Updated News From Kaup

ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಗೌರವ ಪುರಸ್ಕಾರಕ್ಕೆ ಯಶೋದಾ ಕೇಶವ್ ಆಯ್ಕೆ

Thumbnail
Posted On: 08 Feb 2026, 11:10 PM

ಉಡುಪಿ : ತುಳುನಾಡ ಧ್ವನಿ ಸುದ್ದಿ ಜಾಲತಾಣದ ಮುಖ್ಯಸ್ಥೆಯಾದ ಯಶೋದಾ ಕೇಶವ್ ಇವರು ಪ್ರತಿಷ್ಠಿತ ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ABRSM-KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿಸಿರುವ “ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ” ಕಾರ್ಯಕ್ರಮದ ಅಂಗವಾಗಿ ಈ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. 

ಸಮಾಜಮುಖಿ ಕಾರ್ಯಗಳು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಯಶೋದಾ ಕೇಶವ್ ಇವರಿಗೆ ತುಳು ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಅನನ್ಯ ಸೇವೆ, ಸಾಧನೆಗಾಗಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಬರುವ ಫೆಬ್ರವರಿ 16 ತಾರೀಕಿನಂದು ಪುತ್ತೂರು ನೆಹರು ನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಲಿರುವ ರಾಣಿ ಅಬ್ಬಕ್ಕ 500 ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ 100 ನೇ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ನಡೆಯಲಿರುವ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಬಹುಮುಖ ಪ್ರತಿಭೆ 
ಯಶೋದಾ ಕೇಶವ್ ಇವರು ತುಳುನಾಡ ಧ್ವನಿ  ಸುದ್ದಿ ಜಾಲತಾಣ ಹಾಗೂ ಯುಟ್ಯೂಬ್ ಚಾನೆಲ್ ಮೂಲಕ ತುಳು ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಮಹಿಳೆ. ತುಳು ಭಾಷೆಗೆ ಯಾವುದೇ ರೀತಿಯ ಧ್ವನಿ ಎತ್ತಲು ಹಿಂಜರಿಯದೆ ನೇರವಾಗಿ ಪ್ರಶ್ನಿಸುವ ಸ್ವಭಾವ ಇವರದಾಗಿದೆ. ಯಾವುದೇ ದೊಡ್ಡ ವೇದಿಕೆ ಇರಲಿ ಇವರು ಮೊದಲು ಪ್ರಾಶಸ್ತ್ಯ ಕೊಡುವುದು ತುಳು ಭಾಷೆಗೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಸಮಾಜಸೇವೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

 ಸಿರಿ ತುಳುವ ಚಾವಡಿ, ತುಳುಕೂಟ ಉಡುಪಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ, ತುಳು ವರ್ಲ್ಡ್ ಫೌಂಡೇಶನ್, ರೋಟರಿ, ಬಿಎನ್ ಐ, ಸಂಸ್ಥೆ, ಸರ್ವದಾ ಯುವ ಸಂಘ, ಮೊಗವೀರ ಯುವ ಸಂಘಟನೆ, ಗಣೇಶೋತ್ಸವ ಸಮಿತಿ, ಹಾಗೆಯೇ ಹಲವಾರು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹಲವಾರು ತುಳು ನಾಟಕಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ಇವರು ತುಳು ಭಾಷೆಯ ಉತ್ತಮ ನಿರೂಪಕಿಯೂ ಆಗಿದ್ದಾರೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಉಡುಪಿ ಭಾಗದಲ್ಲಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇವರ ಕಾರ್ಯವೈಖರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವ ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಿದೆ.

ಪಡುಬಿದ್ರಿ : ವಾಡ್೯ ಸಭೆ ; ಸಮಸ್ಯೆ ಹಲವು ಫಂಡಿಲ್ಲ ಫಂಡಿಲ್ಲ ; ಪಿಡಿಒ ಗೈರು

Thumbnail
Posted On: 08 Feb 2026, 02:48 PM

ಪಡುಬಿದ್ರಿ : ವಾಡ್೯ ಸಭೆಗೆ ಪಿಡಿಒರವರ  ಗೈರು ಹಾಗೂ ಅನುಮತಿ ನೀಡುವಾಗ ಸ್ಥಳ ಪರಿಶೀಲಿಸದೆ ಅನುಮತಿ ನೀಡುವ ಬಗ್ಗೆಯೂ ಗ್ರಾಮಸ್ಥರ ಜೊತೆಗೆ ಪಂಚಾಯತ್ ಸದಸ್ಯರ ಅಸಮಾಧಾನಕ್ಕೆ ಕಾರಣವಾದ ಪಡುಬಿದ್ರಿ ಗ್ರಾಮ ಪಂಚಾಯತ್ ನ ವಾಡ್೯ 5 ಮತ್ತು 6ನೇ ಸಭೆಯು ಶನಿವಾರ ಸಂಜೆ  ಗ್ರಾ.ಪಂ.ಸಭಾಂಗಣದಲ್ಲಿ  ನಡೆಯಿತು.

ಪಡುಹಿತ್ಲುಗೆ ಸಾಗುವ ರಸ್ತೆಯಲ್ಲಿ ಸರಿಯಾದ  ಪ್ಯಾಚ್ ವಕ್೯ ನಡೆಸದ ಬಗ್ಗೆ, ಹಲವಾರು ಕುಟುಂಬಗಳ ಬಿಪಿಎಲ್ ಕಾಡ್೯ ರದ್ಧತಿ, ಮೆಸ್ಕಾಂರವರು ತಂತಿಗೆ ತಗುಲಿದ ಗೆಲ್ಲನ್ನು ಮಳೆಗಾಲಕ್ಕೂ ಮುನ್ನ ಕಡಿಯಬೇಕೆಂದು, ಸದಸ್ಯರಿಗೆ ಗೊತ್ತಾಗದೆ ಪಿಡಿಒರವರು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ಜೊತೆಗೆ ರಸ್ತೆಯನ್ನು ಆಕ್ರಮಿಸಿ ಕೌಂಪೌಂಡ್ ಕಟ್ಟಿ ಹೂವಿನ ಗಿಡಗಳನ್ನು ಮಾಡಿದರೂ ಪಂಚಾಯತ್ ಗಮನವಹಿಸುತ್ತಿಲ್ಲ. 
ವಾಡ್೯ 5ರಲ್ಲಿರುವ ಲೇ ಔಟ್ ನವರಿಂದ ದಾರಿ ಮುಚ್ಚಿದ ಬಗ್ಗೆ ಮತ್ತು ಕಸವನ್ನು ಪಂಚಾಯತ್ ಕಸ ವಿಲೇವಾರಿಗೆ ನೀಡದಿರುವ ಬಗ್ಗೆ, ನದಿಯ ಹೂಳೆತ್ತುವ ಕಾರ್ಯ ಮಾಡಿ ನೆರೆಯನ್ನು ಕಡಿಮೆ ಮಾಡಿ, ನೀರಿನ ಪೈಪ್ ಒಡೆದು ನೀರು ಪೋಲು, 6ನೇ ವಾಡ್೯ ನಲ್ಲಿ ಕೆಸರು ನೀರು ಬಂದು ಕುಡಿಯಲು ಯೋಗ್ಯವಾಗಿಲ್ಲ ಎಂದು, ನಂದಿಕೂರಿನಲ್ಲಿ ಕಾರ್ಯಚರಿಸುವ ಎಂ 11 ಕಂಪನಿಯಿಂದ ಬೆಳಗ್ಗೆ, ಸಂಜೆ ಸಮಯ ವಾಸನೆ ಬರುತ್ತಿದೆ ಎನ್ನುವುದರ ಬಗ್ಗೆ ಗ್ರಾಮಸ್ಥರಿಂದ ಪಂಚಾಯತ್ ಗಮನಕ್ಕೆ ತರಲಾಯಿತು.

ಗ್ರಾಮಸಭೆಯಲ್ಲಿ ಪಂಚಾಯತ್ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಸಮ್ಮುಖ ಪರಿಹಾರ ನೀಡುವ ಬಗ್ಗೆ, ಪಡುಬಿದ್ರಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಸಮಸ್ಯೆ ಹೋಗಲಾಡಿಸುವ ಬಗ್ಗೆ, ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಿ ಎಂದು  ಪಂಚಾಯತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ವಾಡ್೯ 5 ರ ಸದಸ್ಯರಾದ ಮಹೇಂದ್ರ, ಯಶೋಧ, ವಾಡ್೯ 6 ರ ಸದಸ್ಯರಾದ ವಿಜಯಲಕ್ಷ್ಮಿ, ಗಣೇಶ್ ಕೋಟ್ಯಾನ್, ಪಂಚಾಯತ್ ಕಾರ್ಯದರ್ಶಿ ರೂಪಲತಾ, ಗ್ರಾಮಸ್ಥರು ಉಪಸ್ಥಿತರಿದ್ದರು.

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ "ಬೆಲ್ಲದ ಗಟ್ಟಿ" ತುಳು ಚಲನಚಿತ್ರ

Thumbnail
Posted On: 08 Feb 2026, 02:34 PM

ಬರಹ : ಪಿ.ಎಸ್.ರಂಗನಾಥ ಮಸ್ಕತ್, ಒಮಾನ್ ರಾಷ್ಟ್ರ

ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳೊನ್ನಳೊಗೊಂಡ ತುಳು ಚಲನಚಿತ್ರ "ಬೆಲ್ಲದ ಗಟ್ಟಿ" ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಫೆ.6, ಶುಕ್ರವಾರದಂದು ಪ್ರೀಮಿಯರ್ ಶೋದಲ್ಲಿ ತುಳು ಚಿತ್ರ ಪ್ರೇಮಿಗಳಿಂದ ಚಿತ್ರಮಂದಿರ ಭರ್ತಿಯಾಗಿ ಅದ್ಭುತ ಪ್ರದರ್ಶನ ಕಂಡು ಬಂತು. 

      ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದಲ್ಲಿ, ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ತುಳುನಾಡಿನ ಸುಂದರ ಬದುಕು, ಕರಾವಳಿ ದೈವಗಳು, ಕೌಟುಂಬಿಕ ಜೀವನ, ಕರಾವಳಿಯ ಸುಂದರ ಪ್ರಕೃತಿ, ಎಲ್ಲವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.  ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಘಟನೆಗಳ ಸನ್ನಿವೇಶಗಳಲ್ಲಿ ಬರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕರಾವಳಿಯ ಸುಂದರ ದೃಶ್ಯಗಳು ಚಿತ್ರದ ಛಾಯಾಗ್ರಹಣವೂ ಇನ್ನೊಂದು ಪ್ಲಸ್ ಪಾಯಿಂಟ್.  ಊರಿನಿಂದ ದೂರ ಇರುವ ಜನರು, ಆ ದೃಶ್ಯಗಳನ್ನು ನೋಡುವಾಗ ತಮ್ಮ ಹುಟ್ಟೂರನ್ನು ನೆನಪಿಸುವಂತೆ ಮಾಡುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ.

        ಚಿತ್ರದ ಚಿತ್ರಕಥೆ ಬಹಳ ಗಟ್ಟಿಯಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವಂತಿದೆ. ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ.  ಕರಾವಳಿ ಸಿಹಿ ತಿನಿಸು ‘ಬೆಲ್ಲದಗಟ್ಟಿ’ ಈ ಕಥೆಯ ತಿರುವು. ಗರ್ಭಿಣಿ ಜಾನಕಿ ಹಸಿವಾದಾಗ ಆಸೆಯಿಂದ ತಿಂದ ಆ ಒಂದು ಬೆಲ್ಲದಗಟ್ಟಿ ಇಡೀ ಮನೆಯ ಶಾಂತಿಯನ್ನು ಕದಡುತ್ತದೆ. ಮಾವನ ತಪ್ಪು ಕಲ್ಪನೆ ಹಾಗೂ ಸೊಸೆ ಜಲಜಾಳ ನಡುವಿನ ಮಾತಿನ ಚಕಮಕಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಮುಂಚಿನಿಂದಲೂ ಸೊಸೆ ಜಲಜಾಳ ಬಗ್ಗೆ ಮಾವನಿಗೆ ಅಸಹನೆ ಇರುತ್ತದೆ. 

    ದೈವದ ಹೆಸರಿನಲ್ಲಿ ಮಾವ ಮಾಡಿದ ಒಂದು ಸಣ್ಣ ತಪ್ಪು, ಇಡೀ ಮನೆಯ ವಾತಾವರಣವನ್ನೇ ಬದಲಿಸಿ ಬಿಡುತ್ತದೆ. ಈ ಘಟನೆಯ ನಂತರ ಜಾನಕಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳಾಗುತ್ತವೆ. ಅವಳ ವಿಚಿತ್ರ ನಡವಳಿಕೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ನಂತರ ನಡೆಯುವ ಘಟನೆಗಳು ಕಥೆಗೆ ಹೊಸ ಆಯಾಮ ನೀಡುತ್ತವೆ. ಕೊನೆಗೆ, ತನ್ನ ತಪ್ಪಿನ ಅರಿವಾಗುವ ಮಾವನಿಗೆ "ಮಗಳು ಮತ್ತು ಸೊಸೆ ಇಬ್ಬರೂ ಒಂದೇ" ಎಂಬ ಸತ್ಯ ದರ್ಶನವಾಗುತ್ತದೆ. "ಪರರ ಮನೆಯಿಂದ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು, ಅವಳ ತವರು ಮನೆಯನ್ನು ಹೀಯಾಳಿಸುವುದು ತಪ್ಪು" ಎಂಬ ಉದಾತ್ತ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

        ಥ್ರಿಲ್ಲರ್ ಜತೆಗೆ, ಚಿತ್ರದಲ್ಲಿ ಲಘು ಹಾಸ್ಯವೂ ಇದೆ.  ಹದಿ ಹರೆಯದ ಯುವಕ ಯುವತಿಯರ ಸನ್ನಿವೇಶ ಮತ್ತು  ನಿರ್ದೇಶಕ ರಾಜಾ ಕಟಪಾಡಿ ಯವರು, ಮಾತು ಬರದ ಮೂಗನಂತೆ ನಟಿಸಿರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. ಹಾಡುಗಳು ಸಹ ಸುಮಧರವಾಗಿ ಮೂಡಿ ಬಂದಿದೆ. ಚಿತ್ರದ ನಟ ನಟಿಯರು, ಪೋಷಕ ಕಲಾವಿದರು ಎಲ್ಲರೂ ಸ್ಥಳೀಯ ಕಲಾವಿದರು ಎನ್ನುವುದು ವಿಶೇಷ, ಪ್ರತಿಯೊಬ್ಬರೂ ಚಿತ್ರದಲ್ಲಿ ಮನಮುಟ್ಟುವಂತೆ ನಟಿಸಿದ್ದಾರೆ, ತೆರೆ ಮೇಲೆ ಪ್ರತಿ ಪಾತ್ರವು ತುಂಬಾ ಸರಳವಾಗಿ ನೈಜವಾಗಿ ಮೂಡಿ ಬರಲು ನಿರ್ದೇಶಕರು ಚಿತ್ರದ ಪ್ರಮುಖ ಪಾತ್ರದಾರಿಗಳಿಂದ ಕಥೆಗೆ ಬೇಕಾದ ನಟನೆಯನ್ನು ತೆಗೆಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಪ್ರಭುದ್ದತೆಯನ್ನು ಪ್ರತಿ ದೃಶ್ಯಗಳಲ್ಲಿ ಕಾಣಬಹುದು. ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಮಾತ್ರವಲ್ಲದೆ, ಭಟ್ಟರ ಪಾತ್ರದಲ್ಲಿ ಅನುಭವ ನಟರಂತೆ ಅದ್ಭುತವಾಗಿ ನಟಿಸಿದ್ದಾರೆ. 

        ವಿದ್ಯಾವಂತ ಯುವಕರು ಊರಿನಲ್ಲಿ ದುಡಿಯಲು ಸಾಧ್ಯವಿಲ್ಲ ಎಂದು ಹುಟ್ಟಿದ ಊರನ್ನ ಬಿಟ್ಟು ಮುಂಬಯಿಗೆ ಹೋಗಿ, ಅಲ್ಲಿ ಹೋಟೆಲ್ ಬಾರ್ ಗಳಲ್ಲಿ ದುಡಿದು ಉತ್ತಮವಾಗಿ ಹಣ ಸಂಪಾದಿಸುತ್ತಾರೆ. ಅವರ ಜೀವನವನ್ನು ನೋಡಿ ಬೇರೆಯವರು ಸಹ ಊರನ್ನು ಬಿಟ್ಟು ಮುಂಬಯಿಗೆ ಹೋಗಿ ಹಣ ಸಂಪಾದಿಸಲು ಪ್ರೇರೆಪಿಸುತ್ತದೆ, ಆದರೆ ಸ್ವಂತ ಊರಿನಲ್ಲಿ ರಾಜನಂತೆ ಬದುಕುವ ನೆಮ್ಮದಿ ಪರ ಊರಿನಲ್ಲಿ ಇಲ್ಲ ಎನ್ನುವ ಸ್ಮೂಕ್ಷ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸದಸ್ಯರಿಂದ ಶ್ರಮದಾನ

Thumbnail
Posted On: 08 Feb 2026, 02:28 PM

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಇದರ 374 ನೇ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಭಾನುವಾರ  ಪಡುಬಿದ್ರಿ ಬೀಚ್ ರಸ್ತೆ ಮತ್ತು ಪಡುಬಿದ್ರಿ ಬ್ರಹ್ಮಸ್ಥಾನ ರಸ್ತೆ ಕೂಡುವ ತಿರುವಿನಲ್ಲಿ ರಸ್ತೆಯ ಬದಿಯಲ್ಲಿ ದಟ್ಟವಾಗಿ ಬೆಳೆದ ಹುಲ್ಲುಗಳು ಅಪಾಯದ ಮುನ್ಸೂಚನೆ ನೀಡುತ್ತಿತ್ತು ಅದನ್ನು ಮನಗಂಡ ಸಂಸ್ಥೆಯ ಸದಸ್ಯರು ಶ್ರಮದಾನದ ಮೂಲಕ  ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ಶ್ರಮದಾನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಫೆ. 9 : ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮ

Thumbnail
Posted On: 07 Feb 2026, 10:12 PM

ಉಡುಪಿ : ನೃತ್ಯನಿಕೇತನ ಕೊಡವೂರು ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಜಂಟಿಯಾಗಿ ಆಯೋಜಿಸುತ್ತಿರುವ ಪಾಕ್ಷಿಕ ಸಮೂಹ ನೃತ್ಯಸರಣಿ ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮವು ಫೆಬ್ರವರಿ 9 ರಂದು ಸಂಜೆ ಗಂಟೆ 6:25 ಕ್ಕೆ ಕೊಡವೂರಿನ ವಸಂತಮಂಟಪದಲ್ಲಿ ನಡೆಯಲಿದೆ.

ಮಂಗಳೂರಿನ ಗಾನನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದವರಿಂದ ನಡೆಯಲಿದೆ ಎಂದು ವಿದುಷಿ ಸುಧೀರ್ ಮಾನಸಿ ಮತ್ತು ನೃತ್ಯನಿಕೇತನ ಕೊಡವೂರು ಕಲಾವಿದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ : ಅಬಾಕಸ್ ಮತ್ತು ವೇದಗಣಿತ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರಾಚಿ ಎಸ್ ಪೂಜಾರಿ

Thumbnail
Posted On: 07 Feb 2026, 10:03 PM

ಕಾಪು : ಇತ್ತೀಚಿಗೆ ಮೂಡಬಿದಿರೆಯಲ್ಲಿ ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ್ದ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ವೇದಗಣಿತ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ 21ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 3ನೇ ಸ್ಥಾನ, ಅಲ್ಲದೇ 2ನೇ ಅಂತರಾಷ್ಟ್ರೀಯ WEKIE CHAMP ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು   
ಕಟಪಾಡಿಯ ಪ್ರಾಚಿ ಎಸ್ ಪೂಜಾರಿ ಪಡೆದಿರುತ್ತಾರೆ.

ಈಕೆ ಆನಂದ ತೀರ್ಥ ವಿದ್ಯಾಲಯ ಪಾಜಕ ಕುಂಜಾರುಗಿರಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ. ಉದ್ಯಾವರ ಸಂಪಿಗೆನಗರ ಆರೂರು ತೋಟದ ಸಂತೋಷ ಪೂಜಾರಿ ಹಾಗೂ ಆರತಿ ಪೂಜಾರಿಯವರ ಪುತ್ರಿಯಾಗಿದ್ದಾರೆ.

 ಪ್ರಸ್ತುತ ಕಟಪಾಡಿಯ ರೈನ್ ಬೋ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯಲ್ಲಿ  ಹರಿಣಿ ರಾಜೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಈ ಸಾಧನೆಗೆ ಕುಟುಂಬಸ್ಥರು ಹಾಗೂ ಶಿಕ್ಷಕ ವೃಂದ ಶುಭಹಾರೈಸಿದ್ದಾರೆ.

ರಾಜ್ಯ ಮಟ್ಟದ ಪ್ರತಿಭಾಕಾರಂಜಿಯ ತುಳು ಭಾಷಣ ಸ್ಪರ್ಧೆಗೆ ವರ್ಷಿಣಿ ಮುಳ್ಳುಗುಡ್ಡೆ ಆಯ್ಕೆ

Thumbnail
Posted On: 06 Feb 2026, 11:20 PM

ಕಾಪು : ಉಡುಪಿ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು
ಫೆಬ್ರವರಿ 7 ರಂದು ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತುಳು ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಹೆಬ್ರಿ ಇಲ್ಲಿನ ಹತ್ತನೆಯ ತರಗತಿ ವಿದ್ಯಾರ್ಥಿನಿ ವರ್ಷಿಣಿ ಮುಳ್ಳುಗುಡ್ಡೆ ಸ್ಪರ್ಧಿಸಲಿದ್ದಾರೆ.

ಇವರು ಪೆರ್ಡೂರು ಗ್ರಾಮದ ಕೆಳಮುಳ್ಳುಗುಡ್ಡೆ ರವಿಕುಲಾಲ್ ಮತ್ತು ಮಮತಾ ಕುಲಾಲ್ ದಂಪತಿಗಳ ಪುತ್ರಿ.

ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಪೂರ್ವಕ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Thumbnail
Posted On: 06 Feb 2026, 11:17 PM

ಕಾಪು : ಶಿಲಾಮಯ ಸುತ್ತುಪೌಳಿ ನಿರ್ಮಾಣ, ಹೊರಾಂಗಣದ ತಗಡು ಚಪ್ಪರ ನವೀಕರಣ, ಕಲ್ಯಾಣ ಮಂಟಪ ಪ್ರಥಮ ಅಂತಸ್ತು ನಿರ್ಮಾಣದ ಮಹಾ ಕಾಮಗಾರಿಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಅಣಿಗೊಳ್ಳುತ್ತಿರುವ  ಸಾಂತೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಅರ್ಚಕ ವೃಂದ ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿಗಳ ಜಂಟಿ ಸಮಾಲೋಚನಾ ಸಭೆಯು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ  ಸುಧೀರ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.

 ಕ್ಷೇತ್ರದ ಪ್ರಧಾನ ಅರ್ಚಕರಾದ ವೇ.ಮೂ. ವಿಠಲ ಜೋಯಿಸರು ಆಶೀರ್ವಚನ ನೀಡಿದರು. 

ಬ್ರಹ್ಮಕಲಶೋತ್ಸವ ಮುಂಬೈ ಸಮಿತಿಯ ಅಧ್ಯಕ್ಷರಾದ ಸಾಂತೂರು ನಡಿಮನೆ  ಚಂದ್ರಶೇಖರ ಶೆಟ್ಟಿಯವರು ಸಮಿತಿಯ ಜವಾಬ್ದಾರಿ ಹಾಗೂ ಸರ್ವ ಗ್ರಾಮಸ್ಥರ ತೊಡಗಿಸುವಿಕೆ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷರಾದ ಮುಂಡ್ಕೂರು ಅಂಗಡಿಗುತ್ತು  ಪ್ರಸಾದ್ ಎಂ. ಶೆಟ್ಟಿಯವರು ತಮ್ಮ ಅನುಭವದ ಮಾತಿನೊಂದಿಗೆ ಸಮಗ್ರ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಅನಂತ ತಂತ್ರಿ,  ಸಾಮನಾಡಿಗುತ್ತು ರತ್ನಾಕರ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಸಾಂತೂರು ಪರಾಡಿ ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.

ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸಮಿತಿಗಳ ಸದಸ್ಯರು, ಸಾಂತೂರು-ಪಿಲಾರು ಗ್ರಾಮಸ್ಥರು,  ಭಗವದ್ಭಕ್ತರು ಉಪಸ್ಥಿತರಿದ್ದರು.

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ವಿಕ್ಕಿ ಪೂಜಾರಿ ಮಡುಂಬು

Thumbnail
Posted On: 06 Feb 2026, 11:13 PM

ಕಾಪು : 28 ವರುಷಗಳನ್ನು ಪೂರೈಸಿರುವ ವಲಯ 15ರ ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿಗೆ ನೂತನ ಅಧ್ಯಕ್ಷ ಜೆಸಿ ವಿಕ್ಕಿ ಪೂಜಾರಿ ಮಡುಂಬು ಅವರು ಆಯ್ಕೆಯಾಗಿದ್ದಾರೆ.

 ಪದಪ್ರಧಾನ ಸಮಾರಂಭವು ಜನವರಿ 31ರ ಶನಿವಾರ ಕಾಪು ಜೆಸಿಐ ಭವನದಲ್ಲಿ ಜರಗಿತು.

 ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜರ್ಷಿ ಕೆ. ವಾಸುದೇವ ಶೆಟ್ಟಿ,  ವಲಯಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ ವಿಟ್ಲ, ವಲಯ ಪೂರ್ವಾಧ್ಯಕ್ಷ ಜೆಸಿ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಜೆಸಿ ಅರುಣ್ ಮಾಂಜ, ನಿಕಟಪೂರ್ವ ಅಧ್ಯಕ್ಷೆ ಜೆಸಿ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.

2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗೃಹ ರಕ್ಷಕ ದಳದಲ್ಲಿ ಸೇವಾ ನಿರತರಾಗಿರುವ ಲಕ್ಷ್ಮೀ ನಾರಾಯಣ ರಾವ್ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

2026ನೇ ಸಾಲಿಗೆ ಜೆಸಿಐ ಕಾಪು ಘಟಕದ ಕಾರ್ಯದರ್ಶಿಯಾಗಿ ಜೆಸಿ ಶ್ರುತಿ ಶೆಟ್ಟಿ, ಲೇಡಿ ಜೆಸಿ ಕೋ-ಆರ್ಡಿನೆಟರ್ ಜೆಸಿ ಕವಿತಾ ಕುಂದರ್, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಜೆಜೆಸಿ ಮನ್ವಿತ್ ಬಂಗೇರ, ಕೋಶಾಧಿಕಾರಿಯಾಗಿ ಜೆಸಿ ಶ್ರಾವ್ಯ ಜೆ. ಬಂಗೇರ ಕಾರ್ಯನಿರ್ವಹಿಸಲಿದ್ದಾರೆ.

ಉಡುಪಿ : ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟ - ವಂದೇ ಮಾತರಂ ಟ್ರೋಫಿ 2026ರ ಪೋಸ್ಟರ್ ಬಿಡುಗಡೆ

Thumbnail
Posted On: 06 Feb 2026, 11:10 PM

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಗತಿವಿದಿಯ ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಉಡುಪಿ  
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ವಂದೇ ಮಾತರಂ ಟ್ರೋಫಿ 2026 ರ ಪೋಸ್ಟರ್ ಬಿಡುಗಡೆಯನ್ನು ಪರ್ಯಾಯ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.

ಈ ಸಂದರ್ಭ ನಗರ ಕಾರ್ಯದರ್ಶಿ, ನಗರ ಸಂಘಟನ ಕಾರ್ಯದರ್ಶಿ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.