Updated News From Kaup

ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕಟ್ಟುನಿಟ್ಟಿನ ಲಾಕ್ ಡೌನ್

Posted On: 04-07-2020 08:07PM

ಉಡುಪಿ ಜುಲೈ 4 (ಕರ್ನಾಟಕ ವಾರ್ತೆ): ಜುಲೈ 5 ರ ಭಾನುವಾರದಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆಯಾಗಲಿದ್ದು, ಈ ಅವಧಿಯಲ್ಲಿ ಅವಶ್ಯಕ ಸೇವೆಗಳಾದ ಹಾಲು, ದಿನ ಪತ್ರಿಕೆ , ಆಸ್ಪತ್ರೆ, ಮತ್ತು ಔಷಧ ಅಂಗಡಿಗಳು ಮಾತ್ರ ತರೆಯಲಿದ್ದು, ಇತರೆ ಯಾವುದೇ ಅಂಗಡಿಗಳು ತರೆಯುವಂತಿಲ್ಲ, ಅಗತ್ಯ ವಸ್ತುಗಳ ಸರಕು ಸಾಗಾಣಿಕೆಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಅನುಮತಿ ಪಡೆದಿರುವ ವಿವಾಹಗಳಲ್ಲಿ ನಿಗಧಿತ ಸಂಖ್ಯೆಯ ಜನರು ಮಾತ್ರ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಡಿದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸಮಾಜ ಸೇವಕ ಪವನ್ ಕುಮಾರ್ ರಿಂದ ಅಂಗನವಾಡಿಗೆ ಸಹಾಯ ಹಸ್ತ

Posted On: 03-07-2020 09:45PM

ಶಿರ್ವ ಮಂಚಕಲ್ಲಿನ ಸಮಾಜ ಸೇವಕ ಪವನ್ ಕುಮಾರ್ ಅವರು ಇಂದ್ರಪುರ ಅಂಗನವಾಡಿ ಕೇಂದ್ರಕ್ಕೆ ಸುಮಾರು 39000 ವೆಚ್ಚದ ಧ್ವಜಸ್ತಂಭ ಮತ್ತು ಕುಡಿಯುವ ನೀರಿನ ಯಂತ್ರ ಹಾಗೂ 2 ಬಾಗಿಲನ್ನು ನೀಡಿದರು....ಅದರ ಉದ್ಘಾಟನಾ ಸಮಯದಲ್ಲಿ ಸಮಾಜ ಸೇವಕ ಪವನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.... ಈ ಸಂಧರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಾರಿಜ ಪೂಜಾರ್ತಿ ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ವಾಗ್ಳೆ ,ಪಶು ವೈದ್ಯಧಿಕಾರಿಗಳಾದ ಡಾ.ಅರುಣ್ ಕುಮಾರ್ ಹೆಗ್ಡೆ ,ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅನಂತಪದ್ಮನಾಭ ನಾಯಕ್ ,ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀ ವಿಜಯ ,ಮಾಜಿ ಸದಸ್ಯರಾದ ಸುನಿಲ್ ಕಾಬ್ರಾಲ್,ರೋಟರಿ ಅಧ್ಯಕ್ಷರಾದ ವಿಷ್ಣುಮೂರ್ತಿ ಸರಳಾಯ ಹಾಗೂ ಅಂಗನವಾಡಿ ಶಿಕ್ಷಕಿ ಸುನಿತಾ ಪೂಜಾರಿಯವರು ಉಪಸ್ಥಿತರಿದ್ದರು...

53 ವರ್ಷ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಡಾ ಎ.ಎಸ್.ಕಲ್ಕೂರರಿಗೆ ಸಮ್ಮಾನ

Posted On: 03-07-2020 09:41PM

ಉಡುಪಿ: - ಕನಾ೯ಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಜಲೈ - 3 ರಂದು ವೈದ್ಯರ ದಿನಾಚರಣೆ ಕಾಯ೯ಕ್ರಮದ ಅಂಗವಾಗಿ ಕುಂದಾಪುರ ಪರಿಸರದಲ್ಲಿ ಕಳೆದ 53 ವಷ೯ಗಳಿಂದ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|ಎ.ಎಸ್ ಕಲ್ಕೂರ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು. ಈ ಸಂದಭ೯ದಲ್ಲಿ ಅವರು ವೈದ್ಯಕೀಯ ಸೇವೆ ಬಗ್ಗೆ ಮಾತನಾಡಿದರು. ಜಯ೦ಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್' ಕಾಯ೯ದಶಿ೯ ಪ್ರಸನ್ನ ಕಾರಂತ್, ಜಯ೦ಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮುಂತಾದವರಿದ್ದರು. ಮಂಜುನಾಥ್ ಕಾರಂತ್ ಪ್ರಾಥಿ೯ಸಿದರು, ಅನಂತ ಕೃಷ್ಣ ಹೊಳ್ಳ ಪರಿಚಯಿಸಿದರು.ಪ್ರಕಾಶ್ ಆಚಾರ್ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.

ಉಡುಪಿ ಜಿಲ್ಲಾ ತುಳುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ

Posted On: 02-07-2020 10:31PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ, ಉಡುಪಿ ಜಿಲ್ಲೆ ಇದರ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ಕೊಟ್ಟ ಮನವಿಯನ್ನು ಸ್ವೀಕರಿಸಿ ಮಾನ್ಯ ಮುಖ್ಯಮಂತ್ರಿಯವರಿಗೆ ಆ ಮನವಿಯನ್ನು ಕಳುಹಿಸಿಕೊಟ್ಟಿದ್ದಾರೆ. ಮನವಿಗೆ ಸ್ಪಂದಿಸಿದ ಮಾನ್ಯ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ದೈವಾರಾಧಕ ಸಂಘದ ಎಲ್ಲಾ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.

ಉದ್ಭವ ಶ್ರೀಮಹಾಗಣಪತಿ ಮತ್ತು ಶ್ರೀಮಹಾಲಿಂಗೇಶ್ವರನ ದಿವ್ಯ ಸನ್ನಿದಿ ಶ್ರೀ ಕ್ಷೇತ್ರ, ಪೆರ್ಣಂಕಿಲ.

Posted On: 02-07-2020 08:28PM

ಐತಿಹಾಸಿಕ ಹಿನ್ನೆಲೆಯ ಚಾರಿತ್ರಿಕ ಕ್ಷೇತ್ರ: - ಹಿರಿಯಡ್ಕದ ಸಮೀಪವಿರುವ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 2 ಸಾವಿರ ವರ್ಷಗಳ ಹಿನ್ನೆಲೆ, ಹಾಗೂ ಇಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸುಮಾರು 1600 ವರ್ಷಗಳ ಭವ್ಯ ಇತಿಹಾಸ ಇದೆ. ಖರಾಸುರನ ಈಶ್ವರ: ಧಾಮಿ೯ಕ ಹಿನ್ನಲೆಯ ಪ್ರಕಾರ ಕಥೆ ಪೆರ್ಣಂಕಿಲ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶವು ಹಿಂದೆ ಕಾರ್ಕಳದ ಜೈನ ಅರಸರ ಹಾಗೂ ಆಳುಪ ವಂಶದ ಆಡಳಿತಕ್ಕೆ ಒಳಪಟ್ಟಿತ್ತು. ಖರಾಸುರ ಎಂಬ ರಾಕ್ಷಸ ಶಾಪ ವಿಮೋಚನೆಗೆ ಆತ ತ್ರಿಕಾಲ ಶಿವನ ಪೂಜೆ ಮಾಡಬೇಕಾಗಿತ್ತು. ಊರಿಡೀ ಸಂಚಾರ ಮಾಡುತ್ತಿದ್ದ ಆತನಿಗೆ ತ್ರಿಕಾಲ ಶಿವನ ಪೂಜೆ ಮಾಡುವುದು ಕಷ್ಟಕರವಾಯಿತು. ಆದ್ದರಿಂದ ಆತ ತಾನು ಸಂಚರಿಸುವ ಸ್ಥಳಗಳಲ್ಲಿ ಒಂದೊಂದು ಶಿವಾಲಯವನ್ನೇ ಸ್ಥಾಪಿಸಿದನು! ಇಲ್ಲಿನ ಶಿವಾಲಯವನ್ನು ಖರಾಸುರನು ಪ್ರತಿಷ್ಠೆ ಮಾಡಿದ್ದು, ಕಟ್ಟಿಂಗೇರಿ, ಕಣಜಾರು, ಕೊಂಡಾಡಿ ಹಾಗೂ ಪರೀಕದಲ್ಲಿರುವ ಶಿವಾಲಯಗಳೂ ಈತನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಈ ಎಲ್ಲಾ ದೇವಾಲಯಗಳು ಒಂದೇ ಶೈಲಿಯಲ್ಲಿ ನಿರ್ಮಾಣಗೊಂಡಿರುವುನ್ನು ನಾವು ಗಮನಿಸಬಹುದು. ಮುಂದೆ ಇಲ್ಲಿನ ಶಿವಾಲಯಕ್ಕೆ ಆಳುಪ ವಂಶದ ರಾಣಿಯು ಶಿವ ದೇವಾಲಯವನ್ನು ನಿರ್ಮಿಸಿದಳು ಎನ್ನುತ್ತದೆ ಇಲ್ಲಿರುವ ಶಾಸನ. ಶಿವಾಲಯದ ಪಕ್ಕ ಇರುವ ಈ ಶಾಸನವು ಸವೆದು ಹೋದ ಕಾರಣ ಅದನ್ನು ಪೂರ್ತಿಯಾಗಿ ಓದಲು ಸಾಧ್ಯವಾಗಿಲ್ಲ, ಓದಿದ್ದೇ ಆದ್ದಲ್ಲಿ ಶಿವಾಲಯದ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ಹಾಗೂ ಐತಿಹಾಸಿಕ ಮಾಹಿತಿಗಳು ಒದಗುವ ಸಾಧ್ಯತೆ ಇದೆ. ದಲಿತನಿಗೆ ಒಲಿದ ದೇವರು : ಇಲ್ಲಿನ ಗಣಪತಿಯು ಭೂಗರ್ಭದಿಂದ ಉದ್ಬವವಾಗಿದೆ. ಹಿಂದೆ ದಲಿತನೊಬ್ಬನ ಮಗನಾದ ಪೆರ್ಣನು ಅಕಾಲದಲ್ಲಿ ಮರಣ ಹೊಂದುತ್ತಾನೆ. ಆತನ ತಂದೆಯು ಹಿಂದಿನ ಸಂಪ್ರದಾಯದಂತೆ ಪೆರ್ಣನನ್ನು ಗದ್ದೆಯಲ್ಲಿ ಹೂಳುತ್ತಾನೆ. ಕೆಲ ವರುಷಗಳ ನಂತರ ದಲಿತನು(ಪೆರ್ಣನ ತಂದೆ) ಆ ಗದ್ದೆಯನ್ನು ಉಳುವಾಗ ನೇಗಿಲಿನ ತುದಿಗೆ ಕಲ್ಲಿನಂತಹ ವಸ್ತು ತಾಗಿ ರಕ್ತಮಯವಾಗುತ್ತದೆ. ಭಯಗೊಂಡ ದಲಿತನು "ಪೆರ್ಣಾ ಈ ನನಲಾ ಉಲ್ಲನಾ?" (ಪೆರ್ಣಾ ನೀನಿನ್ನೂ ಬದುಕಿದ್ದೀಯಾ?) ಎಂದು ಉದ್ಗಾರ ತೆಗೆಯುತ್ತಾನೆ. ಸರಿಯಾಗಿ ಗಮನಿಸಿದಾಗ, ನೇಗಿಲು ತಾಗಿದ್ದು ಗಣಪತಿಯ ಕಲ್ಲಿನ ವಿಗ್ರಹಕ್ಕೆ. (ಓದುಗರ ಗಮನಕ್ಕೆ: ಹಲವಾರು ಕಡೆ ಗಣಪತಿಯ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಎಂದೇ ನಂಬಲಾಗಿದೆ, ಆದರೆ ಆ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಅಲ್ಲ, ಆತನ ತಂದೆಗೆ ಎಂದು ಇಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ) ಆ ದಿನ ರಾತ್ರಿ ದಲಿತನ ಕನಸಿನಲ್ಲಿ ಗಣಪತಿ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುವಂತೆ ತಿಳಿಸಿತು. ಅದರಂತೆ ದಲಿತನು ಗಣಪತಿಯ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುತ್ತಾನೆ. ಅಂದಿನಿಂದ ಈ ಊರಿಗೆ ಪೆರ್ಣ+ಅಂಕಿಲ(ನೇಗಿಲು) ಎಂಬ ಹೆಸರು ಬಂದಿದೆ. ಜಾತಿ ಪದ್ದತಿಗಳು ಬಲಿಷ್ಠವಾಗಿದ್ದ ಆ ಕಾಲದಲ್ಲಿ ಒಬ್ಬ ದಲಿತನ(ಪೆರ್ಣನ) ಹೆಸರು ಊರಿಗೇ ಬರುವಂತೆ ಮಾಡಿ, ದಲಿತ ವಂಶವನ್ನು ಅಜರಾಮರ ಮಾಡಿದ್ದು ನಿಜಕ್ಕೂ ಈಗಣೇಶನ ಮಹಿಮೆ. ರಥೋತ್ಸವದಂದು ರಥವು ವಿಗ್ರಹ ದೊರೆತ ಸ್ಥಳದವರೆಗೆ ಸಾಗಿ ಹಿಂತಿರುಗಿ ಬರುತ್ತದೆ. ಈ ಕ್ಷೇತ್ರದ ವಿಶೇಷ: ಇಲ್ಲಿನ ಶಿವಾಲಯವನ್ನು ಪ್ರತಿಷ್ಠೆ ಮಾಡಿದ್ದು ಖರಾಸುರ ಎಂಬ ಒಬ್ಬ ರಾಕ್ಷಸ. ಈಗ ಮೇಲ್ವರ್ಗದಿಂದ ಪೂಜಿಸಲ್ಪಡುವ ಗಣಪತಿಯ ಉದ್ಭವ ಮೂರ್ತಿ ದೊರೆತಿದ್ದು ಒಬ್ಬ ದಲಿತನಿಗೆ. ಎರಡೂ ದೇವಸ್ಥಾನಗಳು ಅಕ್ಕಪಕ್ಕದಲ್ಲಿಯೇ ಇವೆ, ಆದರೆ ಈಶ್ವರ ಪೂರ್ವಕ್ಕೆ ಮುಖ ಮಾಡಿಕೊಂಡಿದ್ದರೆ, ಮಗನು ಅಪ್ಪನಿಗೆ ತದ್ವಿರುದ್ಧವಾಗಿ, ಪಶ್ಚಿಮಕ್ಕೆ ಮುಖ ಮಾಡಿಕೊಂಡಿದ್ದಾನೆ.. ದೇವರ ದರ್ಶನದ ಮಾಡುವಾಗ ನಮಗೆ ಗಣಪತಿಯ ವಿಗ್ರಹದ ತಲೆಯ ತುದಿಭಾಗವು ಮಾತ್ರ ಕಾಣುತ್ತದೆ. ಆದರೆ,,, ಈ ವಿಗ್ರಹದ ಕೆಳಗೆ ಆಳವಾದ ಬಾವಿಯಿದ್ದು ಅದರಲ್ಲಿ ಗಣಪತಿಯ ಪೂರ್ತಿ ವಿಗ್ರಹವೇ ಹುದುಗಿದೆ.. ಪೆರ್ಣಂಕಿಲ ಗಣಪತಿಯು ಅಪ್ಪ ಪ್ರಿಯ. ಅಕ್ಕಿ, ಎಳ್ಳು, ಬೆಲ್ಲ, ತೆಂಗಿನಕಾಯಿ, ತುಪ್ಪದಿಂದ ತಯಾರಿಸುವ ಅಪ್ಪ ಪ್ರಸಾದ ಸೇವೆಯು 'ಕೊಪ್ಪರಿ ಅಪ್ಪ' ಎಂದೇ ಪ್ರಸಿದ್ಧಿ. ಈ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀಪೇಜಾವರ ಅಧೊಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದೆ. ದೇವಸ್ಥಾನವು ಸಂಪೂರ್ಣ ಹಳ್ಳಿ ಪ್ರದೇಶದಲ್ಲಿದ್ದರೂ ಆಗಮಿಸುವ ಭಕ್ತರಿಗೆ ಉಡುಪಿ ಪೇಜಾವರ ಮಠದ ವತಿಯಿಂದ ನಿತ್ಯ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ. ಗಣೇಶ ಚತುರ್ಥಿ ಹಾಗೂ ಪ್ರತಿ ವರ್ಷದ ಮೀನ ಮಾಸದ ಬಿದಿಗೆಯಂದು ನಡೆಯುವ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರ ಅತ್ಯಂತ ಅಪೂವ೯ ವಾದ ಕ್ಷೇತ್ರವಾಗಿದೆ ಇನ್ನೂ ಸ್ವಲ್ಪ ಅಭಿವೃಧಿಯಾಗಬೇಕಾಗಿದೆ. ಬನ್ನಿ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಬರಹ : ರಾಘವೇಂದ್ರ ಪ್ರಭು, ಕವಾ೯ಲು

ಅಪೂರ್ವ ಸಾಧಕ, ಯುವ ಕಲಾವಿದ ಕಾಪು ಕ್ಷೇತ್ರದ ಮಹೇಶ್ ಮರ್ಣೆ

Posted On: 02-07-2020 07:18PM

ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪಕಲೆಗಳು ವೈವಿಧ್ಯಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೆ ತನ್ನ ಕ್ರಿಯಾಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾ ದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲನು, ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ. ಈ ಹಿರಿಯ ಕಲಾವಿದರಿಗೆ ಸರಿಸಾಟಿ ಎಂಬಂತೆ ಉಡುಪಿಯ ಉದಯೋನ್ಮುಖ ಯುವ ಕಲಾವಿದರಲ್ಲಿ ಮಹೇಶ್ ಮರ್ಣೆ ಓಬ್ಬರು. ಉಡುಪಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಮರ್ಣೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತ್ತು. ಮರ್ಣೆ ಶ್ರೀಧರಾಚಾರ್ಯ ಮತ್ತು ಲಲಿತಾ ದಂಪತಿಗಳಿಗೆ ಪುತ್ರರಾಗಿರುವ ಇವರು ಉನ್ನತ ವ್ಯಾಸಂಗ ಮಾಡಲು ಇಷ್ಟವಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ತನ್ನ ಇಷ್ಟದ ಹವ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. ಮಹೇಶ್ ಮರ್ಣೆಯಲ್ಲಿರುವ ಕಲಾವಿದ ಶಿಲ್ಪಿ ಉನ್ನತ ರೂಪ ಪಡೆದಿದ್ದು, ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಾ ಹೋದರು, ಸಹೋದರರಾದ ಸಂತೋಷ್ ಮತ್ತು ಉಮೇಶ್ ರವರ ಪ್ರೋತ್ಸಾಹದೊಂದಿಗೆ ಶಿಲ್ಪಕಲಾ ತರಬೇತಿಯನ್ನು ಪೂರ್ಣಗೊಳಿಸಿದರು. ಪ್ರತಿಭಾವಂತ ಕಲಾವಿದ ಗೋಪಾಡ್ಕರ್ ರವರ ಪರಿಚಯವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥರ್ಮೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, 7 ಅಡಿ ಎತ್ತರದ ನಟರಾಜನ ವಿಗ್ರಹ, ಥರ್ಮಕೋಲ್ ನಲ್ಲಿ ಮಹಾಗಣಪತಿ ಹಾಗೂ ಮುಂತಾದ ಶಿಲ್ಪಕಲಾಕೃತಿಯನ್ನು ರಚಿಸಿರುತ್ತಾರೆ. ಅಪೂರ್ವ ವೇದಿಕೆ ನಿರ್ಮಾಣ : ಕೇವಲ ಶಿಲ್ಪಕಲೆ ಅಲ್ಲದೆ ಅತ್ಯುತ್ತಮವಾದ ಪಾರಂಪರಿಕ ವೇದಿಕೆ ನಿರ್ಮಾಣದಲ್ಲಿಯೂ ಮಹೇಶ್ ಮರ್ಣೆಯವರು ಎತ್ತಿದ ಕೈ. ತನ್ನ ಅದ್ಭುತ ಕಲಾಕೃತಿಯಿಂದ ಹಲವಾರು ಸುಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರು ಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಐಸ್ ಕ್ರೀಮ್ ಕಡ್ಡಿಯಿಂದ ಅರಳಿದ ಗಣಪ : ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭ ಸೃಜನಾತ್ಮಕವಾಗಿ ಗಣಪತಿ ಕಲಾಕೃತಿಯನ್ನು ರಚಿಸಿರುತ್ತಾರೆ. ಈ ಬಾರಿ ಐಸ್ ಕ್ರೀಮ್ ತಿನ್ನಲು ಬಳಸುವ ಕಡ್ಡಿಯನ್ನು ಫೆವಿಕೋಲ್ ಗಮ್ ನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪತಿಯ ಮುಖ, ಹೊಟ್ಟೆ, ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ. ಕಡ್ಡಿಯನ್ನು ಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ. ಇದಕ್ಕೆ 3500 ಐಸ್ ಕ್ರೀಮ್ ಕಡ್ಡಿ ಉಪಯೋಗಿಸಲಾಗಿದೆ. ಗಣಪತಿ ಪ್ರಭಾವಳಿ, ಆಭರಣಗಳ ಅಲಂಕಾರಕ್ಕಾಗಿ ಕೆಂಪು ಮತ್ತು ಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ಬಾಟಲಿಯೊಳಗೆ ಗಣಪತಿ, ತರಕಾರಿಯಲ್ಲಿ ಗಣಪತಿ, ಸೀಮೆಸುಣ್ಣದಲ್ಲಿ ಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆಯನ್ನು ಗಮನಿಸಿ ಸನ್ಮಾನ ದೊರಕಿದೆ. ಈ ಕಲಾವಿದನ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದಲ್ಲಿ ರಾಷ್ಟ್ರಮಟ್ಟದಲ್ಲಿ ಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನ ಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತು ಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನು ತಂದ ಮಹೇಶ್ ಮರ್ಣೆ ಅಭಿನಂದಾರ್ಹರು, ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭಾ ಹಾರೈಕೆ. ಬರಹ : ರಾಘವೇಂದ್ರ ಪ್ರಭು ಕರ್ವಾಲು..

ಕೋವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ - ಡಾ!! ಉಮೇಶ್ ಪ್ರಭು

Posted On: 01-07-2020 10:43PM

ಉಡುಪಿ.01, ಜುಲೈ :- ವೈದ್ಯರು ರೋಗಿಗಳ ಜೀವರಕ್ಷಣಿಗೆ ತಮ್ಮ ವೈಯತ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ|| ಉಮೇಶ್ ಪ್ರಭು ಹೇಳಿದರು. ಅವರು ಜುಲೈ 1 ರಂದು ಬಡಗಬೆಟ್ಟು ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘ(ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹೇಳಿದರು. ಕೋವಿಡ್ ನಿಂದ ವೈದ್ಯರು, ವೈದ್ಯಕೀಯ ಸಿಬ್ಬ೦ದಿಗಳು ಹಗಲು ರಾತ್ರಿಯೆನ್ನದೆ ಕಾಯ೯ ನಿವ೯ಹಿಸುತ್ತಿರುವುದು ಅಭಿನಂದನೀಯ ಎಂದರು. ಬಡಗಬೆಟ್ಟು ಸೊಸೈಟಿಯ ಪ್ರ.ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವೈದ್ಯರು ನಿಜವಾದ ಸಮಾಜ ರಕ್ಷಕರು ಅವರ ಸೇವೆ ಅಭಿನಂದನೀಯ ಎಂದರು. ವೇದಿಕೆಯಲ್ಲಿ ವೇಣುಗೋಪಾಲ ಹೆಬ್ಬಾರ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕಾಯ೯ದಶಿ೯ ಶ್ರೀನಾಥ್ ಕೋಟ, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರ.ಕಾಯ೯ದಶಿ೯ ಪ್ರಸನ್ನ ಕಾರಂತ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು. ಹಿರಿಯ ಸಾಧಕ ವೈದ್ಯರಾದ ಕುಟುಂಬ ವೈದ್ಯ ಡಾ|| ಡೊನಾಲ್ಡ್ ಸೈಮನ್, ಕೆ.ಎಂ.ಸಿ ಮಣಿಪಾಲ ಇ.ಎನ್.ಟಿ ವಿಭಾಗದ ಡಾII ದೀಪಕ್ ರಂಜನ್ ನಾಯ್ಕ್ ರವರನ್ನು ಗೌರವಿಸಲಾಯಿತು.ಸನ್ಮಾನಿತರು ಶುಭ ಹಾರೈಸಿದರು.ಮಾಧವ ಆಚಾರ್ , ಸುಬ್ರಮಣ್ಯ, ಮೋಹನ್ ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು. ಮಧುಸೂಧನ್ ಪ್ರಸ್ತಾಪಿಸಿದರು.ಕೋವಿಡ್ ಮಾಗ೯ ಸೂಚಿಯನ್ನು ಅನುಸರಿಸಿ ಕಾಯ೯ಕ್ರಮ ನಡೆಸಲಾಯಿತು.

ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸ್ವಗೃಹದಲ್ಲೇ ಸಮ್ಮಾನಿತರಾದ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು

Posted On: 01-07-2020 08:46PM

ದಿನದ ಪ್ರಯುಕ್ತ ಸುಮಾರು 25 ವರ್ಷಗಳ ಕಾಲ ಪತ್ರಕರ್ತರಾಗಿ ಹಲವಾರು ಸಾಧನೆಗಳನ್ನು ಮಾಡಿರುವ ಹಿರಿಯ ಪತ್ರಕರ್ತರಾದ ಕಿರಣ್ ಮಂಜನಬೈಲು ಅವರನ್ನು ಜುಲೈ 1 ರಂದು ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುನ್ಮಾನ ಪತ್ರಿಕೆಗಳ ಯುಗದಲ್ಲಿಯೂ ಪತ್ರಿಕಾ ಮಾಧ್ಯಮ ಸೃಜನಶೀಲತೆಯನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ತನ್ನ ಸುಸ್ಥಿರತೆಯನ್ನು ಕಾಯ್ದುಕೊಂಡಿರುವುದು ಶ್ಲಾಘನೀಯ ಬೆಳವಣಿಗೆ. ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕವಲು ದಾರಿಯಲ್ಲಿದ್ದ ಪತ್ರಿಕೋದ್ಯಮ ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿಕೊಂಡು ಸಮತೋಲನವನ್ನು ಕಾಪಾಡಿಕೊಂಡು ಜನಧ್ವನಿಯನ್ನು ಗಟ್ಟಿಗೊಳಿಸಿ ಸಮಯೋಚಿತವಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಪತ್ರಿಕಾ ರಂಗವು ಸಂದರ್ಭಕ್ಕೆ ಅನುಗುಣವಾಗಿ ಸಮಾಜದ ಬೆನ್ನೆಲುಬಾಗಿ ಚಿರಾಯುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜನಾರ್ಧನ ಕೊಡವೂರು, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಮತ್ತು ವೀಕ್ಷಿತ್ ಉಪಸ್ಥಿತರಿದ್ದರು.

ಬ್ಯಾಂಕ್ ನೌಕರಿ ಗಿಟ್ಟಿಸುವ ಈ ಪ್ರತಿಭೆಯ ಕನಸು ನನಸಾಗಲೇ ಇಲ್ಲ

Posted On: 01-07-2020 08:09PM

ಇವರು ಜೀವನೋತ್ಸಹದ ಗಣಿ ಪ್ರತಿಭೆಯ ಧಣಿ ವಿಕಲಾಂಗತೆಯನ್ನು ಮೆಟ್ಟಿನಿಂತು ಚಿತ್ರಕಲೆಯಲ್ಲಿ ಸಾಧನೆಗೈದ ಸಾಧಕ : ಗಣೇಶ್ ಪಂಜಿಮಾರು -ಮಂಜುನಾಥ ಹಿಲಿಯಾಣ. ಇವರು ಮೂಳೆಯ ತೀವ್ರ ದುರ್ಬಲತೆಯಿಂದ ಬರುವ ಅನುವಂಶೀಯ ಖಾಯಿಲೆ Osteogenesis imperfecta ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ. ಎತ್ತರ ಕೇವಲ ಮೂರಡಿ ಮಾತ್ರ. ತೂಕ ಇಪ್ಪತ್ಮೂರು ಕಿಲೋ ಗ್ರಾಂ. ಇವರ ಒಡಹುಟ್ಟಿದವರಲ್ಲಿ ನಾಲ್ಕುಮಂದಿಗೆ ಇದೇ ಖಾಯಲೆ. ಇವರ ಸ್ಥಿತಿಯಲ್ಲಿ ಯಾರಿದ್ದರೂ ಹುಟ್ಟಿಸಿದ ಆ ವಿಧಿಯನ್ನು ಹಳಿಯುತ್ತಾ ಜೀವನವನ್ನು ನರಕವನ್ನಾಗಿಸಿಕೊಂಡು ವ್ಯಥೆ ಪಡುತ್ತಾ ಬದುಕನ್ನು ಸವೆಸುತ್ತಿದ್ದರೇನೋ.. ಆದರೆ ನಮ್ಮ ಗಣೇಶ್ ಪಂಜಿಮಾರು ಅವರ ಬದುಕೇ ಒಂದು ಅದ್ಬುತ ಸ್ಪೂರ್ಥಿಯ ಗಾಥೆ..! ಬದುಕಲ್ಲಿ ಸೋತೆ ಎಂದು ವ್ಯಥೆ ಪಟ್ಟುಕೊಳ್ಳುವವರಿಗೆ, ಆತ್ಮಹತ್ಯೆ ಯೋಚನೆ ಮಾಡುವವರಿಗೆ ಜೀವನೋತ್ಸಾಹ ತುಂಬುವ ಸತ್ಯ ಕಥೆ.. ಗಣೇಶ್ ಪಂಜಿಮಾರು ಉಡುಪಿ ಜಿಲ್ಲೆ ಶಿರ್ವ ಬಂಟಕಲ್ಲು ಸಮೀಪದವರು. ದಿವ್ಯಾಂಗರಾಗಿ ಹುಟ್ಟಿದರೂ ಉನ್ನತ ಶಿಕ್ಷಣ ಪಡೆಯಲೇ ಬೇಕು ಎಂಬ ಛಲ ಇವರೊಳಗೆ ಮೂಡಿತು. ಆ ಛಲದ ಫಲಶ್ರುತಿಯಾಗಿಯೇ ಬದುಕಿನ ನೂರು ಸವಾಲು ಸಮಸ್ಯೆಗಳನ್ನು ಮೆಟ್ಟಿನಿಂತು ಶಿರ್ವ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಿಟ್ಟಿಸಿಕೊಂಡಿದ್ದು ಖಂಡಿತಾ ಸಣ್ಣ ಸಾಧನೆಯೇನಲ್ಲ. ಧಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರಿನಲ್ಲಿ ನಿತ್ಯ ಹತ್ತು ಕಿ,ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಛಲಗಾರ. ಓದಿನ ಜೊತೆ ಜೊತೆಯಲ್ಲೆ ಇವರು ಹವ್ಯಾಸವನ್ನಾಗಿ ಬೆಳೆಸಿಕೊಂಡ ಚಿತ್ರಬಿಡಿಸುವ ಕಲೆ ಇವರನ್ನಿಂದು ಪ್ರಸಿದ್ದ ಚಿತ್ರಕಲಾವಿದನನ್ನಾಗಿ ಕರಾವಳಿಯಾದ್ಯಂತ ಪರಿಚಯಿಸಿದೆ. ಧರ್ಮಸ್ಥಳದ ಧರ್ಮದಿಕಾರಿ ವಿರೇಂದ್ರ ಹೆಗ್ಗಡೆ, ಮಾಣಿಲ ಶ್ರೀ, ಉಡುಪಿ ಡಿ.ಸಿ ಜಿ. ಜಗದೀಶ್, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಈ ಸಮಾಜದ ಗಣ್ಯರು, ಸಿನಿಮಾ ನಟ-ನಟಿಯರು ರಾಜಕೀಯ ನಾಯಕರು, ಪ್ರಕೃತಿ, ಪ್ರಾಣಿ ಪಕ್ಷಿ ಎಲ್ಲವೂ ಇವರ ಕಲಾಕುಂಚದಲ್ಲಿ ಚಿತ್ರಿತಗೊಂಡು ನೋಡುಗರ ಹೃನ್ಮನ ಸೂರೆಗೊಳ್ಳುತ್ತದೆ. ಈಗಾಗಲೇ ಇನ್ನೂರಕ್ಕೂ ಮಿಕ್ಕಿ ಅದ್ಬುತ ಎನಿಸುವ ಚಿತ್ರಗಳನ್ನು ರೂಪಿಸಿರುವ ಗಣೇಶ್ ಪಂಜಿಮಾರನ್ನು ಚಿತ್ರಕಲೆಯ ಕೋಲ್ಮಿಂಚು ಎಂದರೆ ಅದು ಅತಿಶಯದ ಮಾತಾಗದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ, ಉದ್ಯಮಿ ಪ್ರಕಾಶ್ ಶೆಟ್ಟರು ಸೇರಿದಂತೆ ಸಮಾಜದ ಅನೇಕ ಗಣ್ಯರು ಇವರ ಪ್ರತಿಭೆಯನ್ನು ಕೊಂಡಾಡಿ ಹರಸಿದ್ದಾರೆ. ಅಸಂಖ್ಯ ಸನ್ಮಾನಗಳು ಇವರನ್ನರಸಿ ಬಂದಿವೆ.. ಹಲವಾರು ಪತ್ರಿಕೆ ಟಿವಿ ಮಾದ್ಯಮದಲ್ಲಿ ಇವರ ವಿಶೇಷ ಸಾಧನೆಯ ಗಾಥೆ ಬಿತ್ತರವಾಗಿದೆ. ಹಲವು ನಾಟ್ಯಗಳ ಸಂಗ್ರಹ, ಸ್ಟ್ಯಾಂಪ್ ಸಂಗ್ರಹವೂ ಇವರ ಹವ್ಯಾಸದ ಇನ್ನಿತರ ಆಸಕ್ತಿಗಳಾಗಿದೆ. ವಿಕಲಚೇತನಳಾಗಿ ಮಲಗಿದ್ದಲ್ಲೆ ಬದುಕು ಸವೆಸುವ ಇವರ ಸಹೋದರಿ ಕೂಡ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ನಿಷ್ಣಾತರು. ಗಣೇಶ್ ಪಂಜಿಮಾರು ತನನ್ನು ವಿಕಲಾಂಗಚೇತನನ್ನಾಗಿ ಮಾಡಿದ ಎಂದು ದೇವರನ್ನು ಎಂದೂ ಹಳಿಯುದಿಲ್ಲ. ನನ್ನ ಹಣೆಬರಹ ಎಂದು ವ್ಯಥಿಸುತ್ತಾ ಕೂರುವುದಿಲ್ಲ. ಆ ದೇವರು ಕೊಟ್ಟ ಆಯುಷ್ಯವನ್ನು ಸದ್ವಿನಿಯೋಗ ಮಾಡ್ತೇನೆ.. ಇತರರಿಗೆ ಮಾದರಿಯಾಗಿ ಬದುಕ್ತೇನೆ ಎಂದು ಛಲದಿಂದ ನುಡಿಯುತ್ತಾರೆ.. ಹಾಗೇ ನುಡಿಯುವಾಗ ಅವರ ಕಂಗಳಲ್ಲಿ ಜೀವನೋತ್ಸಾಹದ ಜಲ ಅವರಿಗರಿವಿಲ್ಲದಂತೆ ಜಿನುಗುತ್ತದೆ. ನನಗೊಂದು ಉದ್ಯೋಗ ಕೊಡಿ: ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ ಗಣೇಶ್ ಪಂಜಿಮಾರು ಅವರಿಗೆ ಇದೀಗ ಮೂವತ್ತೊಂದರ ಹರೆಯ. ಅವರು ಪದವಿ ಗಿಟ್ಟಿಸಿಕೊಂಡಿದ್ದೇ ಬ್ಯಾಂಕ್ ಎಕ್ಸಾಮ್ ಅಲ್ಲಿ ಪಾಸಾಗಿ ಬ್ಯಾಂಕ್ ಉದ್ಯೋಗಿ ಆಗಬೇಕು ಎಂಬ ಆಸೆಯಿಂದ. ಕಠಿಣ ಪರಿಶ್ರಮದಿಂದ ಓದಿ ಬ್ಯಾಂಕ್ ಪರೀಕ್ಷೆ ಹಲವು ಬಾರಿ ಕಟ್ಟಿದರೂ ಇದುವರಗೆ ಪಾಸಾಗಿಲ್ಲ. ನನಗಿಂತಲೂ ತ್ರಾಸದಾಯಕವಾಗಿ ಬದುಕುತ್ತಿರುವ ತಂಗಿ, ಮಲ್ಲಿಗೆ ಹೂವುಗಳನ್ನು ಮಾರಿ ತಮ್ಮನ್ನು ಪೋಷಿಸುತ್ತಿರುವ ತಾಯಿ ಇವರಿಗೆ ನಾನು ಆಸರೆಯಾಗಬೇಕು ಅಂದರೆ ನನಗೊಂದು ಉದ್ಯೋಗ ಬೇಕು. ಪದವಿ ಪಡೆದಿರುವ ನನ್ನ ಅರ್ಹತೆಯನ್ನು ಪರಿಗಣಿಸಿ ನನಗೆ ಮಾಡಲು ಸಾದ್ಯವಿರುವ ಕೆಲಸವನ್ನು ಯಾರದರೂ ಕೊಟ್ಟರೆ ಪ್ರಾಮಾಣಿಕನಾಗಿ ಅವರು ಮೆಚ್ಚುವಂತೆ ಕೆಲಸ ಮಾಡುವೆ ಎನ್ನುವಾಗ ಗಣೇಶ್ ಬಾವುಕರಾಗುತ್ತಾರೆ.. ಯಾರದರೂ ಧಾನಿಗಳು ಸಂಘ ಸಂಸ್ಥೆಗಳು ಉದ್ಯೋಗ ಕೊಡಿಸಿಯಾರೇ ಎಂಬ ಆಸೆ ಅವರದ್ದು ಗಣೇಶ್ ಪಂಜಿಮಾರ್ ಆಟ್ಸ್ ಎಂಬ ಯೂ ಟ್ಯೂಬ್ ಚಾನೆಲ್ ಅಲ್ಲಿ ಅವರ ಕಲಾ ವೈಖರಿಯನ್ನು ನೀವು ಗಮನಿಸಬಹುದು. ಗಣೇಶರ ಎಂದೂ ಬತ್ತದ ಉತ್ಸಾಹಕ್ಕೆ, ಗೆರೆ-ಬರೆಗಳ ಚಿತ್ತಾಕರ್ಷದ ಚಿತ್ರಕಲೆಗೆ ಪರಿಶ್ರಮದ ಬದುಕಿಗೆ ತಪ್ಪದೆ ಒಂದು ಹ್ಯಾಟ್ಸಾಪ್ ಹೇಳಿ.. ಸಂಪರ್ಕ ಸಂಖ್ಯೆ- 9880053740 ಗಣೇಶ್ ಪಂಜಿಮಾರು ಎನೆನ್ನುತ್ತಾರೆ?? " ನನಗೆ ಈ ಸಮಾಜದ ಯಾರ ಕರುಣೆ ಬೇಡ..ಅವಕಾಶ ಬೇಕು.. ನಮ್ಮಲ್ಲಿರುವ ನ್ಯೂನತೆಯನ್ನು ಮೆಟ್ಟಿನಿಂತು ಆ ದೇವರು ಕೊಟ್ಟ ಬದುಕನ್ನು ಸಂತೋಷದಿಂದ ಕಳೆಯುವ. ನಾಲ್ಕು ಜನ ಮೆಚ್ಚುವಂತೆ ಆದರ್ಶರಾಗಿ ಬದುಕುವ. ಬದುಕಲ್ಲಿ ಸೋತೆ ಎಂದು ಆತ್ಮಹತ್ಯೆ ಯೋಚನೆ ಮಾಡುವವರು, ಕೆಲಸವಿಲ್ಲವೆಂದು ಮನೆಯಲ್ಲೆ ಕುಳಿತು ಕೊರಗುವವರು ನನ್ನನ್ನೊಮ್ಮೆ ನೋಡಿ.. ನಾನು ಸ್ಪೂರ್ತಿ ತುಂಬುವೆ"

ವೈದ್ಯರ ದಿನಾಚರಣೆ ಪ್ರಯುಕ್ತ ಹಿರಿಯ ವೈದ್ಯ ಅನಂತ ಪದ್ಮನಾಭ ಭಟ್ ಬುಕ್ಕಿಗುಡ್ಡೆಯವರಿಗೆ ಗೌರವಾರ್ಪಣೆ

Posted On: 01-07-2020 01:20PM

ಉಡುಪಿ :- ವೈಧ್ಯಕೀಯ ಪ್ರತಿನಿಧಿಗಳ ಸಂಘ (ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಪ್ರಯುಕ್ತ ಕಳೆದ 50 ವಷ೯ಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಹಿರಿಯ ವೈದ್ಯ ಡಾII ಎಂ. ಅನಂತ ಪದ್ಮನಾಭ ಭಟ್ ಬುಕ್ಕಿಗುಡ್ಡೆ ರವರನ್ನು ಜುಲೈ 1 ರಂದು ಗೌರವಿಸಲಾಯಿತು.ಈ ಸಂದಭ೯ದಲ್ಲಿ ಅತಿಥಿಗಳಾಗಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಧನ್ವoತರಿ ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯ ದಾಸ್, ಕಾಯ೯ದಶಿ೯ ಪ್ರಸನ್ನ ಕಾರಂತ್ , ಮಿಲ್ಟನ್ ಒಲಿವರ್, ವೇಣು ಗೋಪಾಲ ಹೆಬ್ಬಾರ್, ಪ್ರಕಾಶ್ ಆಚಾರ್, ಮಾಧವ ವೈದ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು.