Updated News From Kaup

ಪಡುಬಿದ್ರಿ : ಬಸ್ ಸ್ಟ್ಯಾಂಡ್ನನಲ್ಲಿ ದೊರೆತ ಚಿನ್ನವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ

Thumbnail
Posted On: 18 May 2026, 11:03 AM

ಪಡುಬಿದ್ರಿ : ಇಲ್ಲಿನ ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ರೂ. 50,000 ಮೌಲ್ಯದ ಚಿನ್ನವಿದ್ದ  ಬ್ಯಾಗನ್ನು ರಿಕ್ಷಾ ಚಾಲಕ ಮತ್ತು ಮಹಿಳೆಯೋರ್ವರು ಪಡುಬಿದ್ರಿ ಠಾಣೆಗೆ ಒಪ್ಪಿಸಿ ಮಾಲಿಕರಿಗೆ ಹಸ್ತಾಂತರಿಸಿದ್ದಾರೆ.

ರಿಕ್ಷಾ ಚಾಲಕ ಜಗದೀಶ ಮತ್ತು ಆಶಾಲತಾ ರವರು ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ಬ್ಯಾಗನ್ನು ತಕ್ಷಣ ಪಡುಬಿದ್ರಿ ಠಾಣೆಗೆ ತಂದು ನೀಡಿದ್ದರು. 

ತದನಂತರ ಬ್ಯಾಗಿನ ಮಾಲಕಿಯಾದ ಫಾತಿಮಾ  ಮಂಗಳೂರು ಇವರಿಗೆ  ಠಾಣಾಧಿಕಾರಿ ಸಕ್ತಿವೇಲು ಸಮ್ಮುಖ   ಹಸ್ತಾಂತರಿಸಲಾಯಿತು.

ಕಾರ್ಕಳ : ನಾರಿಶಕ್ತಿ ಜಾಗೃತಿ ಸಮಾವೇಶ, ಸಾಧಕಿಯರಿಗೆ ಸನ್ಮಾನ

Thumbnail
Posted On: 18 May 2026, 09:30 AM

ಕಾರ್ಕಳ : ಮಹಿಳಾ ಸಬಲೀಕರಣ ಎಂದರೆ ಕೇವಲ ಹಕ್ಕುಗಳಿಗಾಗಿ ಸದ್ದು ಮಾಡುವುದಲ್ಲ. ಬದಲಿಗೆ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯಯುತ ಅವಕಾಶಗಳನ್ನು ಪಡೆದುಕೊಳ್ಳುತ್ತಲೇ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಮುನ್ನಡೆಯುವುದಾಗಿದೆ ಎಂದು ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುರಭಿ ಹೊಡಿಗೆರೆ ಪ್ರತಿಪಾದಿಸಿದರು.
ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ನಾರಿಶಕ್ತಿ ಸಾಧಕ ಮಹಿಳೆಯರ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಆಧುನಿಕ ಸಮಾಜದಲ್ಲಿ ಮಹಿಳೆಗೆ ಕೇವಲ ಸುರಕ್ಷತೆ ಅಥವಾ ರಕ್ಷಣೆ ನೀಡಿದರೆ ಸಾಲದು. ಅದಕ್ಕಿಂತ ಹೆಚ್ಚಾಗಿ ಆಕೆಗೆ ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಬೆಳೆಯುವ ಪೂರಕ ವಾತಾವರಣ ಹಾಗೂ ಸಮಾನ ನ್ಯಾಯದ ಅಗತ್ಯವಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಕಾಲಿನ ಮೇಲೆ ತಾವು ನಿಂತು ಸ್ವಾವಲಂಬಿಗಳಾದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬ ಮಹಿಳೆಯೂ ತನ್ನ ಸೌಮ್ಯತೆಯ ಹಿಂದಿರುವ ನಾರಿಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಸಾಧ್ವಿ ಶ್ರೀ ಮಾತಾ ನಂದಮಯೀ ಅವರು ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರತಿ ಯುಗದಲ್ಲೂ ಮಹಿಳೆ ಕೇವಲ ಒಂದು ಪಾತ್ರವಾಗಿ ಉಳಿದಿಲ್ಲ, ಆಕೆ ಶಕ್ತಿಯಾಗಿ ಹೊರಹೊಮ್ಮಿದ್ದಾಳೆ. ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಮಹಿಳೆಯರನ್ನು ಸರಸ್ವತಿ, ಲಕ್ಷ್ಮಿಯಂತಹ ದೇವತೆಯ ರೂಪದಲ್ಲಿ ಆರಾಧಿಸುವ ಶ್ರೇಷ್ಠ ಪರಂಪರೆ ಇದೆ. ಇಂದಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯೇ ಅತ್ಯುನ್ನತ ಸ್ಥಾನದಲ್ಲಿದ್ದಾಳೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಮಹಿಳೆಯರು ಜನ್ಮತಃ ತ್ಯಾಗಮಯಿಗಳು ಮತ್ತು ಆದರ್ಶ ಜೀವನ ನಡೆಸುವವರು. ಇಂದು ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮುದುಡಿ ಕೂರದೆ ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಇಂತಹ ಸಾಧಕಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು. 

ವೇದಿಕೆಯಲ್ಲಿ ಪ್ರಾಧ್ಯಾಪಕಿ ಡಾ. ಸಬಿತಾ ಕೊರಗ ಉಪಸ್ಥಿತರಿದ್ದರು. ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಶಿಕ್ಷಣ ಕ್ಷೇತ್ರದ ಸಾವಿತ್ರಿ ಮನೋಹರ್, ಧಾರ್ಮಿಕ ಕ್ಷೇತ್ರದ ಜ್ಯೋತಿ ಪೈ ಸಾಮಾಜಿಕ ಕ್ಷೇತ್ರದ ತನುಲ, ಸಾಹಿತ್ಯ ಕ್ಷೇತ್ರದ ಪ್ರೇಮ ಸುರಿಗ ಅಜೆಕಾರು, ಕ್ರೀಡಾ ಕ್ಷೇತ್ರದ ಅಪ್ಸರಾ ಕಟೀಲ್, ಸಮಾಜಸೇವೆಗಾಗಿ ಆಯೇಷಾ ಬಾನು, ಆರೋಗ್ಯ ಸೇವೆಗಾಗಿ ಲೈಲಾ ಥೋಮಸ್ ಹಾಗೂ ಬಾಲ ಪ್ರತಿಭೆಗಳಾದ ಭೂಮಿ, ಅನ್ವಿ ಹೆಚ್. ಅಂಚನ್, ಸುಧಾನ್ಯ, ಪ್ರಣತಿ ಬಿ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. 

ಅಜೆಕಾರು ಸಿ.ಎ ಬ್ಯಾಂಕು ನಿರ್ದೆಶಕಿ ಜಲಜ ಸ್ವಾಗತಿಸಿದರು. ವಿನಯ ಡಿ. ಬಂಗೇರ ಪ್ರಸ್ತಾವನೆಗೈದರು. ಜ್ಯೋತಿರಮೇಶ್ ವಂದಿಸಿ, ನಿರೂಪಿಸಿದರು. ಪ್ರಮೀಳಾ ಪ್ರಾರ್ಥಿಸಿದರು.

ಕಾಪು : ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ

Thumbnail
Posted On: 18 May 2026, 09:24 AM

ಕಾಪು : ಸುಜ್ಞಾನ ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಮತ್ತು ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಮೇ 16ರಂದ ಮೇ 22 ರವರೆಗೆ ಕಾಪುವಿನ ಕಲ್ಯ ಸುಧಾಮ ಸಭಾಭವನದಲ್ಲಿ ಜರಗಲಿರುವ ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರವನ್ನು ಪೇಜಾವರ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಕರ್ನಾಟಕ ಬ್ಯಾಂಕ್ ಡಿಜಿಎಮ್ ರಮೇಶ್ ವೈದ್ಯ, ಕರ್ನಾಟಕ ಬ್ಯಾಂಕ್, ಪಣಿಯೂರು ಶಾಖೆಯ ಮ್ಯಾನೇಜರ್ ಬಾಲಕೃಷ್ಣ ರಾವ್, ಡಾ.ಸೀತಾರಾಮ ಭಟ್ ದಂಡತೀರ್ಥ, ಶಿಬಿರ ನಿರ್ವಾಹಕರಾದ ಶ್ರೀನಿವಾಸ ಪೆಜತ್ತಾಯ, ರಾಮಕೃಷ್ಣ ತಂತ್ರಿ ಕಲ್ಯ, ವಿದ್ಯಾಧರ ಪುರಾಣಿಕ ಕಲ್ಯ, ಭಗವನ್ ದಾಸ್ ಶೆಟ್ಟಿಗಾರ್, ಶಿಬಿರದ ಸಹ ನಿರ್ವಾಹಕ ಪವನ್ ಕುಮಾರ್ ಉಪಸ್ಥಿತರಿದ್ದರು. ಮನೋಹರ್ ರಾವ್ ಕಲ್ಯ ವಂದಿಸಿದರು.

ವಧುವರರ ಸಮಾವೇಶಗಳು ಯುವ ಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ : ನಾಗೇಂದ್ರ ಕಾಮತ್

Thumbnail
Posted On: 17 May 2026, 07:11 PM

ಶಿರ್ವ: ಇಂದು ಯುವ ಪೀಳಿಯು ಯೋಗ್ಯ ಹಾಗೂ ಒಪ್ಪುವಂತಹ ವೈವಾಹಿಕ ಜೀವನವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಆಯೋಜನೆಗೊಳ್ಳುವ ವಧು ವರರ ಸಮಾವೇಶಗಳು ಯುವಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದು ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಇದರ ಅಧ್ಯಕ್ಷ ನಾಗೇಂದ್ರ ಕಾಮತ್ ನುಡಿದರು. ಅವರು ರವಿವಾರ ಬಂಟಕಲ್ಲು ರೋಟರಿ ಭವನದಲ್ಲಿ ಆರ್‌ಎಸ್‌ಬಿ ಹಾಗೂ ಬಿಜಿಎಸ್‌ಬಿ ಸಮಾಜ ಬಾಂಧವರ ಜಂಟಿ ಆಯೋಜನೆಯಲ್ಲಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಏರ್ಪಡಿಸಿದ "ಋಣಾನುಬಂಧ" ವಧುವರರ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಜ್ಯೋತಿಷಿಗಳಾದ ಮಾಣ್ಯೂರು ವೈ ಉಪೇಂದ್ರ ಪ್ರಭು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಾತಕ ಫಲಗಳನ್ನು ಪರಿಶೀಲಿಸಿ ವಿವಾಹವಾಗುವುದು ದಾಂಪತ್ಯ ಜೀವನದ ಧೀರ್ಘಾವಧಿ ಯಶಸ್ಸಿಗೆ ಒಳಿತು ಎಂದರು. 

ಸನ್ಮಾನ : ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಉಪೇಂದ್ರ ಪ್ರಭು ಹಾಗೂ ಉದ್ಯಮಿ ಎಂ.ಎನ್.ನಾಯಕ್, ಅಂತಾರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರನ್ನು ಸನ್ಮಾನಿಸಲಾಯಿತು. 

ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರು ಸಮಾಜದ ಯುವಜನತೆಗೆ ಪ್ರೇರಣೆ ನೀಡುವ ವಿಶೇಷ ಉಪನ್ಯಾಸವನ್ನು ನೀಡಿದರು. 

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಕಳ ಹಿರ್ಗಾನದ ಶ್ರೀಆದಿಶಕ್ತಿ ಮಹಾಲಕ್ಷ್ಮಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಉದ್ಯಮಿ ವಾಸುದೇವ ಕೃಷ್ಣ 
ಅವರು ಮಾತನಾಡಿದರು.

 ಸಂಚಾಲಕ ಎಂ.ಡಿ.ಪ್ರಭು ವೇದಿಕೆಯಲ್ಲಿದ್ದರು. ನಿವೃತ್ತ ಮುಖ್ಯಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಗಣ್ಯರನ್ನು ಪರಿಚಯಿಸಿದರು. ಸುನಿಲ್ ಬೋರ್ಕಾರ್ ಪುತ್ತೂರು ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು. 

ಕಾರ್ಯಕ್ರಮದಲ್ಲಿ 192 ವಧುವರರು ತಮ್ಮ ಹೆಸರುಗಳನ್ನು ಅಧಿಕೃತವಾಗಿ ನೋಂದಾಯಿಸಿದ್ದರು.

ಕಾಪು : ಮುಂಗಾರು ಪೂರ್ವದಲ್ಲೇ ಸಮಸ್ಯೆಗಳಿದ್ದೆಡೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಗಮನಹರಿಸಿ

Thumbnail
Posted On: 17 May 2026, 09:06 AM

ಕಾಪು : ಅಪಾಯವಾದ ಮೇಲೆ ಹಾಗೆ ಆಗಬಾರದಿತ್ತು ಆಗಿ ಹೋಯಿತು ಎನ್ನುವ ಮೊದಲೇ ಅಪಾಯದ ಮುನ್ಸೂಚನೆ ಅರಿಯಬೇಕಿದೆ. ಇದು ಈ ಭಾರಿಯ ಮಳೆಗೂ ಮುನ್ನ ಕಾಪು ತಾಲೂಕಿನ ಆಡಳಿತ ವರ್ಗ, ಜನಪ್ರತಿನಿಧಿಗಳು ಅರಿಯಬೇಕಾದ ಕಟು ಸತ್ಯವಾಗಿದೆ.

ಪ್ರತಿ ಬಾರಿ ಮಳೆಯಿಂದ ಕಾಪು ತಾಲೂಕಿನ ಕೆಲವೆಡೆಗಳಲ್ಲಿ ಅನಾಹುತಗಳು ಸಂಭವನೀಯ. ಇದಕ್ಕೆ ಅಧಿಕಾರಿ ವರ್ಗ ಸರ್ವಸನ್ನದ್ಧರಾಗಿ ಮೊದಲೇ ಪೂರ್ವ ತಯಾರಿ ಮಾಡಬೇಕಿದೆ.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸದಸ್ಯರು ಅಧಿಕಾರದಲ್ಲಿದ್ದಾರೆ. ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಸದಸ್ಯರ ಅಧಿಕಾರಾವಧಿ ಮುಗಿದಿದ್ದರೂ ಮಾನವೀಯ ನೆಲೆಯಿಂದ ಅವರು ಕಾರ್ಯ ನಿರ್ವಹಿಸುವೆಡೆಗೆ ಮನಸ್ಸು ಮಾಡಿ‌ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ.

ನೀರು ಹರಿಯಲು ತೋಡಿನ ವ್ಯವಸ್ಥೆ, ಹೂಳು ತುಂಬಿದಲ್ಲಿ ಹೂಳೆತ್ತುವ ಕಾರ್ಯ, ಕೆರೆ, ನದಿ ವ್ಯಾಪ್ತಿಯ ಪ್ರದೇಶದಲ್ಲಿ, ರಸ್ತೆಯ ಬದಿಯ ಹಳೆಯ ಮರಗಳು, ಗೆಲ್ಲಿಗೆ ತಾಗಿದ ವಿದ್ಯುತ್ ತಂತಿಗಳ ಬಗ್ಗೆ  ಮುನ್ನೆಚ್ಚರಿಕೆ ಅನಿವಾರ್ಯವಾಗಿದೆ. ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಿದೆ.

ಮಳೆಯ ಅವಾಂತರದಿಂದ ಹಾನಿಗೀಡಾಗುವ ಪ್ರದೇಶದಲ್ಲಿ ಜನರು ಜಾಗರೂಕರಾಗಿದ್ದು, ಅಲ್ಲಿಯ ಸಮಸ್ಯೆಗೆ ಮುಂಗಾರು ಪ್ರಾರಂಭದ ಮುನ್ನವೇ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡಿ.

ಅವಾಂತರದ ನಂತರ ಬಂದು ನೋಡಿ ಕ್ರಮ ವಹಿಸುವ ಭರವಸೆ ನೀಡಿದರೆ ಏನು ಪ್ರಯೋಜನ ?

ಮೇ 17 (ಇಂದು) : ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪದಪ್ರದಾನ ಸಮಾರಂಭ

Thumbnail
Posted On: 17 May 2026, 09:02 AM

ಪಡುಬಿದ್ರಿ : ಇಲ್ಲಿನ ಗ್ರಾಮೀಣ ಕಾಂಗ್ರೆಸ್‌ ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಗ್ರಾಮೀಣ ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಮೀಝ್ ಹುಸೇನ್ ಹಾಗೂ ಪದಾಧಿಕಾರಿಗಳ ಪದಾಪ್ರದಾನ ಸಮಾರಂಭ ಮೇ 17ರಂದು ನಡೆಯಲಿದೆ.

ಸಂಜೆ 6 ಗಂಟೆಗೆ ಸುಜಾತಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೀರಾ ಕಾಂಪ್ಲೆಕ್ಸ್‌ನಲ್ಲಿ ಕಚೇರಿಯ ಉದ್ಘಾಟನೆ ನಡೆಯಲಿದೆ. 

ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾ‌ರ್ ಸೊರಕೆ ನೂತನ ಕಚೇರಿ ಉದ್ಘಾಟಿಸಲಿದ್ದಾರೆ. ಪ್ರಚಾರ ಸಮಿತಿಯ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂ‌ರ್, ಜಿಲ್ಲಾಧ್ಯಕ್ಷ ಅಶೋಕ್‌ ಕುಮಾ‌ರ್ ಕೊಡವೂರು, ಕಾಪು ಬ್ಲಾಕ್ ಸಮಿತಿಯ ವೈ.ಸುಕುಮಾ‌ರ್, ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ.ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬೆಳಪು : ಹೆಂಡತಿಯ ಮನೆಯ ಮುಂಭಾಗ ಆತ್ಮಹತ್ಯೆಗೆ ಶರಣಾದ ಗಂಡ

Thumbnail
Posted On: 16 May 2026, 06:43 PM

ಕಾಪು : ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಯ ಮುಂಭಾಗ ಇರುವ ಮಾವಿನ ಮರದ ಕೊಂಬೆಗೆ  ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನ ಬೆಳಪುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ಜಹಿರ್‌ಅಬ್ದುಲ್‌ ಮಾಂಗಾವಕರ್‌ (42) ಮೃತ ವ್ಯಕ್ತಿ. ಗೋವಾ ಮೂಲದ ಈತ ಬೆಳಪುವಿನ ಯುವತಿಯನ್ನು ಸಂಪ್ರದಾಯದ ಬದ್ಧವಾಗಿ ಮೂಳೂರು ಜುಮ್ಮ ಮಸೀದಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದನು. 

ಇವರಿಗೆ 2 ಗಂಡು ಮಕ್ಕಳಿದ್ದು, ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿದ್ದು, ಆಗಾಗ ಗಂಡನ ಮನೆಯಿಂದ ಯುವತಿ ಊರಿಗೆ ಬಂದು ನಂತರ ರಾಜಿಯಾಗಿ ಇರುತ್ತಿದ್ದರು ಎನ್ನಲಾಗಿದೆ. 

ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಒಂದು ಬಾರಿ ಬೆಳಪುವಿನಲ್ಲಿ ಕೂಡಾ ಪಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಕಳೆದ 3 ತಿಂಗಳ ಹಿಂದೆ ಯುವತ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಮಯ ಊರಿಗೆ ಬಂದಿದ್ದಾಳೆ. ನಂತರ ಅವಳನ್ನು ಕರೆಯಲು ಹಲವಾರು ಸಲ ಜಹಿರ್‌ ಅಬ್ದುಲ್‌ ಮಾಂಗಾವಕರ್‌ ರವರು ಬೆಳಪುವಿಗೆ ಬಂದಾಗ ತಾನು ಬರುವುದಿಲ್ಲ ಎಂದು ಹೇಳಿರುತ್ತಾಳೆ. ಒಂದು ಮಗುವನ್ನು ನನಗೆ ಕೊಡು ನಾನು ಓದಿಸುತ್ತೇನೆ ಎಂದು ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಇವರು ಹೇಳಿದರೂ ಕೇಳದೆ ಗೋವಾದಲ್ಲಿ ಓದುತ್ತಿದ್ದ ಮಗನ ಸ್ಕೂಲ್‌ ಸರ್ಟಿಪಿಕೇಟ್‌ ತಂದಿರುತ್ತಾಳೆ. ಈ ಬಗ್ಗೆ ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಮಾನಸಿಕವಾಗಿ ನೊಂದಿದ್ದನು. ಮೇ 15 ರಂದು ಗೋವಾದಿಂದ ಹೊರಟು ಮೇ 16 ರಂದು ಬೆಳಿಗ್ಗೆ ಬೆಳಪುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. 

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 17 (ನಾಳೆ) : ಪಡುಬಿದ್ರಿ ದೇವಳದಲ್ಲಿ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮ

Thumbnail
Posted On: 16 May 2026, 02:50 PM

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ ಇಲ್ಲಿಯ ಸಮಗ್ರ ಜೀರ್ಣೋದ್ಧಾರ - ಪುನಃ ಪ್ರತಿಷ್ಠೆ - ಬ್ರಹ್ಮಕಲಶೋತ್ಸವದ ಸಂಕಲ್ಪದೊಂದಿಗೆ ಹಮ್ಮಿಕೊಂಡ ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ದೀಪಾರಾಧನೆಯೊಂದಿಗೆ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮವು ಮೇ 17, ಆದಿತ್ಯವಾರ ಪ್ರಾತ:ಕಾಲ ಘಂಟೆ 5-45ಕ್ಕೆ
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ದೊರೆಯಲಿದೆ.

ಈ ಸಂದರ್ಭ ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಶ್ರೀ ಭವಾನಿಶಂಕರ ಹೆಗ್ಡೆ, ಶ್ರೀಪತಿ ಕೊರ್ನಾಯ, ಕಾರ್ಯನಿರ್ವಹಣಾಧಿಕಾರಿ ರಾಜ್‌ ಗೋಪಾಲ್ ಉಪಾಧ್ಯಾಯ, ಪ್ರಧಾನ ಅರ್ಚಕರುಗಳಾದ  ಎಚ್. ಪದ್ಮನಾಭ ಭಟ್, 
ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರವೀಂದ್ರನಾಥ್ ಜಿ. ಹೆಗ್ಡೆ, 
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ, 
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ
ಪ್ರಶಾಂತ್ ಶೆಣೈ ಉಪಸ್ಥಿತರಿರಲಿದ್ದಾರೆ.

ಬೆಳಿಗ್ಗೆ ಘಂಟೆ 6ರಿಂದ ಸಂಜೆ ಘಂಟೆ 6ರ ವರೆಗೆ ಸ್ಥಳೀಯ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಘಂಟೆ 6-15ಕ್ಕೆ ದೀಪಾರಾಧನೆಗೆ ಅದಮಾರು ಮಠದ 
ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. 

ಸಂಜೆ ಘಂಟೆ 7ಕ್ಕೆ ವೇದಮೂರ್ತಿ ಅಚ್ಚಡ ಶ್ರೀನಿವಾಸ ಆಚಾರ್ ಇವರಿಗೆ ಅಭಿನಂದನೆ, 
ಸಂಜೆ 7-30ರಿಂದ 9 ರವರೆಗೆ  ಗಾಯಕಿ  ಶಾಂತೇರಿ ಲಿಖಿತ್ ಪ್ರಭು, ಮಂಜೇಶ್ವರ ಮತ್ತು ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರಗಲಿದ್ದು ಸದ್ಭಕ್ತ ಬಾಂಧವರೆಲ್ಲ ಭಾಗವಹಿಸಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಮತ್ತು ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಬಿ.ಜೆ.ಎಂ ಮಲ್ಲಾರು-ಮಜೂರು ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊ

Thumbnail
Posted On: 16 May 2026, 02:04 PM

ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಡಳಿತ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಡಾ.ಫಾರೂಕ್ ಚಂದ್ರನಗರ, ಅಬ್ದುಲ್ ರಝಕ್ ಮಲ್ಲಾರು, ಕಾಸಿಂ ಗುಡ್ಡೆಕೇರಿ ಹಾಗೂ ರಿಯಾಜ್ ಉಸ್ತಾದ್ ರವರು ನಮ್ಮ ಜಮಾತಿಗರಾಗಿದ್ದು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದವರು.  ಇದೀಗ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದು, ಅವರ ಯಾತ್ರೆ ಶುಭವಾಗಲಿ ಎಂದು ಹಾರೈಸಿದರು. 

ಈ ಸಂದರ್ಭದಲ್ಲಿ ಮಸ್ಜಿದ್ ಕತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್ ದುವಾ ನೆರವೇರಿಸಿ ಶುಭಹಾರೈಸಿದರು. 
ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ಪ್ರ.ಕಾರ್ಯದರ್ಶಿ ಅಶ್ರಫ್ ಮೂಸಾ,ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಸದಸ್ಯರಾದ ಅಬ್ದುಲ್ಲ ಚಂದ್ರನಗರ, ಹಸನಬ್ಬ ಗುಡ್ಡೆಕೇರಿ, ಅಬ್ದುಲ್ ರಝಕ್ ಕೊಪ್ಪಲ್ತೋಟ ಅಬ್ದುಲ್ ರೆಹಮಾನ್ ಕೊಂಬಗುಡ್ಡೆ, ನೆಹಮತ್ ಅಚ್ಚಲ್ ಹಸನಬ್ಬ ಪಕೀರಣಕಟ್ಟೆ, ಸಮೀರ್ ಕೆ.ಪಿ ಹಾಗೂ ಜಮಾತ್ ಬಾಂದವರು ಉಪಸ್ಥಿತರಿದ್ದರು.

ಕಾಪು : ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ-ಪ್ರಶಿಕ್ಷಣ ಮಹಾಭಿಯಾನ -2026 ಚಾಲನೆ

Thumbnail
Posted On: 16 May 2026, 08:21 AM

ಕಾಪು : ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶಿರ್ವ ಸಮೀಪದ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಎರಡು ದಿನಗಳ ಪರ್ಯಂತ ಜರುಗುವ ಕಾಪು ಮಂಡಲ ಪ್ರಶಿಕ್ಷಣ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.

ವೇದಿಕೆಯಲ್ಲಿರುವ ಗಣ್ಯರು ಭಾರತಮಾತೆ, ಪಂ.ದೀನದಯಾಳ್ ಉಪಾಧ್ಯಾಯ,ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.  

ಉದ್ಘಾಟಕರಾದ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ವ್ಯಕ್ತಿ ನಿರ್ಮಾಣ ದಿಂದ ಸಂಘಟನೆ, ಸಂಘಟನೆಯಿಂದ ರಾಷ್ಟ್ರ ನಿರ್ಮಾಣ ತತ್ವದಡಿಯಲ್ಲಿ ಪ್ರತೀ ಬೂತ್ ಮಟ್ಟದ ಪ್ರಮುಖರಿಗೆ ವೈಚಾರಿಕ ಬದ್ಧತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಶಿಕ್ಷಣ ನೀಡುವ ಮೂಲಕ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 300ಕ್ಕೂ ಅಧಿಕ ಪ್ರಶಿಕ್ಷಣ ವರ್ಗಗಳು ನಡೆಯುತ್ತಿವೆ ಎಂದರು. 

ಕಾಪು ಕ್ಷೇತ್ರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇತ್ತೀಚೆಗೆ ನಡೆದ ಚುನಾವಣಾ ಗೆಲುವು ಕಾರ್ಯಕರ್ತರ ಬಲ ದಿಂದ ಆಗಿದೆ. ಜನಸಂಘದ ಕಾಲದಿಂದಲೂ ಪ್ರಮುಖ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಬಿಜೆಪಿಯಲ್ಲೂ ಮೇಲ್ಮಟ್ಟದ ನಾಯಕರಿಗೆ,ಕಾರ್ಯಕರ್ತರಿಗೆ ಈ ಕಾರ್ಯಕ್ರಮ ನಡೆಯುತ್ತಿತ್ತು. ಪಕ್ಷ ತಾಯಿ ಇದ್ದಂತೆ. ಈಗ ತಳಮಟ್ಟದ ಕಾರ್ಯಕರ್ತರಿಗೂ ಆತ್ಮವಿಶ್ವಾಸ,ಬದ್ಧತೆ ಬೆಳೆಸುವ ಕಾರ್ಯ ನಡೆಯುತ್ತದೆ. ಜಗತ್ತಿನಲ್ಲಿ ಒಳ್ಳೆಯ ಚರಿತ್ರೆ ಇರುವ ಪಕ್ಷದಲ್ಲಿ ನಾವಿದ್ದೇವೆ ಎಂದರು. 

ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. 

ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶರಣ್ ಕುಮಾರ್ ಮಟ್ಟು, ಉಪಸ್ಥಿತರಿದ್ದರು. ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿದರು. ಪಾಣೇಶ್ ಹೆಜಮಾಡಿ ವಂದೇಮಾತರಮ್ ಗೀತೆ ಹಾಡಿದರು.ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ವಂದಿಸಿದರು.