Updated News From Kaup
ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ "ಉದ್ಭವ" ಲೋಕಾರ್ಪಣೆ
Posted On: 20 May 2026, 12:36 PM
ಕಾಪು : ಗ್ರಾಮೀಣ ಭಾಗದ ಸಂಘಗಳು ಬಲಗೊಳ್ಳುತ್ತಿವೆ. ಸ್ವಂತ ಕಟ್ಟಡದ ಕನಸು ನನಸಾಗಿದೆ. ದಾನಿಗಳ ಸಹಕಾರದೊಂದಿಗೆ ಮಾಡಿದ ಈ ಸಾಧನೆಗೆ ಅಭಿನಂದನೆಗಳು. ಹಾಲಿನ ಸಂಗ್ರಹಣೆ 500 ರಿಂದ 600 ಲೀಟರ್ಗಳಿಗೆ ಏರಿಸಬೇಕು. ರಾಜ್ಯದ 15 ಒಕ್ಕೂಟಗಳಲ್ಲಿ ಗರಿಷ್ಠದರ ನೀಡುವ ಒಕ್ಕೂಟ ನಮ್ಮದು. ಲಾಭಾಂಶ ಕಡಿಮೆ ಮಾಡಿ ರೈತರಿಗೆ ನೀಡುತ್ತಿದ್ದೇವೆ. ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಗುಣಮಟ್ಟದ ಕಲಬೆರಕೆ ರಹಿತ ಹಾಲು ಕೊಡಿ, ಉತ್ತಮ ಮಾರುಕಟ್ಟೆ ಒದಗಿಸುತ್ತೇವೆ ಎಂದು ದ.ಕ.ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ನುಡಿದರು.
ಅವರು ಮಂಗಳವಾರ ಶಿರ್ವ ಸಮೀಪದ ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಇವರು ಖರೀದಿಸಿದ 4 ಸೆಂಟ್ಸ್ ಸ್ಥಳದಲ್ಲಿ ನಿರ್ಮಿಸಿದ ಸ್ವಂತ ಕಟ್ಟಡ "ಉದ್ಭವ"ವನ್ನು ಲೋಕಾರ್ಪಣೆಗೊಳಿಸಿ ಕೋಡು ಮುಲ್ಕಾಡಿ ಶ್ರೀದುರ್ಗಾಪರಮೆಶ್ವರೀ ದೇವಳದ ಸಭಾಂಗಣದಲ್ಲಿ ಏರ್ಪಡಿಸಿದ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾಲಿನ ಉತ್ಪನ್ನಗಳನ್ನು ವಿವಿಧ ಮಾದರಿಯಲ್ಲಿ ಪರಿವರ್ತಿಸಿ ಜನರಿಗೆ ತಲುಪಿಸುತ್ತಿದ್ದೇವೆ. ತಿರುಪತಿಗೆ ನಂದಿನಿ ತುಪ್ಪ ಹೋಗುತ್ತದೆ. ಒಕ್ಕೂಟ ಹೈನುಗಾರರಿಗೆ ವಿವಿಧ ಯೋಜನೆಗಳ ಮೂಲಕ ಪಶುಆಹಾರ, ಪೂರಕ ವಿವಿಧ ಪರಿಕರಗಳಿಗೆ ಅನುದಾನ ನೀಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕೋಡು ವಹಿಸಿದ್ದರು.
ಈ ಸಂದರ್ಭದಲ್ಲಿ ಪಂಜಿಮಾರು ಘಟಕದ ವತಿಯಿಂದ ಮಂಗಳೂರು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಮತ್ತು ಉಪಾಧ್ಯಕ್ಷ ಉದಯ ಎಸ್ ಕೊಟ್ಯಾನ್, ಕರ್ನಾಟಕ ಹಾಲು ಮಹಾ ಮಂಡಲ ಬೆಂಗಳೂರು ಮತ್ತು ದ.ಕ. ಹಾಲು ಒಕ್ಕೂಟ ನಿ. ಮಂಗಳೂರು ಇದರ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಪಂಜಿಮಾರು ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.
ಉದಯ ಎಸ್ ಕೋಟ್ಯಾನ್, ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿನ ಗಣ್ಯರು ಶುಭಾಶಂಸನೆ ಗೈದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಸುಧಾಕರ ಶೆಟ್ಟಿ ಮೂಡಾರು, ಕೆ.ಶಿವಮೂರ್ತಿ, ಮಮತಾ ಆರ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಕಾಪು ಇದರ ಯೋಜನಾಧಿಕಾರಿ ಮಮತಾ ಶೆಟ್ಟಿ, ಶ್ರೀಮುಲ್ಕಾಡಿ ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಶಿರ್ವ ವ್ಯ.ಸೇ.ಸ.ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ವಲದೂರು ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷ ಅಶೋಕ್ ಕುಮಾರ್ ವಲದೂರು, ಬಂಟಕಲ್ಲು ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಬಂಟಕಲ್ಲು ಮಾಧವ ಕಾಮತ್, ಕೋಡು ಶಾಲಾ ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ರಾಜೇಶ್ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಮಾಧವ ಐತಾಳ್, ಸಹಾಯಕ ವ್ಯವಸ್ಥಾಪಕ ಡಾ.ಪ್ರಶಾಂತ್ ಆರ್.ಜಿ, ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್, ಪಂಜಿಮಾರು ಸಂಘದ ಉಪಾಧ್ಯಕ್ಷ ನಿತ್ಯಾನಂದ ನಾಯಕ್ ಪಾಲಮೆ ಉಪಸ್ಥಿತರಿದ್ದರು.
ಪ್ರಸಾದ್ ಶೆಟ್ಟಿ ವಲದೂರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಪೂಜಾರಿ ವಲದೂರು ವರದಿ ವಾಚಿಸಿ, ವಂದಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಯಶವಂತ ನಿರೂಪಿಸಿದರು.
ಪಡುಬಿದ್ರಿ : ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ಉಳಿತಾಯಗಾರರ ಕ್ರೆಡಿಟ್ ಕೊ -ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯ ಉದ್ಘಾಟನೆ
Posted On: 18 May 2026, 04:38 PM
ಪಡುಬಿದ್ರಿ : ಭಾರತದ ಆರ್ಥಿಕತೆಯು ಪ್ರಾಥಮಿಕ ಕೃಷಿ ಆಧಾರಿತವಾಗಿರುವುದರಿಂದ ಹೆಚ್ಚಿನ ಸಹಕಾರಿ ಬ್ಯಾಂಕುಗಳು ಈ ವಿಭಾಗವನ್ನು ಪೊರೃೆಸುತ್ತಿದೆ. ಸಹಕಾರ ಮತ್ತು ಸಮಾನತೆಯ ತತ್ವಗಳ ಮೇಲೆ ಕಾರ್ಯ ನಿರ್ವಹಿಸುವ ಭಾರತದ ಸಹಕಾರಿ ಬ್ಯಾಂಕುಗಳು, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಿಲ್ಲಬೇಕು. ಈ ಬ್ಯಾಂಕುಗಳು ಲಾಭಗಳಿಸುವುದಕ್ಕಿಂತ ಹೆಚ್ಚಾಗಿ ಜನರಿಗೆ ಸೇವೆ ಸಲ್ಲಿಸುವುದನ್ನು ಪ್ರಮುಖ ಗುರಿಯಾಗಿ ಹೊಂದಬೇಕು. ರಾಜ್ಯ ಮಟ್ಟದ ಅತ್ಯುನ್ನತ ಸಹಕಾರಿ ಬ್ಯಾಂಕ್ ಅಗಿ ಮೂಡಿಬರಲಿ ಎಂದು ಡಿ.ಕೆ ಗ್ರೂಫ್ ಅಫ್ ಕಂಪನಿಸ್ ಅಡಳಿತ ನಿರ್ದೇಶಕ ಅಲ್ವಿನ್ ಜೋಯಲ್ ನೊರಾನ್ಹ ಹೇಳಿದರು.
ಅವರು ಪಡುಬಿದ್ರಿಯ ಅಗ್ರಜ ಮಂಜುಶ್ರೀ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೂ-ಅಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಸಹಕಾರಿ ಬ್ಯಾಂಕುಗಳು ಕೇವಲ ಹಣಕಾಸಿನ ವಹಿವಾಟು ನಡೆಸುವ ಸಂಸ್ಥೆಗಳಾಗಬಾರದು. ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಗೆ, ಕೃಷಿಕರ ಅಭಿವೃದ್ಧಿಗೆ ಹಾಗೂ ದೇಶದ ಆರ್ಥಿಕತೆಯ ತಳಹದಿಯನ್ನು ಬಲಪಡಿಸುವ ಗುರಿ ಹೂಂದುವುದು ಅತ್ಯಗತ್ಯವಾಗಿದೆ ಎಂದು ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ನವೀನ್ ಚಂದ್ರ ಜೆ. ಶೆಟ್ಚಿ ಹೇಳಿದರು.
ಡಿ.ಕೆ ಟ್ರಾನ್ಸ್ ಪೋರ್ಟ್ ಕಂಪನಿಯ ಮಾಲಕಿ ಲಿಜ್ಜಿ ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಉದ್ಯಮಿ ದೀಪಕ್ ಎರ್ಮಾಳ್, ರೋಟರಿ ವಲಯ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಸೆಂಟ್ರಲ್ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ರವೀಂದ್ರ ಶೆಟ್ಚಿ ಮುಂಬಯಿ, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಸಂಸ್ಥೆಯ ಪಾಲುದಾರ ಸಂತೋಷ್ ಪಡುಬಿದ್ರಿ, ವ್ಯವಸ್ಥಾಪಕ ಪಾಲುದಾರರಾದ ಪ್ರೇಮ ಕೋಟ್ಯಾನ್, ಸಂಸ್ಥೆಯ ಉಪಾಧ್ಯಕ್ಷ ಶರತ್ ಶೆಟ್ಚಿ ಎರ್ಮಾಳ್ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸುಧಾಕರ್. ಕೆ ನಿರೂಪಿಸಿ, ವಂದಿಸಿದರು.
ಪಡುಬಿದ್ರಿ ದೇವಳದಲ್ಲಿ ಜರಗಿದ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮ
Posted On: 18 May 2026, 11:29 AM
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ ಇಲ್ಲಿಯ ಸಮಗ್ರ ಜೀರ್ಣೋದ್ಧಾರ - ಪುನಃ ಪ್ರತಿಷ್ಠೆ - ಬ್ರಹ್ಮಕಲಶೋತ್ಸವದ ಸಂಕಲ್ಪದೊಂದಿಗೆ ಹಮ್ಮಿಕೊಂಡ ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ದೀಪಾರಾಧನೆಯೊಂದಿಗೆ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮವು ಭಾನುವಾರ ಪ್ರಾತ:ಕಾಲ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ದೊರೆತು ದೀಪಾರಾಧನೆಯೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ ಹಾಗೂ ಕೊರ್ನಾಯ ಶ್ರೀಪತಿ ರಾವ್ ಉದ್ಘಾಟಿಸಿದರು.
ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಸ್ಥಳೀಯ ಆಹ್ವಾನಿತ 12 ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರಗಿತು. ಭಕ್ತ ಜನರ ಸೇರುವಿಕೆಯೊಂದಿಗೆ ಸಂಜೆ ದೀಪಾರಾಧನೆಯು ಜರಗಿತು.
ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ಆಶೀರ್ವಚಿಸಿದರು.
ಗಾಯಕಿ ಶಾಂತೇರಿ ಲಿಖಿತ್ ಪ್ರಭು, ಮಂಜೇಶ್ವರ ಮತ್ತು ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮವೂ ಜರಗಿತು.
ವೇದಮೂರ್ತಿ ಅಚ್ಚಡ ಶ್ರೀನಿವಾಸ ಆಚಾರ್ಯ ಮತ್ತು ಭಜನೆ, ಸಂಕೀರ್ತನೆ, ಶಿವಪಂಚಾಕ್ಷರಿ ಜಪಯಜ್ಞ ದೀಪಾರಾಧನೆಯಲ್ಲಿ ಸಹಕರಿಸಿದವರನ್ನು, ಶಾಂತೇರಿ ಲಿಖಿತ್ ಪ್ರಭು, ಮಂಜೇಶ್ವರ ಮತ್ತು ಬಳಗದವರನ್ನು ಗೌರವಿಸಲಾಯಿತು.
ಈ ಸಂದರ್ಭ ಅರ್ಚಕರುಗಳಾದ ಎಚ್. ಪದ್ಮನಾಭ ಭಟ್, ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರವೀಂದ್ರನಾಥ್ ಜಿ. ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ, ಡಾ.ಎನ್.ಟಿ.ಅಂಚನ್, ಸುಚರಿತ ಅಂಚನ್, ಪ್ರಕಾಶ್ ದೇವಾಡಿಗ, ರಮಾಕಾಂತ ರಾವ್, ವೈ. ಸುರೇಶ್ ರಾವ್, ನಟರಾಜ ರಾವ್ ಪಿ.ಎಸ್., ಪಿ.ರಮಾಕಾಂತ ರಾವ್, ಸುಧಾ ಆರ್. ನಾವಡ, ಕಸ್ತೂರಿ ರಾಮಚಂದ್ರ, ರಾಜೇಂದ್ರ ಶೆಣೈ, ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀಧರ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಪಡುಬಿದ್ರಿ : ಬಸ್ ಸ್ಟ್ಯಾಂಡ್ನನಲ್ಲಿ ದೊರೆತ ಚಿನ್ನವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Posted On: 18 May 2026, 11:03 AM
ಪಡುಬಿದ್ರಿ : ಇಲ್ಲಿನ ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ರೂ. 50,000 ಮೌಲ್ಯದ ಚಿನ್ನವಿದ್ದ ಬ್ಯಾಗನ್ನು ರಿಕ್ಷಾ ಚಾಲಕ ಮತ್ತು ಮಹಿಳೆಯೋರ್ವರು ಪಡುಬಿದ್ರಿ ಠಾಣೆಗೆ ಒಪ್ಪಿಸಿ ಮಾಲಿಕರಿಗೆ ಹಸ್ತಾಂತರಿಸಿದ್ದಾರೆ.
ರಿಕ್ಷಾ ಚಾಲಕ ಜಗದೀಶ ಮತ್ತು ಆಶಾಲತಾ ರವರು ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ಬ್ಯಾಗನ್ನು ತಕ್ಷಣ ಪಡುಬಿದ್ರಿ ಠಾಣೆಗೆ ತಂದು ನೀಡಿದ್ದರು.
ತದನಂತರ ಬ್ಯಾಗಿನ ಮಾಲಕಿಯಾದ ಫಾತಿಮಾ ಮಂಗಳೂರು ಇವರಿಗೆ ಠಾಣಾಧಿಕಾರಿ ಸಕ್ತಿವೇಲು ಸಮ್ಮುಖ ಹಸ್ತಾಂತರಿಸಲಾಯಿತು.
ಕಾರ್ಕಳ : ನಾರಿಶಕ್ತಿ ಜಾಗೃತಿ ಸಮಾವೇಶ, ಸಾಧಕಿಯರಿಗೆ ಸನ್ಮಾನ
Posted On: 18 May 2026, 09:30 AM
ಕಾರ್ಕಳ : ಮಹಿಳಾ ಸಬಲೀಕರಣ ಎಂದರೆ ಕೇವಲ ಹಕ್ಕುಗಳಿಗಾಗಿ ಸದ್ದು ಮಾಡುವುದಲ್ಲ. ಬದಲಿಗೆ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯಯುತ ಅವಕಾಶಗಳನ್ನು ಪಡೆದುಕೊಳ್ಳುತ್ತಲೇ, ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿ ಮುನ್ನಡೆಯುವುದಾಗಿದೆ ಎಂದು ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುರಭಿ ಹೊಡಿಗೆರೆ ಪ್ರತಿಪಾದಿಸಿದರು.
ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ನಾರಿಶಕ್ತಿ ಸಾಧಕ ಮಹಿಳೆಯರ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಆಧುನಿಕ ಸಮಾಜದಲ್ಲಿ ಮಹಿಳೆಗೆ ಕೇವಲ ಸುರಕ್ಷತೆ ಅಥವಾ ರಕ್ಷಣೆ ನೀಡಿದರೆ ಸಾಲದು. ಅದಕ್ಕಿಂತ ಹೆಚ್ಚಾಗಿ ಆಕೆಗೆ ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಬೆಳೆಯುವ ಪೂರಕ ವಾತಾವರಣ ಹಾಗೂ ಸಮಾನ ನ್ಯಾಯದ ಅಗತ್ಯವಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಕಾಲಿನ ಮೇಲೆ ತಾವು ನಿಂತು ಸ್ವಾವಲಂಬಿಗಳಾದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬ ಮಹಿಳೆಯೂ ತನ್ನ ಸೌಮ್ಯತೆಯ ಹಿಂದಿರುವ ನಾರಿಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಸಾಧ್ವಿ ಶ್ರೀ ಮಾತಾ ನಂದಮಯೀ ಅವರು ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರತಿ ಯುಗದಲ್ಲೂ ಮಹಿಳೆ ಕೇವಲ ಒಂದು ಪಾತ್ರವಾಗಿ ಉಳಿದಿಲ್ಲ, ಆಕೆ ಶಕ್ತಿಯಾಗಿ ಹೊರಹೊಮ್ಮಿದ್ದಾಳೆ. ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಮಹಿಳೆಯರನ್ನು ಸರಸ್ವತಿ, ಲಕ್ಷ್ಮಿಯಂತಹ ದೇವತೆಯ ರೂಪದಲ್ಲಿ ಆರಾಧಿಸುವ ಶ್ರೇಷ್ಠ ಪರಂಪರೆ ಇದೆ. ಇಂದಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯೇ ಅತ್ಯುನ್ನತ ಸ್ಥಾನದಲ್ಲಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಮಹಿಳೆಯರು ಜನ್ಮತಃ ತ್ಯಾಗಮಯಿಗಳು ಮತ್ತು ಆದರ್ಶ ಜೀವನ ನಡೆಸುವವರು. ಇಂದು ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮುದುಡಿ ಕೂರದೆ ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಇಂತಹ ಸಾಧಕಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕಿ ಡಾ. ಸಬಿತಾ ಕೊರಗ ಉಪಸ್ಥಿತರಿದ್ದರು. ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಶಿಕ್ಷಣ ಕ್ಷೇತ್ರದ ಸಾವಿತ್ರಿ ಮನೋಹರ್, ಧಾರ್ಮಿಕ ಕ್ಷೇತ್ರದ ಜ್ಯೋತಿ ಪೈ ಸಾಮಾಜಿಕ ಕ್ಷೇತ್ರದ ತನುಲ, ಸಾಹಿತ್ಯ ಕ್ಷೇತ್ರದ ಪ್ರೇಮ ಸುರಿಗ ಅಜೆಕಾರು, ಕ್ರೀಡಾ ಕ್ಷೇತ್ರದ ಅಪ್ಸರಾ ಕಟೀಲ್, ಸಮಾಜಸೇವೆಗಾಗಿ ಆಯೇಷಾ ಬಾನು, ಆರೋಗ್ಯ ಸೇವೆಗಾಗಿ ಲೈಲಾ ಥೋಮಸ್ ಹಾಗೂ ಬಾಲ ಪ್ರತಿಭೆಗಳಾದ ಭೂಮಿ, ಅನ್ವಿ ಹೆಚ್. ಅಂಚನ್, ಸುಧಾನ್ಯ, ಪ್ರಣತಿ ಬಿ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಅಜೆಕಾರು ಸಿ.ಎ ಬ್ಯಾಂಕು ನಿರ್ದೆಶಕಿ ಜಲಜ ಸ್ವಾಗತಿಸಿದರು. ವಿನಯ ಡಿ. ಬಂಗೇರ ಪ್ರಸ್ತಾವನೆಗೈದರು. ಜ್ಯೋತಿರಮೇಶ್ ವಂದಿಸಿ, ನಿರೂಪಿಸಿದರು. ಪ್ರಮೀಳಾ ಪ್ರಾರ್ಥಿಸಿದರು.
ಕಾಪು : ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ
Posted On: 18 May 2026, 09:24 AM
ಕಾಪು : ಸುಜ್ಞಾನ ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಮತ್ತು ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಮೇ 16ರಂದ ಮೇ 22 ರವರೆಗೆ ಕಾಪುವಿನ ಕಲ್ಯ ಸುಧಾಮ ಸಭಾಭವನದಲ್ಲಿ ಜರಗಲಿರುವ ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರವನ್ನು ಪೇಜಾವರ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಕರ್ನಾಟಕ ಬ್ಯಾಂಕ್ ಡಿಜಿಎಮ್ ರಮೇಶ್ ವೈದ್ಯ, ಕರ್ನಾಟಕ ಬ್ಯಾಂಕ್, ಪಣಿಯೂರು ಶಾಖೆಯ ಮ್ಯಾನೇಜರ್ ಬಾಲಕೃಷ್ಣ ರಾವ್, ಡಾ.ಸೀತಾರಾಮ ಭಟ್ ದಂಡತೀರ್ಥ, ಶಿಬಿರ ನಿರ್ವಾಹಕರಾದ ಶ್ರೀನಿವಾಸ ಪೆಜತ್ತಾಯ, ರಾಮಕೃಷ್ಣ ತಂತ್ರಿ ಕಲ್ಯ, ವಿದ್ಯಾಧರ ಪುರಾಣಿಕ ಕಲ್ಯ, ಭಗವನ್ ದಾಸ್ ಶೆಟ್ಟಿಗಾರ್, ಶಿಬಿರದ ಸಹ ನಿರ್ವಾಹಕ ಪವನ್ ಕುಮಾರ್ ಉಪಸ್ಥಿತರಿದ್ದರು. ಮನೋಹರ್ ರಾವ್ ಕಲ್ಯ ವಂದಿಸಿದರು.
ವಧುವರರ ಸಮಾವೇಶಗಳು ಯುವ ಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ : ನಾಗೇಂದ್ರ ಕಾಮತ್
Posted On: 17 May 2026, 07:11 PM
ಶಿರ್ವ: ಇಂದು ಯುವ ಪೀಳಿಯು ಯೋಗ್ಯ ಹಾಗೂ ಒಪ್ಪುವಂತಹ ವೈವಾಹಿಕ ಜೀವನವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಆಯೋಜನೆಗೊಳ್ಳುವ ವಧು ವರರ ಸಮಾವೇಶಗಳು ಯುವಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದು ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಇದರ ಅಧ್ಯಕ್ಷ ನಾಗೇಂದ್ರ ಕಾಮತ್ ನುಡಿದರು. ಅವರು ರವಿವಾರ ಬಂಟಕಲ್ಲು ರೋಟರಿ ಭವನದಲ್ಲಿ ಆರ್ಎಸ್ಬಿ ಹಾಗೂ ಬಿಜಿಎಸ್ಬಿ ಸಮಾಜ ಬಾಂಧವರ ಜಂಟಿ ಆಯೋಜನೆಯಲ್ಲಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಏರ್ಪಡಿಸಿದ "ಋಣಾನುಬಂಧ" ವಧುವರರ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಜ್ಯೋತಿಷಿಗಳಾದ ಮಾಣ್ಯೂರು ವೈ ಉಪೇಂದ್ರ ಪ್ರಭು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಾತಕ ಫಲಗಳನ್ನು ಪರಿಶೀಲಿಸಿ ವಿವಾಹವಾಗುವುದು ದಾಂಪತ್ಯ ಜೀವನದ ಧೀರ್ಘಾವಧಿ ಯಶಸ್ಸಿಗೆ ಒಳಿತು ಎಂದರು.
ಸನ್ಮಾನ : ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಉಪೇಂದ್ರ ಪ್ರಭು ಹಾಗೂ ಉದ್ಯಮಿ ಎಂ.ಎನ್.ನಾಯಕ್, ಅಂತಾರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರನ್ನು ಸನ್ಮಾನಿಸಲಾಯಿತು.
ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರು ಸಮಾಜದ ಯುವಜನತೆಗೆ ಪ್ರೇರಣೆ ನೀಡುವ ವಿಶೇಷ ಉಪನ್ಯಾಸವನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಕಳ ಹಿರ್ಗಾನದ ಶ್ರೀಆದಿಶಕ್ತಿ ಮಹಾಲಕ್ಷ್ಮಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಉದ್ಯಮಿ ವಾಸುದೇವ ಕೃಷ್ಣ
ಅವರು ಮಾತನಾಡಿದರು.
ಸಂಚಾಲಕ ಎಂ.ಡಿ.ಪ್ರಭು ವೇದಿಕೆಯಲ್ಲಿದ್ದರು. ನಿವೃತ್ತ ಮುಖ್ಯಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಗಣ್ಯರನ್ನು ಪರಿಚಯಿಸಿದರು. ಸುನಿಲ್ ಬೋರ್ಕಾರ್ ಪುತ್ತೂರು ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು.
ಕಾರ್ಯಕ್ರಮದಲ್ಲಿ 192 ವಧುವರರು ತಮ್ಮ ಹೆಸರುಗಳನ್ನು ಅಧಿಕೃತವಾಗಿ ನೋಂದಾಯಿಸಿದ್ದರು.
ಕಾಪು : ಮುಂಗಾರು ಪೂರ್ವದಲ್ಲೇ ಸಮಸ್ಯೆಗಳಿದ್ದೆಡೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಗಮನಹರಿಸಿ
Posted On: 17 May 2026, 09:06 AM
ಕಾಪು : ಅಪಾಯವಾದ ಮೇಲೆ ಹಾಗೆ ಆಗಬಾರದಿತ್ತು ಆಗಿ ಹೋಯಿತು ಎನ್ನುವ ಮೊದಲೇ ಅಪಾಯದ ಮುನ್ಸೂಚನೆ ಅರಿಯಬೇಕಿದೆ. ಇದು ಈ ಭಾರಿಯ ಮಳೆಗೂ ಮುನ್ನ ಕಾಪು ತಾಲೂಕಿನ ಆಡಳಿತ ವರ್ಗ, ಜನಪ್ರತಿನಿಧಿಗಳು ಅರಿಯಬೇಕಾದ ಕಟು ಸತ್ಯವಾಗಿದೆ.
ಪ್ರತಿ ಬಾರಿ ಮಳೆಯಿಂದ ಕಾಪು ತಾಲೂಕಿನ ಕೆಲವೆಡೆಗಳಲ್ಲಿ ಅನಾಹುತಗಳು ಸಂಭವನೀಯ. ಇದಕ್ಕೆ ಅಧಿಕಾರಿ ವರ್ಗ ಸರ್ವಸನ್ನದ್ಧರಾಗಿ ಮೊದಲೇ ಪೂರ್ವ ತಯಾರಿ ಮಾಡಬೇಕಿದೆ.
ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸದಸ್ಯರು ಅಧಿಕಾರದಲ್ಲಿದ್ದಾರೆ. ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಸದಸ್ಯರ ಅಧಿಕಾರಾವಧಿ ಮುಗಿದಿದ್ದರೂ ಮಾನವೀಯ ನೆಲೆಯಿಂದ ಅವರು ಕಾರ್ಯ ನಿರ್ವಹಿಸುವೆಡೆಗೆ ಮನಸ್ಸು ಮಾಡಿ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ.
ನೀರು ಹರಿಯಲು ತೋಡಿನ ವ್ಯವಸ್ಥೆ, ಹೂಳು ತುಂಬಿದಲ್ಲಿ ಹೂಳೆತ್ತುವ ಕಾರ್ಯ, ಕೆರೆ, ನದಿ ವ್ಯಾಪ್ತಿಯ ಪ್ರದೇಶದಲ್ಲಿ, ರಸ್ತೆಯ ಬದಿಯ ಹಳೆಯ ಮರಗಳು, ಗೆಲ್ಲಿಗೆ ತಾಗಿದ ವಿದ್ಯುತ್ ತಂತಿಗಳ ಬಗ್ಗೆ ಮುನ್ನೆಚ್ಚರಿಕೆ ಅನಿವಾರ್ಯವಾಗಿದೆ. ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಿದೆ.
ಮಳೆಯ ಅವಾಂತರದಿಂದ ಹಾನಿಗೀಡಾಗುವ ಪ್ರದೇಶದಲ್ಲಿ ಜನರು ಜಾಗರೂಕರಾಗಿದ್ದು, ಅಲ್ಲಿಯ ಸಮಸ್ಯೆಗೆ ಮುಂಗಾರು ಪ್ರಾರಂಭದ ಮುನ್ನವೇ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡಿ.
ಅವಾಂತರದ ನಂತರ ಬಂದು ನೋಡಿ ಕ್ರಮ ವಹಿಸುವ ಭರವಸೆ ನೀಡಿದರೆ ಏನು ಪ್ರಯೋಜನ ?
ಮೇ 17 (ಇಂದು) : ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪದಪ್ರದಾನ ಸಮಾರಂಭ
Posted On: 17 May 2026, 09:02 AM
ಪಡುಬಿದ್ರಿ : ಇಲ್ಲಿನ ಗ್ರಾಮೀಣ ಕಾಂಗ್ರೆಸ್ ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಗ್ರಾಮೀಣ ಕಾಂಗ್ರೆಸ್ನ ನೂತನ ಅಧ್ಯಕ್ಷ ರಮೀಝ್ ಹುಸೇನ್ ಹಾಗೂ ಪದಾಧಿಕಾರಿಗಳ ಪದಾಪ್ರದಾನ ಸಮಾರಂಭ ಮೇ 17ರಂದು ನಡೆಯಲಿದೆ.
ಸಂಜೆ 6 ಗಂಟೆಗೆ ಸುಜಾತಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೀರಾ ಕಾಂಪ್ಲೆಕ್ಸ್ನಲ್ಲಿ ಕಚೇರಿಯ ಉದ್ಘಾಟನೆ ನಡೆಯಲಿದೆ.
ಗ್ರಾಮೀಣ ಕಾಂಗ್ರೆಸ್ನ ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ನೂತನ ಕಚೇರಿ ಉದ್ಘಾಟಿಸಲಿದ್ದಾರೆ. ಪ್ರಚಾರ ಸಮಿತಿಯ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಸಮಿತಿಯ ವೈ.ಸುಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ಚಂದ್ರ ಜೆ.ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬೆಳಪು : ಹೆಂಡತಿಯ ಮನೆಯ ಮುಂಭಾಗ ಆತ್ಮಹತ್ಯೆಗೆ ಶರಣಾದ ಗಂಡ
Posted On: 16 May 2026, 06:43 PM
ಕಾಪು : ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಯ ಮುಂಭಾಗ ಇರುವ ಮಾವಿನ ಮರದ ಕೊಂಬೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನ ಬೆಳಪುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಜಹಿರ್ಅಬ್ದುಲ್ ಮಾಂಗಾವಕರ್ (42) ಮೃತ ವ್ಯಕ್ತಿ. ಗೋವಾ ಮೂಲದ ಈತ ಬೆಳಪುವಿನ ಯುವತಿಯನ್ನು ಸಂಪ್ರದಾಯದ ಬದ್ಧವಾಗಿ ಮೂಳೂರು ಜುಮ್ಮ ಮಸೀದಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದನು.
ಇವರಿಗೆ 2 ಗಂಡು ಮಕ್ಕಳಿದ್ದು, ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿದ್ದು, ಆಗಾಗ ಗಂಡನ ಮನೆಯಿಂದ ಯುವತಿ ಊರಿಗೆ ಬಂದು ನಂತರ ರಾಜಿಯಾಗಿ ಇರುತ್ತಿದ್ದರು ಎನ್ನಲಾಗಿದೆ.
ಜಹಿರ್ ಅಬ್ದುಲ್ ಮಾಂಗಾವಕರ್ ಒಂದು ಬಾರಿ ಬೆಳಪುವಿನಲ್ಲಿ ಕೂಡಾ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಕಳೆದ 3 ತಿಂಗಳ ಹಿಂದೆ ಯುವತ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಮಯ ಊರಿಗೆ ಬಂದಿದ್ದಾಳೆ. ನಂತರ ಅವಳನ್ನು ಕರೆಯಲು ಹಲವಾರು ಸಲ ಜಹಿರ್ ಅಬ್ದುಲ್ ಮಾಂಗಾವಕರ್ ರವರು ಬೆಳಪುವಿಗೆ ಬಂದಾಗ ತಾನು ಬರುವುದಿಲ್ಲ ಎಂದು ಹೇಳಿರುತ್ತಾಳೆ. ಒಂದು ಮಗುವನ್ನು ನನಗೆ ಕೊಡು ನಾನು ಓದಿಸುತ್ತೇನೆ ಎಂದು ಜಹಿರ್ ಅಬ್ದುಲ್ ಮಾಂಗಾವಕರ್ ಇವರು ಹೇಳಿದರೂ ಕೇಳದೆ ಗೋವಾದಲ್ಲಿ ಓದುತ್ತಿದ್ದ ಮಗನ ಸ್ಕೂಲ್ ಸರ್ಟಿಪಿಕೇಟ್ ತಂದಿರುತ್ತಾಳೆ. ಈ ಬಗ್ಗೆ ಜಹಿರ್ ಅಬ್ದುಲ್ ಮಾಂಗಾವಕರ್ ಮಾನಸಿಕವಾಗಿ ನೊಂದಿದ್ದನು. ಮೇ 15 ರಂದು ಗೋವಾದಿಂದ ಹೊರಟು ಮೇ 16 ರಂದು ಬೆಳಿಗ್ಗೆ ಬೆಳಪುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
