Updated News From Kaup
ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕ: ಉಷಾ ಎಸ್.
Posted On: 22 Dec 2025, 10:03 AM
ಶಿರ್ವ : ಆರ್.ಎಸ್. ಬೆಳ್ಳೆಯವರು ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಮಾಜಕ್ಕಾಗಿ ಮೀಸಲಿರಿಸಿದ್ದರು. ನಿಸ್ವಾರ್ಥ, ದ್ವೇಷ ರಹಿತ ಹಾಗೂ ಸೌಹಾರ್ದದ ಮನೋಭಾವದ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮೀಯರೆನಿಸಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಅವಿರತ ಶ್ರಮಿಸಿದ ಅವರ ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿದೆ ಎಂದು ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಉಷಾ ಎಸ್. ಅವರು ಹೇಳಿದರು.
ಅವರು ರವಿವಾರ ಪಾಂಬೂರು ವಿದ್ಯಾಜ್ಯೋತಿಯಲ್ಲಿ ಜರಗಿದ ಸಮಾಜಸೇವಕ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್. ಬೆಳ್ಳೆ ಸಂಸ್ಮರಣಾ ವಾರ್ಷಿಕ ಉಪನ್ಯಾಸ ಹಾಗೂ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಂಬೂರು ಹೋಲಿಕ್ರಾಸ್ ಚರ್ಚಿನ ಪ್ರಧಾನ ಧರ್ಮಗುರು ರೆ|ಡಾ| ರೋಶನ್ ಡಿಸೋಜಾ ಅವರು ರಿಚಾರ್ಡ್ ದಾಂತಿ ಪಾಂಬೂರು ಅವರು ಬರೆದ 'ಧೀಶಕ್ತಿ: ಶಿಕ್ಷಣ, ಸಾಮಾಜಿಕ ಕ್ಷೇತ್ರದ ಮೇರುವ್ಯಕ್ತಿ ಆರ್.ಎಸ್. ಬೆಳ್ಳೆ' ಕೃತಿಯನ್ನು ಬಿಡುಗಡೆಗೊಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಪಡುಬೆಳ್ಳೆ, ನಿವೃತ್ತ ಶಿಕ್ಷಕ ರಿಚಾರ್ಡ್ ಸಲ್ಡಾನ್ಹಾ ಅವರಿಗೆ ಆರ್.ಎಸ್. ಬೆಳ್ಳೆ ಸ್ಮಾರಕ ಪುರಸ್ಕಾರವನ್ನು ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚ್ನ ಮಾಜಿ ಉಪಾಧ್ಯಕ್ಷ, ಬೆಳ್ಳೆ ಸೊಸೈಟಿ ನಿರ್ದೇಶಕರಾದ ವಿನ್ಸೆಂಟ್ ಫೆರ್ನಾಂಡಿಸ್ ಅವರು ಪ್ರದಾನ ಮಾಡಿದರು.
ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಸೊಸೈಟಿ ನಿರ್ದೇಶಕ ಬೆಳ್ಳೆ ಪಠೇಲ್ಮನೆ ದಯಾನಂದ ಶೆಟ್ಟಿ, ದ.ಸಂ.ಸ. ಅಂಬೇಡ್ಕರ್ ವಾದ ಕಾಪು ತಾಲೂಕು ಶಾಖೆಯ ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ, ಸಿ.ಎ. ಸ್ಟೀವನ್ ಮೆಂಡೋನ್ಸಾ, ಗಣೇಶ್ ತಂತ್ರಿ, ಆಲ್ಫೋನ್ಸ್ ಕೆ. ಆಳ್ವಾ, ಸ್ಯಾಮ್ಸನ್ ನೊರೋನ್ಹಾ, ಮುರಳೀಧರ ಸಾಮಗ ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಕೃತಿ ಪರಿಚಯ ಮಾಡಿದರು. ಸಂಘಟಕ ರಿಚಾರ್ಡ್ ದಾಂತಿ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ ವಂದಿಸಿದರು.
ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ : 33ನೇ ಶಾಲಾ ವಾರ್ಷಿಕೋತ್ಸವ ವಿದ್ಯೋತ್ಸವ ಸಂಪನ್ನ
Posted On: 22 Dec 2025, 09:56 AM
ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ : ಚಲನಚಿತ್ರ ನಟ ಅರವಿಂದ ಬೋಳಾರ್
ಕಾಪು : ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ. ಸಣ್ಣವರಿರುವಾಗಲೇ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದಲ್ಲಿ ದೊಡ್ಡವರಾದಾಗ ಸಾಧಕರಾಗಲು ಸಾಧ್ಯ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು.
ಅವರು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ ಕಾಪು ಇದರ 33ನೇ ಶಾಲಾ ವಾರ್ಷಿಕೋತ್ಸವ ವಿದ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಶಿಕ್ಷಕರ ಬೈಗುಳವು ಮುಂದೆ ಪ್ರತಿಭಾ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದುಕೊಳ್ಳಲು ಪ್ರೇರೆಪಿಸಿದ ಕ್ಷಣವನ್ನು ನೆನಪಿಸಿಕೊಂಡರು.
ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ
ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದೊಂದಿಗೆ ಕಲಿಕೆ ಸಾಗಬೇಕು. ಮಕ್ಕಳನ್ನು ಅವಮಾನ ಮಾಡದೆ, ಅವರ ಕಲಿಕೆಗೆ ಪ್ರೋತ್ಸಾಹದಾತರಾಗಬೇಕು.
ಕೆ.ಪಿ ಆಚಾರ್ಯರ ದಿಟ್ಟತನದಿಂದ ಮೂಡಿದ ಸಂಸ್ಥೆ ವಿದ್ಯಾನಿಕೇತನವಾಗಿದೆ.
ವಿದ್ಯಾರತ್ನ ಪ್ರಶಸ್ತಿ/ ಬಹುಮಾನ ವಿತರಣೆ : ಕಾಪುವಿನ ಚಿತ್ರಕಲಾ ಪ್ರತಿಭೆ ಕುಮಾರಿ ರಕ್ಷಾ ಆರ್ ಪೂಜಾರಿಯವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಣಿಪಾಲ ಜ್ಞಾನಸುಧ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಮುಳಿಹಿತ್ಲು ಇದರ ಆಡಳಿತ ಮೊಕ್ತೇಸರ ಉಮಾನಾಥ ಕಾಪು, ಪತ್ರಕರ್ತರಾದ ರಾಕೇಶ್ ಕುಂಜೂರು, ಹಳೆ ವಿದ್ಯಾರ್ಥಿ ಸಕ್ಷತ್ ಶೆಟ್ಟಿ, ಚಿತ್ರಕಲಾವಿದೆ
ರಕ್ಷಾ ಆರ್ ಪೂಜಾರಿ, ಸಂಚಾಲಕರಾದ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಆಚಾರ್ಯ, ಪ್ರಾಂಶುಪಾಲರಾದ ಸಾಕ್ಷತ್ ಯುಕೆ, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಚಾಲಕರಾದ ಶೋಭಾ, ಆಶಿತಾ ಉಪಸ್ಥಿತರಿದ್ದರು.
ಆಶಿತಾ ಸ್ವಾಗತಿಸಿದರು. ಪ್ರಾಂಶುಪಾಲರಾದ ಸಾಕ್ಷತ್ ಯುಕೆ ವರದಿ ವಾಚಿಸಿದರು. ಶಿಕ್ಷಕಿಯರಾದ ಶೋಭಾ, ಆಶಿತಾ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳಾದ ಸಾತ್ವಿಕಾ ಮತ್ತು ರಾನಿಯಾ ಕಾರ್ಯಕ್ರಮ ನಿರೂಪಿಸಿದರು.
ಕಾಪು : 18 ಲಕ್ಷ ರೂಪಾಯಿ ವೆಚ್ಚದ ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ
Posted On: 21 Dec 2025, 03:05 PM
ಕಾಪು: ವಿಧಾನಸಭಾ ಕ್ಷೇತ್ರದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಾಳ ತುಂಗೇರ್ ಬೈಲು ಬಳಿ ಕಾಲು ಸಂಕ ನಿರ್ಮಾಣಕ್ಕೆ 18 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಭಾನುವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ, ಸವಿತಾ ಶೆಟ್ಟಿ, ಶಕ್ತಿ ಕೇಂದ್ರದ ಪ್ರವೀಣ್ ಶೆಟ್ಟಿ ಪಾಂಗಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಲಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಜ. 3 -10 : 26ನೇ ವರ್ಷದ ಕಳತ್ತೂರು ಕುಕ್ಕುಂಜದ ಅಯ್ಯಪ್ಪ ಶಿಬಿರದ ಕಾರ್ಯಕ್ರಮ
Posted On: 21 Dec 2025, 09:23 AM
ಕಾಪು : ತಾಲೂಕಿನ ಕಳತ್ತೂರು ಕುಕ್ಕುಂಜದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.)ಇದರ 26 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಪ್ರಯುಕ್ತ ಜನವರಿ 3 ರಂದು ಸಂಜೆ 7.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ, ಜನವರಿ 10 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ಹಾಗೂ ಅಂದು ರಾತ್ರಿ 8 ರಿಂದ ಮೆಲೋಡಿ ಮ್ಯೂಸಿಕಲ್ ನಿಟ್ಟೆ "ಕಲಾರತ್ನ' ಪ್ರದೀಪ್ ಆಚಾರ್ಯ ತಂಡದಿಂದ ಭಕ್ತಿ ಗಾನಮೃತ ಕಾರ್ಯಕ್ರಮ ಜರಗಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಅಯ್ಯಪ್ಪ ಭಕ್ತವೃಂದ (ರಿ.)ಕುಕ್ಕುಂಜ ಪ್ರಕಟಣೆಯಲ್ಲಿ ತಿಳಿಸಿದೆ.
ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ ಡಾ. ಫಾರೂಕ್ ಚಂದ್ರನಗರ ಆಯ್ಕೆ
Posted On: 21 Dec 2025, 09:15 AM
ಕಾಪು : ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ (ರಿ.) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ.) ಬೆಂಗಳೂರು ವತಿಯಿಂದ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ಕೊಡಲ್ಪಡುವ ರಾಜ್ಯ ಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಡಾ.ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆಂದು ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಅಧ್ಯಕ್ಷರಾದ ಡಾ.ಮಹಾಂತೇಶ್ ಎಸ್ ಕಡಲಗಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷರಾದ ನಿತ್ಯ ಎಸ್.ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 28 ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬಂಟಕಲ್ಲು ಶಾಲಾ ಶತ ಸಂಭ್ರಮ : ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ - ಕ್ರೀಡೋತ್ಸವ ಸಂಪನ್ನ
Posted On: 20 Dec 2025, 07:42 PM
ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಶನಿವಾರ "ಶಾಲಾ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ- ಕ್ರೀಡೋತ್ಸವ" ಕಾರ್ಯಕ್ರಮ ಶತಮಾನೋತ್ಸವ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಶಾಲಾ ಹಿರಿಯ ಹಳೆವಿದ್ಯಾರ್ಥಿ,ಉದ್ಯಮಿ ಲೂವಿಸ್ ಮಾರ್ಟಿಸ್ ಬಂಟಕಲ್ಲು ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ಆವರಣದ ದ್ವಾರವನ್ನು ದಿ.ವಿಲಿಯಮ್ ಪಿಂಟೊ, ಎಮಿಲಿಯಾ ಪಿಂಟೊ ಸ್ಮರಣಾರ್ಥ ನೀಡಿದ ದಾನಿ ಎವಿಟಾ ಪಿಂಟೊ ಪೊದಮಲೆ ಇವರು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯರ ನವೀಕೃತ ಕಾರ್ಯಾಲಯವನ್ನು ಶಾಲಾ ಹಳೆವಿದ್ಯಾರ್ಥಿನಿ, ಅನಿವಾಸಿ ಭಾರತೀಯ ವೆರೋನಿಕಾ ಕಸ್ತಲಿನೊ ಉದ್ಘಾಟಿಸಿದರು. ಶಾಲೆ ಹಳೆ ವಿದ್ಯಾರ್ಥಿನಿ ಶಾರದಾ ಶರ್ಮಾ ಬಂಟಕಲ್ಲು ಇವರು ಕ್ರೀಡಾಕೂಟವನ್ನು ಬೆಲೂನುಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಶಾಲಾ ಹಳೆವಿದ್ಯಾರ್ಥಿ ಅನಿವಾಸಿ ಉದ್ಯಮಿ ರತ್ನಾಕರ ಶೆಟ್ಟಿ ಮಾಣಿಪಾಡಿ, ಮುಂಬಯಿ ಉದ್ಯಮಿ ಜನಾರ್ದನ ಆಚಾರ್ಯ ಬಂಟಕಲ್ಲು, ನಿವೃತ್ತ ಅಂಚೆ ಸಹಾಯಕ ಭಾಸ್ಕರ ಶೆಟ್ಟಿ ಸಡಂಬೈಲು, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್ ಪಾಟ್ಕರ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು.
ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸವ ಸಮಿತಿಯ ಆಶಯ, ಈವರೆಗಿನ ಅಭಿವೃದ್ಧಿ ಕಾರ್ಯಗಳು, ಭವಿಷ್ಯದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿಯ ಪದಾಧಿಕಾರಿ ದೇವದಾಸ್ ಪಾಟ್ಕರ್ ಮುದರಂಗಡಿ ನಿರೂಪಿಸಿ, ವಂದಿಸಿದರು. ಶಿಕ್ಷಕಿ ವಿನಯಾ ಆಚಾರ್ಯ ಪ್ರಾರ್ಥಿಸಿದರು.
ಶಾಲಾ ನಿವೃತ್ತ ಶಿಕ್ಷಕರೊಂದಿಗೆ ಹಳೆವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ಎನ್.ರಾಧಾಕೃಷ್ಣ ಪ್ರಭು, ಜಯಂತಿ, ಸಹಶಿಕ್ಷಕರುಗಳಾದ ಬಿ.ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ನಾಯಕ್, ಹಿಲ್ಡಾ ಸಲ್ಡಾನ್ನ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಅಂದಿನ ಕಾಲದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಕ್ರೀಡಾಕೂಟದ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಪರಶುರಾಮ ಪ್ರಭು ಪಂಜಿಮಾರು ಕೋಟೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಹಳೆವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ : ಉಡುಪಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟ್ಯುಮ್ ಗಾಲ ಛದ್ಮವೇಷ ಸ್ಪರ್ಧೆ
Posted On: 20 Dec 2025, 07:26 PM
ಕಾಪು : ಶಿಕ್ಷಣವು ವಾಣಿಜ್ಯೀಕರಣವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಗಮನವಹಿಸಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಶ್ರಮವಹಿಸಬೇಕಾಗಿದೆ. ರ್ಯಾಂಕ್ ಮಾನದಂಡವಲ್ಲ. ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ ಎಂದು ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಹೇಳಿದರು.
ಅವರು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ ಕಾಪು ಇಲ್ಲಿ 33ನೇ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟ್ಯುಮ್ ಗಾಲ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವೈದ್ಯರಾದ ಡಾ. ಅನುಪ್ ಪೂಜಾರಿ ಕಟಪಾಡಿ, ಶಾಲಾ ಹಳೆ ವಿದ್ಯಾರ್ಥಿನಿ ಡಾ.ಸಲ್ವ ಮಾತನಾಡಿದರು.
ಶಾಲಾ ಸಂಚಾಲಕ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟ್ ಶ್ವೇತಾ ಆಚಾರ್ಯ, ಸ್ಪರ್ಧೆಯ ತೀರ್ಪುಗಾರರಾದ ಮನೋಜ್ ಗಣೇಶಪುರ, ಅನ್ವಿತಾ ಕುಲಾಲ್, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಯೋಜಕರಾದ ಆಶಿತಾ, ಶೋಭ, ಶಾಲಾ ವಿದ್ಯಾರ್ಥಿ ನಾಯಕರುಗಳಾದ ಕೀರ್ತನ್ ಎಂ.ಕೋಟ್ಯಾನ್, ಚೈತ್ರ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಸಾಕ್ಷತ್ ಯು.ಕೆ., ಪ್ರಸ್ತಾವಿಸಿದರು. ವಿದ್ಯಾರ್ಥಿನಿಯರಾದ ತನಿಷ್ಕ ಸ್ವಾಗತಿಸಿ, ನಿಧಿ ವಂದಿಸಿದರು. ವಿದ್ಯಾರ್ಥಿನಿ ಫಾತಿಮ ಝೈನಬ್ ಕಾರ್ಯಕ್ರಮ ನಿರೂಪಿಸಿದರು.
ಪಾಂಗಳ ತುಂಗರಬೈಲು : ನಾಳೆ ಆರ್ ಸಿ ಸಿ ಇನ್ನಂಜೆಯಿಂದ 2ನೇ ಮನೆ ಹಸ್ತಾಂತರ
Posted On: 20 Dec 2025, 12:10 PM
ಪಾಂಗಾಳ: ತುಂಗರಬೈಲಿನಲ್ಲಿ ಟರ್ಪಾಲಿನ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಇನ್ನಂಜೆ ರೋಟರಿ ಸಮುದಾಯದಳ
ಕಾಪು, ಡಿ. 19 : ಟರ್ಪಾಲಿನ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬವೊಂದಕ್ಕೆ ದಾನಿಗಳ ನೆರವಿನೊಂದಿಗೆ ವಾಸಕ್ಕೆ ಯೋಗ್ಯವಾದ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಇನ್ನಂಜೆ ರೋಟರಿ ಸಮುದಾಯದಳದ ಸದಸ್ಯರು ಮಾದರಿಯಾಗಿದ್ದಾರೆ.
ಪಾಂಗಾಳ ತುಂಗರಬೈಲು ನಿವಾಸಿಗಳಾದ ಲಕ್ಷ್ಮಣ ಮತ್ತು ಕುಶಲ ದಂಪತಿಯು ತಮ್ಮಿಬ್ಬರು ಮಕ್ಕಳೊಂದಿಗೆ ಅದೆಷ್ಟೋ ವರ್ಷಗಳಿಂದ ಟರ್ಪಾಲಿನ ಮನೆಯಲ್ಲಿ ಅಸಹಾಯಕ ರೀತಿಯಲ್ಲಿ ಬದುಕುತ್ತಿದ್ದರು. ಟರ್ಪಾಲು ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬವು ಹಲವು ಗಾಳಿ-ಮಳೆಗೆ ಮೈಯ್ಯೊಡ್ಡಿ ದಿನ ಕಳೆಯುತ್ತಿತ್ತು.
ಅಸಹನೀಯ ಪರಿಸ್ಥಿತಿಯ ನಡುವೆ ದಿನ ಕಳೆಯುತ್ತಿದ್ದ ಕುಟುಂಬದ ಯಜಮಾನಿ ಕುಶಲ ಅವರು ಮೂರು ವರ್ಷದ ಹಿಂದೆ ಮೃತಪಟ್ಟಿದ್ದು ಮನೆಯಲ್ಲಿದ್ದವರು ಬೀದಿಗೆ ಬೀಳುವ ಸ್ಥಿತಿ ಎದುರಾಗಿತ್ತು. ಮನೆಯ ಅಸಹನೀಯ ಸ್ಥಿತಿಯಿಂದಾಗಿ ಪ್ರಾಯಕ್ಕೆ ಬಂದ ಮಗಳು ತಾಯಿ ಅಜ್ಜಿ ಮನೆಯಲ್ಲಿ ಆಶ್ರಯ ಪಡೆಯುವಂತಾಗಿತ್ತು.
ಈ ವಿಚಾರವನ್ನು ತಮ್ಮ ಪರಿಚಿತರ ಮೂಲಕವಾಗಿ ತಿಳಿದುಕೊಂಡ ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅವರು ತಮ್ಮ ರೋಟರಿ ಸಮುದಾಯ ದಳದ ಸದಸ್ಯರೊಂದಿಗೆ ಚರ್ಚಿಸಿ ಕುಶಲ ಅವರ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಸ್ವೀಕರಿಸಿದ್ದರು.
ಇನ್ನಂಜೆ ರೋಟರಿ ಸಮುದಾಯದಳದ ಪ್ರತಿನಿಧಿಗಳಾದ ವಜ್ರೇಶ್ ಆಚಾರ್ಯ, ಪ್ರಶಾಂತ್ ಶೆಟ್ಟಿ ದಿವೇಶ್ ಶೆಟ್ಟಿ,ಪ್ರಶಾಂತ್ ಆಚಾರ್ಯ, ರವಿ ಪ್ರಸಾದ್, ಗಣೇಶ್ ಆಚಾರ್ಯ, ಮತ್ತು ಸದಸ್ಯರೊಡನೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಸಮುದಾಯದಳದ ಸಭಾಪತಿ ಮಾಲಿನಿ ಶೆಟ್ಟಿ ಅವರು ದಾನಿಗಳ ನೆರವಿನೊಂದಿಗೆ ಸುಮಾರು 7 ಲಕ್ಷ ರೂ. ವೆಚ್ಚದ ಮನೆಯನ್ನು ನಿರ್ಮಿಸಿಕೊಟ್ಟಿದ್ದು ನಾಳೆ ಡಿ. 21ರಂದು ಕುಶಲ ನಿವಾಸ ಹಸ್ತಾಂತರಗೊಳ್ಳಲಿದೆ.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ಸಭಾಪತಿ ಅಲನ್ ವಿನಯ್ ಲೂಯಿಸ್, ಮಾಲಿನಿ ಶೆಟ್ಟಿ, ನಾಗರಾಜ್ ಶೆಟ್ಟಿ, ಗುರುಪ್ರಸಾದ್ ಕಾಮತ್, ಪ್ಯಾಟ್ರಿಕ್ ಡಿ ಸೋಜ, ನವೀನ್ ಅಮೀನ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ನಮ್ಮ ಕಾಪು ಮಾಧ್ಯಮದವರೊಂದಿಗೆ ಮಾತನಾಡಿದ ರೋಟರಿ ಸಮುದಾಯದಳದ ಸಭಾಪತಿ ಮಾಲಿನಿ ಇನ್ನಂಜೆ ಅವರು ಇದು ನಮಗೆ ದೇವರು ಕೊಟ್ಟಿರುವ ಸೌಭಾಗ್ಯವಾಗಿದೆ. ರೋಟರಿ ಸಮುದಾಯದಳದ ಮೂಲಕ ಎರಡನೇ ಮನೆ ನಿರ್ಮಿಸಿಕೊಡುತ್ತಿದ್ದು ನಾಲ್ಕನೇ ಶಾಶ್ವತ ಯೋಜನೆ ಇದಾಗಿದೆ. ನಮ್ಮ ಈ ಕಾರ್ಯಕ್ಕೆ ದಾನಿಗಳು, ಸ್ಥಳೀಯರು, ಉದ್ಯಮಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದು ಅಸಹಾಯಕ ರೀತಿಯಲ್ಲಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ನೆರವಾದ ಸಾರ್ಥಕ್ಯದ ಭಾವನೆ ಮೂಡುತ್ತಿದೆ ಎಂದರು.
ಡಿ.23 : ಮಡುಂಬು ಕುಂದರ್ ಕುಟುಂಬಸ್ಥರ ದೈವಗಳ ಹರಕೆಯ ನೇಮೋತ್ಸವ
Posted On: 19 Dec 2025, 07:08 PM
ಕಾಪು : ಮಡುಂಬು ಕುಂದರ್ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಶ್ರೀ ಧರ್ಮ ಜಾರಂದಾಯ ಬಂಟ ಮತ್ತು ಶ್ರೀ ವರ್ತೆ ಪಂಜುರ್ಲಿ ದೈವಗಳ ಹರಕೆಯ ನೇಮೋತ್ಸವವು ಡಿ.23, ಮಂಗಳವಾರ ಜರಗಲಿದೆ.
ಆ ಪ್ರಯುಕ್ತ ಸಂಜೆ 5.30ಕ್ಕೆ ಭಂಡಾರ ಇಳಿದು, ರಾತ್ರಿ ಗಂಟೆ 7.30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 9 ಕ್ಕೆ ದೈವಗಳ ನೇಮೋತ್ಸವವು ನಡೆಯಲಿರುವುದು.
ಸರ್ವರು ಸಕುಟುಂಬಿಕರಾಗಿ ಆಗಮಿಸಿ, ಸಿರಿ-ಮುಡಿ ಗಂಧ-ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಶ್ಯಾಮಲ ಕುಂದರ್ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 847ನೆ ನಮ್ಮೂರು ನಮ್ಮ ಕೆರೆ ಹಸ್ತಾಂತರ
Posted On: 18 Dec 2025, 06:29 PM
ಕಾಪು : ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕುರುಡಾಯಿ ಕೆರೆ ಅಭಿವೃದ್ದಿ ಸಮಿತಿ ಸಹಭಾಗಿತ್ವದಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಡಾಯಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ಯೋಜನೆ 847ನೆ ನಮ್ಮೂರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಆನಂದ ಸುವರ್ಣರವರು ಕೆರೆ ನಾಮಫಲಕ ಅನಾವರಣವನ್ನು ನೆರವೇರಿಸಿದರು.
ಕಾಪು ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಅನಂತ ಶಂಕರ್ ಹಾಗೂ ಊರಿನ ಗಣ್ಯರು ಕೆರೆಗೆ ಬಾಗಿನ ಅರ್ಪಿಸಿದರು.
ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ” ಯೋಜನೆಯಿಂದ ಗ್ರಾಮಗಳ ಕೆರೆ ಅಭಿವೃದ್ಧಿ ಆಗುತ್ತಿದೆ. ಕೆರೆ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯ ಜವಾಬ್ದಾರಿ. ಕೆರೆ ಸಂರಕ್ಷಣೆಯಿಂದ ಭೂಮಿಯ ಮೇಲಿನ ಎಲ್ಲಾ ಪ್ರಾಣಿ, ಪಕ್ಷಿ ಮತ್ತು ಮನುಷ್ಯರಿಗೆ ಅನುಕೂಲವಾಗುತ್ತಿದೆ. ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪದ್ಮ ವಿಭೂಷಣ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ 1000 ಕೆರೆಗಳ ಕಾಮಗಾರಿ ಮಾಡಿ, ಪುನಶೇತ್ವನ ಗೊಳಿಸಲಾಗಿದೆ. ಇದು ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ಪೂರ್ಣಗೊಂಡಿರುತ್ತವೆ. ರೈತ ಬಾಂಧವರು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ತಾಲೂಕು ದಂಡಾಧಿಕಾರಿ ಅನಂತ ಶಂಕರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಊರಿನ ಕೆರೆ, ಸಮುದಾಯ ಭವನ, ಹಿಂದೂ ರುದ್ರಭೂಮಿ, ಶಿಷ್ಯ ವೇತನ ಮಹತ್ತರ ಕೆಲಸ ಮಾಡುತ್ತಿದೆ. ಮುಂದೆಯೂ ನಿರಂತರವಾಗಿ ಸಮಾಜ ಸೇವೆ ಮುಂದುವರಿಯಲಿ ಎಂದು ಶ್ಲಾಘಿಸಿದರು.
ಬೆಳ್ಳೆ ಕುರುಡಾಯಿ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬೆಳ್ಳೆ ಪಂಚಾಯತ್ ಅಧ್ಯಕ್ಷರಾದ ದಿವ್ಯ ಆಚಾರ್ಯ, ಉಪಾಧ್ಯಕ್ಷರಾದ ಶಶಿಧರ ವಾಗ್ಲೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಇನ್ನಾ ಉದಯ ಕುಮಾರ್ ಶೆಟ್ಟಿ, ಸುಜಾತ ಸುವರ್ಣ, ಗೀತಾ ವಾಗ್ಲೆ, ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ರಾಜ್ಯ ನಿಕಟ ಪೂರ್ವ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಕೇಂದ್ರ ಒಕ್ಕೂಟ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸ್ಯಾಮ್ಸನ್, ಶೌರ್ಯವಿಪತ್ತು ನಿರ್ವಹಣಾ ಸದಸ್ಯರು, ಸಂಘದ ಸದಸ್ಯರು, ಗ್ರಾಮದ ಗಣ್ಯರು, ಮಾದ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೆರೆ ಅಭಿವೃದ್ದಿ ಸಮಿತಿ ಸದಸ್ಯರನ್ನು ಪ್ರಾದೇಶಿಕ ನಿರ್ದೇಶಕರು ಗೌರವಾರ್ಪಣೆ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು.
ಶಿರ್ವ ವಲಯ ಮೇಲ್ವಿಚಾರಕರಾದ ಗೀತಾ ನಿರೂಪಿಸಿದರು. ದೇವೇಂದ್ರ ವಂದಿಸಿದರು.
