Updated News From Kaup
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಕರಾರುವಕ್ಕಾಗಿ ನಡೆಯಬೇಕು : ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 03-05-2025 05:49PM
ಕಾಪು : ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳಿಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯವಶ್ಯಕವಾಗಿದ್ದು ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಒಂದೇ ಒಂದು ಕುಟುಂಬವು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿದರು. ಕಾಪು ತಾಲೂಕಿನ ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯಲ್ಲಿ ಆನ್ಲೈನ್ ಆ್ಯಪ್ ಮೂಲಕ ಮೊಬೈಲ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಮಾಹಿತಿದಾರರು ತಮ್ಮ ರೇಷನ್ ಕಾರ್ಡ್ ಆಥವಾ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯು 3 ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 5ರಿಂದ ಮೇ 17ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕೈಗೊಳ್ಳಬೇಕು. ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಕುಟುಂಬಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನ ವಿಶೇಷ ಶಿಬಿರಗಳಲ್ಲಿ ಮೇ 19 ರಿಂದ 21 ರವರೆಗೆ ಮಾಹಿತಿ ದಾಖಲಿಸಬಹುದು. ಅದೂ ಸಾಧ್ಯವಾಗದ ಕುಟುಂಬಗಳು ಮೇ 19ರಿಂದ ಮೇ 23ರವರೆಗೆ ಆನ್ ಲೈನ್ ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲೂ ಸಹ ಅವಕಾಶ ಕಲ್ಪಿಸಲಾಗಿದೆ. ಆಧಾರ್ ನಂಬರ್ ಹಾಗೂ ರೇಷನ ಕಾರ್ಡ್ ನಂಬರ್ನೊಂದಿಗೆ ಸ್ವಯಂ ಘೋಷಣೆ (ಆನ್ಲೈನ್)ಯನ್ನು ಸಲ್ಲಿಸಬಹುದು ಎಂದರು.
ಗ್ರಾಮ ಮಟ್ಟದ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮತಗಟ್ಟೆವಾರು ಪ್ರತಿಯೊಂದು ಮನೆಗೆ ತೆರಳಿ, ಜಾಗರೂಕತೆಯಿಂದ ಸಮೀಕ್ಷೆ ನಡೆಸಬೇಕು ಎಂದರು. ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಭರ್ತಿ ಮಾಡಬಾರದು. ಮನೆ-ಮನೆಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿಯನ್ನು ಮನೆಯ ಮುಖ್ಯಸ್ಥರಿಂದ ಪಡೆದುಕೊಂಡು ಸಮೀಕ್ಷೆಯ ಪ್ರಶ್ನೆಗಳಿಗೆ ಕುಟುಂಬದ ಸದಸ್ಯರು ನೀಡಿದಂತಹ ಮಾಹಿತಿಯನ್ನು ಮಾತ್ರ ಭರ್ತಿ ಮಾಡಬೇಕು. ಈ ಸಮೀಕ್ಷೆಯಲ್ಲಿ ಯಾವುದೇ ಮಧ್ಯವರ್ತಿ, ಸಂಘ-ಸಂಸ್ಥೆಗಳು ಮತ್ತು ಮಕ್ಕಳಿಂದ ಮಾಹಿತಿ ಭರ್ತಿ ಮಾಡುವಂತಿಲ್ಲ. ಸಮೀಕ್ಷೆಯಲ್ಲಿನ ಎಲ್ಲ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಸರಿಯಾದ ಮಾಹಿತಿ ಸಂಗ್ರಹಿಸಿ ಮೊಬೈಲ್ ಆ್ಯಪ್ ಮೂಲಕವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ತಹಶಿಲ್ದಾರ್ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಯವರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ, ಮಾರ್ಗದರ್ಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾರಾಯಣಸ್ವಾಮಿ, ಬಸವರಾಜು, ವಿನಾಯಕ, ಉಪ ತಹಶಿಲ್ದಾರರುಗಳಾದ ಅಶೋಕ್, ದೇವಕಿ, ಮಾಸ್ಟರ್ ಟ್ರೈನರ್ ಗಳಾದ ಮಧುರಾಜ್, ಎಡ್ವರ್ಡ್, ನವ್ಯ, ರಾಘವೇಂದ್ರ, ಪುಷ್ಪಲತಾ ಉಪಸ್ಥಿತಿರಿದ್ದರು.
ಆದ್ಯ.ಎಮ್.ಪೂಜಾರಿ : 592 ಅಂಕ

Posted On: 03-05-2025 05:14PM
ಕಾಪು : ಆದ್ಯ.ಎಮ್.ಪೂಜಾರಿ ಅವರು ಬೆಳಪು ಗ್ರಾಮದ ಅ.ಬಿ.ವಾಜಪೇಯಿ ಬಡವಣೆಯ ನಿವಾಸಿಯಾಗಿದ್ದು . ಇವರು ಪಯ್ಯಾರು ಪಿ.ಕೆ.ಎಸ್. ಪ್ರೌಢಶಾಲೆ ಕಳತ್ತೂರು, ಇಲ್ಲಿಯ ವಿದ್ಯಾರ್ಥಿನಿಯಾಗಿದ್ದು ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ 592(94.72%) ಅಂಕಗಳನ್ನು ಗಳಿಸಿರುತ್ತಾರೆ.
ಆದ್ಯ ಅವರು ಮಂಜುನಾಥ್.ಕೆ.ಪೂಜಾರಿ ಮತ್ತು ರಜನಿ ಎಮ್. ಪೂಜಾರಿ ದಂಪತಿಗಳ ಪುತ್ರಿಯಾಗಿದ್ದಾರೆ.
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು : ಶೇ.100 ಫಲಿತಾಂಶ

Posted On: 03-05-2025 05:08PM
ಕಾಪು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು 2025 ಮಾರ್ಚ್ ನಲ್ಲಿ ಜರಗಿದ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇಕಡ ಫಲಿತಾಂಶ ಬಂದಿರುತ್ತದೆ.
ಸಂಸ್ಥೆಯ ಪರಮ ಪೋಷಕರಾದ ಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಸೂರ್ಯ ಕುಮಾರ್ ಹಳೆಯಂಗಡಿ, ಕಾರ್ಯದರ್ಶಿ ಗುರುರಾಜ ಕೆ ಮಂಗಳೂರು ಮತ್ತು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅನುಷಾ 581(92.96), ವಸಂತ 556(88.96), ಕ್ಷಿತಿಜ್ ಬಡಿಗೇರ್ 537(85.92), ವಂಶಿಕಾ 554(88.65) ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.
4 ಡಿಸ್ಟಿಂಕ್ಷನ್, 4 ಪ್ರಥಮ ದರ್ಜೆ, 3 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ
ಮೇ 5 : ಬಂಟಕಲ್ಲಿನಲ್ಲಿ ಕ.ಸಾ.ಪ. 111ನೇ ಸಂಸ್ಥಾಪನಾ ದಿನಾಚರಣೆ

Posted On: 03-05-2025 01:33PM
ಶಿರ್ವ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಕ.ಸಾ.ಪ. ಘಟಕ ಮತ್ತು ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇದರ ಸಹಭಾಗಿತ್ವದಲ್ಲಿ "ಕನ್ನಡ ಸಾಹಿತ್ಯ ಪರಿಷತ್ತು ಇದರ 111ನೇ ಸಂಸ್ಥಾಪನಾ ದಿನಾಚರಣೆ" ಹಾಗೂ ಕುರಾಡಿ ಸೀತಾರಾಮ ಅಡಿಗ ಮತ್ತು ಡಿ.ಎಸ್.ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಮೇ 5, ಸೋಮವಾರ ಸಂಜೆ ಘಂಟೆ 4 ಕ್ಕೆ ಬಂಟಕಲ್ಲು ಬಸ್ಸು ನಿಲ್ದಾಣದ ಸಾರ್ವಜನಿಕ ತೆರೆದ ವಾಚನಾಲಯದಲ್ಲಿ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಹಾಗೂ ಕವಯತ್ರಿ ಪ್ರೊ.ಡಾ. ಫ್ಲಾವಿಯಾ ಕಸ್ತಲಿನೊ ಮಣಿಪಾಲ ಇವರು ನೆರವೇರಿಸಲಿದ್ದು, ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ. ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ರಾಮರಾಯ ಪಾಟ್ಕರ್, ಕ.ಸಾ.ಪ. ಜಿಲ್ಲಾ ಗೌ. ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕ.ಸಾ.ಪ. ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕ ದಂಪತಿಗಳಾದ ದೇವೇಂದ್ರ ನಾಯಕ್ ಶಿರ್ವ ಮತ್ತು ವನಿತಾ ಡಿ ನಾಯಕ್ರವರನ್ನು ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಸನ್ಮಾನಿಸುವರು ಎಂದು ಕಾಪು ತಾಲೂಕು ಕ.ಸಾ.ಪ. ಘಟಕದ ಪ್ರಕಟನೆ ತಿಳಿಸಿದೆ.
ಬೆಳಪು ಸಂಜೀವಿನಿ ಸ್ವಸಹಾಯ ಸಂಘಗಳ ತಂಡದಿಂದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪುರವರಿಗೆ ಅಭಿನಂದನೆ

Posted On: 03-05-2025 01:23PM
ಕಾಪು : ಬೆಳಪುವಿನ ಗ್ರಾಮ ಅಭಿವೃದ್ಧಿಯ ಹರಿಕಾರ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಇವರನ್ನು ಬೆಳಪು ಗ್ರಾಮದ ಸಂಜೀವಿನಿ ಸ್ವಸಹಾಯ ಸಂಘಗಳ ತಂಡದ ವತಿಯಿಂದ ಅಭಿನಂದಿಸಲಾಯಿತು.
ಸಂಜೀವಿನಿ ತಂಡದವರಿಗೆ ವಿಶೇಷವಾದಂತಹ ತರಬೇತು ಕಾರ್ಯಕ್ರಮಕ್ಕೂ ಚಾಲನೆ ನೀಡಿ ಸಂಘದ ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವುದಾಗಿ ಹಾಗೂ ಅವರ ಉದ್ಯಮಕ್ಕೆ ನಿವೇಶನವನ್ನು ಒದಗಿಸುವಂತಹ ಭರವಸೆಯನ್ನು ನೀಡಿ ಪೂರೈಸಿದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಶ್ಲಾಘಿಸಲಾಯಿತು.
ಇನ್ನಂಜೆ ಮಹಿಳಾ ಮಂಡಳಿ ವಾರ್ಷಿಕೋತ್ಸವದ ಸಂಭ್ರಮಾಚರಣೆ : ಸ್ವರ್ಗ ಆಶ್ರಮ ಭೇಟಿ

Posted On: 03-05-2025 01:10PM
ಕಾಪು : ಇನ್ನಂಜೆ ಮಹಿಳಾ ಮಂಡಳಿ ಇನ್ನಂಜೆ ಇದರ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಕೊಳಲಗಿರಿಯಲ್ಲಿರುವ ಹೊಂ ಡಾಕ್ಟರ್ ಫೌಂಡೇಶನ್ ಟ್ರಸ್ಟ್ ನ ಸ್ವರ್ಗ ಆಶ್ರಮದ ನಿವಾಸಿಗಳಿಗೆ ರೂ. ಹತ್ತು ಸಾವಿರ ನಗದು ಹಾಗೂ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ನ ಅಧ್ಯಕ್ಷರಾರ ಡಾ. ಶಶಿಕಿರಣ್ ಶೆಟ್ಟಿ, ಇನ್ನಂಜೆ ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ವೇತಾ ಎಲ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅನಿತಾ ಮಥಾಯಸ್ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿಯವರ ಹುಟ್ಟು ಹಬ್ಬದವನ್ನು ಆಶ್ರಮದಲ್ಲಿ ಆಚರಿಸಲಾಯಿತು.
ಸರಕಾರದ ವಿದ್ಯಾರ್ಥಿನಿಲಯಗಳ ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ತಲುಪಬೇಕು : ಡಾ. ವಿದ್ಯಾಕುಮಾರಿ

Posted On: 03-05-2025 12:44PM
ಉಚ್ಚಿಲ : ಪೋಷಕರ ಉದ್ಯೋಗದ ನಿಮಿತ್ತ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ನಿಲುವಿನ ಮೂಲಕ ದೇವರಾಜ ಅರಸುರವರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನೆಯ ಪ್ರೀತಿ, ವಾತ್ಸಲ್ಯ , ಗುಣಮಟ್ಟದ ಆಹಾರವನ್ನು ನ್ಯಾಯಯುತವಾಗಿ ನೀಡುವುದು ಎಲ್ಲಾ ಸಿಬ್ಬಂದಿಗಳ ಜವಾಬ್ದಾರಿ. ನಮ್ಮ ಮಕ್ಕಳು ಎಂಬ ಭಾವನೆಯಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು. ಅವರು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತಿ ಉಡುಪಿ, ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವನದಲ್ಲಿ ಜರಗಿದ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಕಾರದ ವಿದ್ಯಾರ್ಥಿನಿಲಯಗಳ ಮೂಲಕ ವಿದ್ಯಾರ್ಜನೆ ಮಾಡಿದವರಿದ್ದಾರೆ. ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ಅವರಿಗೆ ತಲುಪಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ್ ಸುವರ್ಣ, ಲೆಕ್ಕಾಧೀಕ್ಷಕರಾದ ಸುಗುಣ, ಕಾರ್ಕಳ ತಾಲೂಕು ಕಲ್ಯಾಣಾಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಕಲ್ಯಾಣಾಧಿಕಾರಿ ಶ್ರೀಕಾಂತ್ ಗುಣಗ ಸ್ವಾಗತಿಸಿ, ನಿರೂಪಿಸಿದರು. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಕಾರ್ಯವು ಜರಗಿತು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಯಿತು.
ದ.ಕ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆ : ಜಯಭೇರಿ ಬಾರಿಸಿದ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ

Posted On: 27-04-2025 07:38PM
ಪಡುಬಿದ್ರಿ : ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದ ತಂಡ ಭರ್ಜರಿ ಬಹುಮತದಿಂದ ಜಯಭೇರಿ ಗಳಿಸಿದೆ.
ಈ ಸಲುವಾಗಿ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿಯವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ರೌನಕ್ ಪುತ್ರನ್ ಪಡುಬಿದ್ರಿ ಉಪಸ್ಥಿತರಿದ್ದರು.
ಏ.25 - 26 : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ - ವಾರ್ಷಿಕ ನೇಮೋತ್ಸವ

Posted On: 24-04-2025 07:04AM
ಪಡುಬಿದ್ರಿ : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಇದರ ವಾರ್ಷಿಕ ನೇಮೋತ್ಸವು ಏ. 25, ಶುಕ್ರವಾರ ಮತ್ತು 26, ಶನಿವಾರ ಜರಗಲಿದೆ.
ಏ.25 ರಂದು ಬೆಳಿಗ್ಗೆ 9ಗಂಟೆಗೆ ಗಜಕಂಬ ಮುಹೂರ್ತ, ಬೆಳಿಗ್ಗೆ 11ಗಂಟೆಗೆ ಚಪ್ಪರ ಮುಹೂರ್ತ ಮತ್ತು ಆರೋಹಣ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 7.30ಕ್ಕೆ ದೈವದ ಭಂಡಾರ ಇಳಿಯುವುದು ಹಾಗೂ ಕೋರ್ದ್ದಬ್ಬು ದೈವದರ್ಶನ, ರಾತ್ರಿ 10.30ಕ್ಕೆ ಶ್ರೀ ದೈವರಾಜ ಕೋರ್ದ್ದಬ್ಬು ನೇಮೋತ್ಸವ, ರಾತ್ರಿ 1.00 ಕ್ಕೆ ಶಕ್ತಿ ಸ್ವರೂಪಿಣಿ ತನಿಮಾನಿಗ ದೇವಿಯ ನೇಮೋತ್ಸವ ಜರಗಲಿದೆ.
ಏ. 26ರಂದು ಬೆಳಿಗ್ಗೆ 9 ಕ್ಕೆ ಜುಮಾದಿ -ಬಂಟ ದೈವದ ನೇಮೋತ್ಸವ, ಮಧ್ಯಾಹ್ನ 1ಕ್ಕೆ ಗುಳಿಗ ದೈವದ ನೇಮೋತ್ಸವ ಜರುಗಲಿದೆ ಎಂದು ದೈವಸ್ಥಾನದ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಮೂಡುಬೆಳ್ಳೆ - ಹಿರಿಯ ಪಾರ್ದನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ

Posted On: 23-04-2025 02:21PM
ಶಿರ್ವ : ಪಾರ್ದನಗಳು ಗ್ರಂಥಸ್ಥವಾಗಿ ಮುಂದಿನ ಪೀಳಿಗೆಗೆ ಸಿಗುವಂತಾಗಬೇಕು. ಬಾಯಿಯಿಂದ ಬಾಯಿಗೆ ಹರಿದು ಬಂದ ಸತ್ ಸಂಪ್ರದಾಯ ಗೀತೆಗಳಾದ ಪಾರ್ದನಗಳು ಈ ನಾಡಿನ ಭವ್ಯ ಜಾನಪದ ಇತಿಹಾಸವನ್ನು ತಿಳಿಸುತ್ತವೆ. ಪಾಣಾರ ಸಮುದಾಯ ಈ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಶಾಶ್ವತವಾಗಿ ಉಳಿಸುವ ಕಾರ್ಯ ನಡೆಯಬೇಕು ಎಂದು ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್ ನುಡಿದರು. ಅವರು ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಬೆಳ್ಳೆ ಕಾಡಬೆಟ್ಟು ಶ್ರೀ ಪಂಜಿರ್ಲಿ ದೈವಸ್ಥಾನದ ಪ್ರಾಂಗಣದಲ್ಲಿ ಮೂಡುಬೆಳ್ಳೆಯ ಹಿರಿಯ ಪಾರ್ದಾನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಸರಕಾರದ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ "ಗೌರವ ಪ್ರಶಸ್ತಿ ಪ್ರದಾನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಾನಪದ ಇಲ್ಲದ ಜಾಗವೇ ಇಲ್ಲ. ಜಾನಪದದಲ್ಲಿ ನಾಡು, ನುಡಿ, ಸಂಸ್ಕೃತಿ ಕಟ್ಟುವುದರಲ್ಲಿ ಸಾಹಿತ್ಯವನ್ನು ಉಳಿಸುವುದೇ ಅಕಾಡೆಮಿಯ ಕೆಲಸವಾಗಿದೆ. ಬೀದರ್ನಲ್ಲಿ ಜರುಗಿದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಯೋ ಸಮಸ್ಯೆಯಿಂದ ಬರಲು ಅಸಾಧ್ಯವಾದ ಸಾಧಕರಿಗೆ ಅಕಾಡೆಮಿ ಅವರ ಮನೆಗೆ ಹೋಗಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಇಲ್ಲಿನ ವ್ಯವಸ್ಥೆ, ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅಪ್ಪಿ ಕೃಷ್ಣ ಪಾಣಾರ ಇವರನ್ನು ಬೆಳ್ಳೆ ಗ್ರಾಮ ಪಂಚಾಯತ್, ಬೆಳ್ಳೆ ವ್ಯ.ಸೇ.ಸಹಕಾರಿ ಸಂಘ, ನವೋದಯ ಒಕ್ಕೂಟ, ಕೆನರಾ ಬ್ಯಾಂಕ್ ಮಧ್ವನಗರ ಶಾಖೆ, ಪಾಣಾರ ಯಾನೆ ನಲಿಕೆಯವರ ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪಾಣಾರ ಯಾನೆ ನಲಿಕೆಯವರ ಸಂಘದಿಂದ ಸಮುದಾಯಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರಕ್ಕೆ ತಹಶೀಲ್ದಾರ್ ಡಾ.ಪ್ರತಿಭಾ ಆರ್, ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ, ಗ್ರಾಮ ಸಹಾಯಕರಾಗಿ 32ವರ್ಷ ಸೇವೆ ನೀಡಿದ ನ್ಯಾನ್ಸಿ ಡಿಸೋಜ, ಸಮಾಜ ಸೇವಕ ಸುಂದರ, ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, 30 ವರ್ಷದ ಬಳಿಕ ಪಿಯುಸಿ ಬರೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ ಸುನೀತಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ, ಅಕಾಡೆಮಿಯ ವಲಯ ಸಂಯೋಜಕ ಡಾ.ಜಮೀರುಲ್ಲಾ ಶರೀಫ್, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಪಾಣಾರ ಸಂಘದ ಗೌರವ ಅಧ್ಯಕ್ಷ ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಉದ್ಯಮಿ ವಿನ್ಸೆಂಟ್ ಫರ್ನಾಂಡಿಸ್ ಬೆಳ್ಳೆ, ಬೆಳ್ಳೆ ಸೊಸೈಟಿ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸುಧಾಕರ ಪೂಜಾರಿ, ರಂಜನಿ ಹೆಗ್ಡೆ, ರಾಜೇಂದ್ರ ಶೆಟ್ಟಿ, ಮಾಜಿ ತಾ.ಪಂ.ಸದಸ್ಯೆ ಸುಜಾತಾ ಸುವರ್ಣ, ಪಳ್ಳಿ ಸೊಸೈಟಿ ನಿರ್ದೇಶಕ ದಯಾನಂದ ಶೆಟ್ಟಿ ಪಠೇಲ್ಮನೆ, ಪಾಣಾರ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪಡ್ಡಾಮ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಾಣಾರ ಸಂಘ ಜಿಲ್ಲಾ ಸಮಿತಿಯ ಸುಕೇಶ್, ಸಂಜೀವ ಪಡ್ಡಾಮ, ಗ್ರಾ.ಪಂ.ಸದಸ್ಯ ಗುರುರಾಜ್ ಭಟ್, ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ, ವಂದಿಸಿದರು.