Updated News From Kaup

ಕಳತ್ತೂರು : ಪಿ.ಕೆಎಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ.

Thumbnail
Posted On: 25 Apr 2026, 03:39 PM

ಕಾಪು : ಕಳತ್ತೂರು ಪಿ. ಕೆ. ಎಸ್ ಪ್ರೌಢಶಾಲೆಗೆ 2025-26 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿರುತ್ತಾರೆ.

ಸಾಧನೆಗೈದ  ಹೆಮ್ಮೆಯ ವಿದ್ಯಾರ್ಥಿಗಳು : 
ಕೆ, ಮೊಹಮ್ಮದ್ ಶಾಯಿಲ್ (589), ತೇಜಸ್ (581),ಬಸವರಾಜ (525),ಸಾತ್ವಿಕ (507),ವರ್ಷಿಣಿ (491), ಮೊಹಮ್ಮದ್ ರಯಾನ್ (480),ಆಕಾಶ್ (478),ಸಾರ್ಥಕ್ (471)ಸ್ವಸ್ತಿಕ್ (444),ಮೆಹೆಕ್ ಫಾತಿಮಾ (437).

ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಸಂಘ ಅಭಿನಂದಿಸಿರುತ್ತಾರೆ.

ಎ.26 : ಗ್ರೀನ್ ವುಡ್ ರೆಸಾಟ್೯ ಮಜೂರು ಇವರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ

Thumbnail
Posted On: 25 Apr 2026, 01:25 PM

ಕಾಪು : ಗ್ರೀನ್ ವುಡ್ ರೆಸಾಟ್೯ ಮಜೂರು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್‌ (ರಿ) ಕಾಪು ತಾಲೂಕು ಇವರ ಸಹಯೋಗದೊಂದಿಗೆ ಜುಲೇಖ ಯೆನೆಪೋಯ ಇಸ್ಟಿಟ್ಯೂಟ್ ಆಫ್ ಓಂಕಲಜ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ದೇರಳಕಟ್ಟೆ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ವತಿಯಿಂದ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಎ. 26, ಭಾನುವಾರ ಗ್ರೀನ್ ವುಡ್ ಆರ್ ಕೆ ಹೋಮ್ ಸ್ಟೇ ಇಲ್ಲಿ ಜರಗಲಿದೆ.

ಶಿಬಿರದಲ್ಲಿ ಮಹಿಳಾ ಯೋಗಕ್ಷೇಮ ಪರೀಕ್ಷೆ, 
ಕಣ್ಣಿನ ವಿಭಾಗ (ಅಗತ್ಯವಿದ್ದವರಿಗೆ ಉಚಿತ ಕನ್ನಡಕ ನೀಡಲಾಗುವುದು), ಸಾಮಾನ್ಯ ವೈದ್ಯಕೀಯ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಚರ್ಮ ರೋಗ ವಿಭಾಗ, ರಕ್ತದೊತ್ತಡ ಮತ್ತು ಮಧು ಮೇಹ ತಪಾಸಣೆ, 
ದಂತ ವೈದ್ಯಕೀಯ ವಿಭಾಗದ ಸೇವೆ ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಶಿಬಿರದ ಆಯೋಜಕರಾದ ದೀಪಕ್ ಕುಮಾರ್ ಎರ್ಮಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.25 : ಮಂಗಳೂರು ರಾಜಾಜಿ ಪಾರ್ಕಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ KSSAP ಪ್ರಶಸ್ತಿ ಪ್ರದಾನ

Thumbnail
Posted On: 22 Apr 2026, 06:26 PM

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕಿನಲ್ಲಿ ಎ.25, ಶನಿವಾರ ಸಂಜೆ 5 ನಡೆಸುವ “ಕನ್ನಡ ಝೇಂಕಾರ” ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ.

 ತನ್ನ ವಿಶ್ರಾಂತ ಜೇವನದಲ್ಲೂ ಮಕ್ಕಳ ಬುದ್ದಿ ಮತ್ತೆ ವೃದ್ಧಿಸಲು 1400 ಕ್ಕೂ ಹೆಚ್ಚು ಉಪನ್ಯಾಸ ನೀಡಿರುವ, ನೀಡುತ್ತಿರುವ ಬೆಂಗಳೂರಿನ ಓಂಕಾರಪ್ರಿಯ ಬಾಗೇಪಲ್ಲಿಯವರಿಗೆ –KSSAP ಕನ್ನಡ ಕಣ್ಮಣಿ ಪ್ರಶಸ್ತಿ ,  ಕಾಸರಗೋಡಿನಲ್ಲಿ  ಕನ್ನಡಕ್ಕಾಗಿ ಆಹರ್ನಿಸಿ ದುಡಿಯುವ, ದುಡಿಯುತ್ತಿರುವ ಡಾ.ವಾಮನ್ ರಾವ್ ಮತ್ತು  ಸಂಧ್ಯಾ ರಾಣಿ ಯವರಿಗೆ – ಗಡಿನಾಡ ಕನ್ನಡ ಪೋಷಕ ಪ್ರಶಸ್ತಿ, ನಮ್ಮ ವಿಶ್ವ ದಾಖಲೆ ಗಾಯನ ಕಾರ್ಯಕ್ರಮದಲ್ಲಿ ನಿರಂತರ 12 ಗಂಟೆಗಳ ಕಾಲ ಒಂದು ಕ್ಷಣವೂ ಧ್ವನಿವರ್ಧಕದಲ್ಲಿ ಅಪಸ್ವರ ಬಾರದಂತೆ ಕರ್ತವ್ಯ ನಿರ್ವಹಿಸಿದ ಮಂಗಳೂರಿನ ಗಣೇಶ್ ಬಂಗೇರ ಇವರಿಗೆ - KSSAP ಸೂಪರ್ ಸೌಂಡ್ ಮಾಸ್ಟರ್ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ಮೀನುಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊ. ಆಂಜನೇಯಪ್ಪ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಲಿದ್ದಾರೆ.  

ಮುಖ್ಯ ಅತಿಥಿಗಳಾಗಿ ಮ.ನ.ಪಾ. ನಗರ ಯೋಜನಾಧಿಕಾರಿ ನಾಗೇಂದ್ರ ಎನ್. ಕವಿ ಬರಹಗಾರ, ಶಿವಪ್ರಸಾದ್ ಕೊಕ್ಕಡ, ಸಾಮಾಜಿಕ ಚಿಂತಕ ರಂಜನ್ ಕುಮಾರ್, NSCDF  ಅಧ್ಯಕ್ಷ ಗಂಗಾಧರ್ ಗಾಂಧಿ, ಭಾಗವಹಿಸಲಿದ್ದಾರೆ.  

ಮಂಗಳೂರು ಸಹ್ಯಾದ್ರಿ ಕಾಲೇಜಿನ ಪ್ರಾದ್ಯಾಪಕಿ ಪ್ರೊ.ಅಕ್ಷಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಮೂಗಪ್ಪ ಗಾಳೇರ, ಆಕೃತಿ ಐ.ಎಸ್.ಭಟ್, ಮಂಡ್ಯ ಅನಾರ್ಕಲಿ ಸಲೀಂ, ಗಿರೀಶ್ ಪೆರಿಯಡ್ಕ, ತನ್ಸೀರಾ ಆತೂರು, ಸುಲೋಚನಾ ನವೀನ್ ಕೊಟ್ಟಾರ, ನಿರೀಕ್ಷಿತಾ ಮಂಗಳೂರು, ರಶ್ಮಿ ಸನಿಲ್, ಸುಖಲತ ಶೆಟ್ಟಿ. ರೇಖಾ ಸುದೇಶ್ ರಾವ್, ವ. ಉಮೇಶ್ ಕಾರಂತ, ಅನಿತಾ ಶೆಣೈ, ಎಂ.ಎ. ಮುಸ್ತಫಾ ಬೆಳ್ಳಾರೆ, ಓಂಕಾರಪ್ರಿಯ ಬಾಗೇಪಲ್ಲಿ, ಮುಂತಾದ ಕವಿಗಳು ಭಾಗವಹಿಸಲಿದ್ದಾರೆ.  

ಕಾರ್ಯಕ್ರಮವನ್ನು ರಶ್ಮಿ ಸನಿಲ್ ನಿರೂಪಿಸಲಿದ್ದಾರೆ. ಎಂ. ಆರ್. ಗುರುರಾಜ್ ಕಾಸರಗೋಡು ತಂಡದಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಗಂಗಾಧರ್ ಗಾಂಧಿ, ನೇತ್ರಾ ಖುಷಿ ಮತ್ತು ದೃತಿ ಪಿ. ಶೆಟ್ಟಿ  "ಬೆಳ್ಳಿ ತೆರೆಯ ಬಂಗಾರದ ಗೀತೆಗಳು"ಗೆ  ಧ್ವನಿಯಾಗಲಿದ್ದಾರೆ ಎಂದು KSSAP ಕಾರ್ಯದರ್ಶಿ ಕಲಾವತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.24 : ತ್ರಿಶಾ ವಿದ್ಯಾ ಪಿ.ಯು ಕಾಲೇಜು ಕಟಪಾಡಿ - ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

Thumbnail
Posted On: 22 Apr 2026, 06:18 PM

ಕಾಪು : ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವತಿಯಿಂದ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ಸಲುವಾಗಿ ಸನ್ಮಾನ ಸಮಾರಂಭವನ್ನು ಎ.24,  ಶುಕ್ರವಾರ ಸಂಜೆ 4 ಗಂಟೆಯಿಂದ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ  ಆಯೋಜಿಸಲಾಗಿದೆ ಎಂದು ತ್ರಿಶಾ ವಿದ್ಯಾ ಪಿ.ಯು ಕಾಲೇಜು ಕಟಪಾಡಿ ಇಲ್ಲಿನ ಪ್ರಾಂಶುಪಾಲರಾದ ಪ್ರೊ.ಹರಿಪ್ರಸಾದ್ ಬುಧವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರಾವಳಿ ಕರ್ನಾಟಕದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ತ್ರಿಶಾ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಆರಂಭವಾದ ನಾಲ್ಕು ವರ್ಷಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 11 ರ್‍ಯಾಂಕ್ ಗಳನ್ನು ಪಡೆದುಕೊಂಡಿದೆ . ಪ್ರಸಕ್ತ ವರ್ಷ ವಿಜ್ಞಾನ ವಿಭಾಗದಲ್ಲಿ 1  ಮತ್ತು ವಾಣಿಜ್ಯ ವಿಭಾಗದಲ್ಲಿ 8 ರ‍್ಯಾಂಕುಗಳನ್ನು ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.
ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗಗಳಲ್ಲೂ ಸಾಧನೆಗಳನ್ನು ಮಾಡುತ್ತಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ.

ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗೌರವ ಅತಿಥಿಗಳಾಗಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಸತ್ಯೇಂದ್ರ ಪೈ, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ 
ನಮಿತಾ ಜಿ ಭಟ್ ಭಾಗವಹಿಸಲಿದ್ದಾರೆ.

ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಸಾದ್ ಹಾಗೂ ತ್ರಿಶಾ ಪಿಯು ಕಾಲೇಜು ಕೊಟ್ಟಾರ, ಮಂಗಳೂರಿನ ಪ್ರಾಂಶುಪಾಲರಾದ ಯಶಸ್ವಿನಿ ಯಶಪಾಲ್, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ
ಉಪಸ್ಥಿತರಿರಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೆಣೈ, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಟಪಾಡಿಯ ಡಾ. ಕುಲದೀಪ್ ವೈ, ಕನ್ನಡ ಪ್ರಾಧ್ಯಾಪಕ ಧೀರಜ್‌ ಬೆಳ್ಳಾರೆ ಉಪಸ್ಥಿತರಿದ್ದರು.

ಎ.25 : ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿ ವತಿಯಿಂದ ಸ್ವರ್ಣ ಪಲ್ಲಕ್ಕಿ, ಬೆಳ್ಳಿ ಹೊದಿಕೆ ಸಮರ್ಪಣೆ

Thumbnail
Posted On: 21 Apr 2026, 03:05 PM

ಪಡುಬಿದ್ರಿ : ಇಲ್ಲಿನ ಶ್ರೀ ವನದುರ್ಗಾ ಟ್ರಸ್ಟ್ (ರಿ.) ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಏಪ್ರಿಲ್ 25, ಶನಿವಾರ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಹೊದಿಕೆ ಸಮರ್ಪಣೆಯ ಶೋಭಾ ಯಾತ್ರೆಯು ಸಂಜೆ 3:30 ನಡೆಯಲಿದೆ ಎಂದು ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ರಾವ್ ವೈ.ಯನ್ ಖಡ್ಗೇಶ್ವರಿ ಜ್ಞಾನ ಮಂದಿರದಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ರಹ್ಮಸ್ಥಾನಕ್ಕೂ ಪಡುಬಿದ್ರಿ ದೇವಳಕ್ಕೂ ನಿಕಟ ಸಂಬಂಧವಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಹೊದಿಕೆ ಶೋಭಾಯಾತ್ರೆಗೆ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಚಾಲನೆ ದೊರೆಯಲಿದೆ. ಶೋಭಾಯಾತ್ರೆಯು ಭಜನಾ ತಂಡ, ಚೆಂಡೆ ವಾದನದೊಂದಿಗೆ ಬ್ರಹ್ಮಸ್ಥಾನ ಮಾರ್ಗವಾಗಿ ಪೇಟೆಯ ಮೂಲಕ ಪಡುಬಿದ್ರಿ ದೇವಳಕ್ಕೆ ಬರಲಿದೆ. 

ಜೊತೆಗೆ ಮೇ.2 ಬ್ರಹ್ಮಕಲಶೋತ್ಸವದ ದಿನದಂದು ಮಹಾ ಅನ್ನಸಂತರ್ಪಣೆ, ಹೂವಿನ ಅಲಂಕಾರ, 4 ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕತ್ವದೊಂದಿಗೆ ಒಟ್ಟು 3 ಕೋಟಿಯ ಸೇವಾ ರೂಪದ ಕಾರ್ಯ ನೀಡಲಿದ್ದೇವೆ. 

ಶೋಭಾ ಯಾತ್ರೆಯ ಬಳಿಕ ಜರಗುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಆಶೀರ್ವಚನ, ಪಡುಬಿದ್ರಿ ದೇವಳದ ತಂತ್ರಿಗಳಾದ ವೇ.ಮೂ.ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಜನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ಪಡುಬಿದ್ರಿ ಮಠತ್ರಾಮಮನೆ ಗಂಗಾಧರ್ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಕ್ಷೇತ್ರದ ಅರ್ಚಕರಾದ ಎಚ್.ಪದ್ಮನಾಭ ಭಟ್, ವೈ.ಗುರುರಾಜ ಭಟ್, ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರರಾಜ ಅರಸು ಕಿನ್ನಕ್ಕ ಬಲ್ಲಾಳ್, ಪೇಟೆಮನ ಭವಾನಿ ಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊರ್ನಾಯ ಪದ್ಮನಾಭ ರಾವ್ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ವನದುರ್ಗಾ ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರ ರಾವ್ ವೈ.ಎನ್, 
ಒಂದನೇ ಗುರಿಕಾರ ಕೊರ್ನಾಯ ಪದ್ಮನಾಭ ರಾವ್, ಕೋಶಾಧಿಕಾರಿ ಸುರೇಶ್ ರಾವ್ ವೈ. ಎರಡನೇ ಗುರಿಕಾರ ನಟರಾಜ ಪಿ.ಎನ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಟ್ರಸ್ಟ್ ಸದಸ್ಯರಾದ ಪಿ. ಶ್ರೀನಿವಾಸ್ ರಾವ್, ರವೀಂದ್ರ ಪಿ.ಎಚ್ ಉಪಸ್ಥಿತರಿದ್ದರು.

ಕೇಂದ್ರ ಸರಕಾರದ ನಾರಿ ಶಕ್ತಿ ವಂದನ್ ಅಧಿನಿಯಮ ಸ್ವಾಗತಾರ್ಹ : ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ

Thumbnail
Posted On: 16 Apr 2026, 08:20 AM

ಕಾರ್ಕಳ : ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಇದು ಭಾರತ ಸಂಸ್ಕೃತಿ ಮಹಿಳೆಯರಿಗೆ ಕೊಟ್ಟ ಗೌರವ.  ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ "ನಾರಿ ಶಕ್ತಿ ವಂದನ್ ಅಧಿನಿಯಮ"ಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವುದು ಬಹಳ ಉತ್ತಮ ಬೆಳವಣಿಗೆ,  ಈ ನಿರ್ಧಾರವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಸಮಾನ ಅವಕಾಶ ನೀಡುವ ಪ್ರಮುಖ ಹೆಜ್ಜೆಯಾಗಿದೆ.

ಪುರುಷ ಪ್ರಧಾನ ವರ್ಗದಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆ ಆಗಿತ್ತು,  ಮಹಿಳೆಯರು ಮಾಡುವ ಕೆಲಸ ಕಾಣದಂತೆ ಮರೆಯಾಗುತ್ತಿತ್ತು,  ಈ ನಿಟ್ಟಿನಲ್ಲಿ ಜಾರಿಗೊಳಿಸಿದ ಈ ಯೋಜನೆ ಮಹಿಳಾ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೆ ತರುವ ಸಲುವಾಗಿ ಶಾಸನಸಭೆಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಪ್ರಕ್ರಿಯೆಯ ಮೂಲಕ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು 816 ಕ್ಕೆ ಏರಿಸುವ ಸಾಧ್ಯತೆಯಿದೆ. ಹೀಗೆ ಹೆಚ್ಚಳವಾಗುವ ಒಟ್ಟು ಸ್ಥಾನಗಳಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಕ್ರಮದಿಂದಾಗಿ ಯಾವುದೇ ರಾಜ್ಯದ ಪ್ರಾತಿನಿಧ್ಯವು ಕಡಿಮೆಯಾಗುವುದಿಲ್ಲ ಎಂದು ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಭರವಸೆ ನೀಡಿರುತ್ತದೆ,  ಒಟ್ಟಾರೆಯಾಗಿ, ಈ ಕ್ರಮವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಹೊಸ ಮೈಲಿಗಲ್ಲಾಗಲಿದೆ.

 ರಾಜ್ಯ ವಿಧಾನಸಭೆಗಳಲ್ಲಿ ಪ್ರಸ್ತುತ ಶೇಕಡಾ 9 ರಷ್ಟಿರುವ ಮಹಿಳಾ ಶಾಸಕರ ಸಂಖ್ಯೆ ಮತ್ತು ಲೋಕಸಭೆಯಲ್ಲಿರುವ ಶೇಕಡಾ 13 ರಷ್ಟಿರುವ ಮಹಿಳಾ ಸಂಸದರ ಸಂಖ್ಯೆಯು ಈ ಕಾಯ್ದೆಯ ಜಾರಿಯಿಂದ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಪರಿಸರ ರಕ್ಷಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು : ಲಾಲಾಜಿ ಆರ್ ಮೆಂಡನ್

Thumbnail
Posted On: 16 Apr 2026, 08:13 AM

ಪಡುಬಿದ್ರಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಸಂಘಟನೆಗಳು ಹೊಂದುವ ಮೂಲಕ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಪಡುಬಿದ್ರಿಯ ಕರಾವಳಿ ಸ್ಟಾಸ್೯ ಸಂಘಟನೆಯ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸಂಘಟನೆಗಳು ಕೇವಲ ಸೇವಾ ಚಟುವಟಿಕೆಗಳಿಗೆ ಸೀಮಿತವಾಗದೇ, ಪರಿಸರ ಉಳಿವಿನತ್ತ ಗಮನ ಹರಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಕರಾವಳಿ ಸ್ಟಾರ್ಸ್ ನಡಿಪಟ್ಣ ಸಂಘಟನೆ ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಪ್ರಶಂಸಿಸಿದರು. 

ಗುರಿಕಾರರು ಮುರುಡಿ ಜಗದೀಶ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಹಾರೈಸಿದರು. 

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಬಿಗ್‌ಬಾಸ್ ರನ್ನರ್‌ಅಪ್ ರಕ್ಷಿತಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್, ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್, ಉಡುಪಿ ಜಿಲ್ಲಾ ಮೀನುಗಾರ ಘಟಕದ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಖಾದಿ ಹಾಗೂ ಗ್ರಾಮೋಧ್ಯೋಗ ಮಂಡಳಿಯ ಮಾಜಿ ನಿರ್ದೇಶಕ ಮಿಥುನ್ ಆರ್. ಹೆಗ್ಡೆ, ಆದ್ಯ ಫೌಂಡೇಶನ್ ಸಂಸ್ಥಾಪಕ ರಾಕೇಶ್ ಅಜಿಲ, ಕಾಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಅಶೋಕ್ ಸಾಲಿಯಾನ್, ಕಾಡಿಪಟ್ಣ ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ನಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಹರೀಶ್ ಪುತ್ರನ್, ಯಂಗ್ ಸ್ಟಾರ್ಸ್ ಯುವಕ ಮಂಡಲ ಬೈಕಂಪಾಡಿ ಅಧ್ಯಕ್ಷ ನವೀನ್ ಸಾಲಿಯಾನ್, ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ಮೊಗವೀರ ಮುಖಂಡರಾದ ಕೆ.ಎನ್.ಚಂದ್ರಶೇಖರ್, ಗಂಗಾಧರ್ ಕರ್ಕೇರ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಕರವೇ ಕಾಪು ತಾಲ್ಲೂಕು ಅಧ್ಯಕ್ಷ ಎಮ್.ಎಸ್ ಶಾಫಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಕರಾವಳಿ ಸ್ಟಾರ್ಸ್ ಅಧ್ಯಕ್ಷ ಕಾರ್ತಿಕ್ ಅಮೀನ್, ಕಾರ್ಯದರ್ಶಿ ಆಶೀಕ್ ಅಮೀನ್ ಉಪಸ್ಥಿತರಿದ್ದರು. 

ಸಂತೋಷ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಕಿರಣ್ ರಾಜ್ ಕರ್ಕೇರ ಸ್ವಾಗತಿಸಿದರು. ದಿಶಾನ್ ಪುತ್ರನ್ ವಂದಿಸಿದರು.

ನಿತ್ಯಾನಂದ ಬಿ. ಶೆಟ್ಟಿಯವರ ಅಳವು ಅರಿಯದ ಭಾಷೆ - ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ

Thumbnail
Posted On: 15 Apr 2026, 11:13 PM

ಲೇಖನ : ಸುನಿಲ್ ಕುಮಾರ್ ಬಜಾಲ್

ತುಮಕೂರು ವಿಶ್ವವಿದ್ಯಾಲಯದಲ್ಲಿ  ಪ್ರಾಧ್ಯಾಪಕರಾಗಿರುವ ಮತ್ತು ಕನ್ನಡದ ಲೇಖಕರೂ ಆಗಿರುವ  ನಿತ್ಯಾನಂದ ಬಿ ಶೆಟ್ಟಿಯವರು  ಒಂದು ಅದ್ಭುತವಾದ ಪುಸ್ತಕ ಬರೆದಿದ್ದಾರೆ.ಆ ಕೃತಿಯ ಹೆಸರು ಅಳವು ಅರಿಯದ ಭಾಷೆ - ಕಲೆ,ಸಮಾಜ, ಇತಿಹಾಸ. ಒಂದು ಕಾದಂಬರಿಯಂತೆ, ಕುತೂಹಲ ಹುಟ್ಟಿಸುತ್ತ ಓದಿಸಿಕೊಂಡು ಹೋಗುವ ಇಂತಹ ಒಂದು ಸಂಶೋಧನಾ ಕೃತಿ ಕನ್ನಡದಲ್ಲಂತೂ  ಪ್ರಾಯಶಃ ಇದೇ ಮೊದಲು. ಓದು-ಬರಹ ಬಲ್ಲ ಸಾಮಾನ್ಯರಿಂದ ತೊಡಗಿ, ಮಹಾನ್ ಪಂಡಿತರನ್ನೂ ಏಕಕಾಲಕ್ಕೆ ಆವರಿಸಬಲ್ಲ ಪುಸ್ತಕ ಇದು.‌ ಈ ಪುಸ್ತಕದ ಪ್ರತಿಯೊಂದು ಪದ, ಪ್ರತಿ ಸಾಲು ಓದುಗರನ್ನು ಹೇಗೆ ಹಿಡಿದಿಡುತ್ತದೆಯೆಂದರೆ ಇದನ್ನು ಒಮ್ಮೆ ಓದಲು ತೊಡಗಿದರೆ ನಾವು ಪುಸ್ತಕದ ಗುಂಗಿನಲ್ಲೇ ಇರುತ್ತೇವೆ.

 ಒಂದು ಬೃಹತ್ ಕಾದಂಬರಿಯಾಗುವ, ನಾಟಕವೂ ಆಗುವ, ಸಿನಿಮಾವೂ ಆಗಬಲ್ಲ ಸಮೃದ್ಧವಾದ ವಸ್ತುವನ್ನು ಇದು ಹೊಂದಿದೆ.ಕಲೆ, ಸಮಾಜ ಮತ್ತು ಇತಿಹಾಸದ ಎಲ್ಲಾ ಆಯಾಮಗಳನ್ನು  ಒಂದೇ ಕೃತಿಯಲ್ಲಿ ಅಳವಡಿಸುವ ಮೂಲಕ ತನ್ನ ಮೇಧಾವಿತನವನ್ನು ಇಲ್ಲಿ ನಿತ್ಯಾನಂದ ಬಿ ಶೆಟ್ಟಿಯವರು ವಿಶಾಲವಾಗಿ ತೆರೆದಿಟ್ಟಿದ್ದಾರೆ. ಯಾವುದರ ಬಗೆಗೂ ತೀರ್ಮಾನ ಕೊಡದೆ, ಓದುಗರೇ ನಿರ್ಧಾರಕ್ಕೆ ಬರುವಂತೆ ಯಕ್ಷಗಾನವೆಂಬ ವಸ್ತುವನ್ನು ಪ್ರಧಾನವಾಗಿ ಮುಂದಿಟ್ಟು ಅದರ ಸುತ್ತಮುತ್ತಲಿನ ವಿಚಾರಗಳು, ಕಳೆದ 150 ವರ್ಷಗಳಿಂದ ಯಕ್ಷಗಾನ ಬೆಳೆದು ಬಂದ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವುದು ಅತ್ಯಂತ ರೋಮಾಂಚನಕಾರಿಯಾಗಿದೆ.

 ಒಂದು ಕಾಲದಲ್ಲಿ ಬಹಳ ಪ್ರಸಿದ್ಧರಾದ ಕಲಾವಿದರು ಮುಸ್ಲಿಂ ಮತ್ತು  ಕ್ರಿಶ್ಚಿಯನ್ ಸಮುದಾಯದಿಂದಲೂ ಬಂದಿದ್ದರು ಎಂಬುದನ್ನು ಇಲ್ಲಿ ಓದಿ  ತಿಳಿದಾಗಲೇ ಬಹಳ ಆಶ್ಚರ್ಯವಾಯಿತು. ಯಾಕೆಂದರೆ ಅದನ್ನು ಇವತ್ತಿನ ಧರ್ಮ ರಾಜಕಾರಣದ ಸಂಕೀರ್ಣತೆಯಲ್ಲಿ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಯಕ್ಷಗಾನದ ಈಗಿನ ವಾತಾವರಣದಲ್ಲಿ ಇನ್ನೊಬ್ಬ ಜಬ್ಬಾರ್ ಸುಮೋನಂತಹ ಕಲಾವಿದ ಹುಟ್ಟಲು ಸಾಧ್ಯವೇ ಎಂಬ ಪ್ರಶ್ನೆಯೂ ಈ ಪುಸ್ತಕವನ್ನು ಓದುವಾಗ ಹುಟ್ಟಿಕೊಳ್ಳುತ್ತದೆ.

 ಇಂದು ಯಕ್ಷಗಾನವನ್ನು ಬಿಜೆಪಿ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡು, ಕೋಮುವಾದಿ ವಿಚಾರಗಳನ್ನು ಪ್ರಸ್ತಾಪಿಸುತ್ತ, ಅಲ್ಪಸಂಖ್ಯಾತರನ್ನು ಅತ್ಯಂತ ತುಚ್ಛವಾಗಿ ಅವಮಾನಿಸುತ್ತಾ, ಜನರಲ್ಲಿ ಮುಸ್ಲಿಂ ದ್ವೇಷ ಹುಟ್ಟುವಂತೆ  ಕೋಮುವಾದಿ ಶಕ್ತಿಗಳು ಹೂಡಿದ ರಣತಂತ್ರಗಳನ್ನು ಈ ಪುಸ್ತಕ  ಎಳೆಎಳೆಯಾಗಿ ವಿವರಿಸುತ್ತದೆ. ಸೌಹಾರ್ದತೆಯನ್ನು ಸಾರುವ  ಕಲೆಯಾಗಿದ್ದ ಯಕ್ಷಗಾನದಲ್ಲಿ ಕೋಮುವಾದಿ ವಿಚಾರಗಳನ್ನು ಮುಂದಿಟ್ಟು ಕಲೆಗೆ ಕಳಂಕವನ್ನುಂಟು ಮಾಡಿದ ಕುಂಬ್ಳೆ ಸುಂದರರಾಯರ ವ್ಯಕ್ತಿತ್ವ, ಬಳಿಕ ಅವರ ಆತ್ಮಕಥೆಯಲ್ಲಿ  ಅವರಾಡಿದ ವಿಷಾದದ ಮಾತುಗಳು, ಸಂಘಪರಿವಾರದ use & throw (ಬಳಸು ಮತ್ತು ಬಿಸಾಕು) ಎಂಬ ಕುತಂತ್ರ ಎಲ್ಲವೂ ಇಲ್ಲಿ ಚರ್ಚೆಗೆ, ವಿಶ್ಲೇಷಣೆಗೆ ಒಳಗಾಗಿದೆ. ಸಂಘಪರಿವಾರ ಪ್ರಜ್ಞಾಪೂರ್ವಕವಾಗಿ ಯಕ್ಷಗಾನದಂತಹ ಕಲೆಯಲ್ಲೂ ತನ್ನ ಗುಪ್ತಾ ಅಜೆಂಡಾವನ್ನು ಪಸರಿಸುವ ಮೂಲಕ ಎಷ್ಟೊಂದು ವ್ಯಾಪಕತೆ ಪಡೆದಿದೆ ಎಂಬುದನ್ನು ಇತ್ತೀಚಿನ ಚುನಾವಣೆಯ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲುರವರು ಆಡಿದ ಮಾತುಗಳನ್ನು ಇಲ್ಲಿ ಲೇಖಕರು ಉಲ್ಲೇಖಿಸಿ ಓದುಗರಿಗೆ ಮನದಟ್ಟು ಮಾಡಿಸುತ್ತಾರೆ.

 ಇಂತಹ ಅದ್ಭುತ ಕೃತಿಗೆ ಪೂರಕ ಮಾತುಗಳನ್ನು ಆಡಿದ್ದಲ್ಲದೆ ಇದಕ್ಕೆ ಪ್ರತಿಕ್ರಿಯೆ ಬರೆದ 8 ಮಂದಿ ವಿವಿಧ ಕ್ಷೇತ್ರಗಳ ವಿದ್ವಾಂಸರ ವಿಮರ್ಶಾತ್ಮಕ ಮಾತುಗಳು ಈ ಕೃತಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ‌.ಅದರಲ್ಲೂ  ಕವಿ ಮತ್ತು  ರಂಗ ನಿರ್ದೇಶಕರಾದ ರಘುನಂದನರವರ ಸವಿವರವಾದ  ಜಾಗತಿಕ ವಿಶ್ಲೇಷಣೆಯು ಹಲವು ಆಯಾಮಗಳನ್ನು ವಿವರಿಸುತ್ತಾ, ಯಕ್ಷಗಾನದೊಳಗೆ ಫ್ಯಾಸಿಸಂ ಇಣುಕುವ ಅಪಾಯ,ಅದೇ ಫ್ಯಾಸಿಸಂ ಜಗತ್ತಿನ ವಿದ್ಯಮಾನವನ್ನು ಅಲ್ಲೋಲ ಕಲ್ಲೋಲ ಮಾಡಿದ ಪ್ರಸಂಗಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಇಸ್ರೇಲ್ ಪ್ಯಾಲೆಸ್ಟೈನ್ ನ ಮೇಲೆ ನಡೆಸಿರುವ ಭೀಕರ ಧಾಳಿಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

 ಒಟ್ಟಿನಲ್ಲಿ ಯಕ್ಷಗಾನವೆಂಬ ಕಲೆ ಈ ಕೃತಿಯ ಪ್ರಧಾನ ವಸ್ತುವಾಗಿದ್ದರೂ, ಅದರಾಚೆಗಿರುವ ಹತ್ತು ಹಲವು ವಿಚಾರಗಳನ್ನು ತರುವ ಮೂಲಕ ಇಡೀ ಪುಸ್ತಕವನ್ನು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಓದುವಂತೆ ಲೇಖಕರು ಮಾಡಿದ್ದಾರೆ. ಓದುಗರನ್ನು ಆಳವಾಗಿ ಯೋಚಿಸುವಂತೆ ಮಾಡುವ, ಆತ್ಮಾವಲೋಕನ ಮಾಡುವಂತೆ ಪ್ರಚೋದಿಸುವ ಈ ಪುಸ್ತಕದ ಬರಹದ ಶೈಲಿ ಅಪೂರ್ವವಾದುದು.‌ಈ ಪುಸ್ತಕವನ್ನು ಓದಿ ಮುಗಿಸಿದಾಗ ಓದುಗರಲ್ಲಿ ಹುಟ್ಟುವ ಭಾವನೆಗಳನ್ನು ವಿವರಿಸಲು ಸಾಧ್ಯವೇ ಇಲ್ಲ. ಹಾಗೆಯೇ, ಇಲ್ಲಿನ ಹೋರಾಟಗಾರರು ತಾವು ಸಾಗಿಬಂದ ದಾರಿಯನ್ನು ಮತ್ತೊಂದು ಸಲ ಪರಿಶೀಲಿಸುವಂತೆ ಮಾಡಿದ ಒತ್ತಾಯವೂ ಅರ್ಥವಾಗುತ್ತದೆ. ಇಂತಹ ಎಲ್ಲವೂ ಈ ಪುಸ್ತಕದಲ್ಲಿದೆ.ಕರಾವಳಿಯ ಹೆಮ್ಮೆಯ ಚಿಂತಕರೂ ಮತ್ತು ಬರಹಗಾರರೂ ಆದ ನಿತ್ಯಾನಂದ ಬಿ ಶೆಟ್ಟಿಯವರ ಈ ಪರಿಶ್ರಮವನ್ನು ಇಡೀ ಕರ್ನಾಟಕದ ಜನತೆ ಅಭಿನಂದಿಸಬೇಕಾಗಿದೆ.

ಬಿ ಸಿ ರೋಡ್ ಬಂಟಕಲ್ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಮಾಸಿಕ ಸಭೆ, ಪದಗ್ರಹಣ

Thumbnail
Posted On: 15 Apr 2026, 10:51 PM

ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ಬಂಟಕಲ್ ಇದರ ಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಎ.14ರಂದು ರೋಟರಿ ಕ್ಲಬ್ ಶಿರ್ವ ಬಿ ಸಿ ರೋಡ್ ಸಭಾಂಗಣದಲ್ಲಿ ಜರಗಿತು.

ಗೌರವಾಧ್ಯಕ್ಷರಾದ ಕೆ.ಆರ್. ಪಾಟ್ಕರ್ ರವರಿಂದ ಅಧಿಕಾರ ಹಸ್ತಾಂತರಿಸಿದರು.

ಅಧ್ಯಕ್ಷರಾಗಿ ತಿಯೋದೋರ್ ಮಥಾಯಸ್, 
ಉಪಾಧ್ಯಕ್ಷರಾಗಿ ದಿನೇಶ್ ಕುಲಾಲ್, ಕಾರ್ಯದರ್ಶಿಯಾಗಿ ಸುರೇಶ್ ಸಾಲಿಯಾನ್, 
ಕೋಶಾಧಿಕಾರಿಯಾಗಿ ಅಶೋಕ್ ಸುವರ್ಣ ಆಯ್ಕೆಯಾದರು.

ಶ್ರೀತೇಶ್ ಕುಲಾಲ್ ಪ್ರಾರ್ಥಿಸಿ, ನವೀನ್ ಆಚಾರ್ಯ ವಾರ್ಷಿಕ ವರದಿ ವಾಚಿಸಿ, ಡೆನಿಸ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ಎ.17,18,19 : ಟೀಮ್ ಮೊಗವೀರ್ಸ್ ಮಲ್ಪೆ : ಮಾಧವ ಮಂಗಳ ಟ್ರೋಫಿ - 2026

Thumbnail
Posted On: 15 Apr 2026, 10:38 PM

ಉಡುಪಿ : ಟೀಮ್ ಮೊಗವೀರ್ಸ್ ಮಲ್ಪೆ ವತಿಯಿಂದ ಮಾಧವ ಮಂಗಳ ಟ್ರೋಫಿ -  2026 ಎಪ್ರಿಲ್ 17, 18 ಮತ್ತು 19ರಂದು ಗಾಂಧಿ ಶತಾಬ್ಧಿ ಶಾಲಾ ಮೈದಾನ, ವಡಭಾಂಡೇಶ್ವರ, ಮಲ್ಪೆ ಇಲ್ಲಿ ಜರಗಲಿದೆ.

ಪ್ರಥಮ ಬಹುಮಾನ ರೂ. 2,55,555 ಹಾಗೂ ದ್ವಿತೀಯ ಬಹುಮಾನ ರೂ. 1,25,555 ಇರಲಿದೆ. ಪ್ರವೇಶ ಶುಲ್ಕ ರೂ.20,000 ಇದೆ ಎಂದು ಸಂಸ್ಥೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಶಾಂತ್ ಪಡುಕರೆ 9611289824, ಪ್ರಶಾಂತ್ ಮಲ್ಪೆ 8296365853, ಸತೀಶ್ ಜಿ. 9844464170