅರ್ಜಿ ಮಾತ್ರ ಸ್ವೀಕಾರ ಮಾಡುವುದು. ಅವ್ಯವಸ್ಥೆಯಿಂದಾಗಿ ಉಂಟಾಗುತ್ತಿರುವ ನೂಕುನುಗ್ಗಲನ್ನು ನಿಯಂತ್ರಿಸಬೇಕು, ಇದೆಲ್ಲಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಿ ಪ್ರಾಧಿಕಾರವು ಸಾರ್ವಜನಿಕರಿಗೆ ಅನುಕೂಲವಾಗಿ ತ್ವರಿತ ಕೆಲಸ ಮಾಡಲು ತಾವು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಯಿತು.

ಪ್ರಾಧಿಕಾರದ ಪ್ರಸ್ತುತ ಕಾರ್ಯವೈಖರಿಯಿಂದ ನಮ್ಮ ಸಂಘಟನೆಯ ಸದಸ್ಯರು ಈಗಾಗಲೇ ತೀವ್ರ ಅಸಮಾಧಾನ ಹೊಂದಿದ್ದಾರೆ ಮತ್ತು ಪ್ರತಿಭಟನೆ ನಡೆಸುವ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಇವೆಲ್ಲ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಿ ಪ್ರಾಧಿಕಾರವು ಸಾರ್ವಜನಿಕರಿಗೆ ಅನುಕೂಲವಾಗಿ ತ್ವರಿತ ಕೆಲಸ ಮಾಡುವಂತೆ ತಾವು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಪಾಂಗಾಳ ಗಣೇಶ ಶೆಟ್ಟಿ, ಡಾ. ರಾಧಾಕೃಷ್ಣ ಶರ್ಮಾ, ವೇಣುಗೋಪಾಲ್ ಎಂ. ಪಡುಕಳತ್ತೂರು, ರಮೇಶ್ಚಂದ್ರ ನಾಯಕ್ ಪಂಜಿಮಾರು ಉಪಸ್ಥಿತರಿದ್ದರು.

ಮಳೆ ವಿಪತ್ತು ನಿರ್ವಹಣೆ ಕುರಿತು ಕಾಪು ತಾಲೂಕು ಮಟ್ಟದ ಇಲಾಖಾಧಿಕಾರಿಗಳ ಸಭೆ

Posted On: 21-05-2025 04:01PM

ಕಾಪು : ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂ ವಿಪತ್ತು ನಿರ್ವಹಣಾ ವಿಷಯಗಳ ಕುರಿತು ಕಾಪು ತಾಲೂಕು ಮಟ್ಟದ ಸಭೆಯು ಬುಧವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧದಲ್ಲಿ ಜರಗಿತು.

ಸಭೆಯಲ್ಲಿ ರಾ.ಹೆ. 66 ರ ಹೆಜಮಾಡಿಯಿಂದ ಉದ್ಯಾವರದವರೆಗಿನ ಬೈ-ಪಾಸ್ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಕಡೆಗಳಲ್ಲಿ ಬ್ಯಾರೀಕೇಡ್ ಗಳನ್ನು ಅಳವಡಿಸಿದ್ದು ಸುಭದ್ರ ಸ್ಥಿತಿಯಲ್ಲಿ ಇರಿಸುವಂತೆ ಹಾಗೂ ಪ್ರತಿಫಲನಗಳನ್ನು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಕಾಣುವಂತೆ ಅಳವಡಿಸುವಂತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿದ್ದು ಮಳೆಯಿಂದ ಮಣ್ಣು ಒದ್ದೆಯಾಗಿ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸೂಚಿಸಲಾಯಿತು ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ/ ಪಂಚಾಯತ್ ರಾಜ್ ಅಧಿಕಾರಿಗಳು ಸಮನ್ವಯತೆಯಿಂದ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು. ರಸ್ತೆ ಬದಿಗಳಲ್ಲಿರುವ ಹಳೆ ವಿದ್ಯುತ್ ತಂತಿಗಳನ್ನು ಮತ್ತು ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಜಲ್ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಪೈಪ್ ಲೈನ್ ಅಳವಡಿಸಲು ತೆಗೆದ ಹೊಂಡ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಶಾಲಾ ಕಾಲೇಜುಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳಿಗೆ ಜಾತಿ ಆದಾಯ ಪ್ರಮಾಣ ಪತ್ರ ಅಗತ್ಯವಾಗಿದ್ದು, ಜಾತಿ ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ, ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಉಲ್ಬಣವಾಗಲಿದ್ದು ಇದರ ತಡೆಗೆ ಮುಂಜಾಗ್ರತ ಕ್ರಮ ಹಾಗೂ ಸಾರ್ವಜನಿಕರಿಗೆ ಜಾಗೃತಿ ಉಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಯಿತು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಪರಿಸರ ಹಿತದೃಷ್ಟಿಯಿಂದ ಮಲೀನ ನೀರು ಮತ್ತು ಮಲೀನ ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮತ್ತು ಮಳೆಗಾಲದ ಸಂದರ್ಭದಲ್ಲಿ ಪುರಸಭೆಯಲ್ಲಿ ತುರ್ತು ಸೇವಾ ಕೇಂದ್ರ ತೆರೆದು ಜವಾಬ್ದಾರಿಯುತ ಸಿಬ್ಬಂದಿಗಳನ್ನು ನೇಮಕ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ತುರ್ತು ಪರಿಹಾರೋಪಾಯ ಕೈಗೊಳ್ಳವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ರಾಷ್ಟೀಯ ಹೆದ್ದಾರಿಯ ಅಪಘಾತ ವಲಯದಲ್ಲಿ ಸೂಚನಾ ಫಲಕ, ಸ್ಪೀಡ್ ಬ್ರೇಕರ್, ಬ್ಯಾರಿ ಗೇಟ್ ಗಳನ್ನು ಅಳವಡಿ ಸಂಭಾವ್ಯ ಅಪಘಾತ ತಡೆಯಲು ಕ್ರಮ ವಹಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಕಡಲ್ಕೊರೆತ ಬಾದಿತ ಪ್ರದೇಶಗಳ ಕಡಲ್ಕೊರೆತ ತಡೆಗೆ ಯೋಜನೆ ಸಿದ್ಧಪಡಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಕಿಂಡಿ ಅಣೆಕಟ್ಟುಗಳಗೆ ಅಳವಡಿಸಲಾದ ಹಲಗೆಗಳನ್ನು ನೀರಿನ ಮಟ್ಟಕ್ಕೆ ಅನುಗುಣವಾಗಿ ತೆರವುಗೊಳಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆಗಾಲದ ಸಂದರ್ಭದಲ್ಲಿ ಕೆರೆ, ತೋಡು, ನದಿಗಳು ಅಪಾಯಕಾರಿ ಮಟ್ಟವನ್ನು ಮೀರಿ ನೀರು ಹರಿಯುವುದು ಸ್ವಾಭಾವಿಕ ಇಂತಹ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ತುರ್ತು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವುದು ಇದಕ್ಕೆ ಅವಶ್ಯಕತೆ ಇರುವ ಪೂರಕ ಸಲಕರಣೆಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವಂತೆ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಡಾ.ಪ್ರತಿಭಾ ಆರ್., ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ ಹಾಗೂ ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕಾಪು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಮೇ.24 : ಅಮೋಘ (ರಿ.) ಉಡುಪಿ ವತಿಯಿಂದ ಸಾಮರಸ್ಯ ಪ್ರಶಸ್ತಿ ಪುರಸ್ಕಾರ

Posted On: 21-05-2025 03:41PM

ಉಡುಪಿ‌ : ಸಾಂಸ್ಕೃತಿಕ -ಸಾಮಾಜಿಕ-ಸಾಹಿತ್ಯಿಕ ಸಂಸ್ಥೆಯಾದ ಅಮೋಘ (ರಿ.) ಉಡುಪಿ ವತಿಯಿಂದ "ಸಾಮರಸ್ಯ ಪ್ರಶಸ್ತಿ ಪುರಸ್ಕಾರ" ಕಾರ್ಯಕ್ರಮ ಮೇ.24, ಶನಿವಾರದಂದು ಸಂಜೆ ಗಂಟೆ 4ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜರಗಲಿದೆ.

ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಚಿತ್ರದುರ್ಗ ಇದರ ಪೀಠಾಧಿಪತಿಗಳಾದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಯವರು ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿದ್ವಾಂಸರಾದ ಡಾ|| ಪಾದೆಕಲ್ಲು ವಿಷ್ಣು ಭಟ್ ವಹಿಸಲಿದ್ದು, ಮಾಹೆ, ಮಣಿಪಾಲ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್ ಬಲ್ಲಾಳ್ ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ, ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉಡುಪಿ ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರಾದ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಉಡುಪಿ ಎಂ.ಜಿ.ಎಂ. ಕಾಲೇಜು ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ್ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಲೇಖಕಿ ಪೂರ್ಣಿಮಾ ಸುರೇಶ್ ರವರ 2024ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಸಂತೆಯೊಳಗಿನ ಏಕಾಂತ, ಪೂರ್ಣಿಮಾ ಸುರೇಶ್ ರವರ ಪಾರ್ವತಿ ಜಿ. ಐತಾಳ್ ಅನುವಾದಿಸಿರುವ ದಿ ಅಕ್ವೇರಿಯಂ ಕೃತಿ‌ ಬಿಡುಗಡೆಯಾಗಲಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಂಎಫ್ ನಿರ್ದೇಶಕರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ

Posted On: 21-05-2025 03:18PM

ಕಾಪು : ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿ. ಬೆಂಗಳೂರು ಇದರ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರು ಆಯ್ಕೆಗೊಂಡಿದ್ದಾರೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿರುವ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಮಂಗಳವಾರ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯ ಕೆಎಂಎಫ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾ ಯಿತು. ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಶಿಫಾರಸ್ಸಿನ ಮೂಲಕ ಈ ಆಯ್ಕೆ ನಡೆದಿದೆ.

ಈ ಮೊದಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಡಾ.ಎಂ. ಎನ್. ರಾಜೇಂದ್ರಕುಮಾ‌ರ್ ನೇತೃತ್ವದ ಹೈನುಗಾರರ ಬಳಗದ 13 ಮಂದಿ ನಿರ್ದೆಶಕರು ಆಯ್ಕೆಗೊಂಡಿದ್ದು, ಬಳಿಕ ಡಾ.ಎಂಎನ್ ಆರ್ ಬಳಗದ ರವಿರಾಜ ಹೆಗ್ಡೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇದೀಗ ಡಾ.ದೇವಿಪ್ರಸಾದ್ ಶೆಟ್ಟಿಯವರು ಕೂಡ ರಾಜೇಂದ್ರ ಕುಮಾರ್ ಅವರ ಶಿಫಾರಸ್ಸಿನ ಮೂ ಲಕ ರಾಜ್ಯ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಹಾಗೂ ಎಸ್‌ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಬೆಳಪು ವ್ಯವಸಾಯ ಸೇವಾ ಸಹಕಾರ ಸಂಘ, ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ

Posted On: 21-05-2025 02:57PM

ಉಚ್ಚಿಲ : ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ಮೂಲಕ ಗುಣಾತ್ಮಕ ಶಿಕ್ಷಣ ನೀಡುವ ಕನಸು. 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಳಪು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ನಡೆಸಲ್ಪಡುವ ಬೆಳಪುವಿನ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ.ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿ ಈಗಾಗಲೇ ಪಾಲಿಟೆಕ್ನಿಕ್ ಕಾಲೇಜು, ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಗತಿಯಲ್ಲಿದೆ. ಕೈಗಾರಿಕಾ ಪಾಕ್೯ ಕಾರ್ಯಾಚರಿಸುತ್ತಿದೆ. ಬೆಳಪು ಗ್ರಾಮ ಬಡ ಗ್ರಾಮವಾಗಿದ್ದು ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೈಕ್ಷಣಿಕ, ಕೈಗಾರಿಕೆ, ಉದ್ಯೋಗ, ವಸತಿಯ ಯೋಜನೆಯ ಅವಕಾಶ ಸಿಗಬೇಕಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಉತ್ತಮ ಮೌಲ್ಯಾಧಾರಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಇದರ ಪಕ್ಕದಲ್ಲಿಯೇ 17 ಎಕರೆಯಲ್ಲಿ ಐಪಿಎಲ್ ಮಾದರಿಯ ಕ್ರೀಡಾಂಗಣಕ್ಕೆ ಕ್ರಿಕೆಟ್ ಬೋರ್ಡ್ ಸಮ್ಮತಿಸಿದ್ದು, ಜಿಲ್ಲಾಧಿಕಾರಿ ಜಾಗವನ್ನು ಮೀಸಲಿರಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅವಕಾಶದ ಜೊತೆಗೆ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರು.

ಬೆಳಪು ಗ್ರಾ.ಪಂ. ಉಪಾಧ್ಯಕ್ಷರಾದ ಶೋಭಾ ಭಟ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಮನೋಹರ್, ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಕುಮಾರ್, ಸುಲೇಮಾನ್, ಸೌಮ್ಯ, ರೂಪ, ನಫೀಸ ಮತ್ತಿತರರು ಉಪಸ್ಥಿತರಿದ್ದರು. ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಎಚ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಪೂರ್ಣಿಮ ಚೂರಿ ಪ್ರಸ್ತಾವನೆಗೈದರು. ಸಂತೋಷ್ ಕುಮಾರ್ ನಿರೂಪಿಸಿ, ವಂದಿಸಿದರು.

ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಶ್ರೀನಿವಾಸ ಉಪಾಧ್ಯಾಯ ಭೂಮಿ ಪೂಜೆಯ ವಿಧಿ ವಿಧಾನ ನೆರವೇರಿಸಿ, ಬೆಳಪು ಖತೀಬ್ ಮಿನಾರ ಮಸೀದಿ ಧರ್ಮಗುರು ಎಂ.ಡಿ.ಅರ್ಷಾದ್ ರೇಝ ದುವಾ ನೆರವೇರಿಸಿದರು.

1 ಕೋಟಿ ಅನುದಾನದಲ್ಲಿ ನಡ್ಸಾಲು - ನಡಿಪಟ್ನ ಕಡಲ ತೀರದಲ್ಲಿ ಪ್ರತಿಬಂಧಕ ಕಾಮಗಾರಿಗೆ ಗುದ್ದಲಿ ಪೂಜೆ

Posted On: 20-05-2025 07:08PM

ಪಡುಬಿದ್ರಿ : ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಾಲು - ನಡಿಪಟ್ನ ಕಡಲ ತೀರದಲ್ಲಿ ರಿಪ್ - ರ‍್ಯಾಪ್ ತುರ್ತು ಪ್ರತಿಬಂಧಕ ಕಾಮಗಾರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಮಂಗಳವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಹೇಮಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾಶ್ರೀ, ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶೋಭಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಕಾಪು ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

Posted On: 19-05-2025 06:17PM

ಕಾಪು : ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಪು ತಾಲೂಕಿನ ಬಗರ್ ಹುಕುಂ (ಅಕ್ರಮ - ಸಕ್ರಮ) ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಸೋಮವಾರ ಕಾಪು ತಹಸೀಲ್ದಾರ ಕಚೇರಿಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನಮೋನೆ 57 ಅಡಿಯಲ್ಲಿ ಸಲ್ಲಿಸಿದ 10 ಕಡತಗಳಿಗೆ ಮಂಜೂರಾತಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿಗಳು ಕಾಪು ತಹಶೀಲ್ದಾರರಾದ ಡಾ.ಪ್ರತಿಭಾ ಆರ್., ಅಕ್ರಮ ಸಕ್ರಮ ಸಮಿತಿ ಸದಸ್ಯರುಗಳಾದ ದಿನೇಶ್ ಕೋಟ್ಯಾನ್, ಆನಂದ ಕೊರಂಗ್ರಪಾಡಿ, ಮಾರ್ಗರೇಟ್ ಸೀಮಾ ಡಿಸೋಜಾ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.