Updated News From Kaup

ಎ.10 - 12 : ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣಗುರು ಸಭಾಂಗಣದ ಲೋಕಾರ್ಪಣೆ

Thumbnail
Posted On: 07 Apr 2026, 11:21 AM

ಕಾಪು : ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣಗುರು ಸಭಾಂಗಣದ ಉದ್ಘಾಟನೆಯು ಎ.10 ರಿಂದ 12 ರ ವರಗೆ ನಡೆಯಲಿದೆ ಎಂದು ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಂ ಕಾಪು ಹೇಳಿದರು. 
ಅವರು ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎ.11ರಂದು ಬಿಲ್ಲವ ಭವನವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾರಾಯಣ ಗುರು ಸಭಾಂಗಣವನ್ನು ಹಿಂದುಳಿದ ವರ್ಗಗಳ ಮತ್ತು ಸಮಾಜ 
ಕಲ್ಯಾಣ ಇಲಾಖಾ ಸಚಿವ ಶಿವರಾಜ್ ತಂಗಡಗಿ , ಭೋಜನ ಶಾಲೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್,  ಆಡಳಿತ ಕಛೇರಿಯನ್ನು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಿ.ಸಿಂಧು ಪೂವ ಪೂಜಾರಿ ವೇದಿಕೆಯನ್ನು ನಾಡೋಜ ಡಾ.ಜಿ. ಶಂಕ‌ರ್, ಮುಖ್ಯ ದ್ವಾರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ಉದ್ಘಾಟಿಸಲಿದ್ದಾರೆ.

ಎ.10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಎ.11ರಂದು ಸಂಜೆ ಗಂಟೆ 6ರಿಂದ ಜರಗಲಿರುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠ, ಸೋಲೂರು ಪೀಠಾಧಿಫತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಗೋಪಾಲ ಪೂಜಾರಿ, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೆಬ್ರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಕಾಪು ಗ್ರಾಮ ದೇಗುಲದ ಅಧ್ಯಕ್ಷ ಮನೋಹರ ಶೆಟ್ಟಿ, ಕಾಪು ಹಳೆ ಮಾರಿಯಮ್ಮ ದೇವಳದ ಅಧ್ಯಕ್ಷ ಪ್ರಸಾದ್ ಶೆಣೈ, ಕಾಪು ಹೊಸ ಮಾರಿಯಮ್ಮ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಜನತಾದಳ ಜಿಲ್ಲಾಧ್ಯಕ್ಷ  ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪುರಸಭಾ ಉಪಾಧ್ಯಕ್ಷೆ ಸರಿತಾ ಶಿವಾನಂದ, ಉದ್ಯಮಿ ಎಂ. ಉಮೇಶ್ ಶೆಟ್ಟಿ, ಬಿಲ್ಲವ ಮುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಪುರಸಭೆಯ ಸದಸ್ಯೆ ಫರ್ಜಾನಾ, ಪುರಸಭೆ ಮುಖ್ಯಧಿಕಾರಿ ನೀಲಕಂಠ ಮೇಸ್ತ ಭಾಗವಹಿಸಲಿದ್ದಾರೆ. ದಾನಿಗಳಿಗೆ ಈ ಸಂದರ್ಭ ಸನ್ಮಾನದ ಗೌರವ ನಡೆಯಲಿದೆ.

11 ರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕಾಪು ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಸದಸ್ಯೆಯರಿಂದ ಮನರಂಜನಾ ಕಾರ್ಯಕ್ರಮ ಹಾಗೂ ದೇಯಿ ಬೈದೆದಿ ನೃತ್ಯ ರೂಪಕ ನಡೆಯಲಿದ್ದು, ಬಳಿಕ ಮುಲ್ಕಿ ಶಿವ ಪ್ರಣಾಮ್ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

 ಎ.12 ರಂದು ಸಂಜೆ ಗಂಟೆ 5ಕ್ಕೆ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮವು ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ. ಬಳಿಕ ಶ್ರೀ ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಸದಸ್ಯರಿಂದ ನೃತ್ಯ ಕಾರ್ಯಕ್ರಮ ಮತ್ತು ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಕುಡ್ಲ ಇವರಿಂದ ಎಲ್ಲೆ ದಾದ ಏರೆಗ್ ಗೊತ್ತು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಮಾಧವ ಪಾಲನ್, ಕಾರ್ಯದರ್ಶಿ ಅನಿಲ್ ಕಾಪು, ದಿನೇಶ್ ಸಾಲ್ಯಾನ್, ದೇವರಾಜ್ ಎ. ಕೋಟ್ಯಾನ್‌, ಶೇಖರ ಕೋಟ್ಯಾನ್ ಹಾಗೂ ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು.

ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ

Thumbnail
Posted On: 07 Apr 2026, 08:54 AM

ಕಾಪು : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಮುಂದಿನ 11 ತಿಂಗಳ ಅವಧಿಗೆ ಮೋಹಿನಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮೋಹಿನಿ ಶೆಟ್ಟಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.

2024ರ ಆಗಸ್ಟ್‌ನಲ್ಲಿ ಸರ್ಕಾರದ ಮೀಸಲಾತಿಯಂತೆ 30 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, 12 ಸ್ಥಾನಗಳನ್ನು ಗೆದ್ದು ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಸಾಮಾನ್ಯ ಮಹಿಳೆ ಮೀಸಲಿನಡಿ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಹರಿಣಾಕ್ಷಿ ಹಾಗೂ ಮೋಹಿನಿ ಶೆಟ್ಟಿ ನಡುವೆ ತಲಾ 15 ತಿಂಗಳ ಅವಧಿಯ ಒಡಂಬಡಿಕೆ ನಡೆದಿತ್ತು. ಅದರಂತೆ ಮೊದಲ 15 ತಿಂಗಳು ಹರಿಣಾಕ್ಷಿ ಅಧ್ಯಕ್ಷೆಯಾಗಿದ್ದರೆ, ಮುಂದಿನ ಅವಧಿಗೆ ಮೋಹಿನಿ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಸರಿತಾ ಶಿವಾನಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಪುರಸಭೆಯ ಉಪಾಧ್ಯಕ್ಷರಾದ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಆಳ್ವ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ನಿಕಟ ಪೂರ್ವ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುಧಾಮ ಶೆಟ್ಟಿ ಹಾಗೂ ಕಾಪು ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

ಎ.19 : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ.) ವಲಯ ಸಮಿತಿ, ಕಾಪು - ರಜತ ಸಂಭ್ರಮ

Thumbnail
Posted On: 06 Apr 2026, 03:15 PM

ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ) ವಲಯ ಸಮಿತಿ, ಕಾಪು ಇದರ ರಜತ ಸಂಭ್ರಮ ಎ.19,  ಭಾನುವಾರ ಮಹಾದೇವಿ ಪ್ರೌಢಶಾಲೆ, ಕಾಪು ಇಲ್ಲಿ ಜರಗಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9 ಕ್ಕೆ ಕ್ರೀಡಾಕೂಟವು ಜರಗಲಿದ್ದು, ಕಾಪು ವಲಯದ ಮಾಜಿ ಅಧ್ಯಕ್ಷರಾದ ಮೋಹಿನಿ ಸುವರ್ಣ ಹಾಗೂ  ಸುರೇಖಾ ಶೈಲೇಶ್ ಉದ್ಘಾಟಿಸಲಿದ್ದಾರೆ.

ಅಪರಾಹ್ನ ಗಂಟೆ 3:30ಕ್ಕೆ ಜರಗಲಿರುವ 
ಸಭಾ ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಲಿದ್ದಾರೆ. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಮಂಗಳೂರು ರಾಜ್ಯಾಧ್ಯಕ್ಷರಾದ 
ಸುರೇಶ್ ಸಾಲ್ಯಾನ್ ಗೌರವ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ 
ಕೆ.ಎಸ್.ಟಿ.ಎ ರಾಜ್ಯ ಸಮಿತಿ ಮಂಗಳೂರು 
ಉಪಾಧ್ಯಕ್ಷರಾದ ರಾಮಚಂದ್ರ, ಕೋಶಾಧಿಕಾರಿ ಅಬ್ದುಲ್ ಖಾದರ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಕಾಪು ಅಧ್ಯಕ್ಷರಾದ ದಯಾನಂದ ಕೋಟ್ಯಾನ್,  ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಉಡುಪಿ ಪ್ರ.ಕಾರ್ಯದರ್ಶಿ ಬಿ. ಕೆ ಶ್ರೀನಿವಾಸ್, ಕೆ.ಎಸ್.ಟಿ.ಎ ವಲಯ ಸಮಿತಿ ಕಾಪು ವಲಯದ ಪ್ರ. ಕಾರ್ಯದರ್ಶಿ ರಮಣಿ ಎಸ್. ಆಚಾರ್ಯ, ಕೆ.ಎಸ್.ಟಿ.ಎ ಕ್ಷೇತ್ರ ಸಮಿತಿ ಕಾಪು ಅಧ್ಯಕ್ಷರಾದ ಮೋಹಿನಿ ಕುಂದ‌ರ್, ಕೆ.ಎಸ್.ಟಿ.ಎ ವಲಯ ಸಮಿತಿ ಬೆಳ್ಮಣ್ಣು ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಕೆ.ಎಸ್.ಟಿ.ಎ ವಲಯ ಸಮಿತಿ ಕಟಪಾಡಿ ಅಧ್ಯಕ್ಷರಾದ ಹೇಮಲತಾ ಹೆಗ್ಡೆ, ಕೆ.ಎಸ್.ಟಿ.ಎ ವಲಯ ಸಮಿತಿ ಪಡುಬಿದ್ರಿ ಅಧ್ಯಕ್ಷರಾದ ಪುಷ್ಪಲತಾ, ಶ್ರೀ ಹೊಸಮಾರಿಗುಡಿ ದೇವಸ್ಥಾನ ಕಾಪು ಆಡಳಿತ ಸಮಿತಿ ಸದಸ್ಯರಾದ ಮಾಧವ ಪಾಲನ್, ಲಕ್ಷ್ಮೀಜನಾರ್ದನ ಟೆಕ್ಸ್‌ಟೈಲ್ಸ್, ಕಾಪು ಇದರ ಲಕ್ಷ್ಮೀನಾರಾಯಣ ತಂತ್ರಿ ಉಪಸ್ಥಿತರಿರಲಿದ್ದಾರೆ.

ಕೆ.ಎಸ್.ಟಿ.ಎ ವಲಯ ಸಮಿತಿ ಕಾಪು ಅಧ್ಯಕ್ಷರಾದ ಸುಧಾಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಟೈಲರ್ ವೃತ್ತಿ ಬಾಂಧವರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ವರಂ ಮೆಲೋಡಿಸ್, ಕಾಪು ಇವರಿಂದ ಸಂಗೀತ ರಸಮಂಜರಿ ನಂತರ ಲಕ್ಕಿಡಿಪ್ ಡ್ರಾ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೆ.ಎಸ್.ಟಿ.ಎ. ವಲಯ ಸಮಿತಿ ಕಾಪು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎ.11 : ಕಟಪಾಡಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

Thumbnail
Posted On: 06 Apr 2026, 01:18 PM

ಕಾಪು : ನಮ್ಮೂರಿನಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯುವ ನಿಟ್ಟಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ.ಕೃಷ್ಣಮೋಹನ್ ಪೈ, ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ ವಿಎಸ್‌ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳು, ದೇವಸ್ಥಾನ ದೈವಸ್ಥಾನ, ಭಜನಾ ಮಂದಿರಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಿಬಂದಿಗಳ ಸಹಕಾರದೊಂದಿಗೆ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಎ.11, ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ಸತ್ಯೇಂದ್ರ ಪೈ ಹೇಳಿದರು.
ಅವರು ಸೋಮವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಿರುಪತಿಯಿಂದಲೇ ದೇವರು ತಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನಗಳು ಜರಗಲಿದೆ.
ಮಧ್ಯಾಹ್ನ 3:30ಕ್ಕೆ ಕಟಪಾಡಿ ಪೇಟೆಗೆ ಶ್ರೀ ಶ್ರೀನಿವಾಸ ದೇವರು ಆಗಮಿಸಿ, ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವೇದಿಕೆಗೆ ಮೆರವಣಿಗೆ ಹೊರಡಲಿದೆ

ಸಂಜೆ ಗಂಟೆ 5 ರಿಂದ ಶ್ರೀದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತೀ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾ ಧಾರಣೆ ನಡೆದು ಗಂಟೆ 6:25 ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತೀ ದೇವಿಯ ಕನ್ಯಾದಾನ, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚರಣೆ ಮಹಾಪ್ರಸನ್ನ ಪೂಜೆ ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಜರಗಲಿದೆ. ರಾತ್ರಿ ಗಂಟೆ 8 ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ತಿರುಪತಿಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯಬಹುದಾಗಿದೆ. ತಿರುಪತಿ ದೇವಸ್ಥಾನಕ್ಕೆ ಕಾಣಿಕೆ ಕೊಡುವವರಿಗೆ ಇಲ್ಲಿಯೇ ತಿರುಪತಿ ದೇವಸ್ಥಾನದ ಹುಂಡಿಗೆ ಹಣ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿಶೇಷಚೇತನ ಹಾಗೂ ಅಶಕ್ತ ನಾಗರಿಕರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.

ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದಲೇ ಬರಲಿರುವ ಲಡ್ಡು ಪ್ರಸಾದ ಸಹಿತ ಪ್ರಸಾದ ವಿತರಣೆ ನಡೆಯಲಿದೆ.
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳ ವಾಹನ ನಿಲುಗಡೆಗೆ ವಿವಿಧ ಸ್ಥಳಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು ವಾಹನ ನಿಲುಗಡೆಯ ಸ್ಥಳದಿಂದ ಕಲ್ಯಾಣ ಮಂಟಪಕ್ಕೆ ಆಗಮಿಸಲು ಬದಲಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ಕಲ್ಯಾಣೋತ್ಸವ ಸಮಿತಿಯ ವೆಬ್ ಸೈಟ್
https://www.katapadykalyanotsava.com/ ನಲ್ಲಿ ವಿವರಗಳು ಲಭ್ಯವಿದೆ.

ಸುಮಾರು 750 ರಿಂದ 800 ಸ್ವಯಂಸೇವಕರು ಸೇವೆಗೆ ತಯಾರಾಗಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಯಾರಿಂದಲೂ ಯಾವುದೇ ರೀತಿಯ ಧನ ಸಹಾಯವನ್ನು ಸ್ವೀಕರಿಸಲಾಗುವುದಿಲ್ಲ. ಶ್ರೀ ವೆಂಕಟರಮಣ ದೇವರಿಗೆ ಹೂ, ಹಣ್ಣು ಹಾಗೂ ತುಳಸಿಯನ್ನು ಅರ್ಪಿಸಲು ಬಯಸುವ ಭಕ್ತಾದಿಗಳು ಅಪರಾಹ್ನ ಗಂಟೆ 3ರ ಒಳಗಾಗಿ ಕಲ್ಯಾಣ ಮಂಟಪದಲ್ಲಿ ನೀಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಕೃಷ್ಣಮೋಹನ್ ಪೈ, ಯುಎಸ್‌ಎ, ಸುಧಾಕರ ಬ್ರಹ್ಮಾವರ, ಭಾಸ್ಕರ ಕಾಮತ್, ನಾಗೇಶ್ ಕಾಮತ್, ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.

ಪಡುಬಿದ್ರಿ ದೇಗುಲದ ಜೀರ್ಣೋದ್ಧಾರ ಪ್ರಯುಕ್ತ ಹೊರೆ ಕಾಣಿಕೆ - ವಿವಿಧ ಸಮಾಜದ ಪ್ರಮುಖರ ಪೂರ್ವಭಾವಿ ಸಭೆ

Thumbnail
Posted On: 05 Apr 2026, 07:26 PM

ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ  ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ನಮ್ಮ ಸೌಭಾಗ್ಯ. ಹೊರೆ ಕಾಣಿಕೆಯ ಮೇಲೆ ಕಾರ್ಯಕ್ರಮದ ಯಶಸ್ಸು ನಿಂತಿದೆ. ದೇವ ಋಣ ತೀರಿಸುವ ಸಮಯ ಬಂದಿದೆ. ನಾವೆಲ್ಲ ಭಾಗಿಯಾಗೋಣ ಎಂದು ಕಾಪು ಶಾಸಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ವಿವಿಧ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಎ.26ರಂದು ಜರಗಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಸಲ್ಲಿಸುವ ಬಗ್ಗೆ ನಡೆದ ಸಮಿತಿಯ ರ್ಪೂಭಾವಿ ಸಭೆಯಲ್ಲಿ ಮಾತನಾಡಿದರು.

ಹೊರೆ ಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಡಾ. ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಎ. 26 ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಬೃಹತ್ ಹೊರೆಕಾಣಿಕೆಯ ಸಂಕಲ್ಪ ಮಾಡಲಾಗಿದೆ. ಪಡುಬಿದ್ರಿ ಒಡೆಯನ ಜೀರ್ಣೋದ್ಧಾರಕ್ಕೆ ಅಳಿಲ ಸೇವೆ ಮಾಡಬೇಕೆಂಬುದು ಸರ್ವರ ಇಚ್ಛೆ. ಒಂದು  ಸಾವಿರಕ್ಕೂ ಅಧಿಕ ವಾಹನದ ಮೂಲಕ ದ.ಕ, ಉಡುಪಿ ಜಿಲ್ಲೆ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಪುಣೆ, ಶಿವಮೊಗ್ಗದಿಂದ ಹೊರೆ ಕಾಣಿಕೆ ಬರಲಿದೆ. ಹೊರೆ ಕಾಣಿಕೆಯ ಮೂಲಕ ಚರಿತ್ರೆ ನಿರ್ಮಾಣವಾಗಬೇಕು ಎಂದರು. 

ಹೊರೆ ಕಾಣಿಕೆ ಸಮರ್ಪಣೆಯ ಕಾರ್ಯಕ್ರಮಕ್ಕಾಗಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವತಿಯಿಂದ ನೀಡಲ್ಪಟ್ಟ ಮೊದಲ ಚೆಕ್ ನ್ನು  ಹಸ್ತಾಂತರಿಸಲಾಯಿತು.

ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ನವೀನ್ ಚಂದ್ರ ಜೆ. ಶೆಟ್ಟಿ, ಪಿಕೆ ಸದಾನಂದ, ವಿಶು ಕುಮಾರ್ ಶೆಟ್ಟಿ ಬಾಲ್, ವೈ. ಸುಕುಮಾರ್, ವೈ. ಎನ್. ರಾಮಚಂದ್ರ ರಾವ್, ಲಕ್ಷ್ಮಣ ಶೆಟ್ಟಿ ಬಾಲ್, ಚಂದ್ರಹಾಸ ಶೆಟ್ಟಿ, ರತ್ನಾಕರ ಶೆಟ್ಟಿ ನಡುಕೆರೆ, ಜಯ ಕೋಟ್ಯಾನ್, ರಮಾಕಾಂತ ರಾವ್,  ಶ್ರೀಮತಿ ಗೀತಾಂಜಲಿ ಸುವರ್ಣ, ಸುಗ್ಗಿ ಸುಧಾಕರ ಶೆಟ್ಟಿ, ಶ್ರೀಮತಿ ಮಮತಾ ಶೆಟ್ಟಿ, ಸುಧಾಕರ ಸಾಲ್ಯಾನ್, ಕೃಷ್ಣ ಬಂಗೇರ, ಸೋಮಶೇಖರ್, ವಿಠ್ಠಲ ಗುರಿಕಾರ, ಸುರೇಶ್, ಅಶೋಕ್ ಶೆಟ್ಟಿ, ಹರಿನಾಥ್, ಅಶೋಕ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಪ್ರಶಾಂತ್ ಶೆಣೈ, ಭರತ್ ದೇವಾಡಿಗ, ಪ್ರಕಾಶ್ ದೇವಾಡಿಗ, ಲಕ್ಷ್ಮಣ ಪೂಜಾರಿ, ರವೀಂದ್ರನಾಥ ಶೆಟ್ಟಿ, ಬಾಲಾಜಿ ಯೋಗೀಶ್ ಶೆಟ್ಟಿ, ಶ್ರೀನಾಥ್ ಹೆಗ್ಡೆ, ರವಿ ಶೆಟ್ಟಿ ಗುಂಡ್ಲಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

 ಹೊರೆ ಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಡಾ. ದೇವಿಪ್ರಸಾದ್ ಶೆಟ್ಟಿ  ಸ್ವಾಗತಿಸಿದರು. ಜಯ ಶೆಟ್ಟಿ ಪದ್ರ ಮತ್ತು ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.

ಕಾರ್ಕಳ : ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

Thumbnail
Posted On: 05 Apr 2026, 11:56 AM

ಕಾರ್ಕಳ :  2026 -27ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಕಳದ ಸ್ಥಳೀಯ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಸೇರಬಯಸುವುದಾದರೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೊಂಗಿರಣ ಯೋಜನೆಯಡಿಯಲ್ಲಿ ವಿಶೇಷ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಾನ್ವಿರಾವ್ ಎಂಬ ವಿದ್ಯಾರ್ಥಿನಿ 598 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡಿರುವುದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ. 

ಸಿಎ ಫೌಂಡೇಶನ್ ನಲ್ಲಿ 58 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿರುವುದಲ್ಲದೆ, CSEET ಪರೀಕ್ಷೆಯಲ್ಲಿ 98 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಅರ್ಹತೆಯನ್ನು ಪಡೆದುಕೊಂಡಿರುವುದು ವಾಣಿಜ್ಯ ವಿಭಾಗದ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಈ ಉಚಿತ ಶಿಕ್ಷಣ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಪು : ರಂಗಭೂಮಿ ಕಲಾವಿದ ಸುಜಿತ್ ಶೆಟ್ಟಿ ನಿಧನ

Thumbnail
Posted On: 03 Apr 2026, 11:16 AM

ಕಾಪು : ತುಳು ರಂಗಭೂಮಿ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು (54) ಶುಕ್ರವಾರ ನಿಧನ ಹೊಂದಿದರು.

ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ, ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಕೆಲವು ಸಮಯಗಳಿಂದ ಅಸೌಖ್ಯದಿಂದಾಗಿ ನಟನೆಯಿಂದ ದೂರ ಉಳಿದಿದ್ದರು.

ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಮತ್ತು ಪುತ್ರಿಯನ್ನು ಅಗಲಿದ್ದಾರೆ
    

ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Thumbnail
Posted On: 31 Mar 2026, 10:39 PM

ಕಾಪು : ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.)ಇದರ ಮುಂದಿನ ಐದು ವರ್ಷಗಳಿಗೆ ಬಿಜೆಪಿ ಬೆಂಬಲಿತ, ಸಹಕಾರ ಭಾರತಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 

ನೂತನ ಅಧ್ಯಕ್ಷರಾಗಿ ಆಗ್ನೇಸ್ ಬೆನಡಿಕ್ಡ್ ಮತಾಯಸ್, ಉಪಾಧ್ಯಕ್ಷರಾಗಿ ಸರೋಜಿನಿ ಭಂಡಾರಿ ಅವಿರೋಧವಾಗಿ ಆಯ್ಕೆಯಾದರು.

 ನಿರ್ದೇಶಕರುಗಳಾಗಿ ಪದ್ಮಾವತಿ ಪೂಜಾರ‍್ತಿ, ವನಜಾ ಶೆಟ್ಟಿ, ಗೀತಾ, ಬೀನಾ ಕೆ.ಕೋಟ್ಯಾನ್, ಲಲಿತಾ ಮೂಲ್ಯ, ಪ್ರಮೀಳಾ ಜಿ.ಆಚಾರ್ಯ, ಗೀತಾ ಬಿ.ದೇವಾಡಿಗ, ಮಾಲತಿ ಮತ್ತು ಜ್ಯೋತಿ ಆಯ್ಕೆಯಾದರು.  

ಸಹಕಾರಿ ಇಲಾಖೆಯ ಅಧಿಕಾರಿಯಾಗಿರುವ ಕೆ.ಆರ್.ರೋಹಿತ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಭವಾನಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗ್ರಾಹಕ ಸ್ನೇಹಿ ರಮಾನಂದ ಆಚಾರ್ಯ ವಯೋನಿವೃತ್ತಿ ; ಸನ್ಮಾನ

Thumbnail
Posted On: 31 Mar 2026, 10:33 PM

ಶಿರ್ವ : ಬ್ಯಾಂಕಿಂಗ್ ವೃತ್ತಿಯಲ್ಲಿ ಸುಮಾರು 40 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ಗ್ರಾಹಕ ಸ್ನೇಹಿಯಾಗಿ ಜನಮನ್ನಣೆ ಗಳಿಸಿದ ರಮಾನಂದ ಆಚಾರ್ಯ ಉಡುಪಿ ಇವರು ಮಂಗಳವಾರ ಬಂಟಕಲ್ಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ವಯೋನಿವೃತ್ತಿ ಹೊಂದಿದ ಶುಭಾವಸರದಲ್ಲಿ ಬ್ಯಾಂಕ್ ಸಿಬ್ಬಂದಿಗಳು, ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಗ್ರಾಹಕರು, ವಿವಿಧ ಭಾಗದ ಮಾಜಿ ಸಹೋದ್ಯೋಗಿಗಳ ಸಮ್ಮುಖದಲ್ಲಿ ಕರ್ನಾಟಕ ಬ್ಯಾಂಕ್ ಉಡುಪಿ ವಲಯದ ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ವೈದ್ಯ ಇವರು ಸನ್ಮಾನಿಸಿ ಶುಭ ವಿದಾಯ ಕೋರಿದರು. 

ಬ್ಯಾಂಕ್‌ನ ಮೂಲ ಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸಿ ಬ್ಯಾಂಕ್ ಮತ್ತು ಗ್ರಾಹಕರ ಕೊಂಡಿಯಾಗಿ ನೀಡಿದ ಸೇವೆಗೆ ಇಲ್ಲಿ ಸೇರಿದ ಅಪಾರ ಸಂಖ್ಯೆಯ ಗ್ರಾಹಕರೇ ಸಾಕ್ಷಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಿವೃತ್ತರ ಪತ್ನಿ ಅರ್ಚನಾ ಆಚಾರ್ಯ ವೇದಿಕೆಯಲ್ಲಿದ್ದರು.  

ನಿವೃತ್ತರ ಸೇವೆಯ ಬಗ್ಗೆ ಗ್ರಾಹಕರಾದ ಕೆ.ರ್.ಪಾಟ್ಕರ್, ಸ್ಯಾಮ್ಸನ್ ನೊರೋನ್ಹಾ, ಪುಂಡಲೀಕ ಮರಾಠೆ, ಸಹೋದ್ಯೋಗಿಗಳಾಗಿದ್ದ ವಾದಿರಾಜ ಆಚಾರ್ಯ, ಉಡುಪಿ ಶಾಖಾಧಿಕಾರಿ ಸುಬ್ರಹ್ಮಣ್ಯ ಬಾರ್ವೆ ಮಾತನಾಡಿದರು.

 ಬಂಟಕಲ್ಲು ಶಾಖಾಧಿಕಾರಿ ವಿಘ್ನೇಶ್ವರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಸಹೋದ್ಯೋಗಿ ದಿವ್ಯಾ ವಂದಿಸಿದರು.

 ವಿವಿಧ ಶಾಖೆಗಳಿಂದ ಆಗಮಿಸಿದ ಮಾಜಿ ಸಹೋಗ್ಯೋಗಿಗಳು ರಮಾನಂದ ಆಚಾರ್ಯ ದಂಪತಿಗಳಿಗೆ ಶುಭವಿದಾಯ ಕೋರಿದರು.

ಎ.9 -11 : ಪಡುಬೆಳ್ಳೆ ಶ್ರೀಗುರುಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Thumbnail
Posted On: 31 Mar 2026, 10:26 PM

ಶಿರ್ವ: ಪಡುಬೆಳ್ಳೆಯ ಕಾರಣಿಕ ಕ್ಷೇತ್ರ ಶ್ರೀಗುರುಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ನಲ್ವತ್ತೆರಡನೆಯ ವಾರ್ಷಿಕ ನೇಮೋತ್ಸವ ಎ.9 ಗುರುವಾರ ದಿಂದ ಎ.11 ಶನಿವಾರ ಪರ್ಯಂತ ಜರುಗಲಿದೆ. 

ಎ.9 ಗುರುವಾರ ಸಂಜೆ ಶ್ರೀದೈವಗಳ ಅಗೇಲು, ಎ.10 ಶುಕ್ರವಾರ ಮಧ್ಯಾಹ್ನ 12:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀದೈವಗಳ ವಾರ್ಷಿಕ ನೇಮೋತ್ಸವ, ಎ.11 ಶನಿವಾರ ಮಧ್ಯಾಹ್ನ ಅಲ್ಯಾರ ಪಂಜುರ್ಲಿ ದೈವದ ನೇಮೋತ್ಸವ ಜರುಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.