Updated News From Kaup
ಕಾಪು ಶ್ರೀ ಹೊಸಮಾರಿಗುಡಿಗೆ ಮಾಜಿ ಸಚಿವ, ನಟ ಕುಮಾರ್ ಬಂಗಾರಪ್ಪ ಭೇಟಿ
Posted On: 18 Jan 2026, 11:23 AM
ಕಾಪು : ಮಾಜಿ ಸಚಿವ ಮತ್ತು ಕನ್ನಡ ಚಿತ್ರರಂಗದ ನಟ ಕುಮಾರ್ ಬಂಗಾರಪ್ಪ ಅವರು ಪತ್ನಿ ಮತ್ತು ಮಕ್ಕಳ ಜೊತೆ ಜ.17ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.
ಅಮ್ಮನ ಅನುಗ್ರಹ ಪ್ರಸಾದ ನೀಡುವ ಮೂಲಕ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಸಾಲ್ಯಾನ್ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮುದರಂಗಡಿ : ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ - ರೆ.ಫಾ.ವಿನ್ಸೆಂಟ್ ಡಿಸೋಜ
Posted On: 15 Jan 2026, 07:10 PM
ಮುದರಂಗಡಿ : ಯಾವುದೇ ಜಾತಿ,ಮತ, ಪಂಥಗಳ ಭೇದವಲ್ಲದೆ ಸಂಕಷ್ಟಕ್ಕೆ ಒಳಗಾದ ಅಸಾಯಕರಿಗೆ ಸಹಾಯ ಮಾಡಿ ಸಾಂತ್ವಾನ ನೀಡುವ ಕಾರ್ಯವೇ ದೇವರ ಸೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ಈಶಸೇವೆ, ದೇಶಸೇವೆ, ಜನಸೇವೆ, ಕಲಾಸೇವೆಯ ಮೂಲಕ ಜನರಿಗೆ ಹತ್ತಿರವಾಗುತ್ತೇವೆಯೋ ಆಗ ದೇವರಿಗೂ ಹತ್ತಿರವಾಗುತ್ತೇವೆ. ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ ಎಂದು ಮೂಡುಬಿದ್ರೆ ಸಂಪಿಗೆ ನಗರದ ಹೋಲಿ ಸ್ವಿರಿಟ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಡಿಸೋಜಾ ನುಡಿದರು.
ಅವರು ಮುದರಂಗಡಿ ಸಂತ ಪ್ರಾನ್ಸಿಸ್ ದೇವಾಲಯದ ವಾರ್ಷಿಕೋತ್ಸವ ಶುಭಾವಸರದಲ್ಲಿ ಕಂಪ್ಯಾಶನೇಟ್ ಫ್ರೆಂಡ್ಸ್ ಎಸೋಸಿಯೇಶನ್ (ರಿ.) ಮುದರಂಗಡಿ ಇದರ ವತಿಯಿಂದ ಸಾರ್ವಜನಿಕ ಆಟದ ಮೈದಾನದಲ್ಲಿ ಜರುಗಿದ 9ನೇ ವರ್ಷದ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನದಲ್ಲಿ ಈ ಕರುಣಾಮಯೀ ಸಂಸ್ಥೆ ಬಡವರ್ಗದ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆರ್ಥಿವಾಗಿ ಬಲ ತುಂಬುವ ಕಾರ್ಯವನ್ನು ನಡೆಸುತ್ತಿರುವುದು ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ ಮೂಲತ: ಮುದರಂಗಡಿಯವರೇ ಆದ ಗಲ್ಫ್ ಕಂಟ್ರಿಯಲ್ಲಿ ಉದ್ಯೋಗ ಮಾಡಿ ವಯೋನಿವೃತ್ತಿಯ ಬಳಿಕ ಊರಿನಲ್ಲಿ ಸೇವೆಗಾಗಿಯೇ ಸಂಘಟನೆಯನ್ನು ಕಟ್ಟಿ ತಮ್ಮ ಆದಾಯದ ಸ್ವಲ್ಪಾಂಶವನ್ನು ಕ್ರೋಢೀಕರಿಸಿ ಆ ಮೂಲಕ ಪರಿಸರದ ಬಡ ಅನಾರೋಗ್ಯ ಪೀಡಿತರಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ವಿಕಲಚೇತರರು, ಆಕಸ್ಮಿಕ ಅಪಘಾತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ, ಮನೆರಿಪೇರಿ, ತುರ್ತುಚಿಕಿತ್ಸೆ, ವಿದ್ಯುತ್ ಸಂಪರ್ಕ ಇತ್ಯಾದಿ ಮಾನವೀಯ ನೆಲೆಯಲ್ಲಿ ಕಳೆದ 9 ವರ್ಷಗಳಿಂದ 45 ಲಕ್ಷಕ್ಕೂ ಅಧಿಕ ನಿಧಿಯನ್ನು ವಿತರಿಸಿರುವುದು ಇತರರಿಗೂ ಮಾದರಿಯಾದ ಸೇವೆಯಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರೂ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಹಬ್ಬದ ಶುಭ ದಿನದಲ್ಲಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಕೊಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯಕ್ಕೆ ಸಮಾಜದ ಸ್ಪಂದನವೂ ಸಿಗುತ್ತದೆ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ, ಜಗತ್ತಿಗೆ ಮಾದರಿಯಾಗಿದೆ. ಇಂತಹ ಕಾರ್ಯ ಬೆಳೆಯಬೇಕು, ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಮೈಕಲ್ ರಮೇಶ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಂಸ್ಥೆಯ ಆಶಯಕ್ಕೆ ಸ್ಪಂದಿಸಿ ಕೈಜೋಡಿಸಿದ ಸಮಾನಮನಸ್ಕರ ಕೊಡುಗೆಯನ್ನು ಸ್ಮರಿಸಿ, 9ವರ್ಷಗಳ ಈ ಕಾರ್ಯ ಸಂತೃಪ್ತಿಯನ್ನು ನೀಡಿದೆ. ಮುಂದಿನ ವರ್ಷ ದಶಮಾನೋತ್ಸವದ ಸಂದರ್ಭದಲ್ಲಿ ಈ ಸ್ತುತ್ಯ ಕಾರ್ಯಕ್ಕೆ ಕೈಜೋಡಿಸುವಂತೆ ವಿನಂತಿಸಿದರು.
ಮುಖ್ಯ ಅತಿಥಿಗಳಾಗಿ ಮುದರಂಗಡಿ ಗ್ರಾ.ಪಂ.ಉಪಾಧ್ಯಕ್ಷ ಶರತ್ ಶೆಟ್ಟಿ, ಉಡುಪಿ ಶೋಕಮಾತಾ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಬರ್ಟ್ ಮ್ಯಾಕ್ಸಿಮ್ ಡಿಸೋಜ, ಪಿಲಾರು ಉದ್ಯಮಿ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕುತ್ಯಾರು ಸಾಯಿನಾಥ್ ಶೆಟ್ಟಿ, ಫೆಲಿಕ್ಸ್ ಡಿಸೋಜ, ಸ್ಟೀವನ್ ಕೊಲಾಸೋ ಉದ್ಯಾವರ ಭಾಗವಹಿಸಿದ್ದರು. ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು. ಅನಿತಾ, ಗ್ರೆಟ್ಟಾ ಪ್ರಾರ್ಥಿಸಿದರು.
ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ : ರಜತ ಸಂಭ್ರಮ - ಗ್ರಾಮೀಣ ಕ್ರೀಡಾಕೂಟ
Posted On: 15 Jan 2026, 07:33 AM
ಉಡುಪಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ ಇದರ ರಜತ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಲಾಯಿತು.
ಭತ್ತದ ಕಳಸಕ್ಕೆ ಭತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಉಪ್ಪೂರು ವ್ಯ.ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಹೂವಯ್ಯ ಸೇರ್ವೇಗಾರ್, ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ಕುಟ್ಟಿ ದೊಣ್ಣೆ, ಲಗೋರಿ ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ ಪರಿಚಯಿಸುವ ಹಾಗೂ ಸಾರ್ವಜನಿಕರಿಗೆ ನೆನಪಿಸುವ ಮಾದರಿ ಕಾರ್ಯಕ್ರಮ ಹಾಗೂ ಜಗವೆಲ್ಲ ಸಿಹಿ ನಿದ್ದೆಯಲ್ಲಿ ಮಲಗಿರುವ ಹೊತ್ತು ಜಗದ ಸುದ್ದಿಯನ್ನು ಮನೆ ಮನೆ ಮುಟ್ಟಿಸುವ ಪತ್ರಿಕಾ ವಿತರಕರನ್ನು ಗೌರವಿಸಿರುವುದು ಶ್ಲಾಘನೀಯ ಹಾಗೂ ಮಳೆ ಗಾಳಿನ್ನು ಲೆಕ್ಕಿಸದೆ ಜೀವ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಪವರ್ ಮ್ಯಾನ್ಗಳನ್ನು ಗುರುತಿಸಿ ಗೌರವಿಸಿದ್ದು ಜಿಲ್ಲಾ ರಾಜ್ಯೋತ್ಸ್ವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಕಾರ್ಯವು ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಗಣ್ಯರಾದ ಡಾ.ಸಂದೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ಮರಕಾಲ, ಉ, ವ್ಯ,ಸೇ,ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ 48 ವರ್ಷಗಳಿಂದ ಸುದೀರ್ಘವಾಗಿ ದಿನ ಪತ್ರಿಕೆ ವಿತರಣೆ ಮಾಡುತ್ತಿರುವ ಪುಂಡಲೀಕ ಶಣೈ, ಪತ್ರಿಕಾ ವಿತರಕರಾದ ಅಶೋಕ್ ಚಾತ್ರ, ಮೆಸ್ಕಾಂ ಪವರ್ ಮ್ಯಾನ್ ಗಳಾದ ಶರಣಪ್ಪ ಹಳ್ಳಪ್ಪನವರ್, ಮಂಜುನಾಥ ಹಾದಿಮನಿ, ಹಾಗೂ ಅಡಿವೆಪ್ಪ ಪಾಟೀಲ ರವರನ್ನು ಗೌರವಿಸಿ ಸಮ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಗಳು ಹಾಗೂ ಸಾರ್ವಜನಿಕರು ಸೇರಿ 250 ಕ್ಕೂ ಹೆಚ್ಚಿನ ಸ್ಪರ್ಧಿಗಳು ವಿವಿಧ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.
ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘದ ಸದಸ್ಯರಾದ ಶೋಭಾ ಯೋಗೀಶ್, ಶಾಂತ ಸೆಲ್ವರಾಜ್ ಹಾಗೂ ಸುಕನ್ಯರವರು ಸಮ್ಮಾನಿತರ ಪರಿಚಯ ವಾಚಿಸಿದರು. ಶಕುಂತಲಾ ಸುಕೇಶ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಸದಾಶಿವ ರವರು ಸ್ವಾಗತಿಸಿ, ಸುರೇಶ್ ರವರು ವಂದಿಸಿ, ಯೋಗೀಶ್ ಕೊಳಲಗಿರಿ ನಿರೂಪಿಸಿದರು.
ಜ. 26: ಕುಲಾಲ ಸಂಘ ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ ವಾರ್ಷಿಕ ಮಹಾಸಭೆ
Posted On: 15 Jan 2026, 07:25 AM
ಪುಣೆ : ಕುಲಾಲ ಸಂಘ (ರಿ.) ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ ವಾರ್ಷಿಕ ಮಹಾಸಭೆಯು ಜನವರಿ 26 ರಂದು ಬೆಳಿಗ್ಗೆ 10 ರಿಂದ ಜ್ಞಾನಜ್ಯೋತಿ ಸಾವಿತ್ರಿದಾಯಿ ಸ್ಮಾರಕ ಭವನ, ಅಂಬೇಡ್ಕರ್ ಪ್ರತಿಮೆಯ ಹಿಂಭಾಗ ಪಿಂಪ್ರಿ ಇಲ್ಲಿ ಸಂಘದ ಅಧ್ಯಕ್ಷರು ರವಿ.ಕೆ.ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸುಚಿತ್ರ ದಿನಕರ್ ಬಂಜನ್, ಶ್ರೀಧರ್ ಕೆ ಶೆಟ್ಟಿ, ದೊಡ್ಡಣ್ಣ ಸಿ ಮೂಲ್ಯ, ವಕೀಲರು ಅಪ್ಪು ಮೂಲ್ಯ ಸೇರಿದಂತೆ ಅನೇಕ ಸ್ವಜಾತಿ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಪುಣೆಯ ಪಿಂಪ್ರಿ ಕುಲಾಲ ಸಂಘ ಪ್ರಕಟಣೆಯಲ್ಲಿ ತಿಳಿಸಿರುವರು.
ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ರೂ.4 ಲಕ್ಷ ವೆಚ್ಚದ ಜನರೇಟರ್ ಕೊಡುಗೆ
Posted On: 14 Jan 2026, 07:59 PM
ಪಡುಬಿದ್ರಿ : ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಇದರ ಸದಸ್ಯರಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲಕ್ಕೆ ಬುಧವಾರ ಸಂಜೆ 15 ಕೆವಿ ಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ ಹಸ್ತಾಂತರಿಸಿದ್ದಾರೆ.
ದೇವಳದ ಅರ್ಚಕ ಗೋವಿಂದ ಭಟ್ ರವರು ಪೂಜಾ ವಿಧಾನ ಪೂರೈಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವಿಷ್ಣುಮೂರ್ತಿ ಭಟ್ ಜನರೇಟರ್ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭ ಉದ್ಯಮಿ ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಧ್ಯುಮಣಿ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕಾರ್ಯದರ್ಶಿ ರವಿಕಿರಣ್, ಕೋಶಾಧಿಕಾರಿ ವಿಷ್ಣುಮೂರ್ತಿ ಭಟ್, ಮನೋಜ್ ಶೆಟ್ಟಿ, ಗುರುರಾಜ್ ಉಚ್ಚಿಲ, ವಿನೋದ್ ಸುವರ್ಣ, ಪ್ರಮೋದ್ ದೇವಾಡಿಗ, ಸಂಪತ್ ಕುಮಾರ್, ಹರ್ಷಿತ್ ಆಚಾರ್ಯ,ಸತೀಶ್ ಆಚಾರ್ಯ, ದಾಮೋದರ್ ದೇವಾಡಿಗ, ಲೀಲಾಧರ, ಹೃತಿಕ್ ಪೂಜಾರಿ, ದೇವಳದ ಮೆನೇಜರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಮಹಾಸಭೆ
Posted On: 14 Jan 2026, 07:52 PM
ಕಾಪು : ನಮ್ಮ ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಿರ್ವಹಿಸಬೇಕೆಂದು ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್ ಹೇಳಿದರು.
ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಸಂಘದ ಅಧ್ಯಕ್ಷ ಶೇಖರ್ ನಾಯ್ಕ್, ಶ್ರೀದೇವಿ - ಭೂದೇವಿ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು ಇದರ ಅಧ್ಯಕ್ಷ ಸದಾನಂದ ನಾಯ್ಕ್ ಕೆಳಾರ್ಕಳಬೆಟ್ಟು, ರವೀಂದ್ರ ನಾಯ್ಕ್ ಬೆಳಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಪಾಂಡರಂಗ ನಾಯ್ಕ್ ಕಲ್ಯಾಣಪುರ, ಪ್ರಶಾಂತ್ ಶಿವ ನಾಯ್ಕ್, ಮಾಧವ ನಾಯ್ಕ್ ಪಯ್ಯಾರು, ಸಂಘದ ಉಪಾಧ್ಯಕ್ಷ ರಾಜೇಶ್ ನಾಯ್ಕ್ ಮಟ್ಟಾರ್, ಗೋಪಾಲ್ ನಾಯ್ಕ್ ಕರಂದಾಡಿ, ಕಾರ್ಯದರ್ಶಿ ರೋಹಿತ್ ನಾಯ್ಕ್ , ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಪು ತಾಲೂಕಿನಲ್ಲಿ 2025 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಹುಲ್ ನಾಯ್ಕ್, ನಮಿತ ನಾಯ್ಕ್ , ಶುಭಶ್ರೀ ನಾಯ್ಕ್ ಇವರನ್ನು ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಂಘದ ಸದಸ್ಯರಾದ ಗಣೇಶ್ ನಾಯ್ಕ್ ಉಳಿಯಾರು, ಮೀನಾಕ್ಷಿ ನಾಯ್ಕ್ ಕರಂದಾಡಿ, ಸಂತೋಷ್ ನಾಯ್ಕ್ ಉಳಿಯಾರು ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಧನ ಸಹಾಯ ನೀಡಿದ ಸದಸ್ಯರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ನೀಲಾನಂದ ನಾಯ್ಕ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ನಾಯ್ಕ್ ವರದಿ ವಾಚಿಸಿದರು. ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಲೆಕ್ಕ-ಪತ್ರ ಮಂಡಿಸಿದರು. ಸುನಿಲ್ ನಾಯ್ಕ್ ಹಾಗೂ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸುಜಾತ ವಂದಿಸಿದರು.
ಕಾಪು : ಶ್ರೀ ರಾಮ ಅನುದಾನಿತ ಹಿ. ಪ್ರಾ. ಶಾಲೆ, ಮಜೂರು - ಕರಂದಾಡಿ - ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ
Posted On: 14 Jan 2026, 06:54 AM
ಕಾಪು : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಜೂರು - ಕರಂದಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ನೆರವೇರಿತು.
ಕಾರ್ಯಕ್ರಮವನ್ನು ಉದ್ಯಮಿ ಸಂತೋಷ್ ಶೆಟ್ಟಿ ಪಡುಬಿದ್ರಿ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳಾದ ಅಬ್ದುರ್ ರಶೀದ್ ಸಖಾಫಿ,ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಕಾಪು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಾಜಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದಿನ್ ಶೇಖ್ ಕರಂದಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಂದಾಡಿ ಪದ್ಮನಾಭ ಶಾನುಭಾಗ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪಿ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಶಾಲಾ ಮುಖ್ಯ ಶಿಕ್ಷಕ ಆರ್ ಎಸ್ ಕಲ್ಲೂರ, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಕೋಶಾಧಿಕಾರಿ ನಾಗಭೂಷಣ್ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭ ಸಂತೋಷ್ ಶೆಟ್ಟಿ ಪಡುಬಿದ್ರಿ ಇವರನ್ನು ಸನ್ಮಾನಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ ವಾಸುದೇವ ರಾವ್ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಎಮ್ ಕೆ ಇಬ್ರಾಹಿಂ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಸ್ವಾತಂತ್ರ್ಯ ಹೋರಾಟಗಾರ ಕೆ.ಎಲ್.ಶರ್ಮಾ ಕ್ರೀಡಾಂಗಣ ಮತ್ತು ಶಾಲಾ ಸಭಾಂಗಣದ ಉದ್ಘಾಟನೆ
Posted On: 12 Jan 2026, 08:11 PM
ಶಿರ್ವ : ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿ ಅನೇಕ ವರ್ಷಗಳ ಕಾಲ ಜೈಲುವಾಸ ಸಹಿತ ಕಠಿಣ ಶಿಕ್ಷೆ ಅನುಭವಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ಗಾಂಧೀವಾದಿ ಕೆ.ಎಲ್.ಶರ್ಮಾ ಇವರ ನೆನಪಿನಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಅವರ ಮಕ್ಕಳು ಶಾಲಾ ಶತಮಾನೋತ್ಸವದ ಸಂದರ್ಭದಲ್ಲಿ ತಾವು ಕಲಿತ ಶಾಲಾ ಕ್ರೀಡಾಂಗಣವನ್ನು ನವೀಕರಿಸಿ ಅವರ ನೆನಪಿನಲ್ಲಿ ನೀಡಿದ್ದು ಅದರ ನಾಮಫಲಕವನ್ನು ಪುತ್ರ ರಾಮಕೃಷ್ಣ ಶರ್ಮಾ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಶರ್ಮಾರವರ ಮಕ್ಕಳಾದ ಶಾರದಾ ಶರ್ಮಾ, ಶಶಿಕಲಾ ಶರ್ಮಾ, ಸುನಂದಾ ಶರ್ಮಾ, ಡಾ.ರಾಧಾಕೃಷ್ಣ ಶರ್ಮಾ, ಸೊಸೆ ಚಂದ್ರಕಾ ಶರ್ಮಾ ಉಪಸ್ಥಿತರಿದ್ದರು.
ಶಾಲಾ ಸಭಾಂಗಣದ ಉದ್ಘಾಟನೆ : ಶಾಲಾ ಮೂಲ ಸಭಾಭವನವನ್ನು ಸಂಪೂರ್ಣ ನವೀಕರಣಗೊಳಿಸಿದ ಶಾಲಾ ಹಳೆವಿದ್ಯಾರ್ಥಿ ಲೂವಿಸ್ ಮಾರ್ಟಿಸ್ ಮತ್ತು ಸಿಸಿಲಿಯಾ ಮಾರ್ಟಿಸ್, ಹಳೆವಿದ್ಯಾರ್ಥಿನಿಯರಾದ ಅವರ ಮಕ್ಕಳ ಸಹಭಾಗಿತ್ವದಲ್ಲಿ ಶತಮಾನೋತ್ಸವದ ಶುಭಾವಸರದಲ್ಲಿ ನೀಡಿದ್ದು, ಅದರ ಉದ್ಘಾಟನೆಯನ್ನು ಲೂವಿಸ್ ಮಾರ್ಟಿಸ್ ನೆರವೇರಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ದಾನಗಳಲ್ಲಿ ಅತ್ಯಂತ ಸರ್ವ ಶ್ರೇಷ್ಠ ದಾನವೇ ರಕ್ತದಾನ : ರಕ್ತದಾನಿ ದೇವದಾಸ್ ಪಾಟ್ಕರ್
Posted On: 12 Jan 2026, 08:09 PM
ಶಿರ್ವ : ಅಪಘಾತ, ತುರ್ತು ಶಸ್ತ್ರಚಿಕಿತ್ಸೆ, ಹೆರಿಗೆ ಸಮಯದಲ್ಲಿ ರಕ್ತದ ಬೇಡಿಕೆ ಅಧಿಕವಾಗಿರುತ್ತದೆ. ಎಷ್ಟೇ ಹಣ ಕೊಟ್ಟರೂ ರಕ್ತ ಸಿಗುವುದಿಲ್ಲ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು. ಆರೋಗ್ಯವಂತ ಯುವಕರು, ಯುವತಿಯರು ರಕ್ತದಾನಕ್ಕೆ ಸಜ್ಜಾಗಬೇಕು. ರಕ್ತದಾನ ಅತ್ಯಂತ ಪುಣ್ಯ ಕಾರ್ಯವಾಗಿದ್ದು ದಾನಗಳಲ್ಲಿ ಅತ್ಯಂತ ಸರ್ವ ಶ್ರೇಷ್ಠ ದಾನವೇ ರಕ್ತದಾನ ಎಂದು 80 ಬಾರಿ ರಕ್ತದಾನ ಮಾಡಿದ ಹಾಗೂ ರಾಜ್ಯ ಸರಕಾರದಿಂದ ಶ್ರೇಷ್ಠ ರಕ್ತದಾನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ನುಡಿದರು.
ಅವರು ಶತಮಾನೋತ್ಸವದ ಸಂಭ್ರಮದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಹಾಗೂ ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇದರ ಆಶ್ರಯದಲ್ಲಿ ಮಣಿಪಾಲ ಆಸ್ಪತ್ರೆಯ ರಕ್ತನಿಧಿ ವಿಭಾಗದ ಸಹಕಾರದೊಂದಿಗೆ ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ರೋಟರಿ ಕ್ಲಬ್ ಶಿರ್ವ,ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಬಿ.ಸಿ.ರೋಡ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಇವರ ಸಹಭಾಗಿತ್ವದಲ್ಲಿ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವದಾಸ್ ಪಾಟ್ಕರ್ ಸಹಿತ 20ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಶಿಬಿರದ ರಕ್ತದಾನಿಗಳಿಗೆ ವಿಶೇಷ ಕಿಟ್ನೀಡಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ.ಅಧ್ಯೆಕ್ಷೆ ಸವಿತಾ ರಾಜೇಶ್, ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ,ಅನಿತಾ ಡಿಸೋಜಾ ಬೆಳ್ಮಣ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿದರು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಮೇಬಲ್ ಮಿನೇಜಸ್, ಉಮೇಶ್ ರಾವ್, ಡೆನೀಸ್ ಡಿಸೋಜಾ, ಡಾ,ವಿಟ್ಠಲ್ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್,ಇನ್ನಿತರರು ಉಪಸ್ಥಿತರಿದ್ದರು.
ಸ್ಮಿತಾ ಎಂಟರ್ಪ್ರೈಸಸ್ ಮಾಲಕತ್ವದ ಎಮ್ಆರ್ಪಿಎಲ್ ಪೆಟ್ರೋಲ್ ಪಂಪ್ ಉದ್ಘಾಟನೆ
Posted On: 09 Jan 2026, 04:17 PM
ಶಿರ್ವ : ಇಲ್ಲಿನ ಪಂಜಿಮಾರು ಶ್ರೀ ಮುಲ್ಕಾಡಿ ದೇವಸ್ಥಾನ ದ್ವಾರದ ಮುಂಭಾಗ ಪ್ರತಿಷ್ಠಿತ ಎಮ್ ಆರ್ ಪಿ ಎಲ್ ಪೆಟ್ರೋಲ್ ಪಂಪ್ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಕೃಷ್ಣಾಪುರ ಮಠ ಉಡುಪಿಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚಿಸಿ, ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಿರ್ವ ಚರ್ಚ್ನ ಧರ್ಮ ಗುರು ಡಾ. ಲೆಸಿಲ್ಲೆ ಕ್ಲೇಪೋರ್ಡ್ ಡಿಸೋಜ, ಕತಿಬ್ ಸುನ್ನಿ ಜಾಮಿಯಾ ಮಸೀದಿ ಶಿರ್ವ ಇದರ ಮೌಲನ ಸಿರ್ಜದ್ದುನ್ ಜೈನಿ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತ ರಾಜೇಶ್, ಎಮ್ ಆರ್ ಪಿ ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸ್ವಾಮಿ ಪ್ರಸಾದ್, ಅರವಿಂದ್ ಆರ್, ಉದ್ಯಮಿ ನವೀನ್ ಅಮೀನ್ ಶಂಕರಪುರ ಉಪಸ್ಥಿತರಿದ್ದರು.
ಸ್ಥಳೀಯ ರಿಕ್ಷಾ ಚಾಲಕ ಮಾಲಕರ ವತಿಯಿಂದ ಸಿ ಎನ್ ಜಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಂಸದರಿಗೆ ಮನವಿ ನೀಡಲಾಯಿತು.
ಸ್ಮಿತಾ ಎಂಟರ್ಪ್ರೈಸ್ ಪ್ರವರ್ತಕ ಸುಬ್ರಹ್ಮಣ್ಯ ಎನ್ ಭಟ್ ಸ್ವಾಗತಿಸಿದರು.
