Updated News From Kaup
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ವಳದೂರು ನಾರಾಯಣ ಶೆಟ್ಟಿ ನಿಧನ
Posted On: 17 Oct 2025, 12:03 PM
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿಗಳು, ದೈವ ಭಕ್ತರೂ, ಪರೋಪಕಾರಿಗಳು, ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ವಿಶೇಷ ಆರಾಧಕರೂ ಆದ ವಳದೂರು ನಾರಾಯಣ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವರ್ಗಸ್ಥರಾಗಿರುತ್ತಾರೆ. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಕಾಪು : ಸಾಧನಾ ಶಿಖರವೇರಿದ ಸಾಹಿತಿ ಎಸ್.ಎಲ್.ಭೈರಪ್ಪ - ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
Posted On: 15 Oct 2025, 05:15 AM
ಕಾಪು : ಬದುಕಿನ ಸಮಸ್ಯೆಗಳನ್ನು ಲೆಕ್ಕಿಸದೆ ಸಾಧನಾ ಶಿಖರವನ್ನು ಏರಿದ ಸಾಹಿತಿ ಭೈರಪ್ಪ ನಮಗೆ ಸ್ಪೂರ್ತಿ ಆಗಬೇಕು. ಇವರ ಕೃತಿಗಳು ಚರ್ಚೆಗೆ ಒಳಗಾದ್ದರಿಂದ ಎಡ ಬಲ ಚಿಂತಕರೂ ಕೊಂಡು ಓದಿದವರಿದ್ದಾರೆ. ಕೃತಿಗಳ ಮೂಲಕ ಚಿರಾಯುವಾದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ಉಡುಪಿ ಎಮ್.ಜಿ.ಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ನುಡಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಸಾಹಿತ್ಯ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಏರ್ಪಡಿಸಿದ "ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಎಲ್ಲಿ ? ಎನ್ನುವವರಿಗೆ ದೇವರು ಇಲ್ಲಿ ಎಂದು ತೋರಿಸಿ ಕೊಟ್ಟ ಭೈರಪ್ಪರವರನ್ನು ಹೊಗಳುವವರೂ ತೆಗಳುವವರೂ ಇದ್ದಾರೆ. ಇವರ ಕೃತಿಗಳಲ್ಲಿ ವಾಸ್ತವತೆ ಮತ್ತು ಬದುಕಿನ ಚಿಂತೆನೆಯೂ ಇದೆ ಎಂದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಗೋಪಾಲೃಷ್ಣ ಎಂ.ಗಾಂವ್ಕರ್ ಮಾತನಾಡಿ, ಹಲವಾರು ಸಾಹಿತ್ಯ ಕೃತಿಗಳಲ್ಲಿ ಅತೀ ಹೆಚ್ಚು ಆಸಕ್ತಿಯನ್ನು ಮೂಡಿಸಿದ ಕೃತಿಗಳಿದ್ದರೆ ಅದು ಭೈರಪ್ಪರವರದ್ದು, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಓದುಗರಾಬೇಕು. ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ದಿನ ನಿತ್ಯದ ವಾಸ್ತವಿಕತೆ ಅರಿಯಲು ಕಾದಂಬರಿಗಳನ್ನು ಓದಬೇಕು ಎಂದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಭೈರಪ್ಪನವರು ಕಾದಂಬರಿ ಬರೆಯುವ ಪೂರ್ವದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ಓದುಗರಿಗೆ ತಿಳಿಯುವಂತೆ ಅಭಿವ್ಯಕ್ತಿಗೊಳಿಸುತ್ತಿದ್ದರು. ಹಾಗಾಗಿ ಅವರ ಕಾದಂಬರಿಗಳಲ್ಲಿ ನಿತ್ಯ ಸತ್ಯವನ್ನು ಕಾಣಬಹುದಾಗಿದೆ ಎಂದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರೂ, ಸಾಹಿತ್ಯ ಸಂಘದ ನಿರ್ದೇಶಕರಾದ ಡಾ.ರವಿರಾಜ್ ಶೆಟ್ಟಿ ಭೈರಪ್ಪರವರ ಸಾಹಿತ್ಯ ಸೇವೆಯ ಬಗ್ಗೆ ಅನುಭವ ಹಂಚಿಕೊಂಡರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಹಿತ ವೇದಿಕೆಯಲ್ಲಿರುವ ಗಣ್ಯರು ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಪು ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಮಧುಕರ್ ಎಸ್.ಕಲ್ಯಾ, ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ನರಸಿಂಹಮೂರ್ತಿ ರಾವ್, ಕಾಲೇಜಿನ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಘಟಕದ ಕೋಶಾಧ್ಯಕ್ಷರು, ಕಾರ್ಯಕ್ರಮ ಸಂಯೋಜಕರಾದ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ದೀಪಿಕಾ ಸುವರ್ಣ ವಂದಿಸಿದರು.
ಕಾಪು : ನಾಯ್ಕ್ ಟ್ರೋಫಿ ಪಯ್ಯಾರು -2025 ಕ್ರಿಕೆಟ್ ಪಂದ್ಯಕೂಟದ ಸಮಾರೋಪ
Posted On: 15 Oct 2025, 05:04 AM
ಕಾಪು : ಗಣೇಶ್ ನಾಯ್ಕ್ ಪೈಯಾರು ಹಾಗೂ ಆರ್ಯನ್ ನಾಯ್ಕ್ ಬೆಳಪು ಪ್ರಾಯೋಜಕತ್ವದ ನಾಯ್ಕ್ ಟ್ರೋಫಿ -2025 ಇದರ ಕ್ರಿಕೆಟ್ ಪಂದ್ಯಕೂಟ ಸಮಾರೋಪಗೊಂಡಿತು. ಪಂದ್ಯಾಕೂಟದಲ್ಲಿ ಗುರುಗಣೇಶ್, ನೇಜಾರು ತಂಡ ಪ್ರಥಮ ಮತ್ತು ಸಹನಾ, ಮಲ್ಲಾರು, ಕಾಪು ದ್ವೀತಿಯ ಹಾಗೂ ಕಟೀಲ್ ಪ್ರೆಂಡ್ಸ್ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡರು. ಈ ಸಮಾರಂಭದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ತಾಲೂಕು ನಾಯಕ ಸಮಾಜದ ಅಧ್ಯಕ್ಷರಾದ ಎಂ.ನೀಲಾನಂದ ನಾಯಕ ಕಲ್ಯಾ, ಯೋಗೀಶ್ ಶೆಟ್ಟಿ ಬಾಲಾಜಿ ಕಾಪು, ಶ್ರೀ ಮಾಸ್ತಿ ಅಮ್ಮ ದೇವಸ್ಥಾನ ಪೈಯಾರು ಇದರ ಪ್ರದಾನ ಅರ್ಚಕರಾದ ಮಾಧವ ನಾಯ್ಕ್, ಪೈಯಾರು, ಧೂಮವತಿ ದೈವಸ್ಥಾನ ಪೈಯಾರು ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ರೋಹಿತ್ ನಾಯ್ಕ್, ಮಲ್ಲಾರ್, ಮುಸ್ತಾಕ್ ಬೆಳಪು, ಜಾಹೀರ್ ಅಹಮ್ಮದ್ ಬೆಳಪು, ರವಿ ನಾಯ್ಕ್, ನಿತಿನ್ ನಾಯ್ಕ್, ಮಟ್ಟಾರ್. ವಸಂತ ನಾಯ್ಕ್, ಪೈಯಾರು, ಚಂದ್ರಶೇಖರ ನಾಯ್ಕ್, ಬೆಳಪು, ನಿತ್ಯಾನಂದ ಆರ್ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ದಿವಾಕರ ಡಿ ಶೆಟ್ಟಿ ಕಳತೂರು, ಶಶಿಕಾಂತ್ ಆಚಾರ್ಯ, ಕಳತೂರು, ರಾಜೇಶ್ ನಾಯ್ಕ್ ಮಟ್ಟಾರ್, ದಿನೇಶ್ ನಾಯ್ಕ್ ಮಟ್ಟಾರ್, ದೇವೇಂದ್ರ ನಾಯ್ಕ್ ಮಲ್ಲಾರ್, ಸ್ಟಾನ್ಲಿ ಕೊಡ್ದ ಸದಸ್ಯರು ಗ್ರಾಮ ಪಂಚಾಯತ್ ಕುತ್ಯಾರ್, ರವಿ ನಾಯ್ಕ್, ಮಜೂರು, ಕಮಲಾಕ್ಷ ಹಾಗೂ ಸದಾನಂದ ನಾಯ್ಕ್ ಉಪಸ್ಥಿತರಿದ್ದರು.
ಬ್ರಹ್ಮಾವರ : ರುಡ್ ಸೆಟ್ ಆಸರೆಯ ಬಸ್ಸು ತಂಗುದಾಣ ಲೋಕಾರ್ಪಣೆ
Posted On: 15 Oct 2025, 04:58 AM
ಉಡುಪಿ : ಬ್ರಹ್ಮಾವರ ರುಡ್ ಸೆಟ್ ಆಸರೆ ಸಂಘಟನೆ ಇದರ 20ನೇ ವರ್ಷದ ಸವಿ ನೆನಪಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರುಡ್ ಸೆಟ್ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಲೋಕಾರ್ಪಣೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ ಸುವರ್ಣ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ ಅವರು ಬಸ್ಸು ತಂಗುದಾಣದ ಶಿಲಾಫಲಕ ಅನಾವರಣಗೊಳಿಸಿದರು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ, ಆಸರೆ ಸಂಘಟನೆಯ ಈ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. ಇದೇ ರೀತಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಸಂಘಟನೆಯಿಂದ ನಡೆಸುವಂತಾಗಲಿ. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೆನರಾ ಬ್ಯಾಂಕ್ ಸದಾ ನಿಮ್ಮ ಜೊತೆಗೆ ಇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಸಂಘಟನೆ ಅಧ್ಯಕ್ಷರಾದ ಹರಿಣಿ ಅಜಯ್ ರಾವ್ ವಹಿಸಿದ್ದರು. ಈ ಸಂದರ್ಭ ಉಪ ಮಹಾ ಪ್ರಬಂಧಕರಾಗಿರುವ ಮಹಾಮಾಯ ಪ್ರಸಾದ್ ರಾಯ್, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಬೊಮಯ್ಯ ಎಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಕ್ಷೇತ್ರ ಯೋಜನಾಧಿಕಾರಿಯವರಾಗಿರುವ ರಮೇಶ್ , ಕರುಣಾಕರ ಜೈನ್ ಹಿರಿಯ ಉಪನ್ಯಾಸಕರು ರುಡ್ ಸೆಟ್ ಸಂಸ್ಥೆ ಸಿದ್ದವನ ಉಜಿರೆ, ಸ್ಥಳದಾನಿಗಳಾದ ಮಂದಾರ ಶೆಟ್ಟಿ, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾಗಿರುವ ಸಂತೋಷ್ ಶೆಟ್ಟಿ ಹಾಗೂ ಚೈತ್ರ , ಕೆನರಾ ಬ್ಯಾಂಕ್ ವಾರಂಬಳ್ಳಿ ಶಾಖೆಯ ಅಮೀತ್, ಕೆನರಾ ಬ್ಯಾಂಕಿನ ಅಜೇಯ್, ಆಸರೆಯ ಕೋಶಾಧಿಕಾರಿ ವೆಂಕಟೇಶ್ ನಾಯ್ಕ , ಉಪಾಧ್ಯಕ್ಷರಾದ ರಾಜಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ಉಮೇಶ್ ನಾಯಿರಿ, ಕಮಲ ಕೆ.ಸಿ ಅಮಿನ್, ಗೌರವ ಶಿಕ್ಷಕಿ ಸುಮತಿ ಸುವರ್ಣ, ಮಾಜಿ ಅಧ್ಯಕ್ಷರಾದ ಕಿಶ್ವರಿ ಜಹಾನ್ ಹಾಗೂ ಶಕೀಲಾ ಹೆಗ್ಡೆ, ಪಧಾಧಿಕಾರಿಗಳಾದ ಉಮೇಶ್ ಆಲ್ತಾರು, ಪ್ರಶಾಂತ್ ಕಟಪಾಡಿ, ನಾಗರತ್ನ ಆಚಾರ್ಯ, ಸುಮಂಗಲ ಅಂಬಾಗಿಲು, ಗಂಗಾಧರ ಆಚಾರ್ಯ, ರಾಮಚಂದ್ರ ಆಚಾರ್ಯ, ಕಚೇರಿ ಸಹಾಯಕರಾದ ರವಿ ಸಾಲಿಯಾನ್, ಶಾಂತಪ್ಪ, ಪೃಥ್ವಿರಾಜ್, ಅರುಣ್, ಸಂತೋಷ್, ಆಸರೆ ಸದಸ್ಯರಾದ ಪ್ರವೀಣ್ ಮಲ್ಪೆ, ರಾಗಿಣಿ ಚೆರ್ಕಾಡಿ, ವಿಶ್ವಾಸ್ ಕಾಂಚನ್, ಶಶಿಕಲಾ ದೇವಾಡಿಗ, ಸುಗುಣ ಆಚಾರ್ಯ, ಲೇಖಾರಾಜ್, ಶಿಕ್ಷಕಿ ವೀಣಾ, ವಿದ್ಯಾ, ಪ್ರಕಾಶ್ ಆಚಾರ್ಯ, ಸುಜ್ಯೋತಿ ಅಂಬಲಪಾಡಿ, ಮನೋರಮ ಶೆಟ್ಟಿ, ಯೋಗ ಶಿಕ್ಷಕಿ ಪ್ರಿಯಾಂಕ, ವಿಜಯ ಲಕ್ಷ್ಮಿ, ಭರತ್ ಅಚಾರ್ಯ ಪಂದುಬೆಟ್ಟು, ದಿವ್ಯಜ್ಯೋತಿ ರಾಧಾಕೃಷ್ಣ ಆಚಾರ್ಯ, ಆಶಾ ಪ್ರಾಣೇಶ್, ಸುಮತಿ, ಮಹೇಶ್ ಅಲ್ತಾರು, ರತ್ನಾಕರ ಮೊಗವೀರ, ಹಾಗೂ ರುಡ್ ಸೆಟ್ ನ ವಿದ್ಯಾರ್ಥಿಗಳು, ಆಸರೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಆಸರೆಯ ಮಾಜಿ ಅಧ್ಯಕ್ಷರಾದ ಕೆ.ಸಿ ಅಮಿನ್ ಸ್ವಾಗತಿಸಿದರು ಹಾಗೂ ಆಸರೆ ಸಂಘಟನೆಯ ಗೌರವಾಧ್ಯಕ್ಷರಾದ ರಾಜೇಶ್ ಡಿ ಬ್ರಹ್ಮಾವರ ಪ್ರಸ್ತಾವನೆಗೈದರು. ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕುಶಕುಮಾರ್ ಬನ್ನಾಡಿ ವಂದಿಸಿದರು
ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಪೂರ್ವಭಾವಿ ಪ್ರಥಮ ಸಭೆ ; ಫೆ. 28ರಂದು ಕಂಬಳ
Posted On: 12 Oct 2025, 04:59 PM
ಪಡುಬಿದ್ರಿ : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ ಪ್ರಥಮ ಸಭೆಯು ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಭಾನುವಾರ ಜರಗಿತು. ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ನಾವು ಈ ಬಾರಿ ಪ್ರಥಮವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಿದ್ದೇವೆ. ಹಿಂದೆ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ಯಾವುದೇ ತೊಂದರೆ ಬರದಂತೆ ನಾವು ವ್ಯಾಘ್ರ ಚಾಮುಂಡಿ ದೈವಕ್ಕೆ ಸೂಕ್ತ ನೆಲೆ ಕಲ್ಪಿಸಿ, ಇದೀಗ ಕಂಬಳ ಮಾಡಲು ಉದ್ದೇಶಿಸಿದ್ದೇವೆ. ಅ.22ರಂದು ಕಂಬಳ ಕರೆಗೆ ಭೂಮಿ ಪೂಜೆ, ಫೆ.28ರಂದು ಕಂಬಳ ಜರಗಲಿದೆ ಎಂದರು. ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಇದು ಕಂಬಳದ ಮೊದಲ ಸಭೆ. ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವರ ಉತ್ಸವದಂತೆ ಎರ್ಮಾಳು ತೆಂಕ - ಬಡ ಕಂಬಳವನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಮಾಡೋಣ ಎಂದರು. ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಮಾತನಾಡಿ, ಎರ್ಮಾಳು ಬೀಡು ನೇತೃತ್ವದಲ್ಲಿ ಎರ್ಮಾಳಿನಲ್ಲಿ 1978 ರಲ್ಲಿ ಕೊನೆಯ ಕಂಬಳವಾಗಿತ್ತು. ನಮ್ಮ ಕಂಬಳ ಎಂಬ ಭಾವನೆಯಿಂದ ಇದನ್ನು ಯಶಸ್ವಿಗೊಳಿಸೋಣ ಎಂದರು. ಎರ್ಮಾಳು ಶ್ರೀ ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ ಶೆಟ್ಟಿ, ಎರ್ಮಾಳು ಮಸೀದಿ ಅಧ್ಯಕ್ಷ ಸುಲೇಮಾನ್, ಜಿನರಾಜ್ ಎರ್ಮಾಳು, ವೈ. ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ ಮತ್ತಿತರರು ಅಭಿಪ್ರಾಯ ಮಂಡಿಸಿದರು. ಈ ಸಂದರ್ಭ ವೆಂಕಟೇಶ ನಾವಡ, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಭರತ್ ಕುಮಾರ್, ಗೋಪಾಲ ಶೆಟ್ಟಿ, ಜಯರಾಜ್ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಶಶಿಧರ ಶೆಟ್ಟಿ, ವಿವಿಧ ಜಾತಿ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಸ್ವಾಗತಿಸಿ, ನಿರೂಪಿಸಿದರು.
ಬ್ರಹ್ಮಾವರ : ಜಯಂಟ್ಸ್ ಕೇರ್ ಫೌಂಡೇಶನ್ ಮತ್ತು ಜಯಂಟ್ಸ್ ಗ್ರೇಟ್ ಡೇ ಸಮಾರಂಭ
Posted On: 12 Oct 2025, 12:50 PM
ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಜಯಂಟ್ಸ್ ಕೇರ್ ಫೌಂಡೇಶನ್ ನ ಉದ್ಘಾಟನೆ ಮತ್ತು ಗ್ರೇಟ್ ಡೇ ಸೆಲೆಬ್ರೇಶನ್ ಕಾರ್ಯಕ್ರಮ ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಎಸ್ ಡಿ ಎಂ ಆಯುರ್ವೇದಿಕ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಪೂಜಾರಿ, ಕರ್ಮ ಯೋಗವು ಅತ್ಯಂತ ಶ್ರೇಷ್ಠವಾಗಿದೆ ಸಮಾಜದಲ್ಲಿ ಸಂಘಟಿತರಾಗಿ ಉತ್ತಮ ಕಾರ್ಯವನ್ನು ಮಾಡಿದಾಗ ಅದು ಸಮಾಜದ ಅಭಿವೃದ್ಧಿಗೆ ನಾಂದಿಯಾಗುತ್ತದೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಅನೇಕ ರೀತಿಯ ಸಮಸ್ಯೆಗಳಿಗೆ ನಾವೇ ಕಾರಣ ಎಲ್ಲರೂ ಕೂಡ ವಿಶಾಲ ಮನೋಭಾವನೆಯಿಂದ ಕಾರ್ಯಮಾಡಿದಾಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ಈ ನಿಟ್ಟಿನಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಕಳೆದ ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ಮಾಡುತ್ತಿರುವುದು ಅಭಿನಂದನನಿಯ ಎಂದರು. ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇವರ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಿಕಟ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡು ಕುಕ್ಕುಡೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ರಂಗ ನಟ ಮತ್ತು ಚಲನಚಿತ್ರ ನಟ ಪ್ರಭಾಕರ್ ಕುಂದರ್, ಪೌರಕಾರ್ಮಿಕ ಶೇಖರ್, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸತೀಶ್ ಕುಮಾರ್ ಶೆಟ್ಟಿ, ಡಾ. ರೇಖಾ ನವೀನ್ ಮತ್ತು ನವೀನ್ ಚಂದ್ರ ಎನ್.ಎಚ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಮಿಲ್ಟನ್ ಒಲಿವೇರಾ ವರದಿ ವಾಚಿಸಿದರು. ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ಪ್ರಸ್ತಾವನೆಗೈದರು. ಗಾಯತ್ರಿ, ವನಜಾಕ್ಷಿ, ರೊನಾಲ್ಡ್ ಡಯಸ್, ವಿವೇಕಾನಂದ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ದೀತ್ಯಾ, ಆದ್ಯಾ ಅವರಿಂದ ನೃತ್ಯ ಮತ್ತು ರೊನಾಲ್ಡ್ ಡಯಸ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕಾಪು ಶ್ರೀ ಹೊಸ ಮಾರಿಗುಡಿಗೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ, ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರಾದ ಎಸ್ ಎಮ್ ರಾಮ್ ಪ್ರಸಾದ್ ಭೇಟಿ
Posted On: 12 Oct 2025, 12:34 PM
ಕಾಪು : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇದರ ಪ್ರಧಾನ ನಿರ್ದೇಶಕರಾದ ಎಸ್ ಎಮ್ ರಾಮ್ ಪ್ರಸಾದ್ ಅವರು ಭಾನುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲದ ಉಪ ನಿರ್ದೇಶಕರಾದ ಗಣೇಶ್ ನಾಯಕ್, ಮತ್ತು ಲೆಕ್ಕ ಪರಿಶೋಧಕರಾದ ಮುರಳಿಧರ್, ಸುರೇಶ್ ಜೊತೆಗಿದ್ದರು. ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಮತ್ತು ಪ್ರಚಾರ ಸಮಿತಿಯ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು.
ಅ.14 : ಕಾಪುವಿನಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ
Posted On: 12 Oct 2025, 12:27 PM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವ ಮತ್ತು ಸಾಹಿತ್ಯ ಸಂಘ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇದರ ಸಹಭಾಗಿತ್ವದಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪರವರ ಸಂಸ್ಮರಣಾ ಕಾರ್ಯಕ್ರಮ ಅ.14 ಮಂಗಳವಾರ ಅಪರಾಹ್ನ 1:15ಕ್ಕೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ. ಉಡುಪಿ ಎಂ.ಜಿ.ಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ.ಸುರೇಂದ್ರನಾಥ್ ಶೆಟ್ಟಿ ನುಡಿನಮನ ಸಲ್ಲಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ.ಗೋಪಾಲಕೃಷ್ಣ ಎಂ.ಗಾಂವ್ಕರ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸುವರು. ಸಭಾಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸುವರು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.
ಫ್ರೆಂಡ್ಸ್ ಬೆಳಪು ವತಿಯಿಂದ ನಾಯ್ಕ್ ಟ್ರೋಫಿ ಪಯ್ಯಾರು -2025 : ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
Posted On: 12 Oct 2025, 08:44 AM
ಕಾಪು : ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ಮೈದಾನದಲ್ಲಿ ಎರಡು ದಿನದ ನಾಯ್ಕ್ ಟ್ರೋಫಿ - 2025 ಬೆಳಪು ಫ್ರೆಂಡ್ಸ್ ವತಿಯಿಂದ ಆಯೋಜನೆಗೊಂಡಿದ್ದು ಇದರ ಉದ್ಘಾಟನೆ ಶನಿವಾರ ನಡೆಯಿತು. ಈ ಸಂದರ್ಭ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅರುಣಾಕರ ಡಿ ಶೆಟ್ಟಿ ಕಳತ್ತೂರು, ಕಾಂತನಾಧಿಕಾರಿ ಧೂಮಾವತಿ ದೈವಸ್ಥಾನ ಪೈಯ್ಯಾರು ಇದರ ಆಡಳಿತ ಮೊಕ್ತೇಸರರಾದ ಗೋಪಾಲ ನಾಯ್ಕ್ ಪೈಯಾರು, ಮಾಸ್ತಿಯಮ್ಮ ದೇವಸ್ಥಾನ ಪೈಯಾರು ಇದರ ಪ್ರಧಾನ ಅರ್ಚಕರಾದ ಮಾಧವ ನಾಯ್ಕ್, ಕಾಪು ತಾಲೂಕು ನಾಯ್ಕ್ ಸಂಘದ ಹಿರಿಯರಾದ ನಾರಾಯಣ ನಾಯ್ಕ್ ಪೈಯ್ಯಾರು, ಮುಸ್ತಾಕ್ ಸಾಹೇಬ್, ಸ್ಥಳೀಯ ಸ್ಪೋರ್ಟ್ ಕ್ಲಬ್ ಅಧ್ಯಕ್ಷರಾದ ಶಹನವಾಜ್ ಮತ್ತಿತರರು ಉಪಸ್ಥಿತರಿದ್ದರು.
ನವೆಂಬರ್ 7,8,9 : 90 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟ ಎ.ಪಿ.ಟ್ರೋಫಿ 2025
Posted On: 10 Oct 2025, 03:04 PM
ಕಾಪು : ಕಾಪು ಫ್ರೆಂಡ್ಸ್ ಕಾಪು ಇವರ ವತಿಯಿಂದ ಪ್ರಜ್ವಲ್ ಡಿ. ಶೆಟ್ಟಿ ಇವರ ನೇತೃತ್ವದಲ್ಲಿ ನವೆಂಬರ್ 7,8,9 ರಂದು ಬೆಳಪು ಪಂಚಾಯತ್ ಮೈದಾನದಲ್ಲಿ ಜರಗಲಿರುವ 90 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟದ ಪೋಸ್ಟರನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಆವರಣದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ ಬಿಡುಗಡೆಗೊಳಿಸಿದರು. ರಾಜ್ಯೇತರ ವಿಭಾಗದಲ್ಲಿ ಪ್ರಥಮ ಬಹುಮಾನ 1 ಲಕ್ಷ, ದ್ವಿತೀಯ ಬಹುಮಾನ 50 ಸಾವಿರ, ಶಿಸ್ತಿನ ತಂಡಕ್ಕೆ ರೂ.5 ಸಾವಿರ, ಪಂದ್ಯ ಶ್ರೇಷ್ಠ ಪ್ರಶಸ್ತಿ ಇರಲಿದೆ. ರಾಜ್ಯ ವಿಭಾಗದಲ್ಲಿ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ ಬಹುಮಾನ 1ಲಕ್ಷ, ಶಿಸ್ತಿನ ತಂಡಕ್ಕೆ ರೂ.5 ಸಾವಿರ ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಇರಲಿದೆ. ರಿಜಿಸ್ಟರ್ ಮಾಡುವ ತಂಡಗಳು ಮುಂಗಡವಾಗಿ ರೂ. 5 ಸಾವಿರ ನೀಡತಕ್ಕದ್ದು, ರಾಜ್ಯೇತರರಿಗೆ 12 ಸಾವಿರ, ರಾಜ್ಯದವರಿಗೆ ರೂ. 20 ಸಾವಿರ ಪ್ರವೇಶ ಶುಲ್ಕ ಇರಲಿದೆ. ಪಂದ್ಯವು ಲೀಗ್ ಮಾದರಿಯಾಗಿದ್ದು, ರಾಜ್ಯೇತರ ಪಂದ್ಯಾವಳಿಯು ಹರಾಜಿನ ಆಧಾರದ ಮೇಲೆ ಬಿಡ್ಡಿಂಗ್ ನಡೆಸಲಿದ್ದು, 10 ತಂಡಗಳನ್ನು ಒಳಗೊಂಡಿರುತ್ತದೆ. 1 ಐಕಾನ್ ಪ್ಲೇಯರ್ ಆಯ್ಕೆ ಲಭ್ಯವಿದೆ. ಅಲ್ಲಿ ಫ್ರಾಂಚೈಸ್ ಯಾವುದೇ ಆಟಗಾರನನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿದೆ (ರಾಜ್ಯ ಅಥವಾ ರಾಜ್ಯೇತರ ನಿರ್ಬಂಧವಿಲ್ಲ). ರಾಡಿ ಎಸೆತಕ್ಕೆ ಅವಕಾಶ ಇಲ್ಲ. ಪ್ರತಿ ಇನ್ನಿಂಗ್ಸ್ 6 ಓವರ್ ಗಳಾಗಿರುತ್ತದೆ. ಸಮವಸ್ತ್ರ ಕಡ್ಡಾಯ. ಅಂಪಾಯರ್ ತೀರ್ಮಾನವೇ ಅಂತಿಮ ತೀರ್ಮಾನವಾಗಿದೆ. ಪಂದ್ಯಾಕೂಟದಲ್ಲಿ ಸಮಾಜ ಸೇವಕರಿಗೆ ಸಮ್ಮಾನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ವೆಚ್ಚ, ಬಡ ಕುಟುಂಬಗಳಿಗೆ ಧನಸಹಾಯ ವಿತರಣೆ, ರಾಜ್ಯ ಮಟ್ಟದ ತಂಡದಿಂದ ನೃತ್ಯ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
