Updated News From Kaup
ಕುಡುಬಿ ಸಮುದಾಯದ ಕಲಾವಿದರ ಬಗ್ಗೆ ಪಠ್ಯವಾಗಲಿ : ಡಾ. ಜಾನಪದ ಎಸ್ ಬಾಲಾಜಿ
Posted On: 28 Feb 2026, 02:15 PM
ಉಡುಪಿ : ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಮಾತನಾಡುತ್ತಾ, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ. ಕುಡುಬಿ ಸಮುದಾಯಗಳ ಪಾರಂಪರಿಕ ಆಚರಣೆಗಳು, ಮೌಕಿಕ ಪರಂಪರೆ ಹಾಗೂ ಪ್ರದರ್ಶನ ಕಲೆಗಳ ಕುರಿತು ಪಠ್ಯಆಗಬೇಕು ಹಾಗೂ ಪ್ರತ್ಯೇಕ ಕರ್ನಾಟಕ ಬುಡಕಟ್ಟು ಅಕಾಡೆಮಿ ಸ್ಥಾಪನೆಯಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ಗಣೇಶ್ ಗಂಗೊಳ್ಳಿ, ಜನಪದ ಹಾಗೂ ಬುಡಕಟ್ಟು ಕಲಾವಿದರ ಕುರಿತು ಉಡುಪಿ ಜಿಲ್ಲಾಧ್ಯಂತ ಸಮೀಕ್ಷೆ ಕೈಗೊಳ್ಳಲಾಗುವುದು ದಶಮಾನೋತ್ಸವ ಅಂಗವಾಗಿ ಗ್ರಾಮ ಘಟಕಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಕುಡುಬಿ ಹೋಳಿ ಕಲಾವಿದರಾದ ಶೀನ ನಾಯ್ಕ್ ಮಂಡಕರ ಹಾಗೂ ರಾಮಣ್ಣ ನಾಯ್ಕ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕುಡುಬಿ ಸಮುದಾಯದ ನೃತ್ಯ ಪ್ರದರ್ಶನ ಹಾಗೂ ಕೋಲಾಟವನ್ನು ಏರ್ಪಡಿಸಲಾಗಿತ್ತು.
ದೇಗುಲದ ಟ್ರಸ್ಟಿ ರಾಜಾರಾಮ್ ಶೆಟ್ಟಿ, ಪ್ರತಾಪ್ ಶೆಟ್ಟಿ ಕೊಳ್ಕೆಬೈಲು, ಜಿಲ್ಲಾ ಪ್ರ. ಕಾರ್ಯದರ್ಶಿ ರಾಘವೇಂದ್ರ ಪ್ರಭು ಕವಾ೯ಲು, ಸದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ
Posted On: 26 Feb 2026, 07:11 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಳದ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಸಾನಿಧ್ಯದಲ್ಲಿ ಫೆ. 28ರಿಂದ ಮಾ. 2ರವರೆಗೆ ಜರಗಲಿರುವ ಕಾಪುವಿನ ಅಮ್ಮನ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ - ಮಾತೃ ವೈಭವಕ್ಕೆ ಪೂರ್ವಭಾವಿಯಾಗಿ ಗುರುವಾರ ಸಂಜೆ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಶೋಭಾಯಾತ್ರೆ ವೈಭವದಿಂದ ಜರಗಿತು.
ಕಾಪು ಉಳಿಯಾರಗೋಳಿ ದಂಡತೀರ್ಥ ಮಠದ ಬಳಿಯಿಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಕಾಪು ಮಾರಿಯಮ್ಮನ ಭಕ್ತಾಧಿಗಳು, ಕಾಪುವಿನ ಅಮ್ಮನ ಮಕ್ಕಳು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಮಾತೃವೈಭವ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಹೊರೆಕಾಣಿಕೆ ಸಮರ್ಪಣಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಮೀದ್ ಪಡುಬಿದ್ರಿ ಆಯ್ಕೆ
Posted On: 20 Feb 2026, 03:06 PM
ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾಪು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಮೀದ್ ಪಡುಬಿದ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತದ ಪುಂಡಲೀಕ ಮರಾಠೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ವಿಜಯವಾಣಿಯ ಹೇಮನಾಥ ಪಡುಬಿದ್ರಿ, ಕೋಶಾಧಿಕಾರಿಯಾಗಿ ಸ್ಪಂದನಾ ಟಿವಿಯ ಸಂತೋಷ್ ನಾಯ್ಕ್, ಕಾರ್ಯದರ್ಶಿಯಾಗಿ ಉದಯವಾಣಿಯ ಸತೀಶ್ಚಂದ್ರ ಶೆಟ್ಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
7 ಜನ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಸಂಘದ ಸದಸ್ಯರು ಆಯ್ಕೆ ಆಗಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಸಹಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪೆರ್ಡೂರು : ನಿವೃತ್ತ ಯೋಧ ರಮೇಶ್ ಕುಲಾಲರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ
Posted On: 14 Feb 2026, 04:29 PM
ಉಡುಪಿ : ದೂಪದಕಟ್ಟೆ ಬೈರಂಪಳ್ಳಿಯ ನಿವಾಸಿ, ಭಾರತೀಯ ಸೇನೆಯಲ್ಲಿ ಸುದೀರ್ಘ ವರ್ಷದ ಸೇವೆ ಮಾಡಿ ನಿವೃತ್ತಿ ಹೊಂದಿದ ಯೋಧ ರಮೇಶ್ ಕುಲಾಲರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮವು ಶ್ರೀ ವಾಸುಕಿ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ, ದೂಪದ ಕಟ್ಟೆ ಪೆರ್ಡೂರು ಮುಂದಾಳತ್ವದಲ್ಲಿ ಗ್ರಾಮಸ್ಥರ ಉಪಸ್ಥಿತಿಯಲ್ಲಿ, ರಮೇಶ್ ಕುಲಾಲರ ಅಭಿಮಾನಿ ಬಳಗದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದು ಪೆರ್ಡೂರು ದೂಪದ ಕಟ್ಟೆ ಬೈರಂಪಳ್ಳಿಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಪೆರ್ಜೆ, ಭೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿಯಾನಂದ ಹೆಗ್ಡೆ, ಕುಂಬಾರರ ಗುಡಿ ಕೈಗಾರಿಕಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಸಂತೋಷ್ ಕುಲಾಲ್ ಪಕ್ಕಾಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೂಪದಕಟ್ಟೆಯ ಮುಖ್ಯೋಪಾಧ್ಯಾಯ ಗೋಪಾಲ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ್, ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಅಗ್ಗರಟ್ಟ, ದೀಪಕ್ ಬೆಳ್ಮಣ್, ರಾಮ ಕುಲಾಲ್ ಪಕ್ಕಾಲು, ಗಣೇಶ್ ಕುಲಾಲ್ ಪಕ್ಕಾಲು, ಕೃಷ್ಣ ಕುಲಾಲ್ ಪೆರ್ಡೂರು, ರೇಷ್ಮಾ ಶೆಟ್ಟಿ ಇನ್ನ, ಗೋವಿಂದ ಕುಲಾಲ್ ದೂಪದಕಟ್ಟೆ, ಸುರೇಶ್ ಡಿ ಕುಲಾಲ್, ಸುಕೇಶ್ ಶೆಟ್ಟಿ, ನಾಗೇಶ್ ಕುಲಾಲ್ ಸೇರಿದಂತೆ ರಮೇಶ್ ಕುಲಾಲ್ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಸಂಘಟಕ ಸುಭಾಸ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ, ಸುಧಾಕರ್ ಕುಲಾಲ್ ಪಟ್ಲ ವಂದಿಸಿದರು.
ಓಮಾನ್ ಲ್ಲಿ ರಸ್ತೆ ಅಪಘಾತ : ಕಾಪುವಿನ ಕಳತ್ತೂರು ನಿವಾಸಿ ಚೇತನ್ ಸಾವು
Posted On: 10 Feb 2026, 07:33 PM
ಕಾಪು : ದುಡಿಮೆ ಅರಸಿ ಗಲ್ಪ್ ರಾಷ್ಟ್ರದ ಓಮನ್ ನಲ್ಲಿದ್ದ ಕಳತ್ತೂರಿನ ಚೇತನ್ ಕುಲಾಲ್ ಭೀಕರ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ.
ಎರಡು ದಿನದಲ್ಲಿ ಚೇತನ್ ಪಾರ್ಥಿವ ಶರೀರ ಕಳತ್ತೂರು ಮನೆಗೆ ಬರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಚೇತನ್ ಕುಲಾಲ್ ಎಳವೆಯಲ್ಲಿಯೇ ತಾಯಿಯನ್ನು ಕಳೆದು ಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳೆದವರು. ಸಹೋದರಿ ಮತ್ತು ಕುಟುಂಬವರ್ಗ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಉಡುಪಿ : ಜೇಸಿ ವಲಯ 15 ಘಟಕಾಧಿಕಾರಿಗಳ ತರಬೇತಿ ಕಮ್ಮಟ ಸಂಪನ್ನ
Posted On: 10 Feb 2026, 07:30 PM
ಉಡುಪಿ : ಜೆಸಿಐ ಭಾರತ ವಲಯ ಹದಿನೈದು ಇದರ ವತಿಯಿಂದ ಜೆಸಿಐ ಉಡುಪಿ ಸಿಟಿ ಇದರ ಆಥಿತ್ಯದಲ್ಲಿ ಘಟಕಾಧಿಕಾರಿಗಳ ತರಬೇತಿ ಕಮ್ಮಟ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಫೆ.7 ಮತ್ತು 8ರಂದು 2 ದಿನಗಳ ಕಾಲ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಲಯ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಜೆಸಿ ಸಂಸ್ಥೆಯು ತರಬೇತಿಯ ಮೂಲಕ ವ್ಯಕ್ತಿತ್ವದಲ್ಲಿ ಬದಲಾವಣೆ ತರುವಲ್ಲಿ ಅಪೂರ್ವವಾವಾಗಿ ಕಾರ್ಯನಿರ್ವಹಿಸುತ್ತಿದೆ. ಜಗತ್ತಿನಲ್ಲಿ ವಿವಿಧ ಸಂಸ್ಥೆಗಳು ಇದ್ದರೂ ವ್ಯಕ್ತಿತ್ವ ವಿಕಸನಕ್ಕಾಗಿ ಇರುವ ಏಕೈಕ ಸಂಸ್ಥೆ ಜೆ ಸಿ ಐ. ಘಟಕ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಈ ತರಬೇತಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಲಯ ಆಡಳಿತ ವಿಭಾಗದ ನಿರ್ದೇಶಕ ಸುಹಾಸ್ ಮರಿಕೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ತರಬೇತುದಾರರಾದ ಅಂತರಾಷ್ಟ್ರೀಯ ತರಬೇತಿದಾರ ಪ್ರಮೋದ್ ಕುಮಾರ್, ಸಹ ತರಬೇತಿದಾರರಾದ ರಾಕೇಶ್ ಹೊಸಬೆಟ್ಟು, ಸುಧಾಕರ್ ಕಾರ್ಕಳ, ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ, ನಿಕಟ ಪೂರ್ವ ವಲಯ ಅಧ್ಯಕ್ಷ ಅಭಿಲಾಶ್, ವಲಯ ಕಾರ್ಯದರ್ಶಿ ಪ್ರಶಾಂತ್, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಕಾರ್ಯಕ್ರಮ ನಿರ್ದೇಶಕ ಕಿರಣ್ ಭಟ್ ಮುಂತಾದವರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ತರಬೇತಿಯಲ್ಲಿ ವಿವಿಧ ಘಟಕದ ಸುಮಾರು 200 ಘಟಕ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಯಕ್ಷಗಾನ: ಸಾಂಸ್ಕೃತಿಕ ಪಲ್ಲಟ ಮತ್ತು ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಕಲೆ
Posted On: 10 Feb 2026, 07:25 PM
ಯಕ್ಷಗಾನವು ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರಕಲೆ ಎಂಬ ನಾಲ್ಕು ಪ್ರಧಾನ ಕಲಾಮಾಧ್ಯಮಗಳ ಸಮನ್ವಯದಿಂದ ರೂಪುಗೊಂಡಿರುವ ಒಂದು ಅಪರೂಪದ ಸಮ್ಮಿಶ್ರ ಕಲೆ. ಇದರಲ್ಲಿ ಪ್ರತಿಯೊಂದು ಅಂಶವೂ ಪರಸ್ಪರ ಅವಲಂಬಿತವಾಗಿದ್ದು, ಒಂದು ಅಂಶ ಕುಂದಿದರೂ ಸಂಪೂರ್ಣ ಕಲೆಯ ಸೌಂದರ್ಯ, ಮೂಲತತ್ವ ಮತ್ತು ಗುಣಮಟ್ಟಕ್ಕೆ ಧಕ್ಕೆ ಉಂಟಾಗುತ್ತದೆ. ಯಕ್ಷಗಾನ ಕೇವಲ ಮನರಂಜನೆಗಾಗಿ ಹುಟ್ಟಿದ ಕಲೆಯಲ್ಲ; ಅದು ಭಕ್ತಿ, ನೀತಿ ಮತ್ತು ಧರ್ಮಬೋಧನೆಯ ಜೀವಂತ ವೇದಿಕೆಯಾಗಿದೆ.
ಓರ್ವ ಅನಿವಾಸಿ ಭಾರತೀಯನಾಗಿ, ಹವ್ಯಾಸಿ ಮೇಳಗಳ ಯಕ್ಷಗಾನದ ತುಣುಕುಗಳನ್ನು ಆಗಾಗ ಯೂಟ್ಯೂಬ್ನಲ್ಲಿ ನೋಡುತ್ತಿದ್ದರೂ, ಇತ್ತೀಚಿಗೆ ಊರಿಗೆ ಹೋದಾಗ ಹಲವು ಹರಕೆಯ ಯಕ್ಷಗಾನ ಪ್ರಸಂಗಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಒಟ್ಟಾರೆಯಾಗಿ, ನನಗೆ ಬಾಲ್ಯದಲ್ಲಿ ನೋಡಿದ್ದ ಯಕ್ಷಗಾನಕ್ಕೂ, ಈಗಿನ ಯಕ್ಷಗಾನಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬಂದು ನಿರಾಸೆಯಾಯಿತು.
ಒಂದು ಕಾಲದಲ್ಲಿ ರಾತ್ರಿಯಿಡೀ ಜರುಗುವ ಜಗತ್ತಿನ ಏಕೈಕ ಕಲೆಯೆಂದು ಹೆಗ್ಗಳಿಕೆ ಗಳಿಸಿದ್ದ ಕರಾವಳಿಯ ಈ ಪುರಾತನ ಕಲೆ, ಇತ್ತೀಚಿನ ಪರ್ವದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಸಂದೇಹ ಸವಾಲಾಗುತ್ತಿದೆ. ಹಿಂದೆ ಅತಿರಥ-ಮಹಾರಥಿ ಪಾತ್ರಧಾರಿಗಳು ತಮ್ಮ ಅಪೂರ್ವ ಅಭಿನಯ,ತರ್ಕಬದ್ಧ ವಾಗ್ವದ ಹಾಗೂ ಚೆಂಡೆಯ ಅಬ್ಬರದೊಂದಿಗೆ ಪ್ರೇಕ್ಷಕರನ್ನು ಯಕ್ಷಲೋಕದ ಮಾಯಾಲೋಕದಲ್ಲಿ ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಆದರೆ ಇತ್ತೀಚಿನ ಪ್ರದರ್ಶನಗಳಲ್ಲಿ ಕಲೆಗಿಂತ ವ್ಯಾವಹಾರಿಕತೆ ಮೇಲುಗೈ ಸಾಧಿಸುತ್ತಿದೆ. ರಂಗಸ್ಥಳದ ಮೇಲೆ ಕಲಾವಿದ ತೋರಬೇಕಾದ ಗಾಂಭೀರ್ಯದ ಬದಲು ನೀರಸತನ ಮತ್ತು ಆತುರ ಎದ್ದು ಕಾಣುತ್ತಿದೆ.
ಕರಾವಳಿಯ ಈ ಜೀವಂತ ಕಲೆಗೆ ಹೊಸ ಮೇಳಗಳು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹವಾದರೂ, ಮುಖ್ಯವಾಗಿ ಯುವ ಕಲಾವಿದರಲ್ಲಿ ಅಭಿನಯ, ನೃತ್ಯ ಮತ್ತು ಸಂಭಾಷಣೆಗಳ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಹಾಡುಗಾರಿಕೆಯಲ್ಲಿ ಹಾಗೂ ವೇಷಭೂಷಣಗಳಲ್ಲಿ ಸಕಾರಾತ್ಮಕ ವಿಭಿನ್ನತೆ ಬದಲಾವಣೆಗಳಾಗುತ್ತಿದ್ದರೂ, ಮಾತುಗಾರಿಕೆ, ಸಂಭಾಷಣೆಯ ಶುದ್ಧತೆ ಮತ್ತು ಮುಖವರ್ಣಿಕೆಯಲ್ಲಿ ಕಳಪೆತನ ಕಾಣಿಸುತ್ತಿದೆ. ಇತ್ತೀಚಿಗೆ ಸಮಾಜದಲ್ಲಿ ಧಾರ್ಮಿಕ ಅರಿವು ಮೂಡಿಸುವುದಕ್ಕಿಂತ, ತೋರಿಕೆಯ ಆಡಂಬರದ ಆಚರಣೆಗಳ ವಾಡಿಕೆ ಹೆಚ್ಚಾಗುತ್ತಿದೆ. ಸ್ಥಳೀಯ ನಂಬಿಕೆಯಾದ ಭೂತಾರಾಧನೆಗೆ ಪ್ರಚಾರದ ಅಗತ್ಯವಿಲ್ಲದಿದ್ದರೂ, ಸಿನಿಮೀಯ ಪ್ರಭಾವದ ವ್ಯಾವಹಾರಿಕ ದೃಷ್ಟಿಯಿಂದ ದುರುಪಯೋಗಕ್ಕೊಳಗಾಗುವಂತೆ ಯಕ್ಷಗಾನಕ್ಕೂ ಇಂತಹ ಪರಿಸ್ಥಿತಿ ಒದಗಬಾರದು.
ಅಪಮೌಲ್ಯಗೊಳ್ಳುತ್ತಿರುವ ಪೌರಾಣಿಕ ಹಿನ್ನೆಲೆ: ಇಂದಿನ ಪ್ರದರ್ಶನಗಳಲ್ಲಿ ದೇವತೆಗಳನ್ನು ಅಥವಾ ಧಾರ್ಮಿಕ ಮೌಲ್ಯಗಳನ್ನು ಚಿತ್ರಿಸುವ ರೀತಿ ಆತಂಕಕಾರಿಯಾಗಿದೆ. ವಿಶೇಷವಾಗಿ ರಾಕ್ಷಸ ಪಾತ್ರಗಳ ಮೂಲಕ ದೇವತೆಗಳನ್ನು, ಬ್ರಾಹ್ಮಣರನ್ನು ಹಾಗೂ ಸನಾತನ ಧರ್ಮವನ್ನೇ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಭಾಷಣೆಗಳಲ್ಲಿ ಇತರ ಪಾತ್ರಧಾರಿಗಳ ಸಂಭಾವನೆ, ವೃತ್ತಿ ಅಥವಾ ಸಮುದಾಯಗಳ ನಿಂದನೆಯನ್ನು ಕೇವಲ ಅಗ್ಗದ ಶಿಳ್ಳೆಗಾಗಿ ತುರುಕಲಾಗುತ್ತಿದೆ. ಪೌರಾಣಿಕವಾಗಿ ರಾಕ್ಷಸರು ಧರ್ಮವಿರೋಧಿಗಳಾದರೂ, ಅವರು ಶಿವಭಕ್ತರಾಗಿರುತ್ತಿದ್ದರು ಮತ್ತು ಅವರ ತರ್ಕವು ತಾತ್ವಿಕವಾಗಿರುತ್ತಿತ್ತು. ಆದರೆ ಈಗ ತಾತ್ವಿಕತೆ ಕಣ್ಮರೆಯಾಗಿ, ಕೇವಲ ಅಗ್ಗದ ಹಾಸ್ಯ ಹಾಗೂ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಸಂಭಾಷಣೆಗಳು ಇಳಿದಿವೆ. ಸತ್ಯಯುಗದ ಕಥೆಗಳಲ್ಲಿ ತ್ರೇತಾಯುಗದ ಘಟನೆಗಳನ್ನು ಬೆರೆಸುವುದು, ಪುರಾಣಗಳ ಮೂಲ ಜ್ಞಾನವಿಲ್ಲದೆ ಮಾತನಾಡುವುದು ಕಲಾವಿದರ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ನಿರ್ಬಂಧ ಮತ್ತು ಗುಣಮಟ್ಟದ ಕುಸಿತ: ಧ್ವನಿವರ್ಧಕ ಬಳಕೆಯ ಮೇಲಿನ ನಿರ್ಬಂಧಗಳಿಂದಾಗಿ ಯಕ್ಷಗಾನದ ಅವಧಿಯನ್ನು ಕಡಿತಗೊಳಿಸಲಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಬಯಲಾಟಗಳು ಈಗ ಕಾಲಮಿತಿಯ ಪ್ರದರ್ಶನಗಳಾಗಿವೆ. ಅನ್ಯರ ಧ್ವನಿವರ್ಧಕದ ಅಬ್ಬರವನ್ನು ತಡೆಯಲು ಹೋಗಿ, ನಮ್ಮ ಸಂಸ್ಕೃತಿಯ ಭಾಗವಾದ ಯಕ್ಷಗಾನವನ್ನೇ ಅರ್ಧಗೊಳಿಸಿರುವುದು ಬೇಸರದ ವಿಷಯ. ಆದರೂ, ಕಳಪೆ ಗುಣಮಟ್ಟದ ಸಂಭಾಷಣೆ ಮತ್ತು ಅಸಂಬದ್ಧ ಹಾಸ್ಯವನ್ನು ರಾತ್ರಿಯಿಡೀ ಸಹಿಸಿಕೊಳ್ಳುವುದಕ್ಕಿಂತ ಸಂಕ್ಷಿಪ್ತ ಪ್ರದರ್ಶನವೇ ಲೇಸು ಎಂಬ ಮನಸ್ಥಿತಿಗೆ ಪ್ರೇಕ್ಷಕರು ಬರುತ್ತಿದ್ದಾರೆ. ಸಂಪೂರ್ಣ ಯಕ್ಷಗಾನವನ್ನು ನೋಡಿ ಧನ್ಯತಾ ಭಾವದಿಂದ ಮರಳುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಲೆ, ಧರ್ಮ ಹಾಗೂ ನಂಬಿಕೆಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಕಲಾವಿದರ ಕಡೆಗಣನೆ ಮತ್ತು ಸರ್ಕಾರದ ನಿರ್ಲಕ್ಷ್ಯ: ಸಮಾಜದ ಸ್ವಾಸ್ಥ್ಯ ಕೆಡಿಸುವ ಧಾರಾವಾಹಿ ಅಥವಾ ಚಲನಚಿತ್ರ ಕಲಾವಿದರಿಗೆ ಸಿಗುವ ಸಂಭಾವನೆ ಮತ್ತು ಗೌರವ, ಅಪಾರ ವಾಕ್ಚತುರ್ಯ ಹೊಂದಿರುವ ಯಕ್ಷಗಾನ ಕಲಾವಿದರಿಗೆ ಸಿಗುತ್ತಿಲ್ಲ. ಬಹುತೇಕ ಮೇಳಗಳು ದೇವಸ್ಥಾನಗಳಿಗೆ ಸೇರಿವೆ. ಭಕ್ತರು ನೀಡುವ ಕಾಣಿಕೆ ಸರ್ಕಾರಕ್ಕೆ ಸೇರುತ್ತಿದೆಯೇ ಹೊರತು, ಅದು ಭಕ್ತರ ಸವಲತ್ತಿಗಾಗಲಿ ಅಥವಾ ಕಲಾವಿದರ ಶ್ರೇಯೋಭಿವೃದ್ಧಿಗಾಗಲಿ ಬಳಕೆಯಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಿಗುವಂತೆ ಕಲಾವಿದರಿಗೂ ಗೌರವಯುತ ಸಂಭಾವನೆ, ಪಿಂಚಣಿ, ಜೀವವಿಮೆ ಮತ್ತು ಆರೋಗ್ಯ ಸವಲತ್ತುಗಳು ಸಿಗುವಂತಾಗಬೇಕು. ಇದರಿಂದ ಹೊಸ ತಲೆಮಾರಿನ ಪ್ರತಿಭಾವಂತರು ಯಕ್ಷಗಾನದತ್ತ ಒಲವು ತೋರಿ, ಶಿಸ್ತುಬದ್ಧವಾಗಿ ಸಾಂಪ್ರದಾಯಿಕತೆಯನ್ನು ಕಲಿತು ಕಲೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.
ಯಕ್ಷಗಾನ ಉಳಿಯಬೇಕೆಂದರೆ ಅದು ಕೇವಲ ವೇದಿಕೆಯ ಮೇಲಲ್ಲ, ಮೌಲ್ಯಗಳಲ್ಲಿ ಉಳಿಯಬೇಕು. ಧರ್ಮವನ್ನು ಪ್ರಶ್ನಿಸುವುದು ತಪ್ಪಲ್ಲ, ಆದರೆ ಯಾರನ್ನೂ ಅವಮಾನಿಸುವುದು ಕ್ಷಮಾರ್ಹವಲ್ಲ. ಮತ್ತು ಅದನ್ನು ಕೇವಲ ವ್ಯಾಪಾರಕ್ಕಾಗಿ ಬಳಸುವುದು ಯಕ್ಷಗಾನದ ಹಾಗೂ ಧರ್ಮದ ಅವನತಿಗೆ ನಾಂದಿಯಾಗುತ್ತದೆ. ಸನಾತನ ಧರ್ಮದ ನೀತಿಗಳನ್ನು ಜನರಿಗೆ ತಲುಪಿಸುವ ಈ ಕಲೆ 'ಅಗ್ಗದ ಮನರಂಜನೆ'ಯಾಗದಂತೆ ತಡೆಯಬೇಕಾದ ಜವಾಬ್ದಾರಿ ಸಂಘಟಕರು, ಕಲಾವಿದರು ಮತ್ತು ಭಕ್ತರ—ಎಲ್ಲರ ಮೇಲೂ ಇದೆ. ಇದು ಕೇವಲ ಕಲೆಯ ಪ್ರಶ್ನೆಯಲ್ಲ, ನಮ್ಮ ಸಂಸ್ಕೃತಿಯ ಧರ್ಮದ ಅಸ್ತಿತ್ವದ ಪ್ರಶ್ನೆ.
ಕಾಪು : ಪುಣ್ಯಗಳ ಪರ್ವತದ ಮಾಸ, ರಮಝಾನ್ ಮಾಸ
Posted On: 08 Feb 2026, 11:29 PM
ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮಝಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತ್ತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿ ಯವರು ಹೇಳಿದರು.
ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ ಯಲ್ಲಿ ಕಾಪು ಜಮಾ ಅತೆ ಇಸ್ಲಾಮೀ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಒರ್ಗನೈಜೆಷನ್ (ಎಸ್. ಐ. ಓ) ಹಮ್ಮಿಕೊಂಡಿದ್ದ ರಮಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತಾಡಿದರು.
ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿಯೇ ಇರಬೇಕು. ಸದಾ ನಮ್ಮ ಹೃದಯವನ್ನು ಸ್ವಚ್ಚವಾಗಿರಿಸಬೇಕು. ಸಂಬಂಧಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ನಮ್ಮಿಂದ ಆಗಿರುವ ತಪ್ಪನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆಯಾಚಿಸಬೇಕು. ನಮ್ಮ ಗರಿಷ್ಠ ಸಮಯ ಕುರ್ ಆನ್ ಅಧ್ಯಯನಕ್ಕೆ ಮೀಸಲಾಗಿಡಬೇಕು. ಇದರಿಂದ ನಮಗೆ ಅಲ್ಲಾಹನ ಸಂಪ್ರೀತಿ ದೊರಕುವುದು. ಈ ಎಲ್ಲಾ ಗುಣಗಳನ್ನು ಮೈಗೂಡಿಸಿ ಕೊಳ್ಳಲು ರಮಝಾನ್ ಮಾಸ ಸೂಕ್ತವಾಗಿದೆ. ಹೀಗೆ ನಾವು ಮಾಡಿದರೆ ರಮಝಾನ್ ಮಾಸದ ಪುಣ್ಯಗಳನ್ನು ಪಡೆದು ಕೊಳ್ಳಬಹುದು. ಅದಕ್ಕಾಗಿ ಈ ಮಾಸದ ಸ್ವಾಗತಕ್ಕಾಗಿ ನಾವು ಸಿದ್ದರಾಗಿರಬೇಕು ಎಂದು ಹೇಳಿದರು.
ಎಸ್. ಐ. ಓ. ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ರವರು ಮಾತನಾಡಿ, ಕುರ್ ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಅದು ಜನರಿಗೆ ದೀಪಸ್ತಂಭದಂತೆ ಕತ್ತಲೆಯಲ್ಲಿ ಇರುವವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತದೆ.
ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಈ ಕುರ್ ಆನ್ ಅವತ್ತೀರ್ಣಗೊಂಡದ್ದು ರಮಝಾನ್ ಮಾಸದಲ್ಲಿ ಆಗಿದ್ದು, ರಮಝಾನ್ ಮಾಸ ಜನರನ್ನು ಒಳಿತಿನತ್ತ ಕೊಂಡೊಯ್ಯುತ್ತದೆ. ಕುರ್ ಆನ್ ನೊಂದಿಗೆ ಗಾಢ ಸಂಬಂಧ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಸಮಯ ಸೂಚಿ ಸಿದ್ದಪಡಿಸಿ ಅದರ ಪಠಣ, ಅನುವಾದ, ವ್ಯಾಖ್ಯಾನದ ಅಧ್ಯಯನ ಮಾಡಬೇಕು. ಇಂದಿನ ದಿನಗಳಲ್ಲಿ ಮೊಬೈಲ್ ಹಾವಳಿ ಜಾಸ್ತಿ ಆಗಿದ್ದು, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಮಾಸದಲ್ಲಿ ಪಣ ತೊಡಬೇಕು ಎಂದು ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ಎಸ್. ಐ. ಓ. ನ ಧ್ಯೇಯೋದ್ದೇಶ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಕಾರ್ಯ ಯೋಜನೆಯ ಬಗ್ಗೆ ಮತ್ತು ರಮಝಾನ್ ಮಾಸದ ಸ್ವಾಗತ ಯಾಕಾಗಿ ಎಂದು ವಿವರಿಸುತ್ತಾ ಪ್ರಾಸ್ತವಿಕವಾಗಿ, ಸ್ವಾಗತಿಸಿದರು.
ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಜದೀದ್ ಕಲಾನ್ ನ ಅಧ್ಯಕ್ಷರು ಜನಾಬ್ ಶಭಿ, ಅಹಮದ್ ಕಾಝಿ ಉಪಸ್ಥಿತರಿದ್ದರು.
ಹಾಫಿಜ್ ಎ ಕುರ್ ಆನ್ ಒಬಾದ ಜರ್ರಾರ್ ರವರ ಕುರ್ ಆನ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಎಸ್. ಐ.ಓ. ಸದಸ್ಯ ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
ಏ.23 - ಮೇ 4 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
Posted On: 08 Feb 2026, 11:20 PM
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಹಾಗೂ ಭಕ್ತರ ಸಭೆಯಲ್ಲಿ 2026ರ ಏ.23 ರಿಂದ ಮೊದಲ್ಗೊಂಡು ಮೇ 3 ರ ಪರ್ಯಂತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುನಃ ಪ್ರತಿಷ್ಣೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಿಸುವುದೆಂದು ನಿಶ್ಚಯಿಸಲಾಗಿದೆ.
ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ಮಾರ್ಗದರ್ಶನದಂತೆ ಏ. 29ರಂದು ಶ್ರೀಮಹಾಲಿಂಗೇಶ್ವರ ದೇವರ ಪುನ: ಪ್ರತಿಷ್ಠೆ ಮತ್ತು ಏ.30ಕ್ಕೆ ಶ್ರೀ ಮಹಾಗಣಪತಿ ದೇವರ ಪುನ: ಪ್ರತಿಷ್ಠೆ ಹಾಗೂ ಮೇ 2 ರಂದು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಾಭಿಷೇಕ, ಮೇ. 3 ರಂದು ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ. ಮೇ 4ರಂದು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಶ್ರೀದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಕಿನ್ಯಕ್ಕ ಬಳ್ಳಾಲ್, ಪೇಟೆ ಮನೆ ಭವಾನಿ ಶಂಕರ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ರಾವ್ ಉಪಸ್ಥಿತರಿದ್ದರು.
ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆ ಉದ್ಘಾಟನೆ ; ಸಾಧಕರಿಗೆ ಸನ್ಮಾನ
Posted On: 08 Feb 2026, 11:18 PM
ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆಯು ಪಾಂಡುರಂಗ ಟವರ್ ಫಸ್ಟ್ ಫ್ಲೋರ್ ಡಯಾನ ಸರ್ಕಲ್ ಕೋರ್ಟ್ ರೋಡ್ ಉಡುಪಿ ಇಲ್ಲಿ ಶುಭಾರಂಭಗೊಂಡಿತು.
ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ಅಖಿಲ ಭಾರತ ದೈವರಾಧಕರ ಒಕ್ಕೂಟದ (ರಿ.) ಕೇಂದ್ರೀಯ ಉಡುಪಿ ಜಿಲ್ಲೆ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ವಿಎಸ್ ಗ್ರೂಪ್ ನಮ್ಮ ಉಡುಪಿ ಟಿವಿ ನಿರ್ದೇಶಕರು, ತುಳುನಾಡು ವಾರ್ತೆ ವರದಿಗಾರರಾದ ವಿನೋದ್ ಶೆಟ್ಟಿ, ಜಹೀರ್ ಅಲಿ, ರಂಜಿತಾ ಶೇಟ್ ಜೊತೆಗೂಡಿ ಉದ್ಘಾಟಿಸಿದರು.
ಸನ್ಮಾನ : ಸದಾ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ನಿತ್ಯಾನಂದ ಒಳಕಾಡುರವರಿಗೆ ಹಾಗೂ
ಸಮಾಜ ಸೇವೆ, ದೈವಾರಾಧನೆ ಕ್ಷೇತ್ರ, ಸಹಕಾರಿ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ, ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರಾದ ವಿನೋದ್ ಶೆಟ್ಟಿವರಿಗೆ ಹಾಗೂ ರಂಜಿತಾ ಶೇಟ್, ಜಹೀರ್ ಅಲಿ ಮತ್ತಿತರ ಪ್ರಮುಖ ಸಾಧಕರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ, ಆಪೋಲಿನ ಡಿಸಿಲ್ವಾ, ಸುಶಾಂತ್, ಸೀನಿಯರ್ ಮ್ಯಾನೇಜರ್ ವಿರೇಶ್ ಬಿ ಸ್, ಉಡುಪಿ ಬ್ರಾಂಚ್ ಮ್ಯಾನೇಜರ್ ರೋಯಿಸ್ ಡಿಸಿಲ್ವಾ, ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಸುಭಾಷ್,
ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.
