Updated News From Kaup

ದಾನಿಗಳ ನೆರವಿನಿಂದ ನವೀಕರಣಗೊಂಡ ಗುಂಡಿಬೈಲು ನಿವಾಸಿ ಸರೋಜರವರ ಮನೆ

Posted On: 03-08-2020 06:20PM

ಉಡುಪಿ :- ಬಾಂಧವ್ಯ ಬ್ಲಡ್ ಕನಾ೯ಟಕ ಮತ್ತು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇದರ ಇತಿಯಿಂದ ತುತು೯ ಸಹಾಯ ಯೋಜನೆಯ ಮೂಲಕ ನವೀಕರಣ ಗೊಂಡ ಉಡುಪಿ ಗುಂಡಿಬೈಲು ನಿವಾಸಿ ಸರೋಜ ರವರ ಬೆಳಕು ಯೋಜನೆ ಮನೆಯನ್ನು ಇಂದು ಸಂಜೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಅಭಿಯಾನದ ಸದಸ್ಯೆ ಜ್ಯೋತಿ ಸಾಮಾಂತ್ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಎಲ್ಲಾ ಸದಸ್ಯರು ಮತ್ತು ಗಣ್ಯರು ಸಾಮೂಹಿಕವಾಗಿ ಹಣತೆ ಬೆಳಗಿಸಿದರು.ಈ ಸಂದಭ೯ದಲ್ಲಿ ದಿನೇಶ್ ಬಾಂಧವ್ಯ ಯೋಜನೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸರೋಜರವರು ತನ್ನ ವಿಶೇಷ ಚೇತನ ಮಗಳೊಂದಿಗೆ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ದಾನಿಗಳ ನೆರವಿನಿಂದ ಈ ನವೀಕರಣ ಮಾಡಲಾಗಿದೆ.

ಶಿರ್ವ ಮಟ್ಟಾರು ನಿವಾಸಿ ಪುಂಡರೀಕಾಕ್ಷ (55) ಮೃತ ದೇಹ ಕೊಳೆತ ರೀತಿಯಲ್ಲಿ ಪತ್ತೆ

Posted On: 02-08-2020 09:48PM

ಶಿರ್ವ.02, ಆಗಸ್ಟ್ : ಪುಂಡರೀಕಾಕ್ಷ (55) ಎಂಬುವವರು ಕಳೆದ 35 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆ ಹಾಗೂ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬಿಪಿ, ಶುಗರ್ ಕಾಯಿಲೆ ಕೂಡ ಇತ್ತು ಎಂದು ತಿಳಿದು ಬಂದಿದೆ, ಇವರು ಮದುವೆಯಾಗದೆ ಒಬ್ಬಂಟಿಯಾಗಿ ಕಾಪು ತಾಲೂಕಿನ ಶಿರ್ವದ ಪಡುಮಠ ಮಟ್ಟಾರು ಎಂಬಲ್ಲಿ ವಾಸವಾಗಿದ್ದರು. ದಿನಾಂಕ 27/07/2020 ರಿಂದ 02/08/2020 ರ ಬೆಳಿಗ್ಗೆ 10:30 ರ ಮಧ್ಯಾವಧಿಯಲ್ಲಿ ಪುಂಡರೀಕಾಕ್ಷ (55) ಇವರು ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿದ್ದು ಮೃತ ದೇಹವು ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ಶವವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.. ಎಂದು ಬಲ್ಲ ಮೂಲಗಳು ತಿಳಿಸಿವೆ ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಭ್ರಾತೃ - ಭಗಿನಿ ಬಾಂಧವ್ಯದ ಸಂಕೇತವೇ ರಕ್ಷಾಬಂಧನ - ಕೆ ಎಲ್ ಕುಂಡಂತಾಯ

Posted On: 02-08-2020 08:23PM

ಸಹೋದರ - ಸಹೋದರಿ‌ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ 'ರಕ್ಷಾಬಂಧನ' . 'ಸಹಭವ'ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ ಆಚರಣೆಯೇ 'ರಕ್ಷಾಬಂಧನ" ; ಇದು ಭಾರತೀಯ ಸಂಸ್ಕೃತಿಯ ಸೊಗಸು. ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ "ರಾಖಿ" ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ . ಇದೇ 'ಭ್ರಾತೃ - ಭಗಿನಿ ಬಾಂಧವ್ಯ ಬಂಧನ'. "ಪರನಾರಿ ಸೋದರ" ಇದೊಂದು ಪ್ರತಿಜ್ಞೆಯಾಗಿ ಪುರಾಣಗಳಲ್ಲಿ , ದೇಶದ ಇತಿಹಾಸದಲ್ಲಿ ಕಾಣಸಿಗುವ ಒಂದು ರೋಚಕ ಸ್ವೀಕಾರ . ಇದು ಒಂದು "ಮೌಲ್ಯ"ವಾಗಿ ಆಚರಿಸಲ್ಪಟ್ಟು 'ಸಂದೇಶ'ವಾಗುವ ಶೈಲಿ ನಮ್ಮ ನೆಲದ ವ್ಯಕ್ತಿತ್ವಗಳ ಹೃದಯಶ್ರೀಮಂತಿಕೆ . ನಡೆದುಹೋದ ಸಂಗತಿ, ವರ್ತಮಾನದ ಆಚಾರ - ವಿಚಾರ ,ಭವಿಷ್ಯಕ್ಕೆ ಮುಂದುವರಿಯುವ "ಬಾಂಧವ್ಯ ಬಂಧನ‌" . ಇಂತಹ ಸಂಸ್ಕಾರಗಳು ನಮ್ಮ ಬದುಕಿನ ಕ್ರಮಕ್ಕೆ , ಮನಸ್ಸಿನ ಆಲೋಚನೆಗಳಿಗೆ ಪ್ರತ್ಯಕ್ಷ ಸಾಕ್ಷಿ . ಇಂತಹ ನೂರಾರು ಮೌಲ್ಯಗಳಲ್ಲಿ 'ರಕ್ಷಾಬಂಧನ' ಒಂದು. ದೇಶದಲ್ಲಿ ನೆರವೇರುವ "ರಾಖೀ" ಅತ್ಯಂತ ಜನಪ್ರಿಯ ನಡವಳಿಕೆ . ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ತಮ್ಮ ಸಹೋದರರಿಗೆ ಸಹೋದರಿಯರು ರಾಖೀ ಕಟ್ಟುವ ಮೂಲಕ 'ನಮ್ಮ ಮಾನ - ಪ್ರಾಣ ಉಳಿಸುವ ಹೊಣೆ ನಿಮ್ಮದು' ಎಂದು ನೆನಪಿಸುತ್ತಾರೆ . ಉಡುಗೊರೆ ಪಡೆಯುತ್ತಾರೆ . ರಾಖೀ ಕಟ್ಟುವ ಸಿಹಿ ತಿನ್ನಿಸಿ - ತಿನ್ನುವ ,ಉಡುಗೊರೆ ಪಡೆಯುವ ಈ ಭಾವನಾತ್ಮಕ ಪರ್ವದಿನವು ಮನೆಯೊಳಗೆ ಒಡಹುಟ್ಟಿದ ಸಹೋದರ - ಸಹೋದರಿಯರ ನಡುವೆ ಸಂಭ್ರಮಿಸುವುದಿಲ್ಲ ಬದಲಿಗೆ ಒಂದು ನೆರಕರೆಯನ್ನು ಒಂದು ವ್ಯಾಪ್ತಿಯನ್ನು ಅಲ್ಲ ಇಡೀ ದೇಶದಾದ್ಯಂತ ವಿಜೃಂಭಿಸುತ್ತಿದೆ . ಸಹಭವರಾಗ ಬೇಕಿಲ್ಲ , ಅಂತಹ 'ಪವಿತ್ರ ಭಾವಸ್ಪುರಣೆ' ಸಾರ್ವತ್ರಿಕವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಭವ್ಯತೆ . ‌‌‌‌ ಸಹೋದರ ಭಾವದ ವೈಶಾಲ್ಯತೆ ‌‌ ಒಡಹುಟ್ಟಿದವರೊಂದಿಗೆ ಸಮಾಜದ 'ಸ್ತ್ರೀ'ಯರೆಲ್ಲ ತನ್ನ ಸೋದರಿಯರು ಎಂಬ‌ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ "ರಾಖೀಬಂಧನ" ಇಂಬು ಕೊಡುತ್ತದೆ .ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ - ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾಬಂಧನ - ರಾಖೀಬಂಧನ ಆಚರಿಸಲ್ಪಡುತ್ತದೆ . 'ರಕ್ಷಾಬಂಧನ'ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ .ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾಜಿಸುವ ದಿನ . ಚಂದ್ರ ಮನಃಕಾರಕನಾದುದರಿಂದ ,ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯಬಹುದಲ್ಲ. ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ? , ಅದೇ ಶ್ರಾವಣದ ಕವಿ ಬೇಂದ್ರೆಯವರ "ಬಂತು ಶ್ರಾವಣ..." ಲವಲವಿಕೆ ತುಂಬಿದ ಉದ್ಗಾರ . ಇದೇ ಭಾವಗಳು ಬಿರಿಯುವ ,ಸುಗಂಧ ಬೀರುವ ಸುಸಮಯ . ರಾಖೀ ಎಷ್ಟೇ ವೈವಿಧ್ಯದ್ದಾದರೂ , ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ ? ಈ ದಾರ ಒಂದು ಕರ್ತವ್ಯಕ್ಕೆ ,ಜವಾಬ್ದಾರಿಗೆ‌ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ . ವ್ರತ , ಪೂಜೆ , ಮಹೋತ್ಸವ , ಮಹಾಯಾಗ ,ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ 'ಕಂಕಣಬಂಧ'ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ದೇಶದಲ್ಲಿ ರೂಢಿಯಲ್ಲಿದೆ .ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ 'ನಾಂದೀ' . ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ . ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ಉದ್ದೇಶ . ಜ್ಞಾನ ಪೂರಕ ಉಪಾಕರ್ಮ 'ರಕ್ಷಾಬಂಧನ' ಹಾಗೂ 'ಉಪಾಕರ್ಮ' ವಿಧಿಗಳಲ್ಲಿ ಒಂದು ಭಾವ ಸಂಬಂಧಿಯಾದರೆ ಮತ್ತೊಂದು ಜ್ಞಾನ ಶುದ್ಧಿಯನ್ನು ಎಚ್ಚರಿಸುವ ವಿಶಿಷ್ಟ ಆಚರಣೆಗಳು . ಸಿದ್ಧತೆ ,ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವುದು ಮುಂತಾದ ಅರ್ಥ ನಿಷ್ಪತ್ತಿಯ ಉಪಾಕರ್ಮವು ವಾರ್ಷಿಕ ಧಾರ್ಮಿಕ ವಿಧಿಯಾಗಿ ,ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ವರ್ಗಕ್ಕೆ ವಿಶಿಷ್ಟ ಆಚರಣೆ . ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ . ಋಗ್ವೇದ ,ಯಜುರ್ವೇದ ,ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಲ್ಲಿ ಉಪಾಕರ್ಮ ಆಚರಿಸಲ್ಪಡುತ್ತದೆ .ಆದರೆ ಉಪಾಕರ್ಮದ ಉದ್ದೇಶ ಹಾಗೂ ನಿರ್ವಹಣೆಯು ಬಹುತೇಕ ಸಮಾನವಾಗಿಯೇ ಇದೆ . ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಟು ಗುರುಕುಲಗಳಲ್ಲಿ ಮಾಘ ಮಾಸದಿಂದ ಆರುತಿಂಗಳು ವ್ಯಾಕರಣ , ಜ್ಯೋತಿಷ್ಯ ಮುಂತಾದುವುಗಳ ಅಧ್ಯಯನದಲ್ಲಿ ನಿರತನಿರುತ್ತಾನೆ . ಶ್ರಾವಣದಿಂದ ಮುಂದಿನ ಆರುತಿಂಗಳು ವೇದಾಧ್ಯಯನಕ್ಕೆ ಮೀಸಲಾಗಿರುತ್ತದೆ .ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ 'ವೇದಾಧ್ಯಯನದ ಅಧಿಕಾರ ಸಿದ್ಧಿ'ಗಾಗಿ ಉಪಾಕರ್ಮ ವಿಧಿ ನೆರವೇರುತ್ತದೆ . ಮತ್ತೊಂದು ತಿಳಿವಳಿಕೆಯಂತೆ ಕೃಷಿ ಸಂಬಂಧಿಯಾದ ಕೆಲಸಕಾರ್ಯಗಳಿಗಾಗಿ‌ ವೇದ ಅಧ್ಯಯನ - ಅಧ್ಯಾಪನ ಸ್ಥಗಿತಗೊಳ್ಳುತ್ತದೆ , ಕೃಷಿಕಾರ್ಯ ಮುಗಿದ ಬಳಿಕ ವೇದಾಧ್ಯಯನ ಮುಂದುವರಿಸಲು ಅಧಿಕಾರ ಸಿದ್ಧಿಗಾಗಿ ಉಪಾಕರ್ಮ . ಬಹುಶಃ ಋಷಿಪರಂಪರೆ - ಗುರುಕುಲ ಪದ್ಧತಿಯಿದ್ದ ಕಾಲದಲ್ಲಿ ಇಂತಹ ಕ್ರಮ ಇದ್ದಿರಬಹುದಾದುದನ್ನು ಒಪ್ಪಬಹುದು. ಪುಣ್ಯಾಹ ,ಸಪ್ತ ಋಷಿಗಳ ಪೂಜೆ , ಉಪಾಕರ್ಮ ಹೋಮವನ್ನು 'ದಧಿ' ಮತ್ತು 'ಸತ್ತು'(ಅರಳು)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ . ಪ್ರಧಾನ ಹೋಮದ ಬಳಿಕ ಹೋಮದ್ರವ್ಯದ ಶೇಷ ಭಾಗವಾದ 'ದಧಿ - ಸತ್ತು' ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ . ಬಳಿಕ ಬ್ರಹ್ಮಯಜ್ಞ ,ದೇವ, ಋಷಿ ,ಆಚಾರ್ಯ‌, ಪಿತೃ ತರ್ಪಣ(ಅಧಿಕಾರವುಳ್ಳವರು ಮಾತ್ರ)ಕೊಡುವುದು . ಹೀಗೆ ಉತ್ಸರ್ಜನೆಯಿಂದ ಮರಳಿ ವೇದಾಧ್ಯಯನ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ , ಮಾನಸಿಕ , ದೈಹಿಕ ಶುದ್ಧಿಗಾಗಿಯೂ ಈ ಕ್ರಿಯೆ ನಡೆಯುತ್ತದೆ ( ಋಗ್ವೇದ ಕ್ರಮ ) . ವೇದ ಶಾಖೆಯನ್ನು ಆಧರಿಸಿ ಉಪಾಕರ್ಮ ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಸಾಮಾನ್ಯವಾದುದು .ಪಾಠಾಂತರಗಳು ಬೇಕಾದಷ್ಟು ಇವೆ . ಆಕ್ಷೇಪ ಮತ್ತು ವಾದಕ್ಕೆ ಇದಕ್ಕಿಂತ ಪ್ರಶಸ್ತವಾದ ಕ್ಷೇತ್ರ ಬೇರೆ ಇಲ್ಲ . ಪುರೋಹಿತ ಪುರೋಹಿತರಲ್ಲಿ ಅನುಸಂಧಾನ ವ್ಯತ್ಯಾಸಗಳನ್ನು ಗಮನಿಸಲಾಗಿದೆ . ಋಷಿ ಪೂಜೆ ಪ್ರಧಾನ .ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು . ಋಷಿದ್ರಷ್ಟವಾದ ಮಂತ್ರಗಳ ಅಧ್ಯಯನ - ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಪ್ರಾಪ್ತಿಗಾಗಿ ಋಷಿಪೂಜೆ . ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ.ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ. ಈ ವಿಧಿಯನ್ನು ಮತ್ತು ಯಜ್ಞೋಪವೀತವನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ , ಎಳೆಗಳು , ಇವುಗಳಿಗಿರುವ ಶಾಸ್ತ್ರಾಧಾರ ಮತ್ತು ಮಂತ್ರಗಳು , ಕರ್ಮಾಂಗಗಳು ಭವ್ಯ ಅಷ್ಟೇ ದಿವ್ಯ . ಉಪಾಕರ್ಮವು ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ .ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ , ವಿಶ್ವಕ್ಕೆ ಕೊಡುಗೆಯಾದರೆ ಉಪಾಕರ್ಮ ಸಂಕುಚಿತವಾಗದೆ ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದು ಮತ್ತಷ್ಟು ಗೌರವಾರ್ಹವಾದೀತು . ಬರಹ : ಕೆ.ಎಲ್ .ಕುಂಡಂತಾಯ

ಹೋಟೆಲ್ ಉದ್ಯಮಿ ಕಾಪು ಮಲ್ಲಾರ್ ಡಿ.ಕೆ ಪೂಜಾರಿ ನಿಧನ

Posted On: 01-08-2020 04:36PM

ಮುಂಬಯಿ: ಹಿರಿಯ ಸಮಾಜ ಸೇವಕ ,ಹೋಟೇಲು ಉದ್ಯಮಿ ಡಿ. ಕೆ. ಪೂಜಾರಿಯವರು (78) ಆ.1ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ಹಾಗೂ ಸಾರ್ಥಕ ಜೀವನವನ್ನು ನಡೆಸಿರುವ ಡಿ.ಕೆ. ಪೂಜಾರಿಯವರು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಘಾಟ್ಕೋಪರ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾಗಿ , ಅಸಲ್ಪಾ ಇಲ್ಲಿನ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಹಾಗೂ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷರಾಗಿ, ಹುಟ್ಟೂರಿನ ಕುದಿ ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುವರು. ಅಲ್ಲದೆ ಇವೆಲ್ಲದರ ಅಭಿವೃದ್ಧಿಗೆ ಶ್ರಮಿಸಿ ಅಮೂಲ್ಯ ಕೊಡುಗೆಯನ್ನು ನೀಡಿದವರಾಗಿರುವರು. ಬಿಲ್ಲವರ ಅಸೋಸಿಯೇಶನ್ ಘಾಟ್ಕೋಪರ್ ಸ್ಥಳೀಯ ಕಚೇರಿಗೆ ಜಾಗವನ್ನು ಕೊಡಾ ಡಿ .ಕೆ .ಪೂಜಾರಿಯವರು ಒದಗಿಸಿಕೊಟ್ಟಿದ್ದಾರೆ. ಮುಲುಂಡ್ ಪಶ್ಚಿಮದ ವೈಶಾಲಿ ನಗರ, ಕಲ್ಪನಾ ನಗರಿ ದೈವತ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಡಿ‌.ಕೆ. ಪೂಜಾರಿಯವರು ಹಿರಿಯ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದು ಘಾಟ್ಕೋಪರ್ ಅಸಲ್ಪೆಯಲ್ಲಿ ಮಲ್ಲಿಕಾ ಹೋಟೆಲನ್ನು ಹೊಂದಿದ್ದರು. ಮೂಲತಃ ಕಾಪು ಮಲ್ಲಾರ್ ಸಿಂಧು ನಿವಾಸದವರಾಗಿದ್ದ ಡಿ. ಕೆ .ಪೂಜಾರಿಯವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.

ಹೆಜಮಾಡಿಯಲ್ಲಿ ಸೌಹಾರ್ದತೆಯ ಸಂಕೇತವಾಗಿ ಬಕ್ರೀದ್ ಆಚರಣೆ

Posted On: 01-08-2020 02:41PM

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ‌ನಿನ್ನೆ ಬಕ್ರೀದ್ ಹಬ್ಬ ವನ್ನು ರೋಟರಿ ಸದಸ್ಯರಾದ ಸ್ಯಯದ್ ಹೆಜಮಾಡಿಯವರ ಮನೆಯಲ್ಲಿ ಆಚರಿಸಲಾಯಿತು. ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ ಎಂದು ತಿಳಿಸಿದರು. ನಂತರ ಇಂತಹ ಕಾರ್ಯಕ್ರಮ ನಡೆಸುವುದು ಸೌಹಾರ್ದತೆಯ ಸಂಕೇತ ಎಂದು ಸ್ಯಯದ್ ಹೆಜಮಾಡಿ ಯವರು ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಈ ಬಂದವರನ್ನು ಸ್ವಾಗತಿಸಿ ಅಧ್ಯಕ್ಷತೆಯ ಮಾತನ್ನು ಮಾತನಾಡಿದರು, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿದರು, ಸುಧಾಕರ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ 'ರೈತ ಬಂಧು' ನೇಜಿ ನೆಡುವ ಕಾರ್ಯಕ್ರಮ

Posted On: 01-08-2020 02:27PM

ಪಡು‌ಬಿದ್ರಿ ರೋಟರಿ ಕ್ಲಬ್ ವತಿಯಿಂದ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ " ರೃೆತ ಬಂಧು" ನೇಜಿ ನೇಡುವ ಕಾರ್ಯಕ್ರಮಕ್ಕೆ ಉಡುಪಿ ಜಿ.ಪ. ಸದಸ್ಯ ಶಶಿಕಾಂತ್ ಪಡುಬಿದ್ರಿ ‌ಚಾಲನೆ‌ ನೀಡಿ ಮಾತನಾಡಿದರು. ಕೃಷಿ ಅವನತಿಯತ್ತ ‌ಸಾಗುತ್ತಿರುವ‌ ಈ ಸಂದರ್ಭದಲ್ಲಿ ಯುವ ಜನರಿಗೆ ಕೃಷಿಯತ್ತ ಒಲವು ಮೂಡಿಸುವ‌ಂತಹ‌ ಇಂತಹ‌ ಕಾರ್ಯಕ್ರಮವು ಬಹಳ‌ ಅತ್ಯಗತ್ಯವಾಗಿದೆ. ಸಾವಯವ‌ ಕೃಷಿ ಪದ್ದತಿಯನ್ನು ಬೆಳಸೋಣ, ದೇಶದ‌ ಅಭಿವೃದ್ಧಿ ಯಲ್ಲಿ ಕ್ಯೆ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ನಿಕಟ ಪೂರ್ವ‌ ವಲಯ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ , ಪೂರ್ವ ‌ಅಧ್ಯಕ್ಷರಾದ‌ ಮಾಧವ ಸುವರ್ಣ, ಪಿ. ಕೃಷ್ಣ ‌ಬಂಗೇರ, ರಮೀಜ್ ಹುಸೇನ್ , ಸದಸ್ಯರಾದ ರಮೇಶ್ ಯು, ಬಿ.ಯಸ್.ಅಚಾರ್ಯ , ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರ್ಹ, ಮಮತಾ ಸಾಲ್ಯಾನ್, ಪುಷ್ಪವತಿ ಅಚಾರ್ಯ ಉಪಸ್ಥಿತರಿದ್ದರು ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.

ಆತ್ಮನಿಭ೯ರಕ್ಕೆ ವಿನೂತನ ಕೊಡುಗೆ ಫುಲ್ ಬಾಡಿ ಸ್ಯಾನಿಟೈಜರ್ - ರಾಧಾಕೃಷ್ಣ ಶೆಟ್ಟಿ

Posted On: 31-07-2020 09:47PM

ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ವಿಶ್ವವನ್ನೇ ಅಲುಗಾಡಿಸಿ ಬಿಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ದೇಶವು ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಧಾನಿಯವರು ಹೇಳಿದಂತೆ ಆತ್ಮ ನಿಭ೯ರ ದೇಶವಾಗ ಬೇಕಾದರೆ ಭಾರತೀಯ ಉತ್ಪನಗಳಿಗೆ ಇಲ್ಲಿ ಮಾರುಕಟ್ಟೆ ಸೃಷ್ಠಿಗೊಳಿಸಬೇಕು ಭಾರತೀಯ ಉತ್ಪನ್ನಗಳು ರಫ್ತುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಡುಪಿಯ ಸಮಾಜ ಸೇವಕರೊಬ್ಬರು ತನ್ನ ವಿನೂತನ ಆನ್ವೇಷಣೆಯ ಮೂಲಕ ಸುದ್ದಿಯಲ್ಲಿದ್ದಾರೆ. ಉಡುಪಿ ದೊಡ್ದಣಗುಡ್ಡೆಯ ರಾಧಾಕೃಷ್ಣ ಶೆಟ್ಟಿ ಪಿವಿಸಿ ಪೈಪ್ ನಿಂದ ಅತಿ ಕಡಿಮೆ ವೆಚ್ಚದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರದ ಆನ್ವೇಷಣೆ ಮಾಡಿದ್ದಾರೆ. ಎರಡು ಬಾರಿ ವಿಫಲ ಯತ್ನದ ಹೊರತಾಗಿ ಎರಡು ತಿಂಗಳ ಶ್ರಮದಿಂದ ರೂಪಿಸಿದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರಕ್ಕೆ 40 ರಿಂದ 45 ಸಾವಿರ ವೆಚ್ಚವಾಗಿದೆ. ಇದೇ ಮಾದರಿಯ ಬೇರೆ ಯಂತ್ರಗಳಿಗೆ ಸುಮಾರು ಒಂದು ವರೆ ಲಕ್ಷ ರೂ ದರವಿದೆ.ಇವರು ತಯಾರಿಸಿದ ಪಿವಿಸಿ ಪೈಪ್ ಸೆನ್ಸಾರ್ ಸಕ್ಯೂ೯ಟ್ , ಟೈಮರ್ ರಿಲೇ ಎಸ್.ಎಂ.ಪಿ.ಎಸ್ ಅಳವಡಿಸಿದ ಈ ಯಂತ್ರ ಕರೆಂಟ್ ಅಥವಾ ಜನರೇಟರ್ ಮೂಲಕ ಕಾಯ೯ ನಿವ೯ಹಿಸುತ್ತದೆ. ತನ್ನ ಗೆಳೆಯರೊಬ್ಬರು ಕಳುಹಿಸಿದ ಸ್ಟೇ ಯಂತ್ರದ ಭಾವಚಿತ್ರ ನೋಡಿದ ತಕ್ಷಣ ತಾನು ಯಾಕೆ ಈ ಮಾದರಿಯ ಯಂತ್ರವನ್ನು ಸ್ಥಳೀಯ ವಸ್ತುಗಳನ್ನು ಬಳಸಿ ತಯಾರಿಸಬಾರದು ಎಂಬ ಕಲ್ಪನೆ ನನ್ನಲ್ಲಿ ಬಂತು ಸೆನ್ಸಾರ್ ಮೋಟರ್ ಯಂತ್ರ ಕೈ ಕೊಟ್ಟರೆ ಮರಳಿ ಯತ್ನದ ಬಳಿಕ ಈ ಯಂತ್ರ ತಯಾರಿಸಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ. ಕೇವಲ 10 ಸೆಕೆಂಡ್ ನಲ್ಲಿ ಪುಲ್ ಬಾಡಿ ಸ್ವಾನಿ ಟೈಸ್ ಮಾಡಲು ಇದರಿಂದ ಸಾಧ್ಯ ಕೇವಲ 10 ಎಂ.ಎಲ್ ಸ್ಯಾನಿಟೈಸರ್ ಸಾಕು .8 ಗಂಟೆ ನಿರಂತರವಾಗಿ ಈ ಯಂತ್ರವನ್ನು ಚಾಲು ಇಟ್ಟರೂ ಒಂದು ಯೂನಿಟ್ ವಿದ್ಯುತ್ ಸಾಕಾಗುತ್ತದೆ. ಪುಲ್ ಬಾಡಿ ಸ್ಯಾನಿಟೈಸರ್ ಮಾಡುವ ವ್ಯಕ್ತಿ ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಬೇಕು ಚಮ೯ ವ್ಯಾಧಿ ಇದ್ದವರು ಇದರಿಂದ ದೂರ ಉಳಿದರೆ ಉತ್ತಮ ಎಂದು ಅವರು ಹೇಳುತ್ತಾರೆ. ಈ ಮಾದರಿಯ ಯಂತ್ರವನ್ನು.ಸಕಾ೯ರಿ ಕಚೇರಿ ಸಂಕಿಣ೯, ಕೈಗಾರಿಕೆ, ಮಾಲ್,ಸಾವ೯ಜನಿಕ ಸ್ಥಳದಲ್ಲಿ ಉಪಯೋಗ ಮಾಡಬಹುದಾಗಿದೆ. ತಾನು ಬೇರೆ ಬೇರೆ ಉದ್ಯಮಗಳನ್ನು ಸ್ಥಾಪನೆ ಮಾಡಿ ಅದನ್ನು ಬೇರೆ ಯುವಕರಿಗೆ ನಡೆಸಲು ನೀಡಿದ್ದಾರೆ. ಅತೀ ಕಡಿಮೆ ದರದಲ್ಲಿ ನಿಮಿ೯ಸಿದ ಈ ಯಂತ್ರಕ್ಕೆ ಒಳ್ಳೆಯ ಬೇಡಿಕೆಯಿದೆ. ಭಾರತ ದೇಶವು ಆತ್ಮ ನಿಭ೯ರವಾಗಲು ಎಲ್ಲರೂ ಕೊಡುಗೆ ನೀಡಬೇಕು ಎಂದು ಅವರು ಹೇಳುತ್ತಾರೆ. ಯುವಜನತೆ ಈ ರೀತಿಯ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಳ್ಳಲು ಕರೆ ನೀಡುವ ಅವರು, ಕರೋನಾ ಮುಕ್ತ ಸಮಾಜ ನಿಮಾ೯ಣ ಕೇವಲ ಸಕಾ೯ರ ದ ಕೆಲಸವಲ್ಲ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಅರಿತು ಇರಬೇಕು ಎನ್ನುವ ರಾಧಾಕೃಷ್ಣ ಶೆಟ್ಟಿ, ದೊಡ್ಡ ಕೊಡುಗೆ ನೀಡಿದರೂ ಸರಳವಾದ ಮಾತುಗಳು ಎಲ್ಲರಿಗೂ ಮಾದರಿಯಾಗಿದೆ. ರಾಘವೇಂದ್ರ ಪ್ರಭು, ಕವಾ೯ಲು

ಸಮೃದ್ಧವಾದ ಅಷ್ಟೈಶ್ವರ್ಯ ಪಡೆಯಲು ವರಮಹಾಲಕ್ಷ್ಮಿ ವೃತ

Posted On: 31-07-2020 08:29AM

"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" . ಇದು 'ಲಕ್ಷ್ಮೀ' ಶಬ್ದದ ವ್ಯುತ್ಪತ್ತಿ . ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ 'ಲಕ್ಷ್ಮೀ'. ಶ್ರೀ ಎಂಬುದು 'ಲಕ್ಷ್ಮೀ'ಯ ನಾಮಾಂತರ . ಪ್ರಭೆ ,ಶೋಭೆ , ಕೀರ್ತಿ , ಕಾಂತಿ , ವಿಭೂತಿ , ಮತಿ , ವರ್ಚಸ್ , ತೇಜಸ್ , ಸೌಂದರ್ಯ , ವೃದ್ಧಿ , ಸಿದ್ಧಿ , ಸೌಭಾಗ್ಯ ,ಕಮಲ , ಬಿಲ್ವವೃಕ್ಷ ಮುಂತಾದುವು 'ಶ್ರೀ' ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ 'ಐಶ್ವರ್ಯ'ವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ .ಈಶ್ಚರಸ್ಯ ಭಾವಃ ಐಶ್ವರ್ಯಂ . ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ 'ಶ್ರೀ'. 'ಲಕ್ಷ್ಮೀ' ಸಮುದ್ರ ಮಥನದಲ್ಲಿ ಹುಟ್ಟಿದಳು . ನಾರಾಯಣನನ್ನು ವರಿಸಿ ತಾನು 'ಮಹಾಲಕ್ಷ್ಮೀ'ಯಾದಳು . ನಾರಾಯಣನು 'ಲಕ್ಷ್ಮೀನಾರಾಯಣ'ನಾದ ,ಶ್ರೀಮನ್ನಾರಾಯಣನಾದ . ಸ್ಥಿತಿಕರ್ತನಾದ - ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ , ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ 'ಲಕ್ಷ್ಮೀ' ಬಹುಮಾನ್ಯಳಾದಳು . ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ . ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು ,ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ .ಆದಿನದಂದು ಲಕ್ಷ್ಮೀಯನ್ನು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ "ವರಮಹಾಲಕ್ಷ್ಮೀ" ಯನ್ನಾಗಿ ಪರಿಕಲ್ಪಸಿಕೊಂಡು ಆರಾಧಿಸುವುದು .ಕಟ್ಟು ,ಕಟ್ಟಳೆ , ನಿಯಮ , ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ , ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : ವರಮಹಾಲಕ್ಷ್ಮೀವ್ರತ'. ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು . ಪರಶುರಾಮನಾದಾಗ ಈಕೆ ಭೂದೇವಿ . ರಾಮಾವತಾರದಲ್ಲಿ ಸೀತಾದೇವಿ . ಕೃಷ್ಣಾವತಾರದಲ್ಲಿ ರುಕ್ಮಿಣಿ .ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ . ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ .ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ 'ತಿರುಪತಿ'- ಶ್ರೀಪತಿ ,ಭೂವೈಕುಂಠ . ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ 'ಶ್ರೀಸೂಕ್ತದ' ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ , ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು ,ರೂಪಗಳನ್ನು ವರ್ಣಿಸುತ್ತದೆ . ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು. ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು .ಕೆಳಗಿನ ಕೈಗಳಿಂದ 'ವರದ' ಮತ್ತು 'ಅಭಯ' ಮುದ್ರೆಗಳನ್ನು ತೋರಿಸುತ್ತಿರುವವಳು . ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು . ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು , ಅದೇ ತಾನೇ ಬಹುಮಾನ್ಯತೆ. ದೇವರುಗಳೆಷ್ಟು ? ಭಾರತೀಯರಿಗೆ ದೇವರುಗಳು ಎಷ್ಟು ? ನಂಬಿಕೆ ,ಉಪಾಸನೆ ಗೊಂದಲವಿಲ್ಲವೇ ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು , ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು . ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ . ಒಂದೊಂದು ಉದ್ದೇಶಕ್ಕೆ , ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು . ಮೊನ್ನೆ ನಾಗನನ್ನು ಪೂಜಿಸಿದೆವು , ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ , ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು , ನವದುರ್ಗೆಯರನ್ನು , ಬಲೀಂದ್ರನನ್ನು , ಶಿವನನ್ನು ಪೂಜಿಸುತ್ತೇವೆ . ವರ್ಷಪೂರ್ತಿ ಪೂಜೆ , ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ . ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು , ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ . ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು . ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ .ಆದರೆ ಗೊಂದಲವಿಲ್ಲ , ಮನಃಪೂರ್ವಕವಾದ ಒಪ್ಪಿಗೆಗಳಿವೆ . ಇದು ಈ ದೇಶದ , ತುಳುನಾಡಿನ , ಮಣ್ಣಿನ ಆಸ್ತಿಕತೆ .ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ . ಬಹುತೇಕ ಆರಾಧನೆ , ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ . ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ ,ಶೋಭೆ , ಕೀರ್ತಿ , ಕಾಂತಿ , ವಿಭೂತಿ , ಮತಿ , ವರ್ಚಸ್ , ತೇಜಸ್ , ಸೌಂದರ್ಯ , ವೃದ್ಧಿ , ಸಿದ್ಧಿ , ಸೌಭಾಗ್ಯಗಳನ್ನೇ ತಾನೆ ? ಇದೇ "ಲಕ್ಷ್ಮೀ ಯ ಆರಾಧನೆ" . ಕೆ ಎಲ್ ಕುಂಡಂತಾಯ

ರೋಟರಿ ಕ್ಲಬ್ ಪಡುಬಿದ್ರಿ ಘಟಕದಿಂದ ವನಮಹೋತ್ಸವ ಕಾರ್ಯಕ್ರಮ

Posted On: 31-07-2020 08:00AM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇನ್ನರ್ ವಿಲ್ ಕ್ಲಬ್ ವತಿಯಿಂದ ಪಣಿಯೂರು ಪೇಜತಕಟ್ಟೆಯ ರೋಟರಿ ಸದಸ್ಯರ ಮನೆಯ ತೋಟದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಸಂದರ್ಭದಲ್ಲಿ ರೋಟರಿಯ ಅಧ್ಯಕ್ಷರಾದ ಕೇಶವ ಸಿ ಸಾಲ್ಯಾನ್ ನಿಕಟಪೂರ್ವ ಸಹಾಯಕ ಗವರ್ನರ್ ರೋ. ಗಣೇಶ್ ಆಚಾರ್ಯ ಉಚ್ಚಿಲ, ಕಾರ್ಯದರ್ಶಿ ಮೊಹಮ್ಮದ್ ನಿಯಾಜ್, ಇನ್ನರ್ ವಿಲ್ ಅಧ್ಯಕ್ಷೆ ಆಶಾ ಸುಕುಮಾರ್, ಕಾರ್ಯದರ್ಶಿ ನೇಹಾ, ಬಿ. ಎಸ್. ಆಚಾರ್ಯ, ಗಣೇಶ್ ಆಚಾರ್ಯ ಎರ್ಮಾಳ್, ಮತ್ತಿತರರು ಉಪಸ್ಥಿತರಿದ್ದರು, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

ವಿಶ್ವಹಿಂದು ಪರಿಷದ್ ಭಜರಂಗದಳ ಇನ್ನಂಜೆ 'ವಿಷ್ಣು ವಲ್ಲಭ' ಘಟಕ ಉದ್ಘಾಟನೆ

Posted On: 30-07-2020 10:51PM

ವಿಶ್ವಹಿಂದು ಪರಿಷದ್ ಭಜರಂಗದಳ ಶ್ರೀ ವಿಷ್ಣು ವಲ್ಲಭ ಘಟಕ ಇನ್ನಂಜೆ ಇದರ ಉದ್ಘಾಟನಾ ಕಾರ್ಯಕ್ರಮ ಇಂದು ಜರುಗಿತು. ನೂತನ ವಿಶ್ವ ಹಿಂದೂ ಪರಿಷತ್ ಶ್ರೀ ವಿಷ್ಣು ವಲ್ಲಭ ಘಟಕದ ಅಧ್ಯಕ್ಷರಾಗಿ ಶ್ರೀ ಕೆಪಿ ಶ್ರೀನಿವಾಸ್ ತಂತ್ರಿಗಳು ಹಾಗೂ ಭಜರಂಗದಳದ ಸಂಚಾಲಕರಾಗಿ ಶ್ರೀ ರಾಜೇಶ್ ಕುಲಾಲ್ ಇವರಿಗೆ ಜವಾಬ್ದಾರಿಯನ್ನು ನೀಡಲಾಯಿತು. ಜೊತೆಯಲ್ಲಿ ಘಟಕಕ್ಕೆ ನೂತನ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯು ನಡೆಯಿತು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ಶ್ರೀ ರಾಜೇಶ್ ಕೋಟ್ಯಾನ್, ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಶಿರ್ವ, ಭಜರಂಗದಳ ಕಾಪು ವಲಯ ಪ್ರಮುಖ್ ಶ್ರೀ ಸುಧೀರ್ ಕಾಪು, ಹಿಂದು ಮುಖಂಡರಾದ ಶ್ರೀ ದಿನೇಶ್ ಪಾಂಗಾಳ ಹಿರಿಯರಾದ ರವಿವರ್ಮ ಶೆಟ್ಟಿ ಇನ್ನಂಜೆ, ಶ್ರೀ ನವೀನ್ ಅಮೀನ್ ಶಂಕರಪುರ, ಆನಂದ್ ಇನ್ನಂಜೆ, ಮಾಲಿನಿ ಶೆಟ್ಟಿ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ,ಮಧುಸೂದನ್ ಆಚಾರ್ಯ, ಶ್ರೀ ಪ್ರವೀಣ್ ಶೆಟ್ಟಿ , ವಿಎಚ್ ಪಿ ಪಾಂಗಾಳ ಘಟಕದ ಅಧ್ಯಕ್ಷರಾದ ಗಿರೀಶ್ ಕುಮಾರ್, ಮತ್ತು ಶ್ರೀ ವಿಷ್ಣು ವಲ್ಲಭ ಇನ್ನಂಜೆ ಘಟಕದ ಸದಸ್ಯರು ಉಪಸ್ಥಿತರಿದ್ದರು.